Home Blog Page 3147

ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಿಜಯೇಂದ್ರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜಾ ವಿಧಿ- ವಿಧಾನ ನೆರವೇರಿಸಿದ್ದ ಸಿಎಂ ಯಡಿಯೂರಪ್ಪ ಅವರು ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಲೆಟ್ಜ್‌ ಕಿಟ್‌ ಫೌಂಡೇಷನ್‌ ಸಲ್ಲಿಸಿರುವ ಪಿಐಎಲ್‌, ಸಿ.ಜೆ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು. ಮೂಲ ಅರ್ಜಿಗೆ ಮೆಮೋ ಸಲ್ಲಿಸಿರುವ ವಕೀಲ ಜಿ.ಆರ್‌. ಮೋಹನ್‌, ಮೇ 18ರಂದು ವಿಜಯೇಂದ್ರ ಕುಟುಂಬ ಸಮೇತರಾಗಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ನಡೆಸಿದ ವಿಚಾರ ಕೋರ್ಟ್ ಗಮನಕ್ಕೆ ಬಂದಿತು.

ಮೆಮೋ ಪರಿಶೀಲಿಸಿದ ನ್ಯಾಯಪೀಠ, ಒಬ್ಬ ವ್ಯಕ್ತಿಯ ಅನುಕೂಲಕ್ಕಾಗಿ ದೇವಾಲಯ ತೆರೆದು ಪೂಜೆ ನೆರವೇರಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದಂತಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಜೂ. 3ರೊಳಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ಅರ್ಚಕರು ಮಾತ್ರ ದೇವಾಲಕ್ಕೆ ತೆರಳಿ ಪೂಜೆ ಸಲ್ಲಿಸಲು ಅವಕಾಶವಿದೆ. ಆದರೆ, ಸಿಎಂ ಅವರ ಪುತ್ರ ವಿಜಯೇಂದ್ರ ದಂಪತಿ ಹೇಗೆ ದೇವಾಸ್ಥಾನದಲ್ಲಿ ಪೂಜೆ ಸಲ್ಲಿ ಸಿದರು? ಎಂದು ನ್ಯಾಯವಾದಿ ಪ್ರಶ್ನಿಸಿದ್ದಾರೆ.

ನೀರಿನಲ್ಲಿಯೂ ಕಂಡು ಬಂದ ಸೋಂಕು!

ವಿಜಯಸಾಕ್ಷಿ ಸುದ್ದಿ, ಲಕ್ನೋ

ದೇಶದಲ್ಲಿ ಮತ್ತೊಂದು ಆತಂಕ ಶುರುವಾಗಿದೆ ಉತ್ತರ ಪ್ರದೇಶದಲ್ಲಿ ನೀರಿನಲ್ಲಿ ಕೊರೊನಾ ಸೋಂಕ ಪತ್ತೆಯಾಗಿದ್ದು, ಆತಂಕ ಮನೆ ಮಾಡುತ್ತಿದೆ. ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ಹಿನ್ನೆಲೆಯಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕೆಂಬ ಕೂಗು ಕೇಳಿ ಬಂದಿತ್ತ. ಐಸಿಎಂಆರ್ ಮತ್ತು ಡಬ್ಲ್ಯೂ ಎಚ್ ಓ ಕೆಲವು ಪ್ರದೇಶದ ನೀರನ್ನು ಮಾದರಿಯಾಗಿ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಕೊಳಚೆ ನೀರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೊದಲ ಹಂತದಲ್ಲಿ ಲಕ್ನೋ ನಗರದ ಮೂರು ಪ್ರದೇಶಗಳ ಕೊಳಚೆ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಂದು ಸ್ಥಳದ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಪಿಜಿಐ ಮೈಕ್ರೋಬಯೋಲಾಜಿ ವಿಭಾಗದ ಅಧ್ಯಕ್ಷ ಉಜ್ಜವಲಾ ಘೋಷಾಲ್ ಖಚಿತ ಪಡಿಸಿದ್ದಾರೆ.

ಲಕ್ನೋ ನಗರದ ಖಾದ್ರಾ, ಮೀನುಗಾರರ ಬಡವಾಣೆ, ಗಡಿಯಾರ ಗೋಪುರ ಬಡಾವಣೆಯಲ್ಲಿಯ ಕೊಳಚೆ ನೀರು ಸಂಗ್ರಹಿಸಲಾಗಿತ್ತು. ಪರೀಕ್ಷೆಯಲ್ಲಿ ಒಂದು ಮಾದರಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಘೋಷಾಲ್ ತಿಳಿಸಿದ್ದಾರೆ.

ಜನರ ಮಲದಿಂದಾಗಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ಸಾಧ್ಯತೆಗಳಿವೆ. ಹೋಮ್ ಐಸೋಲೇಟ್ ನಲ್ಲಿರುವ ಸೋಂಕಿತರು ಬಳಿಸಿರುವ ಶೌಚಾಲಯದಿಂದ ವೈರಸ್ ಚರಂಡಿ ಸೇರ್ಪಡೆಯಾಗುತ್ತಿದೆ. ಈ ಕುರಿತು ಹಲವು ದೇಶಗಳಲ್ಲಿ ಸಂಶೋಧನೆ ಸಹ ನಡೆಸಲಾಗುತ್ತಿದೆ. ಮಲ ಸೋಂಕಿನಿಂದಲೇ ಅರ್ಧದಷ್ಟು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೊರೊನಾ ಮಾರ್ಗಸೂಚಿ ಪಾಲಿಸಿ ಎಂದು ವೈದ್ಯರು ಹೇಳುತ್ತಿದ್ದಾರೆ.

ಮಾದರಿಯಾಗಿರಬೇಕಿದ್ದ ಶಿಕ್ಷಕ ಹಾಗೂ ಆತನ ಪತ್ನಿಯಿಂದ ಇಂತಹ ಕೃತ್ಯವೇ?

ವಿಜಯಸಾಕ್ಷಿ ಸುದ್ದಿ, ಬೀದರ್

ಸಮಾಜ ತಿದ್ದಿ, ತೀಡಿ ಮಾದರಿಯಾಗಬೇಕಿದ್ದ ಶಿಕ್ಷಕರೇ ಇಲ್ಲಿ ಆರೋಪಿಯಾಗಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ನಡೆಸಿ ಇಡೀ ಸಮಾಜವೇ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಅವರ ಪತ್ನಿ ವೃದ್ಧೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಜಿಲ್ಲೆ ಔರಾದ್ ತಾಲೂಕಿನ ಗಡಿಕೂಸನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ದೈಹಿಕ ಶಿಕ್ಷಕ ದಿಗಂಬರ್ ಹಾಗೂ ಆತನ ಪತ್ನಿ ಗ್ರಾಪಂ ಸದಸ್ಯೆ ಶಾರದ ಎಂಬುವವರು ಸೇರಿಕೊಂಡು ವೃದ್ದೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕ್ಷುಲಕ್ಕ ಕಾರಣಕ್ಕೆ ಮನೆಯ ಪಕ್ಕದ ವಯೋವೃದ್ದೆ ಸಿದ್ದಮ್ಮ ಎಂಬುವವರು ಮೇಲೆ ಈ ಶಿಕ್ಷಕ ಹಾಗೂ ಪತ್ನಿ ದರ್ಪೆ ಮೆರೆದಿದ್ದಾರೆ. ಘಟನೆಯಲ್ಲಿ ಹಲ್ಲೆಗೆ ಒಳಗಾದ ವಯೋವೃದ್ಧೆ ಸಿದ್ದಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ, ಆರೋಪಿಗಳ ವಿರುದ್ಧ ಸೆಕ್ಷನ್ 341, 323, 504 ಹಾಗೂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕ ಹಾಗೂ ಗ್ರಾಪಂ ಸದಸ್ಯೆಯ ಈ ವರ್ತನೆಗೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹಳ್ಳಿಗರು ಮೈ ಮರೆತರೆ ಸೀಲ್ ಡೌನ್ ಗ್ಯಾರಂಟಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕು ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋ ಕಂಟೇನ್ಮೆಂಟ್ ವಲಯ ನಿರ್ಮಾಣ ಮಾಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈಕ್ರೋ ಕಂಟೇನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಪಿಡಿಓ, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕಿತರು ಯಾವ ಗ್ರಾಮದಲ್ಲಿ ಹೆಚ್ಚಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಜೋನ್ ಗಳನ್ನು ನಿರ್ಮಿಸಲಾಗುವುದು. ಈ ಜೋನ್ಗಲಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಸೋಂಕಿತರಿಗೆ ವಿಟಮಿನ್-ಸಿ, ಜಿಂಕ್ ಸೇರಿದಂತೆ ಕೋವಿಡ್ ಗೆ ನೀಡಲಾಗುವ ಎಲ್ಲಾ ಔಷದೋಪಚಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜ್ಯದ ಆಯ್ದ ಕೆಲ ಗ್ರಾಮಪಂಚಾಯಿತಿಗಳ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುದುವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಮಾಧಾನ ಮೂಡಿಸುತ್ತಿದ್ದರೆ, ಸಾವು ಆತಂಕ ಮೂಡಿಸುತ್ತಿದೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಹೇರಿದ್ದರಿಂದಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತ ಸಾಗುತ್ತಿದೆ. ಆದರೆ, ಮರಣ ಮೃದಂಗ ಮಾತ್ರ ಆತಂಕ ಮೂಡಿಸುತ್ತಿದೆ.
ಇಂದು 22,758 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, 588 ಜನ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 26,399ಕ್ಕೆ ಏರಿಕೆ ಕಂಡಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 22,758 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 24,72,973ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ 6,243 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಸೋಂಕಿಗೆ 350 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು 38,224 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 20,22,172ಕ್ಕೆ ಏರಿಕೆಯಾಗಿದೆ.

ಮಾಸ್ಕ್ ಧರಿಸದೆ ಕಾರಿನಲ್ಲಿ ಹೊರಟಿದ್ದ ವೈದ್ಯೆಗೆ ಬಿತ್ತು ದಂಡ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅನಾವಶ್ಯಕವಾಗಿ ಹೊರಗೆ ಬಂದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಮಾತ್ರ ದಂಡ ವಿಧಿಸುತ್ತಿದ್ದಾರೆ. ಇಲ್ಲಿಯ ಹಳೆ ಕೋರ್ಟ್ ಸರ್ಕಲ್ ಬಳಿ ಮಾಸ್ಕ್ ಧರಸದೆ ಕಾರಿನಲ್ಲಿ ಪ್ರಯಾಣಿಸುತಿದ್ದ ವೈದ್ಯೆಗೆ ಉಪನಗರ ಠಾಣೆ ಪೊಲೀಸರು ದಂಡ ಹಾಕಿದ್ದಾರೆ.

ಬೆಳಿಗ್ಗೆಯಿಂದಲೇ ಪೊಲೀಸರು ಸಾಕಷ್ಟು ರೀತಿಯ ಕೋವೀಡ್ ಹಾಗೂ ವಿಪತ್ತು ನಿರ್ವಹಣೆ ನಿಯಮ ಪಾಲಿಸದವರ ಮೇಲೆ ಮುಲಾಜಿಲ್ಲದೆ ದಂಡ ಹಾಕುತ್ತಿದ್ದರು. ಆದರೆ, ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ವೈದ್ಯರೇ ಮಾಸ್ಕ್ ಧರಿಸಿರಲಿಲ್ಲ ಹೀಗಾಗಿ ಪೊಲೀಸರು ದಂಡ ಹಾಕಿದ್ದಾರೆ.

ಕಾರಿನಲ್ಲಿ ಹೊರಟ್ಟಿದ್ದ ವೈದ್ಯೆ ಮಾಸ್ಕ್ ಧರಿಸಿರಲಿಲ್ಲ. ಆಗ ಉಪನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವಿಚಂದ್ರ್ ಬಡಫಕೀರಪ್ಪನವರ ಹಾಗೂ ಪ್ರೋಬಷನೇರಿ ಪಿಎಸ್ ಐ ಉಮೇಶಗೌಡ ಪಾಟೀಲ ದಂಡ ಕಟ್ಟುವಂತೆ ಹೇಳಿದ್ದಾರೆ. ಆ ಸಂದರ್ಭದಲ್ಲಿ ವೈದ್ಯೆ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ದಂಡದ ರಶೀದಿ ಹರಿದ ಮೇಲೆ ಅನಿವಾರ್ಯವಾಗಿ ದಂಡ ಕಟ್ಟಿ ವೈದ್ಯೆ ತೆರಳಿದ್ದಾರೆ.

ನಗರದ ಹೊಸೂರು ಸರ್ಕಲ್ ಬಳಿಯ ದುರ್ಗಾದೇವಿ ದೇವಸ್ಥಾನದ ಹತ್ತಿರ ಖಾಸಗಿ ಸಂಸ್ಥೆಯ ಮಾರುತಿ ಪಾರ್ಸಲ್ ಸರ್ವಿಸ್ ಲಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಲಾರಿ ಚಾಲಕನಿಗೆ ದಂಡ ವಿಧಿಸಲಾಗಿದೆ.

ನೂರಾರು ಕೆಜಿ ಅನ್ನ ಚಲ್ಲಿ ಮೌಢ್ಯ ಮೆರದ ಜನ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದೆ. ಇಲ್ಲಯವರೆಗೆ ನಗರ ಪ್ರದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆದಿದ್ದ. ಸೋಂಕು ಈಗ ಗ್ರಾಮೀಣ ಭಾಗದಲ್ಲಿ ಕೂಡ ತನ್ನ ಕಬಂಧಬಾಹು ಚಾಚುತ್ತಿದೆ. ಹೀಗಾಗಿ ಸರ್ಕಾರ ಕೊರೊನಾ ಕಟ್ಟಿ ಹಾಕಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇದರ ಮಧ್ಯೆ ಜನರು ಮೌಢ್ಯದ ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ಹಲವೆಡೆ ಜನರು ದೇವರಿಗೆ ಬಲಿ, ಪೂಜೆ, ಹೋಮ – ಹವನ ನಡೆಸುತ್ತಿದ್ದಾರೆ. ಹಲವೆಡೆ ಊರಿನ ನಾಲ್ಕು ದಿಕ್ಕುಗಳಿಗೂ ಮಂತ್ರಿಸಿದ ತೆಂಗಿನ ಕಾಯಿ ಕಟ್ಟಿದ್ದಾರೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಅನ್ನವನ್ನೇ ಮಣ್ಣುಪಾಲು ಮಾಡಿದ್ದಾರೆ.
ಜಲ್ಲೆಯ ಕಗ್ಗಲ್ಲು ಗ್ರಾಮದಲ್ಲಿ ಈ ರೀತಿಯ ಕಾರ್ಯ ನಡೆದಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂರಾರು ಕೆಜಿ ಅನ್ನವನ್ನು ಊರ ಹೊರಗೆ ಎಸೆದಿದ್ದಾರೆ. ಪ್ರತಿ ಮನೆಯಿಂದ ಐದು ಕೆಜಿ ಅಕ್ಕಿಯಿಂದ ಅನ್ನ ಮಾಡಿ ಸಂಗ್ರಹಿಸಿ ರಾತ್ರೋ ರಾತ್ರಿ ನೆಲಕ್ಕೆ ಸುರಿದಿದ್ದಾರೆ.

ಈ ರೀತಿಯಾಗಿ ಅನ್ನ ಎಸೆದರೆ ಸಾಂಕ್ರಾಮಿಕ ರೋಗ ಊರಿಗೆ ಬರುವುದಿಲ್ಲ ಎಂಬುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಸಾಂಕ್ರಾಮಿಕ ರೋಗಗಳು ಬಂದ ಸಂದರ್ಭದಲ್ಲಿ ತಮ್ಮ ಹಿರಿಯರ ಕಾಲದಿಂದಲೂ ಈ ರೀತಿಯ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧನ ಯಾವಾಗ? – ಕಾಂಗ್ರೆಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದರಲ್ಲಿರುವ ವ್ಯಕ್ತಿ ನಾನೇ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ಬಂಧನ ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಲೈಂಗಿಕ ಕ್ರಿಯೆ ನಡೆದಿರುವ ದೃಶ್ಯಾವಳಿಗಳನ್ನು ಹೊಂದಿರುವ ಸಿಡಿಯಲ್ಲಿ ಇರುವ ವ್ಯಕ್ತಿ ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ಬಂಧನ ಯಾವಾಗ ಎಂಬುವುದನ್ನು ಸರ್ಕಾರ ತಿಳಿಸಬೇಕಿದೆ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ನಾನವನಲ್ಲ’ ಎಂದವರು ಈಗ ‘ನಾನೇ ಅವನು’ ಎನ್ನುತ್ತಿದ್ದಾರೆ. ಆ ಸಿಡಿ ಅಸಲಿ ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಅವರು, ಸಿಡಿ ನಕಲಿ ಎಂದು ಹೇಳಿದ್ದೆ? ಎಸ್ ಐಟಿ ರಚನೆ ಮಾಡಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಆರೋಪಿ ಒಪ್ಪಿಕೊಂಡಿದ್ದಾಯಿತು. ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಬಂಧಿಸಿ ಕಾನೂನು ಪಾಲಿಸುವಿರಾ? ಇನ್ನಾದರೂ ನಿಮ್ಮ ಪ್ರಾಮಾಣಿಕತೆ ತೋರಿಸಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಿಡಿ ಲೇಡಿ ಕುಟುಂಬಸ್ಥರಿಗೆ ನೊಟೀಸ್ ನೀಡಿದ ಸಿಸಿಬಿ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾದ ಯುವತಿಯ ಕುಟುಂಬಸ್ಥರಿಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದಾರೆ. ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನಲ್ಲಿ ತಿಳಿಸಿದ್ದಾರೆ.

ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಸಿಡಿ ಯುವತಿಯ ಕುಟುಂಬಸ್ಥರು ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಆ ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಹೀಗಾಗಿ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿ ಕುಟುಂಬಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.
ಮೇ. 21ರಂದು ಸಂತ್ರಸ್ತೆ ಕುಟುಂಬಸ್ಥರಿಗೆ ನೊಟೀಸ್ ನೀಡಲಾಗಿದೆ. ಸಿಸಿಬಿ ಅಧಿಕಾರಿ ವಿಜಯ್ ಕುಮಾರ್ ಅವರು ಯುವತಿ ಕುಟುಂಬಸ್ಥರಿಗೆ ನೀಡಿದ್ದಾರೆ. ಲಾಕ್ ಡೌನ್ ನಂತರ ವಿಚಾರಣೆಗೆ ಹಾಜರಾಗಬೇಕೆಂದು ನೊಟೀಸ್ ನಲ್ಲಿ ಸೂಚಿಸಲಾಗಿದೆ.

ಇತ್ತೀಚೆಗಷ್ಟೇ ರಮೇಶ್ ಜಾರಕಿಹೊಳಿ ಅವರು ಸಿಡಿಯಲ್ಲಿರುವವನು ನಾನೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಹಳ್ಳಿಗಳಿಗೆ ನುಗ್ಗಿದ ಸೋಂಕು…ಸೋಂಕು ರಹಿತ ಕಾಯಿಲೆಗಳಿಂದ ಸಾಯುತ್ತಿರುವ ಜನ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಇಲ್ಲಿಯವರೆಗೆ ನಗರ ಪ್ರದೇಶದಲ್ಲಿ ತನ್ನ ಅಟ್ಟಹಾಸ ಮೆರೆದಿದ್ದ ಮಹಾಮಾರಿ, ಸದ್ಯ ಗ್ರಾಮೀಣ ಭಾಗಕ್ಕೆ ಎಗ್ಗಿಲ್ಲದೆ ಎಂಟ್ರಿ ಕೊಟ್ಟಿದೆ. ಆದರೆ, ಜನರು ಮಾತ್ರ ಆಸ್ಪತ್ರೆಗೆ ಹೋಗದೆ, ಸಾವು – ನೋವುಗಳನ್ನು ತಂದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಳ್ಳಿಗಳಲ್ಲಿ ಚಿತ್ರ – ವಿಚಿತ್ರ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.

ಜಿಲ್ಲೆಯ ಗೋಕಾಕ್ ಹಾಗೂ ಮೂಡಲಗಿ ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 20 ದಿನಗಳಲ್ಲಿ ಕೋವಿಡ್ ಹಾಗೂ ಇನ್ನಿತರ ರೋಗಗಳಿಂದ ಸುಮಾರು 700ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

ಮೂಡಲಗಿ ತಾಲೂಕಿನ ಮುನ್ಯಾಳ, ವಡ್ಡೆರಹಟ್ಟಿ, ರಾಜಾಪುರ, ತುಕ್ಕಾನಟ್ಟಿ ಗ್ರಾಮಗಳಲ್ಲಿಯೇ ಕೇವಲ 15 ದಿನಗಳಲ್ಲಿ ಸುಮಾರು 186 ಜನರು ಸಾವನ್ನಪ್ಪಿದ್ದಾರೆ. ಸರಣಿ ಸಾವಿನಿಂದ ಜನ ಕಂಗಾಲಾಗಿದ್ದಾರೆ.

ಕೊರೊನಾ ಸೇರಿದಂತೆ ಇನ್ನಿತರ ರೋಗಗಳಿಂದ ಜನ ಬಳಲುತ್ತಿದ್ದರೂ ಆಸ್ಪತ್ರೆಗೆ ತೆರಳುತ್ತಿಲ್ಲ. ಹೀಗಾಗಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೇ, ಮನೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಘಟನೆಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮದಲ್ಲಿ 25 ದಿನಗಳಲ್ಲಿ ಸುಮಾರು 15 ಜನ ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆಯ ಕದಡಿ ಗ್ರಾಮದಲ್ಲಿ 10 ದಿನಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದ ಹಳ್ಳಿಗಳಲ್ಲಿನ ಜನ ತುಂಬಾ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.

error: Content is protected !!