Home Blog Page 3146

ಪ್ರೇಮ ವೈಫಲ್ಯ – ಉಪನ್ಯಾಸಕ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಪ್ರೇಮ ವೈಫಲ್ಯದಿಂದಾಗಿ ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಅತಿಥಿ ಉಪನ್ಯಾಸಕರು ಕಲಬುರಗಿ ಅಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ನಗರದ ಲಾಲ್ ಗೇರಿ ಕ್ರಾಸ್ ನಿವಾಸಿ ಅಂಬರೀಷ್(35) ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮನೆಗೆ ಕರೆ ಮಾಡಿ ಹೇಳಿ ಕೆರೆಗೆ ಹಾರಿದ್ದಾರೆ. ಅವರ ಶವ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬ್ರಹ್ಮಪೂರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯಾಸ್ ಚಂಡಮಾರುತದ ಹಾವಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಯಾಸ್ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದಾಗಿ ರಾಜ್ಯದ ಹಲವೆಡೆ ಭರ್ಜರಿ ಮಳೆ ಸುರಿಯುತ್ತಿದೆ. ಅಲ್ಲದೇ, ಈ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಈಗಾಗಲೇ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ಹಲವೆಡೆ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ, ಮೇ. 29ರ ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದ ಪ್ರಭಾವದಿಂದಾಗಿ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗುತ್ತಿರುವುದರಿಂದಾಗಿ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೇ. 26ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಇಂದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಪಿಎಂ ಕೇರ್ಸ್ ಗೆ ಸಾಕಷ್ಟು ದಾನ ಮಾಡಿದ್ದ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವು- ಎಲ್ಲೆಡೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಪಿಎಂ ಕೇರ್ಸ್‍ ಗೆ ರೂ. ಲಕ್ಷಾಂತರ ದೇಣಿಗೆ ನೀಡಿದ್ದ ಉದಾರ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವನ್ನಪ್ಪಿದ ಮನ ಕಲಕುವ ಘಟನೆ ಅಹಮದಾಬಾದ್‍ ನಲ್ಲಿ ನಡೆದಿದೆ.
ಅಹ್ಮದಾಬಾದ್ ನ ವಿಜಯ್ ಪರಿಕ್ ಎಂಬುವವರು ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದರು. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್ ದೊರಕಲಿಲ್ಲ. ಮುಂದೆ ಬರುತ್ತಿರುವ 3ನೇ ಕೊರೊನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಇನ್ನೆಷ್ಟು ಹಣ ದೇಣಿಗೆ ನೀಡಬೇಕು ಎಂಬುವುದನ್ನು ದಯವಿಟ್ಟು ತಿಳಿಸಿ ಎಂದು ಆ ವ್ಯಕ್ತಿ ನೊಂದು ಕಣ್ಣೀರು ಸುರಿಸಿದ್ದಾರೆ.

ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ ನನ್ನ ತಾಯಿಗೆ ಆಕ್ಸಿಜನ್ ಬೆಡ್ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಅದಕ್ಕೆ ಎಷ್ಟು ದೇಣಿಗೆ ನೀಡಬೇಕು ಹೇಳಿ, ನೀಡುತ್ತೇನೆ. ಸೋಂಕಿನಿಂದ ನಾನು ಮತ್ತಷ್ಟು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ವ್ಯಕ್ತಿಯ ತಾಯಿಗೆ ಬೆಡ್ ಸಿಗದ ಕಾರಣ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ವತಃ ಆ ವ್ಯಕ್ತಿಯೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ಟ್ವೀಟ್ ಭಾರಿ ವೈರಲ್ ಆಗುತ್ತಿದೆ. ಟ್ವೀಟ್‍ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ದೇಶಾದ್ಯಂತ ಕರಾಳ ದಿನ ಆಚರಣೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರೈತರು ದೇಶಾದ್ಯಂತ ಕರಾಳ ದಿನ ಆಚರಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋದಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

ರೈತರು ತಮ್ಮ ಮನೆ, ವಾಹನಗಳಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸುತ್ತಿದ್ದಾರೆ. ಅಲ್ಲದೇ, ಇಂದು ಪಂಜಾಬ್ ನ ರೈತರು ಕಪ್ಪು ಬಣ್ಣದ ಟರ್ಬನ್‍ ಗಳನ್ನು ಧರಿಸುವುದರ ಮೂಲಕ ಕರಾಳ ದಿನ ಆಚರಿಸುತ್ತಿದ್ದಾರೆ.

ಈ ಹೋರಾಟ 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಪ್ರಾರಂಭವಾಯಿತು. ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲಿಯೇ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ರೈತರು, ಅಂದಿನಿಂದ ಇಲ್ಲಿಯವರೆಗೂ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ ಎಂದು ರೈತರು ಎಚ್ಚರಿಸಿದ್ದಾರೆ.

ಕೋವಿಡ್ ವರದಿ ಇಲ್ಲದ್ದಕ್ಕೆ ದಾಖಲಿಸಿಕೊಳ್ಳಲು ಒಪ್ಪದ ಆಸ್ಪತ್ರೆ – ನಿಂತಲ್ಲಿಯೇ ಹೆರಿಗೆಯಾಗಿ ಮಗು ಸಾವು

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಕೊರೊನಾ ವರದಿ ಇಲ್ಲವೆಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಂಡಿರಲಿಲ್ಲ. ಹೀಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಲ್ಲಿಯೇ ಹೆರಿಗೆಯಾಗಿದ್ದು, ಪರಿಣಾಮ ನವಜಾತ ಶಿಶು ಕೆಳಗೆ ಬಿದ್ದು ಸಾವನ್ನಪ್ಪಿರುವ ಮನ ಕಲಕುವ ಘಟನೆ ನಡೆದಿದೆ.

ಈ ಘಟನೆ ಇಲ್ಲಿಯ ಮಿಮ್ಸ್ ನ ಹೆರಿಗೆ ವಾರ್ಡ್ ಮುಂಭಾಗದಲ್ಲಿ ನಡೆದಿದೆ. ನಗರದ ಗುತ್ತಲು ಬಡಾವಣೆಯ ನಿವಾಸಿ ಇಸ್ಮಾಯಿಲ್ ಎಂಬುವವರ ಪತ್ನಿ ಸೋನು ಅವರು 7 ತಿಂಗಳ ಗರ್ಭಿಣಿ ಆಗಿದ್ದರು. ಆದರೆ, ನಿನ್ನೆ ರಾತ್ರಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಪರೀಕ್ಷೆ ಮಾಡಿದಾಗ ಮಗುವಿನ ಎದೆಯ ಬಡಿತ ಕೇಳುತ್ತಿಲ್ಲ. ನಾಳೆ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿಯೇ ಇಸ್ಮಾಯಿಲ್ ನಿನ್ನೆ ರಾತ್ರಿ ಪತ್ನಿಯ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆದರೆ, ಇಂದು ಬೆಳಿಗ್ಗೆ ನೋವು ಹೆಚ್ಚಾದ ಕಾರಣ, ಪತ್ನಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು. ಆದರೆ, ಈ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ, ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯ ಪರಿಸ್ಥಿತಿ ಕಂಡು ಕುಟುಂಬಸ್ಥರು ಹಾಗೂ ಅಲ್ಲಿದ್ದ ಸಾರ್ವಜನಿಕರು ದಾಖಲು ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೂ ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಂಡಿಲ್ಲ. ಆದರೆ, ಸೋನು ನಿಂತಿದ್ದ ಸಂದರ್ಭದಲ್ಲಿಯೇ ಹೆರಿಗೆ ಆಗಿದೆ. ಆಗ ಮಗು ಕೆಳಕ್ಕೆ ಬಿದ್ದು ಸಾವನ್ನಪ್ಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ನಡೆದ ನಂತರ ಆಸ್ಪತ್ರೆಯ ಸಿಬ್ಬಂದಿ ಸೋನು ಅವರನ್ನು ದಾಖಲು ಮಾಡಿಕೊಳ್ಳಲಾಯಿತು. ಇತ್ತ ಆಸ್ಪತ್ರೆ ಸಿಬ್ಬಂದಿ ಪೋಷಕರ ಮೇಲೆ ತಪ್ಪು ಹೇರುತ್ತಿದ್ದಾರೆ.

ಕೆಂಪು ರಕ್ತ ಚಂದ್ರ ಗ್ರಹಣ! ಏನಿದು? ಇದು ಹೇಗೆ ಸಂಭವಿಸುತ್ತದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವರ್ಷದ ಮೊದಲ ಚಂದ್ರ ಗ್ರಹಣ ಇಂದು ಸಂಭವಿಸಲಿದೆ. ಈ ಬಾರಿ ಸೂಪರ್ ಮೂನ್ ಗ್ರಹಣವಾಗಿರುವುದರಿಂದಾಗಿ ಇದು ವಿಶೇಷವಾಗಿತ್ತು. ಹೀಗಾಗಿ ಈ ಕೆಂಪು ರಕ್ತ ಚಂದ್ರನನ್ನು ಎಲ್ಲರೂ ಕಣ್ಣು ತುಂಬಿಕೊಳ್ಳಬಹುದು. ಚಂದ್ರನು ಭೂಮಿಗೆ ಅತ್ಯಂತ ಹತ್ತಿರವಾಗುವುದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.

ಭೂಮಿಯ ಸುತ್ತ ಚಂದ್ರನ ಕಕ್ಷೆಯು ಸಂಪೂರ್ಣವಾಗಿ ವೃತ್ತಾಕಾರವಾಗಿಲ್ಲ. ಪೆರಿಗೀ ಎಂದು ಕರೆಯಲ್ಪಡುವ ಕಕ್ಷೆಯ ಹತ್ತಿರದ ಬಿಂದುವು ಕಕ್ಷೆಯ ದೂರದ ಬಿಂದುವಿಗಿಂತ ಭೂಮಿಗೆ ಸರಿಸುಮಾರು 28,000 ಮೈಲಿ ದೂರದಲ್ಲಿದೆ. ಹೀಗೆ ಪೆರಿಗಿಯ ಬಳಿ ಸಂಭವಿಸುವ ಹುಣ್ಣಿಮೆಯನ್ನು ಸೂಪರ್‌ ಮೂನ್ ಎಂದು ಕರೆಯಲಾಗುತ್ತದೆ.
ಹೀಗಾಗಿ ಚಂದ್ರ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಅಲ್ಲದೇ, ಪ್ರಕಾಶಮಾನವಾಗಿ ಕಾಣುತ್ತದೆ.

ಭೂಮಿಯ ನೆರಳು ಚಂದ್ರನ ಎಲ್ಲಾ ಅಥವಾ ಭಾಗವನ್ನು ಆವರಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಆದರೆ ಪ್ರತಿ ಚಂದ್ರನ ಕಕ್ಷೆಯಲ್ಲಿ ಎರಡು ಬಾರಿ, ಚಂದ್ರನು ಭೂಮಿ ಮತ್ತು ಸೂರ್ಯನಂತೆಯೇ ಒಂದೇ ಸಮತಲದಲ್ಲಿರುತ್ತಾನೆ. ಇದು ಹುಣ್ಣಿಮೆಗೆ ಅನುಗುಣವಾದರೆ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯನ್ನು ರೂಪಿಸುತ್ತಾರೆ. ಚಂದ್ರನು ಭೂಮಿಯ ನೆರಳಿನ ಮೂಲಕ ಹಾದು ಹೋಗುತ್ತಾನೆ. ಇದು ಒಟ್ಟು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ.

ಈ ಚಂದ್ರ ಗ್ರಹಣ ಫೆಸಿಫಿಕ್ ಸಮುದ್ರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ತೀರ ಮತ್ತು ಅಮೆರಿಕಾದ ಪಶ್ಚಿಮ ತೀರದಲ್ಲಿ ಕಾಣಿಸುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿದಾಗ ಅದು ಕಪ್ಪಾಗುತ್ತದೆ. ಆದರೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ಹೋಗುವುದಿಲ್ಲ. ಬದಲಾಗಿ, ಇದು ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ. ಅದಕ್ಕಾಗಿಯೇ ಒಟ್ಟು ಚಂದ್ರ ಗ್ರಹಣಗಳನ್ನು ಕೆಲವೊಮ್ಮೆ ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

ಪಿಯುಸಿ ಪರೀಕ್ಷೆಗಳು ಯಾವಾಗ ನಡೆಯಲಿವೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಜುಲೈ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸದ್ಯದಲ್ಲಿಯೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್. ಸ್ನೇಹಲ್ ಅವರು ತಿಳಿಸಿದ್ದಾರೆ.

ಮೇ. 23ರಂದು ಹಲವು ರಾಜ್ಯಗಳ ಶಿಕ್ಷಣ ಸಚಿವರು ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಸಭೆ ನಡೆಸಿದ್ದಾರೆ. ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ಸಿಬಿಎಸ್ ಸಿ ಸಲಹೆ ನೀಡಿದೆ. ಆದರೆ, ಪರೀಕ್ಷೆಗಳ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಬೇಕಾದರೆ 75 ದಿನಗಳ ಅಗತ್ಯವಿದೆ.

ಪರೀಕ್ಷೆ ಪಠ್ಯ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆ ಈಗಾಗಲೇ ರಾಜ್ಯದಲ್ಲಿ ಪೂರ್ಣಗೊಂಡಿದೆ. ಈಗ ಮತ್ತೊಮ್ಮೆ ಪಠ್ಯ ಕಡಿತ, ಪ್ರಶ್ನೆಪತ್ರಿಕೆ ಬದಲಾವಣೆ ಮಾಡುವುದು ಕಷ್ಟಕರವಾಗುತ್ತದೆ. ಕೇಂದ್ರದ ಸಲಹೆ, ಸಭೆ ನಂತರ ಪರೀಕ್ಷಾ ಪದ್ಧತಿ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸಲಹೆ ಹಾಗೂ ಸಭೆ ಬಳಿಕ ಪರೀಕ್ಷಾ ಪದ್ದತಿ ಹಾಗೂ ಪಠ್ಯ ಕಡಿತದ ಕುರಿತು ಚಿಂತನೆ ಮಾಡಲಾಗಿದೆ. ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ, ಪಠ್ಯವನ್ನು ಕೂಡ ರೂಪಿಸಲಾಗಿದೆ. ಪ್ರಶ್ನೆ ಪತ್ರಿಕೆ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಸಿಬಿಎಸ್‌ ಇ 12ನೇ ತರಗತಿಗಳ ಪರೀಕ್ಷೆಯ ನಂತರವೇ ವೃತ್ತಿಪರ ಕೋರ್ಸ್‌ ಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಸುದ್ದಿಯ ಸತ್ಯಾಸತ್ಯತೆ ಏನು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯ ಅಬ್ಬರದ ನಡುವೆಯೂ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪ್ರಯತ್ನಿಸುತ್ತಿದೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದ ಬಿಜೆಪಿಯಲ್ಲಿನ ಬದಲಾವಣೆಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತಿವೆ.

ಬಿಜೆಪಿಯ ಶಾಸಕರ ಸಭೆ ನಡೆಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಈ ಕುರಿತು ನಿನ್ನೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಸಿಎಂ ಸುಳಿವು ಕೊಟ್ಟಿದಾರೆ. ಜೂನ್ ಮೊದಲ ವಾರದಲ್ಲಿ ಶಾಸಕರ ಸಭೆ ನಡೆಸಬೇಕೆಂದು ಹೈಕಮಾಂಡ್ ಆದೇಶ ನೀಡಿದೆ ಎನ್ನಲಾಗಿದೆ. ಹೀಗಾಗಿ ಜೂ. 7ರಂದು ರಂದು ಪಕ್ಷದ ಶಾಸಕರ ಸಭೆ ನಡೆಸು ಸಿಎಂ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಆದರೆ, ಈ ಸಭೆಯಲ್ಲಿ ನಾಯಕರ ಬದಲಾವಣೆ ಕುರಿತು ಚರ್ಚೆ ನಡೆಯುತ್ತದೆಯೇ ಎಂಬ ಪ್ರಶ್ನೆ ಸದ್ಯ ಮೂಡಿದೆ.

ಇನ್ನೊಂದೆಡೆ ಶಾಸಕರ ಸಭೆಯ ದಿನದಂದೇ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯಲಿದೆ ಎಂದು ಯಡಿಯೂರಪ್ಪ ವಿರೋಧಿ ಬಣ ಹೇಳುತ್ತಿದೆ. ಆದರೆ, ಸಿಎಂ ಮಾತ್ರ ಕೊರೊನಾ ನಿರ್ವಹಣೆ ಕುರಿತು ಮಾತ್ರ ಚರ್ಚೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಅಂದರೆ, ಶನಿವಾರ ಸಿಎಂ ಯಡಿಯೂರಪ್ಪ ಅವರ ಮನೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆರೆಸ್ಸೆಸ್ ನಾಯಕರು ಭಾಗಿಯಾಗಿದ್ದರು. ಆರೆಸ್ಸೆಸ್ ಮುಖಂಡ ಮುಕುಂದ್ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಕುರಿತೇ ಚರ್ಚೆ ನಡೆದಿದೆ ಎನ್ನಲಾಗುತ್ತಿದ್ದು, ಅವರ ಭೇಟಿಯ ನಂತರ, ಶಾಸಕರ ಸಭೆ ಕರೆಯಲು ಸಿಎಂಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

ಇಂದು ವರ್ಷದ ಮೊದಲ ಚಂದ್ರ ಗ್ರಹಣ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಇಂದು ವೈಶಾಖ ಹುಣ್ಣಿಮೆಯಾಗಿದ್ದು, ಸೂಪರ್ ಮೂನ್ ಮತ್ತು ಚಂದ್ರಗ್ರಹಣ ಸಂಭವಿಸಲಿದೆ. ಭೂಮಿಯ ಸುತ್ತ ಚಂದ್ರ ದೀರ್ಘ ವೃತ್ತಾಕಾರದಲ್ಲಿ ಚಲಿಸುತ್ತಾನೆ. ಆ ಕಾರಣದಿಂದಾಗಿ ಭೂಮಿಗೆ ಅತಿ ಸಮೀಪದಲ್ಲಿ ಇಂದು ಚಂದ್ರ ಬರುತ್ತಾನೆ.

ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಆ ಸಂದರ್ಭದಲ್ಲಿ ಕತ್ತಲು ಆವರಿಸುವ ಬದಲಿಗೆ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ವರ್ಷದ ಮೊದಲ ಚಂದ್ರಗ್ರಹಣವಾಗಿದೆ.

ಇಂದು ಮಧ್ಯಾಹ್ನ ಆರಂಭಗೊಂಡು, ಸಂಜೆಯವರೆಗೂ ಈ ಗ್ರಹಣ ಇರಲಿದೆ. ಭಾರತದ ಈಶಾನ್ಯ ಭಾಗ, ಪಶ್ಚಿಮ ಬಂಗಾಳದ ಕೆಲ ಭಾಗ, ಒಡಿಶಾ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಈ ಚಂದ್ರಗ್ರಹಣ ಭಾಗಶಃ ಗೋಚರವಾಗಲಿದೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ಮಧ್ಯೆ ಈ ಗ್ರಹಣ ನಡೆಯಲಿದೆ.
ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಈ ಚಂದ್ರಗ್ರಹಣ ಸಂಪೂರ್ಣವಾಗಿ ಗೋಚರವಾಗಲಿದೆ. ಈ ಚಂದ್ರ ಗ್ರಹಣದಿಂದ ಯಾರಿಗೂ ಅಪಾಯ ಇರುವುದಿಲ್ಲ.

ಮಹಿಳೆಯ ಅತ್ಯಾಚಾರಗೈದು ಕಂಬಕ್ಕೆ ನೇತು ಹಾಕಿದ ಪಾಪಿಗಳು!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಪಾಪಿಗಳು, ವಿದ್ಯುತ್ ಕಂಬಕ್ಕೆ ನೇತು ಹಾಕಿರುವ ಅಮಾನವೀಯ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯ ವಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆ ಬೆಳಿಗ್ಗೆ ಶೌಚಕ್ಕೆಂದು ಮನೆಯಿಂದ ಹೊರಗಡೆ ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವಳಿಗೆ ಕಿರುಕುಳ ನೀಡಿದ್ದಲ್ಲದೇ ಅತ್ಯಾಚಾವೆಸಗಿದ್ದಾರೆ. ಆಗ ಮಹಿಳೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಿದ್ದರಿಂದ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ನೇತು ಹಾಕಿದ್ದಾರೆ. ಈ ಅಮಾನವೀಯ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ತಕ್ಷಣವೇ ಸದರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಿದ್ದಾರೆ.

ಈ ಘಟನೆಯಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಮನೆಯಲ್ಲಿ ವಿವಾಹ ಸಮಾರಂಭವಿದ್ದುದ್ದರಿಂದ ಎಲ್ಲರೂ ಆ ಕಾರ್ಯಕ್ರಮದ ಕೆಲಸದಲ್ಲಿ ಮಗ್ನರಾಗಿದ್ದರು.

ಅಡುಗೆ ಸೇರಿದಂತೆ ಇತರೆ ಕೆಲಸ ಮಾಡಲು ಕೆಲ ಕಾರ್ಮಿಕರು ಇಲ್ಲಿಗೆ ಆಗಮಿಸಿದ್ದರು. ಅದೇ ಕಾರ್ಮಿಕರು ಆಕೆಯನ್ನ ಅತ್ಯಾಚಾರವೆಸಗಿ, ಕೊರಳಲ್ಲಿದ್ದ ಆಭರಣ ದೋಚಿದ್ದಾರೆ. ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

error: Content is protected !!