Home Blog Page 3092

ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾದ ಬೈಕ್ ಸವಾರ!

0

ವಿಜಯಸಾಕ್ಷಿ ಸುದ್ದಿ,ಹಾಸನ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರನೊಬ್ಬ ಕಾಡಾನೆಯಿಂದ ಪಾರಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಮಠದ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಕಾಫಿತೋಟದಿಂದ ರಸ್ತೆಗೆ ದಿಢೀರ್ ಎಂಟ್ರಿಕೊಟ್ಟ ಒಂಟಿ‌ ಸಲಗವನ್ನು ನೋಡದೇ ನೇರವಾಗಿ ಆನೆ ಸಮೀಪವೇ ಬೈಕ್ ಸವಾರ ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಜನರ ಕೂಗಾಟಕ್ಕೆ ಎಚ್ಚೆತ್ತ ಬೈಕ್ ಸವಾರ ಬೈಕ್ ತಿರುಗಿಸಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗಿದ್ದಾನೆ.

ಈ ಭಾಗದಲ್ಲಿ ಹಲವು ದಿನಗಳಿಂದ ಈ ಒಂಟಿ ಸಲಗ ಸಂಚರಿಸುತ್ತಿದೆ. ಈವರೆಗೆ ಈ ಆನೆಯಿಂದ ಯಾರಿಗೂ ತೊಂದರೆ ಆಗದಿದ್ದರೂ ಕಾಡಾನೆ ಸಂಚಾರದಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ. ಹೀಗ ರಸ್ತೆ, ಗ್ರಾಮ ಎನ್ನದೇ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿರೋ ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ.

ನಾಳೆ ನಗರಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ: ನವೀಕೃತ ಬಸ್ ನಿಲ್ದಾಣ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಕೆಲವು ತಿಂಗಳ ಹಿಂದೆಯೇ ಜನರ ಬಳಕೆಗೆ ಸಿದ್ದಗೊಂಡು ಜನಪ್ರತಿನಿಧಿಗಳ ಶೀತಲ ಸಮರದಿಂದ ಉದ್ಘಾಟನೆಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ನಗರದ ನವೀಕೃತ ಹಳೆ ಬಸ್ ನಿಲ್ದಾಣಕ್ಕೆ ಅಂತೂ ಇಂತೂ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ.

ನಗರದ ಹೃದಯ ಭಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವನ್ನು ನಾಳೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸುವರು.

ಕಳೆದ ಡಿ.24 ರಂದೇ ಬಸ್ ನಿಲ್ದಾಣ ಉದ್ಘಾಟನೆಗಾಗಿ ಸಿದ್ಧತೆ ನಡೆದಿತ್ತು. ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ, ಉದ್ಘಾಟನೆಗೆಂದೇ ಅಂದು ನಗರಕ್ಕೆ ಬಂದಿದ್ದ ಸಚಿವ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸದೇ ಮರಳಿದ್ದರು.

ನವೀಕೃತ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರು.

ನಾಳೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಪ್ಪತ ಉತ್ಸವ-೨೦೨೧ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಅರವಿಂದ ಲಿಂಬಾವಳಿ ಹಾಗೂ ಆನಂದ್ ಸಿಂಗ್, ಶಾಸಕ ಎಚ್.ಕೆ.ಪಾಟೀಲ್ ಭಾಗವಹಿಸಲಿದ್ದು, ಈ ಕಾರಣಕ್ಕಾಗಿಯೇ ಬಸ್ ನಿಲ್ದಾಣ ಉದ್ಘಾಟನೆ ಆಗುವ ಭಾಗ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಮ್ ನಾಯಕರು, ಕಾನೂನು ಪಂಡಿತರು ಜನಾಂದೋಲನ ಆರಂಭಿಸಿ: ಡಾ. ಅಬ್ದುಲ್ ರಜಾಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಕ್ಕೂ ಹೆಚ್ಚು ವರ್ಷಗಳಾದ ಮೇಲೆ ಕರ್ನಾಟಕದಲ್ಲಿ ಭರ್ಜರಿಯಾಗಿ ತಮ್ಮ ಹಕ್ಕು ಪಡೆಯಲು ಹೋರಾಟಗಳು ಪಾದಯಾತ್ರೆ ಮೂಲಕ ನಡೆಯುತ್ತಿವೆ.

ಆದರೆ ನಮ್ಮ ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಸೇರಿದಂತೆ ಹೋರಾಟಗಾರರೆಲ್ಲರೂ ಸಾಚಾರ ಸಮಿತಿಯ ವರದಿ, ರಂಗನಾಥ್ ಮಿಶ್ರಾ ವರದಿ ಶಿಪಾರಸ್ಸಿಗಾಗಿ ಜನಾಂದೋಲನ ಆರಂಭಿಸಲು ಮುಂದಾಗಬೇಕು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್ ಮುಸ್ಲಿಂ ನಾಯಕರಲ್ಲಿ ಮನವಿ ಮಾಡಿದ್ದಾರೆ.

ವಾಲ್ಮೀಕಿ ಜನಾಂಗ ಮೀಸಲಾತಿಯಲ್ಲಿ ಶೇ 7% ಹಿಗ್ಗಿಸಲು ಹೋರಾಡುತ್ತಿದೆ. ರಾಜಕೀಯ ಅಧಿಕಾರ ಅನುಭವಿಸಿಯೂ ಕೂಡ ಕುರುಬ ಸಮುದಾಯ ಎಸ್.ಟಿ ಸೇರ್ಪಡೆಗೆ ಬೇಡಿಕೆ ಸಲ್ಲಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದೆ.

ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರುವ ಪಂಚಮಸಾಲಿ ಸಮಾಜ 2A ಗೆ ಸೇರಿಸುವದಕ್ಕಾಗಿ ಸರ್ಕಾರದ ಕಣ್ಣು ತೆರೆಯಲು ಕೂಡಲಸಂಗಮದಿಂದ ಬೆಂಗಳೂರಿಗೆ 700km ಪಾದಯಾತ್ರೆ ಆರಂಭಿಸಿದ್ದಾರೆ.

2B ನಲ್ಲಿ ಕ್ರೈಸ್ತರನ್ನು, ಜೈನರನ್ನು ಇಟ್ಟುಕೊಂಡ ಮುಸ್ಲಿಮ್ ಸಮುದಾಯ ಮಾತ್ರಾ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಈ ಸಮಯದಲ್ಲಿ ಕಾನೂನು ಬಲ್ಲವರು ಮಾತ್ರ ಹೋರಾಟಗಾರರಿಗೆ, ರಾಜಕೀಯ ಧುರೀಣರಿಗೆ ಮಾರ್ಗದರ್ಶನ ನೀಡಿ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದಿದ್ದಾರೆ.

ಅದು ಸಾಚಾರ ಸಮಿತಿಯ ವರದಿ ಶಿಫಾರಸ್ಸಿಗೋ ಅಥವಾ ರಂಗನಾಥ ಮಿಶ್ರಾ ವರದಿ ಶಿಪಾರಸ್ಸಿಗೋ ಒಟ್ಟಿನಲ್ಲಿ ದೇಶಾದ್ಯಂತ ಜನಾಂದೋಲನದ ಮಾದರಿಯಲ್ಲಿ ಹೋರಾಟಕ್ಕಿಳಿಯುವ ಸುವರ್ಣ ಯುಗಾರಂಭ ಮಾತ್ರ ಮತ್ತೆ ನಮ್ಮ ನಾಡಿನಿಂದ ಆರಂಭವಾಗಲಿ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ.

ದಾರಿ ಕಾಣದ ಯುವ ನಾಯಕರಿಗೆ, ಹೋರಾಟಗಾರರಿಗೆ ದಾರಿದೀಪವಾಗಿ ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳುವಂತೆ ಶಕ್ತಿ ತುಂಬಿ ಎಂದು ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಹೋರಾಟಗಾರರಲ್ಲಿ ಡಾ. ಅಬ್ದುಲ್ ರಜಾಕ್ ನದಾಫ್ ಮನವಿ ಮಾಡಿದ್ದಾರೆ.

ಚಿನ್ನಾಭರಣದೊಂದಿಗೆ ಓಡಿಹೋದ ಗೃಹಿಣಿ! ಪತಿಯಿಂದ ದೂರು ದಾಖಲು

0

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ವಿವಾಹಿತ ಮಹಿಳೆಯೋರ್ವಳು ಮನೆಯಲ್ಲಿ ಯಾರು ಇಲ್ಲದ ವೇಳೆ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗುಂಡೇಗಾಲ ಗ್ರಾಮದ ಶಿವಕುಮಾರ್ ರವರ ಪತ್ನಿ ಸೌಂದರ್ಯ ಎಂಬ ಗೃಹಿಣಿಯೇ ನಾಪತ್ತೆಯಾಗಿದ್ದು, ಆಕೆಯ ಪತಿ ಶಿವಕುಮಾರ್, ಕೊಳ್ಳೇಗಾಲ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

ನಾಪತ್ತೆಯಾಗಿರುವ ಸೌಂದರ್ಯ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಅಂತರಗಂಗೆ ಗ್ರಾಮದವರು. ಸೌಂದರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಶಿವಕುಮಾರ್ ಸಹ ಬೆಂಗಳೂರಿನ ಮಾಲ್ನಲ್ಲಿ ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.

ಇಬ್ಬರ ನಡುವೆ ಪರಿಚಯವಾಗಿ ತದನಂತರ ಪ್ರೇಮ ಬೆಳೆದಿದೆ. ಆನಂತರ ಕೊಳ್ಳೇಗಾಲಕ್ಕೆ ಬಂದು ಮದುವೆಯಾಗಿ ಹುಟ್ಟೂರಾದ ಗುಂಡೇಗಾಲದಲ್ಲಿ ಕಳೆದ ಒಂದು ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿದ್ದರು.

ಆದರೆ, ಜ.19 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸೌಂದರ್ಯ ತನ್ನ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ಕಾಣಿಯಾಗಿದ್ದಾಳೆ ಎಂದು ಆಕೆಯ ಪತಿ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು, ಮಹಿಳೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ದುಷ್ಕರ್ಮಿಗಳಿಂದ ಜೋಳದ ಬೆಳೆಗೆ ಬೆಂಕಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲ್ಲೂಕಿನ ಪು.ಬಡ್ನಿ ಗ್ರಾಮದ ರೈತನ ಜೋಳದ ಜಮೀನಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಬೆಳೆ ಹಾನಿ ಮಾಡಿದ್ದಾರೆ.

ಗ್ರಾಮದ ಭರಮಪ್ಪ ಕಾಂಬಳೆ ಎಂಬ ರೈತನ ಜಮೀನಿನಲ್ಲಿದ್ದ ಬೆಳೆಗೆ ಬೆಂಕಿ ಬಿದ್ದು ಬೆಳೆ ನಾಶವಾಗಿದೆ.

ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಿಳಿ‌ಜೋಳ ದುಷ್ಕರ್ಮಿಗಳ ಹೀನ ಕೃತ್ಯಕ್ಕೆ ಭಸ್ಮವಾಗಿದೆ. ವಾರದ ಹಿಂದಷ್ಟೇ ಅಕಾಲಿಕ ಮಳೆಗೆ ಜೋಳ ಬಿದ್ದು ಹಾಳಾಗಿತ್ತು. ಅಲ್ಪಸ್ವಲ್ಪ ಅಳೆದು ಉಳಿದಿದ್ದ ಬೆಳೆ ಸಂಪೂರ್ಣ ಕಟಾವಿಗೆ ಬಂದಿತ್ತು.

ರೈತ ಜೋಳದ ಬೆಳೆಯನ್ನು ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದ. ಅಷ್ಟರಲ್ಲೇ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಜಾನುವಾರುಗಳಿಗೂ ತಿನ್ನಲೂ ಬರದಂತೆ ಮೇವು ಸುಟ್ಟು ಕರಕಲಾಗಿದ್ದು, ರೈತ ಕಣ್ಣೀರು ಹಾಕುವಂತಾಗಿದೆ. ಸಂಕಷ್ಟಕ್ಕೊಳಗಾದ ರೈತನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದರು.

ನನಗೂ ಸಿಎಂ ಆಗೋ ಆಸೆ ಇದೆ! ಉಮೇಶ್ ಕತ್ತಿ ಹೊಸ ವರಸೆ

ವಿಜಯಸಾಕ್ಷಿ ಸುದ್ದಿ, ತುಮಕೂರು: ನನಗೆ ಹಾಗೂ ಯತ್ನಾಳ್ ಇಬ್ಬರಿಗೂ ಸೀನಿಯಾರಿಟಿ ಇದೆ. ಹೀಗಾಗಿ ನನಗೂ ಸಿಎಂ ಆಗವ ಆಸೆಯಿದೆ. ಸಿಎಂ ಸ್ಥಾನಕ್ಕೆ ನನಗೂ ಯತ್ನಾಳ್ ಗೂ ಪೈಪೋಟಿ ನಡೆಯಲಿದೆ ಎಂದು ಈಗಲೇ ಸಿಎಂ ಸ್ಥಾನದ ಆಸೆಯ ಸೂಚನೆಯನ್ನು ಉಮೇಶ್ ಕತ್ತಿ ನೀಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ ನೀಡಿದ ಉಮೇಶ್ ಕತ್ತಿ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. 75 ವರ್ಷದವರೆಗೂ ಆಡಳಿತ ನಡೆಸಲು ಅವಕಾಶವಿದೆ. ಹೀಗಾಗಿ ನಾನೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬಿಎಸ್ ವೈ ನನಗೆ ವಿಶೇಷವಾದಂತಹ ಜವಾಬ್ದಾರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಟ್ಟಿದ್ದಾರೆ. 4 ಕೋಟಿ 36 ಜನ್ರಿಗೆ ಆಹಾರ ನೀಡಲಾಗುತ್ತಿದೆ. ರಾಜ್ಯಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಈ ಖಾತೆ ಸಿಕ್ಕಿರೋದಕ್ಕೆ ನಾನು ಖುಷಿಯಲ್ಲಿದ್ದೀನಿ,ಸಂತೋಷ ಆಗಿದೆ ಎಂದರು.

ನನಗೆ ಶ್ರೀಗಳ ಆಶೀರ್ವಾದವಿದೆ, ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೆನೆ. ಜೀವನದಲ್ಲಿ ಸಿಎಂ ಆಗೋ ಆಸೆ ಎಲ್ಲರಿಗೂ ಇದೆ. ಸಿಎಂ ಆಗೋ ಆಸೆ ನನಗೂ ಇದೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.

ಮೀನುಗಾರರ ಬಲೆಗೆ ಬಿದ್ದ ಬೃಹತ್ ಶಾರ್ಕ್! ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ವಿಜಯಸಾಕ್ಷಿ ಸುದ್ದಿ, ಕಾರವಾರ: ಮೀನುಗಾರರ ಬಲೆಗೆ ಬಿದ್ದಿದ್ದ ಬೃಹತ್ ಶಾರ್ಕ್‌ ಮೀನನ್ನು ಮರಳಿ ಸಮುದ್ರಕ್ಕೆ ಬಿಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ತಾಲೂಕಿನ ಗೋಕರ್ಣದ ತಡದಿ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಈ ಬೃಹತ್ ಮೀನು ದೊರೆತಿದ್ದು ಈ ತಿಮಿಂಗಿಲ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಹಾಗೂ ಯಾರೂ ಕೂಡ ಆಹಾರಕ್ಕಾಗಿ ಬಳಸದ‌‌ ಕಾರಣ ವಾಪಸ್ ಕಡಲಿಗೆ ಬಿಡಲಾಗಿದೆ.

ಈ ಶಾರ್ಕ್ ಮೀನು ಬರೋಬ್ಬರಿ 500 ಕೆಜಿಗೂ ಅಧಿಕ ತೂಕವಿದ್ದು 11 ಅಡಿ ಉದ್ದವಿದೆ. ಇದನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾದ ಕಾರಣ ಈ ಬಗ್ಗೆ ತಿಳಿದ ಮೀನುಗಾರರು ವಾಪಸ್ ಕಡಲಿಗೆ ಬಿಟ್ಟಿದ್ದಾರೆ.

ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ಪ್ರಭೇದದ ಶಾರ್ಕ್ ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ. ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ಎನ್ನಲಾಗಿದ್ದು ಶಾಲಾ ಬಸ್‌ನ ಗಾತ್ರದವರೆಗೆ ಬೆಳೆಯುತ್ತವೆ. ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು ನಿಧಾನವಾಗಿ ಈಜುತ್ತವೆ.

ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ಚಾಲಕನ ಮೇಲೆ ಮಾರಾಣಾಂತಿಕ ಹಲ್ಲೆ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ಟ್ರಿಪಲ್ ರೈಡ್ ಹೋಗುತ್ತಿದ್ದ ಬೈಕ್ ವೊಂದನ್ನು ಓವರ್ ಟೆಕ್ ಮಾಡಿದ್ದಕ್ಕೆ, ಕೆಎಸ್ ಆರ್ ಟಿಸಿ ಚಾಲಕನಿಗರ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬೋಳನಹಳ್ಳಿ ಬಳಿ ನಡೆದಿದೆ.

ಹತ್ತಾರು ಜನರ ಎದುರೇ ಮಾರಕಾಸ್ತ್ರದಿಂದ ಚಾಲಕ ವೆಂಕಟೇಶ್ ಗೆ ಇರಿಯಲಾಗಿದೆ‌. ಬಸ್ ಹಾಸನದಿಂದ ಮೈಸೂರಿಗೆ ಬರುತ್ತಿತ್ತು. ಈ ವೇಳೆ ಟ್ರಿಪ್ಪಲ್ ರೈಡ್‌ನಲ್ಲಿದ್ದ ಬೈಕ್ ವೊಂದನ್ನು ಓವರ್ ಟೇಕ್ ಮಾಡಿದ್ದರು.

ಇದರಿಂದ ಕುಪಿತಗೊಂಡ ಬೈಕ್ ಸವಾರರು, ಬಹುದೂರದವರೆಗೂ ಬಸ್ ಫಾಲೋ ಮಾಡಿಕೊಂಡು ಬಂದು ಅಡ್ಡಗಟ್ಟಿ, ಬಸ್‌ನಿಂದ ಹೊಗೆ ಬಂತು ಅಂತ ಕ್ಯಾತೆ ತೆಗೆದರು. ನಂತರ ಪ್ರಯಾಣಿಕರ ಎದುರಲ್ಲೇ ಮಾತಿಗೆ ಮಾತು ಬೆಳೆಸಿ ಗಲಾಟೆ ಮಾಡಿ,ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸಾರಿಗೆ ಸಿಬ್ಬಂದಿ ಹಾಗೂ ಯುವಕರ ಜಗಳದ ವೇಳೆ, ಚಾಲಕ ವೆಂಕಟೇಶ್ ರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಚಾಲಕ ವೆಂಕಟೇಶ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಪ್ರಯಾಣಿಕರು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ‌.

ಪಿರಿಯಾಪಟ್ಟಣ ಡಿಪೋಗೆ ಸೇರಿದ‌ ಬಸ್ ಇದಾಗಿದ್ದು, ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ: ಕಾಡು ಪ್ರಾಣಿ ಬೇಟೆಗಾರನ ಬಂಧನ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಮುಳ್ಳುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರ ಮೇಲೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಜಿಲ್ಲೆಯ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಜಡೇಗೌಡ ( 53 ) ಬಂಧಿತ ಆರೋಪಿಯಾಗಿದ್ದಾನೆ. ಅದೇ ಗ್ರಾಮದ ಜೆ.ಮುನಿರಾಜು ಹಾಗೂ ಮುತ್ತು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದು , ಓರ್ವ ಆರೋಪಿಯನ್ನು ಬಂಧಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಮುಳ್ಳುಹಂದಿ ಹಾಗೂ ಕಾಡುಹಂದಿಯ ಮಾಂಸ, ಒಂದು ಬೈಕ್ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು , ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ .

ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಹೆಡ್‌ಕಾನ್‌ಸ್ಟೇಬಲ್ ಗಳಾದ ಲೋಕೇಶ್, ಶಂಕರ, ತಮೀವುಲ್ಲಾ, ಬಸವರಾಜು, ಕುಮಾರಸ್ವಾಮಿ, ಸ್ವಾಮಿ, ರಾಮಚಂದ್ರ ಹಾಗೂ ಚಾಲಕ ಜಾಫರ್ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆ: ಅಬ್ದುಲ್‌ ಹಮೀದ್

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರಿಂದ ಧರಣಿ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಧರಣಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿಗೆ ರೈತರು, ಕಾರ್ಮಿಕರು ಹಾಗೂ ಬಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರಗಳು ಬ್ರಿಟಿಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ ಎಂದು ಕಿಡಿ ಕಾರಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಫಾರಂ ಮಾತನಾಡಿ,
ಕೇಂದ್ರ ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿದೆ. ಪ್ರಧಾನಿ ಮೋದಿಯವರ ಕೃಷಿ ವಿರೋಧಿ ನಡೆಯಿಂದ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಹರಿ ಹಾಯ್ದರು.

ಈ ಸಂದರ್ಭದಲ್ಲಿ , ಅಜೀಜ್ ಜಾಗಿರದಾರ್, ಸಲೀಂ ಅಹಮದ್ ಚಿತಾಪುರ, ಸಿದ್ದಣ್ಣ ಜಿ.ಚಕ್ರ, ಮೋಬಿನ್ ಅಹ್ಮದ್, ಅಜೀಜ್ ಪಟೇಲ್ ಯಾಳವಾರ್, ಮುನೀರ್ ಹಾಸ್ಮಿ, ಸಲೀಂ ಸದರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

error: Content is protected !!