Home Blog

ಮೋದಿ ಸಂಚರಿಸುವ ಮಾರ್ಗದಲ್ಲೇ ಜಿಲೆಟಿನ್ ಪತ್ತೆ: NIA, ರಾ ಸೇರಿದಂತೆ ಕೇಂದ್ರ ಏಜೆನ್ಸಿಗಳ ತೀವ್ರ ತನಿಖೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರೀಯ ಮತ್ತು ಕೇಂದ್ರ ಮಟ್ಟದ ತನಿಖಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

ಎನ್ಐಎ, ರಾ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆಗೆ ಇಳಿದಿದ್ದು, ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿ ನೇತೃತ್ವದ ತಂಡ ವಡೇರಹಳ್ಳಿ ಗೇಟ್ ಸಮೀಪದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರಿಂದ ಎನ್ಐಎ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎನ್ಎಸ್ಜಿ ಪಡೆಯ ಹಿರಿಯ ಅಧಿಕಾರಿಗಳು ಕೂಡ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆಯ ಪ್ರಗತಿ ಕುರಿತು ವರದಿ ಪಡೆದುಕೊಂಡಿದ್ದಾರೆ. ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.

ಜಿಲೆಟಿನ್ ಕಡ್ಡಿಗಳಿದ್ದ ಪೆಟ್ಟಿಗೆಗಳನ್ನು ಉದ್ದೇಶಪೂರ್ವಕವಾಗಿ ಅಲ್ಲಿ ಇರಿಸಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದ್ದು, ಸ್ಫೋಟಕಗಳನ್ನು ಯಾವ ಸಮಯದಲ್ಲಿ ತರಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವುದು ತನಿಖೆಗೆ ಅಡಚಣೆಯಾಗಿದೆ.

ಆದರೆ, ರಸ್ತೆ ಪ್ರವೇಶ ಮತ್ತು ನಿರ್ಗಮನ ಭಾಗಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಗ್ಗಲಿಪುರ ಠಾಣೆ ಪೊಲೀಸರು ಮತ್ತು ಎನ್ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಿವೆ.

ಈ ಪ್ರಕರಣದ ಹಿಂದೆ ಅಂತರರಾಜ್ಯ ಅಥವಾ ಅಂತರಜಿಲ್ಲಾ ಸಂಪರ್ಕ ಇದೆಯೇ ಎಂಬ ದಿಕ್ಕಿನಲ್ಲಿ ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆಯೂ ಈ ರೀತಿಯ ಭದ್ರತಾ ಲೋಪ ಸಂಭವಿಸಿರುವುದು ಕೇಂದ್ರ ಹಾಗೂ ರಾಜ್ಯ ಭದ್ರತಾ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

‘ಇತಿಹಾಸ ಸೃಷ್ಟಿ ಮಾಡಿದ ನಿಮಗೆ ಅಭಿನಂದನೆ’: ಸಿಎಂ ಆದ ವಿಜಯ್‌ಗೆ ಸಿದ್ದರಾಮಯ್ಯ ಕಾಲ್

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಆಗಿ ದಳಪತಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರ ನಡುವಿನ ಮಾತುಕತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ “ನಾನು ಸಿದ್ದರಾಮಯ್ಯ ಮಾತಾಡ್ತಿದ್ದೀನಿ… ಇತಿಹಾಸ ಸೃಷ್ಟಿ ಮಾಡಿದ ನಿಮಗೆ ಅಭಿನಂದನೆಗಳು. ಬೆಂಗಳೂರಿಗೆ ಬಂದಾಗ ಇಬ್ಬರೂ ಭೇಟಿಯಾಗೋಣ” ಎಂದು ಸಿದ್ದರಾಮಯ್ಯ ಹೇಳಿರುವುದು ಕೇಳಿಬಂದಿದೆ.

ಇದೇ ವೇಳೆ ಎಕ್ಸ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿರುವ ಸಿದ್ದರಾಮಯ್ಯ, ಸಿನಿಮಾ ಕ್ಷೇತ್ರದಿಂದ ಜನಸೇವೆಯತ್ತ ವಿಜಯ್ ನಡೆಸಿರುವ ಪ್ರಜಾಪ್ರಭುತ್ವದ ಪಯಣವನ್ನು ಶ್ಲಾಘಿಸಿದ್ದಾರೆ. “ಕರ್ನಾಟಕ ಮತ್ತು ತಮಿಳುನಾಡು ಜನರ ಅಭಿವೃದ್ಧಿ, ಸಾಂಸ್ಕೃತಿಕ ಬಾಂಧವ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಶುಭಹಾರೈಸಿದ್ದಾರೆ.

ಚೊಚ್ಚಲ ಚುನಾವಣೆಯಲ್ಲೇ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಬಹುಮತದ ಮ್ಯಾಜಿಕ್ ನಂಬರ್ ತಲುಪಿದ ವಿಜಯ್, ಭಾನುವಾರ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಇದೀಗ ಮೇ 13ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ವಿಜಯ್ ಅವರಿಗೆ ಕಾಲಾವಕಾಶ ನೀಡಿದ್ದಾರೆ.

ಕಾರವಾರ ಮೀನುಗಾರಿಕಾ ಬೋಟ್ ಗೋವಾ ಸಮುದ್ರದಲ್ಲಿ ಮುಳುಗಡೆ: 22 ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಷಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಿದ ಘಟನೆ ನಡೆದಿದೆ.

ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಬೋಟ್‌ನಲ್ಲಿದ್ದ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಇತರೆ ಬೋಟ್‌ಗಳ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಕಾಪಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾರವಾರ ತಾಲೂಕಿನ ಮುದಗಾ ಗ್ರಾಮದ ದಿನೇಶ್ ಕಾಂಚನ್ ಅವರಿಗೆ ಸೇರಿದ ‘ಶ್ರೀ ಅಮ್ಮ’ ಹೆಸರಿನ ಪರ್ಷಿಯನ್ ಮಾದರಿಯ ಬೋಟ್ ಒಂದು ವಾರದ ಹಿಂದೆ ಮುದಗಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು.

ಬೋಟ್ ಮುಳುಗಡೆಯಿಂದ ಬೋಟ್ ಹಾಗೂ ಮೀನುಗಾರಿಕಾ ಬಲೆ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ರಾಜಿ ಮಾಡಿಕೊಂಡಿರುವ ಪ್ರಧಾನಿಯಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಕಡಿಮೆ ಮಾಡಿ ಹಾಗೂ ಪೆಟ್ರೋಲ್ ಬಳಕೆಯನ್ನು ನಿಯಂತ್ರಿಸಿ ಎಂದು ಜನರಿಗೆ ಸಲಹೆ ನೀಡಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಅವರು, “ರಸಗೊಬ್ಬರ ಹಾಗೂ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ ಎಂಬ ರೀತಿಯಲ್ಲಿ ಜನರಿಗೆ ಧರ್ಮೋಪದೇಶ ನೀಡಲಾಗುತ್ತಿದೆ. ಇದು ಕೇವಲ ಸಲಹೆಗಳಲ್ಲ, ಕೇಂದ್ರ ಸರ್ಕಾರದ ವೈಫಲ್ಯದ ಸ್ಪಷ್ಟ ಉದಾಹರಣೆಗಳಾಗಿವೆ” ಎಂದು ಆರೋಪಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ದೇಶವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಪ್ರತೀ ಬಾರಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಜನರ ಮೇಲೆಯೇ ಹೊಣೆ ಹೊರಿಸುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸೆನ್ಸಾರ್ ಕ್ಲಿಯರೆನ್ಸ್ ಫೈನಲ್ ಸ್ಟೇಜ್ ; ‘ಜನ ನಾಯಗನ್’ ರಿಲೀಸ್ ಡೇಟ್‌ ಬಗ್ಗೆ ವೆಂಕಟ್ ಪ್ರಭು ಬಿಗ್ ಅಪ್‌ಡೇಟ್!

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ದಳಪತಿ ವಿಜಯ್ ಅವರ ಮೊದಲ ಸಿನಿಮಾ ‘ಜನ ನಾಯಗನ್’ ಬಿಡುಗಡೆಯತ್ತ ವೇಗವಾಗಿ ಸಾಗುತ್ತಿದೆ. ಸಿನಿಮಾ ರಿಲೀಸ್ ವಿಳಂಬವಾಗುತ್ತಿದೆ ಎಂಬ ಚರ್ಚೆಗಳ ನಡುವೆ ನಿರ್ಮಾಪಕ ಕೆ. ವೆಂಕಟ್ ಪ್ರಭು ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಈಗ ಸೆನ್ಸಾರ್ ಮಂಡಳಿಯ ಅಂತಿಮ ಹಂತದಲ್ಲಿದೆ. “ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲವೂ ಸರಿ ಹೋದರೆ ಇನ್ನೆರಡು ವಾರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ” ಎಂದು ವೆಂಕಟ್ ಪ್ರಭು ತಿಳಿಸಿದ್ದಾರೆ.

ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ‘ಸಿಎಂ ದಳಪತಿ ವಿಜಯ್’ ಎಂದು ಪ್ರದರ್ಶಿಸಲಾಗುತ್ತದೆ ಎನ್ನುವ ಮಾಹಿತಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರಾಜಕೀಯ ಯಶಸ್ಸಿನ ಬೆನ್ನಲ್ಲೇ ಬರುತ್ತಿರುವ ಈ ಸಿನಿಮಾ ವಿಜಯ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

ವಿಜಯ್ ಬಗ್ಗೆ ಮಾತನಾಡಿದ ವೆಂಕಟ್ ಪ್ರಭು, “ಅವರು ಜನರ ಬಗ್ಗೆ ನಿಜವಾದ ಕಾಳಜಿ ಇರುವ ವ್ಯಕ್ತಿ. ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ” ಎಂದು ಹೇಳಿದ್ದಾರೆ.

ರಾಜಕೀಯ ನಾಯಕನಾಗಿ ಅಧಿಕಾರಕ್ಕೆ ಬಂದ ತಕ್ಷಣ ಬಿಡುಗಡೆಯಾಗುತ್ತಿರುವ ಸಿನಿಮಾ ಎಂಬ ಕಾರಣಕ್ಕೆ ‘ಜನ ನಾಯಗನ್’ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ. ಸಿನಿಮಾದ ರಾಜಕೀಯ ಡೈಲಾಗ್‌ಗಳು ಮತ್ತು ವಿಜಯ್ ಅವರ ಹೊಸ ಇಮೇಜ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ.

ಅಮೆರಿಕ-ಚೀನಾ ಉದ್ವಿಗ್ನತೆ ನಡುವೆಯೇ ಟ್ರಂಪ್‌ ಚೀನಾ ಪ್ರವಾಸ; ಕ್ಸಿ ಜಿನ್ಪಿಂಗ್ ಜೊತೆ ಮಹತ್ವದ ಮಾತುಕತೆ

ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮೇ 13ರಿಂದ 15ರವರೆಗೆ ಚೀನಾಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

ಸುಮಾರು ಒಂಬತ್ತು ವರ್ಷಗಳ ಬಳಿಕ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ವಿಶೇಷ ಗಮನ ಸೆಳೆದಿದೆ. ಅಮೆರಿಕ-ಇಸ್ರೇಲ್-ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷ, ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿರುವ ಹಾರ್ಮುಜ್ ಜಲಸಂಧಿ ಸಮಸ್ಯೆ ಹಾಗೂ ತೈವಾನ್ ವಿಚಾರ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಅಮೆರಿಕದ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ನೀಡಿರುವ ಮಾಹಿತಿಯಂತೆ, ಅಧ್ಯಕ್ಷ ಟ್ರಂಪ್ ಬುಧವಾರ ಸಂಜೆ ಬೀಜಿಂಗ್‌ಗೆ ಆಗಮಿಸಲಿದ್ದಾರೆ. ಪ್ರವಾಸದ ವೇಳೆ ಟ್ರಂಪ್ ಮತ್ತು ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದ್ದು, ವಿವಿಧ ಜಾಗತಿಕ ಹಾಗೂ ಆರ್ಥಿಕ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಸಭೆಯ ಬಳಿಕ ಟ್ರಂಪ್ ಬೀಜಿಂಗ್‌ನ ಪ್ರಸಿದ್ಧ ‘ಟೆಂಪಲ್ ಆಫ್ ಹೆವೆನ್’ಗೆ ಭೇಟಿ ನೀಡಲಿದ್ದು, ಅದೇ ದಿನ ಅಧಿಕೃತ ಔತಣಕೂಟವೂ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಶುಕ್ರವಾರವೂ ಉಭಯ ನಾಯಕರ ನಡುವೆ ಮಾತುಕತೆ ಮುಂದುವರೆಯಲಿದ್ದು, ಇದೇ ವರ್ಷದ ಅಂತ್ಯದೊಳಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಟ್ರಂಪ್ ಅವರ ಈ ಭೇಟಿಯ ವೇಳೆ ಉಭಯ ದೇಶಗಳ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೂ ರೂಪುರೇಷೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

ವಿಜಯ್ ಸಿಎಂ ಆಗ್ತಿದ್ದಂತೆ ಕಣ್ಣೀರಿಟ್ಟ ತ್ರಿಷಾ: ಪ್ರಮಾಣವಚನ ಸಮಾರಂಭದಲ್ಲಿ ಭಾವನಾತ್ಮಕ ಕ್ಷಣ ವೈರಲ್!

ನಟ ವಿಜಯ್ ದಳಪತಿ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾವನಾತ್ಮಕವಾಗಿ ಮಿಂಚಿದ್ದಾರೆ. ಸಮಾರಂಭದಲ್ಲಿ ಅವರ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದ ತ್ರಿಷಾ, ವಿಜಯ್ ವೇದಿಕೆ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಕಣ್ಣೀರಿನಿಂದ ತುಂಬಿದ ಕಣ್ಣಿನೊಂದಿಗೆ ಗಮನ ಸೆಳೆದರು. ವಿಜಯ್ ಭಾಷಣ ಮುಗಿಸಿ ಜನರತ್ತ ಕೈಬೀಸಿದಾಗ, ತ್ರಿಷಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಹೆಮ್ಮೆಯಿಂದ ನಗುತ್ತಿರುವ ದೃಶ್ಯ ವೈರಲ್ ಆಗಿದೆ.

ವಿಜಯ್ ಮತ್ತು ತ್ರಿಷಾ ನಡುವಿನ ಆತ್ಮೀಯತೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಇದೇ ವೇಳೆ ವಿಜಯ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ, ಅವರ ಪತ್ನಿ ಮತ್ತು ಮಕ್ಕಳು ಸಮಾರಂಭಕ್ಕೆ ಗೈರಾಗಿದ್ದರು ಎನ್ನಲಾಗಿದೆ.

‘ಗಿಲ್ಲಿ’, ‘ಲಿಯೋ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ, ಈಗ ರಾಜಕೀಯ ವೇದಿಕೆಯಲ್ಲೂ ಚರ್ಚೆಯ ಕೇಂದ್ರವಾಗಿದೆ. ಸ್ನೇಹಿತನ ರಾಜಕೀಯ ಏರಿಗೆಯನ್ನು ನೋಡಿ ತ್ರಿಷಾ ಭಾವುಕರಾದ ಕ್ಷಣ ಅಭಿಮಾನಿಗಳ ಮನ ಗೆದ್ದಿದೆ.

ರಾಜಕೀಯದ ಗಂಭೀರ ವಾತಾವರಣದ ನಡುವೆಯೂ ಈ ಭಾವನಾತ್ಮಕ ಕ್ಷಣವೇ ಸಮಾರಂಭದ ಪ್ರಮುಖ ಹೈಲೈಟ್ ಆಗಿ ಉಳಿದಿದೆ.

ಸಾನ್ವಿ ಸುದೀಪ್ ಬೆನ್ನಿನ ಮೇಲೆ ಮೂಡಿದ ಗಣೇಶ ; 8 ಗಂಟೆಗಳ ಟ್ಯಾಟೂ ಜರ್ನಿ ವೈರಲ್!

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಮತ್ತೊಮ್ಮೆ ತಮ್ಮ ಸರಳತೆ ಮತ್ತು ವಿಭಿನ್ನ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹೈದರಾಬಾದ್‌ನಲ್ಲಿ ಭವ್ಯ ಗಣಪತಿ ಟ್ಯಾಟೂ ಹಾಕಿಸಿಕೊಂಡಿರುವ ಸಾನ್ವಿ, ಅದರ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ.

ಬೆನ್ನಿನ ಮೇಲೆ ಮೂಡಿಬಂದಿರುವ ಈ ಟ್ಯಾಟೂ ಕೆಂಪು ಮತ್ತು ಕಪ್ಪು ಬಣ್ಣದ ಕಾಂಬಿನೇಷನ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸುಮಾರು 8 ಗಂಟೆಗಳ ಕಾಲ ಟ್ಯಾಟೂ ಪ್ರಕ್ರಿಯೆ ನಡೆದಿದ್ದು, ಸಾನ್ವಿ ಅದನ್ನು ತಾಳ್ಮೆಯಿಂದ ಪೂರ್ಣಗೊಳಿಸಿದ್ದಾರೆ.

ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಮತ್ತು ಬಳಿಕದ ಜರ್ನಿಯನ್ನು ಸಾನ್ವಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, “ಫೈನಲ್ ಲುಕ್ ಅದ್ಭುತವಾಗಿದೆ” ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾನ್ವಿ ಈಗಾಗಲೇ ಗಾಯಕಿಯಾಗಿ ಗುರುತಿಸಿಕೊಂಡಿದ್ದು, ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಸಾಕಷ್ಟು ಗಮನ ಸೆಳೆದಿದ್ದರು. ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತ ಎರಡರಲ್ಲೂ ಆಸಕ್ತಿ ಹೊಂದಿರುವ ಅವರು, ಸಂಗೀತ ಕ್ಷೇತ್ರದಲ್ಲೂ ತಮ್ಮದೇ ಗುರುತು ಮೂಡಿಸುತ್ತಿದ್ದಾರೆ.

ಸ್ಟಾರ್ ನಟನ ಮಗಳಾಗಿದ್ದರೂ ಅತಿರೇಕದ ಲೈಮ್‌ಲೈಟ್‌ನಿಂದ ದೂರ ಉಳಿಯುವ ಸಾನ್ವಿ, ತಮ್ಮ ಕಲೆ, ಸಂಗೀತ ಮತ್ತು ಸರಳ ವ್ಯಕ್ತಿತ್ವದ ಮೂಲಕ ಯುವಜನರಲ್ಲಿ ವಿಭಿನ್ನ ಫ್ಯಾನ್ ಬೇಸ್ ನಿರ್ಮಿಸಿಕೊಂಡಿದ್ದಾರೆ.

‘ಕಾಂಗ್ರೆಸ್ ಊಸರವಳ್ಳಿಗಿಂತ ಫಾಸ್ಟ್’ ; ಶಶಿ ತರೂರ್ ಎದುರೇ ಅಣ್ಣಾಮಲೈ ಟಾಂಗ್!

ಚೆನ್ನೈ: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷವನ್ನು ‘ಊಸರವಳ್ಳಿ’ಗೆ ಹೋಲಿಸಿ ಅಣ್ಣಾಮಲೈ ಟೀಕಿಸಿದ್ದಾರೆ.

ತಮಿಳುನಾಡಿನಲ್ಲಿ ಇಷ್ಟು ವರ್ಷ ಡಿಎಂಕೆ ಭಾಷೆಯನ್ನೇ ಮಾತನಾಡುತ್ತಿದ್ದ ಕಾಂಗ್ರೆಸ್, ಇದೀಗ ನಟ ವಿಜಯ್ ಪಕ್ಷದತ್ತ ಒಲವು ತೋರಿಸುತ್ತಿದೆ. “ಊಸರವಳ್ಳಿಯೂ ಕೂಡ ಇಷ್ಟು ವೇಗವಾಗಿ ಬಣ್ಣ ಬದಲಿಸೋದಿಲ್ಲ” ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.

ಕಾಂಗ್ರೆಸ್ ತನ್ನ ಸ್ವತಂತ್ರ ಅಸ್ತಿತ್ವ ಕಳೆದುಕೊಂಡಿದ್ದು, ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ಬೆನ್ನೇರಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ದಕ್ಷಿಣ ಭಾರತದ ರಾಜಕೀಯ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

“ಕಾಂಗ್ರೆಸ್ ಯಾವದಾದರೂ ಒಂದು ದಕ್ಷಿಣ ರಾಜ್ಯದಲ್ಲಿ ಗೆದ್ದರೆ ಸಾಕು, ದಕ್ಷಿಣ ಭಾರತ ಬೇರೆ, ತಮಿಳುನಾಡು ಬೇರೆ, ಕೇರಳ ಬೇರೆ ಎಂದು ಕೆಲ ಸಂಸದರು ಟ್ವೀಟ್ ಮಾಡೋಕೆ ಶುರುಮಾಡ್ತಾರೆ” ಎಂದು ಹೇಳಿದ ಅಣ್ಣಾಮಲೈ, ಶಶಿ ತರೂರ್ ಅಂತಹ ನಾಯಕರಿಗೆ ಹತ್ತಿರವಾಗಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದೂ ಅಣ್ಣಾಮಲೈ ಆರೋಪಿಸಿದರು. “ಲಕ್ಷಾಂತರ ಮತಗಳನ್ನು ತೆಗೆದುಹಾಕಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ” ಎಂದು ತಿರುಗೇಟು ನೀಡಿದರು.

ಅಣ್ಣಾಮಲೈ ಟೀಕೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, “ಅವರು ಚಮಿಲಿಯನ್ ಅಲ್ಲ, ತಮಿಳಿಯನ್ ಅಂತ ಹೇಳಿರಬಹುದು” ಎಂದು ಹಾಸ್ಯಾತ್ಮಕವಾಗಿ ಉತ್ತರಿಸಿ ವೇದಿಕೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.

‘ಟಾಕ್ಸಿಕ್’ ಶೂಟಿಂಗ್ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ಮಾತಾಡ್ತಿದ್ದೆ: ಕಿಯಾರಾ ಅಡ್ವಾಣಿ ಭಾವುಕ

ತಾಯ್ತನದ ನಂತರದ ಬದುಕಿನ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮನಮುಟ್ಟುವ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ದೊಡ್ಡ ಬದಲಾವಣೆ ಎದುರಿಸಿದ್ದಾಗಿ ಹೇಳಿದ ನಟಿ, ಸಂದರ್ಶನದ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಕಿಯಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದ ವೇಳೆ ಏಳು ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಗರ್ಭಿಣಿಯಾಗಿದ್ದರೂ ಅವರು ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಚಿತ್ರತಂಡ ತುಂಬಾ ಗುಪ್ತವಾಗಿ ಇಟ್ಟಿತ್ತು ಎನ್ನಲಾಗಿದೆ.

‘ಶೂಟಿಂಗ್ ಸಮಯದಲ್ಲಿ ವ್ಯಾನ್‌ಗೆ ಹೋಗಿ ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ಮಾತನಾಡುತ್ತಿದ್ದೆ. ಅಮ್ಮ ಕೇವಲ ಆ್ಯಕ್ಟಿಂಗ್ ಮಾಡುತ್ತಿದ್ದಾಳೆ, ಹೆದರಬೇಡ ಎಂದು ಹೇಳುತ್ತಿದ್ದೆ’ ಎಂದು ಕಿಯಾರಾ ಹೇಳಿದ್ದಾರೆ. ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಯ್ತನದ ಆರಂಭದ ದಿನಗಳು ತುಂಬಾ ಕಠಿಣವಾಗಿದ್ದವು ಎಂದು ಹೇಳಿದ ನಟಿ, ‘ಮಗು ಹುಟ್ಟಿದ ಬಳಿಕ ಮೊದಲ ಆರು ತಿಂಗಳು ನನಗೆ ನನ್ನ ಬಗ್ಗೆ ಯೋಚಿಸುವ ಅವಕಾಶವೇ ಇರಲಿಲ್ಲ’ ಎಂದು ಹೇಳಿದ್ದಾರೆ.

ಇದೇ ವೇಳೆ ಯಶ್ ಜೊತೆಗಿನ ಆಪ್ತ ದೃಶ್ಯಗಳನ್ನು ಸಿನಿಮಾದಿಂದ ತೆಗೆಸಲು ತಾವು ಒತ್ತಾಯಿಸಿದ್ದೇವೆ ಎಂಬ ವದಂತಿಯನ್ನು ಕಿಯಾರಾ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ‘ಅದು ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ.

ಪತಿ ಸಿದ್ಧಾರ್ಥ್ ಮಲ್ಹೋತ್ರಾ ಕುರಿತು ಮಾತನಾಡಿದ ಅವರು, ‘ಅವರು ಅದ್ಭುತ ತಂದೆ. ಪ್ರತಿಯೊಂದು ಹಂತದಲ್ಲೂ ನನ್ನ ಜೊತೆ ನಿಂತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!