Home Blog Page 3100

ರಾಜ್ಯದಲ್ಲಿ ನಾನಷ್ಟೇ ಆಸ್ತಿ ಸಂಪಾದಿಸಿಲ್ಲ ; ಡಿಕೆಶಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ನಾನಷ್ಟೇ ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲ್ಯಾಕೆ? ಸಿಬಿಐ ತನಿಖೆ ದ್ವೇಷದ ರಾಜಕಾರಣ ಅಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಯುತ್ತಿದೆ. ನಾನೇನು ಮಾಡಲಾರದಂತಹ ಕೆಲಸ ಮಾಡಿಲ್ಲವಾದ್ದರಿಂದ ಹೆದರುವ ಅವಶ್ಯಕತೆ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ ಎಂದರು.

‘ ಇದುವರೆಗೂ ಯಾರ ಮೇಲೆಯೂ ಈ ರೀತಿ ತನಿಖೆ ಮಾಡಿಸಿಲ್ಲ. ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಆರೋಪ ಸಾಬೀತಾಗಿದೆಯಾ? ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವನಾಗಿದ್ದಾಗ ಅಕ್ರಮ ಮಾಡಿದ್ದೇನಾ? ಅವರದೇ ಸರ್ಕಾರವಿರುವಾಗ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯವೇನಿತ್ತು? ‘ ಎಂದು ಪ್ರಶ್ನಿಸಿದರು.

‘ಇದೊಂದು ತನಿಖೆ ಮಾಡುವ ಪ್ರಕರಣವಲ್ಲವೆಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದುಂದು ತಿಳಿಸಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.

ನಾನು ಸಿಬಿಐ ಅಧಿಕಾರಿಗಳ ಕಾರ್ಯ ಪ್ರಶ್ನಿಸುವುದಿಲ್ಲ. ಅವರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ನಮಗೆ ಯಾವುದೇ ತರಹದ ತೊಂದರೆ ನೀಡುತ್ತಿಲ್ಲ. ಅಲ್ಲದೇ, ವಿಚಾರಣೆ ವೇಳೆ ಸಿಬಿಐ ಕಚೇರಿ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ನೇಹಿತರು ಸೇರಿದಂತೆ ಯಾರೂ ಬರಬಾರದು ಎಂದು ಮನವಿ ಮಾಡಿಕೊಂಡರು.

ಪೊಲೀಸರ ಭರ್ಜರಿ ಬೇಟೆ: ಕಳೆದ ಹೋಗಿದ್ದ ವಸ್ತುಗಳು ಕೊನೆಗೂ ಕೈ ಸೇರಿದವು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ವಾರಸುದಾರರಿಗೆ, ಕಳೆದು ಹೋಗಿದ್ದ ವಸ್ತುಗಳನ್ನು ವಾಪಸ್ ನೀಡುವ ಮೂಲಕ ನಗು ಕಮರಿದ್ದ ಮುಖದಲ್ಲಿ ಗದಗ ಜಿಲ್ಲಾ ಪೊಲೀಸರು ‌ಮಂದಹಾಸ ಮೂಡಿಸಿದ್ದಾರೆ.

ಯತೀಶ್ ಎನ್, ಗದಗ ಎಸ್ಪಿ

ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಬಂಗಾರ, ಬೆಳ್ಳಿ, ಹಣ, ವಾಹನ ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಗಳಿಗೆ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತು ಮತ್ತು ಆಭರಣಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಮರಳಿಸಿತು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 50 ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಕಳ್ಳರಿಂದ ಒಟ್ಟು 39 ಲಕ್ಷ 24 ಸಾವಿರ ಮೌಲ್ಯದ ಚಿನ್ನಾಭರಣ, ನಗದು, ಬೈಕ್ ಸೇರಿದಂತೆ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅದರಲ್ಲಿ 656 ಗ್ರಾಂ ಚಿನ್ನಾಭರಣ, 2 ಕೆಜಿ 265 ಗ್ರಾಂ ಬೆಳ್ಳಿ, 23 ಬೈಕ್ ಹಾಗೂ ನಾಲ್ಕು ವಾಹನಗಳ ಸೇರಿವೆ.

ಪ್ರಸಕ್ತ ಸಾಲಿನಲ್ಲಿ 50 ಸ್ವತ್ತು ಪ್ರಕರಣಗಳನ್ನು ಬೇಧಿಸಿದ್ದು, ಈ ವೇಳೆ ಜಪ್ತಿ ಮಾಡಿರುವ ಚಿನ್ನಾಭರಣಗಳನ್ನು ಫಲಾನುಭವಿಗಳಿಗೆ ಮರಳಿ ನೀಡಲಾಗಿದೆ. ಈ ವರ್ಷ ಸ್ವತ್ತು ಪ್ರಕರಣಗಳಲ್ಲಿ ಸರಾಸರಿ 56% ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಇನ್ನುಳಿದವುಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಇನ್ನೆರಡು ತಿಂಗಳಲ್ಲಿ ಇನ್ನುಳಿದ ಪ್ರಕರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗುವುದು.

ಯತೀಶ್ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಳ್ಳತನ ಆಗಿದ್ದ ಮನ್ಯಾಗಿದ್ದ ಬಂಗಾರ, ಬೆಳ್ಳಿ, ಹಣ ಹೋದ್ವು ಅಂತಾ ತಿಳ್ಕೊಂಡಿದ್ದಿವ್ರಿ. ಇದರಿಂದ ಬಹಳ ನೋವಾಗಿತ್ತು. ಆದ್ರೆ, ಇವತ್ತು ಮತ್ತೆ ನಮ್ಮ ಕೈ ಸೇರಿದ್ದು ತುಂಬಾ ಖುಷಿ ಆಗೈತಿ. ಪ್ರಕರಣ ಬೇಧಿಸುವ ಮೂಲಕ ಕಳೆದು ಹೋದ ಚಿನ್ನಾಭರಣ ಮರಳಿ ಕೊಡಿಸಿದ ಪೊಲೀಸ್ ಇಲಾಖೆಗೆ ಧನ್ಯವಾದಗಳು.

ಗಣೇಶ ಲಮಾಣಿ, ನಾಗಾವಿ ತಾಂಡಾ

ಕೊವಿಡ್-19: ಗದಗ ಜಿಲ್ಲೆಯ ಸೋಮವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ನವೆಂಬರ್ 23 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 119496 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 123310 ಮಾದರಿಗಳಲ್ಲಿ 112248 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 371 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 21 ಪ್ರಕರಣಗಳು ಸೇರಿದಂತೆ ಒಟ್ಟು 10691 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 6 ಜನ ಸೇರಿದಂತೆ ಒಟ್ಟು 10459 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 91 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಎಸಿಬಿ ದಾಳಿ: ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮ್ಯಾನೇಜರ್ ಸೇರಿ ಮೂವರ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದ ಜಮೀನಿನ ಹಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ನಿಗಮದ ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ, ಡ್ರೈವರ್ ಫಕ್ಕೀರೇಶ್ ಪೂಜಾರ, ಹಾಗೂ ಮಧ್ಯವರ್ತಿ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲಿಕ ಪ್ರತೀಕ ಬೇವಿನಕಟ್ಟಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮಂಜುನಾಥ್ ಸಜ್ಜನ ಎಂಬುವವರು ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹದ್ದಿನಲ್ಲಿ ಇದ್ದ 20 ಎಕರೆ ಜಮೀನನ್ನು 1ಕೋಟಿ, 2ಲಕ್ಷ 57,500 ರೂ,ಗಳಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದರು.

ಅದಕ್ಕೆ ಈಗಾಗಲೇ ನಿಗಮದಿಂದ 90ಲಕ್ಷ ಹಣ ಕೊಡಲಾಗಿತ್ತು. ಉಳಿದ 12ಲಕ್ಷ 57,500 ಹಣ ಕೊಡಲು ನಿಗಮದ ‌ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ 40 ಸಾವಿರ ರೂ, ಲಂಚ ಕೇಳಿದ್ದರು. ಇವತ್ತು ಫಿರ್ಯಾದಿ ಮಂಜುನಾಥ್ ಸಜ್ಜನ ಹಣ ಕೊಡಲು ಬಂದಾಗ ಡ್ರೈವರ್ ಫಕ್ಕೀರೇಶ್ ನ ಬಳಿ ಕೊಡಲು ಹೇಳಿದ್ದಾರೆ. ಫಕ್ಕೀರೇಶ್ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತೀಕ ಬೇವಿನಕಟ್ಟಿ ಬಳಿ ಕೊಡಲು ಹೇಳಿದ್ದಾನೆ. ಜಿಲ್ಲಾಡಳಿತ ಭವನದಲ್ಲಿ ಇರುವ ಕಚೇರಿಯಲ್ಲಿ ಪ್ರತೀಕ ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಗಳಾದ ವಾಯ್ ಎಸ್ ಧರಣಾನಾಯ್ಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡರ್, ಆರ್ ಎಚ್ ಹೆಬಸೂರು, ಎನ್ ಎಸ್ ತಾಯಣ್ಣವರ, ವೀರೇಶ್ ಜೋಳದ, ಐ ಸಿ ಕರಿಗಾರ ಹಾಗೂ ತಾರಪ್ಪ ಇದ್ದರು.

ಕಾರ್ಮಿಕ ಮುಖಂಡನ ಫಾರ್ಮ್ ಹೌಸ್ಗೆ ಕನ್ನ ಹಾಕಿದ ಖದೀಮರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಫಾರ್ಮ್ ಹೌಸ್ ನ ಬೀಗ ಮುರಿದ ಕಳ್ಳರು ಟ್ರೇಜರಿಯಲ್ಲಿದ್ದ ಚಿನ್ನಾಭರಣ ಹಾಗೂ ಟಿವಿ ಕದ್ದೋಯ್ಯದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಗ್ರಾಮದ ಬಳಿ ನಡೆದಿದೆ.

ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಸಂಘದ ಮುಖಂಡ ಡಿ ಪ್ರಸಾದ ಎಂಬುವವರ ಫಾರ್ಮ್ ಹೌಸ್ ನಲ್ಲಿ ಈ ಘಟನೆ ನಡೆದಿದೆ.

ಫಾರ್ಮ್ ಹೌಸ್ ನ ಬೀಗ ಮುರಿದು ಕಳ್ಳರು ಟ್ರೇಜರಿಯಲ್ಲಿದ್ದ 32 ಸಾವಿರ ರೂ, ಮೌಲ್ಯದ ಚಿನ್ನಾಭರಣ ಹಾಗೂ ಹಾಲ್ ನಲ್ಲಿದ್ದ ಟಿವಿ, ಬ್ಯಾಟರಿ, ಪವರ್ ಬ್ಯಾಂಕ್ ಕಳ್ಳತನ ಮಾಡಿದ್ದಾರೆ.
ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ ಮೌಲ್ಯದ ಮೆಕ್ಕೆಜೋಳ ನಾಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಆಕಸ್ಮಿಕವಾಗಿ ಹೊತ್ತಿಕೊಂಡು ಬೆಂಕಿ ಲಕ್ಷಾಂತರ ರೂ. ಮೌಲ್ಯದ ಮೆಕ್ಕೆ ಜೋಳ ನಾಶ ವಾಗಿರುವ ಘಟನೆ ಗದಗ ತಾಲೂಕಿನ ನಾಗಾವಿ ತಾಂಡಾದಲ್ಲಿ ನಡೆದಿದೆ‌. ಲಕ್ಷ್ಮಣ ಪವಾರ್ ಎಂಬುವರಿಗೆ ಸೇರಿದ ಮೆಕ್ಕೆಜೋಳ ಇದಾಗಿದ್ದು ಒಂದು ತಿಂಗಳ ಹಿಂದೆ ತೆನೆ ಮುರಿದು ಹೊಲದಲ್ಲಿ ‌ಕೂಡಿಹಾಕಿದ್ದರು.

11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಮಾರು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು‌. ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿಯುವ ನೀರು ಪೋಲು: ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ನಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ತಾಲೂಕಿನ ಕದಾಂಪುರ ಬಳಿಯ ಸೇತುವೆ ಬಳಿಯ ಪೈಪ್ ಲೈನ್ ವಾಲ್ ದಿಂದ ದಿನನಿತ್ಯ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಕಳೆದ ಮೂರು ದಿನಗಳಿಂದ ಇದೇ ರೀತಿ ನೀರು ಹಗಲು, ರಾತ್ರಿ ಹರಿದು ಚರಂಡಿಗೆ ಸೇರುತ್ತದೆ. ತುಂಗಭದ್ರಾ ನದಿಯಿಂದ ಗದಗ ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಪೈಪ್ ಇದಾಗಿದೆ.

ಇಷ್ಟೇಲ್ಲಾ ನೀರು ಪೋಲಾದರೂ ಕರ್ನಾಟಕ ನಗರ ಮ‌ೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು (24×7) ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರ್ಯಾರು ಬರ್ತಾರೆ ನೋಡ್ತಾ‌ ಇರಿ: ಡಿಕೆಶಿ

-ಹಿಟ್ನಾಳದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ರೆಡ್ ಕಾರ್ಪೆಟ್ ಸ್ವಾಗತ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರ ಬಗ್ಗೆ ಕೇಳಲ್ವಲ್ಲ ನೀವು? ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ‌ಶಿವಕುಮಾರ್ ಮಾಧ್ಯಮದವರನ್ನು ಪ್ರಶ್ನಿಸಿದರು.

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸದ್ಯ ಬಿಜೆಪಿಯವರು ಅದೇನೇನು ಮಾಡುತ್ತಾರೊ ಮಾಡಲಿ. ಮುಂದೆ ಬಿಜೆಪಿ ತೊರೆದು ಯಾರ್ಯಾರು ಬರುತ್ತಾರೆ ಅನ್ನೋದನ್ನ ನೋಡ್ತಾ‌ ಇರಿ ಎಂದರು.

ಭತ್ತಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ಕಾಂಗ್ರೆಸ್ ಎಲ್ಲ ಕಡೆ ಪ್ರತಿಭಟಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡ್ತಿವಿ. ಶಿಕ್ಷಣ ವ್ಯವಸ್ಥೆ ಬಗ್ಗೆ ಸರಕಾರ ನಮ್ಮ ಸಲಹೆ ಕೇಳಿಲ್ಲ. ಸರಕಾರದ ಕ್ರಮ ನೋಡಿಕೊಂಡು ಆನಂತರ ಕಾಂಗ್ರೆಸ್ ನಿಲುವು ಪ್ರಕಟಿಸ್ತೇವೆ ಎಂದ ಡಿಕೆಶಿ,
ರೋಷನ್ ಬೇಗ್ ಬಂಧನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಹಿಟ್ನಾಳ ಗ್ರಾಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ಅದ್ಧೂರಿ ಸ್ವಾಗತ ದೊರೆಯಿತು. ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಡಿಕೆಶಿ ಉಪಾಹಾರಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸಲಾಯಿತು. ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಡಿಕೆಶಿ ಮೆರವಣಿಗೆ ಮಾಡಲಾಯಿತು. ಹಿಟ್ನಾಳದಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಡಿಕೆಶಿ ನೋಡಲು ಜನರು ಮುಗಿಬಿದ್ದರು.
ಜನರತ್ತ ಕೈಬೀಸಿ ಹಿಟ್ನಾಳ ನಿವಾಸಕ್ಕೆ ಆಗಮಿಸಿದ ಡಿಕೆಶಿ ಉಪಾಹಾರ ಸೇವಿಸಿ ಸುದ್ದಿಗೋಷ್ಠಿ ನಡೆಸಿದರು. ಆನಂತರ ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಾರಟಗಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ನಿವಾಸಕ್ಕೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದರು.

ಕೊವಿಡ್-19: ಗದಗ ಜಿಲ್ಲೆಯ ಭಾನುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ನವೆಂಬರ್ 22 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 118926 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 122727 ಮಾದರಿಗಳಲ್ಲಿ 111128 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 929 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 10 ಪ್ರಕರಣಗಳು ಸೇರಿದಂತೆ ಒಟ್ಟು 10670 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 5 ಜನ ಸೇರಿದಂತೆ ಒಟ್ಟು 10453 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 76 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಜೆಪಿಗೆ ಸೇರ್ತಿನಿ ಅಂದ್ರೆ ತಾಲೂಕುಗಳನ್ನೇ ಜಿಲ್ಲೆ ಮಾಡ್ತಾರೆ: ತಂಗಡಗಿ ವ್ಯಂಗ್ಯ

ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಚುನಾವಣೆಯಲ್ಲಿ ಗೆಲ್ಲಲಿ, ಶರಣಾಗತಿ ಆಗ್ತೇವೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈಗ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಆನಂದ್ ಸಿಂಗ್ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ‌ ಮಾಡ್ತಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ರವಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ. ಅದು ಕೇವಲ ಕಾಂಗ್ರೆಸ್‌ಗೆ ಮಾತ್ರ ಇರೋದು. ವಲಸೆ ಹೋದವರನ್ನೇ ಮಂತ್ರಿಗಳನ್ನಾಗಿ ಮಾಡಿದೆ ಬಿಜೆಪಿ. ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಲೆಕ್ಕ ಹಾಕಿ ನೋಡೋಣ? ಎಂದು ಅವರು ಪ್ರಶ್ನಿಸಿದರು.

ಹಾಗೆ ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದವರೆಲ್ಲ ಇವಿಎಂ ಮಷೀನ್ ದೋಷದಿಂದ ಗೆದ್ದಿದ್ದಾರೆ. ಶಿರಾದಲ್ಲಿ ಜಯಚಂದ್ರ ಅವರಿಗೆ ಜನಬೆಂಬಲ ಇತ್ತು. ಆದರೂ ಅಲ್ಲೂ ಬಿಜೆಪಿ ಗೆದ್ದಿದೆ ಅಂದ್ರೆ ಏನರ್ಥ? ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಗೆಲ್ಲಲಿ. ಹಾಗೊಂದು ವೇಳೆ ಗೆದ್ದರೆ ಬಿಜೆಪಿಗೆ ನಾವು ಶರಣಾಗತಿ ಆಗುತ್ತೇವೆ. ಮುಂಬರುವ ಮಸ್ಕಿ ಚುನಾವಣೆಯಲ್ಲೂ ಇವಿಎಂ ಬಳಸಿದರೆ ನಮಗೆ ಫಲಿತಾಂಶದ ಬಗ್ಗೆ ಅನುಮಾನ ಇರುತ್ತೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ 10-15 ವರ್ಷಗಳಿಂದ ಚುನಾವಣೆ ನೋಡುತ್ತಿರಬಹುದು. ನಾನು 19ನೇ ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲೇ ಚುನಾವಣೆ ಎದುರಿಸಿದವನು. ಅವರು ಇಲ್ಲಿಗೆ ಬರೋದು ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಲ್ಲ, ಬದಲಾಗಿ ಸೂಟ್‌ಕೇಸ್ ಒಯ್ಯಲಿಕ್ಕೆ. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಬೈತಾರೆ. ಆನಂತರ ಬೇರೊಂದು ಜಾಗದಲ್ಲಿ ಅವರನ್ನು ಕರೆಸಿಕೊಂಡು ಗಂಟುಮೂಟೆ ಕಟ್ತಾರೆ. ನಿಜವಾಗಲೂ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಯನ್ನಾದರೂ ಅಮಾನತು ಮಾಡಬೇಕಿತ್ತಲ್ಲವೇ? ಎಂದು ಅವರು ಅನುಮಾನ ಪಟ್ಟರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಲತಿ ನಾಯಕ್, ಶೈಲಜಾ ಹಿರೇಮಠ, ಅಕ್ಬರ್ ಪಲ್ಟಾನ್, ಗುರು ಹಲಗೇರಿ, ಮುತ್ತುರಾಜ ಕುಷ್ಟಗಿ ಮತ್ತಿತರರು ಇದ್ದರು

ಬಣ್ಣ ಬಯಲಾಗುತ್ತೆ: ಹಿಟ್ನಾಳ

ಕೊಪ್ಪಳ: ಬಿಜೆಪಿ ಆಡಳಿತ ಜನರಿಗೆ ರೋಸಿ ಹೋಗಿದೆ. ಈಗಾಗಲೇ ಜನರಿಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಇನ್ನೂ ಎರಡು-ಮೂರು ತಿಂಗಳಲ್ಲಿ ಬಿಜೆಪಿ ಬಣ್ಣ ಬಯಲಾಗಲಿದೆ. ಬಿಜೆಪಿ ಸೇರುವವರ ಸಂಖ್ಯೆ ಜಾಸ್ತಿಯಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರು ಹರಿವು ಹೆಚ್ಚುತ್ತಿದೆ. ಕೆಲವೇ ತಿಂಗಳು ಕಾದು ನೋಡಿ, ಗೊತ್ತಾಗುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ನೀಡಿ ಸಂಚಲನ ಮೂಡಿಸಿದರು.

error: Content is protected !!