Home Blog Page 3107

ಸಹಾಯಕ್ಕಾಗಿ ಮನವಿ ಮಾಡಿದ್ದ ನಟ ಕೊರೊನಾಗೆ ಬಲಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅನ್ ಫ್ರೀಂಡ ಸಿನಿಮಾ ಖ್ಯಾತಿಯ ನಟ ರಾಹುಲ್ ವೊಹ್ರಾ ಅವರು ಮಹಾಮಾರಿಗೆ ಬಲಿಯಾಗಿದ್ದಾರೆ. ಶನಿವಾರವಷ್ಟೇ ಅವರು ಫೇಸ್‍ ಬುಕ್ ನಲ್ಲಿ ತಮಗೆ ಸಹಾಯ ಮಾಡುವಂತೆ ಬರೆದುಕೊಂಡಿದ್ದರು. ಅಲ್ಲದೇ, ಕೊರೊನಾ ಸೋಂಕು ತಗುಲಿರುವ ಕುರಿತು ಕೂಡ ಬರೆದುಕೊಂಡಿದ್ದರು.

ನನಗೂ ಒಳ್ಳೆಯ ಚಿಕಿತ್ಸೆ ದೊರೆತರೆ ನಾನು ಬದುಕಿ ಉಳಿಯುತ್ತೇನೆ. ನಿಮ್ಮ ರಾಹುಲ್ ವೊಹ್ರಾ ಎಂದು ಬರೆದುಕೊಂಡಿದ್ದರು.
ಬೆಡ್ ನಂಬರ್ ಸಹಿತ ಅವರು ಮಾಹಿತಿ ಹಂಚಿಕೊಂಡಿದ್ದರು. ಮತ್ತೆ ಹುಟ್ಟಿ ಬಂದು, ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ಸದ್ಯ ನಾನು ಆತ್ಮಸ್ಥೈರ್ಯ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು.

ನಟ ರಾಹುಲ್ ವೊಹ್ರಾ ಅವರ ಸಾವಿಗೆ ನಮ್ಮ ಪ್ರತಿಭಾನ್ವಿತ ಕಲಾವಿದ ಇಂದು ಜಗತ್ತಿನಲ್ಲಿಲ್ಲ. ಒಳ್ಳೆಯ ಚಿಕಿತ್ಸೆ ಸಿಕ್ಕರೆ ಬದುಕುತ್ತೇನೆಂದು ನಿನ್ನೆ ಹೇಳಿಕೊಂಡಿದ್ದ. ವಿಷಯ ತಿಳಿಯುತ್ತಲೇ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಆಯುಷ್ಮಾನ್ ದ್ವಾರಾಕಗೆ ಶಿಫ್ಟ್ ಮಾಡಲಾಗಿತ್ತು. ಆದರೂ ಆತನನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ನಮ್ಮನ್ನು ಕ್ಷಮಿಸು ರಾಹುಲ್, ನಿನ್ನನ್ನು ಬದುಕಿಸಿಕೊಳ್ಳದ ನಾವು ಅಪರಾಧಿಗಳು. ನಿನಗೆ ನನ್ನ ಅಂತಿಮ ನಮನಗಳು ಎಂದು ಅನ್ ಫ್ರೀಡಂ ಚಿತ್ರದ ನಿರ್ದೇಶಕ ಅರವಿಂದ್ ಗೌರ್ ಸಂತಾಪ ಸೂಚಿಸಿದ್ದಾರೆ.

ಡಂಗೂರ ಸಾರುವ ಮೂಲಕ ಕೊರೊನಾ ಜಾಗೃತಿ

ವಿಜಯಸಾಕ್ಷಿ ಸುದ್ದಿ, ಗದಗ

ಡಂಗೂರು ಸಾರುವ ಮೂಲಕ ಈ ಹಳ್ಳಿಯಲ್ಲಿ ಲಾಕ್ ಡೌನ್ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಡಂಗೂರ ಸಾರುವ ಮೂಲಕ ನಾಳೆಯ ಲಾಕ್ ಡೌನ್ ಬಗ್ಗೆ ಊರ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.

ಈ ಗ್ರಾಮದಲ್ಲಿ ನಾಳೆ ಬೆಳಿಗ್ಗೆಯಿಂದ ಬೈಕ್ ಹಾಗೂ ವಾಹನ ಸವಾರಿ ಮಾಡುವಂತಿಲ್ಲ. ಬೆಳಗ್ಗೆ ಆರು ಗಂಟೆಯಿಂದ ಒಂಭತ್ತು ಗಂಟೆಯವರಿಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಬೇಕು ಹಾಗೂ ಮಾರಾಟ ಮಾಡಬೇಕು. ಒಂಭತ್ತು ಗಂಟೆಯ ನಂತರ ಅಂಗಡಿ – ಮುಂಗಟ್ಟು ಬಂದ್ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗಿದೆ.

ಒಂದು ವೇಳೆ ಅಂಗಡಿ – ಮುಂಗಟ್ಟು ಬಂದ್ ಮಾಡದಿದ್ದರೆ ಹಾಗೂ ವಾಹನಗಳನ್ನು ಬಳಕೆ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡಿದರೆ ಪೊಲೀಸರು ಕೇಸ್ ಹಾಕಲಿದ್ದಾರೆ ಎಂದು ಗ್ರಾಮದಲ್ಲಿ ಡಂಗೂರದ ಮೂಲಕ ಸಾರಲಾಗಿದೆ.

ಜಿಲ್ಲೆಗಳ ಗಡಿಯಲ್ಲಿ ಚೆಕ್ ಪೋಸ್ಟ್; ಎಂಟ್ರಿಯಾಗುವವರ ಮೇಲೆ ನಿಗಾ!

ವಿಜಯಸಾಕ್ಷಿ ಸುದ್ದಿ, ಗದಗ

ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಆರಂಭವಾಗಿವೆ. ಅಲ್ಲದೇ, ಜಿಲ್ಲೆಗಳಿಗೆ ಎಂಟ್ರಿಯಾಗುವವ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಲಾಕ್ ಡೌನ್ ವಿಚಾರವಾಗಿ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಅಧಿಕಾರಿಗಳಿಗೆ ಹಲವು ವಿಷಯಗಳ ಕುರಿತು ನಿರ್ದೇಶನ ನೀಡಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮಗಳ ಸಭೆ ನಡೆಸಿ ಜಾಗೃತಿ ಮೂಡಿಸಲು ಸೂಚನೆ ನೀಡಿದ್ದಾರೆ.

ಧಾರ್ಮಿಕ ಕಾರ್ಯಗಳಲ್ಲಿ ಜನ ಭಾಗಿಯಾಗದಂತೆ ಕಟ್ಟು ನಿಟ್ಟಿ‌ನ ಕ್ರಮ ಸೂಚಿಸಲಾಗಿದೆ. ಹೊಸ ಮಾರ್ಗ ಸೂಚಿಯಂತೆ ಕಟ್ಟುನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವಂತ ಸೂಚಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ತಂಡ ರಚಿಸಿ ಲಾಕ್ ಡಾನ್ ಯಶಸ್ವಿಗೊಳಿಸಲು ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೋಂಕಿತರಿಗೆ ಮೆಡಿಸಿನ್ ಕಿಟ್ ವಿತರಿಸಲು ಗ್ರಾಪಂ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಹೆಚ್ಚು ಸೋಂಕಿತರು ಇರುವ ಗ್ರಾಮಗಳಿಗೆ ತಹಶೀಲ್ದಾರ್, ಪೊಲೀಸರ ಸಹಾಯದಿಂದ ಸೌಕರ್ಯ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಪಿಡಿಒ ಸೇರಿದಂತೆ ಪಂಚಾಯತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ವಿವಿಧ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಂದಿನಂತೆ ತನ್ನನಾಗಾಲೋಟ ಮುಂದುವರೆಸಿದ ಮಹಾಮಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಮಹಾಮಾರಿಯ ಅಟ್ಟಹಾಸ ಎಂದಿನಂತೆಯೇ ಇದೆ. ಭಾನುವಾರವೂ ಕೊರೊನಾರ್ಭಟ ಮುಂದುವರೆದಿದೆ. ರಾಜ್ಯದಲ್ಲಿ ಒಂದೇ ದಿನ ಮತ್ತೆ 47,930 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು ಬರೋಬ್ಬರಿ 490 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 19,34,378ಕ್ಕೆ ಏರಿಕೆ ಕಂಡಿದೆ. ಈ ಪೈಕಿ 18,776 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ 31,796 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಬೆಂಗಳೂರಿನಲ್ಲಿ 20,897 ಹೊಸ ಪ್ರಕರಣಗಳು ವರದಿಯಾಗಿವೆ. ತುಮಕೂರು, ಹಾಸನ ಹಾಗೂ ಬಳ್ಳಾರಿ ಜಿಲ್ಲೆಗಳು 2 ಸಾವಿರದ ಗಡಿ ದಾಟಿವೆ. ಇನ್ನು ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು 1 ಸಾವಿರದ ಗಡಿ ದಾಟಿವೆ.

ಕುಚಿಕು ಗೆಳೆಯನ ಅಗಲಿಕೆಗೆ ಕಣ್ಣೀರು ಮಿಡಿದ ವೃದ್ಧ!

ಟೀ ಮಾರುವ ತುಕಾರಾಮ, ಕಾಲು ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ ರವಿಕುಮಾರ

ಇಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು ಚಿಲ್ಲರೆ ಹಣ!

ವಿಜಯಸಾಕ್ಷಿ ಸುದ್ದಿ, ಗದಗ

ಅವರಿಬ್ಬರದು ದಶಕಗಳ ಕಾಲದ ಗೆಳತನ. ಇಬ್ಬರೂ ಜೊತೆಗೆ ಬದುಕು ಸಾಗಿಸುತ್ತಿದ್ದರು. ಎಲ್ಲಿಗೆ ಹೋದರೂ ಇಬ್ಬರು ಕೂಡಿ ಹೋಗುತ್ತಿದ್ದರು. ಒಬ್ಬಾತ ಟೀ ಮಾರುತ್ತಿದ್ದರೆ, ಇನ್ನೊಬ್ಬ ಭಿಕ್ಷೆ ಬೇಡುತ್ತಿದ್ದ. ಆದರೆ ಈಗ ಭಿಕ್ಷುಕ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ಜೀವದ ಗೆಳೆಯನನ್ನು ಕಳೆದುಕೊಂಡ ಟೀ ಮಾರುವಾತ ದಿಕ್ಕುಗಾಣದೆ ಕಣ್ಣೀರು ಹಾಕುತ್ತಿದ್ದಾನೆ.

ಇದು ಯಾವುದೇ ಸಿನೆಮಾದ ಕಥೆಯಲ್ಲ. ಗದಗನಲ್ಲಿ ನಡೆದ ಘಟನೆ. ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟವನು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನ ರವಿಕುಮಾರ್ ವೆಂಕಣ್ಣ ಇಲ್ಲೂರ. ಈತನಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿ ತುಕಾರಾಂ ಪಾಸ್ತೆ ಕಣ್ಣೀರು ಮಿಡಿಯುತ್ತಿದ್ದಾನೆ.

ತುಕಾರಾಂ ಪಾಸ್ತೆ

ಇವರಿಬ್ಬರೂ ಸದ್ಯ ಗದಗ ಸಮೀಪದ ಕಳಸಾಪುರ ಗ್ರಾಮದಲ್ಲಿ ವಾಸವಾಗಿದ್ದರು. ಎಲ್ಲೆಲ್ಲೋ ತಿರುಗಾಡಿ ಎರಡು ವರ್ಷದ ಹಿಂದೆ ಕಳಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದರು.
ಗಂಗಾವತಿಯಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿದ್ದ ತುಕಾರಾಮ್ ಪಾಸ್ತೆಗೆ ಆಕಸ್ಮಿಕವಾಗಿ ಸಿಂಧನೂರಿನ ರವಿಕುಮಾರ್ ಪರಿಚಯವಾಗಿತ್ತು.

ಮೃತ ರವಿಕುಮಾರ್

ರವಿಕುಮಾರ್ ಲಾರಿ ಚಾಲಕನಾಗಿ ಅಪಘಾತವೊಂದರಲ್ಲಿ ಕಾಲ ಕಳೆದುಕೊಂಡು ಹೆಂಡತಿ, ಮಕ್ಕಳ ಜೊತೆಗೆ ಜಗಳ ಮಾಡಿ ಮನೆ ಬಿಟ್ಟು ಗಂಗಾವತಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ತುಕಾರಾಮ್ ಪಾಸ್ತೆ ಟೀ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದ.
ಇವರಿಬ್ಬರಿಗೂ ಪರಿಚಯ ದೋಸ್ತಿಗೆ ತಿರುಗಲು ಕಾರಣ ಚಿಲ್ಲರೆ ಹಣ. ಟೀ ಮಾರಾಟ ಮಾಡುವಾಗ ಚಿಲ್ಲರೆ ಸಮಸ್ಯೆ ಆದಾಗ ಭಿಕ್ಷೆಯಿಂದ ಬಂದ ಚಿಲ್ಲರೆ ಹಣವನ್ನು ರವಿಕುಮಾರ ತುಕಾರಾಮನಿಗೆ ಕೊಡುತ್ತಿದ್ದ. ಹೀಗಾಗಿ ಇಬ್ಬರ ನಡುವೆ ಗಾಢವಾದ ಗೆಳೆತನ ಬೆಳೆದಿದೆ.

ರಾಜ್ಯ, ಹೊರರಾಜ್ಯದಲ್ಲಿ ಜಾತ್ರೆ, ಸಮಾವೇಶದಲ್ಲಿ ಇವರಿಬ್ಬರೂ ಹಾಜರಾಗುತ್ತಿದ್ದರು. ತುಕಾರಾಮ ಟೀ ಮಾರಿದರೆ, ರವಿಕುಮಾರ್ ಭಿಕ್ಷೆ ಬೇಡುತ್ತಿದ್ದ. ಇದೇ ರೀತಿ ಎರಡು ವರ್ಷಗಳ ಹಿಂದೆ ಗದಗಿಗೆ ಬಂದಿದ್ದಾರೆ. ವಾಸಕ್ಕೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆ ಸಿಗದಿದ್ದಾಗ ಸಮೀಪದ ಕಳಸಾಪುರ ಗ್ರಾಮದಲ್ಲಿ ಸಣ್ಣದಾದ ಮನೆ ಹಿಡಿದಿದ್ದರು.

ಕುಟುಂಬದವರು ಬರಲಿಲ್ಲ:

ನಿತ್ಯ ಇಬ್ಬರದೂ ಅದೇ ಕಾಯಕ. ನಾಲ್ಕು ದಿನಗಳ ಹಿಂದೆ ರವಿಕುಮಾರ್‌ಗೆ ಅನಾರೋಗ್ಯ ಕಾಡಿದೆ. ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ರವಿಕುಮಾರ್ ಮೃತಪಟ್ಟಿದ್ದಾನೆ. ತುಕಾರಾಮ, ರವಿಕುಮಾರ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ. ಆದರೆ ಅವರು ಕ್ಯಾರೆ ಅಂದಿಲ್ಲ. ವಾಪಸ್ ಕಳಸಾಪುರಕ್ಕಾದರೂ ಶವ ಒಯ್ಯೋಣ ಅಂದರೆ ಗ್ರಾಮಸ್ಥರು ಬೇಡ ಅಂದಿದ್ದಾರೆ. ಬೆಳಗ್ಗೆ ಎದ್ದು ನಗರಸಭೆ ಸಿಬ್ಬಂದಿ ಶವಸಂಸ್ಕಾರ ನಡೆಸಿದ್ದಾರೆ.

ಕೊರೊನಾ ಜಗತ್ತಿನ ಸಂಬಂಧಗಳಲ್ಲಿ ಎಷ್ಟು ಹುಳಿ ಹಿಂಡಿದೆ ಎಂದರೆ, ಗೆಳೆಯನ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡುವ ಅವಕಾಶವೂ ಇಲ್ಲದಂತಾಗಿದೆ. ನಿರ್ವ್ಯಾಜ ಸ್ನೇಹವನ್ನು ಕೊಟ್ಟ ಗೆಳೆಯನಿಗಾಗಿ ಕಣ್ಣೀರು ಮಿಡಿಯುವ ಆಯ್ಕೆಯಲ್ಲದೆ ತುಕಾರಾಮನಿಗೆ ಮತ್ತೇನೂ ಉಳಿದಿಲ್ಲ.

ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್…ಏನಿದೆ? ಏನಿಲ್ಲ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ.
ರಾಜ್ಯದಲ್ಲಿ ಪ್ರತಿ ದಿನ 50 ಸಾವಿರದ ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಇದರಿಂದ ಜನ ಬಗ್ಗದ ಕಾರಣ, ಸೋಂಕು ಹತೋಟಿಗೆ ಬರಲಿಲ್ಲ. ಹೀಗಾಗಿ ನಾಳೆಯಿಂದ 14 ದಿನಗಳ ಕಾಲ ಅಂದರೆ ಮೇ. 24ರ ವರೆಗೂ ಅನ್ವಯವಾಗುವಂತೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿದೆ.

ಈ ಬಾರಿಯ ಲಾಕ್ ಡೌನ್ ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೇ, ಹಲವಾರು ಕಠಿಣ ನಿಯಮಗಳು ಜಾರಿಯಲ್ಲಿರಲಿವೆ.
ನಾಳೆಯಿಂದ 14 ದಿನಗಳ ಕಾಲ ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲಿನ ಅಂಗಡಿಗಳು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತವೆ. ಹಾಪ್ ಕಾಮ್ಸ್, ಹಣ್ಣು-ತರಕಾರಿ ಅಂಗಡಿಗಳು ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತವೆ.

ತಳ್ಳುಗಾಡಿಯಲ್ಲಿ ಹಣ್ಣು – ತರಕಾರಿ ಮಾರಾಟ ಮಾಡುವವರು ಸಂಜೆ 6ರ ವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
ದಿನಸಿ – ಮಾಂಸದ ಅಂಗಡಿಗಳು ಬೆಳಿಗ್ಗೆ 10ರವರೆಗೆ ಮಾತ್ರ ತೆರೆದಿರಬೇಕು. ಹೊಟೇಲ್ ಗಳಲ್ಲಿ ಇಡೀ ದಿನ ಪಾರ್ಸೆಲ್ ವ್ಯವಸ್ಥೆ ಇರುತ್ತದೆ. ಹೋಂ ಡೆಲಿವರಿ ಇರಲಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10ರ ವರೆಗೆ ಅವಕಾಶವಿರುತ್ತದೆ. ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಳ್ಳಬೇಕು. ಕೇವಲ 40 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯ ಸಂಸ್ಕಾರದಲ್ಲಿ 5ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿವಂತಿಲ್ಲ.

ಆಹಾರ ಸಂಸ್ಕರಣಾ ಘಟಕ, ರೈಲು, ವಿಮಾನ ಸೇವೆ ಇರಲಿದೆ. ಅಂತರ್ ಜಿಲ್ಲಾ ಓಡಾಟ, ಖಾಸಗಿ ವಾಹನ ಸಂಚಾರ, ಸಾರಿಗೆ ಬಸ್ ಸಂಚಾರ, ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ, ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ ಹಾಗೂ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಇರಲಿದೆ. ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡು ಹೋಗಬೇಕು. ಸಮೀಪದ ಅಂಗಡಿಗಳಲ್ಲಿ ದಿನ ಬಳಕೆ ವಸ್ತು ಖರೀದಿಸಬೇಕು. ಒಂದು ವೇಳೆ ವಾಹನಗಳನ್ನು ರಸ್ತೆಗೆ ಇಳಿಸಿದರೆ, ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ಯುವಕನ ಮುಖ ಪಂಕ್ಚರ್! ಪೊಲೀಸರು ಹೊಡೆದ್ರಾ ?

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವೇಗವಾಗಿ ಬರುತ್ತಿದ್ದ ಬೈಕ್ ಗೆ ಪೊಲೀಸರು ಕೈ ಮಾಡಿದ್ದ ಕಾರಣಕ್ಕಾಗಿ ಬೈಕ್ ನಲ್ಲಿದ್ದ ಯುವಕ ಆಯತಪ್ಪಿ ಬಿದ್ದ ಪರಿಣಾಮವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ಬಳಿ ನಡೆದಿದೆ.

ಜನತಾ ಕರ್ಫ್ಯೂ ಜಾರಿಯಲ್ಲಿದೆ. ಪೊಲೀಸ್ ಎಲ್ಲ ಕಡೆ ನಾಕಾಬಂದಿ ಹಾಕಿದ್ದು, ಅನಗತ್ಯ ಬೈಕ್ ಸವಾರರ ಒಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ವೇಗ ವಾಗಿ ಬರುತ್ತಿದ್ದ ಬೈಕ್ ತಡೆಯಲು ಮುಂದಾದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದರಿಂದ ಯುವಕನೊರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶ

ಆದರೆ ಯುವಕನ ಕಡೆಯವರು ಹೇಳೋದೆ ಬೇರೆ. ಸುಮ್ಮನೆ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ವಾಗ್ವಾದಕ್ಕಿಳಿದರು. ಕಸಬಾ ಪೇಟ ಪೊಲೀಸ್ ಠಾಣೆಯ ಎಎಸ್ಐ ಎಸ್. ಎ ಗೌರಿಮಠ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೋಜಾ ಉಪವಾಸ ಇರುವ ಯುವಕನಿಗೆ ಈ ರೀತಿ ಹೊಡೆಯುವುದು ಎಷ್ಟು ಸರಿ ಎಂದು ಮುಗಿಬಿದ್ದರು.

ಆದರೆ ಆತನನ್ನು ನಾವು ಹೊಡೆದಿಲ್ಲ. ಆತನೇ ಬೈಕನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಹೇಳಲು ಮುಂದಾದ ಪೊಲೀಸರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷವೊಂದರ ಮುಖಂಡರು ಎಂಟ್ರಿ ಆಗಿ ಯುವಕರನ್ನ ಸಮಾಧಾನ ಪಡಿಸಿ ಗಾಯಗೊಂಡ ಯುವಕನನ್ನ ಆಸ್ಪತ್ರಗೆ ಕಳಿಸಿದರು.

ಹಳೆ ಹುಬ್ಬಳ್ಳಿಯ ಕಸಬಾ ಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಆರ್ಭಟ; 368 ಜನರಿಗೆ ಸೋಂಕು, ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 09 ಭಾನುವಾರವೂ ಸೋಂಕಿನ ಸ್ಫೋಟ ಮುಂದುವರೆದಿದೆ. ಭಾನುವಾರ 368 ಜನರಿಗೆ ಸೋಂಕು ಪತ್ತೆಯಾಗಿದ್ದು, ಮತ್ತೆ ಮೂರು ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ.

ಇಂದಿನ 368 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 14744 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -178, ಮುಂಡರಗಿ-30, ನರಗುಂದ-37, ರೋಣ-35, ಶಿರಹಟ್ಟಿ-78 ಹೊರಜಿಲ್ಲೆಯ-10 ಸೇರಿದಂತೆ 368 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿಯಿಂದಾಗಿ ಮೂರು ಜನ ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 46 ವರ್ಷದ ಮಹಿಳೆ ಮೇ 02 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು, ಹೃದಯಾಘಾತದಿಂದ ಮೇ 07 ರಂದು ಮೃತಪಟ್ಟಿರುತ್ತಾರೆ.

ಗದಗನ 52 ವರ್ಷದ ಮಹಿಳೆ ಮೇ 01 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮಧುಮೇಹ ಕಾಯಿಲೆಯಿಂದ ಮೇ 07 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬ 63 ವರ್ಷದ ಮಹಿಳೆ ಮೇ 6 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 07 ರಂದು ಮೃತಪಟ್ಟಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
158 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 203 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13192 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1394 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 195 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಚಾಲಕನ ನಿಯಂತ್ರಣ ತಪ್ಪಿ 100 ಅಡಿ ದೂರದಲ್ಲಿ ಬಿದ್ದ ಕಾರು!

ವಿಜಯಸಾಕ್ಷಿ ಸುದ್ದಿ, ಗದಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಳಿ ನಡೆದಿದೆ.

ಗದಗನಿಂದ ಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದ ಕಡೆಗೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಮೂರು ಪಲ್ಟಿ ಹೊಡೆದು ಸುಮಾರು 100 ಅಡಿ ದೂರದಲ್ಲಿ ಬಿದ್ದಿದೆ.

ಸೇತುವೆಗೆ ಡಿಕ್ಕಿ ಹೊಡೆದ ಕಾರು, ಸೇತುವೆ ಮೇಲೆ ಸುಮಾರು 50 ಅಡಿ ಮುಂದೆ ಹೋಗಿ ರಸ್ತೆ ಬದಿಯಲ್ಲಿರುವ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ನಂತರ ಮತ್ತೆ 50 ಅಡಿ ದೂರದಲ್ಲಿ ಪಲ್ಟಿಯಾಗಿ ಬಿದ್ದಿದೆ.

ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಮಾಲೀಕ ಶಿವನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಕಾರು ಮಾಲೀಕ ಶಿವನಗೌಡ ಅವರನ್ನು ಗದಗನ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಈ ಅಪಘಾತದಲ್ಲಿ ಸ್ಥಳೀಯ ಬಾಲಕನೊಬ್ಬ ಆಶ್ಚರ್ಯಕರವಾಗಿ ಬಚಾವಾಗಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮತ್ತೊಮ್ಮೆ ಉಡಾಫೆಯಿಂದ ಉತ್ತರಿಸಿದ ಕತ್ತಿ!

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಸಚಿವ ಉಮೇಶ ಕತ್ತಿ ಅವರು ಮತ್ತೊಮ್ಮೆ ಜನರ ನೋವಿನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬೀಳಗಿ ಪಟ್ಟಣದ ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಹಾರ್ಟ್ ಅಟ್ಯಾಕ್, ಶುಗರ್ ನಿಂದ ಜನ ಸತ್ತರೆ ಏನೂ ಮಾಡಲು ಆಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಕೋವಿಡ್ ನಲ್ಲಿ ಸಾಕಷ್ಟು ಜನ ಸಾಯುತ್ತಿದ್ದಾರೆ. ನಾನು ಯಾರು ಸಾಯಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಯುವವರು ಯಾಕೆ ಸತ್ತರೂ ಅಂತ ಎನ್ನುವುದಕ್ಕೆ ಲೆಕ್ಕ ಇಲ್ಲ. ಕೋವಿಡ್ ನ ಸಂದರ್ಭದಲ್ಲಿ ತೊಂದರೆಯಾಗುತ್ತಿವೆ. ರೆಮಿಡಿಸಿವರ್ ಕೊಟ್ಟರೂ ಜನ ಸಾಯುತ್ತಿದ್ದಾರೆ. ಅದಕ್ಕೆ ಏನು ಮಾಡೋಕಾಗುತ್ತದೆ. ಅವರಿಗೆ ಹಾರ್ಟ್ ಅಟ್ಯಾಕ್, ಶುಗರ್ ಇರುತ್ತದೆ. ಅಂತಹ ವ್ಯಕ್ತಿಗಳಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಆಗುವುದಿಲ್ಲ ಎಂದು ಉಡಾಫೆಯಾಗಿ ಉತ್ತರ ನೀಡಿದ್ದಾರೆ.

ಮಾಧ್ಯಮದಲ್ಲಿ ಹೆಣ, ಆಂಬುಲೆನ್ಸ್, ಹೆಣ ಸುಡೋದು ತೋರಿಸಿ ಭಯ ಹುಟ್ಟಿಸಲಾಗುತ್ತಿದೆ. ಹಲವರು ಮಾಧ್ಯಮದಿಂದ ಮಾನಸಿಕವಾಗುತ್ತಿದ್ದಾರೆ. ಯಾರು ಏಕೆ ಸತ್ತರು ಎಂದು ಗೊತ್ತಿಲ್ಲ. ಬುಲೆಟಿನ್ ನಲ್ಲಿ ತಪ್ಪು ಆಗಿರಬಹುದು. ನಾವು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳುತ್ತಿಲ್ಲ. ತಪ್ಪಾಗಿದ್ದರೆ ತಿಳಿಸಿ ಎಂದು ಹೇಳಿದ್ದಾರೆ.

error: Content is protected !!