ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆಯಾಗಿರುವುದು ರಾಜ್ಯಕ್ಕೆ ತಲೆತಗ್ಗಿಸುವ ಸಂಗತಿ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಭೇಟಿಯಂತಹ ಅತ್ಯಂತ ಮಹತ್ವದ ಕಾರ್ಯಕ್ರಮಕ್ಕೆ ಸಮರ್ಪಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಪ್ರಧಾನಮಂತ್ರಿಯವರಿಗೂ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಈ ಘಟನೆ ಕರ್ನಾಟಕದ ಗೌರವಕ್ಕೆ ಧಕ್ಕೆಯುಂಟುಮಾಡಿದ್ದು, ರಾಜ್ಯದ ಭದ್ರತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ ಎಂದು ಟೀಕಿಸಿದರು.
ಜಿಬಿಎ ಚುನಾವಣೆಯನ್ನು ಮುಂದೂಡುವಂತೆ ಸರ್ಕಾರ ಮನವಿ ಮಾಡಿರುವ ವಿಚಾರಕ್ಕೂ ಅರಗ ಜ್ಞಾನೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಇದು ಕಾಂಗ್ರೆಸ್ನ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಪಂಚರಾಜ್ಯ ಚುನಾವಣಾ ಫಲಿತಾಂಶಗಳಿಂದ ಕಾಂಗ್ರೆಸ್ ದೃತಿಗೆಟ್ಟು ಹೋಗಿದ್ದು, ಜನರ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದೆ ಚುನಾವಣೆ ಮುಂದೂಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಿದರು. ಇದು ಜನಾಭಿಪ್ರಾಯದಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವಾಗಿದ್ದು, ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

