Home Blog Page 3017

10 ವರ್ಷಗಳ ಕಾಲ ಪ್ರೇಮಿಯನ್ನು ಅಡಗಿಸಿಟ್ಟಿದ್ದ ಭೂಪ!

ವಿಜಯಸಾಕ್ಷಿ ಸುದ್ದಿ, ಪಾಲಕ್ಕಾಡ್

ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾಗಿದ್ದರಿಂದಾಗಿ ಪ್ರೇಮಿಯನ್ನೇ 10 ವರ್ಷಗಳ ಕಾಲ ಬಚ್ಚಿಟ್ಟ ಘಟನೆ ಬೆಳಕಿಗೆ ಬಂದಿದೆ. 34 ವರ್ಷದ ವ್ಯಕ್ತಿಯೊಬ್ಬ ಮನೆಯ ಪಕ್ಕದ ಯುವತಿ 28 ವರ್ಷದ ಸಜಿತಾಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಜಿತಾ ಮನೆ ಬಿಟ್ಟು ಬಂದಿದ್ದಳು. ಆದರೆ, ಉಳಿದವರಂತೆ ಬೇರೆ ಓಡಿ ಹೋಗದೆ ಈ ವ್ಯಕ್ತಿ, ತನ್ನ ಕೋಣೆಯಲ್ಲಿಯೇ ಅಡಗಿಸಿಟ್ಟಿದ್ದಾನೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಅಡಗಿಸಿಟ್ಟಿದ್ದಾನೆ.

ಸಜಿತಾ ನಿತ್ಯ ಕರ್ಮಗಳಿಗಾಗಿ ರಾತ್ರಿಯ ಸಂದರ್ಭದಲ್ಲಿ ಮಾತ್ರ ಹೊರ ಬರುತ್ತಿದ್ದಳು. ಮೂರು ತಿಂಗಳ ಹಿಂದೆ ರಹಮಾನ್ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಆನಂತರ ಅವರ ಸಹೋದರರು ಆತನನ್ನು ವಿಚಾರಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬರುವವರೆಗೂ ಮನೆಯಲ್ಲಿಯೇ ಇದ್ದ ಸಜಿತಾಳನ್ನು ಮಗನ ಪಾಲಕರು ಸಹ ಕಂಡು ಹಿಡಿದಿರಲಿಲ್ಲ.
ಪೊಲೀಸರು ಮಧ್ಯಪ್ರವೇಶಿಸಿದ ನಂತರ ರಹಮಾನ್ ನಡೆದ ಘಟನೆ ತಿಳಿಸಿದ್ದಾನೆ.

ಪೊಲೀಸರು ರಹಮಾನ್ ಮತ್ತು ಸಜಿತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಜಿತಾ ಅವನೊಂದಿಗೆ ವಾಸಿಸಲು ಬಯಸಿದ್ದರಿಂದ ಅವನ ಜೊತೆ ಹೋಗಲು ಕೋರ್ಟ್ ಅನುಮತಿ ನೀಡಿದೆ.
ಆಯಿಲೂರ್‌ ನ ಕರತ್‌ ಪರಂಬು ಮೊಹಮ್ಮದ್ ಘಾನಿ ಅವರ ಮಗ ರಹಮಾನ್ ಮತ್ತು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ವೇಲಾಯುಧನ್ ಅವರ ಪುತ್ರಿ ಸಜಿತಾ ಪ್ರೀತಿಸುತ್ತಿದ್ದರು ಎಂದು ನೆಮರಾ ಪೊಲೀಸರು ತಿಳಿಸಿದ್ದಾರೆ.

ಕುಟುಂಬಸ್ಥರ ವಿರೋಧಕ್ಕೆ ಹೆದರಿದ್ದ ಸಜಿತಾ 2010ರ ಫೆ. 2ರಂದು ತನ್ನ ಮನೆ ಬಿಟ್ಟು ಬಂದಿದ್ದಳು. ರಹಮಾನ್ ಕೋಣೆಯೊಳಗೆ ತೆರಳಿ ಆಹಾರ ನೀಡುತ್ತಿದ್ದ. ಪೋಷಕರನ್ನು ಹೊರತುಪಡಿಸಿ ರಹಮಾನ್ ಸಹೋದರಿ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಆದರೂ ಯಾರೊಬ್ಬರಿಗೆ ವಿಷಯ ತಿಳಿಯದಂತೆ ಜಾಗೃತಿ ವಹಿಸಿದ್ದ. ಸಜಿತಾ ಪೋಷಕರು 10 ವರ್ಷಗಳ ಹಿಂದೆ ಮಗಳು ಕಾಣೆಯಾಗಿದ್ದಾಳೆ ದೂರು ನೀಡಿದ್ದರು. ಈ ದೂರಿನನ್ವಯ ಆಗ ರಹಮಾನ್ ಸೇರಿದಂತೆ ಅನೇಕರನ್ನು ಪೊಲೀಸರು ಪ್ರಶ್ನಿಸಿದ್ದರು.

2021ರ ಮಾ. 3ರಂದು ರಹಮಾನ್ ಕಾಣೆಯಾಗಿರುವುದಾಗಿ ಪೋಷಕರು ನೆನ್ಮಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಹಮಾನ್ ನೆನ್ಮರಾ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವುದನ್ನು ಸಹೋದರ ನೋಡಿದ್ದ. ಇದರಿಂದ ಆತಂಕಗೊಂಡ ರಹಮಾನ್ ಸಮೀಪದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ ಸಹಾಯ ಕೋರಿದ್ದ. ಈ ಸಂದರ್ಭದಲ್ಲಿ ತಾನು ಮತ್ತು ಸಜಿತಾ ಮೂರು ತಿಂಗಳಿನಿಂದ ವಿಥುನಾಶೇರಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ.

ಚಿತ್ರಕಲೆ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ರಹಮಾನ್, ಸಾಂದರ್ಭಿಕವಾಗಿ ಮಾತ್ರ ಕೆಲಸಕ್ಕೆ ಹೋಗುತ್ತಿದ್ದ. ಆದರೆ, ರಹಮಾನ್ ಪೋಷಕರು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಸಜಿತಾ ಪೋಷಕರನ್ನು ಪ್ರಶ್ನಿಸಿದಾಗ ಅವರು ಮಗಳು ಮೃತಪಟ್ಟಿದ್ದಾಗಿ ಭಾವಿಸಿದ್ದರು ಎಂದು ಹೇಳಿದ್ದಾರೆ.

ವಿಜಯೇಂದ್ರ ದೇವಸ್ಥಾನ ಭೇಟಿ ಪ್ರಕರಣ; ವರದಿ ಕೇಳಿದ ಹೈ ಕೋರ್ಟ್‌

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಆರೋಪದ ಕುರಿತು ಹೈಕೋರ್ಟ್, ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇಂದು ಆದೇಶ ನೀಡಿದೆ. ಏಪ್ರಿಲ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದರಿಂದಾಗಿ ಸರ್ಕಾರ, ಮೊದಲು ಕರ್ಫ್ಯೂ ಜಾರಿಗೊಳಿಸಿ, ಆ ನಂತರ ಲಾಕ್ ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ ತೆರೆಯಲು ಅವಕಾಶ ನೀಡಿರಲಿಲ್ಲ. ಕೇವಲ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿತ್ತು.

ಆದರೆ, ಈ ಸಂದರ್ಭದಲ್ಲಿ ವಿಜಯೇಂದ್ರ ಕಳೆದ ತಿಂಗಳು ತಮ್ಮ ಪತ್ನಿ ಜೊತೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಲ್ಲದೆ ಪೂಜೆ ನೆರವೇರಿಸಿದ್ದರು, ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದು, ಇದು ಎಷ್ಟು ಸರಿ, ಜನಸಾಮಾನ್ಯರಿಗೊಂದು ನಿಯಮ, ಜನಪ್ರತಿನಿಧಿಗಳಿಗೊಂದು ನಿಯಮವೇ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸದ್ಯ ಈ ಪ್ರಕರಣ ಕೈಗೆತ್ತಿಕೊಂಡ ಹೈಕೋರ್ಟ್, ಇಂದು ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಈ ಜಿಲ್ಲೆಗಳಿಗೆ ಇಲ್ಲ ಅನ್ ಲಾಕ್ ಭಾಗ್ಯ! ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಏನಾಯಿತು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿನ 8 ಜಿಲ್ಲೆಗಳಲ್ಲಿ ಅಂದುಕೊಂಡಂತೆ ಸೋಂಕು ನಿಂತಿಲ್ಲ. ಹೀಗಾಗಿ ಆ 8 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ ಡೌನ್ ಮುಂದುವರೆಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಾಗಿ ಜೂ. 14ರ ನಂತರವೂ ಈ ಈ 8 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.

ಸೋಂಕು ಹೆಚ್ಚಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇತರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿನ ಕೋವಿಡ್ ಪರಿಸ್ಥಿತಿ ಹೇಗಿದೆಯಂಬ ಮಾಹಿತಿ ಪಡೆದರು.

ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಮಂಡ್ಯ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ಈ 8 ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಎಂಟು ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾಗಿದೆಯಾದರೂ, ಪಾಸಿಟಿವಿ ದರ ಇಳಿಕೆಯಾಗಿಲ್ಲ. ಈ ಅಂಶ ಸರ್ಕಾರವನ್ನು ಗಾಢವಾಗಿ ಕಾಡುತ್ತಿದೆ. ಹಾಗಾಗಿ, ಮುಖ್ಯಂತ್ರಿಗಳು ಲಾಕ್ ಡೌನ್ ಹಿಂಪಡೆವ ಕುರಿತು ಆಯಾ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನೇ ಮೊದಲು ಕೇಳಿದರು. ಬಹುತೇಕ ಎಲ್ಲ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಮುಂದುವರಿಸುವ ಇರಾದೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಹಾಜರಿದ್ದ ತಜ್ಞರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಸಡಿಲಗೊಳಿಸಿದರೆ, ಸೋಂಕು ಮತ್ತೆ ಏರಿಕೆಯಾಗುವ ಸಂಭವವಿದೆ. ಹಾಗಾಗಿ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆ ಬರುವವರೆಗೂ ಕಠಿಣ ಲಾಕ್ ಡೌನ್ ಮುಂದುವರಿಸಬೇಕೆಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ವರದಿಯಾಗಿದೆ. ಹಾಗಾಗಿ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸುವುದು ಮತ್ತು ಇನ್ನೂ ಅಪಾಯದ ಅಂಚಿನಲ್ಲೇ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುರಿಸುವುದು ಎನ್ನುವುದು ಬಹುತೇಕ ನಿಶ್ಚಯವಾದಂತಾಗಿದೆ. ಈ ಬಗ್ಗೆ ಜೂನ್ 12 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಬಾಕ್ಸರ್ ಡಿಂಕೊ ಸಿಂಗ್ ನಿಧನ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಏಷ್ಯನ್ ಗೇಮ್ಸ್ ಪದಕ ವಿಜೇತ ಹಾಗೂ ಪದ್ಮಶ್ರೀ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.
ಮಣಿಪುರ ಮೂಲದ 42 ವರ್ಷದ ಡಿಂಕೊ ಸಿಂಗ್ ಅವರಲ್ಲಿ ಇತ್ತೀಚೆಗಷ್ಟೇ ಕೊರೊನಾ ಸೋಂಕು ಕಂಡು ಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಕೊರೋನಾ ವಿರುದ್ಧ ಗೆದ್ದು ಬಂದ ನಂತರವೂ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಡಿಂಕೊ ಸಿಂಗ್ 2017ರಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಡಿಂಕೊ 1998ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಡಿಂಕೊ ನಿಧನಕ್ಕೆ ಕ್ರೀಡಾ ಸಚಿವ ಕಿರಣ್ ರಿಜಿಜು, ಬಾಕ್ಸರ್ ವಿಜೇಂದರ್ ಸಿಂಗ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೊರೊನಾ ಚಿಕಿತ್ಸೆಗೆಂದು ಬಂದವ ರಕ್ತ ಕಾರಿ ಸತ್ತ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಯೊಬ್ಬರು ಹೃದಯ ಸಂಬಂಧಿ ಸಮಸ್ಯೆಯಿಂದ ರಕ್ತಕಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. 26 ವರ್ಷದ ವ್ಯಕ್ತಿಯೊಬ್ಬರು ಆರ್‌ ಟಿ ನಗರದ ಅಂಬೇಡ್ಕರ್ ಆಸ್ಪತ್ರೆಗೆ ಕೊರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ 20 ದಿನ ಕಳೆದರೂ ಚೇತರಿಕೆ ಕಂಡಿರಲಿಲ್ಲ. ಅವರಲ್ಲಿ ಎದೆ ನೋವು ಶುರುವಾಗಿ ವೈದ್ಯರ ಸಲಹೆ ಮೇರೆಗೆ ಜಯದೇವ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು.

ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಚಿಕಿತ್ಸೆ ನಡೆಯುತ್ತಿತ್ತು. ಆದರೆ, ಏಕಾಏಕಿ ರಕ್ತಕಾರಿ ಸಾವನ್ನಪ್ಪಿದ್ದಾರೆ.
ಈ ವ್ಯಕ್ತಿ ಗಾರೆ ಕೆಲಸ ಮಾಡುತ್ತಿದ್ದರು. ಸಾವನ್ನಪ್ಪಿರುವ ವ್ಯಕ್ತಿಗೆ 7 ವರ್ಷದ ಮಗನಿದ್ದಾನೆ. ಇವರ ಪತ್ನಿ ಗರ್ಭಿಣಿಯಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಎಂ ರಾಜೀನಾಮೆ ವದಂತಿ ವಿಚಾರಕ್ಕೆ ಬಲಿಯಾಗೋದು ಬೇಡ; ಜೊಲ್ಲೆ

ವಿಜಯಸಾಕ್ಷಿ ಸುದ್ದಿ, ಗದಗ

ಸಿಎಂ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಉಹಾಪೋಹಗಳಿಗೆ ನಾವು ಬಲಿ ಆಗೋದು ಬೇಡ ಎಂದಿದ್ದಾರೆ.

ಗದಗ ಜಿಲ್ಲಾ ಪ್ರವಾಸದಲ್ಲಿರುವ ಅವರು, ಸಿಎಂ ಬಿ ಎಸ್ ಯಡಿಯೂರಪ್ಪ ಅವರು, ನಮ್ಮ ಸರ್ಕಾರ ಬಂದ ಮೇಲೆ ಬಹಳ ಚಾಲೆಂಜ್ ಎದುರಿಸಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ, ಕೋವಿಡ್ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೇ‌ ಪೂರ್ಣಾವಧಿ ಸಿಎಮ್ ಆಗಿರುವುದಲ್ಲದೆ, ಮುಂದಿನ ಚುನಾವಣೆಯೂ ಸಹ ಅವರ ನೇತೃತ್ವದಲ್ಲಿಯೇ ನಡೆಯುತ್ತದೆ ಎಂದರು.

ಮನೆಯೆಂದ ಮೇಲೆ ಕೆಲವು ಜಗಳಗಳು ಇರುತ್ತವೆ, ಸ್ವಲ್ಪ ಕಿರಿಕಿರಿ ಇರುತ್ತೇ, ಮತ್ತೆ ಸಾಲ್ವ್ ಆಗುತ್ತವೆ. ಯಾರೋ ಏನೋ ಹೇಳಿದ್ರು ಅಂತಾ ಗಾಬರಿ ಪಡಬೇಕಾಗಿಲ್ಲಾ. ನಾನು ಯಾವುದಕ್ಕೂ ಸಹಿ ಮಾಡಿಲ್ಲ, ಸಹಿ ಸಂಗ್ರಹಣೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ ಎಂದ್ರು.

ಇನ್ನು ಹೈಕಮಾಂಡ್ ಇರುತ್ತದೆ ಅವರು ಎಲ್ಲವನ್ನೂ ನೋಡುತ್ತಿರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಸಿಎಂ ಅವರಿಗೆ ಬೇಜಾರಾಗಿರಬಹುದು. ಹಾಗಾಗಿ ರಾಜೀನಾಮೆ ನೀಡಲು ಸಿದ್ದ ಅಂತಾ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆಯಿದೆ, ಖಾಸಗಿ ವೈದ್ಯರ ಜೊತೆಗೆ ಚರ್ಚೆ ಮಾಡುತ್ತಿದ್ದೇವೆ.

ಮೂರನೇಯ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ದೇಶದಲ್ಲಿ ಒಂದೇ ದಿನ ಕೋವಿಡ್ ಗೆ ದಾಖಲೆಯ ಬಲಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಕಡಿಮೆಯಾಗುತ್ತಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸದ್ಯ ಒಂದೇ ದಿನ ದಾಖಲೆಯ ಸೋಂಕಿತರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 94,052 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ ಬರೋಬ್ಬರಿ 6,148 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,91,83,121ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,59,676ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ದಿನಗಳಲ್ಲಿಯೇ ನಿನ್ನೆಯ ಸಾವು ಆತಂಕ ಮೂಡಿಸಿದೆ.
ನಡುವೆ ಕಳೆದ 24 ಗಂಟೆಗಳಲ್ಲಿ 1,51,367 ಜನರು ಗುಣಮುಖರಾಗುವುದರೊಂದಿಗೆ ಇಲ್ಲಿಯವರೆಗೆ 2,76,55,493 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 23,90,58,360 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

148 ವರ್ಷಗಳ ನಂತರ ಶನಿ ಜಯಂತಿಯಂದೆಯೇ ನಡೆಯುತ್ತಿದೆ ಸೂರ್ಯಗ್ರಹಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಈ ವರ್ಷದ ಮೊದಲ ಸೂರ್ಯಗ್ರಹಣವು ಅಮಾವಾಸ್ಯೆಯ ದಿನ ಅಂದರೆ ಶನಿ ಜಯಂತಿಯಂದೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇದರ ಪ್ರಾಮುಖ್ಯತೆ ಇನ್ನೂ ಹೆಚ್ಚಾಗಿದೆ. ಶನಿ ಜಯಂತಿಯಂದೇ ಸೂರ್ಯಗ್ರಹಣವೂ ಸಂಭವಿಸುತ್ತಿರುವುದು 148 ವರ್ಷದ ಬಳಿಕ ನಡೆಯುತ್ತಿರುವ ಅಪರೂಪದ ವಿದ್ಯಮಾನವಾಗಿದೆ. ಹೀಗಾಗಿ ಇವತ್ತಿನ ಸೂರ್ಯಗ್ರಹಣಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಬಂದಿದೆ.

ಇವತ್ತು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯನ್ನು ನಾವು ಕಾಣಬಹುದಾಗಿದೆ. ಈ ಗ್ರಹಣವನ್ನು ಕಂಕಣ ಗ್ರಹಣ ಅಥವಾ ವಾರ್ಷಿಕ ಸೂರ್ಯಗ್ರಹಣ ಎನ್ನಲಾಗುತ್ತದೆ. ಭಾರತೀಯ ಪಂಚಾಂಗದ ಪ್ರಕಾರ ಸೂರ್ಯಗ್ರಹಣದ ಅವಧಿಯನ್ನು ಸೂತಕದ ಅವಧಿ ಎಂದು ನಂಬಲಾಗುತ್ತದೆ. ಇದು ವೈಜ್ಞಾನಿಕವಾಗಿ ಎಷ್ಟು ಸರಿ ಎನ್ನುವ ವಿಷಯ ಚರ್ಚೆಯಲ್ಲಿ ಇದ್ದೇ ಇದೆ.

ಇನ್ನು ಈ ದಿನದ ಸೂರ್ಯಗ್ರಹಣ ಸಂಜೆ 3.42ರಿಂದ 5.52ರ ಅವಧಿಯೊಳಗೆ ಸಂಭವಿಸುತ್ತದೆ. ಈ ಅಪರೂಪದ ಸೂರ್ಯನ ಉಂಗುರ ನೋಡಲು ವಿಶ್ವಾದ್ಯಂತ ಜನ ಕಾತರರಾಗಿದ್ದಾರೆ. ಈ ದಿನ ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯನ್ನು ಕಾಣಬಹುದು. ಈ ಗ್ರಹಣವು ಕಂಕಣ ಗ್ರಹಣ ಅಥವಾ ವಾರ್ಷಿಕ ಸೂರ್ಯಗ್ರಹಣವಾಗಿರುತ್ತದೆ. ಈ ಸಂದರ್ಭದಲ್ಲಿ ಚಂದ್ರನು ಸುಮಾರು ಶೇ. 97ರಷ್ಟು ಸೂರ್ಯನನ್ನು ಆವರಿಸಿರುತ್ತಾನೆ. ದೇಶದ ಈಶಾನ್ಯದ ಭಾಗಗಳಲ್ಲಿ ಮತ್ತು ಭಾಗಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ.

ಈ ಬಾರಿ ಸೂರ್ಯಗ್ರಹಣ ವೃಷಭ ಹಾಗೂ ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ವರ್ಷದ ಈ ಮೊದಲ ಸೂರ್ಯಗ್ರಹಣ ಏಷ್ಯಾ, ಯುರೋಪ್, ಮಂಗೋಲಿಯಾ, ಈಶಾನ್ಯ ಅಮೆರಿಕ, ಅಟ್ಲಾಂಟಿಕ್ ಸಾಗರದ ಉತ್ತರ ಭಾಗ ಮತ್ತು ಉತ್ತರ ಕೆನಡಾ, ರಷ್ಯಾ, ಗ್ರೀನ್‌ಲ್ಯಾಂಡ್‌ನಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಈ ದೇಶಗಳಲ್ಲಿ ಸೂರ್ಯಗ್ರಹಣದ ಸೂತಕ ಮಾನ್ಯವಾಗಿರುತ್ತದೆ.

ವಸತಿ ಕಟ್ಟಡ ಕುಸಿತ – 11 ಸಾವು, 8 ಜನರಿಗೆ ಗಾಯ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ನಗರದಲ್ಲಿನ ಎರಡು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿತಗೊಂಡ ಪರಿಣಾಮ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿರುವ ಘಟನೆ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಈಗಾಗಲೇ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡವರನ್ನು ರಕ್ಷಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ 11 ಗಂಟೆ ಸುಮಾರಿಗೆ ಈ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಮುಂಡಿಪುರಂ ನಿವಾಸಿ ಮಂಜು ಪ್ರಸಾದ್(55) ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ 12ಗಂಟೆಯ ಸಮಯದಲ್ಲಿ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ಲದ ಸಂದರ್ಭದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ ನೋಟ್‌ ನಲ್ಲಿ ರಿಯಾಜ್ ಮತ್ತು ಜಾವಿದ್ ಎಂಬುವರಿಂದ ನಾನು ಜಯಲಕ್ಷ್ಮೀಪುರಂ ನಿವೇಶನ ಖರೀದಿಸಿದ್ದೆ. ಅದನ್ನು ನಾನು ಬೇರೆಯವರಿಗೆ ಮಾರಾಟ ಮಾಡಿದ್ದಾಗ, ಅವರಿಬ್ಬರು ನನಗೆ ನೀಡಿರುವ ದಾಖಲೆಗಳು ಸುಳ್ಳು ಎಂಬುವುದು ತಿಳಿದು ಬಂದಿದೆ. ಅಲ್ಲದೇ, ಈ ಸಂಬಂಧ ದೂರು ಕೂಡ ದಾಖಲಾಗಿದೆ. ಹಾಗಾಗಿ, ಈ ಸಾವಿಗೆ ರಿಯಾಜ್ ಮತ್ತು ಜಾವಿದ್ ಅವರೇ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ನಗರದ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!