Home Blog Page 3131

ಡಿಕೆಶಿ ಸಿದ್ರಾಮಯ್ಯ ಜೋಡೆತ್ತಲ್ಲ, ಬಯಲಿನಲ್ಲಿ ಹೊಡೆದಾಡಲು ಬಿಟ್ಟ ಹೋರಿಗಳು; ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ

‘ಒಂದು ದೇಶ ಒಂದು ಚುನಾವಣೆ’ ಎನ್ನುವುದು ದೇಶದ ಆಡಳಿತ ಹಾಗೂ ಅರ್ಥಿಕ ದೃಷ್ಟಿಯಿಂದ ಒಳ್ಳೆಯದ್ದು. ಇಂತಹದರ ಕುರಿತು ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸುವುದನ್ನು ಬಿಟ್ಟು ಸಾಧಕ ಬಾಧಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ರವಿವಾರ ತಮ್ಮ ನಿವಾಸದಲ್ಲಿ ‌ಮಾಧ್ಯಮದವರೊಂದಿಗೆ ಮಾತನಾಡಿ, ಸದನದಲ್ಲಿ ಚರ್ಚಿಸಲು ಸ್ಪೀಕರ್ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಆದರೆ, ಚರ್ಚೆ ಮಾಡದೇ ಪ್ರತಿಭಟಿಸುತ್ತಿದ್ದಾರೆ. ಚರ್ಚೆ ಅಂದರೆ ಓಡಿ ಹೋಗುವವರು
ಸದನ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

‘ಒಂದು ದೇಶ ಒಂದು ಚುನಾವಣೆ’ ಇವತ್ತಿನ ಕಾನೂನಲ್ಲ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೂ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಲಾ ಕಮಿಷನ್ ಕೂಡಾ ಉಲ್ಲೇಖಿಸಿ 2018 ರಲ್ಲಿ ಡ್ರಾಪ್ ರಿಪೋರ್ಟ್ ಸಲ್ಲಿಸಿದೆ ಎಂದು ತಿಳಿಸಿದ ಅವರು,
ಗ್ರಾಮ ಪಂಚಾಯತಿಯಿಂದ ಸಂಸತ್ ವರೆಗೂ ಒಂದೇ ಚುನಾವಣೆ ಮಾಡಿದರೆ ಅದು ಆರ್ ಎಸ್ ಎಸ್ ಅಜೆಂಡಾ ಹೇಗಾಗುತ್ತೆ? ಎಂದರು.

ದೇಶದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತದೆಯೋ, ಎಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಇದೆಯೋ ಅಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಂಗ್ರೆಸ್ ತನ್ನ ಹಳೆಯ ಚಾಳಿ ಮುಂದುವರೆಸಿದೆ. ದೇಶದಲ್ಲಿ ಕಾಂಗ್ರೆಸ್ ಹೀನಾಯ ಪರಸ್ಥಿತಿಗೆ ತಲುಪಿದೆ. ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಆದರೆ ಹಳೆ ಚಾಳಿ ಮುಂದುವರಿಸಿದರೆ ಜನರು ನಂಬುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಜಿ ಸಿಎಂ ಸಿದ್ರಾಮಯ್ಯ ಜೋಡೆತ್ತು ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರು ಜೋಡೆತ್ತಲ್ಲ ಬಯಲಿನಲ್ಲಿ ಹೊಡೆದಾಡಲು ಬಿಟ್ಟಿರುವ ಹೋರಿಗಳು. ಇವನ್ನು ಎದುರಿಸುವ ಶಕ್ತಿ ಬಿಜೆಪಿಗಿದೆ ಎಂದು ಕಾಂಗ್ರೆಸ್ ನಾಯಕರಿಬ್ಬರಿಗೂ ಸಚಿವರು
ತಿರುಗೇಟು ನೀಡಿದರು.

ಸಿಎಂ ಯಡಿಯೂರಪ್ಪ ಅವರು ೮ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಾಳೆಯ ಬಜೆಟ್ ಕೈಗಾರಿಕೆ, ಕೃಷಿ, ಆರೋಗ್ಯ, ಐಟಿಬಿಟಿ ಹಾಗೂ ಶಿಕ್ಷಣ ವಲಯಗಳಿಗೆ ಹೆಚ್ಚಿನ ಆದ್ಯತೆ ಇರಲಿದೆ. ಕೊರೊನಾ ಬಳಿಕ ಮಂಡಿಸುತ್ತಿರುವ ಆಯವ್ಯಯದ ಮೇಲೆ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೇ, ನಾಳೆಯ ಬಜೆಟ್ ನಲ್ಲಿ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ಯುವಕರಿಗೆ ಪೂರಕ ಬಜೆಟ್ ಮಂಡಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಹಣ ಕೇಳಿದ್ದಕ್ಕೆ ರೈತನ ಮೇಲೆ ಮಚ್ಚಿನಿಂದ ಹಲ್ಲೆಗೈದ ದಲಾಲಿ ಅಂಗಡಿ ಮಾಲೀಕರು

ವಿಜಯಸಾಕ್ಷಿ ಸುದ್ದಿ, ಗದಗ

ಸುಮಾರು ವರ್ಷಗಳಿಂದ ಮಾರಾಟ ಮಾಡಿದ್ದ ಕೃಷಿ ಹುಟ್ಟುವಳಿಯ ಹಣವನ್ನು ಕೊಡು ಎಂದು ಕೇಳಲು ಹೋದ ರೈತನ ಮೇಲೆ ದಲಾಲಿ ಅಂಗಡಿಯ ಮಾಲೀಕರು ಮಚ್ಚಿನಿಂದ ಹಲ್ಲೆ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ.

ಗಜೇಂದ್ರಗಡ ಮೂಲದ ಚನ್ನಬಸಪ್ಪ ಶಿವಪ್ಪ ವಾಲಿ ಹಾಗೂ ಮಂಜು ಚನ್ನಬಸಪ್ಪ ವಾಲಿ ಎಂಬುವವರೇ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ. ಹಲ್ಲೆ ನಡೆಸಿದ್ದರ ಪರಿಣಾಮವಾಗಿ ರೈತ ಯಂಕಪ್ಪ ನಿಂಗಪ್ಪ ಸೊನ್ನದ ಅವರ ಎಡಗಾಲಿನ ಮೂಳೆ ಮೂರಿದಿದೆ.

ಗಂಜಿಪೇಟೆ ನಿವಾಸಿ ಯಂಕಪ್ಪ ನಿಂಗಪ್ಪ ಸೊನ್ನದ ಎಂಬುವವರು ಪಟ್ಟಣದ ಶಿವಪ್ಪ ಸಂಗಪ್ಪ ವಾಲಿನಾಮೆಯ ಎಂಬ ದಲಾಲಿ ಅಂಗಡಿಯಲ್ಲಿ ತಮ್ಮ ಅಣ್ಣಂದಿರ ಹೊಲದಲ್ಲಿ ಬೆಳೆದ ಕೃಷಿ ಹುಟ್ಟುವಳಿಯನ್ನು (ಬೆಳೆ) ಹಲವು ವರ್ಷಗಳಿಂದ ಮಾರಾಟ ಮಾಡಿದ್ದು, ಸುಮಾರು 8 ಲಕ್ಷ ರೂ. ಬಿಲ್ ಆಗಿದೆ.

ಕೃಷಿ ಹುಟ್ಟುವಳಿ ಮಾರಿದ ರೈತ ರೈತ ಯಂಕಪ್ಪ ಹಣ ಕೊಡು ಎಂದು ಕೇಳಿದಾಗ ಇಂದು ನಾಳೆ ಕೊಡುವುದಾಗಿ ಆರೋಪಿಗಳಿಬ್ಬರೂ ಹೇಳುತ್ತಾ ದಿನಗಳನ್ನು ದೂಡುತ್ತಾ ಬಂದಿದ್ದಾರೆ. ಮಾ.2 ರಂದು ಯಂಕಪ್ಪ ಪುನಃ ಹಣ ಕೇಳಲು ಹೋದಾಗ ಮಾ.3ರಂದು ಬ್ಯಾಂಕ್ ಅವಧಿ ಮುಗಿದ ಮೇಲೆ ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ. ಆದರೆ, ಆರೋಪಿತರು ಕೊಟ್ಟ ಮಾತಿಗೆ ತಪ್ಪಿದ್ದು, ಮಾ.3 ರಂದು ಇನ್ನೂ ಆರು ತಿಂಗಳು ಕಾಲಾವಕಾಶ ಕೊಡಿ. ಸದ್ಯ ನಮ್ಮಿಂದ ನಿಮಗೆ ಹಣ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡದ ರೈತ ಯಂಕಪ್ಪ ಹಣ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಆರೋಪಿಗಳಾದ ಚನ್ನಬಸಪ್ಪ ಹಾಗೂ ಮಂಜು ಎಂಬ ಆರೋಪಿಗಳು ರೈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ,ಮಚ್ಚಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

ಕೃಷಿ ಹುಟ್ಟುವಳಿ ಮಾರಾಟ ಮಾಡಿದ ಹಣ ಕೊಡುವ ವಿಷಯದಲ್ಲಿ ವಂಚಿಸಿರುವ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

13 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅದಲು ಬದಲು; ಪ್ರಾಮಾಣಿಕತೆ ಮೆರೆದ
ಸಹ ಪ್ರಯಾಣಿಕ

ವಿಜಯಸಾಕ್ಷಿ ಸುದ್ದಿ, ಗದಗ

ಸುಮಾರು 32 ತೊಲೆಯ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಸಹ ಪ್ರಯಾಣಿಕರೊಬ್ಬರು ತೆಗೆದುಕೊಂಡು ಕೆಳಗಿದು ಪುನಃ ರೈಲ್ವೆ ಪೊಲೀಸರ ಮೂಲಕ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಅಪರೂಪದ ಘಟನೆ ಶನಿವಾರ ಗದಗ ರೈಲು ನಿಲ್ದಾಣದಲ್ಲಿ ನಡೆಯಿತು.

ವಿಜಯಪುರ ಪಟ್ಟಣದ ಆದರ್ಶ ನಗರದ ನಿವಾಸಿ ಬ್ಯಾಗ್ ವಾರಸುದಾರರಾದ ಚನ್ನಬಸಪ್ಪ ಶಿವಪ್ಪ ಇಂಡಿ ಅವರಿಗೆ ಸುಮಾರು 13 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಸ್ತಾಂತರಿಸಲಾಯಿತು.

ಚನ್ನಬಸಪ್ಪ ಹಾಗೂ ಅವರ ಧರ್ಮಪತ್ನಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಗದಗ-ಮುಂಬೈ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ಅಷ್ಟೊಂದು ಚಿನ್ನಾಭರಣವನ್ನು ಮನೆಯಲ್ಲಿ ಇಟ್ಟು ಊರಿಗೆ ಹೋಗುವುದು ಸರಿಯಲ್ಲವೆಂದು ಬ್ಯಾಗ್ ನಲ್ಲಿ ಹಾಕಿಕೊಂಡು ಬಂದಿದ್ದರು. ಈ ವೇಳೆ ಗದಗ ರೈಲು ನಿಲ್ದಾಣದಲ್ಲಿ ಬ್ಯಾಗ್ ಬದಲಾಗಿದೆ.

ಅದೇ ರೈಲು ಮೂಲಕ ಗದಗ ನಗರದ ಮೆಹಬೂಬ್ ಸಾಬ ಕರ್ನಾಚಿ ಹಾಗೂ ಅವರ ಕುಟುಂಬದವರು ಮಧ್ಯಾಹ್ನ ಗದಗ ರೈಲು ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದರು. ರೈಲು ಹತ್ತಿದ ಬಳಿಕ ಮೆಹಬೂಬ್ ಸಾಬ ಅವರು ಟಿಕೆಟ್ ಪರಿಶೀಲಿಸಿದ್ದಾರೆ. ಈ ವೇಳೆ ರೈಲು ಟಿಕೆಟ್ ನಲ್ಲಿ ಮೂರನೇ ತಿಂಗಳು ನಮುದಿಸುವ ಬದಲು ಆರನೇ ತಿಂಗಳೆಂದು ನಮೂದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ತಿದ ರೈಲಿನಿಂದ ಕೆಳಗಿಳಿದು ಬಂದು ರೈಲು ಟಿಕೆಟ್ ಕೌಂಟರ್ ನಲ್ಲಿ ವಿಚಾರಿಸಿದ್ದಾನೆ. ತಿಂಗಳು ತಪ್ಪಾಗಿ ನಮೂದಾಗಿರುವುದರಿಂದ ತನ್ನೊಡನೆ ಮುಂಬೈಗೆ ಪ್ರಯಾಣಿಸುತ್ತಿದ್ದ ಕುಟುಂಬಸ್ಥರನ್ನು ಕೆಳಗಿಳಿಯುವಂತೆ ಹೇಳಿದ್ದಾನೆ. ಈ ವೇಳೆ ಮೆಹಬೂಬ್ ಅವರ ಮಗನೊಬ್ಬ ತಮ್ಮ ಬ್ಯಾಗೆಂದು ತಿಳಿದು ಬೇರೆಯವರ ಬ್ಯಾಗ್ ನ್ನು ತೆಗೆದುಕೊಂಡು ರೈಲು ಇಳಿದಿದ್ದಾನೆ.

ಮಗನ ಕೈಯಲ್ಲಿದ್ದ ಬ್ಯಾಗನ್ನು ಗಮನಿಸಿದ ಮೆಹಬೂಬ್ ಇದು ನಮ್ಮ ಬ್ಯಾಗ್ ಅಲ್ಲ ಅಲ್ವಾ. ಇದನ್ನ್ಯಾಕೆ ತಂದಿದ್ದೀಯಾ ಎಂದು ಪ್ರಶ್ನಿಸಿ ಬ್ಯಾಗ್ ತಗೆದು ನೋಡಿದಾಗ ಅದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣವಿರುವುದನ್ನು ನೋಡಿ ರೈಲ್ವೆ ಪೊಲೀಸರಿಗೆ ತಿಳಿಸಿ, ನಡೆದ ಘಟನೆಯನ್ನು ವಿವರಿಸಿದ್ದಾರೆ.
ಆದರೆ, ಅಷ್ಟೊತ್ತಿಗಾಗಲೇ ರೈಲು ಕೂಡಾ ಹೊರಟು ಹೋಗಿತ್ತು.

ವಿಷಯ ತಿಳಿದು ಸಿಪಿಐ ಡಿ.ಬಿ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಎಎಸ್ ಐ ಪರಶರಾಮ ಹಲಗಿ ಅವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾಗ್ ನ ವಾರಸುದಾರರನ್ನು ಪತ್ತೆ ಹಚ್ಚಿ ಚಿನ್ನಾಭರಣವನ್ನು ಹಸ್ತಾಂತರಿಸಿದರು. ಇನ್ನು ಪ್ರಾಮಾಣಿಕತೆ ಮರೆದ ಸಹ ಪ್ರಯಾಣಿಕ ಮೆಹಬೂಬ್ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪರುಶರಾಮ ಕೆ., ಅನಿಲ್ ಗೌಡ ಮೂಲಿಮನಿ, ಈರಪ್ಪ ತಳವಾರ, ಸಿದ್ದಪ್ಪ ನಾವಳ್ಳಿ, ಶಿವರಡ್ಡಿ ಮೊರಬ್, ಅನ್ವರ್ ಬಾಷಾ, ವೆಂಕಟೇಶ ಕಡಕೋಳ, ಪರಶುರಾಮ ಹಳ್ಳಿಕೇರಿ, ಹರ್ಷಾ ಹಳ್ಳಿ, ಶಿವಾನಂದ ಹಿರೇಮಠ ಇನ್ನಿತರರು ಇದ್ದರು.

ಕಪ್ಪತಗುಡ್ಡದ ಬೆಂಕಿ ಹಿಂದೆ ಗಣಿಗಾರಿಕೆ ಹುನ್ನಾರ? ಸ್ಥಳೀಯರಿಗೆ ಆಮಿಷವೊಡ್ಡಿ ಬೆಂಕಿ..!

*ಗದಗ ತೋಂಟದ ಡಾ| ಸಿದ್ಧರಾಮ ಸ್ವಾಮೀಜಿ ಕಳವಳ
*ಗಣಿಗಾರಿಕೆಗೆ ಪ್ರಸ್ತಾವನೆ ಇಲ್ಲ: ಅನಂತ ಹೆಗಡೆ ಆಶೀಸರ್

ವಿಜಯಸಾಕ್ಷಿ ಸುದ್ದಿ, ಗದಗ:
ನಾಲ್ಕೈದು ದಿನಗಳ ಹಿಂದೆ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿತ್ತು. ಸದ್ಯ ಬೆಂಕಿಯ ಘಟನೆಯ ಹಿಂದೆ ಗಣಿ ಕುಳಗಳ ಕೈವಾಡವಿದೆಯೇ ಎಂಬ ಅನುಮಾನ ದಟ್ಟವಾಗಿದ್ದು, ಜಿಲ್ಲೆಯ ವನ್ಯಜೀವಿ ಧಾಮ ಇದೀಗ ಅಳವಿನ ಅಂಚಿಗೆ ಬಂದು ನಿಂತಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಗುರುವಾರ (ಮಾ.೪) ಜಿಲ್ಲೆಯಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ್ ಪ್ರವಾಸ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ತೋಂಟದ ಸಿದ್ಧರಾಮ ಶ್ರೀಗಳೊಂದಿಗೆ ಕಪ್ಪತಗುಡ್ಡ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

ಈ ವೇಳೆ ಕಪ್ಪತಗುಡ್ಡಕ್ಕೆ ಪದೇ ಪದೇ ಬೆಂಕಿ ಬೀಳುತ್ತಿರುವ ಕುರಿತು ಸಿದ್ಧರಾಮ ಶ್ರೀಗಳು ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಿದೆ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲಿ ಕಪ್ಪತಗುಡಕ್ಕೆ ಭಾರೀ ಪ್ರಮಾಣದಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಒಂದು ವಾರದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ.

ಈ ಬೆಂಕಿ ಹಚ್ಚುವ ಕೆಲಸದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಅನುಮಾನವಿದೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎನ್ನುವ ಮನೋಭಾವನೆಯಿಂದ, ಸ್ಥಳೀಯರಿಗೆ ಆಸೆ ಆಮಿಷಗಳನ್ನು ಒಡ್ಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಸಂಶಯ ವ್ಯಕ್ತಪಡಿಸಿದ್ದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ಮಾತನಾಡಿ, ಕಪ್ಪತ್ತಗುಡ್ಡಕ್ಕೆ ಕಂಟಕ ಬಂದಾಗಲೆಲ್ಲ ತೋಂಟದಾರ್ಯ ಶ್ರೀಗಳು ನಿರಂತರವಾಗಿ ಹೋರಾಟ ಮಾಡಿದ್ದಾರೆ. ಇದೀಗ ಪುನಃ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕೆಂಬ ಹುನ್ನಾರ ನಡೆಯುತ್ತಿದೆ. ಹೀಗಾಗಿ ಜನಶಕ್ತಿ ಒಂದಾಗಿ ಸಸ್ಯ ಸಂಪತ್ತು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎರಡೆರಡು ಕಡೆ ಬೆಂಕಿ

ಮುಂಡರಗಿ ತಾಲೂಕಿನ ಕಪ್ಪತಗುಡ್ಡದ ವ್ಯಾಪ್ತಿಯ ಡೋಣಿ ಗ್ರಾಮದ ಬಳಿ ಕಳೆದ ರವಿವಾರ (ಫೆ.೨೮) ಬೆಂಕಿ ಕಾಣಿಸಿಕೊಂಡಿತ್ತು. ಫೆ. ೨೭ರಂದು ಬಾಗೇವಾಡಿ, ಕೆಲೂರು ಬಳಿಯ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು ೫೦ ಹೆಕ್ಟೆರ್ ಪ್ರದೇಶದಷ್ಟು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿತ್ತು.

ಭಗವಂತ ಸದ್ಭುದ್ಧಿ ಕೊಡಲಿ…

ಜನರ ಹಿತವನ್ನು ಕಾಪಾಡಬೇಕಾದವರೇ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎಂದು ಯೋಜನೆ ರೂಪಿಸುತ್ತಿರುವುದು ಖಂಡನೀಯ. ಹೀಗಾಗಿ ಭಗವಂತನೇ ಜನಪ್ರತಿನಿಧಿಗಳಿಗೆ ಒಳ್ಳೆಯ ಸದ್ಭುದ್ಧಿ ಕೊಡಬೇಕು ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ತೋಂಟದ ಸಿದ್ಧರಾಮ ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುವ ಕುರಿತು ನಮ್ಮಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ, ಕಪ್ಪತ್ತಗುಡ್ಡಕ್ಕೆ ಯಾರು ಬೆಂಕಿ ಹಚ್ಚುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ.

ಅನಂತ ಹೆಗಡೆ ಆಶೀಸರ್, ಅಧ್ಯಕ್ಷರು, ರಾಜ್ಯ ಜೀವ ವೈವಿಧ್ಯ ಮಂಡಳಿ ಬೆಂಗಳೂರು

ವಾಣಿಜ್ಯನಗರಿಯಲ್ಲಿ ಹಾಡುಹಗಲೇ ಚಾಕು ಇರಿತ; ಗಾಯಾಳು ಕಿಮ್ಸ್ ಗೆ ದಾಖಲು

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಾಡುಹಗಲೇ ಚಾಕು ಹಾಕಿರುವ ಘಟನೆ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ಗ್ರಾಮದ ಬಷೀರ್ ಅಹ್ಮದ ಹಂಚಿನಮನಿ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಈತ ಹಳೇ ಬಸ್ ನಿಲ್ದಾಣದ ಬಳಿ ಎಳೆನೀರು ಮಾರಾಟ ಮಾಡುತ್ತಿದ್ದ.

ಆದ್ರೆ ಇಂದು ಮಧ್ಯಾಹ್ನ ಎಳನೀರು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಬಂದು ದುಷ್ಕರ್ಮಿಗಳು ಎದೆಯ ಕೆಳಭಾಗದಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾರು, ಯಾಕೆ ಚಾಕು ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಹಳೇ ವೈಷಮ್ಯದಿಂದ ಚಾಕು ಹಾಕಿರಬೇಕು ಎನ್ನಲಾಗುತ್ತಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಶಾಸಕ ಶರ್ಟ್ ಬಿಚ್ಚಿದ್ದು ಸರಿಯಲ್ಲ, ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು; ಹೊರಟ್ಟಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸದನದಲ್ಲಿ ಭದ್ರಾವತಿ ಶಾಸಕ ಶರ್ಟ್ ಬಿಚ್ಚಿದ ಪ್ರಕರಣ ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ.
ಶಾಸಕರ ಸ್ಥಾನದಲ್ಲಿದ್ದವರು ಘನತೆಯಿಂದ ಇರಬೇಕು
ಸದನದ ಗೌರವ ಉಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಕೋವಿಶಿಲ್ಡ್ ವ್ಯಾಕ್ಸಿನ್ ಪಡೆದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನಪ್ರತಿನಿಧಿಗಳಾದವರು ಕೆಲವು ವಿಷಯದಲ್ಲಿ ಸಮಾಧಾನದಿಂದ ವರ್ತಿಸಬೇಕು. ಸಭಾಪತಿ ಅಥವಾ ಸ್ಪೀಕರ್ ಗೆ ಹೋಗಿ ಮನವಿ ಮಾಡಬೇಕು. ಅದನ್ನು ಹೊರತುಪಡಿಸಿ ಈ ರೀತಿ ಮಾಡುವುದು ಸರಿ ಅನಿಸಲ್ಲ ಎಂದರು.

ಸಿಡಿ ಪ್ರಕರಣ ಹಿನ್ನೆಲೆ 6 ಸಚಿವರಿಂದ ಮತ್ತೆ ಕೋರ್ಟ್ ನಲ್ಲಿ ಸ್ಟೇ ತಂದ ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ಇರಬೇಕು. ಪರಿಷತ್ ಕಲಾಪದಲ್ಲಿ ಮಾಧ್ಯಮವನ್ನು ಬ್ಯಾನ್ ಮಾಡಿ ಎಂದರು. ಆದರೆ ನಾನು ಮಾತ್ರ ಬ್ಯಾನ್ ಮಾಡಿಲ್ಲ. ಮಾಧ್ಯಮದವರು ಎಷ್ಟು ಜನ ಇರುತ್ತಾರೋ ನಮಗೆ ಒಳ್ಳೆಯದು ಎಂದು ಅವರು ಹೇಳಿದರು.

ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರು ನೀಡಿರುವ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸಬೇಕು ಎಂದು ಅವರು ಸಲಹೆ ನೀಡಿದರು.

ಸಿಡಿ ಪ್ರಕರಣ ಕೂಲಂಕಷ ತನಿಖೆ ಮಾಡಲಿ; ಗುರುನಾಥ ಉಳ್ಳಿಕಾಶಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಅವರದು ಎನ್ನಲಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಒಂದು ಪ್ರಕರಣ ಹನಿಟ್ರ್ಯಾಫ್ ಪ್ರಕರಣವೋ, ಲೈಂಗಿಕ ಕಿರುಕುಳವೋ, ಬ್ಲಾಕ್ ಮೇಲ್ ಅಥವಾ ನೌಕರಿ ಕೊಡಿಸುವುದಾಗಿ ಮಾಡಿರುವುದೋ ಅನ್ನೋದನ್ನು ಸರ್ಕಾರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡೆಸಬೇಕಿದೆ ಎಂದು ಸಮತಾ ಸೇನೆಯ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.

ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯನ್ನು ಸಂತ್ರಸ್ತೆ ಎಂದು ಹೇಳಲಾಗುತ್ತಿದೆ. ಆದರೇ ಇದುವರೆಗೂ ಯಾರು ಆ ಸಂತ್ರಸ್ತೆ ಎಂದು ಗೊತ್ತಾಗುತ್ತಿಲ್ಲ. ಸಂತ್ರಸ್ತೆ ಇದುವರೆಗೂ ಹೊರಗೆ ಬಂದಿಲ್ಲ ಎಂದರು.

ಇನ್ನೂ ಯಾರು ಆ ಸಿಡಿಯನ್ನು ಬಿಡುಗಡೆ ಮಾಡಿದ್ದಾರೋ ಆ ವ್ಯಕ್ತಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಮೊದಲ ದಿನ ಸಂತ್ರಸ್ತೆಯ ಕುಟುಂಬದವರು ನನಗೆ ಸಿಡಿ ನೀಡಿದ್ದಾರೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹಿತರೊಬ್ಬರು ನೀಡಿದ್ದಾರೆ ಆ ಮಹಿಳೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂಬುವಂತ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಇದರಲ್ಲಿ ಹನಿಟ್ರ್ಯಾಫ್ ಆಗಿದೆಯೋ, ಲೈಂಗಿಕ ದೌರ್ಜನ್ಯವೋ ಅಥವಾ ಬ್ಲಾಕ್ ಮೇಲ್ ಮಾಡಲಾಗಿದೆಯೋ ಎಂಬುವುದನ್ನು ಸರ್ಕಾರ ತನಿಖೆ ನಂತರ ಬಹಿರಂಗ ಪಡೆಸಬೇಕು ಎಂದು ಸಮತಾ ಸೇನಾ ಸಂಘಟನೆ ಒತ್ತಾಯಿಸುತ್ತಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಹುದ್ದೆ ಖಾಲಿ… ಖಾಲಿ!
ಗದಗ ಜಿಲ್ಲೆಯ ಮುನ್ಸಿಪಾಲಿಟಿಗಳಲ್ಲಿ 437 ಹುದ್ದೆಗಳು ಖಾಲಿ

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಗದಗ:
ರಾಜ್ಯದ ಬಹುತೇಕ ಸರಕಾರಿ ಕಚೇರಿಗಳಲ್ಲಿ ನೌಕರರ ಕೊರತೆ ಸಾಮಾನ್ಯ. ಆದರೆ ಪಟ್ಟಣ, ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದ್ದು, ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎ ವೃಂದ ಹೊರತುಪಡಿಸಿ ಬಿ, ಸಿ ಹಾಗೂ ಡಿ ವೃಂದದ ನೌಕರರ ಕೊರತೆ ಇದೆ.

ಗದಗ-ಬೆಟಗೇರಿ ನಗರಸಭೆ, ಐದು ಪುರಸಭೆಗಳು, ಮೂರು ಪಟ್ಟಣ ಪಂಚಾಯತಿ ಸಹಿತ ಒಟ್ಟು 9 ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 1275 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 838 ಜನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂಬತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 457 ಜನ ಖಾಯಂ ನೌಕರರಿದ್ದು, ಒಟ್ಟು 525 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

199 ಹುದ್ದೆ ಖಾಲಿ

ಗದಗ-ಬೆಟಗೇರಿ ನಗರಸಭೆ ಒಂದರಲ್ಲೇ ಸಿ ಮತ್ತು ಡಿ ವೃಂದದಲ್ಲಿ ಒಟ್ಟು 199 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಸೀನಿಯರ್ ಪ್ರೋಗ್ರಾಮರ್-1, ಸಹಾಯಕ ಅಭಿಯಂತರರು-1, ಕಂದಾಯ ಅಧಿಕಾರಿ-1, ಅಕೌಂಟಂಟ್-1, ಕಿರಿಯ ಅಭಿಯಂತರರು-1, ಹಿರಿಯ ಆರೋಗ್ಯ ನಿರೀಕ್ಷಕರು-1, ಸ್ಟೆನೋಗ್ರಾಫರ್-2, ಪ್ರಥಮ ದರ್ಜೆ ಸಹಾಯಕ ಕಂದಾಯ ನಿರೀಕ್ಷಕರು-2, ಸಮುದಾಯ ಸಂಘಟಕರು-2, ವಾಟರ್ ಸಪ್ಲಾಯ್ ಆಪರೇಟರ್-16, ಡಾಟಾ ಎಂಟ್ರಿ ಆಪರೇಟರ್-4, ಕಿರಿಯ ಆರೋಗ್ಯ ನಿರೀಕ್ಷಕರು-3, ದ್ವಿತಿಯ ದರ್ಜೆ ಸಹಾಯಕರು-3, ಕ.ವ.ಸಹಾಯಕ-1, ವಾಹನ ಚಾಲಕರು-8, ಇಲೆಕ್ಟ್ರೀಶಿಯನ್ ಗ್ರೇಡ್-2 -1, ಲ್ಯಾಬ್ ಟೆಕ್ನಿಷಿಯನ್-1, ಪ್ಲಂಬರ್-1, ಸ್ಯಾನಿಟರಿ ಸುಫರವೈಸರ್-3 ಹಾಗೂ ಪೌರಕಾರ್ಮಿಕರು-126 ಹುದ್ದೆಗಳು ಖಾಲಿ ಇವೆ.

ಅದರಂತೆ ಗಜೇಂದ್ರಗಡ-36, ಲಕ್ಷ್ಮೇಶ್ವರ-52, ಮುಂಡರಗಿ-26, ನರಗುಂದ-39, ರೋಣ ಪುರಸಭೆಯಲ್ಲಿ-46 ಹಾಗೂ ಮುಳಗುಂದ-9, ನರೇಗಲ್-17 ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತಿಗಳಲ್ಲಿ 21 ಹುದ್ದೆಗಳು ಖಾಲಿ ಇವೆ.

ಗದಗ-ಬೆಟಗೇರಿ ನಗರಸಭೆ ಗ್ರೇಡ್-1 ಸಂಸ್ಥೆಯಾಗಿದೆ. ಇಲ್ಲಿ ಇಬ್ಬರಾದರೂ ಕಂದಾಯ ನಿರೀಕ್ಷಕರ ಆವಶ್ಯಕತೆ ಇದೆ. ಆದರೆ, ಒಬ್ಬನೇ ಒಬ್ಬ ಕಂದಾಯ ನಿರೀಕ್ಷಕರಿಲ್ಲ. ಮೂವರು ಎಂಜಿನಿಯರ್ ಬೇಕಾದಲ್ಲಿ, ಕೇವಲ ಒಬ್ಬರು ಎಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರೇಡ್-1 ಸಂಸ್ಥೆಯದ್ದೇ ಈ ಗತಿಯಾದರೆ, ಇನ್ನುಳಿದ ಸಂಸ್ಥೆಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಸಿಬ್ಬಂದಿ ಕೊರತೆ

ಇನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಜೊತೆಗೆ ಕಚೇರಿ ಸಿಬ್ಬಂದಿ ಕೊರತೆಯೂ ಕಾಡುತಿದ್ದು, ಇದ್ದಿದ್ದರಲ್ಲೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನನುಕೂಲಗಳು ಆಗುತ್ತಿವೆ. ನೌಕರರ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗದೇ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿನ ಸಿಬ್ಬಂದಿ ಕೊರತೆಯ ಕುರಿತು ಪ್ರತಿ ತಿಂಗಳು ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಹೀಗಾಗಿ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ.

ರಮೇಶ್ ಜಾಧವ್, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ

ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ನಮ್ಮಿಂದ ಸಾದ್ಯವಾದಷ್ಟು ಸಾರ್ವಜನಿಕರಿಗೆ ಕೆಲಸ ಮಾಡಿ ಕೊಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿ ಮತ್ತು ಸಿ ವೃಂದದ ಸಿಬ್ಬಂದಿಗಳ ಅವಶ್ಯಕತೆ ತುಂಬಾ ಇದೆ. ಕಚೇರಿ ಸಿಬ್ಬಂದಿಯೇ ಕಡಿಮೆಯಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.

ಅನಿಲ್ ಕುಮಾರ್ ಮುದ್ದಾ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ

ಸರಕಾರ ಪ್ರತಿಯೊಂದನ್ನು ಆನ್‌ಲೈನ್ ಮೂಲಕವೇ ಅರ್ಜಿ ಹಾಕಿ ಪಡೆಯುವಂತಹ ವ್ಯವಸ್ಥೆ ಜಾರಿಯಲ್ಲಿದ್ದು, ಕಚೇರಿಯಲ್ಲಿ ಸರಿಯಾಗಿ ಸಿಬ್ಬಂದಿ ಇಲ್ಲದೆ ಜನರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ ಜನರ ಅಲೆದಾಟ ನಿತ್ಯ ತಪ್ಪುತ್ತಿಲ್ಲ. ಯಾವುದೇ ಕೆಲಸಗಳು ಸರಾಗವಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ.

ರಾಘವೇಂದ್ರ ಯಳವತ್ತಿ, ನಗರಸಭೆ ಮಾಜಿ ಸದಸ್ಯ

ಇಲ್ಲಿ ಗೆದ್ದದ್ದು ಮಾತ್ರ ಹೀರೋ ಅಲ್ಲ, ಹೀರೋಯಿನ್!

-ಬಸವರಾಜ ಕರುಗಲ್
ರಿಷಬ್ ಶೆಟ್ಟಿ ಸಿನಿಮಾ ಅಂದ ಮೇಲೆ ಒಂದು ಲೆವೆಲ್‌ಗೆ ನಿರೀಕ್ಷೆ ಇರುತ್ತೆ. ಆದರೆ ಹೀರೋ ಒಂದು ಅನಿರೀಕ್ಷಿತ ಸಿನಿಮಾ. ರಿಷಬ್ ಸಿನಿಮಾಗಳು ಇದುವರೆಗೂ ಕ್ಲಾಸ್ ಆಡಿಯನ್ಸ್ ಕೇಂದ್ರೀಕೃತ. ಆದರೆ ಈ ಬಾರಿ ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಹೀರೋ ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾ ನೋಡಿದಾಗ ಇಲ್ಲಿ ಗೆದ್ದದ್ದು ಮಾತ್ರ ಹೀರೋ ಅಲ್ಲ, ಹೀರೋಯಿನ್ ಎಂಬುದು ಸ್ಪಷ್ಟ.

ಮಾಸ್ ಪ್ರೇಕ್ಷಕರು ನಮ್ಮ ಸಿನಿಮಾ ನೋಡಲಿ ಅಂತ ಸಿನಿಮಾ ಟೈಟಲ್‌ನ್ನ ಹೀರೋ ಅಂತ ಇಟ್ಟ ಲೆಕ್ಕಾಚಾರ ವರ್ಕ್ ಔಟ್ ಆಗೋದು ಕಷ್ಟ. ಹಾಗಂತ ಹೀರೋ ಸಿನಿಮಾ ನೋಡಲು ಕ್ಲಾಸ್ ಪ್ರೇಕ್ಷಕರು ಬರೋದು ಸಹ ಅನುಮಾನವೇ. ಸಿನಿಮಾದ ಟೈಟಲ್ ನೋಡಿ ಭರ್ಜರಿ ಫೈಟ್‌ಗಳಿವೆ ಎಂದು ಊಹಿಸಿಕೊಂಡು ಥೇಡರ್‌ಗೆ ಬಂದ್ರೆ ಮಾಸ್ ಆಡಿಯನ್ಸ್‌ಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾಗಂತ ಸಿನಿಮಾದಲ್ಲಿ ಫೈಟ್‌ಗಳಿಲ್ಲ ಅಂತಲ್ಲ, ಫೈಟ್‌ಗಳು ನಿರೀಕ್ಷೆಗೆ ತಕ್ಕಂತಿಲ್ಲ. ಹೀರೋ ಹೋಡಿತಾನೆ ಅಂದುಕೊಂಡಾಗೆಲ್ಲ ಕಾಮಿಡಿ ಮಾಡ್ತಾನೆ. ಕಾಮಿಡಿ ಮಾಡ್ತಾನೆ ಅಂದುಕೊಂಡಾಗೆಲ್ಲ ಹೊಡೆದುಬಿಡುತ್ತಾನೆ.

ಸಿನಿಮಾ ಸ್ಟೋರಿಯ ಒನ್ ಲೈನ್ ಹೇಳಬೇಕಂದ್ರೆ ಡಾನ್ ಒಬ್ಬನನ್ನು ಮದುವೆಯಾದ ಲವ್ವರ್‌ ಕೊಲ್ಲಲು ಎಅನ್ ಮನೆಗೆ ಹೋಗುವ ಹೀರೋ ಒಂದು ಬಂಗಲೆ, ಸುತ್ತಲಿನ ಕಾಡಿನಲ್ಲಿ ಬಂಧಿಯಾಗಿ ನಿರೀಕ್ಷೆಗೂ ಮೀರಿದ ಘಟನೆಗಳ ಸುಖಾಂತ್ಯದ ಸಿನಿಮಾ ಹೀರೋ..

ಹೀರೋ ತನ್ನ ಪ್ರೇಯಸಿಯನ್ನು ಕೊಲ್ತಾನಾ? ಅಥವಾ ತನ್ನ ಹೆಂಡತಿಯನ್ನು ಕೊಲ್ಲಲು ನೆಪವೊಂದನ್ನು ಮುಂದಿಟ್ಟುಕೊಂಡು ತನ್ನ ಅಶೋಕ ವನ ಎಸ್ಟೇಟ್‌ಗೆ ಕಾಲಿಡುವ ಹೀರೋವನ್ನು ಡಾನ್ ಮತ್ತು ಆತನ ಸಹಚರರು ಏನು ಮಾಡುತ್ತಾರೆ ಎಂಬುದೇ ಕಥೆ. ಇದನ್ನ ಥೇಟರ್‌ನಲ್ಲೇ ನೋಡಿದರೆ ಚಂದ.

ರಿಷಬ್ ಶೆಟ್ಟಿ, ನಿರ್ದೇಶಕರಾಗಿ ಹಲವು ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಅವರು ಮೊದಲ ಬಾರಿಗೆ ನಾಯಕರಾಗಿ ನಟಿಸಿದ ಬೆಲ್ ಬಾಟಮ್ ಸಿನಿಮಾ ಸಹ ವಿಶಿಷ್ಟ ಮ್ಯಾನರೀಸಂ ಹಾಗೂ ಗಟ್ಟಿ ಕಥೆಯಿಂದ ಗೆದ್ದಿದೆ. ಆದರೆ ಈ ಬಾರಿ ಭರತ್ ಶೆಟ್ಟಿ ನಿರ್ದೇಶನದಲ್ಲಿ ಹೀರೋ ಆಗಿ ತೆರೆ ಮೇಲೆ ಬಂದಿದ್ದಾರೆ. ಬೆಲ್ ಬಾಟಮ್‌ನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದಾದರೂ ಡಿಟೇಕ್ಟಿವ್ ದಿವಾಕರ್ ಎಂಬ ಪಾತ್ರದಂತೆ ಹೀರೋ ನೆನಪಲ್ಲಿ ಉಳಿಯೋದು ಕಷ್ಟ.

ಇಡೀ ಸಿನಿಮಾದಲ್ಲಿ ಗೆದ್ದದ್ದು ಹೀರೋ ಅಲ್ಲ, ನಾಯಕಿಯಾಗಿ ನಟಿಸಿದ ಗಾನವಿ ಲಕ್ಷ್ಮಣ. ಹೀರೋ ಸಿನಿಮಾದಲ್ಲಿ ಹೆಚ್ಚು ಸ್ಕೋಪ್ ಇರೋದೇ ನಾಯಕಿ ಪಾತ್ರಕ್ಕೆ. ಅಳು, ಕಾಮಿಡಿ, ಗಂಭೀರತೆ, ಆಕ್ರೋಶ… ಹೀಗೇ ಎಲ್ಲ ಭಾವಗಳನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮಗಳು ಜಾನಕಿ ಧಾರಾವಾಹಿ ಮೂಲಕ ನಟಿಯಾಗಿ ಗುರುತಿಸಿಕೊಂಡ ಗಾನವಿ, ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಲಕ್ಷಣ ತೋರಿಸಿದ್ದಾರೆ.

ನಿರ್ದೇಶಕ ಎಂ.ಭರತ್ ಲಾಕ್‌ಡೌನ್‌ನ ಇತಿಮಿತಿಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಿರೋದು ನಿಜಕ್ಕೂ ಪ್ರಶಂಸನಾರ್ಹ. ಆದರೆ ಅಂತಿಮವಾಗಿ ಪ್ರೇಕ್ಷಕ ಬಯಸೋದು ಒಂದೊಳ್ಳೆ ಸಿನಿಮಾವನ್ನೇ ಹೊರತು ನಿರ್ದೇಶಕನ ಪರಿಸ್ಥಿತಿಯಲ್ಲ.

ಪ್ರಮುಖ ವಿಲನ್ ಆಗಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಉಗ್ರಂ ಮಂಜು ಸಹ ಮತ್ತೊಬ್ಬ ವಿಲನ್ ಆಗಿ ಗಮನ ಸೆಳೆಯುತ್ತಾರೆ. ಅಜನೀಶ್ ಸಂಗೀತದಲ್ಲಿ ಮೂಡಿ ಬಂದಿರುವ ಮೂರು ಇಂಪಾದ ಹಾಡುಗಳ ಪೈಕಿ ಯೋಗರಾಜ್ ಭಟ್ ಬರೆದ ನೆನಪಿನ ಹುಡುಗಿಯೇ… ಹಾಡು ಕೆಲ ಕ್ಷಣ ನೆನಪಲ್ಲಿ ಉಳಿಯುವ ಶಕ್ತಿ ಹೊಂದಿದೆ.

ಇಡೀ ಸಿನಿಮಾ ಒಂದು ಬಂಗಲೆ, ಬಂಗಲೆಗೆ ಹತ್ತಿರದ ಒಂದು ದಟ್ಟ ಕಾನನದ ನಡುವೆ ಬೆಳಗಿನಿಂದ ರಾತ್ರಿವರೆಗೂ ನಡೆಯುವ ಘಟನೆಗಳ ಕಥಾಹಂದರವನ್ನು ಛಾಯಾಗ್ರಾಹಕ ಅರವಿಂದ ಕಶ್ಯಪ್ ಚನ್ನಾಗಿ ಹಿಡಿದಿಟ್ಟಿದ್ದಾರೆ. ಸಿನಿಮಾದ ಕೊನೆಯ ಅರ್ಧ ಗಂಟೆ ಬಿಟ್ಟರೆ ಉಳಿದ ಅವಧಿಯ ಈ ಸಿನಿಮಾದ ದೃಶ್ಯಗಳಿಗೆ ನೋಡಿಸಿಕೊಂಡು ಹೋಗುವ ಗುಣವಿದೆ.

ಕೊನೆಯ‌ ಕಿಕ್ಕರ್ ಎಂದರೆ ದೃಶ್ಯವೊಂದರಲ್ಲಿ‌ ನಾಯಕ ಹೇಳುವ ಮಾತು…

“ಚಿಕ್ಕವರಿದ್ದಾಗ ಮೆಮೊರಿ‌ ಪವರ್ ಹೆಚ್ಚಾಗಲಿ ಅಂತ ಹಾರ್ಲಿಕ್ಸ್, ಕಾಂಪ್ಲೆನ್ ಕುಡಿಸ್ತಾರೆ. ಅದರ ಎಫೆಕ್ಟ್ ಗೊತ್ತಾಗೋದು ಹುಡುಗಿ ಬಿಟ್ಟು ಹೋದಾಗ…”

ರೇಟಿಂಗ್: ***

*: ಚನ್ನಾಗಿಲ್ಲ.
**: ಪರವಾಗಿಲ್ಲ
***: ನೋಡಬಹುದು
****: ನೋಡಬೇಕು
*****: ಮಿಸ್ ಮಾಡ್ಕೊಬೇಡಿ.

ಹೈಟೆಕ್ ವೇಶ್ಯಾವಾಟಿಕೆ ದಂಧೆ; ಮೂವರ ಬಂಧನ.!

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಹೊಸಳ್ಳಿ ರಸ್ತೆಯ ಲಕ್ಷ್ಮಿ ವೆಂಕಟೇಶ್ವರ ಕಾಲೋನಿಯಲ್ಲಿ ಹೈಟೆಕ್ ವೈಶ್ಯವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂದು ಖಚಿತ ದೂರು ಬಂದ ಹಿನ್ನೆಲೆಯಲ್ಲಿ ನಗರ ಪೋಲಿಸರು ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ‌ ನಡೆದಿದೆ.

DYSP ರುದ್ರೇಶ ಉಜ್ಜನಕೊಪ್ಪ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಠಾಣೆಯ PI ವೆಂಕಟಸ್ವಾಮಿ, ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ಕಾಲೋನಿಯ ಸಿದ್ದಲಿಂಗಯ್ಯ ಸಿದ್ದಪ್ಪ ಎನ್ನುವವರ ಮನೆಯನ್ನು ವಿಜಯಪುರ ಜಿಲ್ಲೆಯ ಬಸವರಾಜ ವಕ್ಕಲಿಗ ಎಂಬ ವ್ಯಕ್ತಿ ಕಳೆದ ಫೆ.20ರಂದು ಮನೆ ಬಾಡಿಗೆಗೆ ತೆಗೆದುಕೊಂಡು ವೈಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಮೂವರು ಅಂದರ್

ಮೂಲತಃ ವಿಜಯಪುರ ಜಿಲ್ಲೆಯವನಾದ ಬಸವರಾಜ ವಕ್ಕಲಿಗ, ಮಹಾರಾಷ್ಟ್ರದ ಪುಣೆ ಹಾಗು ವಿಜಯಪುರದ ಕಡೆಯಿಂದ ಮಹಿಳೆಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು, ಸಧ್ಯಕ್ಕೆ ಮಹಾರಾಷ್ಟ್ರ ಮೂಲದ ಒಬ್ಬ ಸಂತ್ರಸ್ತೆ ಮತ್ತು ವಿಜಯಪುರ ಜಿಲ್ಲೆಯ ಒಬ್ಬ ಸಂತ್ರಸ್ತೆ ಸೇರಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ಬಸವರಾಜ ವಿಜಯಪುರ,
ಸುರೇಶ್ ಸಿಂಧನೂರು ಹಾಗೂ ಬಸವರಾಜ ತೋಟದ ಮಸ್ಕಿ ಎಂಬುವವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

error: Content is protected !!