Home Blog Page 3027

ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ ಭೀಮಯ್ಯ ಮೇಷ್ಟ್ರು!

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಹಿರಿಯ ಸಾಹಿತಿ, ಕನ್ನಡ ಕಿಂಕರ ಎಂದೇ ಖ್ಯಾತಿಯಾಗಿದ್ದ ಭೀಮಯ್ಯ ಮೇಷ್ಟ್ರು ಇಹಲೋಕ ತ್ಯಜಿಸಿದ್ದಾರೆ.

ಭೀಮಯ್ಯ(96) ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಇದರಿಂದಾಗಿ ಸಾರಸ್ವತ ಲೋಕ ಕಣ್ಣೀರು ಸುರಿಸುತ್ತಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925ರಲ್ಲಿ ಭೀಮಯ್ಯ ಮೇಷ್ಟ್ರು ಜನಿಸಿದ್ದರು. ಇವರ ತಾತ ಸಣ್ಣಲಿಂಗೇಗೌಡ ಅವರ ಪ್ರಭಾವಕ್ಕೆ ಒಳಗಾಗಿದ್ದ ಭೀಮಯ್ಯ ಅವರು, ಆಧಾತ್ಮ ಮತ್ತು ತತ್ವ ಸಾಧನೆಯನ್ನು ಗಳಿಸಿಕೊಂಡಿದ್ದರು.

ರಾಮಾಯಣ, ಗದುಗಿನ ಭಾರತ, ದೇವಿ ಮಹಾತ್ಮೆ ಇವರ ಪಾಲಿಗೆ ಆಧಾತ್ಮ ಪಠ್ಯಗಳಾಗಿದ್ದವು.

ಇವರು 1950ರ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದರು. ಆದರೆ, ಎಲ್ಲರಂತೆ ಸರ್ಕಾರಿ ಕೆಲಸಕ್ಕೆ ಸೇರದೆ, ಹಳ್ಳಿಯಲ್ಲಿಯೇ ಉಳಿದರು. ನೈತಿಕ ಮೌಲ್ಯಗಳ ಕುರಿತು ಮಾತನಾಡುತ್ತಿದ್ದರಿಂದಾಗಿ ಇವರನ್ನುಇವರು ‘ಭೀಮಯ್ಯ ಮೇಷ್ಟ್ರು’ ಎಂದೇ ಪ್ರಸಿದ್ಧಿ ಪಡೆದಿದ್ದರು.

ಇವರು, ‘ಆನಂದ ಮಠ’ ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ‘ಸತ್ವ ಪರೀಕ್ಷೆ’, ‘ಜೀವನಾಮೃತ’, ದೇವಿ ಮಹಾತ್ಮೆ ಕಥೆಯನ್ನು ಆಧರಿಸಿದ ‘ಚಿದಾನಂದ ಲೀಲೆ’ ಎಂಬ ನಾಟಕಗಳನ್ನು ರಚಿಸಿದ್ದರು. ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ ‘ರಾಮಾಯಣ ಸಂದರ್ಶನ’, ‘ಮಂಕು ಭೀಮನ ಬೊಗಳೆ’ ಎಂಬ ಕೃತಿಗಳನ್ನು ರಚಿಸಿದ್ದರು. ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಪಟ್ಟನಾಯಕನಹಳ್ಳಿ ಮಠದ ‘ಸ್ಪಟಿಕಶ್ರೀ’ ಪ್ರಶಸ್ತಿ. ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ರಾಜ್ಯದ ಮಣ್ಣಿನ ಮಗ ಪ್ರಧಾನಿಯಾಗಿ ಇಂದಿಗೆ 25 ವರ್ಷ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ದಿನಕ್ಕೆ ಇಂದಿಗೆ 25 ವರ್ಷಗಳು ತುಂಬಿವೆ. ಅವಧಿ ಚಿಕ್ಕದಾದರೂ ಅವರ ಸಾಧನೆ ಊಹೆಗೆ ಮೀರಿದ್ದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೊಂಡಾಡಿದ್ದಾರೆ.

ದೇವೇಗೌಡ ಅವರು ಪ್ರಧಾನಿಯಾಗಿ ಇಂದಿಗೆ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸರಣಿ ಟ್ವೀಟ್ ಗಳನ್ನು ಮಾಡಿ, ತಂದೆಯ ಕಾರ್ಯ ಸ್ಮರಿಸಿ, ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು, ಮಣ್ಣಿನ ಮಗ, ರಾಜ್ಯದ ಹೆಮ್ಮೆಯ ಸುಪುತ್ರ ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಇಂದು. ಈ ದಿನ ಭರ್ತಿ 25 ವರ್ಷಗಳನ್ನು ಪೂರೈಸಿದೆ. ಹೀಗಾಗಿ ನಾವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ‌ ಟ್ಯಾಕ್ಸ್ ಹಾಲಿಡೇ, ಬಾಂಗ್ಲಾ ದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು ದೇವೇಗೌಡ ಅವರ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ಈಶಾನ್ಯದ ರಾಜ್ಯಗಳಿಗೆ ಭೇಟಿ ನೀಡಿ ಬರೋಬ್ಬರಿ ರೂ. 6 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು.

ಏರ್ ಪೋರ್ಟ್, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡಿದ್ದರು. ಅಂದು ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ, ರೂ. 3 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದರು. ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಿಸಿದ್ದರು. ಕೇವಲ ಕಡಿಮೆ ಅವಧಿಯಲ್ಲಿ ದೇಶಕ್ಕೆ ಆಗುವ ಅಪಾಯ ತಪ್ಪಿಸಿ, ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದಲ್ಲದೆ, ದೇಶದ ಮೂಲೆ ಮೂಲೆಯ ಜನರ ನೋವು ಆಲಿಸಿ, ಪರಿಹರಿಸುವ ಕಾರ್ಯವನ್ನು ಅಂದು ದೇವೇಗೌಡ ಅವರು ಮಾಡಿದ್ದರು ಎಂದು ಕುಮಾರಸ್ವಾಮಿ ನೆನೆದು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ದೇವೇಗೌಡ ಅವರು, 11 ತಿಂಗಳುಗಳ ಕಾಲ ಅಧಿಕಾರ ನಡೆಸಿದ್ದರು. ಅವರು ಅಧಿಕಾರ ವಹಿಸಿದ್ದ ಆ ದಿನಕ್ಕೆ ಇಂದಿಗೆ 25 ವರ್ಷಗಳು ಕಳೆದಿವೆ. ಹೀಗಾಗಿ ಜೆಡಿಎಸ್ ಪಕ್ಷದಿಂದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ಮಣ್ಣಿನ ಹೆಮ್ಮೆಯ ಮಗನಿಗೆ ರಾಜ್ಯದ ಜನರು ಕೂಡ ಹಾರೈಸುತ್ತಿದ್ದಾರೆ.

ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿರುವ ತಮ್ಮ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಆಸ್ತಿ ವಿಚಾರವಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಠನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಜರುಗಿದೆ.
ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (54) ತಮ್ಮನಿಂದಲೇ ಕೊಲೆಯಾದ ದುರ್ದೈವಿ. ಸುರೇಶ್ ಕೊಲೆ ಮಾಡಿದ ಸಹೋದರ.

ಕೊಲೆಯಾಗಿರುವ ಬಾಲಕೃಷ್ಣ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲ ಅವರು ಗ್ರಾಮಕ್ಕೆ ಬಂದಿದ್ದರು.
ಜಮೀನು ವಿಚಾರವಾಗಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ವೈಮನಸ್ಸು ಇತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಕಟ್ಟಿಕೊಂಡು ಬೇರೆ ಬೇರೆಯಾಗಿಯೇ ಇದ್ದರು. ಆ ನಂತರವೂ ಇಬ್ಬರ ನಡುವೆ ಆಸ್ತಿ ವಿಚಾರವಾಗಿ ಜಗಳವಾಗುತ್ತಿತ್ತು.

ನಿನ್ನೆ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಜಗಳ ಬಿಡಿಸಲು ಬಂದ ಅತ್ತಿಗೆ ಸರಳ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆದರೆ, ಅಣ್ಣ ಬಾಲಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸರಳ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದಾಗಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರೇಶ್ ನನ್ನು ಬಂಧಿಸಲಾಗಿದೆ.

ಅನಾಥ ವೃದ್ಧೆಗೆ ಊಟ ಮಾಡಿಸಿದ ಪೊಲೀಸ್!

ವಿಜಯಸಾಕ್ಷಿ ಸುದ್ದಿ, ಲಕ್ನೋ

ರಸ್ತೆ ಬದಿಯಲ್ಲಿದ್ದ ಅನಾಥ ವೃದ್ಧೆಗೆ ಅನ್ನ ತಿನ್ನಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ. ಸದ್ಯ ಅವರು ಊಟ ಮಾಡಿಸುತ್ತಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ಯಾರಾಲಿಂಪಿಯನ್ ರಿಂಕು ಹುಡಾ ಎಂಬುವವರು ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಲವರು ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಗೆ ಹ್ಯಾಟ್ಸ್ ಆಫ್, ಒಳ್ಳೆಯ ಕೆಲಸ ಮಾಡಿದ್ದೀರಿ ಸರ್, ನಿಮ್ಮ ಮೇಲೆ ಗೌರವ ಇದೆ ಅಣ್ಣ.. ಹೀಗೆ ಹಲವು ಜನರು ಹಲವು ರೀತಿಯಲ್ಲಿ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.

ವೈರಸ್ ಭಾರತಕ್ಕೆ ವಕ್ಕರಿಸಿದ ನಂತರ ಹಲವು ಜನರ ಮಾನವೀಯ ಮುಖಗಳು ಬೆಳಕಿಗೆ ಬರುತ್ತಿದ್ದರೆ, ಹಲವರ ಅಮಾನವೀಯ ಗುಣಗಳೂ ಬೆಳಕಿಗೆ ಬರುತ್ತಿವೆ.

ಮಗಳೊಂದಿಗೆ 1200 ಕಿ.ಮೀ ಸೈಕಲ್ ನಲ್ಲಿಯೇ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಕೊರೊನಾ ಲಾಕ್ ನ್ ಸಂದರ್ಭದಲ್ಲಿ ಸೈಕಲಿನಲ್ಲಿಯೇ ಮಗಳೊಂದಿಗೆ 1,200 ಕಿ.ಮೀ ಕ್ರಮಸಿ ಸುದ್ದಿಯಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೋಹನ್ ಪಾಸ್ವಾನ್ ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ. ದರ್ಭಾಂಗ ಜಿಲ್ಲೆಯಲ್ಲಿರುವ ಮನೆಯಲ್ಲಿಯೇ ಮೋಹನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಿಂದಿನ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ತನ್ನ ತಂದೆಯನ್ನು ಸೈಕಲ್ ನಲ್ಲಿಯೇ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ತೋರಿದ್ದಳು.

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲ್ ನಲ್ಲಿಯೇ ತನ್ನ ತಂದೆಯನ್ನು ಜ್ಯೋತಿ ಎಂಬ ಬಾಲಕಿ ಕರೆದುಕೊಂಡು ಹೋಗಿದ್ದಳು. ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಳು.

ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನು ಮಾಲೀಕ ಹಣ ಪಾವತಿಸಲು ಒತ್ತಾಯಿಸಿದ್ದರು. ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಊರಿಗೆ ಹೋಗಲು ಮುಂದಾಗಿದ್ದೇವು. ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ ರೂ. 6 ಸಾವಿರ ನೀಡಬೇಕು ಎಂದು ತಿಳಿಸಿದ. ಆದರೆ, ನಮ್ಮ ಬಳಿ ಹಣವಿರಲಿಲ್ಲ. ರೂ. 500 ನೀಡಿ ಒಂದು ಸೈಕಲ್ ಖರೀದಿಸಿ ಅದರಲ್ಲಿಯೇ ದರ್ಭಾಂಗಕ್ಕೆ ತಲುಪಿದೇವು ಎಂದು ಜ್ಯೋತಿ ಕುಮಾರಿ ಹೇಳಿದ್ದಳು.

ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಕೊರೊನಾದಿಂದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು. ಕಾಲಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ ರೂ. 600 ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಳು. ಆದರೆ, ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಜಾಗದ ಸಮಸ್ಯೆ – ಎರಡು ಕುಟಂಬಗಳ ನಡುವೆ ಮಾರಾಮಾರಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು, ಒಂದು ಗುಂಪಿನ ಮೂವರು ಹಾಗೂ ಇನ್ನೊಂದು ಗುಂಪಿನ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ,ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ಗುಂಪುಗಳ ನಡುವೆ ಆಗಾಗ ಜಾಗದ ಕುರಿತು ತಕರಾರು ನಡೆಯುತ್ತಿತ್ತು. ಆದರೆ ಇಂದು ಇದೇ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಬ್ಬೂರು ಬೈಪಾಸ್ ಬಳಿಯ ಹತ್ತಿರವಿರುವ ಆಟೋಮೊಬೈಲ್ ಹಿಂದಿನ ಜಾಗವೇ ಕಲಹದ ಮೂಲ ಕಾರಣ ಎನ್ನುತ್ತಾರೆ ಸ್ಥಳೀಯರು.

ಸೋಮವಾರ ಮತ್ತೆ ಇದೆ ವಿಚಾರ ವಿಕೋಪಕ್ಕೆ ಹೋಗಿ ವಾಗ್ವಾದ ನಡೆದು ಮಾರಣಾಂತಿಕವಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಪಾಲಿಕೆಯ ಮಾಜಿ ಸದಸ್ಯ ಬಸೀರ ಅಹ್ಮದ್ ಗುಡ್ಮಾಲ್ ಕುಟುಂಬ ಹಾಗೂ ಆಸೀಪ್ ದಡವಾಡ್ ಕುಟುಂಬದ ಮಧ್ಯೆ ಜಾಗೆಯ ಬಗ್ಗೆ ಇರುವ ಹಳೆ ವೈಷಮ್ಯ ಹೊಗೆಯಾಡುತ್ತಿದೆ. ಇಂದು ಇದೇ ವಿಚಾರ ವಿಕೋಪಕ್ಕೆ ತಿರುಗಿ ಎರಡು ಗುಂಪಿನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಸೀಪ್ ದಡವಾಡ್, ಇರ್ಫಾನ್, ಸಾಬೀರ್ ಹಾಗೂ ಅವರ ಸಹಚರರು, ರಿಯಾಜ್ ಆಹ್ಮದ್ ಗುಡ್ಮಾಲ್, ಶಬ್ಬೀರ್ ಅಹ್ಮದ್ ಗುಡ್ಮಾಲ್ ಎಂಬುವವರ ಮಧ್ಯೆಯೇ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿಯೇ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಸೀರ್ ಗುಡ್ಮಾಲ್ ಅವರು, ಸಮಾಜ ಸೇವೆಗೆ ಎಂದೇ ಬಳಕೆಯಾಗುತ್ತಿದ್ದ ಆಂಬುಲೇನ್ಸ್ ಸಮೇತ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಗುಡ್ಮಾಲ್ ಕುಟುಂಬದವರು ಅಂಬುಲೇನ್ಸ್ ನಲ್ಲಿ ಮಾರಕಾಸ್ತ್ರಗಳನ್ನು ತುಂಬಿಕೊಂಡು ಬಂದು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಡವಾಡ್ ಪರಿವಾರದವರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಸಬಾ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವೈದ್ಯರು ನಾಯಿ, ಬೆಕ್ಕಿ ಏನು ಹೆಸರಿಟ್ಟಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ಇಲ್ಲೊಬ್ಬ ವ್ಯಕ್ತಿ ವಿಚಿತ್ರವಾಗಿ ಹೆಸರಿಟ್ಟಿರುವ ಘಟನೆ ನಡೆದಿದೆ.

ಈ ವೈದ್ಯ ತಮ್ಮ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರನ್ನು ಇಟ್ಟಿದ್ದಾರೆ. ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿನ ಮರಿಗಳಿಗೆ ಕೊರೊನಾ ವ್ಯಾಕ್ಸಿನ್ ಹೆಸರು ಇಟ್ಟಿದ್ದಾರೆ. ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಬೆಕ್ಕಿಗೆ ಕೋವ್ಯಾಕ್ಸಿನ್ ಹೆಸರು ಇಟ್ಟಿದ್ದಾರೆ.

ಪ್ರೀತಿಯ ನಾಯಿ ಹಾಗೂ ಬೆಕ್ಕಿನ ಮರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂದು ಹೆಸರಿಟ್ಟಿದ್ದು, ಸದ್ಯ ಈ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಡಾಕ್ಟರ್ ಕಿರಣ್ ತೋಟಂಬೈಲ್ ಎಂಬುವವರೇ ತಮ್ಮ ನಾಯಿ ಮರಿ ಹೂಗ ಬೆಕ್ಕಿಗೆ ಈ ರೀತಿಯ ಹೆಸರು ಇಟ್ಟಿದ್ದಾರೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ತೋಟಂಬೈಲ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ.

ಇವರು ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿ.ತು ಯುವಕರ ಸಂಘ, ಒಲವೇ ಮಂದಾರ-2 ಸಿನಿಮಾಗೆ ಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಇವರು ಬಿಜಿಎಸ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ವೃತ್ತಿಯಲ್ಲಿ ನಿರತರಾಗಿದ್ದಾರೆ.

ಮಗನಿಗಾಗಿ 280 ಕಿ.ಮೀ ಸೈಕಲ್ ತುಳಿದ ತಂದೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಲಾಕ್ ಡೌನ್ ನಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ತಂದೆಯೊಬ್ಬರು ಮಗನಿಗಾಗಿ ಮಗನ ಔಷಧಿಗಾಗಿ ಬರೋಬ್ಬರಿ 280 ಕಿ.ಮೀಟರ್ ಸೈಕಲ್ ತುಳಿದು ಬಂದಿರುವ ಮನಕಲುಕುವ ಘಟನೆ ವರದಿಯಾಗಿದೆ.

ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗಾಣಿಗನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಮಹಾನ್ ತಂದೆ ಮಗನಿಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ. ಗಾರೆ ಕೆಲಸಗಾರ ಮಾಡುತ್ತಿದ್ದ ಆನಂದ್ ಎಂಬ ವ್ಯಕ್ತಿಯಿಂದಲೇ ಈ ಸಾಹಸ ನಡೆದಿದೆ.

ಇವರು ತಮ್ಮ ಮಗನಿಗಾಗಿ ನೂರಾರು ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ. ಇವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದ. ಹೀಗಾಗಿ ಈ ಮಗುವಿಗೆ 10 ವರ್ಷಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದ. ಅವರ ಮಗನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಒಮ್ಮೆ ಮಾತ್ರೆ ತಪ್ಪಿದರೆ ಮತ್ತೆ 18 ವರ್ಷಗಳ ಕಾಲ ನಿರಂತರ ಮಾತ್ರೆ ನೀಡಬೇಕು.

ಆದರೆ, ಆತನ ಔಷಧಿ ಮನೆಯಲ್ಲಿ ಖಾಲಿಯಾಗಿತ್ತು. ಆದರೆ, ಮಾತ್ರೆ ತರಬೇಕು ಎಂದರೆ ಲಾಕ್ ಡೌನ್ ಅಡ್ಡವಾಗಿದೆ. ಲಾಕ್ ಡೌನ್ ನಿಂದಾಗಿ ವಾಹನ ಸೌಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ಸೈಕಲ್ ಏರಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ ಮಾತ್ರೆ ಪಡೆದು ತಂದಿದ್ದಾರೆ. ಈ ತಂದೆ ಪ್ರತಿ ದಿನ 70 ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ.

ಈ ಔಷಧಿ ನಿಮ್ಹಾನ್ಸ್ ಹೊರತು ಪಡಿಸಿದರೆ, ಬೇರೆಲ್ಲೂ ಸಿಗುವುದಿಲ್ಲ. ನಿಮ್ಹಾನ್ ಗೆ ತೆರಳಲು ಸುತ್ತಮುತ್ತಲ ಜನರ ಬಳಿ ಇವರು ಬೈಕ್ ಕೇಳಿದ್ದಾರೆ. ಒಂದು ದಿನ ಮಾತ್ರ ತಪ್ಪಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಬೈಕ್ ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ, ಯಾರೂ ಮಾನವೀಯತೆ ಮೆರೆಯುವ ಪ್ರಯತ್ನ ಮಾಡಿಲ್ಲ. ಹೀಗಾಗಿಯೇ ಇವರೇ ಸೈಕಲ್ ಏರಿ ಮಗನಿಗೆ ಔಷಧಿ ತಂದಿದ್ದಾರೆ.

ತಂದೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಿಡಿ ಲೇಡಿ!

ವಿಜಯಸಾಕ್ಷಿ ಸುದ್ದಿ, ಧಾರವಾಡ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ತಂದೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗಳನ್ನು ಮಾತನಾಡುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಂತ್ರಸ್ಥ ಯುವತಿಯ ಅರ್ಜಿ ಪರಿಗಣಿಸಿದ ಹೈಕೋರ್ಟ್ ಪೀಠ, ಯುವತಿ ಇರುವ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತ್ತು. ಹೀಗಾಗಿ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮೀ ಅವರೊಂದಿಗೆ ಸಿಡಿ ಲೇಡಿ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಂದೆಯೊಂದಿಗೆ ಸಮಾಲೋಚಿಸಲು ಯುವತಿಗೆ ಅವಕಾಶ ನೀಡಲಾಯಿತು. ಆದರೆ, ಸಿಡಿ ಲೇಡಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಲ್ಲದೇ, ಈ ಸಂದರ್ಭದಲ್ಲಿ ಅಕ್ರಮ ಬಂಧನದ ಆರೋಪವನ್ನು ಕೂಡ ಯುವತಿ ನಿರಾಕರಿಸಿದ್ದಾರೆ.

ಪರಿಸ್ಥಿತಿ ಎಲ್ಲವೂ ಸರಿ ಹೋದ ನಂತರ ನಾನು ತಂದೆಯ ಜೊತೆ ಮಾತನಾಡುತ್ತೇನೆ. ಈಗ ಮಾತನಾಡುವುದಿಲ್ಲ ಎಂದು ಕೋರ್ಟ್ ಗೆ ಮನವರಿಕೆ ಮಾಡಿದರು. ಅಲ್ಲದೇ, ಅಕ್ರಮ ಬಂಧನದ ಆರೋಪ ನಿರಾಕರಿಸಿದ ಹಿನ್ನೆಲೆಯ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಪೀಠವು ಇತ್ಯರ್ಥಪಡಿಸಿತು.

ಸೋಮವಾರವೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ನಿನ್ನೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಂದು ನಾಲ್ವರು ಮೃತಪಟ್ಟಿದ್ದಾರೆ. ಇವತ್ತು 240 ಜನರಿಗೆ ಸೋಂಕು ತಗುಲಿದೆ.

ಇಂದಿನ 240 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23566 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -89, ಮುಂಡರಗಿ-21, ನರಗುಂದ-16, ರೋಣ-63, ಶಿರಹಟ್ಟಿ-49, ಹೊರಜಿಲ್ಲೆಯ-02 ಸೇರಿದಂತೆ 240 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 250 ಕ್ಕೇರಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಸೋಮನಕಟ್ಟಿ ನಿವಾಸಿ 68 ವರ್ಷದ ವ್ಯಕ್ತಿ ಮೇ-28 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 29 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ಹುಡ್ಕೋ ನಿವಾಸಿ 86 ವರ್ಷದ ವ್ಯಕ್ತಿ ಮೆ,26 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 27 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನರೇಗಲ್ ನಿವಾಸಿ 43 ವರ್ಷದ ವ್ಯಕ್ತಿ ಮೇ 27 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 28 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಮೇಗೂರು ನಿವಾಸಿ 70 ವರ್ಷದ ವ್ಯಕ್ತಿ ಮೇ 27 ರಂದು ನರಗುಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅಂದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 397 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 20786 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2530 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!