Home Blog Page 3106

ಆ ಹಾವು ಈ ಹಾವನ್ನು ಹೀಗಾ ನುಂಗೋದು?

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ತಾಲೂಕಿನ ಇಲ್ಲಿನ ಗಾಮನಗಟ್ಟಿ ಗ್ರಾಮದ ಈಶ್ವರೀಯ ವಿಶ್ವವಿದ್ಯಾಲಯದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಾಗರ ಹಾವನ್ನೇ ನುಂಗಿ, ಮತ್ತೊಂದು ನಾಗರಹಾವನ್ನು ಸ್ನೇಕ್ ಸಂಗಮೇಶ ರಕ್ಷಿಸಿದ್ದಾರೆ.

ಕಟ್ಟಡದಲ್ಲಿ ನಾಗರ ಹಾವೊಂದು ಮತ್ತೊಂದು ನಾಗರಹಾವು ನುಂಗಿ ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಸ್ನೇಕ್ ಸಂಗಮೇಶ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಸಂಗಮೇಶ್ ಅವರು ಹಾವನ್ನು ಸೆರೆ ಹಿಡಿದು ನುಂಗಿದ ಹಾವನ್ನು ಹೊರೆ ತೆಗೆದಿದ್ದಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಲಘಟಗಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ಅನಗತ್ಯ ಓಡಾಟ; ಹದಿನಾರುಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ ಪಿಎಸ್ಐ ನವೀನ ಜಕ್ಕಲಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಅನಾವಶ್ಯಕವಾಗಿ ಓಡಾಡುತ್ತಿದ್ದ ಹದಿನಾರಕ್ಕೂ ಹೆಚ್ಚು ಬೈಕ್ ಗಳನ್ನು ಪಿಎಸ್ಐ ನವೀನ ಜಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿ ಸೀಜ್ ಮಾಡಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದಲೇ ರೌಂಡ್ಸ್ ಆರಂಭಿಸಿರುವ ಶಿರಹಟ್ಟಿಯ ಪಿಎಸ್ಐ ನವೀನ್ ಜಕ್ಕಲಿ, ಅನಾವಶ್ಯಕವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿ, ಹದಿನಾರಕ್ಕೂ ಹೆಚ್ಚು ಬೈಕುಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್ ಸವಾರರು ತಮ್ಮ ಬೈಕ್ ಗಳನ್ನು ನೀಡುವಂತೆ ಎಷ್ಟೇ ವಿನಂತಿಸಿಕೊಂಡರೂ ಸಹ ಕ್ಯಾರೆ ಎನ್ನದೆ ಪಿಎಸ್ಐ ಸೀಜ್ ಮಾಡಿದ ವಾಹನಗಳನ್ನು ತಮ್ಮ ಸಿಬ್ಬಂದಿಗಳ ಮೂಲಕ ಪೊಲೀಸ್ ಠಾಣೆಗೆ ಕಳಸಿದರು.

ಪಟ್ಟಣದ ಮಾರುಕಟ್ಟೆಯಲ್ಲಿ ಒಂಬತ್ತು ಗಂಟೆಯ ಸುಮಾರಿಗೆ ಅಗತ್ಯ ವಸ್ತು ಹಾಗೂ ತರಕಾರಿಗಳನ್ನು ಕೊಂಡುಕೊಳ್ಳುವುದಕ್ಕೆ ಜನತೆ ಮುಗಿ ಬೀಳುತ್ತಿದ್ದಂತೆಯೇ ಪಿಎಸ್ಐ ನವೀನ, ಮುಗಿಬಿದ್ದ ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸದ ಜನರಿಗೆ ಲಾಠಿ ರುಚಿ ತೋರಿಸಿ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಬರಲಿದೆ ಇಷ್ಟದ ಬಾಟಲಿಗಳು!

ವಿಜಯಸಾಕ್ಷಿ ಸುದ್ದಿ, ಛತ್ತೀಸಗಢ

ವರದಿ:ಡಾ.ಅಬ್ದುಲ್ ರಜಾಕ್

ಸರಕಾರ ಬಿಗಿಯಾದ ಲಾಕ್ ಡೌನ್ ಜಾರಿ ಮಾಡಿದ್ದರೂ ಕೂಡ ಮದ್ಯ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ.

ಹೌದು… ಸರ್ಕಾರಕ್ಕೆ ಭಾರಿ ಆದಾಯ ತಂದುಕೊಡುವ ಮದ್ಯದಂಗಡಿ ಮುಚ್ಚಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೆ ಮದ್ಯವನ್ನು ಪೂರೈಕೆ ಮಾಡಲು ಛತ್ತೀಸಗಢ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಅಬಕಾರಿ ಸಚಿವ ಕವಾಸಿ ಲಖ್ಮಾ ಮಾಹಿತಿ ನೀಡಿದ್ದು, ಛತ್ತೀಸಗಢ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭ ಮಾಡಲಾಗುವುದು. ಲಾಕ್ ಡೌನ್ ನಿಂದ ಸರ್ಕಾರ ನಷ್ಟದಲ್ಲಿದೆ. ಈ ನಷ್ಟವನ್ನು ತುಂಬುವ ಕಾರಣಕ್ಕೆ ಈ ನಿರ್ಧಾರ ಕೈ ಗೊಳ್ಳಲಾಗಿದೆ. ಮದ್ಯ ಮಾರಾಟ ಸ್ಥಗಿತಗೊಂಡರೆ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತದೆ ಹಾಗಾಗಿ ಈ ನಿರ್ಧಾರ ಎಂದು ತಿಳಿಸಿದ್ದಾರೆ.

ಸೈಕಲ್ ಏರಿ ಜನರಲ್ಲಿ ಜಾಗೃತಿ ಮೂಡಿಸಿದ ಪಿಎಸ್ ಐ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇಷ್ಟಿದ್ದರೂ ಜನ ಅನಾವಶ್ಯಕವಾಗಿ ಓಡಾಡುವುದನ್ನು ಬಿಡುತ್ತಿಲ್ಲ.
ಹೀಗಾಗಿ ಗಜೇಂದ್ರಗಡ ಪಿಎಸ್ ಐ ಅವರು ಸೈಕಲ್ ಮೇಲೆ ಏರಿ ಜಾಗೃತಿ ಮೂಡಿಸಿದ್ದಾರೆ.

ಪಿಎಸ್ ಐ ಗುರುಶಾಂತ ಅವರು ಗಜೇಂದ್ರಗಡ ಜನರಲ್ಲಿ ಜಾಗೃತಿ ಮೂಡಿಸಿದ ಅಧಿಕಾರಿ. ಸೈಕಲ್ ಏರಿ ಪಟ್ಟಣದ ತುಂಬೆಲ್ಲ ಸುತ್ತಾಡಿ ಜನರಲ್ಲಿ ಕೊರೊನಾ ಜಗೃತಿ ಮೂಡಿಸಿದ್ದಾರೆ. ಪಟ್ಟಣದ ದುರ್ಗಾ ವೃತ್ತ, ಅಬೇಡ್ಕರ್ ವೃತ್ತ, ಜೋಡು ರಸ್ತೆಯ ಹತ್ತಿರ ಸುತ್ತಾಡಿ ಜನರಲ್ಲಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದ್ದಾರೆ.

ಬೈಕ್ ಏರಿ ಬಂದವರನ್ನು ತಡೆದು ಈ ಸಂದರ್ಭದಲ್ಲಿ ಪಿಎಸ್ ಐ ಗುರುಶಾಂತ ಬುದ್ಧಿ ಹೇಳಿದ್ದಾರೆ. ಆದರೂ ಅನಗತ್ಯವಾಗಿ ಸುತ್ತಾಡಿದವರ ಚಳಿ ಕೂಡ ಬಿಡಿಸಿದ್ದಾರೆ.

ಹುಷಾರ್… ಹೊರಗೆ ಬರಬೇಡಿ! ಬೈಕ್ ಕೊಡಿ ಎಂದು ಎಷ್ಟೇ ಕೈ ಮುಗಿದರೂ ಕರಗುತ್ತಿಲ್ಲ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಲ್ಲಿಯೂ ಪೊಲೀಸರು ಲಾಠಿ ಬೀಸಿ ದಾರಿ ತಪ್ಪಿದವರನ್ನು ಮನೆಯ ಕಡೆಗೆ ಸಾಗಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೂಡ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಪೊಲೀಸರು ಪುಟ್ಟರಾಜ ಸರ್ಕಲ್ ಬಳಿ ಬೈಕ್ ಸೀಜ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಯಲ್ ಎನ್ ಫೀಲ್ಡ್ ಏರಿ ಬಂದಿದ್ದ ಯುವಕನಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೀ ತೆಗೆಯುವಾಗ ಬೈಕ್ ಏಕಾ ಏಕಿ ನುಗ್ಗಿದೆ. ಈ ವೇಳೆ ಬೈಕ್ ಆಯತಪ್ಪಿ ಪಿಎಸ್ ಐ ಕಮಲಾಭಾಯಿ ಅವರಿಗೆ ತಾಗಿದೆ. ಕೂಡಲೇ ಸಹೋದ್ಯೋಗಿಯ ಸಹಾಯದಿಂದ ಪಿಎಸ್ ಐಗೆ ಗಾಯವಾಗಲಿಲ್ಲ.

ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಪುಟ್ಟರಾಜ ಸರ್ಕಲ್, ದತ್ತಾತ್ರೇಯ ಸರ್ಕಲ್, ಮುಳಗುಂದ ನಾಕಾ, ಮಹೇಂದ್ರಕರ ಸರ್ಕಲ್, ಸರಾಫ್ ಬಜಾರ್ ಗೆ ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದೆ. ಸರ್ಕಾರ ಎಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಹಲವರು ಬೈಕ್ ತೆಗೆದುಕೊಂಡೇ ಮಾರುಕಟ್ಟೆಗೆ ಆಗಮಿಸುತ್ತಿದ್ದರು. ಹೀಗಾಗಿ ಪೊಲೀಸರು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳು ಕೂಡ ಬಿಕೊ ಎನ್ನುತ್ತಿದ್ದವು.

ಹಲೆವೆಡೆ ಬೈಕ್ ಸವಾರರು ಬೈಕ್ ಗಳನ್ನು ತೆಗೆದುಕೊಂಡು ಹೋಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ದೊಡ್ಡವರ ಕೈಯಿಂದ ಹೇಳಿಸಿದರೂ ಪೊಲೀಸರು ಬೈಕ್ ನೀಡುತ್ತಿಲ್ಲ. ಹೀಗಾಗಿ ಹಲವರು ಮೇಡಂ ಬೈಕ್ ಕೊಡಿ ಕೈ ಮುಗಿತೇನಿ ಎಂದು ಪಿಎಸ್ ಐ ಕಮಲಾ ಅವರಲ್ಲಿ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹುಲಕೋಟಿ ಗ್ರಾಮದಿಂದ ತರಕಾರಿ ತರಲು ಬೈಕ್ ಮೇಲೆ ದಂಪತಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪಿಎಸ್ ಐ ಕಮಲಾ ಅವರು ಬೈಕ್ ಸೀಜ್ ಮಾಡಿದರು. ಆಗ ಕೈ ಮುಗಿತೇವಿ ಬೈಕ್ ಕೊಡಿ ಎಂದು ಎಷ್ಟೇ ಅಂಗಲಾಚಿದರೂ ಬೈಕ್ ನೀಡಲಿಲ್ಲ.

ಕೊರೊನಾ ಸಂಕಷ್ಟ; ವೆಂಟಿಲೇಟರ್ ಇಲ್ಲದೆ ನರಳಾಡಿ ಪ್ರಾಣ ಬಿಟ್ಟ ವ್ಯಕ್ತಿ!

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗದ ಕಾರಣ ಆಸ್ಪತ್ರೆಯ ವಾರ್ಡ್ ನಲ್ಲಿಯೇ ಆ ವ್ಯಕ್ತಿ ಬರೋಬ್ಬರಿ 2 ಗಂಟೆಗಳ ಕಾಲ ಒದ್ದಾಡಿ, ನರಳಾಡಿ ಕೊನೆಯುಸಿರೆಳೆದ ಘಟನೆ ಇಲ್ಲಿಯ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಹೀಗೆ ನರಳಾಡಿ ಮೃತಪಟ್ಟ ವ್ಯಕ್ತಿ ಶಿಕಾರಿಪುರ ಮೂಲದವರಾಗಿದ್ದು, 46 ವರ್ಷದ ವ್ಯಕ್ತಿ ಎನ್ನಲಾಗಿದೆ. ಕೊರೊನಾ ಸೋಂಕಿನಿಂದ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಇವರನ್ನು ಆಂಬುಲೆನ್ಸ್ ಮೂಲಕ ಶಿಕಾರಿಪುರದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಷ್ಟರಲ್ಲಿಯೇ ಅವರ ಆಕ್ಸಿಜನ್ ಮಟ್ಟ ಶೇ. 40ಕ್ಕೆ ಕುಸಿದಿತ್ತು. ಆದರೆ, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲ ವೆಂಟಿಲೇಟರ್ ನಲ್ಲಿ ರೋಗಿಗಳು ಇದ್ದರು. ಯಾವ ರೊಗಿಯನ್ನೂ ಇದರಿಂದ ಹೊರತರುವ ಸ್ಥಿತಿಯಲ್ಲಿ ವೈದ್ಯರು ಇರಲಿಲ್ಲ. ಹೀಗಾಗಿ ಜನರಲ್ ವಾರ್ಡ್ ನಲ್ಲಿ ರೋಗಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಈ ರೋಗಿ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ರೋಗಿ ಎಷ್ಟೇ ನರಳಾದಿರೂ ವೈದ್ಯರು, ನರ್ಸ್ ಗಳು ಏನೂ ಮಾಡದ ಸ್ಥಿತಿಯಲ್ಲಿದ್ದರು. ಪರಿಣಾಮ ರೋಗಿ ಒದ್ದಾಡಿ ಸಾವನ್ನಪ್ಪಿದ್ದಾರೆ.

ಗಳಗಳನೇ ಅತ್ತ ಬಿಗ್ ಹೌಸ್ ಸದಸ್ಯರು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜನಪ್ರಿಯ ಶೋ ಆಗಿರುವ ಬಿಗ್ ಹೌಸ್ ಸದ್ಯ ಬಾಗಿಲು ಮುಚ್ಚಿಕೊಂಡಿದೆ. ಬರೋಬ್ಬರಿ 71 ದಿನಗಳ ಕಾಲ ನಡೆದಿದ್ದ ಶೋ ಕೂಡ ರಾಜ್ಯದ ಲಾಕ್ ಡೌನ್ ನೊಂದಿಗೆ ಲಾಕ್ ಆಗಿದೆ. ಆದರೆ, ಹೊರ ಜಗತ್ತಿನ ಅರಿವಿಲ್ಲದಿದ್ದ ಬಿಗ್ ಬಾಸ್ ಸ್ಪರ್ಧಿಗಳು ವಿಷಯ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದಾರೆ.

ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿ ಬಿಗ್ ಬಾಸ್ ಮನೆ ಸೇರಿದ್ದ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತವಾಗಿತ್ತು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ದೂರ ಇದ್ದ ಇವರಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತದೆ ಎನ್ನುವ ಅರಿವೇ ಇಲ್ಲದಾಗಿತ್ತು. ಇವರ ಜೊತೆ ನೇರವಾಗಿ ಸುದೀಪ್ ಬಿಟ್ಟರೆ ಯಾರ ಸಂಪರ್ಕವೂ ಇರುವುದಿಲ್ಲ.

ಹೀಗೆ ಬಿಗ್ ಹೌಸ್ ನಲ್ಲಿ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿದ್ದ ಸ್ಪರ್ಧಿಗಳಿಗೆ 71ನೇ ದಿನ ಶಾಕ್ ಆಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಸುದ್ದಿಯನ್ನು ಆರಂಭದಲ್ಲಿ ಪ್ರಸಾರ ಮಾಡಲಾಯಿತು. ಆ ನಂತರ ಸಿಎಂ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ ತುಣುಕನ್ನು ಪ್ರಸಾರ ಮಾಡಲಾಯಿತು.

ಈ ಘೋಷಣೆಯ ಸುದ್ದಿ ಕೇಳುತ್ತಿದ್ದಂತೆ ಸ್ಪರ್ಧಿಗಳು ಗಾಬರಿಯಾದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತಾರೆ. ಇನ್ನು ಮೂರು ವಾರಗಳ ಕಾಲ ಮನೆಯಲ್ಲಿರಬಹುದು ಎಂಬ ಅವರ ಕನಸು ಕುಸಿದು ಬೀಳುತ್ತದೆ.
ಲಾಕ್ ಡೌನ್ ಘೋಷಣೆಯಾದ ಕಾರಣ, ಬಿಗ್ ಬಾಸ್ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಬಿಗ್ ಬಾಸ್ 8ನೇ ಅವೃತ್ತಿಯನ್ನು ವಾಹಿನಿ ನಿಲ್ಲಿಸಿದೆ. ಈ ಕುರಿತು ಮೇ. 8ರಂದು ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದರು. ಇದೀಗ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.

ನೀ ಯಾರೋ…ನೀ ಯಾರ ಆದ್ರೆ ನಂಗೇನೋ; ಕಪಾಳ ಮೋಕ್ಷ ಮಾಡಿದ ಖಡಕ್ ಕಮಲಾ!

ವಿಜಯಸಾಕ್ಷಿ ಸುದ್ದಿ, ಗದಗ

ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಲೇಡಿ ಟೈಗರ್ ಎಂದೇ ಖ್ಯಾತಿಯಾಗಿರುವ, ಪಿಎಸ್ ಐ ಖಡಕ್ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಬಾರಿಸಿದ್ದಲ್ಲದೇ, ಆ ವ್ಯಕ್ತಿಯನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ಈ ಸಂದರ್ಭದಲ್ಲಿ ಬೈಕ್ ಸೇರಿದಂತೆ ವಾಹನಗಳ ಬಳಕೆ ನಿಷೇಧಿಸಿದೆ. ಮಾರುಕಟ್ಟೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕು ಎಂದು ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಆದರೂ ಜನಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ತಮ್ಮ ತಪ್ಪು ಮುಂದುವರೆಸುತ್ತಿದ್ದಾರೆ. ಹೀಗಾಗಿ ಪೊಲೀಸರು ಹೈರಾಣಾಗುತ್ತಿದ್ದಾರೆ.

ಹೀಗೆ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿಯ ರುಚಿ ತೋರಿಸುತ್ತಿದ್ದಾರೆ. ಅಲ್ಲದೇ, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ.

ಕೇಳಿದರೆ ನಾನು ಎಮ್ ಎಸ್ ಐಎಲ್ ನೌಕರ… ಬೆಳದಡಿಯಿಂದ ಬರಬೇಕು ಎಂದು ವಾದಿಸಿದ್ದಾನೆ. ಅಲ್ಲದೇ, ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್ ಐ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಹೊಡೆದಿದ್ದಾರೆ. ಫೋನ್ ಕಸಿದುಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಬೈಕ್ ಸವಾರ ವಾಗ್ವಾದ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಇಲ್ಲಿನ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ. ಮಾಧ್ಯಮದ ಸಿಬ್ಬಂದಿಯ ಮೇಲೆಯೂ ಈ ವ್ಯಕ್ತಿ ತನ್ನ ದರ್ಪ ತೋರಿಸಲು ಪ್ರಯತ್ನಿಸಿದ. ಪೊಲೀಸರು ಮಾತ್ರ ಜೀಪ್ ನಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಸುರೇಶ್ ಸೋಮಯ್ಯ ಹಿರೇಮಠ ಎಂಬಾತನೇ ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಪೊಲೀಸರ ಅತಿಥಿಯಾದಾತ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಅನಗತ್ಯವಾಗಿ ಹೊರ ಬಂದವರ ಬೈಕ್ ಸೀಜ್; ಮಾಸ್ಕ್ ಇಲ್ಲದವರಿಗೆ ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಬೆಳಿಗ್ಗೆಯಿಂದಲೇ ರಾಜ್ಯದ ಮೂಲೆ ಮೂಲೆಯಲ್ಲಿಯೂ ಜನರ ನಿಯಂತ್ರಣಕ್ಕೆ ಪೊಲೀಸರು ರಸ್ತೆಗೆ ಇಳಿದಿದ್ದಾರೆ.
ಅನಾವಶ್ಯಕವಾಗಿ ರಸ್ತೆಗೆ ಬರುತ್ತಿರುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

ಇಲ್ಲಿಯ ಭೂಮರಡ್ಡಿ ಸರ್ಕಾಲ್, ಮಹೇಂದ್ರಕರ ಸರ್ಕಲ್ ಗಳಲ್ಲಿ ಸುಮಾರು 25ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ರಾಜ್ಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಬೆಕ್ಕಾಬಿಟ್ಟಿಯಾಗಿ ಬೈಕ್ ಸಾವರರು ಸಂಚಾರ ಮಾಡುತ್ತಿದ್ದರು.

ಇದರೊಂದಿಗೆ ಮಾಸ್ಕ್ ಹಾಕದವರಿಗೆ ದಂಡ ಬೀಳುತ್ತಿದೆ. ಪೊಲೀಸರು ಹಾಗೂ ಅಧಿಕಾರಿಗಳು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದಿರುವವರನ್ನು ಎಪಿಎಂಸಿ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲ್ಲಿ ವ್ಯಾಪಾರಸ್ಥರು ಹಾಗೂ ಜನರು ಗುಂಪು ಗುಂಪಾಗಿ ಸೇರಿ ತರಕಾರಿ ಹರಾಜು ಹಾಕುತ್ತಿದ್ದರು. ಕೆಲವರು ಮಾಸ್ಕ್ ಹಾಕಿಕೊಳ್ಳದೆ ನಿಂತಿದ್ದರು. ಹೀಗಾಗಿ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ, ಪಾಲಕರು, ಬಾಲಕನಿಂದ ಎಲೆ ಮಾರಾಟ ಮಾಡಿಸಿದ್ದಾರೆ. ಎಲೆ ಮಾರುವುದು ಸರಿಯಲ್ಲ. ಮನೆಗೆ ಹೋಗು. ನಿಮ್ಮ ತಂದೆ ಕಳಿಸಿಕೊಡು. ಕೊರೊನಾ ಸಮಯದಲ್ಲಿಯೂ ಪಾಲಕರು ಬುದ್ಧಿ ಕಲಿಯದೆ, ಮಕ್ಕಳನ್ನು ಮಾರುಕಟ್ಟೆಗೆ ಕಳುಹಿಸಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಕಾರ್ಯದರ್ಶಿ ನ್ಯಾಮಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಗತ್ಯವಾಗಿ ಹೊರ ಬಂದರೆ ಲಾಠಿ ರುಚಿ ಗ್ಯಾರಂಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಅಟ್ಟಹಾಸ ಕಟ್ಟಿಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್ ಡೌನ್ ಶುರುವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ಜನರಿಗೆ ಬುದ್ಧಿ ಹೇಳುವ ಪಾಠ ಶುರು ಮಾಡಿದ್ದಾರೆ.

ಬಳ್ಳಾರಿ, ಕೋಲಾರ ಮತ್ತು ಕಲಬುರಗಿಯಲ್ಲಿ ಬೈಕ್ ಮೇಲೆ ಬಂದವರಿಗೆ ಲಾಠಿ ರುಚಿ ತೋರಿಸಿ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ. 24ರವರೆಗ ರಾಜ್ಯದಲ್ಲಿ ಈ ಲಾಕ್ ಡೌನ್ ಮುಂದುವರೆಯಲಿದೆ. ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಂದ್ ಆಗಿರಲಿದೆ. ಬೆಳಿಗ್ಗೆ 10 ಗಂಟೆಯ ನಂತರ ಮನೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಬೆಳಿಗ್ಗೆಯಿಂದ ಬೈಕ್ ಮೇಲೆ ಸಂಚರಿಸುತ್ತಿರುವವರ ಬೈಕ್ ಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆ ಮಾತ್ರ ಸಮಯ ಇರಲಿದೆ. ಬೆಳಿಗ್ಗೆ 6 ರಿಂದ 10ರ ವರೆಗೆ ಹೋದರೆ ಮಾತ್ರ ಅಗತ್ಯ ವಸ್ತುಗಳು ಸಿಗಲಿವೆ. ಮಾಂಸ ಖರೀದಿಗೂ ಬೆಳಿಗ್ಗೆ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಳ್ಳುಗಾಡಿಯಲ್ಲಿ ತರಕಾರಿ ಮಾರುವವರು ಸಂಜೆಯವರೆಗೂ ಮಾರಬಹುದು.

ಇಂದಿನಿಂದ 14 ದಿನಗಳ ಕಾಲ ಅಂತರ್ ಜಿಲ್ಲಾ ಓಡಾಟಕ್ಕೆ ನಿಷೇಧವಿದೆ. ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ, ಆಟೋ, ಟ್ಯಾಕ್ಸಿ ಸೇವೆಯಿರುವುದಿಲ್ಲ. ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ, ಮಾರುಕಟ್ಟೆಗಳು ಬಂದ್ ಇರಲಿವೆ.
ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿ, ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ), ಹಣ್ಣು – ತರಕಾರಿ ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತದೆ.

ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ (ಸಂಜೆ 6 ಗಂಟೆಯವರೆಗೆ), ಮಾಂಸ ಹಾಗೂ ದಿನಸಿ ಅಂಗಡಿ ಬೆಳಿಗ್ಗೆ 10ರ ವರೆಗೆ ತೆರೆಯಲಿದೆ. ಇಡೀ ದಿನ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶವಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ.

ಹಾಪ್ ಕಾಮ್ಸ್ ಸಂಜೆಯವರೆಗೆ ತೆರೆದಿರುತ್ತದೆ. ಮದುವೆಗಳನ್ನು ಮನೆಯಲ್ಲಿ ಮಾಡಿಕೊಳ್ಳಬೇಕು. ಆದರೆ, 40 ಜನರಿಗೆ ಮಾತ್ರ ಅವಕಾಶ. ಅಂತ್ಯ ಸಂಸ್ಕಾರಕ್ಕೆ 5 ಜನರಿಗಷ್ಟೇ ಅವಕಾಶ. ಹೋಂ ಡೆಲಿವರಿ ಇರಲಿದೆ. ರೈಲು ಹಾಗೂ ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅನಗತ್ಯವಾಗಿ ಹೊರ ಬಂದರೆ, ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಾರೆ. ಲಾಠಿ ಬೀಸುತ್ತಾರೆ. ಕೇಸ್ ದಾಖಲಿಸುತ್ತಾರೆ.

error: Content is protected !!