Home Blog Page 3071

ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ: SDPI ಮುಖಂಡನ ಬಂಧನ

ವಿಜಯಸಾಕ್ಷಿ ಸುದ್ದಿ, ಮಂಗಳೂರು: ಹದಿನೈದು ವರ್ಷಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿ ಆಕೆಯ ಇಬ್ಬರು ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಉಳ್ಳಾಲದ SDPI ಮುಖಂಡನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ SDPI ಮುಖಂಡ ಸಿದ್ದೀಕ್ ಉಳ್ಳಾಲ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆ ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆಯಲ್ಲಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈಕೆಗೆ ಸಹಾಯ ಮಾಡೋ ನೆಪದಲ್ಲಿ ಸ್ನೇಹ ಬೆಳೆಸಿಕೊಂಡ ಸಿದ್ದೀಕ್ ಆಕೆಯನ್ನು ಬಲಾತ್ಕರಿಸಿದಲ್ಲದೆ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿದ್ದ.

ಈ ಬೆಳವಣಿಗೆ ಕಳೆದ ಡಿಸೆಂಬರ್ ತಿಂಗಳಲ್ಲೇ ನಡೆದಿದ್ದು ಮಹಿಳೆ ಸಿದ್ದೀಕ್ ವಿರುದ್ಧ ದೂರು ನೀಡಲು ಮುಂದಾದಾಗ ಆತನ ಸಹಚರರು ಎನ್ನಲಾದ ಪಕ್ಷದ ಮುಖಂಡರು ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಆನಂತರವೂ ಸಿದ್ದೀಕ್ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಕಳೆದ ಜ.16 ರಂದು ಸಂತ್ರಸ್ತ ಮಹಿಳೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೇರಳಕ್ಕೆ ಪರಾರಿಯಾಗಿದ್ದಾನೆಂಬ ಮಾಹಿತಿ ಇದ್ದುದರಿಂದ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಉಳ್ಳಾಲ ಠಾಣೆಗೆ ಕರೆತಂದಿದ್ದಾರೆ.‌

ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ಅಂಡ್ ಟೀಂ: ರಾಜಕಾರಣದಲ್ಲಿ ಮತ್ತೆ ಉಂಟಾಗುತ್ತಾ ಸಂಚಲನ?

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಾರಣವಾಗಿದ್ದ ರಮೇಶ್ ಜಾರಕೀಹೊಳಿ ಮತ್ತೆ ಅಂತಹುದೇ ಪ್ರಯತ್ನಕ್ಕೆ ಕೈ ಹಾಕಿದ್ದಾರಾ ಎನ್ನುವ ಅನುಮಾನಗಳು ಆರಂಭವಾಗಿದೆ.

ಹೌದು ಕಳೆದ ರಾತ್ರಿಯಿಂದ ಜಿಲ್ಲೆಯ ಸರಾಯ್ ರೆಸಾರ್ಟ್ ನಲ್ಲಿ ರಮೇಶ್ ಜಾರಕೀಹೊಳಿ ತಮ್ಮ ಸಂಪುಟ ಸಹೋದ್ಯೋಗಿ, ಸಿ.ಪಿ ಯೋಗೇಶ್ವರ್, ಶಾಸಕರಾದ ಎಂಪಿ ಕುಮಾರಸ್ವಾಮಿ, ಗೋಪಾಲಯ್ಯ ಸೇರಿದಂತೆ ಹಲವರೊಂದಿಗೆ ರಹಸ್ಯ ಸಭೆ ನಡೆಸಿದರು.

ಕಾಫಿನಾಡಿನಲ್ಲಿ ನಡೆದ ಈ ರಹಸ್ಯ ಸಭೆಯಲ್ಲಿ ಏನೇನು ವಿಚಾರಗಳು ಚರ್ಚೆಯಾಗಿವೆ ಎನ್ನುವುದೀಗ ಪ್ರಶ್ನೆಯಾಗುಳಿದಿದೆ. ಸಿ ಪಿ ಯೋಗೇಶ್ವರ್ ಬಹಿರಂಗವಾಗಿ ಏನೂ ಹೇಳಿಲ್ಲವೆಂದರೂ ಅಸಮಾಧಾನ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕೀಹೊಳಿ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಲಾಗಿದೆ. ಅದು ಬಿಟ್ಟು ಬೇರ್ಯಾವಾ ವಿಚಾರಗಳೂ ಚರ್ಚೆಯಾಗಿಲ್ಲ. ಮಾಧ್ಯಮದವರು ಕನ್ಫ್ಯೂಸ್ ಮಾಡಬೇಡಿ ಎಂದಿದ್ದಾರೆ.

ರಾಜ್ಯದಲ್ಲಿ ಗಣಿಗಾರಿಕೆ ಅನಿವಾರ್ಯ: ಸಿಎಂ ಯಡಿಯೂರಪ್ಪ ಹೇಳಿಕೆ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ರಾಜ್ಯದಲ್ಲಿ ಕಲ್ಲು ಗಣಿಗಾರಿಕೆ ಅನಿವಾರ್ಯವಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಇಲ್ಲಿ ಹೇಳಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ‌ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಕಾಮಗಾರಿಗಳಿಗೆ ಗಣಿಗಾರಿಕೆ ಅವಶ್ಯಕತೆ ಇದೆ. ಆದರೆ ಅಕ್ರಮ ಗಣಿಗಾರಿಕೆ ವಿರುದ್ದ ನಿರ್ದಾಕ್ಷಿಣ್ಯ‌ ಕ್ರಮ ಕೈಗೊಳ್ಳಲಾಗುವುದು. ಸಕ್ರಮ ಗಣಿಗಾರಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಇನ್ನು ಎಲ್ಲಾ ಜಿಲ್ಲೆಗಳಲ್ಲೂ ಗಣಿಗಾರಿಕೆ ಪರಿಶೀಲನೆಗೆ ಆಯಾ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮೃತ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೊಡ್ತೀವಿ‌ ಎಂದು ಇಲ್ಲಿನ ಮಂಡಕ್ಕಳ್ಳಿ ಏರ್‌ಪೋರ್ಟ್‌ನಲ್ಲಿ ಸಿಎಂ ಹೇಳಿದರು.

ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾದ ಬೈಕ್ ಸವಾರ!

0

ವಿಜಯಸಾಕ್ಷಿ ಸುದ್ದಿ,ಹಾಸನ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರನೊಬ್ಬ ಕಾಡಾನೆಯಿಂದ ಪಾರಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಮಠದ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಕಾಫಿತೋಟದಿಂದ ರಸ್ತೆಗೆ ದಿಢೀರ್ ಎಂಟ್ರಿಕೊಟ್ಟ ಒಂಟಿ‌ ಸಲಗವನ್ನು ನೋಡದೇ ನೇರವಾಗಿ ಆನೆ ಸಮೀಪವೇ ಬೈಕ್ ಸವಾರ ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಜನರ ಕೂಗಾಟಕ್ಕೆ ಎಚ್ಚೆತ್ತ ಬೈಕ್ ಸವಾರ ಬೈಕ್ ತಿರುಗಿಸಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗಿದ್ದಾನೆ.

ಈ ಭಾಗದಲ್ಲಿ ಹಲವು ದಿನಗಳಿಂದ ಈ ಒಂಟಿ ಸಲಗ ಸಂಚರಿಸುತ್ತಿದೆ. ಈವರೆಗೆ ಈ ಆನೆಯಿಂದ ಯಾರಿಗೂ ತೊಂದರೆ ಆಗದಿದ್ದರೂ ಕಾಡಾನೆ ಸಂಚಾರದಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ. ಹೀಗ ರಸ್ತೆ, ಗ್ರಾಮ ಎನ್ನದೇ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿರೋ ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ.

ನಾಳೆ ನಗರಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ: ನವೀಕೃತ ಬಸ್ ನಿಲ್ದಾಣ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಕೆಲವು ತಿಂಗಳ ಹಿಂದೆಯೇ ಜನರ ಬಳಕೆಗೆ ಸಿದ್ದಗೊಂಡು ಜನಪ್ರತಿನಿಧಿಗಳ ಶೀತಲ ಸಮರದಿಂದ ಉದ್ಘಾಟನೆಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ನಗರದ ನವೀಕೃತ ಹಳೆ ಬಸ್ ನಿಲ್ದಾಣಕ್ಕೆ ಅಂತೂ ಇಂತೂ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ.

ನಗರದ ಹೃದಯ ಭಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವನ್ನು ನಾಳೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸುವರು.

ಕಳೆದ ಡಿ.24 ರಂದೇ ಬಸ್ ನಿಲ್ದಾಣ ಉದ್ಘಾಟನೆಗಾಗಿ ಸಿದ್ಧತೆ ನಡೆದಿತ್ತು. ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ, ಉದ್ಘಾಟನೆಗೆಂದೇ ಅಂದು ನಗರಕ್ಕೆ ಬಂದಿದ್ದ ಸಚಿವ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸದೇ ಮರಳಿದ್ದರು.

ನವೀಕೃತ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರು.

ನಾಳೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಪ್ಪತ ಉತ್ಸವ-೨೦೨೧ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಅರವಿಂದ ಲಿಂಬಾವಳಿ ಹಾಗೂ ಆನಂದ್ ಸಿಂಗ್, ಶಾಸಕ ಎಚ್.ಕೆ.ಪಾಟೀಲ್ ಭಾಗವಹಿಸಲಿದ್ದು, ಈ ಕಾರಣಕ್ಕಾಗಿಯೇ ಬಸ್ ನಿಲ್ದಾಣ ಉದ್ಘಾಟನೆ ಆಗುವ ಭಾಗ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಮ್ ನಾಯಕರು, ಕಾನೂನು ಪಂಡಿತರು ಜನಾಂದೋಲನ ಆರಂಭಿಸಿ: ಡಾ. ಅಬ್ದುಲ್ ರಜಾಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಕ್ಕೂ ಹೆಚ್ಚು ವರ್ಷಗಳಾದ ಮೇಲೆ ಕರ್ನಾಟಕದಲ್ಲಿ ಭರ್ಜರಿಯಾಗಿ ತಮ್ಮ ಹಕ್ಕು ಪಡೆಯಲು ಹೋರಾಟಗಳು ಪಾದಯಾತ್ರೆ ಮೂಲಕ ನಡೆಯುತ್ತಿವೆ.

ಆದರೆ ನಮ್ಮ ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಸೇರಿದಂತೆ ಹೋರಾಟಗಾರರೆಲ್ಲರೂ ಸಾಚಾರ ಸಮಿತಿಯ ವರದಿ, ರಂಗನಾಥ್ ಮಿಶ್ರಾ ವರದಿ ಶಿಪಾರಸ್ಸಿಗಾಗಿ ಜನಾಂದೋಲನ ಆರಂಭಿಸಲು ಮುಂದಾಗಬೇಕು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್ ಮುಸ್ಲಿಂ ನಾಯಕರಲ್ಲಿ ಮನವಿ ಮಾಡಿದ್ದಾರೆ.

ವಾಲ್ಮೀಕಿ ಜನಾಂಗ ಮೀಸಲಾತಿಯಲ್ಲಿ ಶೇ 7% ಹಿಗ್ಗಿಸಲು ಹೋರಾಡುತ್ತಿದೆ. ರಾಜಕೀಯ ಅಧಿಕಾರ ಅನುಭವಿಸಿಯೂ ಕೂಡ ಕುರುಬ ಸಮುದಾಯ ಎಸ್.ಟಿ ಸೇರ್ಪಡೆಗೆ ಬೇಡಿಕೆ ಸಲ್ಲಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದೆ.

ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರುವ ಪಂಚಮಸಾಲಿ ಸಮಾಜ 2A ಗೆ ಸೇರಿಸುವದಕ್ಕಾಗಿ ಸರ್ಕಾರದ ಕಣ್ಣು ತೆರೆಯಲು ಕೂಡಲಸಂಗಮದಿಂದ ಬೆಂಗಳೂರಿಗೆ 700km ಪಾದಯಾತ್ರೆ ಆರಂಭಿಸಿದ್ದಾರೆ.

2B ನಲ್ಲಿ ಕ್ರೈಸ್ತರನ್ನು, ಜೈನರನ್ನು ಇಟ್ಟುಕೊಂಡ ಮುಸ್ಲಿಮ್ ಸಮುದಾಯ ಮಾತ್ರಾ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಈ ಸಮಯದಲ್ಲಿ ಕಾನೂನು ಬಲ್ಲವರು ಮಾತ್ರ ಹೋರಾಟಗಾರರಿಗೆ, ರಾಜಕೀಯ ಧುರೀಣರಿಗೆ ಮಾರ್ಗದರ್ಶನ ನೀಡಿ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದಿದ್ದಾರೆ.

ಅದು ಸಾಚಾರ ಸಮಿತಿಯ ವರದಿ ಶಿಫಾರಸ್ಸಿಗೋ ಅಥವಾ ರಂಗನಾಥ ಮಿಶ್ರಾ ವರದಿ ಶಿಪಾರಸ್ಸಿಗೋ ಒಟ್ಟಿನಲ್ಲಿ ದೇಶಾದ್ಯಂತ ಜನಾಂದೋಲನದ ಮಾದರಿಯಲ್ಲಿ ಹೋರಾಟಕ್ಕಿಳಿಯುವ ಸುವರ್ಣ ಯುಗಾರಂಭ ಮಾತ್ರ ಮತ್ತೆ ನಮ್ಮ ನಾಡಿನಿಂದ ಆರಂಭವಾಗಲಿ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ.

ದಾರಿ ಕಾಣದ ಯುವ ನಾಯಕರಿಗೆ, ಹೋರಾಟಗಾರರಿಗೆ ದಾರಿದೀಪವಾಗಿ ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳುವಂತೆ ಶಕ್ತಿ ತುಂಬಿ ಎಂದು ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಹೋರಾಟಗಾರರಲ್ಲಿ ಡಾ. ಅಬ್ದುಲ್ ರಜಾಕ್ ನದಾಫ್ ಮನವಿ ಮಾಡಿದ್ದಾರೆ.

ಚಿನ್ನಾಭರಣದೊಂದಿಗೆ ಓಡಿಹೋದ ಗೃಹಿಣಿ! ಪತಿಯಿಂದ ದೂರು ದಾಖಲು

0

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ವಿವಾಹಿತ ಮಹಿಳೆಯೋರ್ವಳು ಮನೆಯಲ್ಲಿ ಯಾರು ಇಲ್ಲದ ವೇಳೆ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗುಂಡೇಗಾಲ ಗ್ರಾಮದ ಶಿವಕುಮಾರ್ ರವರ ಪತ್ನಿ ಸೌಂದರ್ಯ ಎಂಬ ಗೃಹಿಣಿಯೇ ನಾಪತ್ತೆಯಾಗಿದ್ದು, ಆಕೆಯ ಪತಿ ಶಿವಕುಮಾರ್, ಕೊಳ್ಳೇಗಾಲ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

ನಾಪತ್ತೆಯಾಗಿರುವ ಸೌಂದರ್ಯ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಅಂತರಗಂಗೆ ಗ್ರಾಮದವರು. ಸೌಂದರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಶಿವಕುಮಾರ್ ಸಹ ಬೆಂಗಳೂರಿನ ಮಾಲ್ನಲ್ಲಿ ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.

ಇಬ್ಬರ ನಡುವೆ ಪರಿಚಯವಾಗಿ ತದನಂತರ ಪ್ರೇಮ ಬೆಳೆದಿದೆ. ಆನಂತರ ಕೊಳ್ಳೇಗಾಲಕ್ಕೆ ಬಂದು ಮದುವೆಯಾಗಿ ಹುಟ್ಟೂರಾದ ಗುಂಡೇಗಾಲದಲ್ಲಿ ಕಳೆದ ಒಂದು ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿದ್ದರು.

ಆದರೆ, ಜ.19 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸೌಂದರ್ಯ ತನ್ನ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ಕಾಣಿಯಾಗಿದ್ದಾಳೆ ಎಂದು ಆಕೆಯ ಪತಿ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು, ಮಹಿಳೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ದುಷ್ಕರ್ಮಿಗಳಿಂದ ಜೋಳದ ಬೆಳೆಗೆ ಬೆಂಕಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲ್ಲೂಕಿನ ಪು.ಬಡ್ನಿ ಗ್ರಾಮದ ರೈತನ ಜೋಳದ ಜಮೀನಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಬೆಳೆ ಹಾನಿ ಮಾಡಿದ್ದಾರೆ.

ಗ್ರಾಮದ ಭರಮಪ್ಪ ಕಾಂಬಳೆ ಎಂಬ ರೈತನ ಜಮೀನಿನಲ್ಲಿದ್ದ ಬೆಳೆಗೆ ಬೆಂಕಿ ಬಿದ್ದು ಬೆಳೆ ನಾಶವಾಗಿದೆ.

ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಿಳಿ‌ಜೋಳ ದುಷ್ಕರ್ಮಿಗಳ ಹೀನ ಕೃತ್ಯಕ್ಕೆ ಭಸ್ಮವಾಗಿದೆ. ವಾರದ ಹಿಂದಷ್ಟೇ ಅಕಾಲಿಕ ಮಳೆಗೆ ಜೋಳ ಬಿದ್ದು ಹಾಳಾಗಿತ್ತು. ಅಲ್ಪಸ್ವಲ್ಪ ಅಳೆದು ಉಳಿದಿದ್ದ ಬೆಳೆ ಸಂಪೂರ್ಣ ಕಟಾವಿಗೆ ಬಂದಿತ್ತು.

ರೈತ ಜೋಳದ ಬೆಳೆಯನ್ನು ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದ. ಅಷ್ಟರಲ್ಲೇ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಜಾನುವಾರುಗಳಿಗೂ ತಿನ್ನಲೂ ಬರದಂತೆ ಮೇವು ಸುಟ್ಟು ಕರಕಲಾಗಿದ್ದು, ರೈತ ಕಣ್ಣೀರು ಹಾಕುವಂತಾಗಿದೆ. ಸಂಕಷ್ಟಕ್ಕೊಳಗಾದ ರೈತನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದರು.

ನನಗೂ ಸಿಎಂ ಆಗೋ ಆಸೆ ಇದೆ! ಉಮೇಶ್ ಕತ್ತಿ ಹೊಸ ವರಸೆ

ವಿಜಯಸಾಕ್ಷಿ ಸುದ್ದಿ, ತುಮಕೂರು: ನನಗೆ ಹಾಗೂ ಯತ್ನಾಳ್ ಇಬ್ಬರಿಗೂ ಸೀನಿಯಾರಿಟಿ ಇದೆ. ಹೀಗಾಗಿ ನನಗೂ ಸಿಎಂ ಆಗವ ಆಸೆಯಿದೆ. ಸಿಎಂ ಸ್ಥಾನಕ್ಕೆ ನನಗೂ ಯತ್ನಾಳ್ ಗೂ ಪೈಪೋಟಿ ನಡೆಯಲಿದೆ ಎಂದು ಈಗಲೇ ಸಿಎಂ ಸ್ಥಾನದ ಆಸೆಯ ಸೂಚನೆಯನ್ನು ಉಮೇಶ್ ಕತ್ತಿ ನೀಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ ನೀಡಿದ ಉಮೇಶ್ ಕತ್ತಿ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. 75 ವರ್ಷದವರೆಗೂ ಆಡಳಿತ ನಡೆಸಲು ಅವಕಾಶವಿದೆ. ಹೀಗಾಗಿ ನಾನೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬಿಎಸ್ ವೈ ನನಗೆ ವಿಶೇಷವಾದಂತಹ ಜವಾಬ್ದಾರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಟ್ಟಿದ್ದಾರೆ. 4 ಕೋಟಿ 36 ಜನ್ರಿಗೆ ಆಹಾರ ನೀಡಲಾಗುತ್ತಿದೆ. ರಾಜ್ಯಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಈ ಖಾತೆ ಸಿಕ್ಕಿರೋದಕ್ಕೆ ನಾನು ಖುಷಿಯಲ್ಲಿದ್ದೀನಿ,ಸಂತೋಷ ಆಗಿದೆ ಎಂದರು.

ನನಗೆ ಶ್ರೀಗಳ ಆಶೀರ್ವಾದವಿದೆ, ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೆನೆ. ಜೀವನದಲ್ಲಿ ಸಿಎಂ ಆಗೋ ಆಸೆ ಎಲ್ಲರಿಗೂ ಇದೆ. ಸಿಎಂ ಆಗೋ ಆಸೆ ನನಗೂ ಇದೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.

ಮೀನುಗಾರರ ಬಲೆಗೆ ಬಿದ್ದ ಬೃಹತ್ ಶಾರ್ಕ್! ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ವಿಜಯಸಾಕ್ಷಿ ಸುದ್ದಿ, ಕಾರವಾರ: ಮೀನುಗಾರರ ಬಲೆಗೆ ಬಿದ್ದಿದ್ದ ಬೃಹತ್ ಶಾರ್ಕ್‌ ಮೀನನ್ನು ಮರಳಿ ಸಮುದ್ರಕ್ಕೆ ಬಿಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ತಾಲೂಕಿನ ಗೋಕರ್ಣದ ತಡದಿ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಈ ಬೃಹತ್ ಮೀನು ದೊರೆತಿದ್ದು ಈ ತಿಮಿಂಗಿಲ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಹಾಗೂ ಯಾರೂ ಕೂಡ ಆಹಾರಕ್ಕಾಗಿ ಬಳಸದ‌‌ ಕಾರಣ ವಾಪಸ್ ಕಡಲಿಗೆ ಬಿಡಲಾಗಿದೆ.

ಈ ಶಾರ್ಕ್ ಮೀನು ಬರೋಬ್ಬರಿ 500 ಕೆಜಿಗೂ ಅಧಿಕ ತೂಕವಿದ್ದು 11 ಅಡಿ ಉದ್ದವಿದೆ. ಇದನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾದ ಕಾರಣ ಈ ಬಗ್ಗೆ ತಿಳಿದ ಮೀನುಗಾರರು ವಾಪಸ್ ಕಡಲಿಗೆ ಬಿಟ್ಟಿದ್ದಾರೆ.

ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ಪ್ರಭೇದದ ಶಾರ್ಕ್ ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ. ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ಎನ್ನಲಾಗಿದ್ದು ಶಾಲಾ ಬಸ್‌ನ ಗಾತ್ರದವರೆಗೆ ಬೆಳೆಯುತ್ತವೆ. ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು ನಿಧಾನವಾಗಿ ಈಜುತ್ತವೆ.

error: Content is protected !!