Home Blog Page 3063

ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ರೈತರ ವಿನೂತನ ಆವಿಷ್ಕಾರ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ.
ಒಂದು ಎಕರೆ ಭತ್ತದ
ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ.‌ ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ ಸಿಂಪರಣೆ ಸಾಧ್ಯವಿದೆ‌. ಇದರಿಂದ ಹಣ, ಸಮಯ, ಮಾನವ ಸಂಪನ್ಮೂಲ ಉಳಿಸಲು ಸಾಧ್ಯವಿದೆ.
ಈಗಾಗಲೇ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯದ ರೈತರು ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಡ್ರೋಣ್ ನಲ್ಲಿ 11 ಲೀಟರ್ ಕ್ರಿಮಿನಾಶಕ ಹಾಕಿ ಮೊದಲು ಜಿಪಿಎಸ್ ಮಾಡಿ ರಿಮೋಟ್ ಮೂಲಕ ಚಾಲನೆ ಮಾಡುತ್ತ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತದೆ. ಒಂದು ಎಕರೆಗೆ 600 ರೂ.ಬಾಡಿಗೆ ಇದ್ದು 7 ನಿಮಿಷಗಳಲ್ಲಿ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.
ರೈತರಿಗೆ ಉಪಯುಕ್ತ: ಡ್ರೋಣ್ ಮೂಲಕ ಭತ್ತ ಸೇರಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೆಚ್ಚದಾಯಕವಾಗಿದ್ದು ಬೇರೆ ರಾಜ್ಯಗಳಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ. ಈ ಬಾರಿ ಬಾಡಿಗೆ ಆಧಾರದಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ ಇದರಿಂದ ಕೂಲಿ ಆಳಿನ ಕೊರತೆಯಿಂದ ಬೇಸತ್ತ ರೈತರಿಗೆ ಹಣ ಸಮಯ‌ ಉಳಿತಾಯವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ

ಲಾರಿ-ಟ್ರ್ಯಾಕ್ಟರ್ ಅಪಘಾತ; ಲಾರಿ ಚಾಲಕ ಸಾವು

0

ವಿಜಯಸಾಕ್ಷಿ ಸುದ್ದಿ, ಕುಕನೂರು:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ವೇಳೆ ಚಲಿಸುತ್ತಿರುವ ಲಾರಿಯಿಂದ ಹೊರಗೆ ಹಾರಿದ ಚಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಚಾಲಕನನ್ನು ಮಣಿಕಂಠ (34) ಎಂದು ಗುರುತಿಸಲಾಗಿದೆ.

ಲಾರಿಯಿಂದ ಸುಮಾರು ‌ಅರ್ಧ ಕಿ.ಮೀ. ಹೊರಗೆ ಹಾರಿ ಹೋಗಿರೋ ಚಾಲಕ ಮಣಿಕಂಠ, ಲಾರಿ‌ಯಿಂದ ಸಿಡಿದು ಸುಮಾರು 300 ಮೀ. ದೂರಕ್ಕೆ ಬಿದ್ದಿದ್ದಾನೆ.

ಕಲ್ಲು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ‌ ಹೊಡೆದಿದೆ.
ಟ್ರ್ಯಾಕ್ಟರ್ ರಸ್ತೆ ಕ್ರಾಸ್ ಮಾಡುವಾಗ ಅಪಘಾತ ಸಂಭವಿಸಿದ್ದು, ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ನಿಧನ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇಲ್ಲಿನ ನಿವೃತ್ತ ವಾರ್ತಾಧಿಕಾರಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭೀ.ಆಕಳವಾಡಿ (70) ಫೆ.15 ಸೋಮವಾರ ನಸುಕಿನ ಪೂರ್ವದಲ್ಲಿ ರಾತ್ರಿ 1.30 ಕ್ಕೆ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಬೇನಾಳ ( ಆರ್.ಎಸ್ ) ಗ್ರಾಮದಲ್ಲಿ ಸೋಮವಾರ ಫೆ.15 ರಂದು ಮಧ್ಯಾಹ್ನ ಜರುಗಲಿದೆ.
ಕುಟುಂಬ ಸದಸ್ಯರ ಸಂಪರ್ಕ ಸಂಖ್ಯೆ : ಸಂಪತ್ ಕುಮಾರ್ ಆಕಳವಾಡಿ- 7795520282

೨ಎ ಮೀಸಲಾತಿ ಹೋರಾಟ ಸ್ವಾಗತಾರ್ಹ, ಸಿದ್ರಾಮಯ್ಯ ತಮ್ಮ ಅನುಭವವನ್ನು ಬಿಜೆಪಿ ಮೇಲೆ ಹಾಕ್ತಿದ್ದಾರೆ: ಸಚಿವ ಸಿ.ಸಿ.ಪಾಟೀಲ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಯಾವ ಕಡೆ ಇದ್ದಾರೆ, ಉಳಿದವರು ಯಾವ ಕಡೆ ಅದಾರೆ ಎಂಬುವುದೇ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಜಿ.ಪರಮೇಶ್ವರ್ ಅಂತೂ ಇತ್ತೀಚೆಗೆ ಎಲ್ಲೂ ಕಾಣಿಸುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿಲ್ಲ. ಮೂರು ಮನೆ ಕೂಡಿಸಿ ಇನ್ನೂ ದೊಡ್ಡದು ಮಾಡಿಕೊಳ್ಳುತ್ತೇವೆ ಎಂದು
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮೇಲಿನಂತೆ ಮಾತನಾಡಿದರು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಮೀಸಲಾತಿಯಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲು
ಸರಕಾರಕ್ಕೆ ಸಮಯಾವಕಾಶ ಕೊಡಬೇಕು. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಮೀಸಲಾತಿಗೆ ಪೂರಕವಾಗಿರುವ ಕಾನೂನಾತ್ಮಕ ಹೆಜ್ಜೆ ಇಟ್ಟಿದ್ದಾರೆ. ೨ಎ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಬರೆದಿದ್ದಾರೆ. ಸ್ವಾಮೀಜಿಗಳು ಅವಸರ ಮಾಡುವ ಅವಶ್ಯಕತೆ ‌ಇಲ್ಲ. ಪೂಜ್ಯರು ಪರಿಸ್ಥಿತಿ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸಿಎಂ ಯಡಿಯೂರಪ್ಪ ಮಾತಿನಂತೆ ನಾನು ಮತ್ತು ಸಚಿವ ಮುರಗೇಶ ನಿರಾಣಿಯವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಸ್ವಾಮೀಜಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರು, ದ್ರಾಕ್ಷಾರಸ‌ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೇಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಬಿಜೆಪಿಯ ಹಿರಿಯ ಮುಖಂಡ ಕರಿಗೌಡ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಇದ್ದರು.

ಬಸ್ ನಿಲ್ದಾಣದಲ್ಲಿ ರೌಡಿಸಂ ಪ್ರದರ್ಶಿಸಿದ ವಿದ್ಯಾರ್ಥಿಗೆ ಪೇದೆಯಿಂದ ಕಪಾಳಮೋಕ್ಷ

ವಿಜಯಸಾಕ್ಷಿ ಸುದ್ದಿ, ಗದಗ

ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿ ಉಡಾಳ ವಿದ್ಯಾರ್ಥಿಯೊಬ್ಬನಿಗೆ ಪೊಲೀಸಪ್ಪ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ತನ್ನ ಪಾಡಿಗೆ ತಾನು ಕುಳಿತಿದ್ದ ವಿದ್ಯಾರ್ಥಿಗೆ ಇನ್ನೋರ್ವ ವಿದ್ಯಾರ್ಥಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲೇ ಇದ್ದ ನಿಯಂತ್ರಾಣಾಧಿಕಾರಿ ಸುಮ್ಮನಿದ್ದ ವಿದ್ಯಾರ್ಥಿಗೆ ಯಾಕೆ ಹೊಡೀತಿಯಾ? ಬಾ ಪೊಲೀಸ್ ಸ್ಟೇಷನ್ ಗೆ ಹೋಗೋಣವೆಂದು ಎಳೆದಾಡಿದ್ದಾರೆ.

ಖಾಸಗಿ ಕಾಲೇಜ್ ‌ಹಾಗೂ ಸರಕಾರಿ ಕಾಲೋಜಿನ ವಿದ್ಯಾರ್ಥಿಗಳಿಬ್ಬರ ಮಧ್ಯೆ ಜಗಳ ನಡೆದಿದ್ದು, ಗೊತ್ತು ಪರಿಚಯವಿಲ್ಲದ
ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಯನ್ನು ಕರೆದು ಸರಕಾರಿ ಕಾಲೇಜಿನ ವಿದ್ಯಾರ್ಥಿ ಥಳಿಸಿದ್ದಾನೆ.

ಸುಖಾಸುಮ್ಮನೆ ಕಾರಣವಿಲ್ಲದೇ ಥಳಿಸಿದ ಸರಕಾರಿ ಕಾಲೇಜು ವಿದ್ಯಾರ್ಥಿಗೆ ಟ್ರಾಫಿಕ್ ಪೊಲೀಸರೊಬ್ಬರು ರೌಡಿಸಂ ಪ್ರದರ್ಶಿಸಿದ ಉಡಾಳ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ್ದಾರೆ.

ರೌಡಿಸಂ ಮಾಡ್ತೀಯಾ? ಗೂಂಡಾಗಿರಿ ಮಾಡ್ತೀಯಾ ಎಂದು ಕಪಾಳಮೋಕ್ಷ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ. ಸಂಚಾರಿ ಠಾಣೆಯ ಪೇದೆಯ ಈ ಬುದ್ದಿ ಮಾತಿಗೆ ನೆರೆದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ನೆರವು ಮುಂದುವರಿಕೆ, ವಿವಿಗಳಲ್ಲಿ ಅಧ್ಯಯನ ಪೀಠ: ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಾರ್ಯನಿರತ ಪತ್ರಕರ್ತರಾಗಿದ್ದು ಅನಾರೋಗ್ಯ ಅಥವಾ ಸಾವಿಗೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಗರಿಷ್ಠ 5 ಲಕ್ಷ ರೂ ನೀಡುತ್ತಿರುವ ನೆರವನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ನಿಯೋಗದ ಮನವಿಯನ್ನು‌ ಸ್ವೀಕರಿಸಿದ ಮುಖ್ಯಮಂತ್ರಿಗಳು, ಪತ್ರಕರ್ತರ ಕಲ್ಯಾಣಕ್ಕೆ ಪೂರಕವಾದ ಬೇಡಿಕೆಗಳ ಈಡೇರಿಕೆಗೆ ಬಜೆಟ್ ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ ಹಾಲಿ ನೀಡಲಾಗುತ್ತಿರುವ ನೆರವನ್ನು ಮುಂದುವರೆಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವಿಜಯಪುರ ವಿವಿಯಲ್ಲಿ ಹಿರಿಯ ಪತ್ರಕರ್ತರಾದ ಮೊಹರೆ ಹಣುಮಂತರಾಯ ಬೆಂಗಳೂರು ವಿವಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಮತ್ತು ಧಾರವಾಡ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಪತ್ರಕರ್ತರಾದ ಪಾಟೀಲ್ ಪುಟ್ಟಪ್ಪ (ಪಾಪು) ಅವರ ಹೆಸರಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಆಧ್ಯಯನ‌ಪೀಠ ಸ್ಥಾಪಿಸಬೇಕೆಂಬ ಸಂಘದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಹಣಕಾಸು ಸ್ಥಿತಿ ನೋಡಿ ನೆರವು, ಬಸ್ ಪಾಸ್, ಜಾಹೀರಾತು ಹಣ ಶೀಘ್ರ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ನಿಯೋಗದಲ್ಲಿ ಕೆಯುಡಬ್ಲ್ಯಜೆ ಪ್ರಧಾನ ಕಾರ್ಯದರ್ಶಿ ಲೊಕೇಶ್, ನಿರ್ದೇಶಕರಾದ ಎನ್.ರವಿಕುಮಾರ್, ಜೆ.ಆರ್.ಕೆಂಚೇಗೌಡ, ಚೆಲುವರಾಜ್, ದೇವೇಂದ್ರಪ್ಪ ಕಪನೂರು, ಸೋಮಶೇಖರ ಕೆರಗೋಡು, ಮುನಿಕೃಷ್ಣಪ್ಪ, ಗಣಪತಿ ಗಂಗೊಳ್ಳಿ, ದೇವರಾಜು, ತೇಜಸ್ವಿನಿ, ರಶ್ಮಿಪಾಟೀಲ್ ಮೊದಲಾದವರಿದ್ದರು.

ಟಾಟಾ ಏಸ್ ಮಗುಚಿ ಬಿದ್ದು ಸ್ಥಳದಲ್ಲೇ ಓರ್ವ ಸಾವು; ಐದು ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಚಾಲಕನ‌ ನಿಯಂತ್ರಣ ತಪ್ಪಿದ ಪರಿಣಾಮ ಟಾಟಾ ಏಸ್ ಗಾಡಿ ಮಗುಚಿ ಬಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಐದು ಜನರಿಗೆ ಗಾಯಗಾಳಗಿರುವ ಘಟನೆ ತಾಲೂಕಿನ ಅಕ್ಕಿಗುಂದ ಗ್ರಾಮದ ಬಳಿ ನಡೆದಿದೆ.

ಮೃತ ದುರ್ದೈವಿಯನ್ನು 65 ವರ್ಷದ ರೂಪ್ಲಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಅಕ್ಕಿಗುಂದ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಐದು ಜನರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಭೆ ನಡೆಯುವಾಗ ಮೊಬೈಲ್ ಹಾಗೂ ನಿದ್ದೆಯಲ್ಲಿ ಬ್ಯುಸಿಯಾದ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.

ಆರೋಗ್ಯ, ಶಿಕ್ಷಣ ಇಲಾಖೆಗಳ ಪ್ರಗತಿಯ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ, ಬಹುತೇಕ ಇನ್ನುಳಿದ ಇಲಾಖೆಯ ಅಧಿಕಾರಿಗಳು ಸಭೆಗೂ ನಮಗೂ ಸಂಬಂಧವಿಲ್ಲವೆಂಬಂತೆ ಮೊಬೈಲ್ ನಲ್ಲಿ ತಲ್ಲೀನರಾಗಿದ್ದರು.

ವಿಷಯದ ಗಂಭೀರತೆ ಅರಿಯದ ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ಅವರದೊಂದಿಗೆ ಕೆಲ ಜಿಲ್ಲಾ ಪಂಚಾಯತಿ ಸದಸ್ಯರೂ ಸಹಿತ ಮೊಬೈಲ್ ನಲ್ಲಿ ಮಗ್ನರಾಗಿದ್ದು, ಸಭೆಯ ಉದ್ದೇಶಕ್ಕೆ ತಣ್ಣೀರು ಎರಚಿದರು.

ಇನ್ನು ಜಿಲ್ಲೆಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಬೇಕಾಗಿದ್ದ, ಎಸಿ ಹಾಲ್ ನಲ್ಲಿ ಕೂತಿದ್ದ ಅಧಿಕಾರಿ ಮಹೋದಯರು ನಿದ್ದೆಗೆ ಜಾರುವ ಮೂಲಕ ಬೇಜವಾಬ್ದಾರಿತನದಿಂದ ವರ್ತಿಸಿದರು.

ಜನರ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಹೀಗೆ ಮೊಬೈಲ್ ನೋಡುತ್ತಾ, ನಿದ್ದೆ ಮಾಡುತ್ತಾ ಇದ್ದರೆ, ಜನರ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಅಂತ ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲು ವಿರೋಧ ಪಕ್ಷದ ನಾಯಕರಾಗಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯಸಭೆಯ ಸಭಾಪತಿಗೆ ಪತ್ರ ಬರೆದಿದೆ.

ಗುಲಾಂ ನಬಿ ಆಜಾದ್ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಸದಸ್ಯತ್ವದಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್, “ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ, ನಾನೊಬ್ಬ ಹಿಂದುಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನನಗೆ ಜನರ ಪ್ರೀತಿ ದೊರೆತಿದೆ” ಎಂದು ಹೇಳಿದ್ದರು.

ಕಳೆದ ವಾರ ರಾಜ್ಯಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ಗುಲಾಂ ನಬಿ ಆಜಾದ್ ಬಗ್ಗೆ ಪ್ರಸ್ತಾಪಿಸುವಾಗ ಕಣ್ಣೀರು ಹಾಕಿದ್ದರು.

ವರದಿ ಡಾ.ಅಬ್ದುಲ್ ರಜಾಕ್

ಸಿದ್ರಾಮಯ್ಯರ ಆರೋಪದ ಹಿಂದೆ ಸಿಎಂ ಖುರ್ಚಿಯ ಕನಸಿದೆ: ಸಚಿವ ಶ್ರೀರಾಮುಲು ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರದ ವಿರುದ್ಧ ಸಿದ್ದರಾಮಯ್ಯ ಅವರು ಮಾಡುತ್ತಿರುವ ಆರೋಪದ ಹಿಂದೆ ಸಿಎಂ ಖುರ್ಚಿಯ ಕನಸಿದೆ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿಎಂ ಸ್ಥಾನಕ್ಕೆ ನೆಗೆಯಬೇಕೆಂದು ಹಾತೊರೆಯುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ವ್ಯಂಗ್ಯವಾಡಿದರು.

ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆರೋಪದಲ್ಲಿ ಹುರುಳಿಲ್ಲ. ರಾಜ್ಯ ಸರಕಾರ ಜನರ ಹಿತದೃಷ್ಟಿಗಾಗಿ ಕೆಲಸ‌ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷದಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಮಧ್ಯೆ ಪೈಪೋಟಿ ಇದೆ. ಅವರಲ್ಲೇ ಸರಿಯಾಗಿ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಮೊದಲು ‘ಅಹಿಂದ’ ಅಂದ್ರು, ಈಗ ‘ಹಿಂದ’ ಎನ್ನುತ್ತಿದ್ದಾರೆ. ಮತ್ತೊಮ್ಮೆ ಅಹಿಂದ ವರ್ಗಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೆರೆ ಹಾವಳಿ, ಕೊರೊನಾ ಸೋಂಕು ಇದ್ದಿರಲಿಲ್ಲ. ಆದರೂ,
ಬರಗಾಲ, ಕೊರೊನಾ, ನೆರೆ ಹಾವಳಿಯಲ್ಲೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ.
ಸರಕಾರ ಡಕೋಟಾ ಎಕ್ಸ್‌ಪ್ರೆಸ್‌ ಅಲ್ಲ, ಎಲ್ಲ ಕಡೆಗೂ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನಮ್ಮ ಸರಕಾರ ರಾಜ್ಯದ ಅಭಿವೃದ್ಧಿ ಪರವಾಗಿದೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಇಂದು ಬಾದಾಮಿಯಲ್ಲಿ 19.5 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಸಿದ್ದರಾಮಯ್ಯ ಅವರೊಂದಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೇ, ಮಸ್ಕಿಯಲ್ಲೂ 25 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸರಕಾರ ಬದ್ಧವಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.

error: Content is protected !!