Home Blog Page 3124

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಮಸ್ಕಿ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಶನಿವಾರ ಮಸ್ಕಿ ಕ್ಷೇತ್ರದ ಗುಡಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಶರಣಗೌಡ ಬಯ್ಯಾಪುರ ಇವರ ಸಮ್ಮುಖದಲ್ಲಿ ಕೆಲ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಗುಂಡನಗೌಡ ಅಡವಿಬಾವಿ, ಶಿವನಗೌಡ ಪೊಲೀಸ್ ಪಾಟೀಲ್, ಮುತ್ತಣ್ಣ ಚುಕನಟ್ಟಿ ಕಾಂಗ್ರೆಸ್ ಸೇರಿದ ಮುಖಂಡರಾಗಿದ್ದು, ಇವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದ್ದಾರೆ.

ಟಂಟಂ ಪಲ್ಟಿ; ಮಹಿಳೆ ಸ್ಥಳದಲ್ಲೇ ಸಾವು, ಮಗು, ಚಾಲಕನಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಟಂಟಂ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಮಹಿಳೆ
ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಗರದ ಮುಳಗುಂದ ರಸ್ತೆಯ ನೌಕರರ ಭವನದ ಬಳಿ ಶುಕ್ರವಾರ ಸಂಭವಿಸಿದೆ.

ತಾಲೂಕಿನ ನಾಗಾವಿ ಗ್ರಾಮದ ಸಾವಿತ್ರಿ ರಾಮಪ್ಪ ಕೊಂಡಿಕೊಪ್ಪ(35) ಮೃತ ದುರ್ದೈವಿಯಾಗಿದ್ದಾರೆ.
ಮೃತ ಮಹಿಳೆಯ ಮಗಳು ಹುಲಿಗೆಮ್ಮ ರಾಮಪ್ಪ ಕೆ.(5) ಹಾಗೂ ಆಟೋ ಚಾಲಕ ಶರಣಪ್ಪ ಅರನಗುಡಿ(25) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ನಾಗಾವಿಯಿಂದ ನಗರಕ್ಕೆ ಆಗಮಿಸುತ್ತಿದ್ದ ಆಟೋ ನೌಕರರ ಭವನದ ಬಳಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಅತಿವೇಗ ಹಾಗೂ ಟಂಟಂ ಚಾಲಕನ ಅಲಕ್ಷತನವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಪಂ ಕ್ಷೇತ್ರ‌ ಮರುವಿಂಗಡಣೆಗೆ ವಿರೋಧ; ತಾಲೂಕು ಪಂಚಾಯತಿ ಮಾಜಿ ಸದಸ್ಯ ಸಾವು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28- ಚಿಕ್ಕಜಂತಕಲ್ (ಆನೆಗುಂದಿ) ಎಂದು ಮರುನಾಮಕರಣ ಮಾಡಿರುವುದನ್ನು ಖಂಡಿಸಿ ನಡೆಯತ್ತಿದ್ದ ಸಭೆಯಲ್ಲಿಯೇ ತಾಪಂ ಮಾಜಿ ಸದಸ್ಯರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೆಸರನ್ನು ಬದಲಾಯಿಸಿರುವ ಸರ್ಕಾರದ ಕ್ರಮ ಖಂಡಿಸಿ ಸಭೆ ಕರೆಯಲಾಗಿತ್ತು. ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯದ ನಡೆ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ತಾಪಂ ಮಾಜಿ ಸದಸ್ಯ ಪ್ರವೀಣ ಕುಮಾರ್ ಎಂಬುವವರು ತಮ್ಮ ಅಭಿಪ್ರಾಯ ಹೇಳಿ, ಇದು ಪಕ್ಷಾತೀತ ಸಭೆಯಾಗಲಿ ಎಂದು ಹೇಳಿ ತಮ್ಮ ಆಸನದತ್ತ ಹೋಗುತ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಆನೆಗೊಂದಿ ಹೋರಾಟಕ್ಕಾಗಿ ಪ್ರಾಣ ಬಿಟ್ಟ ಪ್ರವೀಣ ಕುಮಾರ್ ಅವರ ಸಾವಿಗೆ ಜಿಲ್ಲೆಯ ಜನತೆ ಕಂಬನಿ ಮೀಡಿದಿದ್ದಾರೆ.

ಇಂದು ಉಪ್ಪಾರ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕು ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ ಹಾಗೂ ಉಪ್ಪಾರ ಯುವಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02-04-2021 ಶುಕ್ರವಾರ ಬೆಳಿಗ್ಗೆ 10-30 ಕ್ಕೆ ಉಪ್ಪಾರ ಸಮುದಾನ ಭವನ ಉಪ್ಪಾರ ಗೇರಿಯಲ್ಲಿ 2019-2020 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆ ಯಾದ ಸದಸ್ಯರಿಗೆ ಸನ್ಮಾನ ಹಾಗೂ ಬಡ್ತಿ ಮತ್ತು ನಿವೃತ್ತಿ ಹೊಂದಿದ ನೌಕರರಿಗೆ ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಕೋವಿಡ್-19 ಕರೋನ ವೈರಸ್ ಗೆ ತುತ್ತಾದ ನೌಕರರ ಕುಟುಂಬಸ್ಥರಿಗೆ ಗೌರವ ಸರ್ಮಪಣ ಕಾರ್ಯಕ್ರಮವಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾ ಪುರಿ ಸೂರ್ಯ ಸಿಂಹಾಸನಾಧೀಶ ಡಾ, ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಶ್ರೀ ‌ಭಗೀರಥ ಪೀಠ ವಹಿಸುವರು.
ಕಾರ್ಯಕ್ರಮ ಶಾಸಕ ಜಿ, ಕರುಣಾಕರರೆಡ್ಡಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಿ ಪುಟ್ಟರಂಗಶೆಟ್ಟಿ, ಹಾಗೂ ರಾಜ್ಯಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಕೆ ಗಿರೀಶ್ ಉಪ್ಪಾರ, ಸೇರಿದಂತೆ ಗಣ್ಯರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಸಮಾಜ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಉಪ್ಪಾರ ಸಮಾಜದ ಮುಖಂಡರು ತಿಳಿಸಿದ್ದಾರೆ.

ಶಿಕ್ಷಣ ವ್ಯವಸ್ಥೆ ಪ್ರಶ್ನಿಸುತ್ತಾ…ಉತ್ತರ ಕಂಡುಕೊಳ್ಳುತ್ತಾ…; ಯುವರತ್ನ ಸಿನಿಮಾ ವಿಮರ್ಶೆ

ವಿಜಯಸಾಕ್ಷಿ ಸಿನಿಮಾ ಸುದ್ದಿ- ಬಸವರಾಜ ಕರುಗಲ್
“Education is not a business, is a service”
ಇದು ಯುವರತ್ನ ಸಿನಿಮಾದ ಕ್ಲೈಮಾಕ್ಸ್ ನಂತರ ಕೊನೆಯಲ್ಲಿ ಬರೋ ಡೈಲಾಗ್.. ಇಡೀ ಸಿನಿಮಾದ ತಿರುಳೇನು ಎಂಬ ಪ್ರಶ್ನೆಗೆ ಸಂಕ್ಷಿಪ್ತ ಉತ್ತರವೂ ಇದೆ..
ಲಾಕ್‌ಡೌನ್‌ಗಿಂತ ಮುಂಚೆ ಬಿಡುಗಡೆಯಾಗಿದ್ದ ಶಿವಣ್ಣ ಅಭಿನಯದ ದ್ರೋಣ ಸಿನಿಮಾದ ಕಥಾಹಂದರ ಹೋಲುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿರೊ ನಿರ್ದೇಶಕ ಸಂತೋಷ್ ಆನಂದ್‌ರಾಮ್, ಸಣ್ಣ ಬದಲಾವಣೆಯೊಂದಿಗೆ ಪುನೀತ್ ಅವರನ್ನ ಯುವರತ್ನನನ್ನಾಗಿ ತೆರೆಗೆ ತಂದಿದ್ದಾರೆ. ದ್ರೋಣದಲ್ಲಿ ಶಿವಣ್ಣ ಸರಕಾರಿ ಶಾಲೆಗಳ ಪರವಾಗಿ ಹೋರಾಟ ಮಾಡಿದ್ದರೆ, ಯುವರತ್ನದಲ್ಲಿ ಪುನೀತ್ ಸರಕಾರಿ ಕಾಲೇಜುಗಳ ಪರವಾಗಿ ಎದೆಯುಬ್ಬಿಸಿ ಕಾದಾಡಿ ಭರ್ಜರಿ‌ ಮನರಂಜನೆ‌ ನೀಡಿದ್ದಾರೆ.
ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆನ್ನುವ ಮಹದಾಸೆಯಿಂದ ಹೆಣೆದಿರುವ ಯುವರತ್ನ ಕಥೆ ಪ್ರಸ್ತುತ ದಿನಗಳಿಗೆ ಹೊಂದಿಕೊಂಡಿದೆ. ಖಾಸಗಿ ಕಾಲೇಜುಗಳ ಉದ್ದೇಶ ತಿಳಿಸುತ್ತಲೇ ಸರಕಾರಿ ಕಾಲೇಜುಗಳು ಉಳಿಯಬೇಕು ಎನ್ನುವ ಕಳಕಳಿ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಚಿತ್ರದ ಮೊದಲಾರ್ಧ ವಿದ್ಯಾರ್ಥಿ ರೂಪದಲ್ಲಿ ಎಂಟ್ರಿ ಕೊಡುವ ಪುನೀತ್ ವಿರಾಮದ ಹೊತ್ತಿಗೆ ಟಾಸ್ಕ್ ಮೇಲೆ ಕಾಲೇಜಿಗೆ ಬಂದಿರೋದಾಗಿ ಹೇಳಿ ಟ್ವಿಸ್ಟ್ ಕೊಡ್ತಾರೆ. ಸ್ಟ್ರೇಟ್ ಫಾರ್‌‌ವರ್ಡ್ ಆಗಿರೋ ಅರ್ಜುನ ಅಲಿಯಾಸ್ ಯುವರಾಜ ಬರೀ ತನ್ನ ತಂಟೆ ಅಲ್ಲ, ತನ್ನ ಕಾಲೇಜಿನ ತಂಟೆಗೆ ಬಂದ್ರೆ ಯಾರನ್ನೂ ಬಿಡಲ್ಲ. ಅಷ್ಟಕ್ಕೂ ಆ ಕಾಲೇಜಿನ ಮೇಲೆ ಯುವರಾಜನಿಗೆ ಯಾಕಷ್ಟು ಪ್ರೀತಿ? ಆ ಕಾಲೇಜಿನಲ್ಲಿ ಆತನ‌ ಕೆಲಸ ಏನು? ಕಾಲೇಜಿನ ಮೇಲೆ ಖಳರ ಕಣ್ಣೇಕೆ? ಇವುಗಳಿಗೆ ಉತ್ತರ ಗೊತ್ತಾಗಬೇಕಾದರೆ ಯುವರತ್ನ ಸಿನಿಮಾನಾ ಥೇಟರ್‌ನಲ್ಲೇ ನೋಡಬೇಕು.
ಚಿತ್ರದ ನಿಜವಾದ ಕಥೆ ತೆರೆದುಕೊಳ್ಳೋದೇ ವಿರಾಮದ‌ ನಂತರ. ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೇಣಿಗೆ ಶರಣಾಗುವ ಮೂಲಕ ಆರಂಭವಾಗುವ ಕಥೆ ಕ್ರಮೇಣ ಆಪ್ತವಾಗುತ್ತಾ ಹೋಗುತ್ತದೆ. ಜಾಗತೀಕರಣದ ಕಬಂಧಬಾಹುಗಳು, ನಮ್ಮೊಳಗೆ ಇರೋ ಉಪ್ಪಿನ ದ್ರೋಹಿಗಳ ಅನಾವರಣಗೊಳಿಸುವ ರೀತಿ ಇಷ್ಟವಾಗುತ್ತದೆ. ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾದ ನೆರಳು ಅಲ್ಲಲ್ಲಿ ಕಾಣುತ್ತದೆಯಾದರೂ ಆವರಿಸಿಲ್ಲ.
ರಾಜಕುಮಾರ್ ಚಿತ್ರದ ಬಳಿಕ ಪುನೀತ್-ಸಂತೋಷ್ ಸಿನಿಮಾ ಯುವರತ್ನ. ಸಿಕ್ಕಾಪಟ್ಟೆ ನಿರೀಕ್ಷೆ ಕ್ರಿಯೆಟ್ ಮಾಡಿದ್ದು, ನಿರೀಕ್ಷೆ ಹುಸಿಯಾಗಿಲ್ಲ. ಕಮರ್ಷಿಯಲ್ ಅಂಶಗಳ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಹೊತ್ತು ತಂದಿದ್ದಾನೆ ಯುವರತ್ನ.
ಇಡೀ ಸಿನಿಮಾ ಕಾಲೇಜಿನ ಸುತ್ತ ಗಿರಕಿ ಹೊಡೆಯುತ್ತದೆ. ಕೆಲವು ಭಾಗವಷ್ಟೇ ಬೇರೆಡೆ ಲೋಕೇಷನ್. ಕಾಲೇಜು ವಿದ್ಯಾರ್ಥಿಗಳಿಗೆ ಯುವರತ್ನ ಹಿಡಿಸುತ್ತಾನೆ. ಹಾದಿ ತಪ್ಪಿದವರನ್ನ ಸರಿ ದಾರಿಗೆ ತರುವ, ಸರಿ ದಾರಿಗೆ ಬರದವರನ್ನ ಬೆಂಡೆತ್ತುವ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅಭಿನಯದಲ್ಲಿ, ಫೈಟ್‌ನಲ್ಲಿ, ಡ್ಯಾನ್ಸ್‌ನಲ್ಲೂ ಪುನೀತ್‌ಗೆ ಫುಲ್ ಸ್ಕೋರ್. ಇಡೀ ಸಿನಿಮಾನ ಹೊತ್ತು ನಿಂತಿರೋದು ಪ್ರಕಾಶ್ ರಾಜ್, ಕಾಲೇಜಿನ ಪ್ರಿನ್ಸಿಪಾಲ್ ಪಾತ್ರ ಅವರಿಗೆ ಹೊಂದಿಕೊಂಡಿದೆ. ರಾಜಕಾರಣಿಯಾಗಿ ಸಾಯಿಕುಮಾರ್, ಬ್ಯುಜಿನೆಸ್‌ ಮ್ಯಾನ್ ಆಗಿ ಡಾಲಿ ಧನಂಜಯ್, ವೈಸ್ ಪ್ರಿನ್ಸಿಪಾಲ್ ಆಗಿ ಅವಿನಾಶ್, ಕಲೆಕ್ಟರ್ ಆಗಿ ದಿಗಂತ್ ಚನ್ನಾಗಿ ಅಭಿನಯಿಸಿದ್ದಾರೆ.
ಜಾಸ್ತಿ ಒಳ್ಳೇಯರಾಗಬೇಡ್ರೋ.. ಒಂಚೂರು ಕೆಟ್ಟವರಾಗಿ.. ನಾನು ಕೆಟ್ಟವನಾದ ಮೇಲೆ ಉದ್ಧಾರ ಆಗಿದ್ದು ಎಂಬ ಡೈಲಾಗ್ ಹೇಳೋ ಧನಂಜಯ ಪರೋಕ್ಷವಾಗಿ ಟಗರು ಸಿನಿಮಾ ನೆನೆಸುವಂಥ ಅಪ್ಡೇಟ್ ಸಂಭಾಷಣೆ, ಏನ್ ಮಾಡೋದು ನಂಗೂ ನಮ್ಮಣ್ಣನಿಗೂ ವಯಸ್ಸೇ ಆಗಲ್ಲ ಎಂಬ ಪುನೀತ್-ಶಿವಣ್ಣನ ಫಿಟ್‌ನೆಸ್ ಬಗ್ಗೆ ಹೇಳುವ ಮಾತುಗಳು ಖುಷಿ ಜೊತೆ ಚಪ್ಪಾಳೆ ಗಿಟ್ಟಿಸುತ್ತವೆ.
ತಮನ್ ಸಂಗೀತದಲ್ಲಿ ಮೂರು ಹಾಡುಗಳಿಗೆ ಗುನುಗುನಿಸುವ ಗುಣವಿದೆ. ಆದರೆ ತಮನ್ ಹೆಚ್ಚು ಇಷ್ಟ ಆಗೋದು ಹಿನ್ನೆಲೆ ಸಂಗೀತದಲ್ಲಿ. ಮೈನವಿರೇಳಿಸುವ ಚೇಜಿಂಗ್ ಸೀನ್, ಫೈಟ್ಸ್ ಅಭಿಮಾನಿಗಳಿಗೆ ಹಬ್ಬ.
ಇಡೀ ಸಿನಿಮಾ ಮುಗಿದು ಹೊರ ಬಂದ ಮೇಲೆ ಕಾಮಿಡಿ, ಸೆಂಟಿಮೆಂಟ್ ಒಂಚೂರು ಇದ್ದಿದ್ದರೆ ಚನ್ನಾಗಿತ್ತು ಅನ್ಸುತ್ತೆ. ಕಾಮಿಡಿಗೆ ಅಂತಾನೇ ರಂಗಾಯಣ ರಘು, ರವಿಶಂಕರಗೌಡ, ಸಾಧುಕೋಕಿಲ, ಕುರಿ ಪ್ರತಾಪ್‌ ಇದ್ದಾರಾದರೂ ಕಾಮಿಡಿ ವರ್ಕ್ ಆಗಿದ್ದು ಪುನೀತ್ ಅವರ ಡೈಲಾಗ್‌ಗಳಲ್ಲೇ. ನಾಯಕಿ ಸಾಯೇಶಾಗೆ ಅಷ್ಟಾಗಿ ಸ್ಕೋಪ್ ಇಲ್ಲದಿದ್ದರೂ ಬ್ಯೂಟಿಯಿಂದ ಸ್ಕೋರ್ ಮಾಡಿದ್ದಾರೆ. ಅಚ್ಯುತ್‌ಕುಮಾರ್, ಸೋನುಗೌಡ ನೆನಪಲ್ಲುಳಿಯುತ್ತಾರೆ. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರೊ ಪುನೀತ್ ಇವತ್ತಿನ ಯುಥ್ಸ್‌ಗೆ, ಪೇರೆಂಟ್ಸ್‌ಗೆ ಯುವರತ್ನದಲ್ಲಿ ಚನ್ನಾಗಿ ಪಾಠ ಮಾಡಿದ್ದಾರೆ.
ಕುಟುಂಬ ಸಮೇತ ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿಗಳು ಫ್ರೆಂಡ್ಸ್ ಜೊತೆ ಯುವರತ್ನನನ್ನ ಕಣ್ತುಂಬಿಕೊಳ್ಳಬಹುದು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ನಿರಾಣಿ ಒಂದು ಪೈಸೆ ನೀಡಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ಸಮಾಜದ ಅನೇಕ ಶಾಸಕರು ಧನಸಹಾಯ ಮಾಡಿದ್ದಾರೆ. ಆದರೆ ಸಚಿವ ಮುರುಗೇಶ್ ನಿರಾಣಿ ವಾಹನ ಸರಬರಾಜು ಹೊರತುಪಡಿಸಿದರೆ ಒಂದು ಪೈಸೆ ಸಹ ನೀಡಿಲ್ಲ ಎಂದು ಕೂಡಲಸಂಗಮದ ಬಸವ ಶ್ರೀಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾದ ತಕ್ಷಣ ಪಾದಯಾತ್ರೆ ನಿಲ್ಲಿಸುವುದಾಗಿ ನಿರಾಣಿಯವರು ಸಿಎಂಗೆ ಹೇಳಿದ್ದರಿಂದ ನಮಗೂ ಮನವಿ ಮಾಡಿದರು. ಮೀಸಲಾತಿ ಸಿಗುವವರೆಗೂ ನಮ್ಮ ಸಮಾಜದವರು ಬರೀ ಮಂತ್ರಿಯಲ್ಲ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಅವರು ವಿಧಾನಸೌಧದಲ್ಲಿ ನಮಗೆ ಮಾತು ಕೊಟ್ಟಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ಸದನದ ಒಳಗೇ ಸಮುದಾಯದ ಪರ ಹೋರಾಟ ಮಾಡಿದ್ದಾರೆ. ಮೀಸಲಾತಿಗಾಗಿ ಸಮಾಜ ಒಗ್ಗಟ್ಟಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಶ್ರೀಗಳು ನುಡಿದರು.

ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಧನ್ಯವಾದ ಅರ್ಪಿಸಲು ನಗರಕ್ಕೆ ಆಗಮಿಸಿದ್ದ ಸ್ವಾಮಿಜಿ ನಗರದ ಕುಷ್ಟಗಿ ರಸ್ತೆಯಲ್ಲಿರುವ ಪಂಚಮಸಾಲಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿಜಯಾನಂದ ಕಾಶಪ್ಪನವರ್ ಅವರನ್ನು ಕಳೆದ 2017ರಲ್ಲೇ ಅಧ್ಯಕ್ಷರಾಗಿ ಮಾಡಲಾಗಿದೆ.

ಅವರಿಗೆ ಧ್ವಜ ಹಸ್ತಾಂತರ ಮಾಡಿದ್ದೇವೆ ಅಷ್ಟೇ. ಪಾದಯಾತ್ರೆ ಲೆಕ್ಕ ಕೊಡಿ ಎಂದು ಸಚಿವ ನಿರಾಣಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮಿಜಿ ನಾವು ಯಾರು ಕೇಳಿದ್ರೂ ಲೆಕ್ಕ ಕೊಡೋದಕ್ಕೆ ಸಿದ್ಧರಿದ್ದೇವೆ. ನಮ್ಮ ಹೋರಾಟಕ್ಕೆ ಸಚಿವ ಮುರಿಗೇಶ ನಿರಾಣಿ ಒಂದೂ ಪೈಸೆ ಕೊಟ್ಟಿಲ್ಲ. ಹೋರಾಟಕ್ಕೆ ಒಂದಷ್ಟು ವಾಹನ ವ್ಯವಸ್ಥೆ ಮಾಡಿರಬಹುದಷ್ಟೇ. ಇದರ ಹೊರತಾಗಿ ಇತರೇ ಶಾಸಕರು- ಸಚಿವರಂತೆ ಹೋರಾಟಕ್ಕೆ ಹಣ ಕೊಟ್ಟಿಲ್ಲ ಈವರೆಗಂತೂ ಮುರುಗೇಶ ನಿರಾಣಿ ಹೋರಾಟದ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿಲ್ಲ ಮುಂದೆ ಸಹಾಯ ಮಾಡಬಹುದು. ಕೇಳುತ್ತೇವೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ ಯಾವ ಸಮುದಾಯದ ವಿರುದ್ಧವೂ ಮಾತನಾಡಿಲ್ಲ ಕುತಂತ್ರಿಗಳು ಎಲ್ಲ ಸಮುದಾಯದಲ್ಲಿ ಇದ್ದಾರೆ. ಆ ಕುತಂತ್ರಿಗಳ ಬಗ್ಗೆ ಮಾತನಾಡಿದರೆ ಯಾರೂ ನಮ್ಮ ಬಗ್ಗೆ ಮಾತಾಡಿದ್ರು ಅಂತಾ ತಿಳಕೋಬಾರದು ಯಾವುದೇ ಸಮುದಾಯ ನಮಗೆ ಅಂದಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳಬೇಕು ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮರ್ಥಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ, ಕಳಕನಗೌಡ, ಅಮರೇಶ ಕರಡಿ, ಸಂಗಮೇಶ ಬಾದವಾಡಗಿ , ಕರಿಯಪ್ಪ ಮೇಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಪಂ, ತಾಪಂ ಕ್ಷೇತ್ರಗಳ ಮರು ವಿಂಗಡಣೆ; ಗದಗ ಜಿಲ್ಲೆಯ ಕ್ಷೇತ್ರವಾರು ವಿವರ ಇಲ್ಲಿದೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಎಲ್ಲ ತಾಲೂಕು, ಜಿಲ್ಲಾ ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ನಂತರ ಹೊಸದಾಗಿ ರಚನೆಯಾದ ಕ್ಷೇತ್ರಗಳ ಸಂಖ್ಯೆ ಹಾಗೂ ಹೆಸರುಗಳನ್ನು ಘೋಷಿಸಿ ರಾಜ್ಯ ಚುನಾವಣಾ ಆಯೋಗ ಮಾ.24ರಂದು ಅಧಿಸೂಚನೆ ಹೊರಡಿಸಿದ್ದು, ಮಾ.30ರಂದು ಅವುಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಪ್ರದೇಶವನ್ನು ನಿಗದಿಪಡಿಸಿ ಅಧಿಕೃತವಾಗಿ ಆದೇಶಿಸಿದೆ.

ಮುಂಬರುವ ಜಿಪಂ, ತಾಪಂ ಚುನಾವಣೆ ವೇಳೆ 19 ಕ್ಷೇತ್ರಗಳ ಬದಲು ಒಟ್ಟು 24 ಜಿಲ್ಲಾ ಪಂಚಾಯತ ಕ್ಷೇತ್ರಗಳು ಆಗಲಿವೆ. ಅದರಲ್ಲಿ ಗದಗ-6, ಮುಂಡರಗಿ-4, ರೋಣ-4, ಗಜೇಂದ್ರಗಡ -2, ನರಗುಂದ-2, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ತಲಾ ಮೂರು ಕ್ಷೇತ್ರಗಳನ್ನು ಹೊಂದಿವೆ.

ಜಿಲ್ಲೆಯಲ್ಲಿರುವ ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಕತ್ತರಿ ಬಿದ್ದಿದ್ದು, ಜಿಲ್ಲೆಯಲ್ಲಿ ಒಟ್ಟು 79 ತಾಪಂ ಕ್ಷೇತ್ರಗಳಾಗಿವೆ. ಅದರಲ್ಲಿ ಗದಗ-15, ಮುಂಡರಗಿ-9, ರೋಣ, ಗಜೇಂದ್ರಗಡ, ನರಗುಂದ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಲಾ 11 ತಾಪಂ ಕ್ಷೇತ್ರಗಳನ್ನು ಹೊಂದಿವೆ.

ಜಿಪಂ ಕ್ಷೇತ್ರಗಳು

ಗದಗನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಲಕ್ಕುಂಡಿ, ಸೊರಟೂರ, ಮುಂಡರಗಿಯ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ, ರೋಣದ ಹೊಳೆಆಲೂರ, ಬೆಳವಣಿಕಿ, ಅಬ್ಬಿಗೇರಿ, ಗಜೇಂದ್ರಗಡ ತಾಲೂಕಿನ ಸೂಡಿ, ನಿಡಗುಂದಿ, ನರಗುಂದದ ಕೊಣ್ಣೂರ, ಚಿಕ್ಕನರಗುಂದ, ಶಿರಹಟ್ಟಿಯ ಮಾಗಡಿ, ಬೆಳ್ಳಟ್ಟಿ, ಇಟಗಿ(ಹೆಬ್ಬಾಳ), ಲಕ್ಷ್ಮೇಶ್ವರದ ಶಿಗ್ಲಿ ಸೂರಣಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಕೋಟುಮಚಗಿ, ಹಿರೇಹಾಳ, ಕಲಕೇರಿ, ಯಳವತ್ತಿ ಹಾಗೂ ಬಾಲೆಹೊಸೂರು ನೂತನ ಜಿಪಂ ಕ್ಷೇತ್ರಗಳಾಗಿ ಸೇರ್ಪಡೆಗೊಂಡಿವೆ.

ತಾಪಂ ಕ್ಷೇತ್ರಗಳು

ಗದಗನ ಬಳಗಾನೂರ, ಹೊಂಬಳ, ಚಿಕ್ಕಹಂದಿಗೋಳ, ಹುಯಿಲಗೋಳ, ಕೋಟುಮಚಗಿ, ಹರ್ಲಾಪೂರ, ಅಡವಿಸೋಮಾಪುರ, ಲಕ್ಕುಂಡಿ, ಅಸುಂಡಿ(ಬಿಂಕದಕಟ್ಟಿ), ಹುಲಕೋಟಿ, ಕುರ್ತಕೋಟಿ, ನಾಗಾವಿ, ಹರ್ತಿ, ಚಿಂಚಲಿ, ಸೊರಟೂರ, ಮುಂಡರಗಿಯ ಜಂತ್ಲಿ(ಕದಾಂಪೂರ), ಡೋಣಿ, ಡಂಬಳ, ಪೇಠಾಲೂರ, ಹಿರೇವಡ್ಡಟ್ಟಿ, ಬಾಗೇವಾಡಿ, ಕಲಕೇರಿ, ಕೊರ್ಲಹಳ್ಳಿ, ಹಮ್ಮಿಗಿ, ರೋಣದ ಮೆಣಸಗಿ, ಯಾವಗಲ್ಲ, ಬೆಳವಣಿಕಿ, ಹೊಳೆಆಲೂರ, ಹುಲ್ಲೂರ, ಹಿರೇಹಾಳ, ಕೊತಬಾಳ, ಇಟಗಿ, ಸವಡಿ, ಜಕ್ಕಲಿ, ಅಬ್ಬಿಗೇರಿ, ಗಜೇಂದ್ರಗಡದ ಶಾಂತಗೇರಿ, ಮುಶೀಗೇರಿ, ಲಕ್ಕಲಕಟ್ಟಿ, ಗುಳಗುಳಿ, ಸೂಡಿ, ಕುಂಟೋಜಿ, ರಾಜೂರ, ಗೋಗೇರಿ, ರಾಂಪೂರ, ನಿಡಗುಂದಿ, ಹಾಲಕೇರಿ, ನರಗುಂದದ ಕೊಣ್ಣೂರ-೧ ಮತ್ತು ೨, ಹಿರೇಕೊಪ್ಪ, ಚಿಕ್ಕನರಗುಂದ, ಕಣಕೀಕೊಪ್ಪ, ಶಿರೋಳ, ರಡ್ಡೇರ ನಾಗನೂರ, ಹದಲಿ, ಸುರಕೋಡ, ಬನಹಟ್ಟಿ, ಹುಣಶೀಕಟ್ಟಿ,

ಶಿರಹಟ್ಟಿಯ ಮಾಗಡಿ, ಛಬ್ಬಿ, ಕಡಕೋಳ, ರಣತೂರ, ಬನ್ನಿಕೊಪ್ಪ, ಬೆಳ್ಳಟ್ಟಿ, ಕೊಂಚಿಗೇರಿ, ಸೇವಾನಗರ, ಕೊಗನೂರ, ಹೆಬ್ಬಾಳ, ಇಟಗಿ, ಲಕ್ಷ್ಮೇಶ್ವರದ ಯಳವತ್ತಿ, ಮಾಡಳ್ಳಿ, ಗೊಜನೂರ, ಅಡರಕಟ್ಟಿ, ಪು.ಬಡ್ನಿ, ದೊಡ್ಡೂರ, ಶಿಗ್ಲಿ, ರಾಮಗೇರಿ, ಸೂರಣಗಿ, ಬಾಲೆಹೊಸೂರ ಹಾಗೂ ಆದರಹಳ್ಳಿ ಸೇರಿ ಜಿಲ್ಲೆಯ ,7 ತಾಲೂಕುಗಳಲ್ಲಿ ಒಟ್ಟು 79 ತಾಪಂ ಕ್ಷೇತ್ರಗಳು ರಚನೆಯಾಗಿವೆ.

ಕೊಪ್ಪಳದ ನೂತನ  ಡಿವೈಎಸ್‌ಪಿ ಗೀತಾ ಬೆನಹಾಳ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳ ಡಿವೈಎಸ್‌ಪಿಯಾಗಿ ಗೀತಾ ಬೆನಹಾಳ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಇದ್ದ ವೆಂಕಟಪ್ಪ ನಾಯಕ್ ಬಾಗಲಕೋಟೆಗೆ ವರ್ಗಾವಣೆಯಾಗಿದ್ದಾರೆ. 

ಸಿಐಡಿಯಲ್ಲಿದ್ದ ಗೀತಾ ಬೆನಹಾಳರನ್ನು ಕೊಪ್ಪಳ ಉಪವಿಭಾಗಕ್ಕೆ  ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿ  ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರದಂದು ಗೀತಾ ಅವರು ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದರು.

2021ರ ಕಾಲು ವರ್ಷ ಕಳೆದರೂ ಕಾಲು ಕೀಳದ ಕೊರೋನಾ

ಟಾಯ್ ಕ್ಲಸ್ಟರ್ಗೆ ಭೂಮಿಪೂಜೆ, ಅಂಜನಾದ್ರಿ ಅಭಿವೃದ್ಧಿಗೆ ಅನುದಾನ

ಚಿರತೆ ಕಾಟಕ್ಕೆ ಬೇಸತ್ತ ಗಂಗಾವತಿ ಭಾಗದ ಜನ, ಕನಕಗಿರಿ ಕ್ಷೇತ್ರದಲ್ಲಿ ನಿಲ್ಲದ ರಾಜಕೀಯ ಫೈಟ್

ಬಸವರಾಜ ಕರುಗಲ್
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಕೋವಿಡ್-19 ಭೀತಿಯಲ್ಲೇ 2020ಕ್ಕೆ ಮುಗಿದು ಹೋಯ್ತು. 2021ರ ಆರಂಭವಾಗುತ್ತಿದ್ದಂತೆ ಬಾಘಿಲು ಮುಚ್ಚಿದ್ದ ಶಾಲೆಗಳು ತೆರೆದವು. ಹಾಗಾಗಿ ಕೊರೋನಾತಂಕ ಮುಗಿಯಿತು ಎನ್ನುವಷ್ಟರಲ್ಲೇ ಹೊಸ ವರ್ಷದ ಕಾಲು ಭಾಗದ ಅಂತ್ಯದ ಹೊತ್ತಿಗೆ ಮತ್ತೇ ಕೊರೋನಾರ್ಭಟ ಶುರುವಾಗಿದೆ. ಈ ಕಾಲು ವರ್ಷದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಂಗತಿಗಳ ಸುತ್ತ ಒಂದು ಸುತ್ತು ಇಲ್ಲಿದೆ.

2021ರ ಜನವರಿ 1 ಆರಂಭವಾಗುತ್ತಿದ್ದಂತೆ ಹೊಸ ವರ್ಷದ ಸಂಭ್ರಮದ ಜೊತೆಗೆ ಶಾಲೆಗಳು ಪುನಾರಂಭಗೊಂಡವು. ಸುಮಾರು ತಿಂಗಳುಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂವಿನ ಹಾಸಿಗೆ ಹಾಸಿ, ಪುಷ್ಟಮಳೆ ಸುರಿದು ಶಿಕ್ಷಕರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ಜೊತೆಗೆ 2020ರ ಡಿಸೆಂಬರ್ನಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯ ಸಂಪೂರ್ಣ ಫಲಿತಾಂಶವೂ ಹೊರಬಿತ್ತು.


ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ, ದುರ್ಗಾದೇವಿ ಗುಡಿ ಸುತ್ತಮುತ್ತ ಚಿರತೆ ಕಾಟ ನಿಂತಿರಲಿಲ್ಲ. ಕಳೆದ ವರ್ಷಾಂತ್ಯಕ್ಕೆ ಪೂಜಾರಿಯನ್ನೇ ಕೊಂದಿದ್ದ ಚಿರತೆ, ಆಡು ಮೇಯಿಸಲು ತೆರಳಿದ್ದ ಯುವಕನನ್ನೂ ಸಹ ಕೊಂದಿತ್ತು. ಅರಣ್ಯ ಸಚಿವರ ಭೇಟಿಗೆ ಪಟ್ಟು ಹೆಚ್ಚಾಗಿದ್ದರಿಂದ ಸಚಿವ ಆನಂದ್ ಸಿಂಗ್ ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ವಿತರಿಸಿದ್ದರು. ಚಿರತೆ ಸೆರೆಗೆ ಗಜಪಡೆಯ ಪ್ರಯೋಗ ಮಾಡಲಾಯಿತಾದರೂ ಫಲ ನೀಡಲಿಲ್ಲ.

ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿಸಲು ಕಾಂಗ್ರೆಸ್-ಬಿಜೆಪಿ ಪೈಪೋಟಿ ನಡೆಸಿ ಗೆದ್ದವರನ್ನು ಸನ್ಮಾನಿಸಿ ಬಲ ಪ್ರದರ್ಶನ ಮಾಡಿದವು. ಈ ವೇಳೆ ಸಚಿವರ ದಂಡೇ ಕೊಪ್ಪಳದಲ್ಲಿತ್ತು. ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ಜಿದ್ದಿಗೆ ಬಿದ್ದಂತೆ ಸನ್ಮಾನ ಸಮಾರಂಭ ನಡೆಸಿತು. ಕುಕನೂರಿನ ಸಂಶೋಧಕ ಗುಲಬರ್ಗಾ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಡಾ.ಗದ್ದಗಿಮಠ ತಜ್ಞ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ.


ಧಾರವಾಡದ ಮೈಲಾರಲಿಂಗ ಸ್ವಾಮಿ ಅಂಜನಾದ್ರಿ ಬೆಟ್ಟಗಳ ಮೇಲೆ ಉರುಳು ಸೇವೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಅಂಜನಾದ್ರಿ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸುಮಾರು 50 ಕೋಟಿ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದು, ಏಪ್ರಿಲ್ 16ಕ್ಕೆ ಭೂಮಿ ಪೂಜೆ ನೆರವೇರುತ್ತಿರುವುದು ಜಿಲ್ಲೆಯ ಮಟ್ಟಿಗೆ ಸಂತಸದ ಸಂಗತಿ.

ಹಾಗೆಯೇ ಕುಕನೂರು ತಾಲೂಕಿನ ಭಾನಾಪುರ ಬಳಿ ಟಾಯ್ ಕ್ಲಸ್ಟರ್ಗೆ ಜನವರಿ 9ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದು 2022ರ ಜನೇವರಿ ವೇಳೆಗೆ ಟಾಯ್ ಕ್ಲಸ್ಟರ್ ಕಾರ್ಯಾರಂಭಗೊಳ್ಳುವ ಭರವಸೆ ನೀಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಜಯಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ನಡೆಸುತ್ತಿದ್ದ ಪಾದಯಾತ್ರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕಿನ್ನಾಳ, ಕೊಪ್ಪಳ, ಗಿಣಗೇರಾ, ಹುಲಗಿ ಮಾರ್ಗವಾಗಿ ಸಂಚರಿಸಿ ಹೊಸಪೇಟೆ ತಲುಪಿತು.


ಜನವರಿ ಎರಡನೇ ವಾರದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಮೂವರು ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಮತ್ತೇ ಹುಸಿಯಾಯಿತು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತಾದರೂ ನಿರಾಸೆಯಾಯಿತು. ಶಾಸಕ ಆಚಾರ್ ಸಹ ಬೇಸರಗೊಂಡದ್ದು ಜನಸೇವಕ್ ಸಮಾವೇಶದಲ್ಲಿ ಕಂಡು ಬಂತು.

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಜನವರಿ 30ರಂದು ಸರಳವಾಗಿ ನಡೆಯಿತು. ಈ ಸಲ ಬೆಳಗ್ಗೆ ರಥೋತ್ಸವ ನಡೆದದ್ದು ವಿಶೇಷವಾಗಿತ್ತು. ಈ ಸಲದ ಜಾತ್ರಾ ಮಹೋತ್ಸವದ ಶ್ರೀಗಳ ಸಂಕಲ್ಪದ ಅಂಗವಾಗಿ ಗಿಣಗೇರಾ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆ.21ರಂದು ಚಾಲನೆ ನೀಡಲಾಯಿತು. ಹಾಗೆಯೇ ಕುಕನೂರು ತಾಲೂಕಿನ ಕಟ್ಟಕಡೆಯ ಗ್ರಾಮ ಅಡವಿಹಳ್ಳಿಯನ್ನು ಗವಿಶ್ರೀಗಳು ದತ್ತು ಪಡೆದು ಅಭಿವೃದ್ಧಿಗೆ ಫೆ.27ರಂದು ಚಾಲನೆ ನೀಡಿದರು. 24*7 ಡಿಜಿಟಲ್ ಗ್ರಂಥಾಲಯವನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಿಟ್ನಾಳ್ ಟೋಲ್ಗೇಟ್ ಬಳಿ ಪ್ರತಿಭಟನೆ ಹಾಗೆಯೇ ಕನಕಗಿರಿ ಕ್ಷೇತ್ರದಲ್ಲಿ ಬೆಲೆ ಏರಿಕೆ ಖಂಡಿಸಿ ನಡೆಸಿದ ಕಾಂಗ್ರೆಸ್ನ ಟ್ರ್ಯಾಕ್ಟರ್ ರ್ಯಾಲಿ, ಪ್ರತಿಯಾಗಿ ಬಿಜೆಪಿ ರ್ಯಾಲಿ, ವಿಜಯೇಂದ್ರ ಆಗಮನ.. ಹೀಗೆ ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಇನ್ನೂ ಮುಂದುವರಿದಿದೆ.
ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿಟ್ಟ ಗಂಗಾವತಿಯ ನಿರ್ವಾಹಕನ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು. ಹಿಟ್ನಾಳ ಟೋಲ್ಗೇಟ್ನಲ್ಲಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಹ ಗೊಂದಲದ ಗೂಡಾಗಿತ್ತು. ಅಧಿಕಾರಿ ಮತ್ತವರ ಸ್ನೇಹಿತರೂ ಸಹ ಮೊದಲು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಪ್ರತಿಯಾಗಿ ಗ್ರಾಮಸ್ಥರು ಮನಬಂದಂತೆ ಅಧಿಕಾರಿಯನ್ನು ಥಳಿಸಿದ್ದರು. ಈ ಕುರಿತು ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಈ ನಡುವೆ ಫೆ.1ರ ಕೇಂದ್ರ ಬಜೆಟ್, ಮಾರ್ಚ್ 5ರ ರಾಜ್ಯಬಜೆಟ್ಗೆ ಜಿಲ್ಲೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾರ್ಟ್ ಸರ್ಕ್ಯೂಟ್ನಿಂದಾಗಿ ಯುವಕನೊಬ್ಬ ಮಲಗಿದ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಕುಷ್ಟಗಿ ತಾಲೂಕಿನ ಹಿರೇನಂದಿಹಾಳದ ಹಳ್ಳದಲ್ಲಿಮರಳು ಅಕ್ರಮದಿಂದಾಗಿ ಮಣ್ಣಿನ ಗುಡ್ಡ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಆತಂಕ ತಂದೊಡ್ಡಿತ್ತು.

ಫೆ.14ರಂದು ಗಂಗಾವತಿ ರೈಲು ನಿಲ್ದಾಣದಿಂದ ಗೂಡ್ಸ್ ಸೇವೆ ಆರಂಭಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹೇಶ್ ಜೋಶಿ, ರಾಜಶೇಖರ ಮುಲಾಲಿ, ಶೇಖರಗೌಡ ಮಾಲೀಪಾಟೀಲ ಪ್ರಚಾರ ನಡೆಸಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಫೆಬ್ರವರಿಯಲ್ಲಿ ಕುಷ್ಟಗಿ ತಾಲೂಕಿನ ಹಿರೇ ವಡ್ರಕಲ್ ಹಾಗೂ ಮಾರ್ಚ್ನಲ್ಲಿ ಕುಷ್ಟಗಿ ತಾಲೂಕಿನ ಬೀಳಗಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ಕೋವಿಶೀಲ್ಡ್ ಲಸಿಕೆ ಲಭ್ಯವಾಗಿದ್ದು ವರ್ಷದ ಕಾಲು ಭಾಗದೊಳಗೆ ಎಂಬುದು ವಿಶೇಷ. ಆದರೆ ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲೂ ಸಹ ಕೊರೋನಾರ್ಭಟ ಶುರುವಾಗಿದ್ದು ಜನರನ್ನು ಮತ್ತೇ ಆತಂಕದ ಕೂಪಕ್ಕೆ ತಳ್ಳಿದೆ.

ಸೆನ್ಸಾರ್ ನಲ್ಲಿ ಗೆದ್ದ ನಿನ್ನ ಸನಿಹಕೆ;
ಥಿಯೇಟರ್ ಗೆ ಲಗ್ಗೆ ಇಡಲು ತಯಾರು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನಟ ಸೂರಜ್ ಗೌಡ ಪ್ರಪ್ರಥಮ ಬಾರಿಗೆ ನಿರ್ದೇಶಿಸಿ, ನಟಿಸಿರೋ ಯೂಥ್ ಫುಲ್ ಲವ್ ಸ್ಟೋರಿ ನಿನ್ನ ಸನಿಹಕೆ. ದೊಡ್ಮನೆಯ ಕುಡಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋ ಸಿನಿಮಾ. ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರೋ ಈ ಚಿತ್ರದ ಹಾಡುಗಳು ಈಗಾಗ್ಲೇ ಕನ್ನಡ ಸಿನಿಪ್ರಿಯರ ಮನ ಸೆಳೀತಿವೆ. ಹಾಡಿನಿಂದ ಹಾಡಿಗೆ ವಿಶಿಷ್ಠವಾಗಿ ವಿನೂತನವಾಗಿ ಕೇಳುತ್ತಿರುವ, ನೋಡೋದಕ್ಕೂ ಅಷ್ಟೇ ಬ್ಯೂಟಿಫುಲ್ ಆಗಿ ಕಾಣ್ತಿವೆ.

ಪೋಸ್ಟರ್ ನಿಂದ ಸಿನಿಮಾ ಮೇಕಿಂಗ್ ಕ್ವಾಲಿಟಿಯಿಂದ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆಯನ್ನ ಭರವಸೆಯನ್ನ ಹುಟ್ಟಿಸಿರೋ ಈ ಚಿತ್ರವನ್ನ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ವೀಕ್ಷಿಸಿ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾ ಬಗ್ಗೆ ವಿಶೇಷವಾದ ಪ್ರಶಂಸೆಯನ್ನ ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರತಂಡಕ್ಕೆ ನೀಡಿದ್ದು, ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಸಿನಿಮಾ ಬಗ್ಗೆ ಟಾಕ್ ದೊಡ್ಡದಾಗಿದೆ.

ಇನ್ನು ಇತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾಟಾಕೀಸ್ ಕಾರ್ಯಕ್ರಮಕ್ಕೆ ಹೋಗಿದ್ದ ನಿನ್ನ ಸನಿಹಕೆ ಟೀಮ್ ಗೆ ದೊಡ್ಡ ಸರ್ಪೈಸ್ ಕಾದಿತ್ತು. ಸೃಜನ್ ಲೋಕೇಶ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ಧನ್ಯಾ ರಾಮ್ ಕುಮಾರ್ ಅವರಿಗೊಂದು ಸರ್ಪೈಸ್ ಗಿಫ್ಟ್ ಸಿಕ್ಕಿದೆ. ತಮ್ಮ ಅಕ್ಕನ ಮಗಳ ಬಾಲ್ಯದ ದಿನಗಳನ್ನು ಅವ್ರ ಪ್ರತಿಭೆಯ ಬಗ್ಗೆ ವಿಶೇಷವಾದ ಮಾತುಗಳನ್ನು ಆಡೋದ್ರ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧನ್ಯಾರವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಪವರ್ ಸ್ಟಾರ್ ಜೊತೆಗೆ ಡಾ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋ ಸಹೋದರಿಯ ಮಗಳ ಈ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸೋದ್ರ ಜೊತೆಗೆ ಒಂದಷ್ಟು ಸಲಹೆಗಳನ್ನು ಕೊಟ್ಟು, ಧನ್ಯಾರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಶೇಷ ಅಂದ್ರೆ ಧನ್ಯಾರ ತಂದೆ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ಮಗಳ ಬಗ್ಗೆ, ಮಗಳ ಚೊಚ್ಚಲ ಚಿತ್ರದ ಬಗ್ಗೆ ಭಾವುಕತೆಯಿಂದ, ಹೆಮ್ಮೆಯಿಂದ ಮಾತನಾಡಿದ್ದಾರೆ. ನಿನ್ನ ಸನಿಹಕೆ ಚಿತ್ರದ ಹಾಡುಗಳನ್ನು ನೋಡಿ, ಈ ಸಿನಿಮಾ ತುಂಬಾ ದೊಡ್ಡ ಯಶಸ್ಸು ಕಾಣುವ ಲಕ್ಷಣಗಳು ಕಾಣಿಸ್ತಿವೆಯೆಂದು ಹೇಳುತ್ತಾ.. ಮುದ್ದಿನ ಮಗಳ ಚಿತ್ರರಂಗ ಪ್ರವೇಶವನ್ನು ಸಂತಸದಿಂದ ಸ್ವಾಗತಿಸಿದ್ದಾರೆ.

ಏಪ್ರಿಲ್ 16ಕ್ಕೆ ತೆರೆಗೆ ಬರ್ತಿದೆ ನಿನ್ನ ಸನಿಹಕೆ.

ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿರೋ ಈ ಯೂಥ್ ಫುಲ್ ಎಂಟ್ರಟೈನರ್ ನಿನ್ನ ಸನಿಹಕೆ ಇದೇ ಏಪ್ರಿಲ್ 16ಕ್ಕೆ ವಿಶ್ವದಾದ್ಯಂತ ಕನ್ನಡದಲ್ಲಿ ಮಾತ್ರವೇ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಸದ್ಯದಲ್ಲೇ ಟ್ರೈಲರ್ ಲಾಂಚ್ ಮಾಡೋ ಯೋಜನೆಯಲ್ಲಿರೋ ಚಿತ್ರತಂಡ ಈ ಮೂಲಕ ಪ್ರಚಾರದ ಕೆಲಸಗಳನ್ನು ಶುರುಮಾಡಿದೆ.

error: Content is protected !!