ಬೆಟಗೇರಿಯ ಕುರಹಟ್ಟಿ ಪೇಟೆಯ ಮೈಲಾರ ಲಿಂಗಪ್ಪನ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ ಗದುಗಿನ ಕೊಲೆಯಾದ ದುರ್ಧೈವಿ.
ಪ್ರವೀಣ ಗದುಗಿನ ಎಂಬಾತನೇ ಕೊಲೆಗೈದ ಆರೋಪಿ ಎನ್ನಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣ್ ಇಬ್ಬರು ಸಂಬಂಧಿಕರಾಗಿದ್ದು, ವರೆಸೆಯಲ್ಲಿ ಕಾಕಾ,ಮಗ ಎನ್ನಲಾಗಿದೆ.
ಆದರೆ ಇಬ್ಬರು ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದರು. ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣನ ತಂದೆ ತಾಯಿಯ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದನಂತೆ, ಹೀಗಾಗಿ ಇದರಿಂದ ಚಿಕ್ಕಪ್ಪನ ವರ್ತನೆಗೆ ಬೇಸತ್ತು ಕೊಲೆ ಮಾಡಿದ್ದಾನೆ ಅಂತ ಪೊಲೀಸ ಮೂಲಗಳಿಂದ ತಿಳಿದುಬಂದಿದೆ.
ಸುದ್ದಿ ತಿಳಿದ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಕುರ್ಕಿ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪ್ರವೀಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ಸಿ.ಪಿ. ಯೋಗೇಶ್ವರ, ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟಶ್ರೀನಿವಾಸ ಪೂಜಾರಿ, ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ. ಅತೀಕ್, ಮಹೇಂದ್ರಜೈನ್, ಪ್ರವಾಸ್ಓದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೇ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕುಮಾರ್ ಪುಷ್ಕರ್, ಕೊಪ್ಪಳ ಜಿಲ್ಲಾಧಿಕಾರಿ ಶ್ರೀ ವಿಕಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಂಜನಾದ್ರಿ ಪರ್ವತಕ್ಕೆ ರಾಮಾಯಣದಲ್ಲಿ ವಿಶೇಷ ಸ್ಥಾನವಿದೆ. ಶ್ರೀರಾಮನ ಭಕ್ತನಾಗಿರುವ ಆಂಜನೇಯನನ್ನು ಶ್ರೀರಾಮ ಹಾಗೂ ಲಕ್ಷ್ಮಣರು ಅಂಜನಾದ್ರಿ ಬೆಟ್ಟದಲ್ಲಿ ಬೇಟಿಯಾಗಿದ್ದರಂತೆ. ಅಂಜನಾ ದೇವಿಯು ಆಂಜನೇಯನಿಗೆ ಇಲ್ಲಿ ಜನ್ಮ ನೀಡಿದ್ದರಿಂದ, ಈ ಬೆಟ್ಟಕ್ಕೆ ಅಂಜನಾದ್ರಿ ಪರ್ವತ ಎಂದು ಹೆಸರಿಡಲಾಗಿದೆ.
ತುಂಗಾಭದ್ರಾ ನದಿಯ ದಡದಲ್ಲಿರುವ ಈ ಬೆಟ್ಟಕ್ಕೆ ದಕ್ಷಿಣ ಭಾರತದ ಕಾಶಿ ಎಂದು ಪ್ರಸಿದ್ದಿ ಹೊಂದಿದೆ. ಈ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಭೆ ನಿರ್ಧಾರ ಕೈಗೊಂಡಿತು. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲು ಸಹ ನಿರ್ಧರಿಸಲಾಯಿತು.
ಏಪ್ರಿಲ್ 16 ರಂದು ಸಚಿವರುಗಳಾದ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಸಿ.ಪಿ. ಯೋಗೇಶ್ವರ, ಶ್ರೀ ಕೋಟಶ್ರೀನಿವಾಸ ಪೂಜಾರಿ, ಶ್ರೀ ಬಿ.ಸಿ. ಪಾಟೀಲ್ ಹಾಗೂ ಅರಣ್ಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ರವರು ಅಂಜನಾದ್ರಿ ಬೆಟ್ಟಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ನಂತರ, ಅಂಜನಾದ್ರಿ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು.
ಪ್ರಥಮ ಹಂತದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಕುಡಿಯುವ ನೀರು, ಶೌಚಾಲಯ, ಸ್ನಾನದ ಗೃಹ ಮತ್ತು ರಸ್ತೆ ನಿರ್ಮಾಣ ಮಾಡುವುದು. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಅಳವಡಿಸುವುದು. ಬೆಟ್ಟದ ಕೆಳಭಾಗದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.
ಬೆಟ್ಟದ ಮುಂಭಾಗದಲ್ಲಿರುವ ಹುಲಿಗಿ ಗಂಗಾವತಿ ರಾಜ್ಯ ಹೆದ್ದಾರಿಯನ್ನು 1 ಕಿ.ಮೀ. ಅಗಲೀಕರಣ ಮಾಡುವುದು. ಬೀದಿ ದೀಪಗಳನ್ನು ಅಳವಡಿಸುವುದು. ಸೇವಾ ಹಾಗೂ ಟಿಕೆಟ್ ಕೌಂಟರ್ ನಿರ್ಮಾಣ ಮಾಡುವುದು. ಪ್ರವಾಸಿಗರಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವುದು. ಮೊಬೈಲ್ ಸಂಪರ್ಕಕ್ಕಾಗಿ ಮೊಬೈಲ್ ಟವರ್ ಅಳವಡಿಸುವುದು.
ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ರೂ.50.00ಕೋಟಿಗಳನ್ನು ಒದಗಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು ತಮ್ಮ ಇಲಾಖೆಯಲ್ಲಿ ಮೀಸಲಿಟ್ಟಿರುವ ರೂ.268.00ಲಕ್ಷಗಳನ್ನು ಹಾಗೂ ಮುಜರಾಯಿ ಇಲಾಖೆಯಲ್ಲಿರುವ ರೂ.140.00ಲಕ್ಷ, ಪ್ರವಾಸೋದ್ಯಮ ಇಲಾಖೆಯಿಂದ ರೂ.50.00ಲಕ್ಷ ಮತ್ತು ಕೇಂದ್ರ ಕೈಗಾರಿಕೆ ಇಲಾಖೆಯ ಹ್ಯಾಂಡಿ ಕ್ರ್ಯಾಫ್ಟ್ ನಿಂದ ರೂ.10.00ಕೋಟಿಗಳನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣವನ್ನು ಮೀಸಲಿರಿಸಲಾಗಿದೆ. ಒಟ್ಟು ರೂ.50.00 ಕೋಟಿ 18.00ಲಕ್ಷ ಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳನ್ನು ಮಾಡಲು ಸಭೆ ನಿರ್ಧರಿಸಿತು.
ಎರಡನೇ ಹಂತದಲ್ಲಿ ಪ್ರವಾಸಿಗರು ತಂಗಲು ಯಾತ್ರಿ ನಿವಾಸ ಹೋಟೇಲ್ ಹಾಗೂ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವುದು. ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುವುದು. ತುಂಗಭದ್ರಾ ನದಿಯಲ್ಲಿ ವಾಟರ್ ಸ್ಪೋರ್ಟ್ಸ್ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವುದು. ಋಷಿಮುಖ ಪರ್ವತದಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೇದ, ವಾಸ್ತು, ಜ್ಯೋತಿಷ್ಯ, ಗೃಹ ನಕ್ಷತ್ರ, ಭೂಕಂಪನ, ಸಮುದ್ರ ಕಂಪನ ಹಾಗೂ ಶರೀರ ಆವಯವಗಳ ಪಾಠಗಳ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾರಂಭಿಸುವುದು. ಸಾಣಾಪುರ ಕೆರೆ ಹತ್ತಿರ ನೀರನ ವಿಭಿನ್ನ ವಿನ್ಯಾಸಗಳನ್ನು ಮಾಡುವ ಲೇಸರ್ ಶೋ ಮಾಡುವುದು. ಒಟ್ಟಾರೆ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಯಿತು.
ದೇಶದ 4 ಐತಿಹಾಸಿಕ ಹಾಗೂ ಪುರಾತನ ಸರೋವರಗಳಲ್ಲಿ ಪಂಪ ಸರೋವರ ಸಹ ಒಂದು ಆಗಿದ್ದು, ಸಮಗ್ರವಾಗಿ ಅಭಿವೃದ್ಧಿ ಮಾಡುವುದು. 101 ಬಾವಿಗಳ ಪುನಶ್ಚೇತನ ಸೇರಿದಂತೆ ಅಂಜನಾದ್ರಿ ಬೆಟ್ಟ ಮತ್ತು ಆನೆಗುಂದಿ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಂಜನಾದ್ರಿ ಬೆಟ್ಟದಲ್ಲಿ ಒಂದು ಗೋಶಾಲೆಯಿದ್ದು, ಸಾವಿರ ದನಕರುಗಳಿವೆ ಇದರ ಜೊತೆಗೆ ಇನ್ನೊಂದು ಗೋಶಾಲೆ ತೆರೆಯಲು ಸಭೆ ನಿರ್ಧರಿಸಿತು.
ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ದಿನ ಮೂರು ಸಾವಿರಕ್ಕೂ ಹೆಚ್ಚು ಹಾಗೂ ಮಂಗಳವಾರ ಮತ್ತು ಶನಿವಾರ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹನುಮಂತನ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಎರಡು ದಿನಗಳಿಂದ ನಡೆದ ಮಾತೃಶ್ರೀ (ಅವ್ವ) ಕಪ್ ಮದರ್ ಥೇರೆಸಾ ತಂಡದ ಮಡಿಲು ಸೇರಿತು. ರವಿವಾರ ಮದರ್ ಥೇರೆಸಾ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮದರ್ ಥೇರೆಸಾ ತಂಡದ ಆಟಗಾರರ ಸಾಂಘಿಕ ಯತ್ನಕ್ಕೆ ಜಯ ಒಲಿದು ಬಂತು.
ಶನಿವಾರ ಆರಂಭಗೊಂಡ ಮೊದಲ ಪಂದ್ಯದಲ್ಲಿ ಡೀಸಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜೀಜಾಮಾತಾ ತಂಡ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
ಭಾನುವಾರ ಶ್ರೀನಿವಾಸ ಗೋಂಧಳಿ ನಾಯಕತ್ವದ ದಾನ ಚಿಂತಾಮಣಿ ಅತ್ತಿಮಬ್ವೆ ತಂಡದ ಜೊತೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೀಸಿ ಟೀಮ್ ನಿಗದಿತ 10 ಓವರ್ಗಳಲ್ಲಿ 86 ರನ್ಗಳನ್ನು ಕಲೆ ಹಾಕುವಲ್ಲಿ ಶಕ್ತವಾಯಿತು. 87 ರನ್ಗಳ ಮೊತ್ತ ಬೆನ್ನು ಹತ್ತಿದ ಅತ್ತಿಮಬ್ಬೆ ತಂಡ 8.5 ಓವರ್ಗಳಲ್ಲಿ ಗುರಿ ಸಾಧಿಸಿ ಫೈನಲ್ ಪ್ರವೇಶಿಸಿತು. ಅದೃಷ್ಟದ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಡೀಸಿ ಟೀಮ್, ಈ ಪಂದ್ಯದ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿತ್ತು.
ಕ್ವಾರ್ಟರ್ ಫೈನಲ್ನಲ್ಲಿ ಜಿಪಂ ತಂಡದೊಂದಿಗೆ ಮುಖಾಮುಖಿಯಾಗಿದ್ದ ಮದರ್ ಥೇರೆಸಾ ತಂಡ ಟಾಸ್ನಲ್ಲಿ ಸೋತು ಫಿಲ್ಡಿಂಗ್ಗೆ ಇಳಿದಿತ್ತು. ನಿಗದಿತ 10 ಓವರ್ಗಳಲ್ಲಿ ಜಿಪಂ ತಂಡ 94 ರನ್ಗಳನ್ನು ಕಲೆ ಹಾಕಿತು. 95 ರನ್ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮದರ್ ಥೇರೆಸಾ ತಂಡ 8.4 ಓವರ್ಗಳಲ್ಲಿ ಗುರಿ ಸಾಧಿಸಿತು. ಈ ಗೆಲುವಿನೊಂದಿಗೆ ಮದರ್ ಥೇರೆಸಾ ತಂಡ, ಅದೃಷ್ಟದ ಮೂಲಕ ಫೈನಲ್ ಪ್ರವೇಶಿಸಿತು.
12 ಓವರ್ಗಳ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾದ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಲಬ್ನ ಅತ್ತಿಮಬ್ಬೆ ಹಾಗೂ ಥೇರೆಸಾ ತಂಡಗಳು ನೋಡಗರಿಗೆ ರೋಮಾಂಚನದ ರಸದೌತಣ ನೀಡಿದವು. ಫೈನಲ್ ಪಂದ್ಯದ ಟಾಸ್ ಗೆದ್ದ ಅತ್ತಿಮಬ್ಬೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಥೇರೆಸಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಓಪನರ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಸೂರಿ (ಗುಂಡಾ) ಇನ್ನಿಂಗ್ಸ್ನ ಕೊನೆಯ ಬೌಲ್ತನಕ ಸ್ಕ್ರೀಜ್ಗೆ ನೆಲಕಚ್ಚಿ ನಿಂತು ಆಕರ್ಷಕ ಅರ್ಧಶತಕ ಪೂರೈಸಿ ಅಜೇಯರಾಗಿ ಉಳಿದು 79 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಿಗದಿತ 12 ಓವರ್ಗಳಲ್ಲಿ 155 ರನ್ಗಳನ್ನು ಪೇರಿಸಿದ ಥೇರೆಸಾ ತಂಡ ಅತ್ತಿಮಬ್ಬೆ ತಂಡಕ್ಕೆ 156 ರನ್ ಗಳಿಸುವ ಸವಾಲು ಎಸೆಯಿತು.
156 ರನ್ಗಳ ಬೃಹತ್ ಮೊತ್ತದ ಬೆನ್ನು ಬಿದ್ದ ಅತ್ತಿಮಬ್ಬೆ ತಂಡ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಬ್ಯಾಟ್ಸ್ಮನ್ ಉಮಾಕಾಂತ ಬಿರುಸಿನ 48 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. 4ನೇ ಓವರ್ವೊಂದರಲ್ಲೇ 32 ರನ್ ಗಳಿಸಿದ ಅತ್ತಿಮಬ್ಬೆ ತಂಡದತ್ತ ಗೆಲುವು ಒಲಿಯಿತು ಎಂದುಕೊಳ್ಳುವಷ್ಟರಲ್ಲಿ ಥೇರೆಸಾ ತಂಡದ ಬೌಲರ್ಗಳ ದಾಳಿಗೆ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದರು. ನಿಗದಿತ 12 ಓವರ್ಗಳಲ್ಲಿ ಅತ್ತಿಮಬ್ಬೆ ತಂಡ 108 ರನ್ಗಳನ್ನು ಮಾತ್ರ ಕಲೆ ಹಾಕುವಲ್ಲಿ ಶಕ್ತವಾಗಿ ಫೈನಲ್ ಪಂದ್ಯ ಕೈಚೆಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು. ಶಿವು, ಕಿರಣ್ ಬರ್ತಡೆ ಬಾಯ್ಸ್..
ಎರಡು ದಿನಗಳ ಕಾಲ ನಡೆದ ಅದ್ಭುತ ಟೂರ್ನಮೆಂಟ್ನಲ್ಲಿ ಸಂಭ್ರಮ, ಸಂತಸಕ್ಕೆ ಪಾರವೇ ಇರಲಿಲ್ಲ. ಕ್ಲಬ್ನ ಆಟಗಾರರಾದ ಒನಕೆ ಓಬವ್ವ ತಂಡದ ಶಿವಕುಮಾರ್ ನಾಲ್ವಾಡ್ ಹಾಗೂ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡದ ಕಿರಣ್ ಅವರ ಜನ್ಮದಿನವನ್ನು ಟೂರ್ನಮೆಂಟ್ನಲ್ಲಿ ಆಚರಿಸಿದ್ದು ಅವಿಸ್ಮರಣೀಯ ಸಂಗತಿಗಳಲ್ಲಿ ಒಂದಾಗಿ ದಾಖಲಾಯಿತು.
ಸಮಾರೋಪದಲ್ಲಿ ಭಾವುಕರಾದ ಆಟಗಾರರು
ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಅವ್ವ ಟ್ರೋಫಿ ಗೆದ್ದ ಮದರ್ ಥೇರೆಸಾ ತಂಡ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದ ಅತ್ತಿಮಬ್ಬೆ ತಂಡಕ್ಕೆ ಟ್ರೋಫಿ ನೀಡಲು ಆಟಗಾರರ ಅವ್ವಂದಿರೇ ಸಾಕ್ಷಿಯಾದದ್ದು ಎಲ್ಲ ಆಟಗಾರರು ಕೆಲ ಕ್ಷಣ ಭಾವುಕರಾದರು.
ಮುಖಂಡ ಗಿರೀಶ್ ಮುಂದಡಾ ಅವರ ಮಾತೃಶ್ರೀ ಶೋಭಾ ಮುಂದಡಾ ಮಾತನಾಡಿ, ತಾಯಿ-ಮಕ್ಕಳ ಬಾಂಧವ್ಯ, ಮಕ್ಕಳ ಬಗ್ಗೆ ತಾಯಿಗಿರುವ ಮಮತೆ, ಕಾಳಜಿ ಕುರಿತು ತಿಳಿಸಿದ ಅವರು, ಮಕ್ಕಳಿಂದ ತಾಯಿ ಬಯಸೋದು ಒಂದೆರಡು ಹಿತನುಡಿಗಳನ್ನೇ ಹೊರತು ಹಣ, ಬಂಗಾರವನ್ನಲ್ಲ. ಯಾಕೆಂದರೆ ತಾಯಿಗೆ ತನ್ನ ಮಕ್ಕಳೇ ಬಂಗಾರ. ಇಲ್ಲಿರುವ ಎಲ್ಲರೂ ಬಂಗಾರವೇ ಎಂದಾಗ ಆಟಗಾರರ ಕಣ್ಣಂಚಲಿ ನೀರು ಜಿನುಗಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವರಾಜ ಕರುಗಲ್ ಅವರ ಮಾತೃಶ್ರೀ ಗಿರಿಜಮ್ಮ ಕರುಗಲ್ ಹಾಎ ಮುಂಜುನಾಥ ಅಜ್ಜನವರ ಮಾತೃಶ್ರೀ ರತ್ನಮ್ಮ ವಿಜೇತ ಆಟಗಾರರಿಗೆ ಪದಕ ಹಾಗೂ ಟ್ರೋಫಿ ವಿತರಿಸಿದರು. ಪೂನಂ ಮುಂದಡಾ ಹಾಗೂ ಶೋಭಾ ಮುಂದಡಾ ವಿಜೇತರಿಗೆ ಕಪ್ ಹಾಗೂ ರನ್ನರ್ ಅಪ್ ಪಾರಿತೋಷಕ ನೀಡಲು ಸಹಕರಿಸಿದರು.
ಟ್ರೋಫಿ ಎತ್ತಿ ಹಿಡಿಯುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದ ಮದರ್ ಥೇರೆಸಾ ತಂಡ, ಅಂತಿಮವಾಗಿ ಕಪ್ ಗೆದ್ದಾಗ ತಂಡದ ಆಟಗಾರರ ಸಂಭ್ರಮಕ್ಕೆ ಪಾರವಢ ಇರಲಿಲ್ಲ. ತಂಡದ ಆಟಗಾರ ಈರಣ್ಣ ಸಂಭ್ರಮಿಸಿದ ಪರಿ ನೆರೆದಿದ್ದ ಎಲ್ಲ ಆಟಗಾರರನ್ನು ರಂಜಿಸಿತು.
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಇದಕ್ಕಾಗಿಯೇ ಗೋ ಸಂತತಿ ಸಂರಕ್ಷಣೆಯ ಸಲುವಾಗಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಬಳಿಕ ಇದೇ ಮೊದಲ ಬಾರಿಗೆ ದುರುಳರು ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗಾಯಗೊಳಿಸಿರುವ ಅಮಾನವೀಯ ಘಟನೆ ನಗರದ ರಾಧಾಕೃಷ್ಣನ್ ನಗರದ ಬಳಿ ನಡೆದಿದೆ.
ಮೂರು ಆಕಳುಗಳ ಬಾಲ ಕತ್ತರಿಸುವ ಮೂಲಕ ಕಿರಾತಕರು ವಿಕೃತಿ ಮೆರೆದಿದ್ದಾರೆ. ಇನ್ನು ಕೆಚ್ಚಲು (ಮೊಲೆ) ಜಾಗಕ್ಕೂ ಮಾರಕಾಸ್ತ್ರಗಳಿಂದ ಗಾಯಗೊಳಿಸಿದ್ದು, ಕಳೆದ ಮೂರು ದಿನಗಳಿಂದ ಕರು ತಾಯಿಯ ಹಾಲು ಕುಡಿಯಲಾಗದೇ ಪರದಾಡುತ್ತಿದೆ. ಇತ್ತ ಆಕಳು ಕೂಡಾ ನರಳಾಡುತ್ತಿದೆ.
ಆಕಳಿಗೆ ಹೆರಿಗೆ ಆಗಿ ಮೂರೇ ದಿನದಲ್ಲಿ ತಾಯಿ ಹಾಗೂ ಕರು ದೂರವಗಿದ್ದು, ಗೋವಿನ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಅಮಾನವೀಯ ಘಟನೆಯು ಗೋ ರಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೇಲ್ವರ್ಗದ ಐದಾರು ಸಮುದಾಯಗಳಿಗೆ ನಿಗಮ ಹಾಗೂ ಅನುದಾನ ಮಂಜೂರ ಮಾಡುವುದರ ಮೂಲಕ ಅತೀ ಹಿಂದುಳಿದ ಹಾಗೂ ಸಣ್ಣ ಸಮುದಾಯಕ್ಕೆ ಪ್ರಾಮುಖ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷ ಡಾ.ಅಬ್ದುಲ್ರಝಾಕ್ ನದಾಫ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ 102 ಸಮುದಾಯಗಳು ಹಾಗೂ ಪ್ರವರ್ಗ-1ರಲ್ಲಿ 95 ಸಮುದಾಯಗಳು ಸರಕಾರದ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಅದರಲ್ಲಿ ಪಿಂಜಾರ್ ನದಾಫ ಮನ್ಸೂರಿ ದುದೇಕುಲ ಸಮುದಾಯವು ಒಂದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ಸಮಾಜಕ್ಕೆ ನಿಗಮದ ಜೊತೆಗೆ ಅನುದಾನ ನೀಡಿದೆ ಎಂದರು.
ಮತ ಬ್ಯಾಂಕ್ಗೊಸ್ಕರ ದೊಡ್ಡ ಸಮುದಾಯಕ್ಕೊಂದು ನಿಗಮ ಸ್ಥಾಪಿಸಿದರೆ, ಬಡ ಸಮುದಾಯಗಳು ಬಡವರಾಗಿ ಉಳಿಯುತ್ತವೆ. ಈಗಾಗಲೇ ಅನೇಕ ಸಣ್ಣ ಜನಾಂಗದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು, ಬಜೆಟ್ನಲ್ಲಿ ಅಂತಹ ಜನಾಂಗಗಳಿಗೆ ಅಪಮಾನ ಮಾಡಿದಂತಾಗಿದೆ. ಪಿಂಜಾರ ನದಾಫ ಮನ್ಸೂರಿ ದುದೇಕುಲ ಸಮುದಾಯಗಳು ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಮಾ.31ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಪಿಂಜಾರ್ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಮುಸ್ಲಿಂರ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಬ್ದುಲ್ರಝಾಕ್ ನದಾಫ ಒತ್ತಾಯಿಸಿದರು.
ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಮಾರ್ಚ್ 13 ಮತ್ತು 14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತೃಶ್ರೀ (ಅವ್ವ) ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ.
ಸಂಸ್ಥೆಯು ಪ್ರತಿ ಸಲ ವಿಭಿನ್ನ ಹೆಸರುಗಳ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿದ್ದು, ಈ ಸಲ ಮಹಿಳೆಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾತೃಶ್ರೀ (ಅವ್ವ) ಎಂಬ ಹೆಸರಿನಡಿ ವಿಜೇತ ತಂಡಗಳಿಗೆ ಕಪ್ ನೀಡಲಿದೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜಿಲ್ಲಾಧಿಕಾರಿ ಕಚೇರಿ ನೌಕರರ ಜೀಜಾ ಮಾತಾ ತಂಡ, ಎಸ್ಪಿ ಟಿ.ಶ್ರೀಧರ್ ನೇತೃತ್ವದ ಪೊಲೀಸ್ ಇಲಾಖೆಯ ನೌಕರರ ಕಿರಣ್ ಬೇಡಿ ತಂಡ, ಜಿಪಂ ಸಿಇಓ ರಘುನಂದನ್ ಮೂರ್ತಿ ನೇತೃತ್ವದ ಜಿಪಂ ನೌಕರರ ಅಮ್ಮ ತಂಡ, ವಕೀಲರ ಜಸ್ಟೀಸ್ ಭಾನುಮತಿ ತಂಡ, ಬಾಗಲಕೋಟೆ ಅತಿಥಿಗಳ ಅಕ್ಕಮಹಾದೇವಿ ತಂಡ ಹಾಗೂ ಸಂಸ್ಥೆಯ ಶ್ರೀನಿವಾಸ್ ಗೋಂಧಳಿ ನೇತೃತ್ವದ ದಾನ ಚಿಂತಾಮಣಿ ಅತ್ತಿಮಬ್ಬೆ ತಂಡ, ಸಿದ್ದು ನೇತೃತ್ವದ ಮದರ್ ಥೇರೇಸಾ ತಂಡ, ಚಂದ್ರಕಾಂತ ದೇಶಪಾಂಡೆ ನೇತೃತ್ವದ ಕಿತ್ತೂರುರಾಣಿ ಚನ್ನಮ್ಮ ತಂಡ, ವಿನೋದ್ಕುಮಾರ್ ನೇತೃತ್ವದ ಒನಕೆ ಓಬವ್ವ ತಂಡ ಹಾಗೂ ಸಲೀಲ್ ನೇತೃತ್ವದ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡಗಳು ಸೇರಿದಂತೆ ಒಟ್ಟು ಹತ್ತು ತಂಡಗಳು ಈ ಟೂರ್ನಮೆಂಟ್ನಲ್ಲಿ ಸೆಣಸಲಿವೆ.
ಮಾರ್ಚ್ 13ರಂದು ಬೆಳಗ್ಗೆ 7 ಗಂಟೆಗೆ ಟೂರ್ನಮೆಂಟ್ನ ಉದ್ಘಾಟನೆ ನಡೆಯಲಿದ್ದು, ಡಿಸಿ, ಎಸ್ಪಿ, ಕ್ಲಬ್ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್, ಮುಖ್ಯಸ್ಥ ಗಿರೀಶ್ ಮುಂಡಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಟೂರ್ನಮೆಂಟ್ನ ಮೊದಲ ಪಂದ್ಯ ಬೆಳಗ್ಗೆ 7-30ಕ್ಕೆ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
**-ಪರವಾಗಿಲ್ಲ, ***-ಚೆನ್ನಾಗಿದೆ, ****ತುಂಬಾ ಚೆನ್ನಾಗಿದೆ, *****-ಮಿಸ್ ಮಾಡ್ದೆ ನೋಡಿ
-ಬಸವರಾಜ ಕರುಗಲ್. ‘ಮನುಷ್ಯ ಹುಟ್ತಾನೆ ಕೆಟ್ಟವನು. ಅದಕ್ಕೆ ಭಗವದ್ಗೀತೆ, ಖುರಾನ್, ಬೈಬಲ್ನಂಥ ಕೃತಿಗಳು ಹುಟ್ಟಿಕೊಂಡಿದ್ದು. ಕೆಟ್ಟ ಮನುಷ್ಯನಲ್ಲಿ ಒಳ್ಳೇತನ ತುಂಬುವುದೇ ಇವುಗಳ ಉದ್ದೇಶ’-ಇದು ರಾಬರ್ಟ್ ಸಿನಿಮಾದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೇಳುವ ಡೈಲಾಗ್ ಹಾಗೂ ಚಿತ್ರದ ಒನ್ ಲೈನ್ ಸ್ಟೋರಿ ಸಹ ಎನ್ನಬಹುದು…
ದರ್ಶನ್ ಸಿನಿಮಾ ಎಂದಮೇಲೆ ಮಾಸ್ ಆಗಿರಬೇಕು ಎಂಬುದು ಅವರ ಸಿನಿಮಾ ನಿರ್ದೇಶನ ಮಾಡುವ ಬಹುತೇಕರ ಅಜೆಂಡಾ. ರಾಬರ್ಟ್ ಸಹ ಇದಕ್ಕೆ ಹೊರತಾಗಿಲ್ಲ. ದರ್ಶನ್ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡೇ ರಾಬರ್ಟ್ ತೆರೆಗೆ ಬಂದಿದ್ದಾನೆ. ಆದರೆ ಈ ಸಿನಿಮಾದಲ್ಲಿ ಹೊಡೆದಾಟ, ಬಡಿದಾಟಗಳಷ್ಟೇ ಮಹತ್ವವನ್ನು ಕಥೆಗೂ ನೀಡಲಾಗಿದೆ ಎಂಬುದನ್ನು ಹೇಳಬಹುದು. ಆದರೆ ಕಥೆ ಒಂದೇ ಗುಟುಕಿಗೆ ನಿಲುಕುವಂಥದ್ದಲ್ಲ. ವಿರಾಮದವರೆಗೂ ಸಿನಿಮಾದ ವೇಗ ಕ್ಲಾಸ್ ಮತ್ತು ಮಾಸ್ ವರ್ಗದವರನ್ನ ಹಿಡಿದಿಡುತ್ತದೆ. ವಿರಾಮದ ನಂತರ ಮಾಸ್ ದೃಶ್ಯಗಳಿಗೆ ಆದ್ಯತೆ ನೀಡಲಾಗಿದೆಯಾದರೂ ಸಾಗುವ ಕಥೆ, ಕ್ಲಾಸ್ ವರ್ಗದವರಿಗೂ ಇಷ್ಟವಾಗುತ್ತದೆ.
ಅವನೋ ತೊದಲು ಮಾತಿನವ. ಅವನ ಮಗನಿಗೂ ಅದೇ ಸಮಸ್ಯೆ. ತಾನಾಯಿತು ತನ್ನ ಕೆಲಸವಾಯಿತು. ಹಿಂಸೆ ಮಹಾಪಾಪ ಎಂಬ ಗಾಂಧಿ ತತ್ವವನ್ನು ನಂಬಿಕೊಂಡು ಬದುಕು ಸಾಗಿಸುವಾತ. ಮಗನೋ ತಮಗೆ ಯಾರಾದರೂ ಕೆಟ್ಟತನ ಬಗೆದರೆ ರಿವೇಂಜ್ ತಗೋಬೇಕು ಎಂಬ ಮನಸ್ಥಿತಿಯವ. ಯುದ್ಧ ಗೆಲ್ಲುವ ಶಕ್ತಿ ಇದ್ದರೂ ಬುದ್ಧನ ಬದುಕನ್ನು ರೂಢಿಸಿಕೊಂಡವ ರಾಘವ ಅಲಿಯಾಸ್ ರಾಬರ್ಟ್. ಅವನು ರಾಕ್ಷಸರನ್ನು ಸಂಹರಿಸುವ ಬ್ರಹ್ಮರಾಕ್ಷಸನಾಗಿದ್ದರೂ ಮಗನಿಗಾಗಿ ಬದಲಾವಣೆಗೊಂಡವ. ಮಗನ ಸಂತೋಷಕ್ಕಾಗಿ ಎಂಥ ಕಷ್ಟವನ್ನು ಸಹಿಸಿಕೊಳ್ಳಬಲ್ಲ, ಮಗನಿಗೆ ಗೊತ್ತಾಗದಿದ್ದರೆ ಎಂಥ ದೈತ್ಯರನ್ನೇ ಕ್ಷಣಾರ್ಧದಲ್ಲೇ ನೆಲಕ್ಕುರುಳಿಸಬಲ್ಲ ಚಾಣಾಕ್ಷ. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ ಕೋದಂಡರಾಮ. ಖಳರ ಪಾಲಿಗೆ ಚತುದರ್ಶಕ ಭುವನ ಭಯಂಕರನಾದ ಪ್ರಚಂಡ ರಾವಣ. ಮಗನ ಮುಂದೆ ಮಾತ್ರ ರಾವಣಾವತಾರ ಗೊತ್ತಾಗದ ಹಾಗೆಯೇ ಬದುಕಿಕೊಂಡ ಬಂದವ. ಯಾಕೆ ಹೀಗೇ ಎಂಬುದನ್ನ ಥೇಟರ್ನಲ್ಲೇ ನೋಡಿದರೆ ಚೆಂದ.
ಒಟ್ಟಾರೆ ಸಿನಿಮಾದ ಆರಂಭ ಶಿವಣ್ಣನ ಶ್ರೀರಾಮ್ ನೆನಪಿಸುತ್ತೆ. ಅಂತ್ಯ ಕಿಚ್ಚ ಸುದೀಪ್ನ ವೀರ ಮದಕರಿ ನೆನಪಿಸುತ್ತೆ. ಉಳಿದಂತೆ ವಿಷ್ಣುದಾದಾ ಅಭಿನಯದ ಕೋಟಿಗೊಬ್ಬ ಸಿನಿಮಾವನ್ನ ನೆನಪಿಸುತ್ತೆ. ಆದರೂ ಸಿನಿಮಾ ಈಗಿನ ಟ್ರೆಂಡ್ಗೆ ತಕ್ಕಂತಿದ್ದು, ಕಾಸಿಗಂತೂ ಮೋಸ ಮಾಡಲ್ಲ. ಆರಂಭದಿಂದ ಅಂತ್ಯದವರೆಗೂ ಎಲ್ಲೂ ಬೋರ್ ಆಗದ ಹಾಗೆ ಸಿನಿಮಾ ಸಾಗುತ್ತದೆ. ಸಿನಿಮಾದಲ್ಲಿ ಗೆಳೆತನ, ತಂದೆ-ಮಗನ ಸೆಂಟಿಮೆಂಟ್ ಇದೆ. ಗ್ಯಾಂಗ್ ವಾರ್ಗಳಿವೆ. ಕಾಮಿಡಿ ಬೆರೆಸಿದ ಕ್ಲೈಮಾಕ್ಸ್ ಫೈಟ್ ಇದೆ. ಸಿಂಪಲ್ಲಾಗಿ ಹೇಳಬೇಕಂದ್ರೆ ಎಲ್ಲ ಥರದ ಮಸಾಲೆ ಬೆರೆಸಿ ರುಚಿಕಟ್ಟಾದ, ತಲೆ ಹಿಡಿಯದಂಥ, ನಾಲಿಗೆ ಮತ್ತೇ ಮತ್ತೇ ಬೇಡುವ ಬೆಸ್ಟ್ ಬಿರಿಯಾನಿಯಂತಿದ್ದಾನೆ ರಾಬರ್ಟ್. ಚಿಕನ್ ಬೇಕಾದವರು ಪ್ರತ್ಯೇಕವಾಗಿ ಚಿಕನ್ ತೆಗೆದುಕೊಳ್ಳಬಹುದು. ಅದನ್ನ ನಾಯಕನೇ ಬೇಕಾದರೂ ಮಾಡಿಕೊಡಬಲ್ಲ. ಯಾಕೆಂದರೆ ಚಿತ್ರದಲ್ಲಿ ನಾಯಕನದ್ದು ಅಡುಗೆ ಭಟ್ಟನ ಪಾತ್ರ. ತಿಥಿ ಊಟಕ್ಕೆ ಫೇಮಸ್ ಆಗಿರುವ ಆತನದ್ದೇ ಕ್ಯಾಟರಿಂಗ್ ಗ್ಯಾಂಗ್ ಇದೆ. ವೆಜ್ ಊಟಕ್ಕೆ ಇದು ಎಲ್ಲ ಕಡೆ ಪ್ರಸಿದ್ಧಿ. ದೃಶ್ಯವೊಂದರಲ್ಲಿ ಖಳರಿಗೆ ನಾನ್ ವೆಜ್ ಅಡುಗೆ ಸಹ ಮಾಡಿಕೊಡುತ್ತಾನೆ. ಕ್ಯಾಟರಿಂಗ್ ತಾತಾ ಇದನ್ನ ವಿರೋಧಿಸಿದರೆ ಮಡಿ-ಮೈಲಿಗೆಗಿಂತ ಮನುಷ್ಯತ್ವ ದೊಡ್ಡದು ಯಜಮಾನ್ರೆ ಎಂದು ಬುದ್ಧನಂತೆ ಮಾತನಾಡುತ್ತಾನೆ.
ಉಮಾಪತಿ ನಿರ್ಮಾಪಕನ ಜಾಗದಲ್ಲಿ ನಿಂತು ಚಿತ್ರ ನಿರ್ಮಾಣ ಮಾಡಿದ್ದಾರೆ. ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ಸಿನಿಮಾ ಬಿಡುಗಡೆಗೆ ಭಾರಿ ಮೊತ್ತದ ಆಫರ್ ಬಂದ್ರೂ ಅದನ್ನ ತಿರಸ್ಕಾರ ಮಾಡಿ ಥೇಟರ್ನಲ್ಲಿ ರಿಲೀಜ್ ಮಾಡಿದ್ದಾರೆ. ಚಿತ್ರದ ಮೇಲೆ ಅವರಿಗಿದ್ದ ವಿಶ್ವಾಸ ನಿಜ ಎನ್ನುವಷ್ಟರ ಮಟ್ಟಿಗೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ರಾಬರ್ಟ್ ದೊಡ್ಡ ಕ್ಯಾನ್ವಾಸ್ ಆಗಿರೋದ್ರಿಂದ ಚಿತ್ರದಲ್ಲಿ ಕಲಾವಿದರ ದೊಡ್ಡ ಬಳಗವೇ ಇದೆ. ಅದರಲ್ಲೂ ಜಗಪತಿಬಾಬು ಹಾಗೂ ಕಣ್ ಹೊಡಿಯಾಕ.. ಅವತರಣಿಕೆಯ ತೆಲುಗು ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿ ತೆಲುಗು ಚಿತ್ರರಂಗದಲ್ಲೂ ಸುಮಾರು 500 ಪರದೆಗಳ ಮೇಲೆ ತೆಲುಗಿನ ರಾಬರ್ಟ್ ಆರ್ಭಟ ಶುರುವಾಗಿದೆ. ಕಾಮಿಡಿಯಲ್ಲಿ ಚಿಕ್ಕಣ್ಣನಿಗೆ ಸ್ಕೋಪ್ ಕಡಿಮೆ ಇದ್ದರೂ ಚಿಕ್ಕಣ್ಣ ಮಾತ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ಕಾಮಿಡಿ ಆ್ಯಕ್ಟರ್ ಶಿವರಾಜ.ಕೆ.ಆರ್. ಪೇಟೆಗೆ ಒಳ್ಳೇ ರೋಲ್ ಸಿಕ್ಕಿದೆ. ಶಿವರಾಜ್ ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ರವಿಕಿಶನ್, ರವಿಶಂಕರ್, ಅಶೋಕ, ಅವಿನಾಶ್, ದೇವರಾಜ್ ಮತ್ತಿತರರ ಅಭಿನಯದ ಬಗ್ಗೆ ಎರಡೂ ಮಾತಿಲ್ಲ.
ಮರಿಟೈಗರ್ ವಿನೋದ್ ಪ್ರಭಾಕರ್ ಪಾತ್ರ ಸಿನಿಮಾದ ಜೀವಾಳ ಎನ್ನಬಹುದು. ವಿನೋದ್ ತೆರೆಯ ಮೇಲೆ ಬಹಳ ಹೊತ್ತು ಕಾಣಿಸುವುದಿಲ್ಲವಾದರೂ ಸಿನಿಮಾದ ಕಥೆಯ ಮುಖ್ಯ ಸ್ತಂಭದಂತೆ ಪಾತ್ರ ರಚಿಸಲಾಗಿದೆ. ಅದಕ್ಕೆ ವಿನೋದ್ ನಿಸ್ಸಂಶಯವಾಗಿ ಜೀವ ತುಂಬಿದ್ದಾರೆ. ನಾಯಕಿಯರಾಗಿ ಆಶಾಭಟ್, ಸೋನಲ್ ನೋಡಲು, ಕುಣಿಯಲು ಚಂದವೋ ಚಂದ. ನಟನೆಯ ವಿಷಯದಲ್ಲೂ ನೋ ಕಾಮೆಂಟ್ಸ್. ಹಾಡುಗಳ ಬಗ್ಗೆ ಹೇಳೋದೇ ಬೇಡ. ಒಂದಕ್ಕಿಂತ ಒಂದು ಹಾಡುಗಳು ಸೂಪರ್ ಆಗಿವೆ. ಹರಿಕೃಷ್ಣ ರಾಗ ಸಂಯೋಜನೆ ಮತ್ತೊಮ್ಮೆ ಗೆದ್ದಿದೆ. ಚಿತ್ರದ ಡೈಲಾಗ್ಸ್ ಮಾಸ್ ಆಡಿಯನ್ಸ್ಗೆ ಹಬ್ಬ. ರಾಬರ್ಟ್ನ ಅಂದಗಾಣಿಸಲು ಸಿನಿಮಾಟೋಗ್ರಾಫರ್ ಸುಧಾಕರ ಶ್ರಮ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಹಾಗಂತ ಸಿನಿಮಾದಲ್ಲಿ ನೆಗೆಟಿವ್ ಅಂಶಗಳೇ ಇಲ್ಲ ಅಂತಲ್ಲ. ಪಾಸಿಟಿವಿಟಿ ಮುಂದೆ ಲಾಜಿಕ್ ಇಲ್ಲದ ನೆಗೆಟಿವ್ ಥಾಟ್ಸ್ ಲೆಕ್ಕಕ್ಕೆ ಬರಲ್ಲ.
ಲಾಸ್ಟ್ ಪಂಚ್: ಇಬ್ಬರು ಗೆಳೆಯರ ನಡುವೆ ನಡೆಯುವ ವಾಗ್ಯುದ್ಧದಲ್ಲಿ ಬರುವ ಮನುಷ್ಯರನ್ನ ಸೈನೈಡ್ಗಿಂತ ಫಾಸ್ಟ್ ಆಗಿ ಸಾಯಿಸೋದು ನೆಗೆಟಿವ್ ಥಾಟ್ಸ್ ..
ಫೈನಲಿ ಈ ರಾಬರ್ಟ್ ಕೆಲವರ ಲೈಫ್ನಲ್ಲಿ ವಿಲನ್ ಆಗಿರೋ ಹಲವರ ಲೈಫ್ನ ಹೀರೋ ಎನ್ನಬಹುದು. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಪ್ಯಾಕೇಜ್ಡ್ ಮೂವಿ ರಾಬರ್ಟ್.
ರೇಟಿಂಗ್: **** ಚಿತ್ರ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ ಅವರ ನೇತೃತ್ವದಲ್ಲಿ ವಾರ್ಡ ನಂ.54 ರ ಮುಲ್ಲಾನ ಓಣಿ ಮುಖಂಡರಾದ ಅಬ್ದುಲ ಮುನಾಫ ಐನಾಪುರಿ ಎಂಬುವವರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುಸ್ಲಿಂ ಜಮಾತ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಹೌದು ಮುಸ್ಲಿಂ ಸಮುದಾಯದ ಮುಖಂಡರು ಬಿಜೆಪಿ ಸೇರಿದ್ದಕ್ಕೆ ವಕ್ಪ್ ಬೋರ್ಡ್ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ವಿಜಯಸಾಕ್ಷಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಅವರು, ಯಾವುದೇ ಬೈಲಾದಲ್ಲಿ ಕೂಡ ಮುಸ್ಲಿಂರು ಇದೇ ಪಕ್ಷದಲ್ಲಿ ಇರಬೇಕು ಎಂಬುದು ಕಡ್ಡಾಯವಲ್ಲ. ನಾನು ಸ್ವಯಂ ಪ್ರೇರಿತವಾಗಿ ಬಿಜೆಪಿ ಸೇರಿದ್ದಕ್ಕೆ ನನಗೆ ಅಂಗಡಿ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮುಲ್ಲಾನ ಓಣಿ, ಕೌಲಪೇಟ ಸುತ್ತಮುತ್ತಲಿನ ಮುಸಲ್ಮಾನ ಮುಖಂಡರು ಹಾಗೂ ಪೂರ್ವ ಕ್ಷೇತ್ರದ ಮುಸಲ್ಮಾನ ಮುಖಂಡರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಸಮ್ಮುಖದಲ್ಲಿ, ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ದಾಂತ ಮೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ.
ವಿಜಯಸಾಕ್ಷಿ ಸುದ್ದಿ ಗಂಗಾವತಿ
ಪ್ರತಿಷ್ಠಿತ ಮನೆತನಕ್ಕೆ ಸೇರಿದ ವೃದ್ಧೆಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಕಳೇಬರ ಹೊರ ತೆಗೆದು ಮಹಜರು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿ ಪುರಸಭೆ ಮಾಜಿ ಅಧ್ಯಕ್ಷ ಅಮರಜ್ಯೋತಿ ದುರುಗಪ್ಪ ಎಂಬುವರ ಪತ್ನಿ ಶಿವಮ್ಮ, ಮಾರ್ಚ್ 5ರಂದು ಸಾವನ್ನಪ್ಪಿದ್ದರು. ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದ ಕುಟುಂಬಸ್ಥರು ವಿದ್ಯಾನಗರದ ರೈಲ್ವೆ ಸಿಬ್ಬಂದಿ ವಸತಿ ಗೃಹದ ತಮ್ಮ ಜಮೀನಿನ ಬಳಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದರು.ಆದರೆ ಮೃತರ ಮನೆಯಲ್ಲಿನ ಅರ್ಚಕ ಹಾಗೂ ಮನೆಯ ಸಹಾಯಕ ಸೇರಿ, ಮನೆಯಲ್ಲಿ ಕಳ್ಳತನ ಮಾಡುವ ಸಂದರ್ಭದಲ್ಲಿ ವೃದ್ಧೆ ಗಮನಿಸಿದ್ದಾರೆ. ಈ ವೇಳೆ ಆಕೆಗೆ ಬಾತ್ ರೂಂ ಕ್ಲೀನ್ ಮಾಡುವ ಬ್ರಷ್ ಹಿಡಿಕೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅನುಮಾನಗೊಂಡ ಮನೆಯವರು, ಅರ್ಚಕ ಸರ್ವಜ್ಞ ಹಾಗೂ ಮನೆಯ ಸಹಾಯಕ ಗಣೇಶ ಎಂಬುವವರ ಮೇಲೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ವಾಸ್ತವ ಬಯಲಿಗೆ ಬಂದಿದೆ.ಆದರೆ ಪ್ರಕರಣ ದಾಖಲಾಗುವ ಹೊತ್ತಿಗೆ ಮೃತರ ಅಂತ್ಯಸಂಸ್ಕಾರ ನೆರವೇರಿದೆ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಹೂಳಲಾಗಿದ್ದ ಶವ ಹೊರ ತೆಗೆದು ವಿಧಿವಿಜ್ಞಾನದ ತಜ್ಞ ವಿನೋದ್ ಎಂಬುವವರ ನೇತೃತ್ವದಲ್ಲಿ ಶವಪರೀಕ್ಷೆ ನಡೆಸಿ ಸ್ಯಾಂಪಲ್ ಸಂಗ್ರಹಿಸಿದರು