Home Blog Page 3080

ಉದ್ಯಮಿ ಕೆ.ಎಂ.ಸೈಯದ್ ಜನ್ಮ ದಿನ ಆಚರಣೆ

0

ಕೊಪ್ಪಳ :  ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರ 40ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಹೊಸಪೇಟೆ ರಸ್ತೆಯ ಕೆಎಂಎಸ್ ಕಚೇರಿಯಲ್ಲಿ ಕೆ.ಎಂ.ಸೈಯದ್ ಅಭಿಮಾನಿ ಬಳಗ ಸರಳ ಜನ್ಮ ದಿನ ಆಚರಿಸಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರು, ಈ ನಿಮ್ಮ ಅಭಿಮಾನ ಪ್ರೀತಿ ನನಗೆ ಸಂತಸ ತಂದಿದೆ ಎಂದರು.

ನಂತರ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್  ಹಾಗೂ  ಅನಾಥ ಆಶ್ರಮದ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಜಾಫರಸಾಬ ಸಂಗಟಿ, ಕೆ.ಎಂ.ಸೈಯದ್ ಅಭಿಮಾನಿ ಬಳಗದ ಎಫ್.ಎ.ನೂರುಬಾಷ, ಯುವ ಮುಖಂಡ ಸಲೀಂ ಅಳವಂಡಿ, ಸಾದೀಕ್ ಕುದರಿಮೋತಿ, ಇಬ್ರಾಹಿಂ, ವಸಿಂ, ಸಂತೋಷ ಬೂದಿಹಾಳ ಮತ್ತಿತರರು ಪಾಲ್ಗೊಂಡಿದ್ದರು.

     

ಇಂದಿರಾ ಕ್ಯಾಂಟೀನ್‌ ಮೂಲಕ ಸಾವಿರಾರು ಮಂದಿಯ ಹಸಿವು ನೀಗಿಸುತ್ತಿರುವ ಕಂಪನಿಗೆ ರಾಷ್ಟ್ರೀಯ ಪ್ರಶಸ್ತಿ

ಪ್ರತಿಷ್ಠಿತ ‘ಶೆಫ್‌ಟಾಕ್’ ಸಂಸ್ಥೆಗೆ ರಾಷ್ಟ್ರೀಯ ಪುರಸ್ಕಾರ..

140ಕ್ಕೂ ಹೆಚ್ಚು ಕಂಪನಿಗಳಿಗೆ ಚೈತನ್ಯ ತುಂಬುತ್ತಿರುವ ಗೋವಿಂದ ಬಾಬು ಪೂಜಾರಿ ಸಾಧನೆಯ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಯ ಆಕರ್ಷಣೆ..

ವಿಜಯಸಾಕ್ಷಿ ಸುದ್ದಿ, ದೆಹಲಿ

ದಕ್ಷಿಣ ಭಾರತದ ಪ್ರತಿಷ್ಠಿತ ‘ಶೆಫ್‌ಟಾಕ್’ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗರಿ ಆಕರ್ಷಣೆ ತಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರುನಾಡಿನ ‘ಕಾರ್ಮಿಕರತ್ನ’ ಖ್ಯಾತಿಯ ಉದ್ಯಮಿ, ChefTalk’ ಕಂಪನಿಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟಕ್ಕಾಗಿ ಅವಾರ್ಡ್ ಇದಾಗಿದೆ. ಪ್ರತೀ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಕೆರಳಿಸುವ ‘ಕ್ವಾಲಿಟಿ ಫುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್’ ಈ ಬಾರಿ ಈ ಬೆಂಗಳೂರು ಪಾಲಾಗಿದೆ.

ಇಂಟರ್‌ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಮೂಲಕ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಈ ವರ್ಷ ಈ ಪ್ರತಿಷ್ಠಿತ ಪುುರಸ್ಕಾರಕ್ಕೆ ಬೆಂಗಳೂರಿನ ಸಂಸ್ಥೆ ‘ಶೆಫ್‌ಟಾಕ್’ (Cheftalk Food And Hospitality Services Pvt.Ltd) ಪಾತ್ರವಾಗಿದೆ.

ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿ ನೇತೃತ್ವದ ಈ ‘ಶೆಫ್‌ಟಾಕ್’ ಕಂಪನಿ ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿದ್ದು, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್, ಆಂದ್ರಪ್ರದೇಶ, ತೆಲಂಗಾಣ ಸಹಿತ ವಿವಿಧ ರಾಜ್ಯಗಳ ಆಹಾರೋದ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಮೆರೆದಿದೆ.

ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೊತೆ ವ್ಯಾವಹಾರಿಕ ನಂಟು ಮೂಲಕ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪನ್ನ ಪೂರೈಕೆ ಮಾಡುತ್ತಾ ದೇಶದಲ್ಲೇ ಅಪ್ರತಿಮ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಇಂಟರ್‌ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಅಭಿಪ್ರಾಯಪಟ್ಟಿದೆ.

*ಕರ್ನಾಟಕ ಸರ್ಕಾರಕ್ಕೂ ಹೆಮ್ಮೆ*

ಬೆಂಗಳೂರು ಮೂಲದ ‘ಶೆಫ್‌ಟಾಕ್’ ಕಂಪನಿಗೆ ಈ ಪುರಸ್ಕಾರ ಸಂದಿರುವುದು ರಾಜ್ಯ ಸರ್ಕಾರಕ್ಕೂ ಹೆಮ್ಮೆಯ ಸಂಗತಿ. ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯ, ಹಾಸ್ಪಿಟಲ್ಸ್ ಹೀಗೆ ಹಲವಾರು ವಲಯಗಳಲ್ಲಿ ಉದ್ದಿಮೆಯ ವಿಸ್ತಾರ ಹೊಂದಿರುವ ಶೆಫ್‌ಟಾಕ್ ಮಾಲೀಕರರಾದ 140ಕ್ಕೂ ಹೆಚ್ಚು ಕಂಪನಿಗಳಿಗೆ ಮುಂಚೂಣಿ ಸೇವೆ ಕಲ್ಪಿಸುತ್ತಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರ ಪೂರೈಸುತ್ತಿರುವ ‘ಶೆಫ್‌ಟಾಕ್’ (Cheftalk Food And Hospitality Services Pvt.Ltd) ಸಂಸ್ಥೆ, ನಿತ್ಯವೂ ಸಾವಿರಾರು ಮಂದಿಯ ಹಸಿವು ನೀಗುತ್ತಿದೆ. ಅದರಲ್ಲೂ ಅಗ್ಗ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಸರ್ಕಾರದ ಪ್ರಯತ್ನವನ್ನು ಈ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪ್ರಮಾಣೀಕರಿಸಿದೆ ಎಂಬ ಮೆಚ್ಚುಗೆ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ದೆಹಲಿಯ ‘ಇಂಟರ್‌ನ್ಯಾಷನಲ್ ಅಚಿವರ್ಸ್ ಕಾನ್ಫರೆನ್ಸ್’ ಸಮಾರಂಭದಲ್ಲಿ ಈ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ‘ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಈ ಪುರಸ್ಕಾರವನ್ನು ಪ್ರದಾನ ಮಾಡಬೇಕಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನೆಲೆ ಕಾರ್ಯಕ್ರಮದ ಸ್ವರೂಪ ಬದಲಾಗಿತ್ತು.

ಪ್ರಶಸ್ತಿ ಸ್ವೀಕರಿಸಿರುವ ‘ಶೆಫ್‌ಟಾಕ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿಯವರು, ಇದು ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ 6000 ಸಿಬ್ಬಂದಿಯ ಪ್ರಯತ್ನಕ್ಕೆ ಸಂದ ಪುರಸ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಬಾಲಿವುಡ್ ನ ಹಿರಿಯ ನಟ ನಾಸೀರುದ್ದೀನ್ ಶಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಸೀರುದ್ದೀನ್ ಅವರನ್ನು ಜೂ. 29ರಂದು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಆದರೆ, ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ನ್ಯೂಮೋನಿಯಾ ಆಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಎರಡ್ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ನಾಸೀರುದ್ದೀನ್ ಶಾ ಅವರ ಮ್ಯಾನೇಜರ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ನಾಸೀರುದ್ದೀನ್ ಜೊತೆ ಪತ್ನಿ ರತ್ನಾ ಪಾಠಕ್ ಹಾಗೂ ಮಕ್ಕಳು ಇದ್ದಾರೆ. ನಾಸೀರುದ್ದೀನ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತ್ರೀದೇವ್, ಸರ್ಫೋರೋಶ್, ಮಕಬೂಲ್, ಇಕ್ಬಾಲ್, ಬನಾರಸ್, ಪರ್ಜಾನಿಯಾ, ಇಶ್ಕಿಯಾ, ದಿ ಡರ್ಟಿ ಪಿಕ್ಚರ್, ಜಾನ್ ಡೇ, ಬೇಗಂ ಜಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದಾರೆ. ಪತ್ನಿ ರತ್ನಾ ಪಾಠಕ್ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಕೊಲೆ!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ನಗರದ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ. ಪತಿಯೇ ನೀರಿನ ಸಂಪ್ ಗೆ ಮುಳುಗಿಸಿ ಪತ್ನಿ ಸಿಮ್ರಾನ್ (22) ಕೊಲೆ ಮಾಡಿದ್ದಾನೆ. ಸಿಮ್ರಾನ್ ಪತಿ ಫೈರೋಜ್ ವಿರುದ್ಧ ಕೊಲೆಯ ಆರೋಪ ಕೇಳಿ ಬಂದಿದೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್-ಫೈರೋಜ್ ವಿವಾಹ ನಡೆದಿತ್ತು. ಮೂರೇ ತಿಂಗಳಲ್ಲಿ ನವ ವಧು ಸಾವನ್ನಪ್ಪಿದ್ದಕ್ಕೆ ಹಲವು ಅನುಮಾನಗಳು ಮೂಡುತ್ತಿವೆ. ಸದ್ಯ ಪೊಲೀಸರು ಸಿಮ್ರಾನ್ ಪತಿ ಫೈರೋಜ್, ಅತ್ತೆ, ಮಾವರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ ಬುಧವಾರ ಸೋಂಕು ಇಳಿಮುಖ, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 18 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಂದೂ ಸಾವಿನ ಸರಣಿ ಮುಂದುವರೆದಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 18 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25814 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -07, ಮುಂಡರಗಿ-00, ನರಗುಂದ-03, ರೋಣ-03, ಶಿರಹಟ್ಟಿ-04, ಹೊರಜಿಲ್ಲೆಯ-01, ಸೇರಿದಂತೆ 18 ಪ್ರಕರಣಗಳು ದೃಢಪಟ್ಟಿವೆ.

ಬುಧವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 304 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ನರಗುಂದ ತಾಲೂಕಿನ ದಂಡಾಪೂರ ನಿವಾಸಿ 65 ವರ್ಷದ ವ್ಯಕ್ತಿ ಜೂನ್ 27 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 28 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ನಿವಾಸಿ 60 ವರ್ಷದ ಮಹಿಳೆ ಜೂನ್ 25 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 26 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 18 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25287 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 223 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರೈತನ ಮೇಲೆ ಹಲ್ಲೆ ನಡೆಸಿದ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಹಾವೇರಿ

ತಹಸೀಲ್ದಾರ್ ಎದುರೇ ರೈತರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಕಂಬಳಿ ಎಂಬ ರೈತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿಯಾ ಎಂದು ಪೊಲೀಸರು ರೈತನನ್ನು ಥಳಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸ್ ಕಾನಸ್ಟೇಬಲ್ ಹರೀಶ ಹಾಲಭಾವಿ ಹಾಗೂ ಮೋಹನ್ ಮೇಲಗೇರಿ ಎಂಬುವವರೇ ಹಲ್ಲೆ ನಡೆಸಿದ್ದಾರೆ.

ಕಲ್ಲು ಕ್ವಾರಿ ಹಾಗೂ ಅದರ ಅಕ್ಕಪಕ್ಕದ ಕೆಲವು ರೈತರ ಜಮೀನಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಕೆಲವರು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಸ್ತೆ‌ ನಿರ್ಮಾಣಕ್ಕೆ ಪರಮೇಶ್ವರ ಸೇರಿದಂತೆ ಇಬ್ಬರು ರೈತರು ವಿರೋಧ ವ್ಯಕ್ತಪಡಿಸಿದ್ದರು‌.
ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಆರೋಪಿಸಿ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧಿಸಿದ್ದರು. ರಸ್ತೆ ನಿರ್ಮಾಣಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರ ಡಾಕೇಶ ಲಮಾಣಿ ಹಾಗೂ ಕೆಲವು ರೈತರು ಮುಂದಾಗಿದ್ದರು.

ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ ಶಂಕರ.ಜಿ.ಎಸ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತ ಪರಮೇಶ್ವರ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ರೈತನನ್ನು ಠಾಣೆಗೆ ಹಾಕ್ಕೊಂಡು ಹೋಗೋಣ್ವಾ? ಎಂದು ಪೊಲೀಸ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಾಕ್ಕೊಂಡು ಹೋಗು ಬಾ ಅಂದಿದ್ದಕ್ಕೆ ಕೋಪಗೊಂಡು, ರೈತನ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ ಹುದ್ದೆಗೆ ನೇಮಿಸದಂತೆ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ ಹುದ್ದೆಗೆ ನೇಮಕ ಮಾಡದಿರುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ  ಜಿಲ್ಲಾ ಕಂದಾಯ ನೌಕರರ ಸಂಘದಿಂದ  ಮನವಿ ಸಲ್ಲಿಸಲಾಯಿತು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ  ಸಚಿವ ಸಂಪುಟದ ಪ್ರಕರಣ ಸಂಖ್ಯೆ 161/2021 ದಿ: 26-4-2021 ರಂದು ತೀರ್ಮಾನಿಸಿದಂತೆ ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ ಹುದ್ದೆಗೆ ನಿಯೋಜನೆ  ಹಾಗೂ ನೇಮಕ ಮಾಡಬಾರದೆಂದು ತಿಳಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಅಣ್ಣಿಗೇರಿ ಮಾತನಾಡಿ, ತಹಶೀಲ್ದಾರ ಹುದ್ದೆಯು ತಾಲೂಕಿನ ಮೆಜಿಸ್ಟ್ರಿಯಲ್ ಅಧಿಕಾರಿ ಹುದ್ದೆಯಾಗಿದ್ದು ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ. ಖಾಲಿ ಇರುವ  ಶೇ.50 ರಷ್ಟು ಹುದ್ದೆಗಳನ್ನು ನೇಮಕಾತಿ ಮೂಲಕ ಹಾಗೂ 50 ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಿಸಿದರೆ ಕಂದಾಯ ನೌಕರರಿಗೆ ಮುಂಬಡ್ತಿಗೆ ಅನುಕೂಲವಾಗಲಿದೆ. ಬೇರೆ ಇಲಾಖಾಧಿಕಾರಿಗಳನ್ನು ನೇಮಕ ಮಾಡುವುದರಿಂದ ಸುಮಾರು 35 ರಿಂದ 40 ವರ್ಷ ಸೇವೆ ಸಲ್ಲಿಸಿದರೂ ಸಹ ಮುಂಬಡ್ತಿ ವಂಚಿತರಾಗುತ್ತಿದ್ದಾರೆ.  ಆದ್ದರಿಂದ ಬೇರೆ ಇಲಾಖೆಯಿಂದ ನಿಯೋಜನೆ ಮೇಲಿರುವ ತಹಶೀಲ್ದಾರರನ್ನು ಮಾತೃ ಇಲಾಖೆಗೆ ಬಿಡುಗಡೆ ಮಾಡಬೇಕು. ಹಾಗೂ ಇಲಾಖಾ ನೌಕರರಿಗೆ ಮುಂಬಡ್ತಿ ನೀಡುವ ಮೂಲಕ ತಹಶೀಲ್ದಾರ ಹುದ್ದೆಗೆ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಅನ್ಯ ಇಲಾಖೆಯಿಂದ ತರಬೇತಿ ಬರುವವರು ತಹಶೀಲ್ದಾರ ಹುದ್ದೆಗೆ ಮಾತ್ರ ಬರುತ್ತಿರುವುದು, ನೇಮಿಸುತ್ತಿರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿಯಾಗಿದೆ.  ದಯಮಾಡಿ ಅನ್ಯ ಇಲಾಖಾ ನೌಕರರನ್ನು ತಹಶೀಲ್ದಾರ ಹುದ್ದೆಗೆ ನೇಮಕ ಮಾಡದಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  

ಕಂದಾಯ ಇಲಾಖೆಯ ನೌಕರರುಗಳಾದ ಪಿ.ಸಿ. ಕಲಾಲ, ಜಯಲಕ್ಷ್ಮಿ ವಸ್ತ್ರದ, ವಿ.ಕೆ.ರೇವಣಕರ್, ಡಿ.ಟಿ. ವಾಲ್ಮೀಕಿ, ಎಂ.ಎಸ್. ಮೇಲ್ಮನಿ, ಎಸ್.ಎಂ. ಹಿರೇಮಠ, ಸಹನಾ ಹಂಜೆ, ಜಯಪ್ರಕಾಶ ಭಜಂತ್ರಿ ಸೇರಿದಂತೆ ಮತ್ತಿತರ ನೌಕರರು ಇದ್ದರು.

ಕೊರೊನಾದಿಂದ ಸತ್ತವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚಿಸಿದ ಕೋರ್ಟ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾದಿಂದಾಗಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ತರ ಆದೇಶ ನೀಡಿದ್ದು, ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಯೂನಿಯನ್ ಆಫ್ ಇಂಡಿಯಾಗೆ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಕೊರೊನಾದಿಂದಾಗಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ನೀಡಬಹುದಾದ ಪರಿಹಾರದ ಮೊತ್ತದ ಕುರಿತು 6 ವಾರದೊಳಗೆ ಮಾಹಿತಿ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.

ಕನಿಷ್ಠ ಪರಿಹಾರವು ಸೆಕ್ಷನ್ 12 ರ ಪ್ರಕಾರ ಎಕ್ಸ್ ಗ್ರೇಷಿಯಾ ನೆರವನ್ನು ಒಳಗೊಂಡಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸೆಕ್ಷನ್ 12 ಕಡ್ಡಾಯ ನಿಬಂಧನೆಯಲ್ಲ ಎಂಬ ಕೇಂದ್ರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸೆಕ್ಷನ್ 12 ಎಂಬ ಪದ ಬಳಕೆ ಒಪ್ಪಿಕೊಂಡಿದೆ.
ಕೇಂದ್ರ ಸರ್ಕಾರಕ್ಕೆ ಇಷ್ಟೇ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ. ಪರಿಹಾರವಾಗಿ ಎಷ್ಟು ಮೊತ್ತ ನೀಡಬಹುದು ಎಂದು ಪರಿಶೀಲಿಸಿ ಸೂಚಿಸಬೇಕೆಂದು ಮಾರ್ಗಸೂಚಿ ಹೊರಡಿಸುವಂತೆ ಯೂನಿಯನ್ ಆಫ್ ಇಂಡಿಯಾಕ್ಕೆ ಆದೇಶ ನೀಡಿದೆ.

10 ದಿನಗಳಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇನ್ನು ಕೇವಲ 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಅಲ್ಲದೇ, ಆಗಷ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿದಂತೆ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಸೋಮವಾರ ಒಂದೇ ದಿನ ರಾಜ್ಯದ 94 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಕೊರೊನಾ ಲಸಿಕೆಯ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಎಂಜಿನೀಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ಜೂನ್ ತಿಂಗಳಲ್ಲಿ 60 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನೂ ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದೆ. ಇಡೀ ದೇಶದಲ್ಲಿಯೇ ಲಸಿಕೆ ನೀಡುವಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಸ್ನೇಹಿತರ ನಾಟಿ ಕೋಳಿ ಜಗಳ ಕೊಲೆಯಲ್ಲಿ ಅಂತ್ಯ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಕೋಳಿ ಊಟಕ್ಕೆ ಆಹ್ವಾನ ನೀಡಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ ಕೃಷ್ಣನಾಯ್ಕ (55) ಹತ್ಯೆಯಾದ ವ್ಯಕ್ತಿ. ಇದೇ ಗ್ರಾಮದ ರಂಗಪ್ಪ ಎಂಬ ವ್ಯಕ್ತಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.

ಮೃತ ಕೃಷ್ಣನಾಯ್ಕ ಹಾಗೂ ಆರೋಪಿ ರಂಗಪ್ಪ ಕುಚುಕು ಗೆಳೆಯರಾಗಿದ್ದರು. ಇಬ್ಬರೂ ಸೇರಿಕೊಂಡು ಪ್ರತಿದಿನ ಮದ್ಯ ಸೇವಿಸುತ್ತಿದ್ದರು. ಜೂನ್ 23ರ ರಾತ್ರಿ ಇಬ್ಬರೂ ಮದ್ಯ ಸೇವೆನೆ ಮಾಡಿಕೊಂಡು ಮನೆಗೆ ಆಗಮಿಸಿದ್ದು, ಮನೆಯಲ್ಲಿ ರಾತ್ರಿ ಊಟಕ್ಕೆ ಕೋಳಿ ಸಾಂಬಾರು ಮಾಡುವಂತೆ ಕೃಷ್ಣನಾಯ್ಕ ಪತ್ನಿಗೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಕೃಷ್ಣನಾಯ್ಕ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತ ರಂಗಪ್ಪನಿಗೆ ತಿಳಿಸಿ ಮತ್ತೆ ಮನೆಗೆ ಮರಳಿದ್ದನು. ಈ ಸಂದರ್ಭದಲ್ಲಿ ರಂಗಪ್ಪ ಕೋಳಿ ಸಾಂಬಾರನ್ನು ಸಂಪೂರ್ಣ ತಿಂದು ಕುಳಿತಿದ್ದನು. ಇದರಿಂದ ಕುಪಿತಗೊಂಡ ಕೃಷ್ಣನಾಯ್ಕ ಹಾಗೂ ರಂಗಪ್ಪನ ನಡುವೆ ಗದ್ದಲ ಉಂಟಾಗಿದೆ. ಪರಿಣಾಮ ರಂಗಪ್ಪ ಕೃಷ್ಣನಾಯ್ಕನಿಗೆ ಕುಡುಗೋಲಿನಿಂದ ಕೊಲೆಗೈದು ಪರಾರಿಯಾಗಿದ್ದ.

ಈ ಕುರಿತು ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾ ಚರಣೆ ಕೈಗೊಳ್ಳಲಾಗಿತ್ತು. ಘಟನೆಗೆ ಸಂಭಂದಿಸಿದಂತೆ ರಾಮಾಪುರ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಹಂದಿಯೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

error: Content is protected !!