Home Blog

ಪತ್ನಿಯನ್ನು ಕೊಂದು ರುಂಡವನ್ನು ಫ್ರಿಡ್ಜ್ʼನಲ್ಲಿಟ್ಟಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು!

0

ಗುವಾಹಟಿ: ಪತ್ನಿಯನ್ನು ಹತ್ಯೆ ಮಾಡಿ, ಆಕೆಯ ತಲೆ ಸೇರಿದಂತೆ ದೇಹದ ಭಾಗಗಳನ್ನು ಫ್ರಿಜ್‌ನಲ್ಲಿ ಬಚ್ಚಿಟ್ಟಿದ್ದಾನೆ ಎನ್ನಲಾದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿರುವ ಘಟನೆ ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು 30 ವರ್ಷದ ರಾಮಾನುಜ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.

ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ರಾಮಾನುಜ್ ಗೋಸ್ವಾಮಿಯನ್ನು ಪೊಲೀಸರು ಹತಿಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ನರಕಾಸುರ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಚಲಿಸುತ್ತಿದ್ದಾಗ, ರಾಮಾನುಜ್ ಏಕಾಏಕಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲು ಯತ್ನಿಸಿ ವಾಹನದಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಜಿಗಿದ ರಾಮಾನುಜ್ ಆಳವಾದ ಕಂದಕಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಪೊಲೀಸರು ತಕ್ಷಣ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ, ವೈದ್ಯರು ರಾಮಾನುಜ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪತ್ನಿಯ ಹತ್ಯೆ ಪ್ರಕರಣ

ಸೆಪ್ಟೆಂಬರ್ 3ರಂದು ಗುವಾಹಟಿಯಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 25 ವರ್ಷದ ಪತ್ನಿ ರಿಯಾ ತಾಲುಕ್ದಾರ್ ಅವರನ್ನು ರಾಮಾನುಜ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು. ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ಹೊಂದಿದ್ದ ರಾಮಾನುಜ್, ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಎನ್ನಲಾಗಿದೆ.

ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ, ಫ್ರಿಜ್‌ನಲ್ಲಿದ್ದ ಕಪ್ಪು ಪಾಲಿಥಿನ್ ಬ್ಯಾಗ್‌ನಲ್ಲಿ ರಿಯಾಳ ಕತ್ತರಿಸಿದ ತಲೆ ಹಾಗೂ ಬೆರಳುಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಾನುಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಹಾಗೂ ಸೆಕ್ಷನ್ 238 ಅಡಿಯಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪ ದಾಖಲಿಸಲಾಗಿತ್ತು.

ಏಳು ದಿನಗಳ ಪೊಲೀಸ್ ಕಸ್ಟಡಿ

ಸೆಪ್ಟೆಂಬರ್ 6ರಂದು ಪೊಲೀಸರಿಗೆ ಶರಣಾಗಿದ್ದ ರಾಮಾನುಜ್‌ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಸೆಪ್ಟೆಂಬರ್ 8ರಂದು ಪೊಲೀಸರು ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದರು.

ಈ ವೇಳೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮೆಯಾಚನೆ ಇಲ್ಲ ಎಂದು ರಾಮಾನುಜ್ ಹೇಳಿದ್ದ ಎನ್ನಲಾಗಿದೆ. ಅಲ್ಲದೆ, ತನ್ನ ಪತ್ನಿಯ ‘ಶುಗರ್ ಡ್ಯಾಡಿ’ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ರಕ್ತದ ಕಲೆಗಳಿದ್ದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪರಾಧ ನಡೆದ ಸಂದರ್ಭದಲ್ಲಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ರಾಮಾನುಜ್ ಪೊಲೀಸರಿಗೆ ತಿಳಿಸಿದ್ದ ಎನ್ನಲಾಗಿದೆ. ಫ್ಲ್ಯಾಟ್ ಪರಿಶೀಲನೆ ವೇಳೆ ಖಾಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ರಾಮಾನುಜ್‌ಗೆ ಮಾದಕ ವಸ್ತುಗಳ ವ್ಯಸನದ ಇತಿಹಾಸವಿತ್ತು, ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಆತ ಮರೆಮಾಚಿದ್ದ ಹಾಗೂ 2019ರಲ್ಲಿ ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂದು ರಿಯಾ ಕುಟುಂಬಸ್ಥರು ಆರೋಪಿಸಿದ್ದರು. ಈ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಕೇಂದ್ರದ ನಿಯಮಾನುಸಾರ ಘೋಷಣೆ: ಸಿಎಂ ಡಿ ಕೆ ಶಿವಕುಮಾರ್

0

ಕನಕಪುರ: “ಈ ಬಾರಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕನಕಪುರದ ನಿವಾಸದಲ್ಲಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕರ್ನಾಟಕ ರಾಜ್ಯದ ಜನತೆಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದು, ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕಡೆ ಪರಿಶೀಲನೆ ನಡೆಯುತ್ತಿದೆ. ಯಾರೂ ಆತುರ ಪಡುವುದು ಬೇಡ” ಎಂದು ತಿಳಿಸಿದರು.

“ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ವಾರ 19,000ಕ್ಕೂ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಉಂಟಾಗಿತ್ತು. 11, 12ರೂ. ಗೆ ವಿದ್ಯುತ್ ಖರೀದಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ರಾತ್ರಿ ವೇಳೆ ವಿದ್ಯುತ್ ಬಳಕೆ ಹೆಚ್ಚಾಗಿದೆ. ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಲು ಸಚಿವರಿಗೆ ಸೂಚಿಸಿರುವೆ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಬರುತ್ತಿದ್ದು, ವಿದ್ಯುತ್, ನೀರು, ಭೂಮಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ” ಎಂದು ವಿವರಿಸಿದರು.

“ವಿಘ್ನ ನಿವಾರಕ ವಿನಾಯಕನ ಹಬ್ಬದ ಸಂದರ್ಭದಲ್ಲಿ ನಾವು ಉತ್ತಮ ಮಳೆ ಆಗುವಂತೆ ಪ್ರಾರ್ಥನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಬರದ ನೋವು ಹೆಚ್ಚಲಿದೆ. ಬೆಲೆಗಳು ಗಗನಕ್ಕೆ ಏರುತ್ತಿದೆ. ಜಲ್ಲಿ ಬೆಲೆ 40% ಏರಿಕೆಯಾಗಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ” ಎಂದರು.

18ರಂದು ದಕ್ಷಿಣ ಕನ್ನಡದಲ್ಲಿ ಸಚಿವ ಸಂಪುಟ ಸಭೆ

“ಇದೇ ತಿಂಗಳು 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು” ಎಂದು ಹೇಳಿದರು.

ಕಲ್ಲಿದ್ದಲು ನಿಕ್ಷೇಪ ಬಳಿ ಥರ್ಮಲ್ ವಿದ್ಯುತ್ ಕೇಂದ್ರ ಸ್ಥಾಪನೆಗೆ ನಿರ್ಧಾರ

ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ತಯಾರಿ ಬಗ್ಗೆ ಕೇಳಿದಾಗ, “ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡಿಲ್ಲ. ಜಾರ್ಜ್ ಅವರು ಸಚಿವರಾದ ಬಳಿಕ ಅನೇಕ ಯೋಜನೆ ರೂಪಿಸಿದ್ದು, ಕಲ್ಲಿದ್ದಲು ನಿಕ್ಷೇಪ ಇರುವ ಕಡೆಗಳಲ್ಲೇ ತುರ್ತಾಗಿ ಥರ್ಮಲ್ ಇಂಧನ ತಯಾರಿಕ ಘಟಕ ಸ್ಥಾಪಿಸಬೇಕು. ಒನ್ ನೇಷನ್ ಒನ್ ಗ್ರಿಡ್ ಮಾಡಲಾಗಿದ್ದು, ಎಲ್ಲೆ ವಿದ್ಯುತ್ ಉತ್ಪಾದನೆಯಾದರೂ ನಾವು ನಮ್ಮ ರಾಜ್ಯಕ್ಕೆ ತರಬಹುದು. ಇದಕ್ಕೆ ಸರಬರಾಜು ವೆಚ್ಚ ಬೀಳಲಿದೆ. ಈ ವಿಚಾರವಾಗಿ ಇಂಧನ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ.

ಬರ, ಕಸ್ತೂರಿ ರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ

ಬರದ ಘೋಷಣೆ ಎಲ್ಲಿಯವರೆಗೆ ಬಂದಿದೆ ಎಂದು ಕೇಳಿದಾಗ, “ಬಿಜೆಪಿಯವರಿಗೆ ರಾಜಕಾರಣವೇ ಹೆಚ್ಚಾಗಿದೆ. ರೈತರ ವಿಚಾರ ಚರ್ಚೆ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ನಮ್ಮ ಶಾಸಕರ ಜೊತೆಗೆ ಬಿಜೆಪಿ ಶಾಸಕರು ಕೂಡ ಬೇಸರ ವ್ಯಕ್ತಪಡಿಸಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಗೆ 21ರಿಂದ 23ರ ವರೆಗೆ ಅಧಿವೇಶನ ಕರೆಯಲಾಗಿದೆ. ಶಾಸಕರು ಗಾಬರಿ ಆಗುವುದು ಬೇಡ. ರಾಜಕಾರಣ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ. ಬರ ಘೋಷಣೆ ಶೀಘ್ರವೇ ಪ್ರಕಟಿಸಲಾಗುವುದು” ಎಂದರು.

ಇಡೀ ದಿನ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೀರಿ ಎಂದು ಕೇಳಿದಾಗ, “ಇದೇ ನಮ್ಮ ಮೂಲ, ಬೇರು. ಭಾನುವಾರ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಿದೆ. ಇಲ್ಲಿ ಇಬ್ಬರು ಸ್ಥಳೀಯರು ಬಿಟ್ಟರೆ ಉಳಿದವರು ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೇರೆ ಹಾಸ್ಟೆಲ್ ಹುಡುಗರು ಹಬ್ಬಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಹೋಗಲು ಸಾಧ್ಯವಾಗಿಲ್ಲ. ನಮ್ಮ ಮನೆ ಮಕ್ಕಳ ಮೇಲೆ ನಿಗಾ ಇಟ್ಟು ಅವರು ತಪ್ಪು ದಾರಿಗೆ ಹೋಗದಂತೆ ಕಾಪಾಡಿಕೊಳ್ಳಬೇಕು” ಎಂದರು.

ಎಲ್ಲರಿಗೂ ಆಹ್ವಾನ ನೀಡಿದ್ದೇವೆ

ಸರ್ಕಾರದ 100 ದಿನಗಳ ಕಾರ್ಯಕ್ರಮಕ್ಕೆ ಹರಿಪ್ರಸಾದ್ ಅವರನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ, “ನಾವು ಆಹ್ವಾನಿಸಿಲ್ಲ ಎಂದು ಹೇಳಿದವರು ಯಾರು? ವಿರೋಧ ಪಕ್ಷಗಳ ಶಾಸಕರು ಸೇರಿದಂತೆ ಎಲ್ಲರನ್ನು ಆಹ್ವಾನಿಸಿದ್ದೇವೆ. ವೇದಿಕೆ ಮೇಲೆ ನಮ್ಮದೇ ಆದ ಶಿಷ್ಟಾಚಾರ ಇರುತ್ತದೆ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಪಕ್ಷದ ಜೊತೆ ಸೇರಿಕೊಂಡೆ ನಾವು ಕೆಲಸ ಮಾಡುತ್ತೇವೆ” ಎಂದರು.

ಪ್ರಜಾಸೇವೆ ಇಲಾಖೆ ಹಾಗೂ ಕಾರ್ಯಕ್ರಮಕ್ಕೆ ಶಾಸಕರು ಭಾಗಿಯಾಗಿಲ್ಲ ಎಂದು ಕೇಳಿದಾಗ, “ಎಲ್ಲರೂ ಆಗುತ್ತಾರೆ. ಕೆಲವರಿಗೆ ಇನ್ನು ಅರ್ಥ ಆಗಿಲ್ಲ. ನಾನು ಈ ಭಾಗದಲ್ಲಿ ಮುಂಚೆಯಿಂದ ಇದನ್ನು ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಈ ಬಗ್ಗೆ ನಿಮಗೆ ಗೊತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಕೆಲವರಿಗೆ ತರಬೇತಿ ನೀಡಬೇಕು. ಜನರು ಹಾಗೂ ಜನ ಪ್ರತಿನಿಧಿಗಳ ನಡುವಿನ ಅಂತರ ಕಡಿಮೆ ಮಾಡಲು ನಾವು ಈ ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ತಿಳಿಸಿದರು. ಸಚಿವ ಸ್ಥಾನ ಖಾಲಿ ಇದ್ದು, ಇದನ್ನು ಭರ್ತಿ ಮಾಡುವುದು ಯಾವಾಗ ಎಂದು ಕೇಳಿದಾಗ, “ಪಕ್ಷ ಹೇಳಿದಾಗ ಮಾಡಲಾಗುವುದು” ಎಂದು ತಿಳಿಸಿದರು.

‘ಬೇಲ್’ ಚಿತ್ರದ ‘ಕುಮಾರಿ’ ಸ್ಪೆಷಲ್ ಸಾಂಗ್ ರಿಲೀಸ್: ಭರ್ಜರಿ ಸ್ಟೆಪ್ ಹಾಕಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ ನಿವೇದಿತಾ ಗೌಡ!

0

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ, ಬಹುತಾರಾಗಣದ ಬಹುನಿರೀಕ್ಷಿತ ಚಿತ್ರ ‘ಬೇಲ್’ ಸಿನಿಮಾದಿಂದ ಬಹುನಿರೀಕ್ಷಿತ ಸ್ಪೆಷಲ್ ಹಾಡು ‘ಕುಮಾರಿ’ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಸಾಂಗ್‌ನಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಮೋಹಕ ಮೈಮಾಟ ಮತ್ತು ಸಖತ್ ಸ್ಟೆಪ್ಸ್‌ಗಳ ಮೂಲಕ ಪಡ್ಡೆಹೈಕ್ಳ ದಿಲ್ ಗೆದ್ದಿದ್ದಾರೆ.

ಸದ್ಯ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಎಲ್ಲರ ಬಾಯಲ್ಲೂ ‘ಕುಮಾರಿ ಕುಮಾರಿ’ ಎಂದು ಗುನುಗುವಂತೆ ಮಾಡಿ ಭರ್ಜರಿ ಕ್ರೇಜ್ ಸೃಷ್ಟಿಸಿದೆ. ಸಿನಿಮಾದ ಕಥಾಹಂದರದಲ್ಲಿ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಬರುವಂತಹ ಈ ಕಲರ್‌ಫುಲ್ ಡ್ಯಾನ್ಸ್ ನಂಬರ್‌ನಲ್ಲಿ ನಿವೇದಿತಾ ಗೌಡ ಅವರೊಂದಿಗೆ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ‘ಲೂಸ್ ಮಾದ’ ಯೋಗಿ ಕೂಡ ಸಖತ್ ಎನರ್ಜಿಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ.

ಯೋಗಿ ಮತ್ತು ನಿವೇದಿತಾ ಅವರ ಡ್ಯಾನ್ಸ್ ಕೆಮಿಸ್ಟ್ರಿ ಹಾಗೂ ಆಕರ್ಷಕ ಮೂವ್ಸ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಟ್ರೆಂಡಿ ಬೀಟ್ಸ್‌ಗೆ ನಿರ್ದೇಶಕ ಪವನ್ ಒಡೆಯರ್ ಕ್ಯಾಚಿ ಸಾಹಿತ್ಯ ಬರೆದಿದ್ದು, ಪ್ರಸಿದ್ಧ ಗಾಯಕರಾದ ನಕಾಶ್ ಅಜೀಜ್ ಹಾಗೂ ಮಂಗ್ಲಿ ಜಂಟಿಯಾಗಿ ತಮ್ಮ ಕಂಠದ ಮೂಲಕ ಹಾಡಿಗೆ ಇನ್ನಷ್ಟು ಹುರುಪು ತುಂಬಿದ್ದಾರೆ.

ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನಡಿ ಖ್ಯಾತ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಸಂಪೂರ್ಣ ಜವಾಬ್ದಾರಿಯನ್ನು ಪವನ್ ಒಡೆಯರ್ ಹೊತ್ತಿದ್ದಾರೆ. ಚಿತ್ರಕ್ಕೆ ವೈದಿ ಎಸ್. ಅವರ ಕಣ್ಮನ ಸೆಳೆಯುವ ಛಾಯಾಗ್ರಹಣವಿದ್ದು, ಶಶಾಂಕ್ ನಾರಾಯಣ್ ಅವರ ಸಂಕಲನವಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಗಟ್ಟಿತನದ ಕಥೆಯನ್ನೊಳಗೊಂಡ ಈ ಸಿನಿಮಾ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡುತ್ತಿದೆ.

ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಸಾಯಿಕುಮಾರ್, ಮಲಯಾಳಂ ಖ್ಯಾತ ನಟ ಜಯರಾಮ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಸೇರಿದಂತೆ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರ ಬಹುದೊಡ್ಡ ತಾರಾಗಣವಿದೆ. ‘ಕುಮಾರಿ’ ಹಾಡಿನ ಮೂಲಕ ಸಿನಿರಸಿಕರ ನಾಡಿಮಿಡಿತ ಹೆಚ್ಚಿಸಿರುವ ಚಿತ್ರತಂಡ, ಗಾಂಧಿ ಜಯಂತಿಯ (ಅಕ್ಟೋಬರ್‌ 2) ವಿಶೇಷ ಸಂದರ್ಭವಾಗಿ ಇದೇ ಅಕ್ಟೋಬರ್ 2ರಂದು ‘ಬೇಲ್’ ಚಿತ್ರವನ್ನು ವಿಶ್ವಾದ್ಯಂತ ಬೆಳ್ಳಿತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

₹75 ಸಾವಿರ ವೇತನ ಪಡೆದು ಕರ್ತವ್ಯ ಲೋಪ ಆರೋಪ: ಗುತ್ತಿಗೆ ವೈದ್ಯಾಧಿಕಾರಿ ಅಂಕಿತಾ ಯರಗಲ್ ವಿರುದ್ಧ ಕ್ರಮ

0

ಬಾಗಲಕೋಟೆ: ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಅಂಕಿತಾ ಯರಗಲ್ ಅವರು ಕರ್ತವ್ಯ ನಿರ್ವಹಿಸದೆ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು ಎಂಬ ಆರೋಪದ ಬೆನ್ನಲ್ಲೇ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಅವರನ್ನು ಗುತ್ತಿಗೆ ವೈದ್ಯಾಧಿಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್ ಆದೇಶಿಸಿದ್ದಾರೆ.

ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರೂ ಇಲಾಖೆಯ ಅಥವಾ ಮೇಲಧಿಕಾರಿಗಳ ಅನುಮತಿ ಹಾಗೂ ಗಮನಕ್ಕೆ ತರದೆ PG ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದರು ಎಂದು ಆರೋಪಿಸಲಾಗಿದೆ. ನಮ್ಮ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸದೆ, ಬಿಡುವಿನ ವೇಳೆಯಲ್ಲಿ ಮಾತ್ರ ಕ್ಲಿನಿಕ್‌ಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದರು ಎಂಬ ಆರೋಪದ ಕುರಿತು ಮಾಧ್ಯಮ ವರದಿ ಪ್ರಸಾರವಾಗಿತ್ತು.

ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ತಿಂಗಳಿಗೆ ₹75 ಸಾವಿರ ಸರ್ಕಾರಿ ವೇತನ ಪಡೆಯುತ್ತಿದ್ದರು ಹಾಗೂ ಕರ್ತವ್ಯ ಲೋಪ ಎಸಗುತ್ತಿದ್ದರು ಎಂಬ ಆರೋಪವೂ ವರದಿಯಾಗಿತ್ತು. ಕಳೆದ ಆಗಸ್ಟ್ 28ರಿಂದ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದರೂ ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡಾ. ಅಂಕಿತಾ ಯರಗಲ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಶಾಸಕ ಉಮೇಶ್ ಮೇಟಿ ಅವರ ಸೊಸೆಯಾಗಿದ್ದಾರೆ. ಮಾಧ್ಯಮಗಳಲ್ಲಿ ಗೈರುಹಾಜರಿ ಮತ್ತು ನಿಯಮ ಉಲ್ಲಂಘನೆಯ ಆರೋಪಗಳ ಕುರಿತು ವರದಿಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಇದೀಗ ಇಲಾಖೆ ಗುತ್ತಿಗೆ ಸೇವೆಯಿಂದ ಅವರನ್ನು ಬಿಡುಗಡೆಗೊಳಿಸಿದೆ.

ಈ ಅವಧಿಯಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದು ಕಂಡುಬಂದರೆ, ನಿಯಮಾನುಸಾರ ಅವರಿಂದಲೇ ಮೊತ್ತವನ್ನು ವಸೂಲಿ ಮಾಡಿಕೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ. ತಮ್ಮ ವಿರುದ್ಧದ ಆದೇಶಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಅಹವಾಲು ಸಲ್ಲಿಸಲು ಅವರಿಗೆ ಸಕ್ಷಮ ಪ್ರಾಧಿಕಾರದ ಮುಂದೆ ಲಿಖಿತ ಅವಕಾಶ ನೀಡಲಾಗಿದೆ.

ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯ ಮೇಲಾಟ: ಜಾರಕಿಹೊಳಿ ಬಣದ ಲೆಕ್ಕಾಚಾರಕ್ಕೆ ಸವದಿ ಬ್ರೇಕ್

0

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನ ತೆರವಾದ ನಿರ್ದೇಶಕ ಸ್ಥಾನಕ್ಕೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಅಥಣಿ ಮೂಲದ ಮುತ್ತಣ್ಣ ಕಾತ್ರಾಳ ಅವರನ್ನು ನೇಮಕ ಮಾಡಲಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಆಪ್ತರಾಗಿರುವ ಕಾತ್ರಾಳ ಅವರ ನೇಮಕ, ಡಿಸಿಸಿ ಬ್ಯಾಂಕ್‌ನಲ್ಲಿ ಜಾರಕಿಹೊಳಿ ಸಹೋದರರ ಬಣದ ರಾಜಕೀಯ ಲೆಕ್ಕಾಚಾರಕ್ಕೆ ತಿರುಗೇಟು ಎಂಬ ಚರ್ಚೆಗೆ ಕಾರಣವಾಗಿದೆ.

ಡಿಸಿಸಿ ಬ್ಯಾಂಕ್‌ನ ಖಾಲಿಯಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕುರುಬ ಸಮುದಾಯದ ಮುಖಂಡರೊಬ್ಬರನ್ನು ನೇಮಕ ಮಾಡುವ ಉದ್ದೇಶವನ್ನು ಜಾರಕಿಹೊಳಿ ಸಹೋದರರು ಹೊಂದಿದ್ದರು ಎನ್ನಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ತೆರವಾದ ಸ್ಥಾನ ಯಾರ ಪಾಲಾಗಲಿದೆ ಎಂಬುದು ಸಹಕಾರ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿತ್ತು.

ಈ ಬೆಳವಣಿಗೆಯ ನಡುವೆಯೇ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಇಲಾಖಾ ವ್ಯಾಪ್ತಿಯ ಮೂಲಕ ಅಪೆಕ್ಸ್ ಬ್ಯಾಂಕ್‌ನ ಪ್ರತಿನಿಧಿಯಾಗಿ ಮುತ್ತಣ್ಣ ಕಾತ್ರಾಳ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸವದಿ ಅವರು ಸದ್ದಿಲ್ಲದೆ ನಡೆಸಿದ ಈ ರಾಜಕೀಯ ನಡೆ ಜಾರಕಿಹೊಳಿ ಬಣದ ಲೆಕ್ಕಾಚಾರವನ್ನು ಬದಲಿಸಿದೆ ಎನ್ನಲಾಗುತ್ತಿದೆ.

ಅಥಣಿ ಮೂಲದ ಮುತ್ತಣ್ಣ ಕಾತ್ರಾಳ ಅವರು ಕಳೆದ ಸುಮಾರು ಮೂರು ದಶಕಗಳಿಂದ ಲಕ್ಷ್ಮಣ ಸವದಿ ಅವರ ನಂಬಿಕಸ್ಥ ಹಾಗೂ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್‌ಗೆ ಪ್ರವೇಶ ಪಡೆದಿರುವುದು ಬೆಳಗಾವಿ ಜಿಲ್ಲೆಯ ಸಹಕಾರ ರಾಜಕಾರಣದಲ್ಲಿ ಸವದಿ ಅವರ ಪ್ರಭಾವಕ್ಕೆ ಮತ್ತೊಂದು ಉದಾಹರಣೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ನೇಮಕದ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮ ಬಣದ ಹಿಡಿತವನ್ನು ಬಲಪಡಿಸುವಲ್ಲಿ ಸವದಿ ಯಶಸ್ವಿಯಾಗಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

IPL 2027ಕ್ಕೂ ಮುನ್ನ CSK ತಂಡದಲ್ಲಿ ಮಹತ್ವದ ಬದಲಾವಣೆ: ಧೋನಿ ಸಭೆಯಲ್ಲಿ ಹೊಸ ಹೆಡ್ ಕೋಚ್ ಆಯ್ಕೆ ಅಂತಿಮ?

0

ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ತಂಡದ ದೀರ್ಘಕಾಲದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಇದೀಗ ಸಿಎಸ್‌ಕೆಯ ಮುಂದಿನ ಹೆಡ್ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಪ್ರಸ್ತುತ ಅಮೆರಿಕದಲ್ಲಿರುವ ಮಾಜಿ ನಾಯಕ ಎಂ.ಎಸ್. ಧೋನಿ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ತವರಿಗೆ ಆಗಮಿಸಿದ ಬಳಿಕ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಜೊತೆ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ತಂಡದ ಮುಂದಿನ ಕೋಚ್ ಆಯ್ಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.

ವಿದೇಶಿ ಕೋಚ್ ಮೇಲೆ ಸಿಎಸ್‌ಕೆ ಕಣ್ಣು

ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಈಗಾಗಲೇ ಒಬ್ಬ ಪ್ರಮುಖ ವಿದೇಶಿ ಕೋಚ್ ಅಭ್ಯರ್ಥಿಯನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಕೋಚ್ ಮತ್ತೊಂದು ಐಪಿಎಲ್ ಫ್ರಾಂಚೈಸಿಯೊಂದಿಗೂ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ, ಈ ಹೈ-ಪ್ರೊಫೈಲ್ ಕೋಚ್ ಅವರನ್ನು ತಂಡಕ್ಕೆ ಕರೆತರುವ ನಿಟ್ಟಿನಲ್ಲಿ ಸಿಎಸ್‌ಕೆ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.

ದೇಶಿ ಕೋಚ್ ಪರ ಧೋನಿ?

ಮತ್ತೊಂದೆಡೆ, ಮ್ಯಾನೇಜ್‌ಮೆಂಟ್ ವಿದೇಶಿ ಕೋಚ್ ಆಯ್ಕೆಗೆ ಒಲವು ತೋರಿಸುತ್ತಿದ್ದರೆ, ಎಂ.ಎಸ್. ಧೋನಿ ಭಾರತೀಯ ಕೋಚಿಂಗ್ ಸಿಬ್ಬಂದಿಯನ್ನು ಹೊಂದುವತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಭಾರತೀಯ ಬ್ಯಾಟರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಕೋಚ್ ಹೇಮಂಗ್ ಬದಾನಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಧೋನಿ ಭಾಗವಹಿಸಲಿರುವ ಸಭೆಯಲ್ಲಿ ದೇಶಿ ಅಥವಾ ವಿದೇಶಿ ಕೋಚ್ ಆಯ್ಕೆ ವಿಚಾರಕ್ಕೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಹರಾಜು ತಂತ್ರದ ಬಗ್ಗೆಯೂ ಚರ್ಚೆ

ಸೆಪ್ಟೆಂಬರ್ 22ರ ಸುಮಾರಿಗೆ ನಡೆಯಲಿದೆ ಎನ್ನಲಾಗಿರುವ ಈ ಮಹತ್ವದ ಸಭೆಯಲ್ಲಿ ಕೋಚ್ ಆಯ್ಕೆಯಷ್ಟೇ ಅಲ್ಲದೆ, ಮುಂಬರುವ ಹರಾಜಿನ ತಂತ್ರಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾರನ್ನು ಹರಾಜಿನಲ್ಲಿ ಗುರಿಯಾಗಿಸಬೇಕು ಮತ್ತು ತಂಡವನ್ನು ಯಾವ ರೀತಿಯಲ್ಲಿ ಬಲಪಡಿಸಬೇಕು ಎಂಬುದರ ಕುರಿತು ಧೋನಿ ಹಾಗೂ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಚರ್ಚಿಸುವ ಸಾಧ್ಯತೆಯಿದೆ.

ಒಟ್ಟಿನಲ್ಲಿ, ಐಪಿಎಲ್ 2027ಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ದೊಡ್ಡ ಮಟ್ಟದ ಮರುಸಂಘಟನೆ ನಡೆಯುವ ಸೂಚನೆ ಸಿಕ್ಕಿದೆ. ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ಬಳಿಕ ಹೊಸ ಹೆಡ್ ಕೋಚ್ ಆಯ್ಕೆ ಹಾಗೂ ಹರಾಜಿನ ತಂತ್ರಗಳು ಸಿಎಸ್‌ಕೆಯ ಮುಂದಿನ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಸೆಪ್ಟೆಂಬರ್ 22ರ ಸಭೆಯ ಬಳಿಕ ‘ಯಲ್ಲೋ ಆರ್ಮಿ’ಯ ಮುಂದಿನ ಹೆಜ್ಜೆ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಬಿ.ಕೆ. ಹರಿಪ್ರಸಾದ್ʼಗೆ ಆಹ್ವಾನಿಸಿಲ್ಲ ಎಂದು ಯಾರು ಹೇಳಿದ್ದು?: 100 ದಿನಗಳ ಕಾರ್ಯಕ್ರಮದ ಅಸಮಾಧಾನದ ಸುದ್ದಿಗೆ ಸಿಎಂ ಡಿಕೆಶಿ ಸ್ಪಷ್ಟನೆ!

0

ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ಧೂರಿಯಾಗಿ ‘ಶತಕದ ಸಂಭ್ರಮ’ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಆಹ್ವಾನ ನೀಡಿಲ್ಲ ಹಾಗೂ ಅವರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

“ಎಲ್ಲಾ ಪಕ್ಷದ ಶಾಸಕರನ್ನೂ ಕರೆದಿದ್ದೇವೆ”: ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, “ಸರ್ಕಾರದ 100 ದಿನದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷಗಳ ಶಾಸಕರನ್ನೂ ಆಹ್ವಾನಿಸಿದ್ದೇವೆ.

ನಮ್ಮ ಪಕ್ಷದ ಅಧ್ಯಕ್ಷರಿಗೂ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು. ಪ್ರೋಟೋಕಾಲ್ (Protocol) ನಿಯಮಗಳಿಂದಾಗಿ ಅವರನ್ನು ವೇದಿಕೆಯ ಮೇಲೆ ಕರೆದಿಲ್ಲವೇ ಹೊರತು, ಬಿ.ಕೆ. ಹರಿಪ್ರಸಾದ್‌ಗೆ ಆಹ್ವಾನ ನೀಡಿಲ್ಲ ಎಂದು ಯಾರು ಹೇಳಿದ್ದು?” ಎಂದು ಪ್ರಶ್ನಿಸಿದರು.

ಪಕ್ಷ ಹಾಗೂ ಸರ್ಕಾರ ಒಂದಾಗಿ ಕಾರ್ಯನಿರ್ವಹಣೆ: ಮುಂದುವರಿದು ಮಾತನಾಡಿದ ಅವರು, ಪಕ್ಷ ಹಾಗೂ ಸರ್ಕಾರ ಜೊತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿವೆ. ಇದರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಹರಿದಾಡುತ್ತಿದ್ದ ಎಲ್ಲಾ ವದಂತಿಗಳು ಹಾಗೂ ಗೊಂದಲಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ: ₹3 ಕೋಟಿಗೂ ಅಧಿಕ ನಗದು, ವಿದೇಶಿ ಕರೆನ್ಸಿ ಜಪ್ತಿ ಕುರಿತು ಮಹತ್ವದ ಸಭೆ

0

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ED) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. ಜಾಲಹಳ್ಳಿಯಲ್ಲಿರುವ ಇಡಿ ಕಚೇರಿಯಲ್ಲಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ದಾಳಿ ವೇಳೆ ಜಪ್ತಿ ಮಾಡಲಾಗಿರುವ ನಗದು, ವಿದೇಶಿ ಕರೆನ್ಸಿ ಹಾಗೂ ವಿವಿಧ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ದೆಹಲಿಯಿಂದ ಆಗಮಿಸಿರುವ ಇಡಿ ಹಿರಿಯ ಅಧಿಕಾರಿಗಳು, ಸ್ಪೆಷಲ್ ಡೈರೆಕ್ಟರ್ ಹಾಗೂ ತಾಂತ್ರಿಕ ಸಮಿತಿ ತಂಡ ಸಭೆಯಲ್ಲಿ ಭಾಗವಹಿಸಿದೆ. ತನಿಖೆಯ ಮುಂದಿನ ಹಂತಗಳು, ವಿಚಾರಣೆ ನಡೆಸುವ ವಿಧಾನ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ₹3 ಕೋಟಿಗೂ ಅಧಿಕ ನಗದು, ಗಣನೀಯ ಪ್ರಮಾಣದ ವಿದೇಶಿ ಕರೆನ್ಸಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಜಪ್ತಿ ಮಾಡಲಾದ ಹಣ ಮತ್ತು ದಾಖಲೆಗಳ ಕುರಿತು ಅಧಿಕಾರಿಗಳು ಮರುಪರಿಶೀಲನೆ ನಡೆಸಿದ್ದಾರೆ.

ಇದರ ಜೊತೆಗೆ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ತನಿಖೆಯ ಮುಂದಿನ ಹಂತದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದೆಹಲಿಯಿಂದ ಬಂದಿರುವ ಇಡಿ ಅಧಿಕಾರಿಗಳ ತಂಡ ಇನ್ನೂ ಎರಡು ದಿನ ಬೆಂಗಳೂರಿನಲ್ಲೇ ಉಳಿದು ದಾಖಲೆಗಳ ಪರಿಶೀಲನೆ ಮುಂದುವರಿಸಲಿದೆ.

ಇಡಿ ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ವಿದೇಶಗಳಲ್ಲಿ ಅಕ್ರಮ ಹೂಡಿಕೆ ನಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ನಿರ್ದಿಷ್ಟವಾಗಿ ಆಫ್ರಿಕಾದ ಕಾಂಗೋದಲ್ಲಿರುವ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಶೇ.40ರಷ್ಟು ಪಾಲುದಾರಿಕೆ ಇದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಇಡಿ ತಿಳಿಸಿದೆ.

ಅಲ್ಲದೆ, ಪಶ್ಚಿಮ ಬಂಗಾಳದ ಮೂಲಸೌಕರ್ಯ ಯೋಜನೆಗಳ ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಕಿಕ್‌ಬ್ಯಾಕ್ ಹಣವನ್ನು ನೇರವಾಗಿ ಸ್ವೀಕರಿಸದೆ, ಆಫ್ರಿಕಾದ ಕಂಪನಿಗಳಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಆರೋಪಗಳ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಲಂಚ ಅಥವಾ ಕಿಕ್‌ಬ್ಯಾಕ್ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಕರೆಯಲಾದ ಟೆಂಡರ್‌ಗಳು, ಗುತ್ತಿಗೆ ಪಡೆದ ಕಂಪನಿಗಳು, ಟೆಂಡರ್ ಮೊತ್ತ ಹಾಗೂ ನಿರ್ದಿಷ್ಟ ಕಂಪನಿಗಳಿಗೆ ಗುತ್ತಿಗೆ ನೀಡಲು ಹಣ ಪಡೆದಿರುವ ಆರೋಪಗಳ ಕುರಿತು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಸೆಪ್ಟೆಂಬರ್ 13ರಂದು ಕೂಡ ಇಡಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದರು. ಇದೀಗ ಸೆಪ್ಟೆಂಬರ್ 14ರಂದು ಜಾಲಹಳ್ಳಿ ಇಡಿ ಕಚೇರಿಯಲ್ಲಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ವಿಚಾರಣೆ ಹಾಗೂ ಕ್ರಮಗಳು ನಡೆಯುವ ಸಾಧ್ಯತೆ ಇದೆ.

ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!

0

ಬೆಂಗಳೂರು: 17 ವರ್ಷದ ಹದಿಹರೆಯದ ಬಾಲಕಿಯನ್ನು ಅಪಹರಿಸಿ, ಲಾಡ್ಜ್‌ವೊಂದರಲ್ಲಿ 10 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಿ ಪದೇ ಪದೇ ಅತ್ಯಾಚಾರ ನಡೆಸಿದ 2017ರ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯ-3ರ ನ್ಯಾಯಾಧೀಶರಾದ ರಾಮ ನಾಯಕ್ ಅವರು, ಮೊದಲನೇ ಆರೋಪಿ ರಾಘವೇಂದ್ರ ಹಾಗೂ ಮೂರನೇ ಆರೋಪಿ ಸಾಗರ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಗೆ ₹7 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ 2 ಮತ್ತು 4ನೇ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಜೆ.ಆರ್. ರಮೇಶ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಸರ್ಕಾರಿ ಅಭಿಯೋಜನೆಯ ಪ್ರಕಾರ, 2017ರ ಅಕ್ಟೋಬರ್ 26ರಂದು ರಾತ್ರಿ ಸುಮಾರು 8 ಗಂಟೆಗೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿ ಘಟನೆ ನಡೆದಿತ್ತು. ಒಡಿಶಾ ಮೂಲದ ಸಂತ್ರಸ್ತೆ ಕೆ.ಆರ್. ಪುರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಸ್ನೇಹಿತೆಗಾಗಿ ರೈಲು ನಿಲ್ದಾಣದ ಬಳಿ ಕಾಯುತ್ತಿದ್ದಳು.

ಈ ವೇಳೆ ಅಲ್ಲಿಗೆ ಬಂದ ರಾಘವೇಂದ್ರ ಮತ್ತು ಸಾಗರ್, ಸಂತ್ರಸ್ತೆಯ ಸ್ನೇಹಿತೆ ಲಾಡ್ಜ್‌ನಲ್ಲಿ ಇದ್ದಾಳೆ ಹಾಗೂ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾಳೆ ಎಂದು ನಂಬಿಸಿ, ಸಂತ್ರಸ್ತೆಯನ್ನು ದಾರಿ ತಪ್ಪಿಸಿದ್ದರು ಎನ್ನಲಾಗಿದೆ. ಬಳಿಕ ಆಕೆಯನ್ನು ಲಾಡ್ಜ್‌ನ ಕೊಠಡಿ ಸಂಖ್ಯೆ 6ಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ನಂತರ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಂಜುನಾಥ್ ಕೂಡ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಸಂತ್ರಸ್ತೆ ಕಿರುಚಿಕೊಂಡಾಗ ಲಾಡ್ಜ್ ಮ್ಯಾನೇಜರ್ ಅಲ್ಲಿಗೆ ಬಂದಿದ್ದು, ಘಟನೆ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆರೋಪಿಗಳು ಮ್ಯಾನೇಜರ್‌ಗೂ ಸಂತ್ರಸ್ತೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹಾಗೂ ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳು ಸಂತ್ರಸ್ತೆಯನ್ನು 10 ದಿನಗಳ ಕಾಲ ಕೊಠಡಿಯಲ್ಲೇ ಅಕ್ರಮವಾಗಿ ಬಂಧನದಲ್ಲಿರಿಸಿ, ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಈ ಅವಧಿಯಲ್ಲಿ ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿಸಲಾಗಿದೆ.

ನಂತರ ಸಂತ್ರಸ್ತೆಯ ತಂದೆ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್‌ಗಳಾದ ಎಚ್. ಜಯರಾಜ್ ಮತ್ತು ಚನ್ನೇಶ್ ಅವರು ತನಿಖೆ ನಡೆಸಿ, POCSO ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ರಾಘವೇಂದ್ರ ಮತ್ತು ಸಾಗರ್ ಅವರನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.

ಕುವೆಂಪುನಗರದಲ್ಲಿ ಸಿದ್ದರಾಮಯ್ಯ ಕುಟುಂಬದ ಹೊಸ ನಿವಾಸ: ಗಣೇಶ ಚತುರ್ಥಿಯಂದು ಗೃಹಪ್ರವೇಶ

0

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನಲ್ಲಿ ನೂತನ ನಿವಾಸಕ್ಕೆ ಗೃಹಪ್ರವೇಶ ಮಾಡಿದೆ. ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನೂತನ ಬಂಗಲೆಯಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿತು.

80X120 ಅಡಿ ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ಬಂಗಲೆಯನ್ನು ನಿರ್ಮಿಸಲಾಗಿದ್ದು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಬಹುಕಾಲದ ಬಯಕೆಯಂತೆ ಮೈಸೂರಿನಲ್ಲಿ ಸ್ವಂತ ಮನೆ ನಿರ್ಮಾಣವಾಗಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು.

ಅಧಿಕೃತ ಪ್ರವಾಸ ಪಟ್ಟಿ ಇಲ್ಲದೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕುಟುಂಬದ ಸದಸ್ಯರೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹಿಂದಿನ ರಾತ್ರಿ ನೂತನ ಮನೆಯಲ್ಲಿ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಗಿದ್ದು, ಬೆಳಗ್ಗೆಯೂ ಪೂಜಾ ವಿಧಿ-ವಿಧಾನಗಳನ್ನು ಮುಂದುವರಿಸಿ ಗೃಹಪ್ರವೇಶ ಪೂರ್ಣಗೊಳಿಸಲಾಯಿತು.

ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರೂ ಮೈಸೂರಿನಲ್ಲಿ ಇದುವರೆಗೆ ಸ್ವಂತ ಮನೆ ಹೊಂದಿರಲಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು.

ಇದೀಗ ಮೈಸೂರಿನಲ್ಲಿ ಸ್ವಂತ ನಿವಾಸ ನಿರ್ಮಾಣವಾಗಿದ್ದು, ಪತ್ನಿ ಪಾರ್ವತಿ ಅವರ ಬಹುದಿನಗಳ ಆಸೆಯೂ ಈಡೇರಿದೆ. ನೂತನ ಮನೆಯ ಗೃಹಪ್ರವೇಶವನ್ನು ಕುಟುಂಬಸ್ಥರು ಸರಳವಾಗಿ ನೆರವೇರಿಸಿದ್ದಾರೆ.