Home Blog Page 3032

ಮಾತನಾಡಿ ನನ್ನ ಇಸ್ಲಾಂ ಧರ್ಮದ ಗೆಳೆಯ ಗೆಳತಿಯರೇ………..

ವಿಜಯಸಾಕ್ಷಿ ವಿಶೇಷ

ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ…….

ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ,
ಸಮಾನತೆಯಿಂದ,
ಆಧುನಿಕತೆಯಿಂದ ತೆರೆದುಕೊಳ್ಳಿ……..

ನನ್ನ ದೇಶದ ಮುಸ್ಲಿಂ ಭಾಂಧವರೇ,
ಇದು ಭಾರತ, ನಿಮ್ಮದೇ ನೆಲ. ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಹಕ್ಕು. ಅದನ್ನು ಉಪಯೋಗಿಸಿಕೊಳ್ಳಿ…….

ವಿಶ್ವದ ಎಲ್ಲಾ ಚಟುವಟಿಕೆಗಳನ್ನು ನೀವು ಗಮನಿಸುತ್ತಿದ್ದೀರಿ, ಎಲ್ಲಾ ಮಾಹಿತಿಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ ……….

ಇದು ಗ್ರೀಕ್, ರೋಮನ್, ನೈಲ್, ಸಿಂಧೂ ನಾಗರಿಕತೆಯ ಕಾಲವಲ್ಲ,

ಇದು ವೇದಗಳ, ಬುದ್ದನ, ಪೈಗಂಬರನ, ಯೇಸುವಿನ ಕಾಲವಲ್ಲ……..

ಇದು ಜೋ ಬಿಡೆನ್, ನರೇಂದ್ರ ಮೋದಿ, ರೌಹಾನಿ, ಷೀ ಜಿನ್ ಪಿಂಗ್, ಪುಟಿನ್, ನೆತನ್ಯಾವು, ಇಮ್ರಾನ್ ಖಾನ್ ಗಳ ಕಾಲ…………

ಇದು ಕಲ್ಲು ಮಣ್ಣು ಕುದುರೆ ಒಂಟೆ ಕತ್ತೆಗಳ ಕಾಲವಲ್ಲ,

ಬಾಂಬು ಬಂದೂಕು ಮಿಸೈಲ್ ಸ್ಯಾಟಲೈಟ್ ಮಾನವ ಆತ್ಮಹತ್ಯೆ ಬಾಂಬುಗಳ ಕಾಲ……..

ನಿಮಗೆ ಅರ್ಥವಾಗಬೇಕು……

ವಿಶ್ವದ ಈ ಸಂದರ್ಭದಲ್ಲಿ ಯಾವ ದೇಶ ಮುಂದುವರಿದಿದೆ,ಯಾವ ದೇಶ ಹಿಂದುಳಿದಿದೆ, ಯಾವ ದೇಶ ಹಾಳಾಗಿದೆ,ಯಾವ ದೇಶ ಶಾಂತಿಯಿಂದಿದೆ, ಯಾವ ದೇಶ ರಕ್ತಪಾತದಲ್ಲಿ ಮುಳುಗಿದೆ, ಯಾವ ದೇಶ ಧರ್ಮಾಂಧವಾಗಿದೆ, ಯಾವ ದೇಶ ಜಾತ್ಯಾತೀತವಾಗಿದೆ, ಯಾವ ದೇಶದಲ್ಲಿ ನೇರ ಭಯೋತ್ಪಾದಕರಿದ್ದಾರೆ, ಯಾವ ದೇಶದಲ್ಲಿ ಪರೋಕ್ಷ ಭಯೋತ್ಪಾದಕರಿದ್ದಾರೆ, ಯಾವ ಧರ್ಮ ಶಾಂತಿಯನ್ನು ಬೋಧಿಸುತ್ತದೆ, ಯಾವ ಧರ್ಮ ಹಿಂಸೆಯನ್ನು ಪ್ರಚೋದಿಸುತ್ತದೆ ಎಲ್ಲವೂ ನಿಮಗೆ ತಿಳಿದಿದೆ.

ಈ ಹಬ್ಬದ ಸಮಯದಲ್ಲಿ ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮ ಶಕ್ತಿ ಸಾಮರ್ಥ್ಯ ಅರಿತುಕೊಳ್ಳಿ ಹಾಗೆಯೇ ನಿಮ್ಮ ಮೇಲಿನ ಆರೋಪ ಮತ್ತು ದೌರ್ಬಲ್ಯಗಳನ್ನು ಸಹ ಅವಲೋಕಿಸಿ. ವಿಶ್ವವನ್ನು ಭಾರತವನ್ನು ಶಾಂತಿಯ ಕಡೆಗೆ ಮುನ್ನಡೆಸುವ ನಾಯಕತ್ವ ವಹಿಸಿ. ಆರೋಪ ಪ್ರತ್ಯಾರೋಪಗಳಿಗಿಂತ ಸಕಾರಾತ್ಮಕ ಚಟುವಟಿಕೆಗಳಿಗೆ ಮಹತ್ವ ನೀಡಿ.

ವಿಶ್ವದ ಜನ ಆಶ್ಚರ್ಯ ಪಡುವಂತೆ ಆಧುನಿಕ ಮತ್ತು ವೈಚಾರಿಕ ಚಿಂತನೆಗಳಿಂದ, ಮೂಲ ಧರ್ಮದ ನಿಷ್ಠೆಗಿಂತ ಮಾನವ ಧರ್ಮದ ನಿಷ್ಠೆ ನಿಮ್ಮದಾಗಲಿ……

ನೀವು ಒಪ್ಪಿ – ಬಿಡಿ ಅಥವಾ ಇದು ಸುಳ್ಳೋ – ನಿಜವೋ ಒಟ್ಟಿನಲ್ಲಿ ಜಾಗತಿಕವಾಗಿ ಇಸ್ಲಾಂ ಮತ್ತು ಭಯೋತ್ಪಾದನೆ ಒಂದಕ್ಕೊಂದು ತಳುಕು ಹಾಕಿಕೊಂಡಿದೆ.

ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳು ಏನೇ ಇರಬಹುದು. ಎಲ್ಲಾ ಧರ್ಮಗಳಲ್ಲೂ ಭಯೋತ್ಪಾದನೆ ಇರಬಹುದು. ಆದರೆ ಭಯೋತ್ಪಾದನೆ ಇರಾಕ್, ಸಿರಿಯಾ, ಆಪ್ಘನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಅತಿಹೆಚ್ಚು ಇರುವುದರಿಂದ ಅದು ಇಸ್ಲಾಂ ಭಯೋತ್ಪಾದನೆಯಾಗಿ ಬಿಂಬಿತವಾಗಿದೆ.

ಉಗ್ರರ ಕ್ರೌರ್ಯ ಮತ್ತು ಮುಗ್ಧರ ಅಸಹಾಯಕ ಮಾರಣ ಹೋಮ ಮಾಧ್ಯಮಗಳಲ್ಲಿ ಪ್ರಸಾರವಾಗವುದನ್ನು ನೋಡಿದರೆ ಕೋಪ ಮತ್ತು ದುಃಖ ಒಟ್ಟಿಗೇ ಉಂಟಾಗುತ್ತದೆ. ಅದಕ್ಕೆ ಕಾರಣರಾದವರ ಬಗ್ಗೆ ಯಾರಿಗೇ ಆಗಲಿ ಆಕ್ರೋಶ ಉಕ್ಕುತ್ತದೆ.

ಇಂತಹ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ ಎಂದು ವಿಶ್ವಕ್ಕೇ ನಿರೂಪಿಸುವ ಬಹುದೊಡ್ಡ ಜವಾಬ್ದಾರಿ ಇರುವುದು ಮತ್ತು ಹೊರಬೇಕಾಗಿರುವುದು ಬಹುಶಃ ಜನಸಂಖ್ಯೆಯ ದೃಷ್ಟಿಯಿಂದ ಅತಿಹೆಚ್ಚು ಜನರನ್ನು ಒಟ್ಟಿಗೆ ಹೊಂದಿರುವ ಭಾರತೀಯ ಮುಸ್ಲಿಮರದು.ಅದಕ್ಕೆ ಕಾರಣವೂ ಇದೆ.

ಭಾರತೀಯ ನೆಲದ , ಜಾತ್ಯಾತೀತ ಸಂವಿಧಾನದ , ಸರ್ವ ಧರ್ಮಗಳ ಸಮನ್ವಯದ, ಶಾಂತಿಯ ನಾಡಾದ ಇಲ್ಲಿನ ಗುಣಗಳನ್ನು ತಮ್ಮ ರಕ್ತದಲ್ಲಿಯೇ ಹೊಂದಿದ್ದಾರೆ ಬಹಳಷ್ಟು ಮುಸ್ಲಿಂಮರು . ತಮ್ಮ ಎಲ್ಲಾ ತೃಪ್ತಿ ಅತೃಪ್ತಿಗಳ ನಡುವೆಯೂ ಅನೇಕ ಶತಮಾನಗಳಿಂದ ವಿಭಿನ್ನ ಆಚರಣೆಗಳ ಹಿಂದೂಗಳ ಜೊತೆ ಸೌಹಾರ್ದತೆ ಮತ್ತು ಸಮನ್ವಯತೆಯಿಂದ ಜೀವಿಸುತ್ತಿರುವ ಅನುಭವ ಮತ್ತು ಇತಿಹಾಸ ಅವರಿಗಿದೆ.

ಬುದ್ಧ ಮಹಾವೀರ ಗುರುನಾನಕ್ ರಂತ ಶಾಂತಿ ಸಹಿಷ್ಣುಗಳ ನಾಡಿನಲ್ಲಿ,‌ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ರವರ ಸಾಮಾಜಿಕ ಸಮಾನತೆ ಮತ್ತು ಮಾನವೀಯ ಚಳವಳಿಯ ಈ ಮಣ್ಣಿನಲ್ಲೇ ಹುಟ್ಟಿದ ಮುಸ್ಲೀಮರು ಅವುಗಳ ಪ್ರಭಾವದಿಂದ ಪ್ರೇರಿತರಾಗಿ ತಮ್ಮ ನಡವಳಿಕೆಗಳಲ್ಲಿ ಅವರ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.

ಭಾರತೀಯರ ಜೀವನ ಶೈಲಿ, ಸರ್ವ ಧರ್ಮ‌ಸಹಿಷ್ಣತೆ, ಶಾಂತಿ ಸಹಬಾಳ್ವೆ ಅವರಿಗೆ ಮನವರಿಕೆಯಾಗಿದೆ. ಹಾಗೆಯೇ ಇಲ್ಲಿನ ಮೌಡ್ಯ ಅಜ್ಞಾನ ರಾಜಕೀಯದಲ್ಲೂ ಕೂಡ ಅವರ ಪಾಲಿದೆ.

ಪರ್ಷಿಯನ್ ಮತ್ತು ಅರಬ್ ದೇಶಗಳಷ್ಟು ಗಾಢ ಧಾರ್ಮಿಕ ಮೂಲಭೂತವಾದಿತನವನ್ನು ಹೊಂದದೆ, ಹಿಂಸೆ ಮತ್ತು ಅಮಾಯಕರ ಮಾರಣಹೋಮ ಖುರಾನ್ ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ನಂಬಿ ಆಚರಿಸುವ ಮನೋಭಾವ ಅನೇಕ ಭಾರತೀಯ ಮುಸ್ಲೀಮರಲ್ಲಿ ಅಡಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹಿಂದೂ ಪ್ರಗತಿಪರರ ನಿಲುವುಗಳನ್ನು ಬಹುತೇಕ ಬೆಂಬಲಿಸುವ ಇವರು ಇನ್ನೂ ಹೆಚ್ಚು ಹೆಚ್ಚು ಧಾರ್ಮಿಕ ಅಂಧಶ್ರಧ್ಧೆಯನ್ನು ಕಡಿಮೆಗೊಳಿಸಿಕೊಳ್ಳುವ ಮೂಲಕ ಮತ್ತು ಭಯೋತ್ಪಾದಕ ಹಿಂಸೆಯನ್ನು ಖಂಡಿಸುವ ಮತ್ತು ತಡೆಯುವ ಮುಖಾಂತರ ಆಧುನಿಕತೆಗೆ ಮತ್ತು ವೈಚಾರಿಕತೆಗೆ ತಮ್ಮನ್ನು ಮುಕ್ತಗೊಳಿಸಿಕೊಂಡು ಇಡೀ ವಿಶ್ವಕ್ಕೇ ಶಾಂತಿ ಧೂತರಾಗುವ ಬಹುದೊಡ್ಡ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ರಂಜಾನ್ ನ ಈ ಶುಭ ಸಂದರ್ಭದಲ್ಲಿ ಆಶಿಸುತ್ತಾ…..

ಏಕೆಂದರೆ ವಿಶ್ವದಲ್ಲಿ ಅನೇಕ ಧರ್ಮಗಳ ಹುಟ್ಟಿನ ಮತ್ತು ಸಮನ್ವಯದ ಹಾಗೂ ಭಿನ್ನತೆಯಲ್ಲೂ ಐಕ್ಯತೆಯನ್ನು ಹೊಂದಿದ ಏಕೈಕ ರಾಷ್ಟ್ರ ನಮ್ಮ ತಾಯ್ನಾಡು ಭಾರತ.

ನೀವೂ ಭಾರತದ ಪ್ರಜೆಗಳು. ನಿಮ್ಮಲ್ಲಿಯೂ ನಮ್ಮಂತೆ ಮೌಡ್ಯವಿದೆ, ಹಿಂಸೆಯಿದೆ, ಅತಿರೇಕವಿದೆ, ಧಾರ್ಮಿಕ ಅಂಧಶ್ರದ್ದೆ ಇದೆ. ಬಹಳಷ್ಟು ಮೂಲಭೂತವಾದಿಗಳು ಧರ್ಮ ಮತ್ತು ದೇಶದ ಆಯ್ಕೆಯಲ್ಲಿ ಧರ್ಮವನ್ನು ಒಪ್ಪಿಕೊಳ್ಳುವ ಮೂರ್ಖತನವಿದೆ. ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಸುಲಭವಾಗಿ ಬಲಿಯಾಗುವ ಹುಂಬುತನವಿದೆ.

ಅದಕ್ಕಾಗಿಯೇ ಈ ನೆಲದ ನಮ್ಮದೇ ಸಂಸ್ಕೃತಿಯ ಕೇವಲ ಕೆಲವು ಭಿನ್ನ ಆಚರಣೆಗಳ ನಮ್ಮದೇ ಜನರ ಆತ್ಮಾವಲೋಕನಕ್ಕಾಗಿ ಈ ಮನವಿ.
ಈ ದೇಶ, ನಮ್ಮದು ಮತ್ತು ನಿಮ್ಮದು.
ಯಾವುದೇ ಅಭದ್ರತೆ ಬೇಡ. ಎರಡು ಧರ್ಮಗಳು ವಿರುದ್ಧವಾಗುವ ಕ್ರಿಯೆಗಿಂತ ಅವುಗಳ ಐಕ್ಯವಾಗುವ, ಸಮನ್ವಯವಾಗುವ ದಿನಗಳು ಮುಂದೆ ಬರಲಿ ಎಂಬ ಆಶಯದೊಂದಿಗೆ……

ಬನ್ನಿ ನನ್ನ ಸಹಧರ್ಮೀಯ ಭಾಂಧವರೆ,
ಒಗ್ಗಟ್ಟಾಗೋಣ ನಾವು ನೀವು,

ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ,
ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ,

ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ,
ಕಟ್ಟೋಣ ಬಲಿಷ್ಠ ಭಾರತವನ್ನು,

ನೀವೂ ನಮ್ಮಂತೆ, ನಾವೂ ನಿಮ್ಮಂತೆ,
ಅದೇ ರಕ್ತ ಮೂಳೆ ಮಾಂಸ ಚರ್ಮಗಳ ಹೊದಿಕೆ,

ಅದೇ ಭಯ ಭಕ್ತಿ,ನೋವು ನಲಿವು,
ಸುಖ ದು:ಖ,ಪ್ರೀತಿ ದ್ವೇಷ,
ಅದೇ ಗಾಳಿ ಬೆಳಕು, ಅನ್ನ ನೀರು, ನೆಲ,

ನಿಮ್ಮಲ್ಲೂ ನಮ್ಮಂತೆ ಮೌಡ್ಯವಿದೆ, ಅಂಧ ಭಕ್ತಿಯಿದೆ,
ನಿಮ್ಮಲ್ಲೂ ದಡ್ಡತನ, ಬಡತನ, ಅಸಮಾನತೆಯಿದೆ,

ಬದಲಾಗಬೇಕಿದೆ ನಾವು ನೀವು ಆಧುನಿಕತೆಯ ಹೊಸ ಮನ್ವಂತರಕೆ,

ಸ್ತ್ರೀ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಬೇಕಿದೆ,

ನಿಮ್ಮದೇ ಅನುಭವದ ಬೆಳಕಿನಲ್ಲಿ ಕತ್ತಲೆಯನ್ನು ಒದ್ದೋಡಿಸಿ,

ಭಕ್ತಿಯಿದ್ದರೆ ಇರಲಿ, ನಂಬಿಕೆಯಿದ್ದರೆ ಇರಲಿ,
ನಿಮ್ಮ ಆಚಾರ ವಿಚಾರ ಸಂಪ್ರದಾಯ ಗಳಲ್ಲಿ,
ಆದರೆ ಅದನ್ನು ಮೀರಿದ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ,

ಯೋಚಿಸುವ, ಪ್ರಶ್ನಿಸುವ ಚರ್ಚಿಸುವ ವಿಶಾಲ ಮನೋಭಾವ ನಿಮ್ಮದಾಗಲಿ,

ಭಕ್ತಿಯಿಂದ ಪೂಜಿಸುವುದಕ್ಕಿಂತ ಅದೇ ಅಂಶಗಳನ್ನು,
ಜೀವನದಲ್ಲಿ ಅಳವಡಿಸಿಕೊಳ್ಳುವುದು ಅದಕ್ಕೆ ನೀವು ಸಲ್ಲಿಸುವ ಗೌರವ,

ಹರಿದು ಬರಲು ಬಿಡಿ ಒಳ್ಳೆಯ ವಿಷಯಗಳನ್ನು ಎಲ್ಲಾ ಕಡೆಯಿಂದಲೂ,

ತಿರಸ್ಕರಿಸಿ ಕೆಟ್ಟ ಅಂಶಗಳನ್ನು ಅದು ಎಷ್ಟೇ ಪವಿತ್ರವಾಗಿದ್ದರೂ ,

ಸಮಾನತೆ, ಸ್ವಾತಂತ್ರ್ಯ, ಮಾನವೀಯತೆಗೆ ನಾವಿದ್ದೇವೆ ನಿಮ್ಮೊಂದಿಗೆ ಎಂದೆಂದಿಗೂ,

ಈ ನೆಲ ನಮ್ಮೆಲ್ಲರದು,

ನಿಮ್ಮಲ್ಲೂ, ನಮ್ಮಲ್ಲೂ ಹಿಂಸೆ ದ್ವೇಷಗಳು ಮರೆಯಾಗಲಿ,
ಪ್ರೀತಿ ಸ್ನೇಹ ವಿಶ್ವಾಸ ಭ್ರಾತೃತ್ವಗಳು ಬೆಸೆಯಲಿ,

ನಿಮ್ಮನ್ನು ಅನುಮಾನಿಸುವವರಿಗೆ ನಾವು ಉತ್ತರಿಸುತ್ತೇವೆ,
ಇರಲಿ ನಿಮ್ಮ ನಂಬಿಕೆ ನಿಯತ್ತು ಭಾರತೀಯತೆಯೆಡೆಗೆ,

ಹಿಂದಿನಂತೆ, ಇಂದಿನಂತೆ ಮುಂದೆಯೂ,,

ಮುಂದೊಂದು ದಿನ ನಮ್ಮ ನಡುವಿನ ಭಿನ್ನತೆಯ ಗುರುತು ಸಿಗದಿರಲಿ,

ನಮ್ಮ ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳ ಕಾಲಕ್ಕೆ, ಶಾಸ್ತ್ರಿ, ಮಹಮದ್, ಗೌಡ,ಇಕ್ಬಾಲ್, ಶರ್ಮ, ಗೌಸ್, ಡೇವಿಡ್, ಆಚಾರ್ಯ, ಭಾಷಾ,
ಈ ಹೆಸರುಗಳೇ ಮರೆಯಾಗಲಿ,

ಮಾನವತೆಯ ಜೀವ ಸಂಕುಲ ನೆನಪಿಸುವ ಹೆಸರುಗಳು ಸೃಷ್ಟಿಯಾಗಲಿ.

ಆಗ ಸಮಾನತೆಯ ಹೊಸ ಬೆಸುಗೆ ಮಾನವ ಧರ್ಮವಾಗುತ್ತದೆ,

ಆ ದಿನಗಳ ನಿರೀಕ್ಷೆಯಲ್ಲಿ ………

ಪ್ರೀತಿಯಿಂದ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು…..

ವಿವೇಕಾನಂದ ಹೆಚ್ ಕೆ

ಕಾರ್ಮಿಕನ ಹಸಿವು ನೀಗಿಸಿ, ಮಾನವೀಯತೆ ಮೆರೆದ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ರಾಜ್ಯದ ಎಲ್ಲೆಡೆ ವಾಹನ ಸಂಚಾರ ಬಂದ್ ಆಗಿದೆ. ಆದರೆ, ಸಂಬಂಧಿಕರ ಮದುವೆ ಇದ್ದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕನೊಬ್ಬ ನೂರಾರು ಕಿ.ಮೀ ನಡೆದುಕೊಂಡೇ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ಈ ವ್ಯಕ್ತಿ ಕಂಡ ಪೊಲೀಸರು, ಅನ್ನ, ನೀರು ನೀಡಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ನಿವಾಸಿಯಾಗಿದ್ದ ಮರಿಯಪ್ಪ ಎಂಬ ವ್ಯಕ್ತಿ, ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಘೋಷಣೆಯಾಯಿತು. ಹೀಗಾಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಯಿತು. ಆದರೆ, ಲಾಕ್ ಡೌನ್ ಸಮಯದಲ್ಲಿಯೇ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಸಂಬಂಧಿಕರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮದುವೆಗೆ ಹೋಗಲೇಬೇಕು ಎಂದು ಮಂಗಳೂರಿನಿಂದ ಬಾಗಲಕೋಟೆ ಜಿಲ್ಲೆಯವರಿಗೆ ನಡೆದುಕೊಂಡೇ ಮರಿಯಪ್ಪ ತೆರಳುತ್ತಿದ್ದಾನೆ.

ಮಾರ್ಗ ಮಧ್ಯೆ ಈ ವ್ಯಕ್ತಿಯನ್ನು ಕಂಡ ಜಿಲ್ಲೆಯ ರೋಣ ಪೊಲೀಸರು, ವಿಚಾರಣೆ ಮಾಡಿದಾಗ ಮರಿಯಪ್ಪ ಹಸಿವಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಹೀಗಾಗಿ ಕೂಡಲೇ ಆತನಿಗೆ ಅನ್ನ, ನೀರು ನೀಡಿ ಕಳುಹಿಸಿ ಕೊಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಮರಿಯಪ್ಪ ಕೃತಜ್ಞತೆ ಸಲ್ಲಿಸಿ ನಡೆದುಕೊಂಡೆ ಇಲಕಲ್ ಕಡೆಗೆ ಪ್ರಯಾಣ ಮುಂದುವರೆಸಿದ್ದಾನೆ.

15 ದಿನಗಳ ಹಿಂದೆಯಷ್ಟೇ ರೋಣ ಪೊಲೀಸ್ ಠಾಣೆಯ ಪಿಎಸ್ ಐ ವಿನೋದ್ ಪೂಜಾರಿ ಹಾಗೂ ಅವರ ಜೀಪ್ ಚಾಲಕ ಸೇರಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಥಳಿಸಿರುವ ಸುದ್ದಿ ವೈರಲ್ ಆಗಿತ್ತು. ಈ ಕುರಿತು ರಾಜ್ಯದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಡ ಕೂಡ ಕೇಳಿ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲಾ ವರಿಷ್ಠಾಧಿಕಾರಿ ಅವರು ಪಿಎಸ್ ಐಗೆ ಮೆಮೋ ನೀಡಿದ್ದರು. ಇದರ ಮದ್ಯೆ ಸದ್ಯ ಇದೇ ಪಿಎಸ್ ಐ ಮಾನವೀಯತೆ ಮೆರೆದಿದ್ದಾರೆ.

ಕೊಪ್ಪದಲ್ಲಿ ಕೊರೊನಾ ಮರೆತೆ ಜನ, ಮತ್ತೆ ಹರಡುವ ಆತಂಕ

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಇತ್ತೀಚೆಗಷ್ಟೇ ಕೊರೊನಾ ಸೋಂಕು ಹೆಚ್ಚಾಗಿದ್ದ ಕಾರಣ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಇಂದು ಸೀಲ್ ಡೌನ್ ತೆರವುಗೊಳಿಸಲಾಗಿದೆ. ಇದನ್ನು ತೆರುವುಗೊಳಿಸುತ್ತಿದ್ದಂತೆ, ಇಲ್ಲಿಯ ಜನ ಕೊರೊನಾವನ್ನೇ ಮರೆತಂತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅಲ್ಲದೇ, ಅಂಗಡಿ- ಮುಂಗಟ್ಟು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

ಇದರಿಂದಾಗಿ ಮತ್ತೆ ಕೊಪ್ಪದಲ್ಲಿ ಕೊರೊನಾ ಸೋಂಕು ಹರಡುವ ಆತಂಕ ಮನೆ ಮಾಡಿದೆ. ಕೊಪ್ಪದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಎದುರಿಸಿದರೂ ಜನ ಮಾತ್ರ ಕೊರೊನಾ ಮರೆತು ಮೈಮರೆತು ಓಡಾಡುತ್ತಿರುವುದು ಹಲವು ಆತಂಕಕ್ಕೆ ಕಾರಣವಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ಕೋವಿಡ್ ಸೋಂಕಿತ!

ವಿಜಯಸಾಕ್ಷಿ ಸುದ್ದಿ, ಹಾವೇರಿ

ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯಲ್ಲಪ್ಪ ಲಮಾಣಿ(70) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಗಂಗಾಜಲ ತಾಂಡದ ನಿವಾಸಿ. ಕೊರೊನಾ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಮೇ. 3ರಂದು ರಾಣೆಬೆನ್ನೂರಿನ ಅಮೃತಂ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಪ್ಪ ಲಮಾಣಿ ಇಂದು ಬೆಳಗಿನ ಜಾವ ಕೊಠಡಿಯ ಬಾಗಿಲ ಬಳಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಶಹರ ಸಿಪಿಐ ಪ್ರಹ್ಲಾದ್ ಚನ್ನಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರಲ್ಲಿ ಬಶೀರ್ ಅಹಮ್ಮದ್ ಅವರಿಂದ ರಂಜಾನ್‌ ಕಿಟ್‌ ವಿತರಣೆ

ವಿಜಯಸಾಕ್ಷಿ ಸುದ್ದಿ, ತುಮಕೂರು

ನಗರದಲ್ಲಿ ಗುರುವಾರ ಸಂಜೆ ಪಿಂಜಾರ್ ಸಮಾಜದ ಅಧ್ಯಕ್ಷ ಬಶೀರ್ ಅಹಮ್ಮದ್ ರಂಜಾನ್‌ ಕಿಟ್‌ ವಿತರಣೆ ಮಾಡಿದರು.

ಉಮರ್ ಫಾರೂಕ್ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ್ ಇವರು ಕೊಡಮಾಡಿದ ಕಿಟ್‌ನ್ನು ಆರ್ಥಿಕವಾಗಿ ಹಿಂದುಳಿದ ಪಿಂಜಾರ್ ಸಮುದಾಯದ ಕುಟುಂಬಕ್ಕೆ ವಿತರಿಸಿದರು.

ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಮಾತನಾಡಿ, ಪವಿತ್ರ ರಂಜಾನ್‌ ಹಬ್ಬವನ್ನು ಕೊರೋನಾ ಸಮಯದಲ್ಲಿಯೂ ಎಲ್ಲರು ಸಮಾನ ಭಾವದಿಂದ ಆಚರಿಸಬೇಕೆಂಬ ಉದ್ದೇಶದಿಂದ ಕಿಟ್‌ ವಿತರಿಸಲಾಯಿತು ಎಂದರು.

ಕಿಟ್‌ನಲ್ಲಿ ಅಕ್ಕಿ, ಎಣ್ಣೆ ಮತ್ತಿತರ ದಿನನಿತ್ಯ ಉಪಯೋಗಿಸಬಹುದಾದ ವಸ್ತುವಿದೆ. ಇದನ್ನು ದಾನವಾಗಿ ನೀಡುವ ಮೂಲಕ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ ಇವರು ಮಾನವೀಯತೆ ಮೆರೆದಿದ್ದಾರೆ ಎಂದು ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಹೇಳಿದರು.

ಈ ಸಮಯದಲ್ಲಿ ಅಹಮ್ಮದ್ ಭಾಷ್, ಮಲ್ಲಿಕ್ ಸಾಬ್, ಶಬ್ಬೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

ಕೊರೋನಾ ; ಜಿಲ್ಲೆಯಲ್ಲಿ ನಿಲ್ಲದ ಸೋಂಕಿನ ಸ್ಫೋಟ; 467 ಜನರಿಗೆ ಸೋಂಕು; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಸೋಂಕಿನ ರುದ್ರನರ್ತನ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ನಾಲ್ಕು ನೂರರ ಗಡಿ ದಾಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಮೇ 13 ಗುರುವಾರ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 467 ಜನರಿಗೆ ಸೋಂಕು ತಗುಲಿದೆ. ನಾಲ್ವರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಇಂದು 467 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 16453 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -208, ಮುಂಡರಗಿ-53, ನರಗುಂದ-60, ರೋಣ-71, ಶಿರಹಟ್ಟಿ-67, ಹೊರಜಿಲ್ಲೆಯ-08 ಸೇರಿದಂತೆ 467 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಕೊಟ್ಟಿರುವ ಪ್ರಕಾರ ಜಿಲ್ಲೆಯಲ್ಲಿ ಇಂದು ನಾಲ್ಕು ಜನ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ 62 ವರ್ಷದ ವ್ಯಕ್ತಿ ಮೇ 11ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನಿವಾಸಿ 40 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕದಡಿ ಗ್ರಾಮದ 77 ವರ್ಷದ ವೃದ್ಧೆ ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಗದಗನ ಹುಡ್ಕೋ ಕಾಲೋನಿಯ ನಿವಾಸಿ 73 ವರ್ಷದ ಮೇ 12 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
171 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 296 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14205 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2077 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 168 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿ ಬಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬನ ಅಸಲಿ ಕಥೆಯಿದು. ಆತ‌ ಗದಗನ ಠಾಣೆಯೊಂದರಲ್ಲಿ ಎಎಸ್ ಐ. ವಯಸ್ಸು 50 ಕ್ಕೂ ಹೆಚ್ಚು ಇರಬಹುದು. ಅಮಾಯಕರಿಗೆ, ಅಭಲೆಯರಿಗೆ,‌ನ್ಯಾಯ ಕೇಳಿ ಬಂದವರಿಗೆ ನ್ಯಾಯ ಕೊಡಿಸುವ ‌ಮಹತ್ವದ ಜವಬ್ದಾರಿ ಹೊತ್ತ ಪೊಲೀಸ್ ಅಧಿಕಾರಿ.

ಈ ಪೊಲೀಸ್ ಅಧಿಕಾರಿ ಮಾತ್ರ ಇದನ್ನೆಲ್ಲ ಮರೆತು ಏನೂ ಅರಿಯದ, ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದು ಬಾಲಕಿಯ ಪೋಷಕರೊಂದಿಗೆ ಮಂಗಳಾರತಿ ಮಾಡಿಸಿಕೊಂಡಿದ್ದಾನೆ.

ಗದಗನ ಸಮೀಪ ಇರುವ ತಾಂಡಾವೊಂದರಲ್ಲಿ ಈ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಅಂದು ಸಾಹೇಬರು‌ ತಾಂಡಾದ ಹೊರವಲಯದಲ್ಲಿ ಇತ್ತೀಚೆಗೆ ಕಟ್ಟಿಸಿರುವ ಹೊಸ ಮನೆಯಲ್ಲಿ ಒಬ್ಬರೇ ಇದ್ದಾರೆ. ಮಟ ಮಟ‌ ಮಧ್ಯಾಹ್ನ ಅಪ್ರಾಪ್ತ ಬಾಲಕಿ ಸಮೇತ ಮೂವರು ಬಹಿರ್ದೆಸೆಗೆ ಬಂದಿದ್ದಾರೆ. ಅದೂ ಈ‌ ಪೊಲೀಸ್ ಪ್ಪನ ಮನೆಯ ಕೂಗಳತೆಯಲ್ಲಿ.

ಸಾಹೇಬರು‌ ಮೂವರನ್ನು ಕರೆದು ಚಾಕಲೇಟ್, ಚಿಪ್ಸ್ ಆಶೆ ತೋರಿಸಿ ಒಳಗೆ ಕರೆದಿದ್ದಾರೆ ಅಂತೆ. ಅದರಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ನೀವು ಮನೆಗೆ ಹೋಗಿ ಅಂದಿದ್ದಾನೆ.

ಇಬ್ಬರೇ ಮನೆಗೆ ಬಂದ ಮಕ್ಕಳನ್ನು ಪೋಷಕರು ಇನ್ನೊಬಳು ಎಲ್ಲಿ ಎಂದಾಗ, ಆ ಮಕ್ಕಳು ಪೊಲೀಸಪ್ಪನ ವೃತ್ತಾಂತ ಹೇಳಿದ್ದಾರೆ. ಆಗ ಪೋಷಕರು ಎದ್ನೋ….ಬಿದ್ನೋ ಅಂತ ಎಎಸ್ ಐ ಸಾಹೇಬರ ಮನೆಗೆ ಬಂದಾಗ ಸಾಹೇಬರು ತುಂಡುಡಗೆಯಲ್ಲಿ‌ ಇದ್ದರು. ಗಾಬರಿ ಬಿದ್ದ ಬಾಲಕಿಯ ಪೋಷಕರು ಪೊಲೀಸಪ್ಪನ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಸಾಹೇಬರ ಚಪಲ ಸ್ವಲ್ಪವೇ ತೀರಿದೆ. ಆದರೆ ಅಂತಹ‌ ಅನಾಹುತ ಆಗಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಪೋಷಕರು ಸಾಹೇಬರಿಗೆ ಮಂಗಳಾರತಿ ಮಾಡಿ ಮನೆ ಕಡೆ ಹೋಗಿದ್ದಾರೆ.

ಈ ಘಟನೆ ಆದ ನಂತರ ಸಾಹೇಬರ ವರಸೆಯೇ‌ ಬದಲಾಗಿದೆ. ಖಾಕಿ ಡ್ರೆಸ್ ಮೈ‌ಮೇಲೆ ಹಾಕಿಕೊಂಡು ಆ ಬಾಲಕಿ ಮನೆಗೆ ಹೋಗಿ ದೊಡ್ಡ ರಾದ್ದಾಂತ ಮಾಡಿದ್ದಾನೆ. ಅವರಿಗೆ ಹೆದರಿಸಿದ್ದಾನೆ.‌ಅದರೆ ಆ ಪೋಷಕರು ಪೊಲೀಸಪ್ಪನ ಯಾವುದೇ ಬೆದರಿಕೆಗೆ ಬಗ್ಗದೇ ಸೀದಾ ತಾಂಡಾದ ಹಿರಿಯರ ಹತ್ರ ಹೋಗಿ ನ್ಯಾಯ ಕೇಳಿದ್ದಾರೆ.

ತಾಂಡಾದ ಪ್ರಮುಖರು ಸೋಮವಾರ ಮಧ್ಯಾಹ್ನ ಸಭೆ ಸೇರಿ ಎಎಸ್ ಐ ಸಾಹೇಬರನ ಕರೆಸಿ ನೀವು ಮಾಡಿದ್ದು ಖರೇನಾ ಅಂತ ಕೇಳಿದ್ದಾರೆ. ಸಾಹೇಬರು ತಲೆ ತಗ್ಗಿಸಿದ್ದಾರೆ. ಇದರಿಂದ ತಾಂಡಾದ ಹಿರಿಯರಿಗೂ ಖಾತ್ರಿಯಾಗಿದೆ ಪೊಲೀಸಪ್ಪನ ಲೈಂಗಿಕ ಕಿರುಕುಳ. ಆಗ ನಾಲ್ಕು ಲಕ್ಷ ರೂ, ದಂಡ ಕೊಡಬೇಕು ಅಂದವರೇ. ಇಲ್ಲ ಅಷ್ಟು ಆಗಲ್ಲ…ಇಷ್ಟು ಆಗಲ್ಲ ಅಂದವನೇ ಎರಡು ಲಕ್ಷ ರೂಪಾಯಿ ಕೊಡ್ತೀನಿ ಅಂತ ಒಪ್ಪಕೊಂಡು‌ ಶುಕ್ರವಾರ ಯಾವುದೇ ಕಾರಣಕ್ಕೂ ಮಿಸ್ ಮಾಡಂಗಿಲ್ಲ ಅಂತ ಮಾತು ಕೊಟ್ಟು ಆ‌ ಸಭೆಯಿಂದ ಎದ್ದು ಬಂದು ಡ್ಯೂಟಿ ಮಾಡ್ತಾ ಇದ್ದಾರೆ. ಇದೀಗ ಈ ಸುದ್ದಿ ಇಡೀ ತಾಂಡಾದಲ್ಲಿ….ಶಹರ ಠಾಣೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಆದರೆ ಸಾಹೇಬರು ಮಾತ್ರ ತಮ್ಮ ಪಟಾಲಂ ಬಳಿ ಅಂತಹ ಯಾವುದೇ ಕೆಲಸ ಮಾಡಿಲ್ಲ, ನಾ ಯಾಕೆ ದುಡ್ಡು ಕೊಡಲಿ ಅಂತ ಮೀಸೆ ಮೇಲೆ ಕೈ ಹಾಕ್ತಾ ಇದ್ದಾರೆ.

ಅಂದಹಾಗೆ ಎಎಸ್ಐ ಸಾಹೇಬರು ಆ ತಾಂಡಾಕ್ಕೆ ಅಳಿಯದೇವರು. ಪತ್ನಿಯ ತವರುಮನೆ ಅಂತೆ. ಆತನದು ಸೊರಟೂರು ಬಳಿ ಇರುವ ತಾಂಡಾ ಅಂತೆ.

ಆತಂಕ ಮೂಡಿಸುತ್ತಿದೆ ಇಸ್ರೇಲ್, ಪ್ಯಾಲಿಸ್ತೈನ್ ಸಂಘರ್ಷ

ವಿಜಯಸಾಕ್ಷಿ ಸುದ್ದಿ, ಇಸ್ರೇಲ್

ಇಸ್ರೇಲ್ ಹಾಗೂ ಪ್ಯಾಲಿಸ್ತೈನ್ ನಡುವಿನ ಭಿನ್ನಾಭಿಪ್ರಾಯ ಭೀಕರ ಸ್ವರೂಪ ಪಡೆದಿದೆ.
ಎರಡೂ ರಾಷ್ಟ್ರಗಳು ಸದ್ಯ ಪರಸ್ಪರರ ಮೇಲೆ ರಾಕೆಟ್ ದಾಳಿ ನಡೆಸುತ್ತಿವೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 32 ಜನ ಪ್ಯಾಲಿಸ್ತೈನ್ ನಾಗರಿಕರು ಸಾವನ್ನಪ್ಪಿದ್ದಾರೆ.

ಅಲ್ಲದೇ, ಈ ಘಟನೆಯಲ್ಲಿ 220 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದೆ. ಗಾಜಾ ಬಳಿಯ ಬೀರ್‌ ಶೆಬಾದ ಬಳಿ ಭಾರೀ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಅಶ್ಕೆಲಾನ್, ಮೋದಿನ್ ಮತ್ತು ಟೆಲ್ ಅವೀವ್‌ ನಲ್ಲಿಯೂ ರಾಕೆಟ್ ದಾಳಿ ನಡೆದಿದೆ.

ಕೇಂದ್ರದ ತಾರತಮ್ಯ; ಮಾಜಿ ಸಿ ಎಮ್ ಎಚ್ಡಿಕೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡಿಗರೇನು ತಬ್ಬಲಿಗಳಾ? ಕನ್ನಡಿಗರು ಏನು ಅನ್ಯಾಯ ಮಾಡಿದ್ದಾರೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 120 ಮೆಟ್ರಿಕ್ ಟನ್ ನಷ್ಟು ಕಳಹಿಸುತ್ತಿದೆ. ಆದರೆ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅಥವಾ ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಎಂದು ಗುಡುಗಿದ್ದಾರೆ.

ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆ ಹೊರುವರೇ? ಎಂದು ಪ್ರಶ್ನಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪ; ತಂದೆಯ ಸಾವಿಗೆ ಪ್ರತೀಕಾರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಲ್ಲಿಯ ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮಕ್ಕಳು ಐಸಿಯು ವಾರ್ಡ್‌ ನಲ್ಲಿದ್ದ ಸುಮಾರು ರೂ. 4 ಲಕ್ಷ ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಿವೃತ್ತರಾಗಿದ್ದ 61 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳವಾರ ರೈಲ್ವೆ ಆಸ್ಪತ್ರೆಯ ಐಸಿಯು ವಾರ್ಡ್‌ ಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಂದೆಯ ಸಾವಿನ ನೋವು ಜೀರ್ಣಿಸಿಕೊಳ್ಳಲಾಗದ ಅವರ ಪುತ್ರಿಯರು ಮತ್ತು ಕುಟುಂಬಸ್ಥರು ಐಸಿಯು ವಾರ್ಡ್ ಗೆ ನುಗ್ಗಿ ಆಕ್ಸಿಜನ್ ಯಂತ್ರ ಧ್ವಂಸ ಮಾಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ದು, ತಂದೆ ಸಾವಿನ ವಿಚಾರವಾಗಿ ಹೆಣ್ಣು ಮಕ್ಕಳಿಬ್ಬರೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಜಗಳ ಮಾಡಿದ್ದರು ಎಂದು ತಿಳಿದು ಬಂದಿದೆ.

ಮೂಗಿನ ಮೂಲಕ ಆಮ್ಲಜನಕ ಸರಬರಾಜು ಮಾಡುವ ಹೈ ಫ್ಲೋ ಆಕ್ಸಿಜನ್ ಉಪಕರಣವನ್ನು ಧ್ವಂಸ ಮಾಡಿದ್ದಾರೆ. ಇದರ ಬೆಲೆ ಸುಮಾರು ರೂ. 4 ಲಕ್ಷ ಎಂದು ಹೇಳಲಾಗಿದೆ.

error: Content is protected !!