Home Blog Page 3092

ಮೊದಲ ಹಂತದ ಗ್ರಾ.ಪಂ. ಚುನಾವಣೆ;
ಅಂತಿಮವಾಗಿ 2216 ಅಭ್ಯರ್ಥಿಗಳು ಕಣದಲ್ಲಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಂತಿಮವಾಗಿ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ಮೊದಲ ಹಂತದಲ್ಲಿ ಗದಗ ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 207, ಅನುಸೂಚಿತ ಪಂಗಡದ 77, ಹಿಂದುಳಿದ ‘ಅ’ ವರ್ಗ 216, ಹಿಂದುಳಿದ ‘ಬ’ ವರ್ಗ 36, ಸಾಮಾನ್ಯ 653 ಸೇರಿ ಒಟ್ಟು 1189 ಅಭ್ಯರ್ಥಿಗಳಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 144, ಅನುಸೂಚಿತ ಪಂಗಡದ 47, ಹಿಂದುಳಿದ ‘ಅ’ ವರ್ಗ 55, ಹಿಂದುಳಿದ ‘ಬ’ ವರ್ಗ 9, ಸಾಮಾನ್ಯ 257 ಸೇರಿ ಒಟ್ಟು 512 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅದರಂತೆ, ಶಿರಹಟ್ಟಿ ತಾಲ್ಲೂಕಿನ 14 ಗ್ರಾ.ಪಂ‌. 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 114, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ’ ವರ್ಗ 62, ಹಿಂದುಳಿದ ‘ಬ’ ವರ್ಗ 17, ಸಾಮಾನ್ಯ 267 ಸೇರಿ ಒಟ್ಟು 515 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

ಕೊಲೆಯಾದ ಯುವಕನ ಗುರುತು ಪತ್ತೆ; ಹಂತಕರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಮುಳಗುಂದ ರಸ್ತೆಯ ಈಚಲ ಹಳ್ಳದಲ್ಲಿ ನಿನ್ನೆ ಪತ್ತೆಯಾಗಿದ್ದ ಯುವಕನ ಶವದ ಗುರುತು ಪತ್ತೆಯಾಗಿದ್ದು, ನಗರದ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿ ರಮೇಶ್ ಹುಳಕಣ್ಣವರ ಎಂದು ತಿಳಿದು ಬಂದಿದೆ.

ರಮೇಶ್ ನ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ. ಅಲ್ಲದೇ, ಕೊಲೆಯಾಗಿರುವ ಯುವಕನ ಮೃತದೇಹವನ್ನು ದುಷ್ಕರ್ಮಿಗಳು ಈಚಲ ಹಳ್ಳದ ಬ್ರಿಡ್ಜ್ ಕೆಳಗೆ ರವಿವಾರ ತಡರಾತ್ರಿ ಎಸೆದು ಹೋಗಿದ್ದರು. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿತ್ತು.

ಇದನ್ನೂ ಓದಿ ಯುವಕನ ಕೊಲೆ; ಬ್ರಿಡ್ಜ್ ಕೆಳಗೆ ಶವ ಎಸೆದು ಹೋದ ದುಷ್ಕರ್ಮಿಗಳು

ರಮೇಶ್ ಆಟೋ ಚಾಲಕನಾಗಿದ್ದು, ಅವನ ಸ್ನೇಹಿತನೇ ಕರೆದುಕೊಂಡು ಹೋಗಿ ಹತ್ಯೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಪ್ರೇಮ ಕಲಹ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ರಮೇಶ್ ಭಾಗಿಯಾಗಿದ್ದನೇ
ಎಂಬ ಎಲ್ಲಾ ಆಯಾಮಗಳನ್ನಿಟ್ಟುಕೊಂಡು ಮೃತ ಯುವಕನ ಕುಟುಂಬದವರ ಮಾಹಿತಿ ಆಧರಿಸಿ ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ; ಠಾಣೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ಕಾರ್ಯಕರ್ತ ಕಾರ್ತಿಕ್ ಗುಜಮಾಗಡಿ ಹಾಗೂ ಆತನ ಸಹಚರ ಇಬ್ಬರು ಸೇರಿ ಬಿಜೆಪಿ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಶಾಖಾ ಮುಖ್ಯ ಶಿಕ್ಷಕ ಪಂಚಾಕ್ಷರಿ ಅಂಗಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಗದಗ ನಗರದ ರಾಚೋಟೇಶ್ವರ ನಗರದ ಒಕ್ಕಲಗೇರಿ ಓಣಿಯ ಸಿಟಿಜನ್ ಶಾಲೆಯ ಹತ್ತಿರವಿರುವ ಬಿಜೆಪಿ ಕಾರ್ಯಕರ್ತ ಪಂಚಾಕ್ಷರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಹಲ್ಲೆ ಮಾಡಿರುವ ಆರೋಪಿಗಳು ಪಂಚಾಕ್ಷರಿ ಅವರ ಮನೆಯೊಳಗೆ ಹೋಗಿ ಹೊರಗೆ ಎಳೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುವುದು ಇನ್ನೂ ತಿಳದು ಬಂದಿಲ್ಲ. ಆದರೆ, ಒಂದು ವಿಡಿಯೋ ಶೇರ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗದಗ ಶಹರ ಪೊಲೀಸ್ ಠಾಣೆಯಲ್ಲಿ ಜಮಾಯಿಸದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಲ್ಲೆ ನಡೆಸಿದವರನ್ನು ಬಂಧಿಸುವವರೆಗೂ ನಾವು ಠಾಣೆಯಿಂದ ಹೊರ ಹೋಗುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್‌ ಮಾಳಶೆಟ್ಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.

ಹಲ್ಲೆ ಮಾಡಿರುವ ಕಾರ್ತಿಕ್ ಗುಜುಮಾಗಡಿಗೆ ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಅವರ ಕುಮ್ಮಕ್ಕು ಇದೆ ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಯುವಕನ ಕೊಲೆ; ಬ್ರಿಡ್ಜ್ ಕೆಳಗೆ ಶವ ಎಸೆದು ಹೋದ ದುಷ್ಕರ್ಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಯುವಕನೋರ್ವನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದು ಹೋಗಿರುವ ಘಟನೆ ಸಮೀಪದ ಮುಳಗುಂದ ರಸ್ತೆಯಲ್ಲಿ ನಡೆದಿದೆ.

ಮುಳಗುಂದ ರಸ್ತೆಯ ಈಚಲ ಹಳ್ಳದ ಬ್ರಿಡ್ಜ್ ಕೆಳಗೆ ಕೊಲೆಯಾದ ಯುವಕನ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ. ರವಿವಾರ ತಡರಾತ್ರಿ ಶವ ಎಸೆದು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಲೆಯಾಗಿರುವ ಯುವಕ ಅಂದಾಜು 25 ರಿಂದ 28 ವಯಸ್ಸಿನವನಾಗಿದ್ದು, ಯಾರೆಂಬುವುದು ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ ಕೊಲೆಯಾದ ಯುವಕನ ಗುರುತು ಪತ್ತೆ; ಹಂತಕರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

ಮೃತ ಯುವಕ ಸಾದಗಪ್ಪಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಮೈ ಮೇಲೆ ಕೆಂಪು ಉದ್ದ ತೋಳಿನ ಟೀ ಶರ್ಟ್, ಕ್ರೀಮ್ ಕಲರ್ ಪ್ಯಾಂಟ್ ಧರಿಸಿದ್ದಾನೆ. ಎಡಗೈ ಮೇಲೆ mom dad*** ಎಂದು ಬಲಗೈ ಮೇಲೆ s ಅಮ್ಮ ಅಂತಾ ಹಾಗೂ ಹೂವಿನ ಚಿತ್ರವಿರುವ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅಲ್ಲದೇ, ಬಲಗೈಯಲ್ಲಿ ಕಬ್ಬಿಣದ ಕಡಗ, ಬಲಗೈ ಬೆರಳಿನಲ್ಲಿ ಗಣೇಶ ಚಿತ್ರವಿರುವ ಉಂಗುರ, ಕಾಲಿನಲ್ಲಿ ಎರಡೆಳೆ ಕರಿದಾರ, ಸೊಂಟದಲ್ಲಿ ಶಿವದಾರದ ಉಡದಾರ ಇದೆ‌.

ಮಾಹಿತಿ ಹೋಲುವ ಯಾವುದಾದರೂ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಸಂಪರ್ಕಿಸುವಂತೆ ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತನವರ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರಿಂದ ಗೂಂಡಾಗಿರಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅಪಹರಣ: ಅನಿಲ್ ಮೆಣಸಿನಕಾಯಿ ಆರೋಪ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ ತಾಲ್ಲೂಕಿನ ಹುಲಕೋಟಿ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭರ್ಥಿಗಳನ್ನು ಶಾಸಕ ಎಚ್ ಕೆ ಪಾಟೀಲ್ ರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

ಹುಲಕೋಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೂಂಡಾಗಿರಿ ನಡೆಸುತ್ತಿದ್ದು, ಬಿಜೆಪಿಯ ಅಭ್ಯರ್ಥಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಿಲ್ ಆರೋಪಿಸಿದ್ದಾರೆ.

ಮೊದಲ ಹಂತದ ಗ್ರಾ.ಪಂ.ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ಘಳಿಗೆಯಲ್ಲಿ ಶುಕ್ರವಾರದಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ರವಿವಾರದಿಂದ ಬಿಜೆಪಿ ಅಭ್ಯರ್ಥಿಗಳು ಹುಲಕೋಟಿ ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ನವರೇ ಬಿಜೆಪಿ ಅಭ್ಯರ್ಥಿಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹುಲಕೋಟಿಯಲ್ಲಿ ಬಿಜೆಪಿಗರ ಮೇಲೆ ಕಾಂಗ್ರೆಸ್ ನವರು ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಹುಲಕೋಟಿ ಗ್ರಾಮದ ಬಿಜೆಪಿ ಬೆಂಬಲಿತ ವಾರ್ಡ್ ನಂ.3 ಹಿಂದುಳಿದ ‘ಅ’ ವರ್ಗದ ಅಭ್ಯರ್ಥಿ ನಿಂಗಪ್ಪ ನೀಲಪ್ಪ ದುರಗಣ್ಣವರ, ವಾರ್ಡ್ ನಂ.2 ರ ಮೀಸಲಾತಿ ಅಭ್ಯರ್ಥಿ ಹನಮವ್ವ ದೇವಪ್ಪ ನಿಂಬನಾಯ್ಕರ, ವಾರ್ಡ್‌ ನಂ.4 ಸಾಮಾನ್ಯ ಅಭ್ಯರ್ಥಿ ಕರಿಯಪ್ಪ ಫಕ್ಕೀರಪ್ಪ ರವಳೋಜಿ, ವಾರ್ಡ್ ನಂ.1 ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ರಾಮನಗೌಡ ಗೌಡಪ್ಪಗೌಡ ಹಿರೇಗೌಡರ ಅವರನ್ನು ಶಾಸಕರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.

4 ನೇ ವಾರ್ಡ್ ಅಭ್ಯರ್ಥಿ ಸವಿತಾ ಹನಮರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ಬಿಜೆಪಿ ನಾಯಕರು ಪೊಲೀಸರ ಗಮನಕ್ಕೆ ತಂದಿದ್ದರಂತೆ. ಹಾಗಾಗಿ ಅಭ್ಯರ್ಥಿ ಸವಿತಾ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಿ ಭದ್ರತೆ ಒದಗಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಎಂದಿನಂತೆ ಬಸ್ ಸಂಚಾರ ಆರಂಭ; ಒಂದೆಡೆ ಮಂದಹಾಸ, ಇನ್ನೊಂದೆಡೆ ಆತಂಕ!

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬಸ್ ಬಂದ್ ಮಾಡಿ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದ ಸಾರಿಗೆ ಸಿಬ್ಬಂದಿಗಳು ಮುಷ್ಕರ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.

ಬಸ್ ಬಂದ್ ಆಗಿದ್ದರಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದ ಕಳೆದ ಮೂರು ದಿನಗಳಿಂದ ಪ್ರಯಾಣಿಕರಿಲ್ಲದೇ ಬಣಗುಡುತ್ತಿತ್ತು. ಬೇರೆ ಊರಿಗೆ ಹೋಗಲಾಗದೆ ಜನರು ಚಡಪಡಿಸಿದ್ದರು. ಬಸ್ ಯಾವಾಗ ಪ್ರಾರಂಭ ಆಗುತ್ತವೆಯೋ ಎಂದು ಕನವರಿಸುತ್ತಿದ್ದರು.

ನಗರದಲ್ಲಿ ಸೋಮವಾರ ಎಂದಿನಂತೆ ಬಸ್ ಸಂಚಾರ ಶುರುವಾಗಿದೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ. ಬಸ್ ಆರಂಭ ಆಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಒಂದೊಂದಾಗಿ ಬಸ್ ಗಳು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಬಸ್ ಏರಿ ತಾವು ಹೋಗಬೇಕಾದ ಊರಿಗೆ ತೆರಳುತ್ತಿದ್ದಾರೆ. ನಿಲ್ದಾಣಕ್ಕೆ ಬಸ್ ಗಳು ಬರುತ್ತಿದ್ದಂತೆ ಜನರು ಓಡೋಡಿ ಬಂದು ಬಸ್ ಹತ್ತುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.

ಆದರೆ, ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನಗಳ ಸಂಖ್ಯೆ ಕಡಿಮೆ ಇದ್ದು, ಸದ್ಯ ಜಿಲ್ಲೆಯ ವಿವಿಧ ಡಿಫೋಗಳಿಂದ 34 ಬಸ್ ರಸ್ತೆಗಿಳಿದಿವೆ. ಅದರಲ್ಲಿ ಗದಗ-13, ರೋಣ-7, ಲಕ್ಷ್ಮೇಶ್ವರ-2, ನರಗುಂದ-1 ಮುಂಡರಗಿ – 4 ಹಾಗೂ ಗಜೇಂದ್ರಗಡ- 7 ಡಿಫೋದಿಂದ ಬಸ್ ಸಂಚರಿಸುತ್ತಿವೆ. ಮತ್ತೆ ಬಸ್ ಗಳು ಬಂದಾಗುವ ಸಾದ್ಯತೆಗಳಿದ್ದು, ವಸತಿ ಇರುವ ಬಸ್ ಗಳನ್ನು ಇನ್ನೂವರೆಗೂ ಬಿಟ್ಟಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.

ಇದರಿಂದ ಪ್ರಯಾಣಿಕರಲ್ಲಿ ಸಹಜವಾಗಿ ಆತಂಕ ಮೂಡಿದ್ದು, ಮತ್ತೆ ಯಾವಾಗ ಬಸ್ ಬಂದ್ ಆಗುತ್ತದೆಯೋ ಎಂಬ ಅನುಮಾನದಲ್ಲೇ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಗೊಂದಲದ ಮುಷ್ಕರ; ಬಸ್‌ಗೆ ಬಿತ್ತು ಕಲ್ಲು!

0

ವಿಜಯಸಾಕ್ಷಿ ಸುದ್ದಿ, ಕುಷ್ಟಗಿ: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಬಸ್‌ಗೆ ಕಲ್ಲು ತೂರಿದ ಘಟನೆ ನಡೆದಿದೆ. ಕಿಡಿಗೇಡಿಗಳು ಬಸ್‌ಗೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದ್ದು, ಕೃತ್ಯಕ್ಕೆ ಕಾರಣರಾದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಕೊಪ್ಪಳದಿಂದ ವಿಜಯಪುರಕ್ಕೆ ಹೊರಟಿದ್ದ ಬಸ್‌ಗೆ ಕಲ್ಲು ಎಸೆಯಲಾಗಿದೆ.

ಕೆ ಎ 37, ಎಫ್ 0911 ಬಸ್ ಗಾಜಿಗೆ ಕಲ್ಲು ತೂರಲಾಗಿದೆ. ನಿನ್ನೆ ರಾತ್ರಿ ಬಸ್ ಗ್ಲಾಸ್‌ಗೆ ಕಲ್ಲು‌ ಎಸೆದಿದ್ದಾರೆ. ನಿನ್ನೆ ರಾತ್ರಿ ಒತ್ತಾಯ ಪೂರ್ವಕವಾಗಿ ಬಸ್ ಬಿಡಲಾಗಿತ್ತು.

ಬಸ್ ಬಿಟ್ಟ ಹಿನ್ನೆಲೆ ಸಿಬ್ಬಂದಿಗಳೇ ಬಸ್‌ಗೆ ಕಲ್ಲು ಎಸೆದಿರೋ ಶಂಕೆ ವ್ಯಕ್ತವಾಗಿದೆ. ಇಂದೂ ಸಹ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಈ ಕುರಿತು ಕುಷ್ಟಗಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಬಸ್ ನಿಲ್ದಾಣದ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಾಳೆಯಿಂದ ಉಪವಾಸ ಸತ್ಯಾಗ್ರಹ: ಸಾರಿಗೆ ನೌಕರರ ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಸಾರಿಗೆ ನೌಕರರು, ಕಾರ್ಮಿಕ ಸಂಘಟಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.

ಜಿಲ್ಲೆಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಪರವಾನಿಗೆ ನೀಡಿಲ್ಲ. ನಾಳೆಯಿಂದ ಪರವಾನಿಗೆ ಕೊಡಲಿ ಕೊಡದಿರಲಿ ಉಪವಾಸ ಸತ್ಯಾಗ್ರಹ ಮಾಡೇ ಮಾಡ್ತೀವಿ. ಬೇಡಿಕೆ ಇಡೇರುವರೆಗೂ ಹೋರಾಟ ಹಿಂಪಡೆಯೋದಿಲ್ಲವೆಂದು ತಿಳಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಲು ಸಾರಿಗೆ ಸಚಿವರು ಜಿದ್ದಿಗೆ ಬಿದ್ದಿದ್ದಾರೆ. ಅವರನ್ನು ಕರೆಯದಿರುವ ಉದ್ದೇಶ ಗೊತ್ತಾಗುತ್ತಿಲ್ಲ. ಖಾಸಗಿ ವಾಹನಗಳನ್ನು ರಸ್ತೆಗಿಳಿಸುವ ಸರ್ಕಾರದ ಯತ್ನ ವಿಫಲವಾಗಿದೆ ಎಂದರು.

ರಾಜ್ಯದಲ್ಲೆಲ್ಲೂ ಖಾಸಗಿ ವಾಹನಗಳು ಓಡಾಡುವುದಿಲ್ಲ. ಖಾಸಗಿ ವಾಹನ ಸಿಬ್ಬಂದಿಗಳು ಸಹೋದರರಿದ್ದಂತೆ. ನಮ್ಮ‌ ಕಷ್ಟ-ನಷ್ಟಗಳು ಖಾಸಗಿಯವರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರು ಖಂಡಿತ ಬರುವುದಿಲ್ಲ ಎಂದ ಸಾರಿಗೆ ನೌಕರರು, ನಮ್ಮ ಮೇಲೆ ಎಸ್ಮಾ ಆದರೂ ಜಾರಿ ಮಾಡಲಿ, ಜೈಲಿಗಾದ್ರೂ ಹಾಕಲಿ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸರ್ಕಾರ ಯಾವುದೇ ಅಸ್ತ್ರ ಪ್ರಯೋಗಿಸಿದರು ಎದುರಿಸಲು ಸಿದ್ಧವಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆ ಎಸ್ ಆರ್ ಟಿಸಿ ನೌಕರ ಎಸ್.ಕೆ.ಅಯ್ಯನಗೌಡರ ಆಕ್ರೋಶ ಹೊರ ಹಾಕಿದರು.

ಮೊದಲ ಹಂತದ ನಾಮಪತ್ರಗಳ ಪರಿಶೀಲನೆ: 71 ಉಮೇದುವಾರಿಕೆ ತಿರಸ್ಕೃತ, 2657 ಅಭ್ಯರ್ಥಿಗಳು ಅಂತಿಮ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆಯ ಅವಧಿ ಶುಕ್ರವಾರದಂದು (ಡಿ.11) ಮುಕ್ತಾಯಗೊಂಡಿದೆ.

ಮೊದಲ ಹಂತದ 53 ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 2802 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರದಂದು (ಡಿ.12) ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದದ್ದು,
71 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇದರಿಂದ ಒಟ್ಟು 2657 ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆ ತಿಳಿಸಿದೆ.

ನಾಳೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ, ಆಯೋಗ ಸೂಚಿಸಿರುವ ಚಿಹ್ನೆಗಳನ್ನೇ ಆಯ್ದುಕೊಳ್ಳಬೇಕು: ಡಿಸಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ನೀಡಿದ ಸಮಯಾವಕಾಶ ನಾಳೆ ಮುಕ್ತಾಯಗೊಳ್ಳಲಿದೆ. ಡಿ.14 ರಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿ ಪ್ರಕಟಿಸಿದೆ. ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಪೈಕಿ ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದಾದರೂಂದು ಚಿಹ್ನೆ ನಮೂದಿಸಬೇಕು. ನಮೂದಿಸಿರುವ ಚಿಹ್ನೆಗಳ ಹೊರತು ಬೇರಾವ ಚಿಹ್ನೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸುಂದರೇಶ್ ಬಾಬು

ನಿಯಮ 22 ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕ ಅನುಸರಿಸಿ ಹಂಚಿಕೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಇಬ್ಬರು ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ. ಒಂದೇ ಚಿಹ್ನೆ ಇಬ್ಬರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕೋರಿದ್ದಲ್ಲಿ ನಿಯಮ 22 (5)(ಎ) ಪ್ರಕಾರ ಚೀಟಿ ಎತ್ತುವ ಮೂಲಕ ಯಾರಿಗೆ ಆ ಚಿಹ್ನೆ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೇ ಅಥವಾ 3ನೇ ಚಿಹ್ನೆಯನ್ನು ನಿಯಮ 22 ಅನುಸರಿಸಿ ನೀಡಲಾಗುವುದು.

ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ಧಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿಯು ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡಾವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು.
 
ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ತಯಾರಿಸಿ, ಅವರಿಗೆ ಚುನಾವಣಾ ಚಿಹ್ನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನು ಅನುಸರಿಸಿ ಚುನಾವಣಾ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.

ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿ ಕರೆದು ಚಿಹ್ನೆ ಹಂಚಿಕೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!