Home Blog Page 3062

ಕಾನೂನು ಬಾಹಿರ ಚಟುವಟಿಕೆ: ಗದಗ ಜಿಲ್ಲೆಯ ಮೂವರು ಸಮಾಜಘಾತುಕರ ಗಡಿಪಾರು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಈರಣ್ಣ ಶಂಕರಪ್ಪ ಸೀಮಿಕೇರೆ, ಶಿವನಗೌಡ ವೀರನಗೌಡ ಪಾಟೀಲ್ ಹಾಗೂ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮುಸ್ತಾಕ್ ಜಿನ್ನಾಸಾಬ್ ದೊಡ್ಡಮನಿ ಗಡಿಪಾರಾದ ಮಟಕಾ ಬುಕ್ಕಿಗಳಾಗಿದ್ದಾರೆ.

ಸಮಾಜಕ್ಕೆ ಧಕ್ಕೆ ಹಾಗೂ ಸ್ವಾಸ್ಥ್ಯ ಹಾಳು ಮಾಡುವಂತ ಒಸಿ/ ಮಟಕಾ ಜೂಜಾಟದಲ್ಲಿ ತೊಡಗಿದ್ದ ಹಾಗೂ ಜನರನ್ನು ಪ್ರೇರೇಪಿಸುವಂತ ಮೂವರು ವ್ಯಕ್ತಿಗಳನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ, ಗದಗ ಎಸ್ಪಿ ಯತೀಶ್ ಎನ್ ಆದೇಶ ಹೊರಡಿಸಿದ್ದಾರೆ.

ಇವರ ಗಡಿಪಾರು ಆದೇಶ ಮಾಡಿರುವ ಗದಗ ಎಸ್ಪಿ ಯತೀಶ್ ಎನ್, ಇವರು ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಹಾನಿ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಲ್ಲದೇ, ಕಾನೂನಿನ ಭಯವಿಲ್ಲದೇ ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿಕೊಂಡ ಬಂದ ಹಿನ್ನೆಲೆಯಲ್ಲಿ ಇವರನ್ನು ಗಡಿಪಾರು ಮಾಡಲಾಗಿದೆ ಎಂದಿದ್ದಾರೆ.

ಗಡಿಪಾರಾದ ವ್ಯಕ್ತಿಗಳಲ್ಲಿ ಈರಣ್ಣ ಸೀಮಿಕೆರಿ ಮೇಲೆ 5 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ಈತನನ್ನು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಗಡಿಪಾರು ಮಾಡಲಾಗಿದೆ. ಶಿವನಗೌಡ ಪಾಟೀಲ್ ನಿಗೂ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಮುಸ್ತಾಕ್ ದೊಡ್ಡಮನಿಗೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬಳ್ಳಾರಿ ಜಿಲ್ಲೆ ಕೌಲ್ ಬಜಾರ್ ಗೆ ಗಡಿಪಾರು ಮಾಡಲಾಗಿದೆ.

ಈ ಬಗೆಯ ಕಾನೂನು ಬಾಹೀರಾ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಕೊಂಡರೆ ಅವರಿಗೂ ಸಹ ಇದೇ ಬಗೆಯ ಶಿಕ್ಷೆ ಕಾದಿದೆ ಎಂದು ಎಸ್ಪಿ ಯತೀಶ್ ಎನ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕರ ಬಲಿ ಪಡೆದ ಘಟನೆಗೆ ಸರಕಾರವೇ ಹೊಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಿವಮೊಗ್ಗದ ಜಿಲೆಟಿನ್ ಸ್ಪೋಟದ ಆಘಾತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸ್ಫೋಟದ ದುರಂತ ಸಂಭವಿಸಿದ್ದು ತೀವ್ರ ಆಘಾತಕಾರಿ ದುರ್ಘಟನೆಯಾಗಿದೆ. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಇದನ್ನು ತಪ್ಪಿಸಬಹುದಿತ್ತು. ಈ ಘಟನೆಗೆ ಸರಕಾರವೇ ಹೊಣೆಯಾಗಿದೆ. ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರೆ ಸಾಲದು, ಅವರ ಕುಟುಂಬಗಳ ನಿರ್ವಹಣೆಗೆ ಪರಿಹಾರ ಧನದ ಜೊತೆಗೆ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗದ ಸ್ಫೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ, ಅಕ್ರಮ ಕಲ್ಲು ಕ್ವಾರಿಗಳಿಗೆ, ಅಕ್ರಮ ಸ್ಫೋಟಕಗಳಿಗೆ ಕಡಿವಾಣ ಹಾಕುವ ಬದಲು ಬೆಂಬಲವಾಗಿದ್ದರ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿದೆ. ಅದಕ್ಕೆ ನೇರ ಹೊಣೆ ಭೂ ಮತ್ತು ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ. ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್ ವಿಶ್ವನಾಥ್ ಹಿಂದಿನ ಸರ್ಕಾರದ ಮಾನಸಿಕತೆಯಿಂದ ಹೊರ ಬಂದಿಲ್ಲವೆಂದು ಕಾಣುತ್ತದೆ :ವಿಜಯೇಂದ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸರ್ಕಾರ ಮತ್ತು ಆಡಳಿತದ ವ್ಯವ್ಯಸ್ಥೆ ಮೇಲೆ ವಿನಾಕಾರಣ ಆರೋಪ ಮಾಡುತ್ತಲೆ ದಿನದೂಡುತ್ತಿರುವ ಮಾಜಿ ಸಚಿವ ಹೆಚ್. ವಿಶ್ವನಾಥ್ ಈ ಹಿಂದಿನ (ಕಾಂಗ್ರೆಸ್) ಸರ್ಕಾರದ ಮಾನಸಿಕತೆಯಿಂದ ಹೊರ ಬಂದಿಲ್ಲವೆಂದು ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದರು.

ಹೆಚ್ ವಿಶ್ವನಾಥ್ ವಿರುದ್ಧ ಗುಡುಗಿದ ಬಿ.ವೈ.ವಿಜಯೇಂದ್ರ,
ಅಂಜನಾದ್ರಿ ಪರ್ವತದಿಂದ ಕಾರಟಗಿ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಹುತೇಕ ಎಲ್ಲ ಕೆಲಸಕ್ಕೆ ಹಣ ನೀಡಬೇಕಾದ ಸ್ಥಿತಿಯಿದೆ ಆದರೆ ವಿಶ್ವನಾಥ್ ನವರು ವಿನಾಕಾರಣ ಟೀಕೆ ಮಾಡ್ತಾ ಇದ್ದಾರೆ.
ಅವರಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅವರು ಸಚಿವರಿದ್ದಾಗ ಮಾಡಿದ ಕೆಲಸ ಹಾಗೂ ಆ ಮನಸ್ಥಿತಿಯಿಂದ ಇನ್ನು ವಿಶ್ವನಾಥ್ ಹೊರ ಬಂದಂತೆ ಕಾಣುತ್ತಿಲ್ಲ. ಸರ್ಕಾರದಲ್ಲಿ ಏನು ನಡೆಯತ್ತಿದೆ ಎಂಬುವುದರ ಬಗ್ಗೆ ಅವರಿಗೆ ಮಾಹಿತಿ ಕೊರತೆ ಇದ್ದಂತೆ ಕಾಣುತ್ತದೆ. ಮೈಸೂರು ಬಿಟ್ಟು ರಾಜ್ಯದ ನಾನಾ ಕಡೆಗಳಲ್ಲಿ ಪ್ರವಾಸ ಮಾಡಿದರೆ ಅವರಿಗೆ ರಾಜ್ಯದಲ್ಲಿ ಅಭಿವೃದ್ಧಿ ಹೇಗಾಗುತ್ತಿದೆ ಎಂಬ ಮಾಹಿತಿ ಸಿಗಲಿದೆ ಎಂದರು.

ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಶ್ರಮದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಇರುವ ಇತಿಮಿತಿಯಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ಜಿಲ್ಲೆಗೆ ಆದ್ಯತೆ ನೀಡಲು ಪ್ರಯತ್ನಿಸುತ್ತಾರೆ ಎಂದರು

ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡೋರಿಗೆ ಉಪಚುನಾವಣೆಯಲ್ಲಿ ಸಿಗುತ್ತೆ ಉತ್ತರ: ವಿಜಯೇಂದ್ರ

ಅಪ್ಪ ರಾಜಾಹುಲಿ, ಮಗ ಬಾಹುಬಲಿ!

-ಕೊಪ್ಪಳ ಜಿಲ್ಲೆಯ ಅಂಜನ ಪರ್ವತ ದಕ್ಷಿಣ ಭಾರತದ ಅಯೋಧ್ಯೆ

-ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಸೋತು ಸುಣ್ಣವಾಗಿದೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಬಿಜೆಪಿ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಮುಂಬರಲಿರುವ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನ ಪರ್ವತದಲ್ಲಿ ಶನಿವಾರ ಹನುಮನ ದರ್ಶನದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಸುಖಾಸುಮ್ಮನೆ ಮಾತನಾಡೋರ ಸಂಖ್ಯೆ ಜಾಸ್ತಿಯಾಗಿದೆ. ಅಯೋಧ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದರೂ ವಿರೋಧಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇಶದ ಅತಿ ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಈಗ ಎಲ್ಲೆಡೆ ಸೋತು ಸುಣ್ಣವಾಗಿದೆ. ಅಸ್ತಿತ್ವ ಇಲ್ಲದ ಕಡೆಯೂ ಬಿಜೆಪಿ ಖಾತೆ ತೆರೆಯುತ್ತಿದೆ. ಜನರ ಒಲವು ಬಿಜೆಪಿ ಕಡೆಗಿದೆ ಎಂದರು.

ಭವ್ಯ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿಯವರದ್ದು. ಅವರ ಕನಸು ನನಸಾಗಿಸುವಲ್ಲಿ ಭಾರತೀಯರು ಕೈ ಜೋಡಿಸಬೇಕಿದೆ. ಅದೇ ರೀತಿ ರಾಜ್ಯದ ಕಲ್ಯಾಣಕ್ಕಾಗಿ ಲಕ್ಷಾಂತರ ಕಾರ್ಯಕರ್ತರ ತಪಸ್ಸಿನ ಫಲವಾಗಿ ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗಿದ್ದಾರೆ. ನುಡಿದಂತೆ ನಡೆಯುವ ಶಕ್ತಿ ಇರುವ ಯಾರಾದರೂ ವ್ಯಕ್ತಿ ರಾಜ್ಯದಲ್ಲಿ ಇದ್ದಾರೆ ಎಂದರೆ ಅದು ಬಿ.ಎಸ್‌.ಯಡಿಯೂರಪ್ಪ ಮಾತ್ರ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ವಿಜಯಯಾತ್ರೆಯು ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲೂ ಮುಂದುವರಿಯುತ್ತೆ. ಯಡಿಯೂರಪ್ಪ ಅವರಿಗೆ ಎಡರುತೊಡರು ಬಂದರೆ ಅವರು ಅಂಜನೇಯನನ್ನು ಪ್ರಾರ್ಥಿಸುತ್ತಾರೆ. ಅಂಜನಾದ್ರಿಗೂ ಶಿಕಾರಿಪುರಕ್ಕೂ ಅವಿನಾಭಾವ ಸಂಬಂಧ ಇದೆ. ರಾಜಕೀಯ ಏರುಪೇರುಗಳ ಮಧ್ಯೆಯೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಕೊರೋನಾದಿಂದ ಕತ್ತಲಲ್ಲಿ ಮುಳುಗಿದ ಜನರನ್ನು ಬೆಳಕಿನೆಡೆಗೆ ತಂದು ಅವರಿಗೆ ಧೈರ್ಯ ತುಂಬುವ ಕೆಲಸ ಸರಕಾರದಿಂದ ಆಗುತ್ತಿದೆ. ಜನರು ಸಂಕಷ್ಟಗಳಿಂದ ಮುಕ್ತವಾಗಲೆಂದು ಆಂಜನೇಯನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಮುಖಂಡರಾದ ಸಾಗರ ಮುನವಳ್ಳಿ, ನವೀನ್ ಗುಳಗಣ್ಣವರ್, ಸಿ.ವಿ.ಚಂದ್ರಶೇಖರ್, ಅಮರೇಶ್ ಕರಡಿ, ಸಂತೋಷ ಕೆಲೋಜಿ ಮತ್ತಿತರರು ಇದ್ದರು.

ಶ್ರೀರಾಮಮಂದಿರದ ರೊಕ್ಕದ ಲೆಕ್ಕ ಬೇಕಾದವ್ರು ವಿ ಎಚ್ ಪಿ ಹೆಡ್ ಆಫೀಸ್ ಗೆ ಹೋಗಿ: ಮುತಾಲಿಕ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಮುಖ್ಯಮಂತ್ರಿಗಳಿಬ್ಬರೂ ಶ್ರೀರಾಮನ ಕುರಿತು ವಿವಾದಾತ್ಮಕ ಬಾಲಿಶ್, ಕೀಳುಮಟ್ಟದ ಹೇಳಿಕೆ ನಿಲ್ಲಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತ್ತಾಲಿಕ್ ಸಿದ್ರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ. ಎಂಬುದನ್ನು ಮರೆಯದಿರಿ. 30 ವರ್ಷದ ಲೆಕ್ಕ ಈಗ ಕೇಳ್ತಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರಿಗೆ, ನೀವು 2 ಬಾರಿ ಸಿಎಂ ಆಗಿದ್ದ ವೇಳೆಯ ಲೆಕ್ಕಾ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದಿರಿ ಅದರ ಲೆಕ್ಕಾ ಕೊಡಿ ನೋಡೋಣವೆಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರು ಎಲ್ಲಾ ಕಡೆ ದುಡ್ಡು ಹೊಡೆದು, ನುಂಗಿ ನೀರು ಕುಡಿದಿರುವುದರಿಂದ ಅವರಿಗೆ ಎಲ್ಲರೂ ಭ್ರಷ್ಟರೇ ಕಾಣಿಸ್ತಾರೆ. ಇದರಿಂದ ಹೊರಬನ್ನಿ ಎಂದು ವ್ಯಂಗ್ಯವಾಡಿದರು.

ಶ್ರೀರಾಮ ಮಂದಿರ ಬಗ್ಗೆ ಒಂದೊಂದು ರೂಪಾಯಿ ಲೆಕ್ಕವಿದೆ. ಲೆಕ್ಕಾ ಬೇಕಾದವರು ವಿಎಚ್‌ಪಿ ಹೆಡ್ ಆಫಿಸ್ ಗೆ ಹೋದ್ರೆ, ಬ್ಯಾಲೆನ್ಸ್ ಶೀಟ್ ಸಮೇತ ಲೆಕ್ಕಾ ಕೊಡ್ತಾರೆ. ಶ್ರೀರಾಮನ ವಿಷಯ, ಆರ್.ಎಸ್.ಎಸ್, ವಿಶ್ವ ಹಿಂದು ಪರಿಷತ್, ಶ್ರೀರಾಮ ಸೇನೆ ವಿಷಯದಲ್ಲಿ ಇಬ್ಬರು ಸಿಎಂಗಳು ಅನಾವಶ್ಯಕವಾಗಿ ಮಾತನಾಡಬೇಡಿ. ನಿಮ್ಮ ವಿವಾದಾತ್ಮಕ ಹೇಳಿಕೆ ನೂರು ಕೋಟಿ ರಾಮನ ಭಕ್ತರಿಗೆ ಅವಮಾನ ಮಾಡಿದಂತಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಇನ್ನು ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಕೋರ್ಟ್ ತೀರ್ಪು ಎಲ್ರೂ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಪದೇ ಪದೇ ಭಾಷಾಭಿಮಾನ, ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಹಾಗೂ ಬೇಳೆ ಬೇಯಿಸಿಕೊಳ್ಳಲು ಖ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ನಾಡು, ನುಡಿ, ನೆಲ, ಜಲ ವಿಷಯದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಲು ಸಿದ್ಧ ಎಂದು ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಮೊದಲ ದಿನವೇ ಗದುಗಿನ ಕುವರಿಗೆ ಕಂಚಿನ ಪದಕ

ವಿಜಯಸಾಕ್ಷಿ ಸುದ್ದಿ, ಗದಗ

17ನೇ ರಾಷ್ಟ್ರೀಯ ಸೀನಿಯರ್, ಜ್ಯೂನೀಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಸ್ಪರ್ಧೆಗಳು ಶುಕ್ರವಾರ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಜರುಗಿದವು.

ಕ್ರೀಡಾಕೂಟದ ಮೊದಲ ದಿನವಾದ ಶುಕ್ರವಾರದಂದು 14 ಮತ್ತು 16 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ನಡೆಯಿತು. ಅದರಂತೆ, 18 ವರ್ಷದ ಬಾಲಕರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 18.4 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಗಳು ಜರುಗಿದವು.

16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ.ನ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

14 ವರ್ಷದವರ ವಿಭಾಗ

ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರಪನ ಜೈನ್(ದ್ವಿತೀಯ), ಅಸ್ಸಾಂನ ಮಲವ ದತ್ತಾ(ತೃತೀಯ), ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಿದ್ಧಿ ಸಿರ್ಕೇ(ಪ್ರಥಮ), ಶರವನಿ ಪರಿತ್(ದ್ವಿತೀಯ), ಕರ್ನಾಟಕದ ಚಾಯಾ ನಾಗಶೆಟ್ಟಿ (ತೃತೀಯ) ಸ್ಥಾನ ಪಡೆದಿದ್ದಾರೆ.

16 ವರ್ಷದವರ ವಿಭಾಗ

ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕರಿನ್ ಮರ್ಶಲ್ (ಪ್ರಥಮ), ಕೇರಳದ ಅಗಸಾ ಅನ್ನ ಥೊಮಸ್(ದ್ವಿತೀಯ), ಕರ್ನಾಟಕದ ಪವಿತ್ರಾ ಕುರ್ತಕೋಟಿ (ತೃತೀಯ), ಬಾಲಕರ ವಿಭಾಗದಲ್ಲಿ
ಕರ್ನಾಟಕದ ಚರತಗೌಡ (ಪ್ರಥಮ), ಕೇರಳದ ಅದ್ವೈತ್ ಸನ್ಕರ್(ದ್ವಿತೀಯ), ಪಶ್ಚಿಮ ಬಂಗಾಳದ ಸುಧನಸು ಲಿಮಬು (ತೃತೀಯ) ಸ್ಥಾನ ಪಡೆದಿದ್ದಾರೆ.

18 ವರ್ಷದವರ ವಿಭಾಗ

ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ ತನಗ್ಪು (ಪ್ರಥಮ), ಹರ್ಶಿತ ಕೆ.ಜೆ.(ದ್ವಿತೀಯ) ಹಾಗೂ ಪ.ಬಂಗಾಳದ ರಾಜಕುಮಾರ ರಾಯ್ (ತೃತೀಯ) ಸ್ಥಾನ ಪಡೆದಿದ್ದಾರೆ.

ಧಮ್ಮಿದ್ರೆ ಬಾರೊ…ಮಾಜಿ ಸಚಿವ ತಂಗಡಗಿ ವಿರುದ್ಧ ಗುಡುಗಿದ ದಢೇಸೂಗುರು

-ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿ ಸಾರಥಿ ಪಾತ್ರ ಬಿಟ್ಟು ಬೇರೆ ಪಾತ್ರದಲ್ಲಿ ಮುಂದೆ ಬಾ.. ನಾವ್ಯಾರು ಅಂತ ತೋರಸ್ತಿವಿ

-2023ರ ಚುನಾವಣೆಯಲ್ಲೂ ಬಿಜೆಪಿನೇ ಗೆಲ್ಲೋದು, ಬೇಕಾದರೆ ರಕ್ತದಲ್ಲಿ ಬರೆದುಕೊಡ್ತಿನಿ

-ಸಿಎಂ ಯಡಿಯೂರಪ್ಪಗೆ ವಿಜಯೇಂದ್ರ ಸುಪುತ್ರನಾದರೆ, ದಢೇಸೂಗೂರು ಮಾನಸಪುತ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ‌ ಸಚಿವ ಶಿವರಾಜ ತಂಗಡಗಿ ಬಿಜೆಪಿ ಕಾರ್ಯಕರ್ತರನ್ನು ಬ್ರಿಟಿಷರಂತೆ ಓಡಸ್ತಿನಿ, ಆರ್‌ಎಸ್‌ಎಸ್ ಕೈ ಕತ್ತರಿಸಬೇಕು ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಧಮ್ಮಿದ್ದರೆ ಬಿಜೆಪಿ ಕಾರ್ಯಕರ್ತರನ್ನು ಟಚ್ ಮಾಡಲಿ ನೋಡೋಣ ಎಂದು ಶಾಸಕ ಬಸವರಾಜ ದಢೇಸೂಗೂರು ಸವಾಲು ಹಾಕಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಕಾರಟಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾವೇನು ಮಾತಿನಲ್ಲಿ ಕಡಿಮೆ ಇಲ್ಲ. ತಂಗಡಗಿ ಕನಕಗಿರಿ ಕ್ಷೇತ್ರಕ್ಕೆ ಬಂದಾಗ ಎಂಥ ಚಪ್ಪಲಿ ಹಾಕಿಕೊಂಡು ಬಂದಿದ್ದೆ ನನಗೆ ಗೊತ್ತು. 2008ರಲ್ಲಿ ನೀನು ಹಾಕಿಕೊಂಡಿದ್ದ ಚಪ್ಪಲಿ ಫೋಟೊ ನನ್ನ ಬಳಿ ಇವೆ. ಈಗ ಎಂಥ ಬೂಟ್ ಹಾಕ್ತಿಯ, ಆಗ ನಿನ್ನ ಚಪ್ಪಲಿ ಹೇಗಿದ್ದವು ಗೊತ್ತು. ನೀನು 2008ರಲ್ಲಿ ಉದ್ರಿ ಪೆಟ್ರೋಲ್ ಹಾಕಿಸಿದ್ದು ನನಗೆ ಗೊತ್ತಿದೆ. ಉದ್ರಿ ಪೆಟ್ರೋಲ್ ಹಾಕಿಸಿ ಇನ್ನೂ ಹಣ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ಆಸ್ತಿ ಎಷ್ಟು ಅಂತಾ ಲೆಕ್ಕ ಕೊಡ್ತಿನಿ? ನಿನ್ನ ಆಸ್ತಿ ಎಷ್ಟು ಅಂತಾ ಹೇಳು. ನಾನು ಹುಟ್ಟುತ್ತಲೇ ಶ್ರೀಮಂತ. ನೂರಾರು ಎಕರೆ ಜಮೀನು ಇದೆ. 2013ರಲ್ಲಿ ಚುನಾವಣೆಯಲ್ಲಿ ಸೋತಿದ್ದಕ್ಕೆ 2018ರಲ್ಲಿ ಜನ ನನಗೆ ದಾನ ಮಾಡಿ ಗೆಲ್ಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲೂ ಗೆಲ್ಲೋದು ಬಿಜೆಪಿನೇ. ಇದು ಸೂರ್ಯಚಂದ್ರರು ಇರುವಷ್ಟೇ ಸತ್ಯ. ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತಿನಿ. ಜನ ಮತ್ತು ದೈವಬಲ ಬಿಜೆಪಿ ಜೊತೆಗಿದೆ. ಸಹೋದರ ತಂಗಡಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು‌ ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿಯವರು ಬಯಲಾಟದಲ್ಲಿ ಸಾರಥಿ ಪಾತ್ರ ಮಾಡುವಂತೆ ಕಾರ್ಯಕ್ರಮಗಳಲ್ಲಿ ಮಾತಾಡ್ತಾರೆ. ನಾವು ಸಾರಥಿಯನ್ನು ಎದುರಿಸುವುದಿಲ್ಲ. ಭೀಮ, ಕೀಚಕನಂಥವರನ್ನು ಎದುರಿಸುತ್ತೇವೆ. ಹಾಸ್ಯ ಪಾತ್ರ ಮಾಡುವುದನ್ನು ಬಿಟ್ಟು ದೊಡ್ಡ ಪಾತ್ರದಲ್ಲಿ‌ ಮುಂದೆ ಬರಲಿ. ಆಗ ಹೇಗೆ ಎದುರಿಸುತ್ತೇವೆ ಎಂಬುದನ್ನು ನೋಡಲಿ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಜಿಪಂ ಮಾಜಿ ಸದಸ್ಯ ಸಾಲೋಣಿ ವೀರೇಶ್, ಬಿಜೆಪಿ‌ ಮುಖಂಡರಾದ ನಾಗರಾಜ ಬಿಲ್ಗಾರ್, ಬಸವರಾಜಪ್ಪ, ಮಹಾಂತೇಶ ಸಜ್ಜನ, ಶ್ರೀಧರ ಕೆಸರಟ್ಟಿ ಮತ್ತಿತರರು ಇದ್ದರು.

‘ಪೊಗರು ವೀಕ್ಷಿಸಲು ಮುಗಿಬಿದ್ದ ‘ಪ್ರೇಕ್ಷಕರು

ನಗರದ ಚಿತ್ರಮಂದಿರಗಳೆರಡೂ ಹೌಸ್‌ಫುಲ್ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಹೊಡೆತಕ್ಕೆ ಬಹುತೇಕ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಲಾಕ್‌ಡೌನ್ ಬಳಿಕ ಪುನರಾರಂಭವಾಗಿದ್ದು ಶುಕ್ರವಾರ ಆಕ್ಸನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಸಿನಿಮಾ ಬಿಡುಗಡೆಗೊಂಡಿದ್ದು, ರಾಜ್ಯ ಸೇರಿದಂತೆ ಪರರಾಜ್ಯದಲ್ಲೂ ಧೂಳೆಬ್ಬಿಸಿದೆ.

ನಗರದ ಮಹಾಲಕ್ಷ್ಮೀ ಹಾಗೂ ಶಾಂತಿ ಚಿತ್ರ ಮಂದಿರಗಳಲ್ಲಿ ಪೊಗರು ಸಿನಿಮಾ ಬಿಡುಗಡೆಗೊಂಡಿದ್ದು, ಉಭಯ ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ನೀಡುತ್ತಿವೆ. ಟಿಕೆಟ್ ಖರೀದಿಸಲು ಪ್ರೇಕ್ಷಕರು ಮುಗಿ ಬಿದ್ದಿದ್ದ ದೃಶ್ಯಗಳು ಶುಕ್ರವಾರ ಕಂಡು ಬಂದವು.

ಲಾಕ್‌ಡೌನ್ ಬಳಿಕ ಚಿತ್ರಮಂದಿರಗಳು ಆರಂಭಗೊಂಡಿದ್ದರೂ ಸಿನಿ ಪ್ರೇಕ್ಷಕರಿಲ್ಲದೇ ಖಾಲಿ ಹೊಡೆಯುತ್ತಿದ್ದವು. ಆದರೆ, ಪೊಗರು ಸಿನಿಮಾದಿಂದ ಚಿತ್ರಮಂದಿಗಳಿಗೆ ಕಳೆ ಬಂದಿದೆ. ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಜನರು ಚಿತ್ರಮಂದಿರಗಳಿಗೆ ಹೆಜ್ಜೆ ಹಾಕಿದರು.

ರಾಜ್ಯಾದ್ಯಂತ ಬಿಡುಗಡೆಗೊಂಡಿರುವ ದೃವ ಸರ್ಜಾ ಅಭಿನಯದ ಪೊಗರು ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಮನರಂಜನೆ ಇಲ್ಲದೇ ಖಾಲಿ ಕುಳಿತಿದ್ದ ಚಿತ್ರ ರಸಿಕರ ಹಾಗೂ ಕೊರೊನಾ ಸಂದರ್ಭದಲ್ಲಿ ಸಕಾಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದ ಚಿತ್ರ ಮಂದಿರದ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಅದರಂತೆ, ಗದಗ ನಗರದ ನಾಲ್ಕು ಪ್ರಮುಖ ಚಿತ್ರ ಮಂದಿರಗಳ ಪೈಕಿ ಎರಡು ಚಿತ್ರಮಂದಿರಗಳು ಫೆ.೫ ರಂದು ಆರಂಭವಾಗಿದ್ದು, ಆರಂಭದಲ್ಲಿ ಪ್ರೇಕ್ಷಕರ ಕೊರತೆಯಿಂದ ನೀರಸ ಪ್ರತಿಕ್ರಿಯೆ ಉಂಟಾಗಿತ್ತು. ಸುಮಾರು ಎರಡು ವಾರಗಳ ನಂತರ ಚಿತ್ರ ಮಂದಿರ ತುಂಬಿ ತುಳುಕುತ್ತಿದ್ದು, ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನ ಸಿನಿಮಾವನ್ನು ಕಣ್ತುಂಬಿಕೊಂಡರು.

ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಸಿಂಧನೂರು ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಕುರಿ ಮತ್ತು ಜಾನುವಾರಗಳ ಸಂತೆ ಬಳಕೆದಾರರ ವೇದಿಕೆ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿಲಾಗಿದೆ.

ರೈತರು ತಮ್ಮ ಅಡಚಣೆ ಸಲುವಾಗಿ ತಾವು ಸಾಕಿ ಬೆಳೆಸಿದ ಜಾನುವಾರುಗಳನ್ನು ಕೃಷಿಕ ಇತರ ರೈತರಿಗೆ ಮಾರಾಟ ಮಾಡಿ ತಾವು ಮಾಡಿರುವ ಸಾಲಗಳನ್ನು ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ ಇತರ ಸಾಲಗಳನ್ನು ತೀರಿಸಲು ಸಿಂಧನೂರು ನಗರದಲ್ಲಿ ಎಪಿಎಂಸಿಯವರು ಸರ್ವೆ ನಂಬರ್ 995/p8 ಎಕರೆ 3.ಗುಂಟೆ 20 ಜಾಗವನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಗಿದೆ.

ಈಗಾಗಲೇ 2008ರಿಂದ 2018ವರೆಗೆ ಎಪಿಎಂಸಿ ಬಾಡಿಗೆ ಕೊಡುತ್ತಾ ಬಂದಿದ್ದು ಇದನ್ನು ಮುಂದುವರಿಸಿಕೊಂಡು ಹೋಗಬೇಕು.

ಯಾವುದೇ ಕಾರಣಕ್ಕೂ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಬೇರೆಯವರಿಗೆ ಬಿಟ್ಟುಕೊಡಬಾರದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇದೇ ಜಾಗದಲ್ಲಿ ಜಾನುವಾರುಗಳನ್ನು ಮಾರಲು ಅನುಕೂಲ ಮಾಡಿಕೊಡಬೇಕು.

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ದಂಡಾಧಿಕಾರಿಗಳು ಮಧ್ಯಸ್ಥಿಕೆಯನ್ನು ವಹಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ನೂರಾರು ರೈತರು ಧರಣಿ ಕುಳಿತಿದ್ದಾರೆ.

D H ಪೂಜಾರ್, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೋಯಿನ್ ಪಾಶಾ, ಕು.ಜಾ.ಸಂ ಬ.ವೆ ತಾಲ್ಲೂಕು ಅಧ್ಯಕ್ಷ, ಸಿಂಧನೂರು ಚಿಟ್ಟಿಬಾಬು, ಬಿ ಎನ್ ಯರದಿಹಾಳ, ಮುಸ್ತಫಾ ಅಮೀನ್ ಸಾಬ್ ನದಾಫ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವರದಿ.ಡಾ.ಅಬ್ದುಲ್ ರಜಾಕ್

ಹೆತ್ತ ಮಗುವನ್ನೇ ಕೊಂದ ಪಾಪಿಗೆ ಮರಣದಂಡನೆ!

ವಿಜಯಸಾಕ್ಷಿ ಸುದ್ದಿ, ಗದಗ: ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲರು ಈ ಆದೇಶ ನೀಡಿದ್ದಾರೆ.

ಅಪರಾಧಿ ಪ್ರಶಾಂತಗೌಡ ಪಾಟೀಲ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈತ ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿ ವಿಕೃತಿ ತೋರಿದ್ದ. ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್, ಮಹಿಳೆಯೊಬ್ಬಳನ್ನು ಪ್ರೀತಿ ಮಾಡಿ ಮದುವೆಯಾಗಿ ದೋಖಾ ಮಾಡಿದ್ದ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದ ಈ ಮಗುವನ್ನು ಕೊಲೆ ಮಾಡಿದ್ದ.

ಈತನಿಂದ ನೊಂದ ಮಹಿಳೆ ಜೀವನಾಂಶ ಬೇಡಿ‌ ಕೋರ್ಟ್ ಮೊರೆ ಹೋಗಿದ್ದ ಕಾರಣದಿಂದ ಕುಪಿತಗೊಂಡ ಪ್ರಶಾಂತಗೌಡ ಪಾಟೀಲ್ ತನ್ನ ಒಂದೂವರೆ ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ಕೊಂದು ಹಾಕಿದ್ದ. ಪ್ರಶಾಂತಗೌಡ ಪಾಟೀಲ್ ಏಪ್ರಿಲ್ 6, 2015 ರಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಕೊಲೆ ಮಾಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!