Home Blog

ಇಂಧನ ದರ ಏರಿಕೆ ಎಫೆಕ್ಟ್; ಬೆಂಗಳೂರಿನಲ್ಲಿ ಕ್ಯಾಬ್, ಟ್ಯಾಕ್ಸಿ ದರ ಹೆಚ್ಚಳಕ್ಕೆ ಚಾಲಕರ ಒತ್ತಾಯ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿ ದರ ಹೆಚ್ಚಳದ ಸಾಧ್ಯತೆ ಎದುರಾಗಿದೆ. ಓಲಾ, ಉಬರ್ ಚಾಲಕರ ಸಂಘಟನೆಗಳು ಪ್ರತಿ ಕಿಲೋಮೀಟರ್‌ಗೆ ₹5ರಿಂದ ₹10ರವರೆಗೆ ದರ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ.

ಈ ಕುರಿತು ಅಗ್ರಿಗೇಟರ್ ಕಂಪನಿಗಳು ಹಾಗೂ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೇರಲು ಚಾಲಕರ ಸಂಘಟನೆಗಳು ಮುಂದಾಗಿವೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದರೆ, ಬೆಂಗಳೂರಿನ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳುವುದು ಖಚಿತವಾಗಿದೆ.

ಪ್ರಸ್ತುತ ಓಲಾ, ಉಬರ್ ಸೇರಿದಂತೆ ಅಗ್ರಿಗೇಟರ್ ಕಂಪನಿಗಳು ಸಾಮಾನ್ಯ ಅವಧಿಯಲ್ಲಿ ಪ್ರತಿ ಕಿಲೋಮೀಟರ್‌ಗೆ ವಾಹನ ಮಾಲೀಕರಿಗೆ ₹10ರಿಂದ ₹12ರವರೆಗೆ ಮಾತ್ರ ನೀಡುತ್ತಿವೆ. ಪೀಕ್ ಅವರ್ ಸಂದರ್ಭದಲ್ಲೂ ಗರಿಷ್ಠ ₹20ರವರೆಗೆ ಮಾತ್ರ ಪಾವತಿಸುತ್ತಿವೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಧನ ದರ ನಿರಂತರ ಏರಿಕೆಯಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದ್ದು, ಪ್ರಸ್ತುತ ದರದಲ್ಲಿ ಸೇವೆ ನೀಡುವುದು ಕಷ್ಟಕರವಾಗಿದೆ ಎಂದು ಚಾಲಕರ ಸಂಘಟನೆಗಳು ಹೇಳಿವೆ.

ಹೀಗಾಗಿ ಡೀಸೆಲ್ ಮತ್ತು ಇತರೆ ಇಂಧನ ವೆಚ್ಚದ ಏರಿಕೆಯನ್ನು ಪರಿಗಣಿಸಿ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ ₹5ರಿಂದ ₹10ರವರೆಗೆ ಹೆಚ್ಚಳ ಮಾಡಲೇಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ಇತ್ತೀಚೆಗೆ ಖಾಸಗಿ ಬಸ್ ಹಾಗೂ ಖಾಸಗಿ ಶಾಲಾ ವಾಹನ ದರ ಏರಿಕೆಯ ಬಳಿಕ ಇದೀಗ ಕ್ಯಾಬ್ ಮತ್ತು ಟ್ಯಾಕ್ಸಿ ದರ ಏರಿಕೆಯ ಮಾತು ಕೇಳಿಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಶಾಲಾ ಹಾಜರಾತಿ ವೇಳೆ ‘Yes Sir’ ಬದಲು ‘ಜೈ ಶ್ರೀರಾಮ್’ ಹೇಳಲು ವಿದ್ಯಾರ್ಥಿಗಳಿಗೆ ಯತ್ನಾಳ್ ಕರೆ

ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಶಾಲೆಗೆ ತೆರಳುವಂತೆ ಕರೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೇಸರಿ ಶಾಲು ವಿತರಿಸುವುದಾಗಿ ಘೋಷಿಸಿದರು.

ಇನ್ನು ಮುಂದೆ ಶಾಲೆಗಳಲ್ಲಿ ಹಾಜರಾತಿ ವೇಳೆ ‘ಎಸ್ ಸರ್’ ಎನ್ನುವ ಬದಲು ‘ಜೈ ಶ್ರೀರಾಮ್’ ಎಂದು ಹೇಳಬೇಕು. ಶಿಕ್ಷಕರಿಗೆ ನಮಸ್ಕರಿಸುವಾಗಲೂ ‘ಜೈ ಶ್ರೀರಾಮ್’ ಎನ್ನಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕುವುದು ನಮ್ಮ ಹಕ್ಕು ಎಂದು ಹೇಳಿದರು.

ರಾಜ್ಯದ ಎಲ್ಲಾ ಹಿಂದೂ ಪೋಷಕರಿಗೆ ಕರೆ ನೀಡಿದ ಅವರು, ತಮ್ಮ ಮಕ್ಕಳಿಗೆ ತಿಲಕ ಇಟ್ಟು, ಕೇಸರಿ ಶಾಲು ಹಾಕಿಸಿ ಶಾಲೆಗೆ ಕಳುಹಿಸಿ. ಇದನ್ನು ಹೇಗೆ ತಡೆಯುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಇದ್ದಾಗ ತಮಿಳುನಾಡಿನಲ್ಲಿ ಸ್ಟಾಲಿನ್ ಇಂಧನ ದರ ಇಳಿಕೆ ಮಾಡಿದ್ದರು. ಅದೇ ರೀತಿ ಬಿಜೆಪಿ ಸರ್ಕಾರವೂ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದರು. ಈಗ ದಮ್ ಇದ್ದರೆ ರಾಜ್ಯದಲ್ಲಿ ದರ ಇಳಿಕೆ ಮಾಡಿ ತೋರಿಸಲಿ”ಎಂದು ಸವಾಲು ಹಾಕಿದರು.

ರಷ್ಯಾದ ಮೇಲೆ 550ಕ್ಕೂ ಹೆಚ್ಚು ಡ್ರೋನ್ʼಗಳಿಂದ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್ ಶನಿವಾರ ತಡರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಾರೀ ಪ್ರಮಾಣದ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಉಕ್ರೇನ್ ರಷ್ಯಾದ ಮೇಲೆ ನಡೆಸಿದ ಅತಿದೊಡ್ಡ ಡ್ರೋನ್ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.

ರಷ್ಯಾ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ರಾತ್ರಿ ನಡೆದ ದಾಳಿಯಲ್ಲಿ ಉಕ್ರೇನ್‌ನ 556 ಡ್ರೋನ್‌ಗಳು ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದು, ರಷ್ಯಾದ ವಾಯು ರಕ್ಷಣಾ ಪಡೆಗಳು ಅವುಗಳಲ್ಲಿ ಅನೇಕವನ್ನು ಹೊಡೆದುರುಳಿಸಿವೆ.

ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪಶ್ಚಿಮ ರಷ್ಯಾದ ವಿವಿಧ ಭಾಗಗಳಲ್ಲಿನ ವಸತಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ತಿಳಿಸಲಾಗಿದೆ.

ಮಾಸ್ಕೋ ಪ್ರಾದೇಶಿಕ ಗವರ್ನರ್ ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು, ಖಾಸಗಿ ಮನೆವೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ವರದಿಯಾಗಿದೆ.

“ಮುಂಜಾನೆ 3 ಗಂಟೆಯಿಂದಲೇ ನಮ್ಮ ವಾಯು ರಕ್ಷಣಾ ಪಡೆಗಳು ಉಕ್ರೇನ್ ಡ್ರೋನ್‌ಗಳನ್ನು ಹಿಮ್ಮೆಟ್ಟಿಸುತ್ತಿವೆ. ದಾಳಿಯ ವೇಳೆ ಹಲವು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಮಾಸ್ಕೋದಲ್ಲೇ ಕನಿಷ್ಠ 74 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಡೆಹಿಡಿದ ಡ್ರೋನ್‌ಗಳ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ 12 ಮಂದಿ ಗಾಯಗೊಂಡಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ ಎಂದು ಮಾಸ್ಕೋ ಮೇಯರ್ ಸೆರ್ಗೇ ಸೊಬ್ಯಾನಿನ್ ತಿಳಿಸಿದ್ದಾರೆ. ಉಕ್ರೇನ್ ತನ್ನ ಡ್ರೋನ್ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಂಡಿದ್ದು, ರಷ್ಯಾದ ಮಿಲಿಟರಿ ಸೌಕರ್ಯಗಳು, ಲಾಜಿಸ್ಟಿಕ್ ಕೇಂದ್ರಗಳು ಹಾಗೂ ಯುದ್ಧಕ್ಕೆ ನೆರವಾಗುವ ಇಂಧನ ಮೂಲಸೌಕರ್ಯಗಳನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದೆ.

ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗುಬ್ಬಿ ಸಮೀಪದ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಆಶ್ರಮದಿಂದ ನಾಲ್ವರು ವಿದೇಶಿ ಮಹಿಳೆಯರು ಪೊಲೀಸರ ಕಣ್ಗಾವಲಿನ ನಡುವೆಯೇ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೇ 11ರಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಆಶ್ರಮದ ಎರಡನೇ ಮಹಡಿಯ ಕಿಟಕಿಯ ಗ್ರಿಲ್ ಮುರಿದು ಮಹಿಳೆಯರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಪರಾರಿಯಾದ ಮಹಿಳೆಯರು ಉಗಾಂಡ ಮತ್ತು ನೈಜೀರಿಯಾ ಮೂಲದವರಾಗಿದ್ದು, ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದರು ಎನ್ನಲಾಗಿದೆ. ಉಗಾಂಡ ಮೂಲದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂಬ ಮಹಿಳೆಯರು ಪರಾರಿಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.

ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದಿದ್ದರೂ, ತಮ್ಮ ವಶದಲ್ಲಿನ ವಸತಿ ಸೌಲಭ್ಯ ಕೊರತೆಯಿಂದಾಗಿ ತಾತ್ಕಾಲಿಕವಾಗಿ ‘ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಮಹಿಳೆಯರು ಈಗಾಗಲೇ ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂಬ ಆರೋಪಗಳಿವೆ. ಆಶ್ರಮದಲ್ಲಿ ಇರಿಸಿದ್ದ ಸಮಯದಲ್ಲಿಯೂ ಅವರ ಬಳಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಪತ್ತೆಯಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈಗ ಅವರು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಬಗ್ಗೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸಂಬಂಧಪಟ್ಟ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತೂ ತನಿಖೆ ಮುಂದುವರಿದಿದೆ.

ಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಒಳನಾಡು ಹಾಗೂ ಕರಾವಳಿ ಭಾಗಗಳ ಬಹುತೇಕ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಜೋರಾದ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆಯ ಪ್ರಭಾವ ಹೆಚ್ಚಾಗುವ ನಿರೀಕ್ಷೆಯಿದೆ.

ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಭಾರಿ ಗಾಳಿ ಮತ್ತು ಮಳೆಯ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಬಿಜೆಪಿ ನಾಯಕರ ಮೆಟ್ರೋ-ಬೈಕ್ ಪ್ರಯಾಣ ಒಂದು ದಿನದ ನಾಟಕ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿ ನಾಯಕರ ಮೆಟ್ರೋ ಹಾಗೂ ಬೈಕ್ ಪ್ರಯಾಣ ಕೇವಲ ಒಂದು ದಿನದ ರಾಜಕೀಯ ನಾಟಕ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ಮೆಟ್ರೋ ಪ್ರಯಾಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದೆಲ್ಲ ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕ. ಪ್ರತಿದಿನ ಮೆಟ್ರೋ ಹತ್ತಿದರೆ ನಾವು ಸಹ ಒಪ್ಪುತ್ತೇವೆ. ಒಬ್ಬ ಮಂತ್ರಿ ಮೆಟ್ರೋ ಹತ್ತುವುದು, ಮತ್ತೊಬ್ಬ ಬೈಕ್‌ನಲ್ಲಿ ಸಂಚರಿಸುವುದು ಒಂದು ದಿನದ ಪ್ರದರ್ಶನ ಮಾತ್ರ” ಎಂದು ಟೀಕಿಸಿದರು.

ನಿಜವಾಗಿಯೂ ಸಾರ್ವಜನಿಕ ಸಾರಿಗೆ ಬಗ್ಗೆ ಕಾಳಜಿ ಇದ್ದರೆ ಪ್ರತಿದಿನ ಬಿಎಂಟಿಸಿ ಬಸ್ ಬಳಸಲಿ. ನಮ್ಮ ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಉಲ್ಲೇಖಿಸಿದ ಅವರು, ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಏಕೆ ಬಂತು? ಅದಕ್ಕೆ ಕಾರಣ ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದು ಪ್ರಶ್ನಿಸಿದರು.

ಎಸ್‌ಐಆರ್ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಇದು ಬಿಜೆಪಿ ಪರ ಅನುಕೂಲವಾಗುವಂತೆ ರೂಪಿಸಿರುವ ವ್ಯವಸ್ಥೆ ಎಂದು ಆರೋಪಿಸಿದರು. ಎಸ್‌ಐಆರ್ ಸಂಪೂರ್ಣ ಅಸಂವಿಧಾನಿಕವಾಗಿದೆ. ನಮಗೆ ಎಸ್‌ಐಆರ್ ವಿರೋಧವಿಲ್ಲ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು,” ಎಂದು ಹೇಳಿದರು.

ಉದಾಹರಣೆಯಾಗಿ ತಮ್ಮ ಹೆಸರನ್ನೇ ಉಲ್ಲೇಖಿಸಿದ ಅವರು, ನನ್ನ ಹೆಸರು ಪ್ರಿಯಾಂಕ್. ಅದರಲ್ಲಿ ಸಣ್ಣ ವ್ಯತ್ಯಾಸ ಬಂದರೂ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲೂ ವೈಸ್ ಅಡ್ಮಿರಲ್ ಒಬ್ಬರ ಮತ ಅಳಿಸಲಾಗಿತ್ತು. ಇದರಿಂದ ಅನೇಕರು ಮತದಾನ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕೇವಲ 10 ನಿಮಿಷ ಸುರಿದ ಮಳೆಗೆ ಸಾವಿರಾರು ಎಕರೆ ಭತ್ತ, 4 ಎಕರೆ ಟೊಮೆಟೊ ಬೆಳೆ ಸಂಪೂರ್ಣ ನಾಶ

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕಳೆದ ರಾತ್ರಿ ಕೇವಲ ಹತ್ತು ನಿಮಿಷ ಸುರಿದ ಭಾರಿ ಗಾಳಿ-ಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಶೃಂಗಾರ ಬಾಗು ತಾಂಡದಲ್ಲಿ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಹಲವು ಬೃಹತ್ ಮರಗಳು ನೆಲಕ್ಕುರುಳಿವೆ.

ಭಾರೀ ಗಾಳಿಯ ರಭಸಕ್ಕೆ ದೊಡ್ಡ ಮರಗಳು ಮನೆಗಳ ಮೇಲೆಯೇ ಬಿದ್ದ ಪರಿಣಾಮ ಹಲವಾರು ಮನೆಗಳಿಗೆ ಹಾನಿಯಾಗಿದೆ. ನಿನ್ನೆ ಸಂಜೆದಿಂದಲೇ ಎರಡು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ಕೇವಲ ಹತ್ತು ನಿಮಿಷಗಳ ಗಾಳಿ-ಮಳೆಯ ಅಬ್ಬರದಿಂದಲೇ ಎರಡು ಗ್ರಾಮಗಳಲ್ಲಿ ಭಾರೀ ಅವಾಂತರ ಉಂಟಾಗಿದ್ದು, ಕೂಲಿ ಕೆಲಸವನ್ನೇ ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಬಸವಪಟ್ಟಣ ಗ್ರಾಮದಲ್ಲಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಅಡಿಕೆ, ತೆಂಗು ಹಾಗೂ ಟೊಮೆಟೊ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರೈತನೊಬ್ಬ ಸಾಲ ಮಾಡಿ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಎಕರೆಗೆ ₹1 ಲಕ್ಷದಿಂದ ₹1.5 ಲಕ್ಷವರೆಗೆ ವೆಚ್ಚ ಮಾಡಿದ್ದರೂ, ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆ ಹಾಳಾಗಿದೆ.

ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿರುವುದರಿಂದ ಟೊಮೆಟೊ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ. ಬಿರು ಬೇಸಿಗೆಯ ನಡುವೆಯೂ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದ ರೈತರು, ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ಕಣ್ಣೀರಿಡುತ್ತಿದ್ದಾರೆ.

IPL 2026: ‘ಗೆಲ್ಲಲೇಬೇಕು, ಗೆಲ್ಲುತ್ತೇವೆ’: ಆರ್ ಸಿಬಿಗೆ ಶ್ರೇಯಸ್ ಅಯ್ಯರ್ ಖಡಕ್ ಎಚ್ಚರಿಕೆ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರ ಪ್ಲೇಆಫ್ ಪೈಪೋಟಿ ತೀವ್ರ ಹಂತ ತಲುಪಿದ್ದು, ಇಂದು ನಡೆಯಲಿರುವ 61ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಈ ಮಹತ್ವದ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ಆರ್‌ಸಿಬಿಗೆ ನೇರ ಎಚ್ಚರಿಕೆ ನೀಡಿದ್ದು, ತಮ್ಮ ತಂಡ ಗೆಲುವಿಗೆ ಸಂಪೂರ್ಣ ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಮತ್ತೊಂದೆಡೆ, ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಪಂಜಾಬ್ ಕಿಂಗ್ಸ್ ಗೆಲುವು ಅನಿವಾರ್ಯವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಸೋಲುಗಳ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನೂ ಕಾಯಲು ಸಾಧ್ಯವಿಲ್ಲ. ಎಲ್ಲದರಿಗೂ ಸಿದ್ಧವಾಗಿಯೇ ಕಣಕ್ಕಿಳಿಯುತ್ತೇವೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಪ್ಲೇಆಫ್ ಪ್ರವೇಶಿಸುವ ತಮ್ಮ ತಂಡದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200ಕ್ಕೂ ಅಧಿಕ ರನ್ ಕಲೆಹಾಕಿದ್ದರೂ, ಬೌಲಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಎದುರು ಸೋಲು ಅನುಭವಿಸಿತ್ತು.

ಈ ಸೋಲನ್ನು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, “ಆ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ತಂಡದ ಮೇಲೆ ಒತ್ತಡ ಇರುವುದು ನಿಜ. ಆದರೆ ಇಂತಹ ಒತ್ತಡದ ಕ್ಷಣಗಳಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರುತ್ತದೆ” ಎಂದು ಹೇಳಿದ್ದಾರೆ.

ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ: ಟೀಕೆಗಳಿಗೆ ತಲೈವಾ ರಜನಿಕಾಂತ್ ತಿರುಗೇಟು

ಚೆನ್ನೈ: ನಟ ವಿಜಯ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಕೀಯದಲ್ಲಿ ಇಲ್ಲ. ಅಂತಹ ಕೀಳು ಮನೋಭಾವದ ವ್ಯಕ್ತಿಯೂ ಅಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಭೇಟಿಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ತಮ್ಮ ಭೇಟಿ ಹಾಗೂ ವಿಜಯ್ ಮುಖ್ಯಮಂತ್ರಿ ಆಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು.

ನಾನೇಕೆ ವಿಜಯ್ ಬಗ್ಗೆ ಅಸೂಯೆಪಡಬೇಕು? ನಾನು ರಾಜಕೀಯದಲ್ಲೇ ಇಲ್ಲ. ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿ ಆಗಿದ್ದರೆ ಅಸೂಯೆಯಾಗುತ್ತಿತ್ತೇನೋ,” ಎಂದು ಹಾಸ್ಯಚಟಾಕಿ ಮೂಲಕ ಪ್ರತಿಕ್ರಿಯಿಸಿದರು.

ಟೀಕೆಗಳಿಗೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯವೆಂದು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ ಅವರು, ಚುನಾವಣಾ ಫಲಿತಾಂಶಗಳ ಬಳಿಕ ಸ್ಟಾಲಿನ್ ಅವರನ್ನು ಸ್ನೇಹಿತನಾಗಿ ಮಾತ್ರ ಭೇಟಿ ಮಾಡಿದ್ದಾಗಿ ತಿಳಿಸಿದರು.

ನಮ್ಮ ಸ್ನೇಹ ರಾಜಕೀಯವನ್ನು ಮೀರಿದೆ. ಅದನ್ನು ರಾಜಕೀಯವಾಗಿ ಅರ್ಥೈಸುವುದು ಸರಿಯಲ್ಲ. ಆದರೆ ನಮ್ಮ ಭೇಟಿಯೇ ಅನಗತ್ಯ ಟೀಕೆಗೆ ಗುರಿಯಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಕೊಳತ್ತೂರಿನಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ಬೇಸರವಾಯಿತೇ ಹೊರತು, ವಿಜಯ್ ಮುಖ್ಯಮಂತ್ರಿ ಆಗುವುದನ್ನು ವಿರೋಧಿಸಿದ್ದೇನೆ ಎಂಬ ಅರ್ಥದಲ್ಲಿ ಕೆಲವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ರಜನಿಕಾಂತ್ ಯಾರದ್ದರ ಬಗ್ಗೆಯೂ ಅನಗತ್ಯವಾಗಿ ಮಾತನಾಡುವ ಕೀಳುಮಟ್ಟದ ವ್ಯಕ್ತಿಯಲ್ಲ. ವಿಜಯ್ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ. ಆದರೆ ಮೊದಲ ಚುನಾವಣೆಯಲ್ಲೇ ಮುಖ್ಯಮಂತ್ರಿ ಆಗಿರುವುದು ಅಚ್ಚರಿಯ ಸಂಗತಿ. ಅವರು ಗೆದ್ದ ಕೂಡಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಶನಿ ಅಮಾವಾಸ್ಯೆ ಸಂಭ್ರಮ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸಾಗರ

ಚಾಮರಾಜನಗರ: ಶನಿ ಅಮಾವಾಸ್ಯೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಮಲೆ ಮಹದೇಶ್ವರಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಸೇವೆಗಳಲ್ಲಿ ಭಾಗವಹಿಸಿದ್ದಾರೆ.

ನಿನ್ನೆಯಿಂದಲೇ ಭಕ್ತರ ಆಗಮನ ಹೆಚ್ಚಾಗಿದ್ದು, ಮಲೆ ಮಹದೇಶ್ವರ ಬೆಟ್ಟದ ದೇವಾಲಯ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಬೆಳಗ್ಗಿನಿಂದಲೇ ದರ್ಶನಕ್ಕಾಗಿ ಉದ್ದ ಸಾಲಿನಲ್ಲಿ ನಿಂತ ಭಕ್ತರು ಮಾದಪ್ಪನ ದರ್ಶನ ಪಡೆದು ತಮ್ಮ ಭಕ್ತಿಭಾವ ಸಮರ್ಪಿಸಿದ್ದಾರೆ.

ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ರಥ ಸೇರಿದಂತೆ ಹಲವು ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಪ್ರಾರ್ಥಿಸಿದ್ದಾರೆ.

ಶನಿ ಅಮಾವಾಸ್ಯೆಯಂದು ಮಾದಪ್ಪನ ದರ್ಶನ ಪಡೆದರೆ ವಿಶೇಷ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ.

ಭಕ್ತರ ಹೆಚ್ಚಿದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು, ದರ್ಶನ, ಪ್ರಸಾದ ವಿತರಣೆ ಹಾಗೂ ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ.

error: Content is protected !!