Home Blog Page 3016

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಮಾಡಿದ್ದೇನು?

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವಡ್ರಾಲ(40) ಹತ್ಯೆಯಾದ ಮಹಿಳೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಳಗಿ ಠಾಣೆ ಪೊಲೀಸರು ಪತಿ, ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದಾರೆ.

ಪತ್ನಿಯ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಗಂಡ ಮತ್ತು ಮಗ ಕೊಲೆ ಮಾಡಿದ್ದರು. ಆ ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ, ಮಗ ಗ್ರಾಮಸ್ಥರನ್ನು ನಂಬಿಸಿದ್ದರು. ಕೂಡಲೇ ಮಹಾದೇವಿ ಅಂತ್ಯಕ್ರಿಯೆ ಮಾಡಿದ್ದರು.

ಈ ಸಂದರ್ಭದಲ್ಲಿ ಕೊಲೆಯ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ಅನಾಮಿಕ ಕರೆಯೊಂದು ಬಂದಿದೆ. ಇದನ್ನು ಆಧರಿಸಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಸಾವಳಗಿ ಪೊಲೀಸರು ಹಾಗೂ ಜಮಖಂಡಿ ಸಿಪಿಐ ತನಿಖೆ ನಡೆಸಿ ಪತಿ ಹನುಮಂತ ವಡ್ರಾಲ ಹಾಗೂ 14 ವರ್ಷದ ಮಗನನ್ನು ಬಂಧಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇವರಿಗೆ ಗುಂಡಿ ತೋಡಲು ಹಣ, ಮುಚ್ಚಲೂ ಹಣ ಬೇಕಂತೆ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರಿನಲ್ಲಿಯೇ ಹೇಯ ಕೃತ್ಯವೊಂದು ನಡೆದಿದ್ದು, ಬೆಳಕಿಗೆ ಬಂದಿದೆ.
ಅಲ್ಲದೇ, ಈ ಕೃತ್ಯ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಕೊರೊನಾ ಸೊಂಕಿನಿಂದ ಸತ್ತವರ ಸಂಸ್ಕಾರಕ್ಕೆ ಗುಂಡಿ ತೊಡಲು ರೂ. 4500ಕ್ಕೆ ಬೇಡಿಕೆ ಇಟ್ಟ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ, ಅವರ ಪಾಪಿ ಕೃತ್ಯ ಇಷ್ಟಕ್ಕೆ ಮುಗಿದಿಲ್ಲ. ಗುಂಡಿ ಮುಚ್ಚಲು ಮತ್ತೆ ಹಣ ಕೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ತಾಲೂಕಾದ ಕೆ.ಆರ್. ಪೇಟೆಯಲ್ಲಿ ಶವ ಸಂಸ್ಕಾರಕ್ಕೆ ಬಂದವರನ್ನು ಹಣಕ್ಕಾಗಿ ಗಂಟೆಗಟ್ಟಲೆ ಕಾಯಿಸಲಾಗಿದೆ. ಪಿಡಿಓ ಒಬ್ಬರು ಹಣ ಪಡೆದು ಜೆಸಿಬಿ ಯಿಂದ ಗುಂಡಿ ತೆಗಿಸಿ ಮತ್ತೆ ಮಣ್ಣು ಮುಟ್ಟಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೀಗಾಗಿ ಶವಸಂಸ್ಕಾರದ ಎಲ್ಲ ಕಾರ್ಯಗಳನ್ನು ಮುಗಿಸಿದ್ದ ಸ್ವಯಂ ಸೇವಕರು ಮಣ್ಣು ಮುಚ್ಚಲು ಕಾಯ್ದು ಕುಳಿತಿದ್ದರು. ತಹಶೀಲ್ದಾರ್ ಅವರ ಮಧ್ಯಪ್ರವೇಶದಿಂದ ಈ ಸಮಸ್ಯೆ ಬಗೆ ಹರಿದಿದೆ. ಹೀಗೆ ಕೊರೊನಾದಿಂದ ಸತ್ತವರ ಕುಟುಂಬಸ್ಥರಿಂದ ಫೋನ್ ನಲ್ಲಿಯೇ ಡೀಲ್ ಮಾಡಿ ಪಿಡಿಓ ಗಳು ಹಣ ಮಾಡುತ್ತಿದ್ದಾರೆ ಎಂಬ ಆರೋಪ ಈ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ಟೂರ್ನಿ ಆಡುತ್ತಿರುವ ಭಾರತ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಶ್ರೀಲಂಕಾ ಪ್ರವಾಸಕ್ಕೆ ಭಾರತೀಯ ಪುರುಷರ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಎಡಗೈ ಆಟಗಾರ ಶಿಖರ್ ಧವನ್ ಗೆ ತಂಡದ ಸಾರಥ್ಯ ವಹಿಸಲಾಗಿದೆ. ನಾಯಕ ಕೊಹ್ಲಿ ಹಾಗೂ ಇನ್ನಿತರ ಹಿರಿಯ ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರಿವುದರಿಂದಾಗಿ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ.

ಹಿರಿಯ ಆಟಗಾರರ ಅನುಪಸ್ಥಿತಿ ಇರುವ ಹಿನ್ನೆಲೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಕಳೆದ ಎರಡು ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸಮನ್ ಗಳಾದ ದೇವದತ್ ಪಡಿಕ್ಕಲ್ ಹಾಗೂ ರುತುರಾಜ್ ಗಾಯಕ್ವಾಡ್ ಅವರು ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೇ, ಎಡಗೈ ಬ್ಯಾಟ್ಸಮನ್ ನಿತೀಶ್ ರಾಣಾ ಕೂಡ ಈ ತಂಡದಲ್ಲಿದ್ದಾರೆ. ಆ ಮೂಲಕ ರಾಣಾ ಲಂಕಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಂತಾಗುತ್ತಿದೆ.

ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದ ಎಡಗೈ ವೇಗದ ಬೌಲರ್ ಚೇತನ್ ಸಕರಿಯಾ, ಆಲ್‌ ರೌಂಡರ್ ಕೃಷ್ಣಪ್ಪ ಗೌತಮ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ನವದೀಪ್ ಸೈನಿ ಅವರಿಗೆ ಸಿಕ್ಕಿದೆ.

ಭಾರತ ತಂಡ ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಟಿ 20 ಸರಣಿ ಜುಲೈ 21 ರಿಂದ ಆರಂಭವಾಗಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿವೆ. ಟಿ 20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿವೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.
ಭಾರತ ತಂಡದಲ್ಲಿ ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್ ದೀಪ್ ಸೈನಿ, ಚೇತನ್ ಸಕರಿಯಾ
ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್ ಇದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಇದೇ ಜೂ. 18ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡಲಿದೆ. ಆ ನಂತರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದೆ. ಇಂಗ್ಲೆಂಡ್ ನಲ್ಲಿ ಭಾರತ ತಂಡ ಆಗಷ್ಟ್ 4 ರಿಂದ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಜುಲೈನಲ್ಲಿ ಒಂದೆಡೆ ಇಂಗ್ಲೆಂಡ್ ಪ್ರವಾಸ ಮತ್ತೊಂದೆಡೆ ಶ್ರೀಲಂಕಾ ಪ್ರವಾಸ ಇದೆ. ಇದೆ ಮೊದಲ ಬಾರಿಗೆ ಭಾರತ ತಂಡ ಈ ರೀತಿ ಏಕಕಾಲದಲ್ಲಿ ಏರಡೆರಡು ಸರಣಿಯಲ್ಲಿ ಭಾಗವಹಿಸುತ್ತಿದೆ.

ಕೋವಿಡ್ ಸಮಸ್ಯೆಯ ನಂತರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೋಗ ರಾಜ್ಯದಲ್ಲಿ ಪತ್ತೆ!

ವಿಜಯಸಾಕ್ಷಿ ಸುದ್ದಿ, ರಾಯಚೂರು

ಕೊರೊನಾ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖವಾದ ಮೂರ್ನಾಲ್ಕು ವಾರಗಳ ನಂತರ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್ಎವಲ್ಎಸಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಆದರೆ, ಎಚ್‍ ಎಲ್‍ ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗುವನ್ನು ವೈದ್ಯರು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತ ಆ ಮಗು ಗುಣಮುಖವಾಗಿದೆ ಅಂತ ಮಾಹಿತಿ ನೀಡಿದೆ.

ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ. ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ತೊಂದೆಯಾಗಿದೆ.

ವಿಪರೀತ ಜ್ವರ, ವಾಂತಿ ಬೇಧಿ, ಹೊಟ್ಟೆನೋವು ಇದರ ಪ್ರಮುಖ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ಇಂದು ಕೂಡ 11 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು 11 ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ದಿನವೂ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 11 ಸಾವಿರಕ್ಕೂ ಅಧಿಕವಿದೆ.
ಇಂದು ರಾಜ್ಯದಲ್ಲಿ 11,042 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಆಸ್ಪತ್ರೆಯಿಂದ 15,721 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು ಮಹಾಮಾರಿಗೆ 194 ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 2,10,652 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 27,39,290 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಂದು ಬೆಂಗಳೂರಿನಲ್ಲಿ 2,191 ಜನಕ್ಕೆ ಸೋಂಕು ತಗುಲಿದ್ದು, 47 ಜನ ಸಾವನ್ನಪ್ಪಿದ್ದಾರೆ.

ಇಂದು ರಾಜ್ಯದ ಬಾಗಲಕೋಟೆ 72, ಬಳ್ಳಾರಿ 293, ಬೆಳಗಾವಿ 439, ಬೆಂಗಳೂರು ಗ್ರಾಮಾಂತರ 264, ಬೆಂಗಳೂರು ನಗರ 2,191, ಬೀದರ್ 20, ಚಾಮರಾಜನಗರ 274, ಚಿಕ್ಕಬಳ್ಳಾಪುರ 280, ಚಿಕ್ಕಮಗಳೂರು 397, ಚಿತ್ರದುರ್ಗ 349, ದಕ್ಷಿಣ ಕನ್ನಡ 580, ದಾವಣಗೆರೆ 313, ಧಾರವಾಡ 261,

ಗದಗ 90, ಹಾಸನ 776, ಹಾವೇರಿ 67, ಕಲಬುರಗಿ 58, ಕೊಡಗು 279, ಕೋಲಾರ 247, ಕೊಪ್ಪಳ 161, ಮಂಡ್ಯ 448, ಮೈಸೂರು 1,011, ರಾಯಚೂರು 115, ರಾಮನಗರ 59, ಶಿವಮೊಗ್ಗ 521, ತುಮಕೂರು 571, ಉಡುಪಿ 291, ಉತ್ತರ ಕನ್ನಡ 426, ವಿಜಯಪುರ 174 ಮತ್ತು ಯಾದಗಿರಿಯಲ್ಲಿ 15 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ; ನೂರರ ಗಡಿಯಲ್ಲಿಯೇ ಇರುವ ಸೋಂಕು; ಸುಧಾರಣೆಯತ್ತ ಪಾಸಿಟಿವಿಟಿ ರೇಟ್!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಗುರುವಾರ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ನೂರರ ಗಡಿಗೆ ಬಂದು ನಿಂತಿದೆ. ನಿನ್ನೆಯಷ್ಟೆ 95 ಜನರಲ್ಲಿ ಕಂಡು ಬಂದಿದ್ದ ಸೋಂಕು ಇವತ್ತು 90ಕ್ಕೆ ಬಂದು ನಿಂತಿದೆ.

ಕಳೆದ ಶುಕ್ರವಾರದಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದೆ.

ಇಂದು 90 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ.

ಇಂದು 90 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25198 ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -41, ಮುಂಡರಗಿ-15, ನರಗುಂದ-03, ರೋಣ-18, ಶಿರಹಟ್ಟಿ-10, ಹೊರಜಿಲ್ಲೆಯ-03 ಸೇರಿದಂತೆ 90 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 282 ಕ್ಕೇರಿದೆ.

ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ನಿವಾಸಿ 62 ವರ್ಷದ ಮಹಿಳೆ ಮೇ 31 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -09 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬೆಳಧಡಿ ತಾಂಡಾ ನಿವಾಸಿ 65 ವರ್ಷದ ಮಹಿಳೆ ಜೂನ್- 02 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 08 ರಂದೇ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಮಾಗಡಿ‌ ನಿವಾಸಿ 70 ವರ್ಷದ ಮಹಿಳೆ ಜೂನ್ 01 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಅವರು ಜೂನ್ -09 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.

ಇಂದು 221 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23860 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1056 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 105 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

19 ಜಿಲ್ಲೆಗಳನ್ನು ಜೂ. 14ರ ನಂತರ ಅನ್ ಲಾಕ್ ಮಾಡಿ ಸಿಎಂ ಘೋಷಣೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸೋಂಕಿನ ಪ್ರಮಾಣ ಕಡಿಮೆಯಾಗಿರುವ 19 ಜಿಲ್ಲೆಗಳನ್ನು ಅನ್‍ ಲಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಅಲ್ಲದೇ, ಅನ್ ಲಾಕ್ ಆಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಲಾಕ್‍ ಡೌನ್ ಇರಲಿದೆ. ಆದರೆ, 11 ಜಿಲ್ಲೆಗಳಲ್ಲಿ ಮಾತ್ರ ಲಾಕ್ ಇರಲಿದೆ. ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಯಲಿದೆ. ಈ 11 ಜಿಲ್ಲೆಗಳಲ್ಲಿ ಎಂದಿನಂತೆ ಲಾಕ್ ಡೌನ್ ನಿಯಮಗಳು ಇರಲಿವೆ.

ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂ. 14 ರ ಬೆಳಿಗ್ಗೆ 6 ಗಂಟೆಯಂದ ಜೂ. 21ರ ವರೆಗೆ ಬೆಳಿಗ್ಗೆ 6 ವರೆಗೆ ನೈಟ್ ಕರ್ಫ್ಯೂ ಸೇರಿದಂತೆ ಹಲವು ಸಡಿಲಿಕೆಗಳು ಇರುತ್ತವೆ. ಎಲ್ಲ ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಗಾರ್ಮೆಂಟ್ ಇಂಡಸ್ಟ್ರೀಗಳು ಶೇ. 30 ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ.
ಸದ್ಯ ಅಗತ್ಯ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು. ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ನಿರ್ಮಾಣ ಚಟುವಟಿಕೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ ನಿಡಲಾಗಿದೆ.

ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10ರ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಆಟೋ ಮತ್ತು ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ. ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

ರಾತ್ರಿ 7 ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಇರಲಿದೆ.

ಅಂಗಡಿ ತೆರೆಯಬೇಕೆ? ಹಾಗಾದರೆ ನೀವು ಲಸಿಕೆ ಹಾಕಿಸಿಕೊಂಡಿರಲೇಬೇಕು!

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅವರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯಲ್ಲಿ ನೊ ವ್ಯಾಕ್ಷಿನ್ ನೊ ಶಾಪ್ ಓಪನ್ ಎಂಬ ನಿಯಮ ಜಾರಿಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು ಈ ನಿಯಮ ಜಾರಿಗೊಳಿಸಿದ್ದಾರೆ.

ಈ ಮೂಲಕ ಅನ್ ಲಾಕ್ ನಂತರವೂ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಾಕ್ಷಿನ್ ಹಾಕಿಸಿಕೊಂಡವರಿಗೆ ‌ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.

ದಿನಸಿ ಅಂಗಡಿ, ಹೊಟೇಲ್, ಚಹಾದ ಅಂಗಡಿ, ಬಾರ್ ರೆಸ್ಟೊರೆಂಟ್, ಎಲೆಕ್ಟ್ರಿಕ್ ಅಂಗಡಿ, ಸಲೂನ್, ಬಟ್ಟೆ ಅಂಗಡಿ ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ.
ಅಂಗಡಿ ತೆರೆಯಬೇಕಾದರೆ ಮಾಲೀಕರು, ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಎಲ್ಲರೂ ವ್ಯಾಕ್ಷಿನ್ ಹಾಕಿಸಿಕೊಂಡಿರಲೇಬೇಕು. ಒಂದು ವೇಳೆ ಲಸಿಕೆ ಪಡೆಯದೆ ಅಂಗಡಿ ತೆರೆದರೆ ಅಂಗಡಿ ಬಂದ್ ಮಾಡಿಸಲಾಗುವುದು. ಕಡ್ಡಾಯವಾಗಿ ಲಸಿಕೆ ಪಡೆದ ಕುರಿತು ದಾಖಲೆ ತೋರಿಸಬೇಕು ಎಂದು ಸೂಟಿಸಿದ್ದಾರೆ.

ಅನ್ ಲಾಕ್ ಗೂ ಮುನ್ನ ಆದ್ಯತೆ ಮೇರೆಗೆ ಇಂತಹ ವರ್ಗದವರಿಗೆ ಲಸಿಕೆ ಪಡೆಯಲು ಅನುಕೂಲ ಕಲ್ಪಿಸುತ್ತೇವೆ. ಜನರೊಂದಿಗೆ ನಿಕಟ ಸಂಪರ್ಕ ಹೊಂದುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವವರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.

ಕಲ್ಲು ತೂರಾಟ: ಪೇದೆ ಸೇರಿ 15 ಜನರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹುಟ್ಟಿಕೊಂಡಿರುವ ರಾಜಕೀಯ ವೈಷಮ್ಯದಿಂದಾಗಿ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದು, ತಡೆಯಲು ಬಂದ ಗ್ರಾಮೀಣ ಠಾಣೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.

ಬಧವಾರ ಸಂಜೆಯಿಂದಲೇ ಸಣ್ಣದಾಗಿ ಹೊತ್ತಿಕೊಂಡಿದ್ದ ಕಲಹ ಗುರುವಾರ ಮುಂಜಾನೆ ಭುಗಿಲೆದ್ದಿದೆ. ಮುಂಜಾನೆ ಗೋವಿಂದಪ್ಪ ಎನ್ನುವ ವ್ಯಕ್ತಿ ಬಹಿರ್ದೆಸೆಗೆ ಹೋದಾಗ ಒಂದು ಸಮುದಾಯದ ಜನ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅದನ್ನು ಕೇಳಲು ಬಂದ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇನ್ನೊಂದು ಸಮುದಾಯದ ಜನ ಒಗ್ಗಟ್ಟಾಗಿ ಕೇರಿಯೊಳಗೆ ಹೋಗಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಸ್ಥಳದಲ್ಲಿಯೇ ಇದ್ದ ಪೊಲೀಸರು ತಡೆದಿದ್ದಾರೆ. ಆಗ ಎರಡು ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಪೇದೆಯೂ ಸೇರಿ ಎರಡೂ ಕಡೆಯ ಸುಮಾರು ೧೫ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದೊಡನೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರವಿಕುಮಾರ್ ಕಪ್ಪತನವರ್, ಸುಬ್ಬಾಪುರಮಠ ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತಂದರು. ಸತೀಶ ದೊಡ್ಡಮನಿ ಹಾಗೂ ಈರಪ್ಪ ಬೇಲೇರಿ ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಮತ ಎಣಿಕೆಯ ಸಂದರ್ಭದಲ್ಲಿ ಎರಡು ಮತಗಳ ಅಂತರದಿಂದ ಈರಪ್ಪ ಬೇಲೇರಿ ಗೆದ್ದಿದ್ದರು. ಇದರಿಂದ ಅಸಮಾಧಾನಗೊಂಡ ಪರಾಜಿತ ಅಭ್ಯರ್ಥಿ ಸತೀಶ ಹಗೆ ಸಾಧಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಮದಲ್ಲೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಬಿಗುವಿನಿಂದ ಕೂಡಿದೆ. ಸ್ಥಳದಲ್ಲಿ ಮುನ್ನೆಚ್ಚರಿಕೆ ಅಂಗವಾಗಿ, ನಾಲ್ವರು ಪಿಎಸ್‌ಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೂರು ತುಕಡಿಗಳು ಬೀಡು ಬಿಟ್ಟಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯ 17 ಜನರನ್ನು ಬಂಧಿಸಲಾಗಿದೆ. ದೂರು ಹಾಗೂ ಪ್ರತಿ ದೂರು ದಾಖಲಿಸಿಕೊಂಡಿರುವ ಗದಗ ಗ್ರಾಮೀಣ ಠಾಣೆ ಪೊಲೀಸರು, ಇನ್ನಷ್ಟು ಜನರ ಬಂಧನಕ್ಕೆ ಜಾಲ ಬೀಸಿದ್ದಾರೆ.

ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವ ಪಿಎಸ್ಐ; ಬಡವರಿಂದ ಹಫ್ತಾ ವಸೂಲಿ ಆರೋಪ

ವಿಜಯಸಾಕ್ಷಿ ಸುದ್ದಿ, ರೋಣ

ರೋಣ ಪಿಎಸ್‌ಐ ಓರ್ವ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸದೆ ಬಿಜೆಪಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವುದು ಖಂಡನೀಯ. ಈ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಡಿಎಸ್‌ಎಸ್ ಡಾ| ಬಿ.ಆರ್. ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕ ಹನುಮಂತ ಚಲವಾದಿ ಗಂಭೀರ ಆರೋಪ ಮಾಡಿದರು.

ಅವರು ಗುರುವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಿಎಸ್‌ಐ ವಿನೋದ ಪೂಜಾರಿ ಅವರ ಕಾರ್ಯವೈಖರಿ ಖಂಡನೀಯ. ಲಾಕ್‌ಡೌನ್ ಸಮಯದಲ್ಲಿ ಶ್ರೀಮಂತರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಎಲ್ಲ ರೀತಿಯ ಅನುಕೂಲವನ್ನು ಕಲ್ಪಿಸಿದ್ದಾರೆ. ಬಡವರ ಮೇಲೆ ಕೇಸ್ ಜಡಿದು ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಲಾಕ್‌ಡೌನ್ ಸಮಯದಲ್ಲೂ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆದರೂ ಅತ್ತ ಕಡೆ ಹೊರಳಿ ನೋಡದ ಪಿಎಸ್‌ಐ ವಿನೋದ ಪೂಜಾರಿ, ಸಣ್ಣ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಹಫ್ತಾ ವಸೂಲಿ ಮಾಡಿದ್ದಾರೆ. ಅವರ ಮೇಲೆ ಕೇಸ್ ಕೂಡ ಹಾಕಿದ್ದಾರೆ ಎಂದು ದೂರಿದರು.

ಅಕ್ರಮ ಸಾರಾಯಿ ಮಾರಾಟ ಹಳ್ಳಿಗಳಲ್ಲಿ ಮಾತ್ರವಲ್ಲ, ರೋಣ ಪಟ್ಟಣದಲ್ಲಿ ದಿನದ 24 ಘಂಟೆಯೂ ನಡೆದಿದೆ. ಆದರೂ ಪಿಎಸ್‌ಐ ಹಳ್ಳಿಗಳಲ್ಲಿ ರೇಡ್ ಮಾಡಿದ್ದಾರೆ. ಅವರಿಂದ 10 ಸಾವಿರ ರೂ.ಗಳನ್ನು ಪಡೆದು ಕೇಸ್ ಕೂಡ ಹಾಕಿದ್ದಾರೆ. ಈ ವಿಷಯವಾಗಿ ನಮ್ಮ ಬಳಿ ದಾಖಲೆಗಳಿವೆ ಎಂದರು.

ನ್ಯಾಯಾಲಯಕ್ಕೆ ಹೋಗಲು ಸಿದ್ಧ

ಭೀಮ ಆರ್ಮಿ ಸಂಘಟನೆ ಅಧ್ಯಕ್ಷ ಮುತ್ತು ನಂದಿ ಮಾತನಾಡಿ, ಪಿಎಸ್‌ಐ ವಿನೋದ ಪೂಜಾರಿ ಅವರು ಪಕ್ಕಾ ಬಿಜೆಪಿ ಮುಖಂಡನಾಗಿರುವುದು ಲಾಕ್‌ಡೌನ್ ಸಮಯದಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಬೈಕ್ ಹಿಡಿದಾಗ ಶಾಸಕರಿಂದ ಅಥವಾ ಬಿಜೆಪಿ ಮುಖಂಡರಿಂದ ಕರೆ ಮಾಡಿಸಿದರೆ ಮಾತ್ರ ಬೈಕ್ ಬಿಟ್ಟು ಕಳಿಸುತ್ತಿದ್ದರು. ರೋಣ ಪಿಎಸ್‌ಐ ಆಕ್ರಮ ಮರಳು ಹಾಗೂ ಸಾರಾಯಿ ಮಾರಾಟಗಾರರಿಂದ ಎಷ್ಟು ಹಣ ವಸೂಲಿ ಮಾಡಿದ್ದಾರೆ ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಅನೇಕ ಬಡವರು ನೊಂದಿರುವ ಕಾರಣ ನ್ಯಾಯಾಲಯಕ್ಕೆ ಹೋಗಲೂ ಸಿದ್ಧ ಎಂದರು.

ಸುರೇಶ ಬೇವಿನಕಟ್ಟಿ, ಭೀಮಸಿ ಮಹಾರಾಜನವರ, ರಿಯಾಜ್ ಬೆಳವಣಕಿ, ಚಂದ್ರು ಜಕನೂರ, ಚಂದ್ರು ಹಡಗಲಿ ಉಪಸ್ಥಿತರಿದ್ದರು.

ಪ್ರತಿಭಟನೆ ಮಾಡುತ್ತೇವೆ

ಬೆಳವಣಕಿ, ಮಲ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಆಗುತ್ತಿದ್ದರೂ ಹಫ್ತಾ ವಸೂಲಿ ಮಾಡಿ ಸುಮ್ಮನಿರುವ ಪಿಎಸ್‌ಐ, ಬಡವರ ಹಾಗೂ ದಲಿತರ ಮೇಲೆ ತನ್ನ ಹಗೆಯನ್ನು ಸಾಧಿಸುತ್ತಿರುವುದು ತರವಲ್ಲ. ಹಿರಿಯ ಅಧಿಕಾರಿಗಳು ಪಿಎಸ್‌ಐ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ಲಾಕ್‌ಡೌನ್ ಮುಗಿದ ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.

  • ಮುತ್ತು ನಂದಿ, ಅಧ್ಯಕ್ಷರು, ಭೀಮ ಆರ್ಮಿ ಸಂಘಟನೆ
error: Content is protected !!