Home Blog Page 3057

ಲಾಠಿ ಬೀಸದಂತೆ ನೋಡಿಕೊಳ್ಳಿ ಎಂದ ಕಮಲ್ ಪಂಥ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಅಟ್ಟಹಾಸ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಸರ್ಕಾರ, ಲಾಕ್ ಡೌನ್ ಘೋಷಿಸಿದೆ. ಆದರೆ, ರಸ್ತೆಗಳಿದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇದರಿಂದಾಗಿ ಹಲವರು ಪೊಲೀಸ್ ಇಲಾಖೆಯ ಮೇಲೆ ಆಕ್ರೋಶ ವ್ಯಕ್ಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್‍ ಅವರು ಸಾರ್ವಜನಿಕರ ಮೇಲೆ ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಸೂಚಿಸಿದ್ದಾರೆ.

ಈ ಕುರಿತು ಕಮಲ್ ಪಂತ್‍ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ, ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದರೆ ಮಾತ್ರ ಕಾನೂನಿನಡಿ ಕೈಗೊಳ್ಳಬೇಕು. ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ.

ಜನರು ಮನೆಯಲ್ಲಿಯೇ ಇರೆ. ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಇಂದು ದಾಖಲೆ ಬರೆದ ಸೋಂಕಿಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಲಾಕ್ ಡೌನ ಘೋಷಿಸಿದೆ. ಇಂದು ಸೋಂಕಿತರ ಸಂಖ್ಯೆ ಸಮಾಧಾನಕರವಾಗಿದ್ದರೂ ಸಾವಿನ ಸಂಖ್ಯೆ ಆತಂಕ ಸೃಷ್ಟಿಸುತ್ತಿದೆ. ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, 39,305 ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ, ಸಾವಿನ ಸಂಖ್ಯೆ ಮಾತ್ರ ದಾಖಲೆ ಬರೆದಿದೆ.

ಇಂದು ರಾಜ್ಯದಲ್ಲಿ 596 ಜನ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆ ಕಂಡಿದೆ. ಇಂದು 32,188 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,747 ಹೊಸ ಪ್ರಕರಣಗಳು ವರದಿಯಾಗಿದ್ದು, 374 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,52,454 ಸಕ್ರಿಯ ಪ್ರಕರಣಗಳಿವೆ.

ಇಂದು ರಾಜ್ಯದ ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮಾಂತರ 704, ಬೆಂಗಳೂರು ನಗರ 16,747, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1,175, ದಾವಣಗೆರೆ 197, ಧಾರವಾಡ 1,006, ಗದಗ 332, ಹಾಸನ 1,800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1,133, ಮೈಸೂರು 1,537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2,168, ಉಡುಪಿ 855, ಉತ್ತರ ಕನ್ನಡ 885, ವಿಜಯಪುರ 659 ಮತ್ತು ಯಾದಗಿರಿಯಲ್ಲಿ 727 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಜನ ನರಳುತ್ತಿದ್ದಾರೆ…ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ…ಸರ್ಕಾರಕ್ಕೆ ಛೀಮಾರಿ ಹಾಕಿದ ನಟಿ ಉಮಾಶ್ರೀ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹುಟ್ಟುಹಬ್ಬ. ಆದರೆ, ಉಮಾಶ್ರೀ ಅವರು ಮಾತ್ರ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ತೀವ್ರವಾಗಿ ಉಲ್ಭಣವಾಗಿದ್ದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಜನ ನೋವಿನಿಂದ ನರಳುತ್ತಿರುವ ಇಂತಹ ಸಂದರ್ಭದಲ್ಲಿ ಹುಟ್ಟು ಹಬ್ಬದಂತಹ ಸಂಭ್ರಮದ ಕ್ಷಣವನ್ನು ನಾನು ಅನುಭವಿಸುವುದಿಲ್ಲ.

ನನ್ನ ನಾಡಿನ ಜನತೆ ಇಂತಹ ಮಹಾರೋಗದಿಂದ ಮುಕ್ತರಾಗಿ, ಭವ್ಯ ಭಾರತ ನಗುಮುಖದಿಂದ ಇರಬೇಕೆನ್ನುವುದೇ ನನ್ನ ಸಂತಸ. ಇಂತಹ ಸಂದರ್ಭದಲ್ಲಿ ನನಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರಿಂದ ಖುಷಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜನ ನರಳಾಡುತ್ತಿದ್ದಾರೆ.

ಬಡವರು ಬೀದಿಗೆ ಬಂದಿದ್ದಾರೆ. ಸರ್ಕಾರ, ಬಡವರ ನೋವು ಆಲಿಸುವ ಕೆಲಸ ಮಾಡುತ್ತಿಲ್ಲ. ಕೊರೊನಾದಿಂದ ಜನರ ಬದುಕು ಎಲ್ಲ ರೀತಿಯಿಂದಲೂ ಅಕ್ಷರಶಃ ಬೀದಿಗೆ ಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಇನ್ನೊಂದೆಡೆ ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ಇದರಿಂದ ರೋಗಿಗಳು ಸಾಯುತ್ತಿದ್ದಾರೆ. ಆದರೂ ಸರ್ಕಾರದ ಮನ ಮಿಡುಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಲಾಕ್ ಡೌನ್ ಘೋಷಣೆ ಮಾತ್ರ ಮಾಡಿದೆ. ಆದರೆ, ದುಡಿಯುವ ವರ್ಗಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಸರ್ಕಾರ ಕೂಡಲೇ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ದುಡಿಯುವ ವರ್ಗ, ಕೂಲಿ ಕಾರ್ಮಿಕರು, ಟ್ಯಾಕ್ಸಿ, ಆಟೋ ಡ್ರೈವರ್ ಸೇರಿದಂತೆ ಅಂದೆ ದುಡಿದು ಊಟ ಮಾಡುವ ವರ್ಗದ ಹಿಂದೆ ಸರ್ಕಾರ ನಿಲ್ಲಬೇಕು. ಕೂಡಲೇ ಇಂತಹ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನಾಲ್ಕು ವರ್ಷದ ಮಗು ಮನೆಯಲ್ಲಿಯೇ ಆಡುತ್ತಿದೆ….ತಂದೆ – ತಾಯಿ ಮಾತ್ರ ಮಹಾಮಾರಿಗೆ ಬಲಿಯಾಗಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಗಂಡ, ಹೆಂಡತಿ ಮಹಾಮಾರಿಯಿಂದ ಸಾವನ್ನಪ್ಪಿದ್ದರ ಪರಿಣಾಮ ಕೇವಲ ನಾಲ್ಕೂವರೆ ವರ್ಷದ ಹೆಣ್ಣುಮಗಳು ಅನಾಥಳಾಗಿದ್ದಾಳೆ.

ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಅವರು ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ದಂಪತಿ ಸಾವಿನಿಂದಾಗಿ ಏನೂ ತಿಳಿಯದ ಹಾಗೂ ಲೋಕದ ಪರಿಜ್ಞಾನವೇ ಇಲ್ಲದ ಮಗು ಅನಾಥವಾಗಿದೆ.

ಇತ್ತೀಚೆಗೆ ದಂಪತಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಡ – ಹೆಂಡತಿ ಇಬ್ಬರೂ ಹೋಮ್ ಐಸೋಲೇಷನ್ ನಲ್ಲಿದ್ದರು. ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಕಳೆದ ರಾತ್ರಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಜ್ಜ, ಅಜ್ಜಿಗೆ ಕೂಡ ಕೋವಿಡ್ ದೃಢವಾಗಿದ್ದು, ಅವರು ಕೂಡ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮಗು ಯಾವ ಅರಿವೂ ಇಲ್ಲದೆ, ಮನೆಯಲ್ಲಿಯೇ ಆಟವಾಡಿಕೊಂಡು ಇದೆ. ಆದರೆ, ಅಪ್ಪ – ಅಮ್ಮ ಸತ್ತಿರುವ ವಿಷಯವೇ ಗೊತ್ತಿಲ್ಲ.

ಕೊರೊನಾ; ಸೋಮವಾರವೂ 383 ಜನರಿಗೆ ಸೋಂಕು, ಇಬ್ಬರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 10 ಸೋಮವಾರ ಸೋಂಕಿನ ಸ್ಫೋಟ ಮುಂದುವರೆದಿದೆ. ಆದರೆ ಕಳೆದ ಎರಡು ದಿನಗಳ ಕಾಲ ಬಂದಿದ್ದ ಸೋಂಕಿತರ ಸಂಖ್ಯೆ ಮೀರಿದೆ. ಮತ್ತೆ ಇಬ್ಬರು ಕೋವಿಡ್ ನಿಂದ ಮೃತಪಟ್ಟಿದ್ದಾರೆ.

ಇಂದಿನ 383 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 15127 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -142, ಮುಂಡರಗಿ-58, ನರಗುಂದ-24, ರೋಣ-111, ಶಿರಹಟ್ಟಿ-32 ಹೊರಜಿಲ್ಲೆಯ-16 ಸೇರಿದಂತೆ 383 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಅಂತೆ ಇಬ್ಬರು ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 61 ವರ್ಷ ವಯಸ್ಸಿನ ವ್ಯಕ್ತಿ ಮೇ 8 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಮೇ 4 ರಂದೇ ಕೋವಿಡ್ ದೃಢಪಟ್ಟಿತ್ತು. ಶ್ವಾಸಕೋಶ ಹಾಗೂ ನ್ಯುಮೋನಿಯಾದಿಂದಾಗಿ ಮೇ 08 ರಂದು ಮೃತಪಟ್ಟಿದ್ದಾರೆ.

ಇನ್ನೊಬ್ಬ ಬೆಟಗೇರಿಯ ನಿವಾಸಿ 60 ವರ್ಷದ ವ್ಯಕ್ತಿ ಮೇ 04 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಶ್ವಾಸಕೋಶ ಹಾಗೂ ನ್ಯುಮೋನಿಯಾದಿಂದಾಗಿ ಮೇ 08 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
160 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 225 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13417 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1550 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 198 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅರೇ ಬಾಯ್…..ಇಲ್ಲಿ ಹಿಂದು ಸತ್ತಿದ್ದಾನೆ…ಯಾರೂ ಮುಂದೆ ಬಂದಿಲ್ಲ…ಬಂದವರು ಯಾರು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಸಾವು – ನೋವುಗಳು ಮಿತಿ ಮೀರುತ್ತಿವೆ. ಕೊರೊನಾದಿಂದ ಹಲವೆಡೆ ಮಾನವೀಯ ಮೌಲ್ಯಗಳು ಕೂಡ ಇಲ್ಲದಾಗಿದೆ. ಕೊರೊನಾದಿಂದಾಗಿ ಮನೆಯಲ್ಲಿಯೇ ಸಾವನ್ನಪ್ಪಿದ್ದ ವಯೋವೃದ್ಧನ ಅಂತ್ಯ ಸಂಸ್ಕಾರ ಮಾಡಲು ಯಾರೂ ಮುಂದೆ ಬರದ ಕಾರಣ, ಮುಸ್ಲಿಂ ಯುವಕರು ದ್ವಿಚಕ್ರ ವಾಹನದಲ್ಲಿಯೇ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ನಡೆದಿದೆ.

ಕೊಳ್ಳೇಗಾಲ ತಾಲೂಕು ಆಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ದ ಮಹದೇವ ಎಂಬುವವರು ಸಾವನ್ನಪ್ಪಿದ್ದರು. ಆದರೆ, ಕೊರೊನಾದ ಭಯದಿಂದಾಗಿ ಗ್ರಾಮಸ್ಥರು ಶವ ಎತ್ತಲು ಮುಂದೆ ಬರಲಿಲ್ಲ. ಸಂಬಂಧಿಕರು ಕೂಡ ಮುಂದೆ ಬರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಯುವಕರ ತಂಡ, ಬೈಕ್ ನಲ್ಲಿಯೇ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಪಿಪಿಟಿ ಕಿಟ್ ಧರಿಸಿಯೇ ಯುವಕರು ಶವ ಸಾಗಾಟ ಮಾಡಿದ್ದಾರೆ. ಶವ ಸಾಗಿಸಲು ಈ ಯುವಕರಿಗೆ ಯಾವುದೇ ವಾಹನಗಳು ಸಿಕ್ಕಿರಲಿಲ್ಲ. ಹೀಗಾಗಿ ಶವಕ್ಕೆ ಏಣಿ ಕಟ್ಟಿ ದ್ವಿಚಕ್ರ ವಾಹನದಲ್ಲಿಯೇ ಸಾಗಾಟ ಮಾಡಿ, ಊರ ಹೊರಗ ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಈ ಮುಸ್ಲಿಂ ಯುವಕರ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಎನ್ನುತ್ತಿದ್ದಾರೆ.

ಜಿಮ್ಸ್ ನಲ್ಲಿ ಬಿಜೆಪಿ ಮುಖಂಡನ ಸಂಶಯಾಸ್ಪದ ಸಾವು!

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಶಹರ ಮಂಡಲದ ಉಪಾಧ್ಯಕ್ಷ ರಾಜಶೇಖರ್ ಅಲಿಯಾಸ್ ಮಂಜುನಾಥ್ ಪಾಟೀಲ್ ಜಿಮ್ಸ್ ನ ಸಾರಿ ವಾರ್ಡ್ ನಲ್ಲಿ ಇರುವ ಶೌಚಾಲಯದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಸುನೀಗಿದ್ದಾರೆ.

ವಾರದ ಹಿಂದೆ ಜಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರಾಜಶೇಖರ, ಸೋಮವಾರ ಮುಂಜಾನೆ ಪತ್ನಿಯನ್ನು ಉಪಾಹಾರಕ್ಕೆ ಕಳುಹಿಸಿ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬಂದ ಪತ್ನಿ ಹುಡುಕಾಡಿದಾಗ ಶೌಚಾಲಯದಲ್ಲಿ ಶವವಾಗಿ ಬಿದ್ದಿದ್ದನ್ನು ಕಂಡು ಆಘಾತಗೊಂಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ರಾಜಶೇಖರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪೊಲೀಸರ ಪ್ರಕಾರ, ರಾಜಶೇಖರ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ, ಕೊರಳಲ್ಲಿ ಟವಲ್ ಇತ್ತು. ಹೀಗಾಗಿ ಎಲ್ಲರಲ್ಲೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿ ಹಬ್ಬಿದೆ ಎಂದು ಗ್ರಾಮೀಣ ಠಾಣೆಯ ಪಿಎಸ್ಐ ಅಜೀತಕುಮಾರ್ ಹೊಸಮನಿ ಮಾಹಿತಿ ನೀಡಿದ್ದಾರೆ.

ಕಾಲು‌ ಜಾರಿ ಬಿದ್ದರೆ ಪ್ರಾಣ ಹೋಗುತ್ತಾ? ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಹಾಗೂ ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೆ, ಪೊಲೀಸರು ಇಡೀ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ.

ಸೋಂಕಿತರ ಸಾವಿಗೆ ಸರಕಾರದ ನಿರ್ಲಕ್ಷ್ಯವೇ ಕಾರಣ; ದೊಡ್ಡಮನಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಸೋಮವಾರ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ಜನ ಕೋವಿಡ್ ಸೋಂಕಿತರು ಆಕ್ಸಿಜನ್ ಇಲ್ಲದೆ ಮೃತಪಟ್ಟಿರುವುದು ಅತ್ಯಂತ ವಿಷಾದನೀಯ ವಾಗಿದ್ದು, ಇದಕ್ಕಾಗಿ ಸರಕಾರ ಅಗತ್ಯ ಮುಂಜಾಗ್ರತೆ ವಹಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ‌ ಆರೋಪಿಸಿದ್ದಾರೆ.

ತಜ್ಞರು ಅಗತ್ಯ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಿದರೂ ಸಹ ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಏಕಾಏಕಿ ಸರಕಾರ ಲಾಕ್ಡೌನ್ ಹೇರಿರುವುದರಿಂದ ಅಸಂಘಟಿತ ಕೂಲಿ ಕಾರ್ಮಿಕರು ಜೀವನ ನಡೆಸುವುದು ಅತಿ ಕಷ್ಟಕರವಾಗಿದ್ದು, ಕೂಡಲೇ ಸರಕಾರ ನೆರವಿಗೆ ಬರುವುದರ ಮೂಲಕ ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ, ಪ್ರತಿ ತಿಂಗಳು 10ಸಾವಿರ ರೂ,ಗಖ ಸಹಾಯಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜನತೆ ದಂಗೆ ಏಳುವ ಮೊದಲೇ ಸರಕಾರ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಮಕೃಷ್ಣ ದೊಡ್ಡಮನಿ ಸರಕಾರಕ್ಕೆ ಕಿವಿ ಮಾತು ಹೇಳಿದರು.

ಕೊರೊನಾ ಆತಂಕ; ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ನಿವೃತ್ತ ಉಪ ತಹಸೀಲ್ದಾರ್

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾ ಭಯದಿಂದಾಗಿ ನಿವೃತ್ತ ಉಪ ತಹಸೀಲ್ದಾರ್ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ನಡೆದಿದೆ.
ಸೋಮಾ ನಾಯಕ್(72) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಕಾರಿನಲ್ಲಿ ತಾವೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ನಿವೃತ್ತಿಯ ನಂತರ ತೋಟ ನೋಡಿಕೊಂಡಿದ್ದ ಸೋಮಾ ನಾಯಕ್ ಅವರಿಗೆ ಸೋಂಕು ತಗುಲಿತ್ತು. ಇದರಿಂದ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವಂತಾಗಿದೆ. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಇಲ್ಲ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಎದುರೇ ಏನಾದರೂ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಪಲ್ಸ್ ರೇಟ್ ಕಡಿಮೆಯಾಗಿ, ಉಸಿರಾಟಕ್ಕೆ ತೊಂದರೆಯಾಗಿ ಜೀವಕ್ಕೆ ಕಷ್ಟವಾದರೆ ಮಾತ್ರ ಆತ್ಮಹತ್ಯೆ. ಸುಖವಾಗಿ ಸತ್ತರೆ ಚಿಂತೆಯೇ ಇಲ್ಲ. ಮಾರಿಕಾಂಬಾ ದೇವಿ ನಿನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅಷ್ಟರಲ್ಲಿಯೇ ನೀನು, ನನ್ನನ್ನ ಕರೆದುಕೊಂಡು ಬಿಟ್ಟೆ.
ಕೊರೊನಾ ಪಾಸಿಟಿವ್ ಇದ್ದ ಕಾರಣ ಅಗ್ನಿಸ್ಪರ್ಶ ಮಾಡಲು ಅನುಕೂಲವಾಗುವಂತೆ ಜಾಗ ಆರಿಸಿಕೊಂಡಿದ್ದೇನೆ.

ಇದು ಪ್ರಪಂಚಕ್ಕೆ ಆದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮ ಜೀವಕ್ಕೆ ದಾರಿ ಮಾಡಿದ್ದೇನೆ. ಈ ಜೀವನ ಸಾಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಡಿಸಿಸಿ ಬ್ಯಾಂಕಿನ ನನ್ನ ಖಾತೆಯಲ್ಲಿ ರೂ. 1.28 ಲಕ್ಷ ಇದ್ದು ಈ ಹಣವನ್ನು ಜಮೆ ಮಾಡಬೇಕು. ನಾನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಟ್ಟಿದ್ದೇನೆ. ನನ್ನ ಚೈನು, ಉಂಗುರ ಬೀರೂವಿನಲ್ಲಿ ಇದೆ. ನೀವೆಲ್ಲರೂ ಚೆನ್ನಾಗಿರಿ ಎಂದು ಬರೆದಿದ್ದಾರೆ.

ಮತ್ತೊಂದು ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು, ಸ್ಥಳಾಂತರ ಮಾಡಲು ಹಾಗೂ ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರೋಗ ನಿರ್ವಹಣೆಗೆ ಆಸ್ಪತ್ರೆಗಳ ಹಾಸಿಗೆಗಳು ಮುಖ್ಯವಾಗಿದೆ. ಹೀಗಾಗಿ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ತೊಂದರೆ ಎದುರಿಸುವುದನ್ನು ತಪ್ಪಿಸಲು ಯಾರಿಗೆ, ಎಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಕುರಿತು ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿರುವವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿ ತಾತ್ಕಾಲಿಕ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಯಾವುದೇ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಕ್ಕೂ ಮುನ್ನ ರಾಜ್ಯ ಸರ್ಕಾರ ಹೊರಡಿಸಿರುವ ಡಿಸ್ಚಾರ್ಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾದವರಿಗೂ ಇದೇ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

error: Content is protected !!