Home Blog

ಬೆಂಗಳೂರಿನಲ್ಲಿ ಫುಟ್​ಪಾತ್​ ತೆರವು ಕಾರ್ಯಾಚರಣೆ ಆರಂಭ! ಪಾದಚಾರಿಗಳಿಗೆ ರಿಲೀಫ್

ಬೆಂಗಳೂರು: ಬೃಹತ್ ಬೆಂಗಳೂರು ಪ್ರಾಧಿಕಾರ ನಗರದಾದ್ಯಂತ ಫುಟ್‌ಪಾತ್‌ಗಳ ಮೇಲೆ ನಡೆದಿರುವ ಒತ್ತುವರಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ.

ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಈ ಕಾರ್ಯಾಚರಣೆ ಆರಂಭವಾಗಿದ್ದು, ಬೆಳಗ್ಗೆ 9:30ಕ್ಕೆ ಜೆಸಿಬಿಗಳ ಸಹಾಯದಿಂದ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ಬೆಂಗಾವಲಿನಲ್ಲಿ ಕಾರ್ಯಾಚರಣೆ ನಡೆಯಿತು.

ವಾರ್ಡ್ ನಂ.153 ವ್ಯಾಪ್ತಿಯ ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್ ವರೆಗೆ ಅಂಗಡಿಗಳು ಹಾಗೂ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ನಡೆದಿದ್ದ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಭವಿಷ್ಯದಲ್ಲಿ ಮತ್ತೆ ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಗೆ ನರಕದಂತಾದ ಬೆಳಗಾವಿ-ಗೋವಾ ಹೆದ್ದಾರಿ: ಬಸ್ ಸಿಲುಕಿ ಪ್ರಯಾಣಿಕರ ಪರದಾಟ

ಬೆಳಗಾವಿ: ಸತತ ಮಳೆಯಿಂದಾಗಿ ಬೆಳಗಾವಿ–ಗೋವಾ ಹೆದ್ದಾರಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ವರಕಡ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಕೆಸರಿನಲ್ಲಿ ಸಿಲುಕಿದ ಘಟನೆ ನಡೆದಿದೆ.

ಬೆಳಗಾವಿಯಿಂದ ಗೋವಾ ಕಡೆಗೆ ಹೋಗುತ್ತಿದ್ದ ಬಸ್ ವರಕಡ ಬಳಿ ಬರುತ್ತಿದ್ದಾಗ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿವೆ. ಇದರಿಂದ ಬಸ್ ಮುಂದೆ ಹೋಗಲು ಸಾಧ್ಯವಾಗದೆ ನಡುರಸ್ತೆಯಲ್ಲೇ ನಿಂತಿದೆ.

ಚಾಲಕ ಬಸ್ ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಬಸ್ ಕೆಸರಿನಲ್ಲಿ ಸಿಲುಕಿದ್ದರಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಸ್ಥಳೀಯರ ಸಹಾಯದಿಂದ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬಸ್ ಅನ್ನು ಹೊರತೆಗೆದಿದ್ದಾರೆ.

ಈ ವೇಳೆ ಪ್ರಯಾಣಿಕರು ಮಳೆಯಲ್ಲೇ ರಸ್ತೆಬದಿಯಲ್ಲಿ ನಿಂತು ತೊಂದರೆ ಅನುಭವಿಸಿದ್ದಾರೆ.

ಈ ಹೆದ್ದಾರಿ ಕರ್ನಾಟಕ–ಗೋವಾ ನಡುವಿನ ಪ್ರಮುಖ ರಸ್ತೆ ಆಗಿದ್ದು, ಅದರ ದುಸ್ಥಿತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮುಂಗಾರು ಅಬ್ಬರಕ್ಕೆ ಕರ್ನಾಟಕ ತತ್ತರ; ಕರಾವಳಿ-ಮಲೆನಾಡಿಗೆ ಭಾರೀ ಮಳೆ ಎಚ್ಚರಿಕೆ, 10 ಜಿಲ್ಲೆಗಳಿಗೆ ಅಲರ್ಟ್

0

ಮಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮುಂದಿನ ಕೆಲ ದಿನಗಳ ಕಾಲ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಇದೇ ವೇಳೆ ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಸಜ್ಜಾಗುವಂತೆ ಸೂಚಿಸಲಾಗಿದೆ.

ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಪ್ರಾದೇಶಿಕ ಮುನ್ಸೂಚನೆಯ ಪ್ರಕಾರ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಭಾರೀ ಮಳೆಯಾಗಲಿದ್ದು, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ಕೋಲಾರ ಹಾಗೂ ತುಮಕೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ನದಿ, ಹೊಳೆ, ಜಲಪಾತಗಳ ಬಳಿ ತೆರಳುವುದನ್ನು ತಪ್ಪಿಸಬೇಕು. ಹಳೆಯ ಮರಗಳು, ವಿದ್ಯುತ್ ಕಂಬಗಳು ಹಾಗೂ ಅಪಾಯಕಾರಿಯಾದ ಕಟ್ಟಡಗಳ ಸಮೀಪ ನಿಲ್ಲದಂತೆ ಸೂಚಿಸಲಾಗಿದ್ದು, ಸ್ಥಳೀಯ ಆಡಳಿತದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಕಂಕನಾಡಿಯಲ್ಲಿ ಮಳೆ ತಂದ ದುರಂತ: ಮನೆ ಮೇಲ್ಚಾವಣಿ ಕುಸಿದು ಮೂವರು ಬಲಿ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿಯಲ್ಲಿ ನಿರಂತರ ಮಳೆ ಭೀಕರ ದುರಂತಕ್ಕೆ ಕಾರಣವಾಗಿದ್ದು, ಹಳೆಯ ಹಂಚಿನ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದ ಕಟ್ಟಡದ ಗೋಡೆಗಳು ದುರ್ಬಲಗೊಂಡಿದ್ದರಿಂದ ಬುಧವಾರ ಮುಂಜಾನೆ ಮನೆ ಏಕಾಏಕಿ ಕುಸಿದು ಬಿದ್ದಿದೆ. ದುರಂತದ ವೇಳೆ ಮನೆಯೊಳಗೆ ಮಲಗಿದ್ದವರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಕುಸಿದ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸವಾಗಿದ್ದವು. ಬಿಹಾರ ಮೂಲದ ಲಾಲ್ ಬಾಬು ಕುಟುಂಬದ 8 ವರ್ಷದ ಅನಾಮಿಕ ಚೌರಾಸಿಯಾ ಹಾಗೂ 4 ವರ್ಷದ ಪರಿ ಮೃತಪಟ್ಟಿದ್ದು, ಲಾಲ್ ಬಾಬು ಮತ್ತು ಪತ್ನಿ ಇಂದು ಬದುಕುಳಿದಿದ್ದಾರೆ. ಮತ್ತೊಂದು ಕುಟುಂಬದ ಸದಸ್ಯೆ 46 ವರ್ಷದ ಶಾಂತಾ ಕೂಡ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾಡಳಿತ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ. ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಮನೆ ಮಾಲೀಕರಿಗೆ ನಿಯಮಾನುಸಾರ ನೆರವು ನೀಡುವ ಪ್ರಕ್ರಿಯೆಯೂ ಆರಂಭವಾಗಲಿದೆ.

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಯು.ಟಿ. ಖಾದರ್ ದೆಹಲಿ ಪ್ರವಾಸ ಸ್ಥಗಿತಗೊಳಿಸಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ವೇಗಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿ ಸೋಮಶೇಖರ್ ರೆಡ್ಡಿಗೆ ಚಾಕು ಇರಿತ!

ಬೆಂಗಳೂರು: ಜಿಬಿಎ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಜಯನಗರದಲ್ಲಿ ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜೂನ್ 24ರ ಸಂಜೆ ಜಯನಗರ 9ನೇ ಬ್ಲಾಕ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಿ ಈ ಘಟನೆ ನಡೆದಿದ್ದು, ಸೋಮಶೇಖರ್ ರೆಡ್ಡಿ ಕೆಲಸ ಸಂಬಂಧ ಸ್ಥಳಕ್ಕೆ ಬಂದಿದ್ದ ವೇಳೆ ಆಟೋದಲ್ಲಿ ಆಗಮಿಸಿದ ಐವರ ಗುಂಪು ಅವರೊಂದಿಗೆ ಗಲಾಟೆ ನಡೆಸಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಹಾಗೂ ಶಂಕರ್ ಎಂಬ ಐವರನ್ನು ಬಂಧಿಸಿದ್ದಾರೆ.

ಸೋಮಶೇಖರ್ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಮುಂಬರುವ ಜಿಬಿಎ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಹಲ್ಲೆಯ ಹಿಂದೆ ರಾಜಕೀಯ ಕಾರಣಗಳ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಎಚ್‌.ಕೆ.ಪಿಗೆ ಸಚಿವ ಸ್ಥಾನ: ಹೊಳಲಮ್ಮದೇವಿಗೆ 125 ಇಡುಗಾಯಿಗಳ ಹರಕೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಎಚ್‌.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿ 125 ಇಡುಗಾಯಿಗಳನ್ನು ಒಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ವಿಶೇಷ ಪೂಜೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಗುರುನಾಥ ದಾನಪ್ಪನವರ, ಎಚ್‌.ಕೆ. ಪಾಟೀಲ ಅವರು ಹಲವು ದಶಕಗಳಿಂದ ಪ್ರಾಮಾಣಿಕ ರಾಜಕಾರಣ ಹಾಗೂ ಜನಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಶಿರಹಟ್ಟಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ ಎಂದು ಹೇಳಿದರು.

ಶ್ರೀ ಹೊಳಲಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸುಮಾರು ₹2 ಕೋಟಿ ಅನುದಾನ ನೀಡುವ ಮೂಲಕ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ ಮತ್ತು ಅಭಿವೃದ್ಧಿ ದೃಷ್ಟಿಕೋನವನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಯುವ ಮುಖಂಡ ಪಕ್ಕೀರೇಶ ಮ್ಯಾಟಣ್ಣವರ ಮಾತನಾಡಿ, ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್‌.ಕೆ. ಪಾಟೀಲ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯೂ ಇದೇ ಆಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಧ್ರುವರಾಜ ಹೊನ್ನಪ್ಪನವರ, ತಿಪ್ಪಣ್ಣ ಸಂಶಿ, ಫಕೀರೇಶ ನಡುವಿನಕೇರಿ, ಹಮೀದ ಸನದಿ, ರಘು ಶೆಟ್ರಡ್ಡಿ, ನಾಗರಾಜ ಪೋತರಾಜ, ಪ್ರಕಾಶ ಹೋರಿ, ಚಂದ್ರು ಪೋತರಾಜ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರು ಹುಣ್ಣಿಮೆಯಲ್ಲಿ ರಂಗೇರಿದ ಹೋರಿಕರ ಓಟ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದಲ್ಲಿ ಕಾರು ಹುಣ್ಣಿಮೆ ಅಂಗವಾಗಿ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾಗಿರುವ ಸಾಂಪ್ರದಾಯಿಕ ಹೋರಿಕರ ಎತ್ತುಗಳ ಓಟದ ಸ್ಪರ್ಧೆ ಅದ್ಧೂರಿಯಾಗಿ ನಡೆಯಿತು.

ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ರೈತರು ತಮ್ಮ ಹೋರಿಕರೊಂದಿಗೆ ಭಾಗವಹಿಸಿದ್ದರು. ಸುಮಾರು 500 ಮೀಟರ್ ದೂರದ ಓಟದಲ್ಲಿ ಹೋರಿಕರು ತಮ್ಮ ವೇಗ, ಸಾಮರ್ಥ್ಯ ಹಾಗೂ ತರಬೇತಿಯನ್ನು ಪ್ರದರ್ಶಿಸಿ ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಸ್ಪರ್ಧೆಯಲ್ಲಿ ಚಿಂತಪಳ್ಳಿ ಪಾಂಡು ಅವರ ಹೋರಿಕರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಕಾಳೇ ವಾದನ ಹೇಮಣ್ಣ, ಬಾರಿಕರ್ ಗಂಗಪ್ಪ, ತಳವಾರ್ ಹುಲುಗಪ್ಪ, ಚಿಂತಪಳ್ಳಿ ಬಸಪ್ಪ, ಎನ್. ನಾಗರಾಜ್, ಬಿ. ನಾಗರಾಜ್, ವಿಎಸ್‌ಎಸ್‌ಎನ್ ಅಧ್ಯಕ್ಷ ಹುಲುಗಪ್ಪ ಹಾಗೂ ಎಚ್. ಭೀಮಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಸ್ಪರ್ಧೆಯನ್ನು ವೀಕ್ಷಿಸಲು ಹಂಪಾಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ದೇಶೀ ಹೋರಿಕರ ಸಂರಕ್ಷಣೆ, ರೈತರಲ್ಲಿ ಬಾಂಧವ್ಯ ವೃದ್ಧಿ ಹಾಗೂ ಗ್ರಾಮೀಣ ಕ್ರೀಡೆ ಮತ್ತು ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರು ಹುಣ್ಣಿಮೆ ಅಂಗವಾಗಿ ಈ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಾರಹುಣ್ಣಿಮೆ ಸಂಭ್ರಮದಲ್ಲಿ ಕರಿ ಹರಿದ ಬಿಳಿ ಎತ್ತು

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಾರಹುಣ್ಣಿಮೆ ಅಂಗವಾಗಿ ಮುಳಗುಂದ ಪಟ್ಟಣದಲ್ಲಿ ರೈತರು ಸಂಪ್ರದಾಯಬದ್ಧವಾಗಿ ಎತ್ತುಗಳನ್ನು ಅಲಂಕರಿಸಿ ಪೂಜಿಸಿ, ವಿಶೇಷ ಆಚರಣೆಗಳ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಂಗಾರು ಬಿತ್ತನೆ ಮುಗಿದ ಬಳಿಕ ರೈತರ ಮೊದಲ ಹಬ್ಬವೆಂದೇ ಕರೆಯಲಾಗುವ ಕಾರಹುಣ್ಣಿಮೆ ಹಿನ್ನೆಲೆಯಲ್ಲಿ ಎತ್ತುಗಳ ನಾಲಿಗೆಗೆ ಅರಿಶಿಣ ಹಾಗೂ ಉಪ್ಪಿನ ಮಿಶ್ರಣ ಹಚ್ಚಿ ಸ್ವಚ್ಛಗೊಳಿಸಲಾಯಿತು. ಜವಾರಿ ತತ್ತಿಗಳ ಗೊಟ್ಟ, ಬಣ್ಣಬಣ್ಣದ ಅಲಂಕಾರಗಳಿಂದ ಎತ್ತುಗಳನ್ನು ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಜೆ ಪಟ್ಟಣದ ಐದು ಮನೆತನಗಳ ಎತ್ತುಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಐದು ಎತ್ತುಗಳನ್ನು ಸಾಲಾಗಿ ನಿಲ್ಲಿಸಿ ಸಂಪ್ರದಾಯದಂತೆ ‘ಕರಿ ಹರಿಯುವ’ ಆಚರಣೆ ನೆರವೇರಿಸಲಾಯಿತು. ಈ ವೇಳೆ ಹಕಾರಿಯವರ ಮನೆತನದ ಬಿಳಿ ಎತ್ತು ಕರಿ ಹರಿಯುವ ಮೂಲಕ ಎಲ್ಲರ ಗಮನ ಸೆಳೆಯಿತು.

ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ರೈತರು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರಹುಣ್ಣಿಮೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

ಸ್ಕೂಲ್ ಚಂದನದಲ್ಲಿ ನಾರ್ತ್‌ಸೌತ್ ಫೌಂಡೇಶನ್ ಸಂವಾದ: ಕೌಶಲ್ಯ ವೃದ್ಧಿಗೆ ಒತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ವಿಶ್ವದರ್ಜೆಗೆ ಹೆಚ್ಚಿಸುವ ಉದ್ದೇಶದಿಂದ ನಾರ್ತ್‌ಸೌತ್ ಫೌಂಡೇಶನ್‌ನ ಸ್ಕೂಲ್ ರಿಲೇಶನ್ಸ್ ಹಾಗೂ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಕೃಪಕರ್ ಪೂಟ್ಲಪಲ್ಲಿ ಅವರು ಸೋಮವಾರ ಲಕ್ಷ್ಮೇಶ್ವರದ ಪ್ರತಿಷ್ಠಿತ ಸ್ಕೂಲ್ ಚಂದನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲೆಯ ಸಿ.ಎನ್.ಆರ್. ರಾವ್ ಹಾಲ್ ಆಫ್ ಸೈನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಹಾಗೂ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಂತ್ರಜ್ಞಾನ ಕೌಶಲ್ಯ, ಮೂಲಭೂತ ಇಂಗ್ಲಿಷ್ ಮತ್ತು ಗಣಿತ ಜ್ಞಾನ ಅತ್ಯಗತ್ಯವಾಗಿದೆ. ಬಾಯಿಪಾಠಕ್ಕೆ ಸೀಮಿತವಾಗದೆ ವಿಷಯವನ್ನು ಅರ್ಥೈಸಿಕೊಂಡು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆ, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ಭವಿಷ್ಯದ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಆತ್ಮವಿಶ್ವಾಸದಿಂದ ಗುರಿ ಸಾಧಿಸುವಂತೆ ಪ್ರೇರೇಪಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರು, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

108 ಕುಂಭಗಳಿಂದ ಜಲಾಭಿಷೇಕ; ಮಳೆ-ಬೆಳೆ ಸಮೃದ್ಧಿಗಾಗಿ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 20-25 ದಿನಗಳಿಂದ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮದೇವತೆಗೆ 108 ಕುಂಭಗಳಿಂದ ಜಲಾಭಿಷೇಕ ನೆರವೇರಿಸಿ ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ ಹುಣ್ಣಿಮೆ ಅಂಗವಾಗಿ ಮುಂಜಾನೆಯಿಂದಲೇ ಶ್ರೀ ರೇಣುಕಾ ಮಂದಿರದಿಂದ ನೂರಾರು ಮಹಿಳೆಯರು ಪೂರ್ಣಕುಂಭಗಳನ್ನು ಹೊತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಗ್ರಾಮದೇವಿ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ದೇವಿಯ ಉತ್ಸವ ಮೂರ್ತಿಗೆ 108 ಕುಂಭಗಳ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಯಿತು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ನಡೆಯಿತು.

ಜಾಗೃತ ದೇವತೆಯಾದ ಗ್ರಾಮದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವರುಣ ದೇವನ ಕೃಪೆಗೆ ಪ್ರಾರ್ಥಿಸಿದರು.

ಬಳಿಕ ಗ್ರಾಮದ ಭಜನಾ ತಂಡಗಳು ದೇವಸ್ಥಾನದ ಆವರಣದಲ್ಲಿ ಸಂಜೆಯವರೆಗೂ ದೇವಿಯ ಸ್ತುತಿಗೀತೆಗಳನ್ನು ಹಾಡಿ ಭಜನೆ ಸಲ್ಲಿಸಿದವು. ಮಧ್ಯೆ ತುಂತುರು ಮಳೆ ಸುರಿದರೂ ಭಜನೆ ನಿರಂತರವಾಗಿ ಮುಂದುವರಿಯಿತು.

ಗ್ರಾಮದ ಮುಖಂಡರು ಹಾಗೂ ಹಿರಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಉತ್ತಮ ಮಳೆಯಾಗಿ ನಾಡು ಹಸನಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.