Home Blog Page 3035

ನದಾಫ್ ಸಂಘದ ಅಧ್ಯಕ್ಷರ ಪತ್ನಿ ಹಬೀದಾ ಬೇಗಂ ನಿಧನ; ಅಬ್ದುಲ್ ರಜಾಕ್ ಸಂತಾಪ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ಅಧ್ಯಕ್ಷ ಜನಾಬ್ ಜಲೀಲ್ ಸಾಹೇಬ್ ಅವರ ಧರ್ಮಪತ್ನಿ ಹಬೀದಾ ಬೇಗಂ ಅವರ ನಿಧನಕ್ಕೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ತೀವ್ರ ಸಂತಾಪ ಸೂಚಿಸಿದೆ.

ಮರ್ಹೂಮಾ ಹಬೀದಾ ಬೇಗಂ ರವರಿಗೆ ಆ ಅಲ್ಹಾನು ಮೃತರ ಅತ್ಮಕ್ಕೆ ಶಾಂತಿ (ಮಘ್ಪಿರತ್) ದಯಪಾಲಿಸಲಿ ಎಂದ ಅಬ್ದುಲ್ ರಜಾಕ್ ನದಾಫ್, ಹುಜೂರ್ ಮೋಹ್ಮದ್ ಮುಸ್ತಫಾ (ಸ್ವ) ಇವರ ನೆರವಾಗಲಿ ಎಂದು ಆಶಿಸಿದ್ದಾರೆ.

ಪಿಂಜಾರ್ ನದಾಫ್ ಸಮಾಜ ಮುಂಚೂಣಿಯಲ್ಲಿ ನಿಂತು ಜನ ಪರ ಧ್ವನಿಯಾಗಿ ಹೋರಾಡುತ್ತಿದ್ದ ಇವರ ನಿಧನವು ಸಮುದಾಯದಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಹಬೀದಾ ಬೇಗಂ ಅವರಿಗೆ ಸ್ವರ್ಗಪ್ರಾಪ್ತಿ ಮತ್ತು ಅವರ ಕುಟುಂಬದರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಅಲ್ಲ್ಹಾತಾಲ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಶಾಸಕರಿಗೆಲ್ಲ ಕೊರೊನಾ ನಿಯಮ ಅನ್ವಯಿಸುವುದಿಲ್ಲವೇ?

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾಜ್ಯದಲ್ಲಿ ಮಹಾಮಾರಿಯ ಅಬ್ಬರ ಜೋರಾಗಿದೆ. ನಿಯಂತ್ರಣಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ಜನರಿಗೆ ತಕ್ಕ ಪಾಠ ಕಲಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಮಾತ್ರ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಜಗಳೂರು ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರೇ ನಿಯಮ ಗಾಳಿಗೆ ತೂರಿರುವ ವ್ಯಕ್ತಿ. ಇವರು ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಂದ್ ಆಗಿದ್ದರೂ ಬಾಗಿಲು ತೆಗೆಯಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇವರ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಮಾಡ್ರಳ್ಳಿ ಗ್ರಾಮದ ಚೌಡೇಶ್ವರಿ ದೇವಿಯ ದೇವಸ್ಥಾನದ ಬಾಗಿಲು ತೆರೆಯಿಸಿ ಶಾಸಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಇದ್ದರು.

ನಿಮ್ಮ ತೆವಲಿಗೆ ಜನರ ಹೆಣ ಕೆಡವಬೇಡಿ – ಸರ್ಕಾರದ ವಿರುದ್ಧ ಗುಡುಗಿದ ವಿಶ್ವನಾಥ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಬೇಡಿ ಎಂದು ತಮ್ಮದೆ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಬಡವರಿಗೆ ಸರ್ಕಾರ ಸರಿಯಾದ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಸದ್ಯ ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಇದೇ ರೀತಿ ಸರ್ಕಾರದ ದುರ್ವರ್ತನೆ ಮುಂದುವರೆದರೆ ಜನ ಮುಂದೆಯೂ ಸಾಯುತ್ತಾರೆ ಎಂದು ಗುಡುಗಿದ್ದಾರೆ.

ನಾಯಕತ್ವದ ಬದಲಾವಣೆ ಹೈಕಮಾಂಡ್‍ ಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿನ ಗೊಂದಲ ಮುಂದುವರೆಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯುವುದು ಬೇಡ. ಸದ್ಯ ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಕಂಗಾಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ದಾರೆ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದಾರೆ. ಒಬ್ಬರನ್ನು ಆಕ್ಸಿಜನ್ ಮಂತ್ರಿ ಮಾಡಿದ್ದಾರೆ. ಆದರೆ, ಇವರಿಂದಲೂ ಜನರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ್ದಾರೆ.

ತಜ್ಞರ ಮಾತನ್ನು ಸರ್ಕಾರ ಎಂದಿಗೂ ಕೇಳಿಲ್ಲ. ಸಚಿವ ಸಂಪುಟದಲ್ಲಿ ತಮಗೆ ಇಷ್ಟಬಂದಂತೆ ನಿರ್ಧಾರ ಕೈಗೊಂಡಿದ್ದಾರೆ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೊಮ್ಮೆ ಲಾಕ್ ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ ರೂ. 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಅವರೆ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ(103) ಇಂದು ಇಹಲೋಕ ತ್ಯಜಿಸಿದ್ದಾರೆ. ಅವರು ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ದೊರೆಸ್ವಾಮಿ ಅವರಲ್ಲಿ ಮೇ. 6ರಂದು ಕೊರೊನಾ ದೃಢಪಟ್ಟಿತ್ತು. ಆದರೆ, ಅವರು ಅದರಿಂದ ಚೇತರಿಸಿಕೊಂಡಿದ್ದರು.
ಹೀಗಾಗಿ ಮೇ. 13ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆ ನಂತರ ಮತ್ತೆ ನಾಲ್ಕು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಕೊರೊನಾದಿಂದ ಗುಣಮುಖರಾಗಿದ್ದ ನಾಲ್ಕು ದಿನಗಳ ನಂತರ ಅವರಲ್ಲಿ ಉಸಿರಾಟದ ತೊಂದರೆ ಪ್ರಾರಂಭವಾಯಿತು. ಹೀಗಾಗಿ ಅವರನ್ನು ಇಲ್ಲಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರು ನನಗೆ ವಯಸ್ಸಾಗಿದೆ. ನನಗೆ ಬೆಡ್ ಬೇಡ. ಅದು ಯುವಕರಿಗೆ ಉಪಯೋಗವಾಗಲಿ ಎಂಬ ಮಾತುಗಳನ್ನು ದೊರೆಸ್ವಾಮಿ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ್ ಅವರು, ಬೆಡ್ ಕೊರತೆ ಇಲ್ಲ ಎಂದು ಮನವೊಲಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಪ್ರೇಮ ವೈಫಲ್ಯ – ಉಪನ್ಯಾಸಕ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಪ್ರೇಮ ವೈಫಲ್ಯದಿಂದಾಗಿ ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಅತಿಥಿ ಉಪನ್ಯಾಸಕರು ಕಲಬುರಗಿ ಅಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ನಗರದ ಲಾಲ್ ಗೇರಿ ಕ್ರಾಸ್ ನಿವಾಸಿ ಅಂಬರೀಷ್(35) ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮನೆಗೆ ಕರೆ ಮಾಡಿ ಹೇಳಿ ಕೆರೆಗೆ ಹಾರಿದ್ದಾರೆ. ಅವರ ಶವ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬ್ರಹ್ಮಪೂರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯಾಸ್ ಚಂಡಮಾರುತದ ಹಾವಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಯಾಸ್ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದಾಗಿ ರಾಜ್ಯದ ಹಲವೆಡೆ ಭರ್ಜರಿ ಮಳೆ ಸುರಿಯುತ್ತಿದೆ. ಅಲ್ಲದೇ, ಈ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಈಗಾಗಲೇ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ಹಲವೆಡೆ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ, ಮೇ. 29ರ ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದ ಪ್ರಭಾವದಿಂದಾಗಿ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗುತ್ತಿರುವುದರಿಂದಾಗಿ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೇ. 26ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಇಂದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಪಿಎಂ ಕೇರ್ಸ್ ಗೆ ಸಾಕಷ್ಟು ದಾನ ಮಾಡಿದ್ದ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವು- ಎಲ್ಲೆಡೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಪಿಎಂ ಕೇರ್ಸ್‍ ಗೆ ರೂ. ಲಕ್ಷಾಂತರ ದೇಣಿಗೆ ನೀಡಿದ್ದ ಉದಾರ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವನ್ನಪ್ಪಿದ ಮನ ಕಲಕುವ ಘಟನೆ ಅಹಮದಾಬಾದ್‍ ನಲ್ಲಿ ನಡೆದಿದೆ.
ಅಹ್ಮದಾಬಾದ್ ನ ವಿಜಯ್ ಪರಿಕ್ ಎಂಬುವವರು ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದರು. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್ ದೊರಕಲಿಲ್ಲ. ಮುಂದೆ ಬರುತ್ತಿರುವ 3ನೇ ಕೊರೊನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಇನ್ನೆಷ್ಟು ಹಣ ದೇಣಿಗೆ ನೀಡಬೇಕು ಎಂಬುವುದನ್ನು ದಯವಿಟ್ಟು ತಿಳಿಸಿ ಎಂದು ಆ ವ್ಯಕ್ತಿ ನೊಂದು ಕಣ್ಣೀರು ಸುರಿಸಿದ್ದಾರೆ.

ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ ನನ್ನ ತಾಯಿಗೆ ಆಕ್ಸಿಜನ್ ಬೆಡ್ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಅದಕ್ಕೆ ಎಷ್ಟು ದೇಣಿಗೆ ನೀಡಬೇಕು ಹೇಳಿ, ನೀಡುತ್ತೇನೆ. ಸೋಂಕಿನಿಂದ ನಾನು ಮತ್ತಷ್ಟು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ವ್ಯಕ್ತಿಯ ತಾಯಿಗೆ ಬೆಡ್ ಸಿಗದ ಕಾರಣ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ವತಃ ಆ ವ್ಯಕ್ತಿಯೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ಟ್ವೀಟ್ ಭಾರಿ ವೈರಲ್ ಆಗುತ್ತಿದೆ. ಟ್ವೀಟ್‍ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ದೇಶಾದ್ಯಂತ ಕರಾಳ ದಿನ ಆಚರಣೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರೈತರು ದೇಶಾದ್ಯಂತ ಕರಾಳ ದಿನ ಆಚರಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋದಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

ರೈತರು ತಮ್ಮ ಮನೆ, ವಾಹನಗಳಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸುತ್ತಿದ್ದಾರೆ. ಅಲ್ಲದೇ, ಇಂದು ಪಂಜಾಬ್ ನ ರೈತರು ಕಪ್ಪು ಬಣ್ಣದ ಟರ್ಬನ್‍ ಗಳನ್ನು ಧರಿಸುವುದರ ಮೂಲಕ ಕರಾಳ ದಿನ ಆಚರಿಸುತ್ತಿದ್ದಾರೆ.

ಈ ಹೋರಾಟ 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಪ್ರಾರಂಭವಾಯಿತು. ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲಿಯೇ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ರೈತರು, ಅಂದಿನಿಂದ ಇಲ್ಲಿಯವರೆಗೂ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ ಎಂದು ರೈತರು ಎಚ್ಚರಿಸಿದ್ದಾರೆ.

ಕೋವಿಡ್ ವರದಿ ಇಲ್ಲದ್ದಕ್ಕೆ ದಾಖಲಿಸಿಕೊಳ್ಳಲು ಒಪ್ಪದ ಆಸ್ಪತ್ರೆ – ನಿಂತಲ್ಲಿಯೇ ಹೆರಿಗೆಯಾಗಿ ಮಗು ಸಾವು

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಕೊರೊನಾ ವರದಿ ಇಲ್ಲವೆಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಂಡಿರಲಿಲ್ಲ. ಹೀಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಲ್ಲಿಯೇ ಹೆರಿಗೆಯಾಗಿದ್ದು, ಪರಿಣಾಮ ನವಜಾತ ಶಿಶು ಕೆಳಗೆ ಬಿದ್ದು ಸಾವನ್ನಪ್ಪಿರುವ ಮನ ಕಲಕುವ ಘಟನೆ ನಡೆದಿದೆ.

ಈ ಘಟನೆ ಇಲ್ಲಿಯ ಮಿಮ್ಸ್ ನ ಹೆರಿಗೆ ವಾರ್ಡ್ ಮುಂಭಾಗದಲ್ಲಿ ನಡೆದಿದೆ. ನಗರದ ಗುತ್ತಲು ಬಡಾವಣೆಯ ನಿವಾಸಿ ಇಸ್ಮಾಯಿಲ್ ಎಂಬುವವರ ಪತ್ನಿ ಸೋನು ಅವರು 7 ತಿಂಗಳ ಗರ್ಭಿಣಿ ಆಗಿದ್ದರು. ಆದರೆ, ನಿನ್ನೆ ರಾತ್ರಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಪರೀಕ್ಷೆ ಮಾಡಿದಾಗ ಮಗುವಿನ ಎದೆಯ ಬಡಿತ ಕೇಳುತ್ತಿಲ್ಲ. ನಾಳೆ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿಯೇ ಇಸ್ಮಾಯಿಲ್ ನಿನ್ನೆ ರಾತ್ರಿ ಪತ್ನಿಯ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆದರೆ, ಇಂದು ಬೆಳಿಗ್ಗೆ ನೋವು ಹೆಚ್ಚಾದ ಕಾರಣ, ಪತ್ನಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು. ಆದರೆ, ಈ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ, ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯ ಪರಿಸ್ಥಿತಿ ಕಂಡು ಕುಟುಂಬಸ್ಥರು ಹಾಗೂ ಅಲ್ಲಿದ್ದ ಸಾರ್ವಜನಿಕರು ದಾಖಲು ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೂ ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಂಡಿಲ್ಲ. ಆದರೆ, ಸೋನು ನಿಂತಿದ್ದ ಸಂದರ್ಭದಲ್ಲಿಯೇ ಹೆರಿಗೆ ಆಗಿದೆ. ಆಗ ಮಗು ಕೆಳಕ್ಕೆ ಬಿದ್ದು ಸಾವನ್ನಪ್ಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ನಡೆದ ನಂತರ ಆಸ್ಪತ್ರೆಯ ಸಿಬ್ಬಂದಿ ಸೋನು ಅವರನ್ನು ದಾಖಲು ಮಾಡಿಕೊಳ್ಳಲಾಯಿತು. ಇತ್ತ ಆಸ್ಪತ್ರೆ ಸಿಬ್ಬಂದಿ ಪೋಷಕರ ಮೇಲೆ ತಪ್ಪು ಹೇರುತ್ತಿದ್ದಾರೆ.

ಕೆಂಪು ರಕ್ತ ಚಂದ್ರ ಗ್ರಹಣ! ಏನಿದು? ಇದು ಹೇಗೆ ಸಂಭವಿಸುತ್ತದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವರ್ಷದ ಮೊದಲ ಚಂದ್ರ ಗ್ರಹಣ ಇಂದು ಸಂಭವಿಸಲಿದೆ. ಈ ಬಾರಿ ಸೂಪರ್ ಮೂನ್ ಗ್ರಹಣವಾಗಿರುವುದರಿಂದಾಗಿ ಇದು ವಿಶೇಷವಾಗಿತ್ತು. ಹೀಗಾಗಿ ಈ ಕೆಂಪು ರಕ್ತ ಚಂದ್ರನನ್ನು ಎಲ್ಲರೂ ಕಣ್ಣು ತುಂಬಿಕೊಳ್ಳಬಹುದು. ಚಂದ್ರನು ಭೂಮಿಗೆ ಅತ್ಯಂತ ಹತ್ತಿರವಾಗುವುದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.

ಭೂಮಿಯ ಸುತ್ತ ಚಂದ್ರನ ಕಕ್ಷೆಯು ಸಂಪೂರ್ಣವಾಗಿ ವೃತ್ತಾಕಾರವಾಗಿಲ್ಲ. ಪೆರಿಗೀ ಎಂದು ಕರೆಯಲ್ಪಡುವ ಕಕ್ಷೆಯ ಹತ್ತಿರದ ಬಿಂದುವು ಕಕ್ಷೆಯ ದೂರದ ಬಿಂದುವಿಗಿಂತ ಭೂಮಿಗೆ ಸರಿಸುಮಾರು 28,000 ಮೈಲಿ ದೂರದಲ್ಲಿದೆ. ಹೀಗೆ ಪೆರಿಗಿಯ ಬಳಿ ಸಂಭವಿಸುವ ಹುಣ್ಣಿಮೆಯನ್ನು ಸೂಪರ್‌ ಮೂನ್ ಎಂದು ಕರೆಯಲಾಗುತ್ತದೆ.
ಹೀಗಾಗಿ ಚಂದ್ರ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಅಲ್ಲದೇ, ಪ್ರಕಾಶಮಾನವಾಗಿ ಕಾಣುತ್ತದೆ.

ಭೂಮಿಯ ನೆರಳು ಚಂದ್ರನ ಎಲ್ಲಾ ಅಥವಾ ಭಾಗವನ್ನು ಆವರಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಆದರೆ ಪ್ರತಿ ಚಂದ್ರನ ಕಕ್ಷೆಯಲ್ಲಿ ಎರಡು ಬಾರಿ, ಚಂದ್ರನು ಭೂಮಿ ಮತ್ತು ಸೂರ್ಯನಂತೆಯೇ ಒಂದೇ ಸಮತಲದಲ್ಲಿರುತ್ತಾನೆ. ಇದು ಹುಣ್ಣಿಮೆಗೆ ಅನುಗುಣವಾದರೆ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯನ್ನು ರೂಪಿಸುತ್ತಾರೆ. ಚಂದ್ರನು ಭೂಮಿಯ ನೆರಳಿನ ಮೂಲಕ ಹಾದು ಹೋಗುತ್ತಾನೆ. ಇದು ಒಟ್ಟು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ.

ಈ ಚಂದ್ರ ಗ್ರಹಣ ಫೆಸಿಫಿಕ್ ಸಮುದ್ರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ತೀರ ಮತ್ತು ಅಮೆರಿಕಾದ ಪಶ್ಚಿಮ ತೀರದಲ್ಲಿ ಕಾಣಿಸುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿದಾಗ ಅದು ಕಪ್ಪಾಗುತ್ತದೆ. ಆದರೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ಹೋಗುವುದಿಲ್ಲ. ಬದಲಾಗಿ, ಇದು ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ. ಅದಕ್ಕಾಗಿಯೇ ಒಟ್ಟು ಚಂದ್ರ ಗ್ರಹಣಗಳನ್ನು ಕೆಲವೊಮ್ಮೆ ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

error: Content is protected !!