Home Blog Page 3100

ಕೊರೊನಾ ವಾರಿಯರ್ಸ್ ಬಲಿ ಪಡೆದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ ನ ಅಟ್ಟಹಾಸ ಶುರುವಾಗಿದೆ. ಸದ್ಯ ಮೊದಲ ಬಲಿಯನ್ನು ಕೂಡ ಈ ಫಂಗಸ್ ಪಡೆದಿದೆ. ಕೊರೊನಾ ವಾರಿಯರ್ಸ್ ಗಳನ್ನು ಬಲಿ ಪಡೆದಿದೆ. ಮಹಾನಗರ ಪಾಲಿಕೆಯ ಗುತ್ತಿಗೆ ನೌಕರ ವಿನೋದ್ ಹಾಗೂ ಕೋವಿಡ್ ಮೃತ ದೇಹ ಸಾಗಿಸುತ್ತಿದ್ದ ಆಂಬುಲೇನ್ಸ್ ಚಾಲಕ ರವಿ ಬಲಿಯಾಗಿದ್ದಾರೆ.

ಕಳೆದ ಹದಿನಾರು ದಿನಗಳ ಹಿಂದೆ ರವಿ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ನೊಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪಾಲಿಕೆ ನೌಕರ ವಿನೋದ್ ಅವರು ಫಾಗಿಂಗ್ ವಾಹನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ದಿನಗಳ ಹಿಂದೆ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಸಾವನ್ನಪ್ಪಿದ್ದಾರೆ.

ರಾಜ್ಯದ ಜನರಿಗೆ ಸಿಕ್ಕ ಶುಭ ಸುದ್ದಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೆಲವು ದಿನಗಳಿಂದ ಲಸಿಕೆಯ ಅಭಾವ ಸೃಷ್ಟಿಯಾಗಿತ್ತು. ಇದರಿಂದಾಗಿ ಸಾಕಷ್ಟು ಅವಾಂತಾರಗಳು ಉಂಟಾಗಿದ್ದವು. ಆದರೆ, ಸದ್ಯ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಲಸಿಕೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೊರೊನಾ ಲಸಿಕೆ ಪೂರೈಕೆ ಆಗಿದೆ. ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆಯಿಂದಾಗಿ 2 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ರಾಜ್ಯದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ದೇಶದ 25 ನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಸುವುದಾಗಿ ಭಾರತ್ ಬಯೋಟೆಕ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಸದ್ಯ ರಾಜ್ಯದಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಬಂದಿರುವುದರಿಂದಾಗಿ ಜನ ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ.

ಈ ಲಸಿಕೆಗಳನ್ನು ಆನಂದರಾವ್ ವೃತ್ತದ ಉಗ್ರಾಣದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಜನರು ಕಾಯುತ್ತಿದ್ದು, ಸದ್ಯ 2 ಲಕ್ಷ ಡೋಸ್ ಪೂರೈಕೆ ಆಗಿರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕೊಂಚ ಸುಲಭವಾಗಲಿದೆ.

ಲಸಿಕೆಯ ವಿವರದ ಜತೆಗೆ ಕೊವಿನ್ ಪೋರ್ಟಲ್ ನಲ್ಲಿ ಯಾವ ಕೇಂದ್ರಗಳಲ್ಲಿ ಉಚಿತ ಲಸಿಕೆ ಲಭ್ಯವಿದೆ ಹಾಗೂ ಯಾವ ಕೇಂದ್ರದಲ್ಲಿ ಹಣಕೊಟ್ಟು ಲಸಿಕೆ ಪಡೆಯಬೇಕು ಎಂಬ ವಿವರವೂ ಸಿಗಲಿದೆ.

ಹತೋಟಿಗೆ ಬಾರದ ಕೊರೊನಾ – ರಾಜ್ಯದಲ್ಲಿ ಮತ್ತೆ ಮುಂದುವರೆಯುವುದೇ ಲಾಕ್ ಡೌನ್?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದೆ. ಆರಂಭದಲ್ಲಿ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತು. ಇದಕ್ಕೆ ಕೊರೊನಾ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ಆದರೂ ಮಹಾಮಾರಿ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಮತ್ತೆ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಸಿಎಂ ಯಡಿಯೂರಪ್ಪ ಅವರು ಇಂದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಸಿಎಂ ಅವರು ಇಂದು ಬೆಳಿಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಭೆಯಲ್ಲಿ ಲಾಕ್‍ ಡೌನ್ ವಿಷಯದ ಬಗ್ಗೆಯೇ ಅವರು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯದ ಸ್ಥಿತಿಯಲ್ಲಂತೂ ಕೊರೊನಾ ಹತೋಟಿಗೆ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ಅನಿವಾರ್ಯ. ಆದರೆ, ಲಾಕ್ ಡೌನ್ ಅನ್ನು ಎಷ್ಟು ದಿನಗಳಿಗೆ ವಿಸ್ತರಿಸುತ್ತಾರೆ ಎಂಬುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಇನ್ನೂ 14 ದಿನಗಳ ಕಾಲವಾದರೂ ಕಠಿಣ ಲಾಕ್ ಡೌನ್ ಬೇಕು ಎಂದು ತಜ್ಞರು ಈಗಾಗಲೇ ಸಿಎಂ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.

ಲಾಕ್‍ ಡೌನ್ ಮುಂದುವರೆಸಲು ಸಂಪುಟದ ಸಚಿವರು ಕೂಡ ಬೆಂಬಲ ಸೂಚಿಸಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಲಾಕ್ ಡೌನ್ ಅನಿವಾರ್ಯ ಎಂದು ಸಿಎಂ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗಬಹುದು ಎನ್ನಲಾಗುತ್ತಿದೆ. ರೂ. 500 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್ ನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡುವ ಸಾಧ್ಯತೆ ಇದೆ. ನಿನ್ನೆ ಸಿಎಂ ಯಡಿಯೂರಪ್ಪ ಅವರು ಹಣಕಾಸು ಇಲಾಖೆಯ ಅಧಿಕಾರಿಗೊಳೊಂದಿಗೆ ಸಭೆ ನಡೆಸಿದ್ದಾರೆ. ಹೀಗಾಗಿಯೇ ಬಡವರಿಗೆ, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿರೋಧ ಪಕ್ಷದ ನಾಯಕರು ಕೂಡ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸರ್ಕಾರಕ್ಕೆ ಸಲಹೆ – ಸೂಚನೆ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಲಾಕ್ ಡೌನ್ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಒಂದು ತಿಂಗಳು ಕಾಲ ಲಾಕ್ ಡೌನ್ ಜಾರಿ ಮಾಡಿ ಎಂದು ಹೇಳಿದ್ದಾರೆ.

ಮತ್ತೊಮ್ಮೆ ಕೊರೊನಾ ರೋಗಿಗಳ ಪಾಲಿಗೆ ದೇವರಾದ ಶಾಸಕ ರೇಣುಕಾಚಾರ್ಯ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾಜ್ಯದಲ್ಲಿ ಮಹಾಮಾರಿಯ ಎರಡನೇ ಅಲೆಯ ಕಾಟ ಶುರುವಾದಾಗಿನಿಂದ ಸಾವು – ನೋವುಗಳೇ ಹೆಚ್ಚಾಗುತ್ತಿವೆ. ಕೊರೊನಾದೊಂದಿಗೆ ರೂಂಪಾತರ ವೈರಸ್, ಬ್ಲ್ಯಾಕ್ ಫಂಗಸ್ ನಂತಹ ಬಾಧೆ ಜನರನ್ನು ಮತ್ತಷ್ಟು ನಿತ್ರಾಣಗೊಳಿಸುತ್ತಿವೆ. ಇದರೊಂದಿಗೆ ಆಕ್ಸಿಜನ್ ಕೊರತೆ, ಜನರ ಪ್ರಾಣವನ್ನೇ ಕಸಿದುಕೊಳ್ಳುತ್ತಿದೆ. ಈ ಮಧ್ಯೆ ಹಲವು ಜನನಾಯಕರು ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದರೆ, ಹಲವರು ಮಾತ್ರ ಹಗಲಿರುಳು ಜನ ಸೇವೆ ಮಾಡುತ್ತಿದ್ದಾರೆ. ಈ ಸಾಲಿಗೆ ಶಾಸಕ ರೇಣುಕಾರ್ಯ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಬಹುಶಃ ತಪ್ಪಾಗಲಾರದು.

ಇತ್ತೀಚೆಗಷ್ಟೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಮಧ್ಯರಾತ್ರಿ ಧಾವಿಸಿ ತಮ್ಮದೇ ಕಾರಿನಲ್ಲಿ ಆಕ್ಸಿಜನ್ ಪೂರೈಕೆ ಮಾಡಿದ್ದರು. ಸದ್ಯ ಮತ್ತ ಇಂತಹ ಕೆಲಸ ಮಾಡಿರುವ ಅವರು ಸುಮಾರು 45 ಜನ ಕೊರೊನಾ ರೋಗಿಗಳ ಪ್ರಾಣ ರಕ್ಷಿಸಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ಅವರ ಸಮಯಪ್ರಜ್ಞೆಯಿಂದಾಗಿ ಸುಮಾರು 45 ಜನರು ಬದುಕುಳಿದಿದ್ದಾರೆ. ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಮಧ್ಯರಾತ್ರಿ ತಮ್ಮ ಸ್ವಂತ ಖರ್ಚಿನಲ್ಲಿ 25 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಕೂಡಲೇ ಎಚ್ಚೆತ್ತ ವೈದ್ಯರು ಮೆಡಿಕಲ್ ಆಕ್ಸಿಜನ್ ಕೊರತೆ ಬಗ್ಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಭದ್ರಾವತಿ, ಹರಿಹರದಿಂದ ಮೆಡಿಕಲ್ ಆಕ್ಸಿಜನ್ ತರಲು ವ್ಯವಸ್ಥೆ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ಒಟ್ಟು 45 ಜನ ಆಕ್ಸಿಜನ್ ಬೆಡ್ ನಲ್ಲಿದ್ದ ಕಾರಣ ಅವರೆಲ್ಲರ ಪ್ರಾಣ ಉಳಿಸಿದ್ದಾರೆ.

ಈ ಹಿಂದೆ ರಾತ್ರೋರಾತ್ರಿ ತಮ್ಮ ವಾಹನದಲ್ಲಿಯೇ ಆಕ್ಸಿಜನ್ ತಂದು, 20 ಜನರ ಪ್ರಾಣ ರಕ್ಷಿಸಿದ್ದರು. ಈಗ ಮತ್ತೆ ಅಂತಹ ಕಾರ್ಯಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಎಲ್ಲರೂ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೆಂಟಿಲೇಟರ್ ಬೆಡ್ ಕೊಡಿಸಿ ಎಂದು ಶಾಸಕರ ಮುಂದೆ ಗೋಳಾಡಿದ ಮಹಿಳೆ!

ವಿಜಯಸಾಕ್ಷಿ ಸುದ್ದಿ, ಗದಗ

ಪತಿಗೆ ವೆಂಟಿಲೇಟರ್ ಬೆಡ್ ಸಿಗದ ಕಾರಣಕ್ಕೆ ಮಹಿಳೆಯೊಬ್ಬರು ಶಾಸಕ ಕಳಕಪ್ಪ ಬಂಡಿ ಎದುರು ಕಣ್ಣೀರಿಟ್ಟು ಗೋಳಾಡಿದ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರೋಣ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಈ ಘಟನೆ ನಡೆದಿದೆ. ಪತಿಗೆ ವೆಂಟಿಲೇಟರ್ ಬೆಡ್ ಕೊಡಿಸಿ, ಜೀವ ಉಳಿಸುವಂತೆ ಪತ್ನಿ ಕಣ್ಣೀರು ಹಾಕಿದ್ದಾರೆ. ರೋಣ ತಾಲೂಕು ಆಸ್ಪತ್ರೆಗೆ ಶಾಸಕ ಕಳಕಪ್ಪ ಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳೆ ಕಣ್ಣೀರು ಹಾಕಿದ್ದಾರೆ.

ವೆಂಟಿಲೇಟರ್ ಬೆಡ್ ಕೊಡಿಸುವಂತೆ ಕಣ್ಣೀರು ಹಾಕಿ, ಕೈಮುಗಿದು ಸೋಂಕಿತನ ಕುಟುಂಬಸ್ಥರು ಬೇಡಿಕೊಂಡಿದ್ದಾರೆ. ಸೋಂಕಿತ ತೀವ್ರ ಉಸಿರಾಟದಿಂದ ಬಳಲುತ್ತಿದ್ದಾರೆ. ಹೀಗಾಗಿ ವೆಂಟಿಲೇಟರ್ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ವೆಂಟಿಲೇಟರ್ ಬೆಡ್ ಫುಲ್ ಆಗಿವೆ. ಅಲ್ಲದೇ, ಜಿಮ್ಸ್ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್ ಬೆಡ್ ಭರ್ತಿಯಾಗಿವೆ.

ಹೀಗಾಗಿ ವೆಂಟಿಲೇಟರ್ ಬೆಡ್ ಇಲ್ಲದೆ ಈ ಕುಟುಂಬ ಪರದಾಡುತ್ತಿತ್ತು. ವೆಂಟಿಲೇಟರ್ ಬೆಡ್ ಸಿಗದ ಕಾರಣಕ್ಕೆ ನಿನ್ನೆ ಮೂವರು ಸೋಂಕಿತರು ಸಾವನ್ನಪ್ಪಿದ್ದರು.

ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಭರ್ಜರಿ ಬಹುಮಾನ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಇಲ್ಲಿಯ ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕುಸ್ತಿಪಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರ ಸುಳಿವು ನೀಡಿದವರಿಗೆ ಅಲ್ಲಿನ ಪೊಲೀಸರು ರೂ. 1 ಲಕ್ಷ ಬಹುಮಾನ ಘೋಷಿಸಿದ್ದಾರೆ. 

ಇದರೊಂದಿಗೆ ಸುಶೀಲ್ ಕುಮಾರ್ ಅವರ ಗೆಳೆಯನಾಗಿರುವ ಮತ್ತೊಬ್ಬ ಆರೋಪಿ ಅಜಯ್ ಅವರನ್ನು ಬಂಧಿಸಲು ಸಹಾಯ ಮಾಡಿದವರಿಗೆ ರೂ. 50 ಸಾವಿರ ಘೋಷಿಸಿದ್ದಾರೆ.

ಸೋಮವಾರ ತಡರಾತ್ರಿ, ಜಿಲ್ಲಾ ಡಿಸಿಪಿ ಉಷಾ ರಂಗ್ನಾನಿ ಅವರು, ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್ ಅವರನ್ನು ಹುಡುಕಲು ಅನೇಕ ತಂಡಗಳನ್ನು ರಚಿಸಿದ್ದೇವೆ. ಇಬ್ಬರು ಮೇಲೆ ಸದ್ಯ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದರೂ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಆರೋಪಿಗಲ ಬಂಧನಕ್ಕೆ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕೊಲೆ ಮತ್ತು ಕೊಲೆ ಯತ್ನದ ಘಟನೆಯಲ್ಲಿ ಸುಶೀಲ್ ಕುಮಾರ್ ಮತ್ತು ಅಜಯ್ ಅವರ ಪಾತ್ರ ಅನುಮಾನಾಸ್ಪದವಾಗಿದೆ. ಸುಶೀಲ್, ಅಜಯ್ ಮತ್ತು ಪರಾರಿಯಾಗಿದ್ದು ಇನ್ನಿತರರ ಹುಡುಕಾಟದಲ್ಲಿ ಪೊಲೀಸರು ತಲ್ಲೀಣರಾಗಿದ್ದಾರೆ. ಸುಶೀಲ್ ಹರಿಯಾಣ ಮತ್ತು ಉತ್ತರಾಖಂಡ್ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಈಗಾಗಲೇ ಜಾಮೀನು ರಹಿತ ವಾರಂಟ್ ಪಡೆದಿದ್ದಾರೆ. ಹೀಗಾಗಿ ಇಬ್ಬರ ಬಂಧನಕ್ಕೆ ಪೊಲೀಸರು ಕಾನೂನುಬದ್ಧವಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಬಹುಮಾನ ಕೂಡ ಘೋಷಿಸಿದ್ದಾರೆ.

ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ರೋಗಿ ಒಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕಿನ ಹಳ್ಳಿಯೊಂದರ 45 ವರ್ಷದ ವ್ಯಕ್ತಿಯೊಬ್ಬರಲ್ಲಿಯೇ ಈ ರೀತಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.

ಈ ವ್ಯಕ್ತಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಸೋಂಕು ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ಹೀಗಾಗಿ ಅವರನ್ನು ಕಡೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗೆ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಬ್ಲ್ಯಾಕ್ ಫಂಗಸ್ ಇರುವುದು ಪತ್ತೆಯಾಗಿದೆ. ಆದರೆ, ಸೋಂಕಿತ ಈ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ ನ ಯಾವುದೇ ಲಕ್ಷಣಗಳು ಇಲ್ಲ. ಆರೋಗ್ಯವಂತರಾಗಿಯೇ ಇದ್ದಾರೆ. ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾದಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಕಾಡಲಿದೆ ಎಂಬ ಸಂಗತಿಯ ಮಧ್ಯೆಯೇ ಚಿಕಿತ್ಸೆ ಪಡೆಯುತ್ತಿರುವಾಗಲೇ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ಮೊದಲ ಬ್ಲ್ಯಾಕ್ ಫಂಗಸ್ ಕೇಸ್ ಇದಾಗಿದೆ.

ಇಂಡಿಯಾ ಗೇಟ್ ವರೆಗೂ ಹಬ್ಬಿದೆ ತೌಖ್ತೆ ಆರ್ಭಟ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ತೌಖ್ತೆಯ ಚಂಡಮಾರುತಕ್ಕೆ ಸದ್ಯ ಕರಾವಳಿ ಭಾಗದ ಜನರು ಸೇರಿದಂತೆ ಕೆಲವು ರಾಜ್ಯಗಳು ಜನರು ಕಂಗಾಲಾಗಿದ್ದಾರೆ. ಇದರ ಆರ್ಭಟ ಸದ್ಯ ಹಲವು ಭಾಗಗಳಿಗೂ ತಟ್ಟಿದೆ.

ಈ ಚಂಡಮಾರುತದಿಂದ ದೇಶದಲ್ಲಿ ಹಲವು ಭಾಗಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಅರಬ್ಬಿ ಸಮುದ್ರದ ಬಲವಾದ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ್ದು, ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಯಾರೋ ಸೆರ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಲೆಗಳು ಗೇಟ್ ವೇ ಆಫ್ ಇಂಡಿಯಾದ ಗೋಡೆಗಳಿಗೆ ಜೋರಾಗಿ ಬಂದು ಅಪ್ಪಳಿಸುತ್ತಿರುವುದನ್ನು ಕಾಣಬಹುದು.

ವೀಡಿಯೋದಲ್ಲಿ ಅಲೆಗಳು ಸ್ಮಾರಕದ ಗೋಡೆಗಳ ಮೇಲೆ ರಭಸದಿಂದ ಅಪ್ಪಳಿಸುತ್ತಿವೆ. ಇದರೊಂದಿಗೆ ಗಾಳಿ ಕೂಡ ಜೋರಾಗಿ ಬೀಸುತ್ತಿದೆ. ಸೋಮವಾರ ಮಧ್ಯಾಹ್ನ ಮುಂಬಯಿಯಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚರಿಸುತ್ತಿವೆ ಆಕ್ಸಿಜನ್ ಬಸ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜನರ ಸೇವೆಗಾಗಿ ಆಕ್ಸಿಜನ್ ಬಸ್ ಸಿದ್ಧಪಡಿಸಲಾಗಿದೆ. ಈ ಬಸ್ ನ್ನು ಸರ್ಕಾರದ ಸಹಭಾಗಿತ್ವದಲ್ಲಿ ಕೆ.ಆರ್ ಪುರ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಹಾಗೂ ಇಂಡಿಯಾ ನ್ಯಾಚುರಲ್ ರೆಮಿಡೀಸ್ ಸಹಕಾರದಲ್ಲಿ ಸಿದ್ಧಪಡಿಸಲಾಗಿದೆ.

ಇದು ಮೂರು ದಿನಗಳ ಕಾಲ ರಾಮಮೂರ್ತಿ ನಗರದಲ್ಲಿ ಸಂಚರಿಸಲಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ, ಬಸ್ಗಳಿಗೆ ಆಕ್ಸಿಜನ್ ಅಳವಡಿಸಿ ಆಕ್ಸಿಜನ್ ಬಸ್ ಗಳಾಗಿ ಪರಿವರ್ತಿಸಲಾಗಿದೆ. ನಗರಗಳಲ್ಲಿ ಹಾಗೂ ಆಸ್ಪತ್ರೆಯ ಮುಂಭಾಗಗಳಲ್ಲಿ ಅವಶ್ಯಕ ಇರುವ ಸೋಂಕಿತರಿಗೆ ಆಕ್ಸಿಜನ್ ನೀಡುವ ಕಾರ್ಯವನ್ನು ಈ ಮೂಲಕ ಮಾಡಲಾಗಿದೆ.

ಈ ಬಸ್ ನಲ್ಲಿ ಒಂದೇ ಬಾರಿಗೆ 8 ಜನರಿಗೆ ಆಕ್ಸಿಜನ್ ನೀಡುವ ಸೌಲಭ್ಯವಿದೆ. ಹೆಚ್ಚಿನ ಅವಶ್ಯಕತೆ ಕಂಡು ಬಂದರೆ, ಅಂತಹ ರೋಗಿಗಳನ್ನು ಈ ಬಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯ ಮಾಡಿದೆ.

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಎಬಿಡಿ ವಿಲಿಯರ್ಸ್!

ವಿಜಯಸಾಕ್ಷಿ ಸುದ್ದಿ, ಕೇಪ್‌ ಟೌನ್

360 ಡಿಗ್ರಿ ಬ್ಯಾಟ್ಸಮನ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಜಗತ್ತಿನ ಮೂಲೆ ಮೂಲೆಯಲ್ಲಿ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿ ವಿಲಿಯರ್ಸ್ ತಮ್ಮ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಇನ್ನು ಮುಂದೆ ಅವರ ಅಭಿಮಾನಿಗಳು, ಕ್ರಿಕೆಟ್ ಅಂಗಳದ ಮೂಲೆ ಮೂಲೆಯಲ್ಲಿಯೂ ಚೆಂಡನ್ನು ಅಟ್ಟುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ಎಬಿಡಿ ವಿಲಿಯರ್ಸ್ ಅವರು ಇನ್ನು ಮುಂದೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದರೊಂದಿಗೆ ಎಬಿಡಿ ಆಟವನ್ನು ಇನ್ನು ಮುಂದೆ ಟಿ20ಯಲ್ಲಿಯೂ ನೋಡಲಾಗುವುದಿಲ್ಲ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿಯೂ ಅವರು ಆಡುತ್ತಿಲ್ಲ.

ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಎಬಿ ಡಿ ವಿಲಿಯರ್ಸ್ ಮತ್ತೆ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬಲ ತುಂಬುವ ಆಸೆ ಮೂಡಿಸಿದ್ದರು. ಆದರೆ ಎಬಿಡಿ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿಲ್ಲ ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ತಿಳಿಸಿದೆ.

2018 ಮೇ. 23ರಂದು ಎಬಿ ಡಿವಿಲಿಯರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಆ ನಂತರ ವಿಶ್ವಕಪ್ ನಲ್ಲಿ ಆಡುವ ಬಯಕೆಯಿಂದಾಗಿ ನಿವೃತ್ತಿ ಹಿಂಪಡೆದಿದ್ದರು. ಆದರೆ, ಏಕದಿನ ವಿಶ್ವಕಪ್‌ ತಂಡದಲ್ಲಿ ಎಬಿಡಿಗೆ ಸ್ಥಾನ ಸಿಕ್ಕಿರಲಿಲ್ಲ. ಮತ್ತೆ ಈ ಬಾರಿಯ ಟಿ20ಐ ವಿಶ್ವಕಪ್‌ ನಲ್ಲಿ ಎಬಿಡಿ ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ಸಂಗತಿಯೂ ಸದ್ಯ ಸುಳ್ಳಾಗಿದೆ.

ಎಬಿಡಿಯ ಅಂತಾರಾಷ್ಟ್ರೀಯ ನಿವೃತ್ತಿ ಹಾಗೆಯೇ ಇರಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ. 37 ವರ್ಷದ ಎಬಿ ಡಿ ವಿಲಿಯರ್ಸ್ 114 ಟೆಸ್ಟ್‌ ಪಂದ್ಯಗಳಲ್ಲಿ 8,765 ರನ್, 228 ಏಕದಿನ ಪಂದ್ಯಗಳಲ್ಲಿ 9,577 ರನ್, 78 ಟಿ20ಐ ಪಂದ್ಯಗಳಲ್ಲಿ 1,672 ರನ್ ಬಾರಿಸಿದ್ದಾರೆ. ಅತೀ ವೇಗದ ಏಕದಿನ ಶತಕ ಸಿಡಿಸಿದಿ ವಿಶ್ವದಾಖಲೆ ಈಗಲೂ ಎಬಿಡಿ ಅವರ ಹೆಸರಿನಲ್ಲಿಯೇ ಇದೆ. ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು.

error: Content is protected !!