Home Blog

ಇಂಧನ ದರ ಮತ್ತಷ್ಟು ಏರಿಕೆ ಆತಂಕ: ಅಕ್ರಮ ಪೆಟ್ರೋಲ್ ಸಂಗ್ರಹ ತಡೆಗೆ ಬಂಕ್ʼಗಳಲ್ಲಿ ಹೊಸ ನಿಯಮ ಜಾರಿ

ಬೆಂಗಳೂರು:  ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂಧನ ಕೊರತೆ ಉಂಟಾಗಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚಾಗಿದೆ. ಈ ಬೆಳವಣಿಗೆಯ ನಡುವೆಯೇ ಅಕ್ರಮ ಇಂಧನ ಸಂಗ್ರಹವನ್ನು ತಡೆಯಲು ತೈಲ ಕಂಪನಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ಸುಮಾರು ಮೂರು ರೂಪಾಯಿ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಜನರು ಹೆಚ್ಚುವರಿ ಇಂಧನ ಖರೀದಿಸಿ ಬಾಟಲಿ ಹಾಗೂ ಕ್ಯಾನ್‌ಗಳಲ್ಲಿ ಸಂಗ್ರಹಿಸುವ ಸಾಧ್ಯತೆ ಹೆಚ್ಚಿರುವುದರಿಂದ, ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಮಾಲೀಕರಿಗೆ ವಿಶೇಷ ಸೂಚನೆಗಳನ್ನು ನೀಡಿವೆ.

ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಬಾರದು ಎಂದು ಕಂಪನಿಗಳು ಸೂಚನೆ ನೀಡಿದ್ದು, ಹಲವೆಡೆ ಬಂಕ್‌ಗಳ ಬಳಿ ಇದಕ್ಕೆ ಸಂಬಂಧಿಸಿದ ಬೋರ್ಡ್‌ಗಳನ್ನೂ ಅಳವಡಿಸಲಾಗಿದೆ. ಕೆಲವು ವಾಹನ ಸವಾರರು ಬಾಟಲಿಗಳೊಂದಿಗೆ ಬಂಕ್‌ಗೆ ಬಂದರೂ, ಸಿಬ್ಬಂದಿ ಇಂಧನ ನೀಡದೇ ಹಿಂತಿರುಗಿಸಿರುವ ಘಟನೆಗಳು ವರದಿಯಾಗಿವೆ.

ಇನ್ನೂ ಕೆಲವು ಕಡೆಗಳಲ್ಲಿ ಫ್ಯಾಕ್ಟರಿ, ಜನರೇಟರ್ ಹಾಗೂ ಕೈಗಾರಿಕಾ ಬಳಕೆಗೆ ಅಗತ್ಯವಿರುವ ಕಾರಣ ಕ್ಯಾನ್‌ಗಳಲ್ಲಿ ಇಂಧನ ಕೇಳಲಾಗುತ್ತಿದೆ. ಅಂತಹ ಅಗತ್ಯ ಬಳಕೆದಾರರಿಗೆ ಮಾತ್ರ ಪರಿಶೀಲನೆಯ ಬಳಿಕ ಪೆಟ್ರೋಲ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಅಕ್ರಮವಾಗಿ ಇಂಧನ ಸಂಗ್ರಹಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ತೈಲ ಕಂಪನಿಗಳೊಂದಿಗೆ ಬಂಕ್ ಮಾಲೀಕರೂ ಸಹಕರಿಸುತ್ತಿದ್ದಾರೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂಧನ ದರ ಏರಿಕೆಯಾಗಿದರೆ ವಾಹನ ಸವಾರರ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈಗಾಗಲೇ ಹೆಚ್ಚುತ್ತಿರುವ ದರಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಭವಿಷ್ಯದ ಬೆಲೆ ಏರಿಕೆ ಆತಂಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿದೆ.

BJP-JDS ಮೈತ್ರಿಯಲ್ಲಿ ಬಿಕ್ಕಟ್ಟು ಇಲ್ಲ; 2028ರ ಹೋರಾಟವನ್ನು ಒಟ್ಟಾಗಿ ಎದುರಿಸುತ್ತೇವೆ ಎಂದ ದೇವೇಗೌಡ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಯಾವುದೇ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

2028ರ ಚುನಾವಣೆಯನ್ನು ಉಲ್ಲೇಖಿಸಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.

ಈ ಹೋರಾಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಪರಸ್ಪರ ಚರ್ಚೆ ಮೂಲಕ ಅವುಗಳನ್ನು ಬಗೆಹರಿಸಿಕೊಂಡು ಮುಂದುವರೆಯುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.

ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಇರುವ ಆತ್ಮೀಯ ಸಂಬಂಧದಿಂದಾಗಿ ಮೈತ್ರಿ ಕುರಿತು ಯಾವುದೇ ಆತಂಕವಿಲ್ಲ ಎಂದು  ಹೇಳಿದರು.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಕೇರಳ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿದೆ ಎಂದು ಹೇಳಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು. ಸೂಕ್ತ ಸಮಯ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ ಎಂದರು.

ಈ ವೇಳೆ ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಿದ ದೇವೇಗೌಡ, ಜೆಡಿಎಸ್ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ನಿಷ್ಠೆಯಿಂದ ಪಕ್ಷದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಹಿಸಿರುವ ಜವಾಬ್ದಾರಿಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಶಾಸಕರು ಮತ್ತು ಕಾರ್ಯಕರ್ತರು ಪಕ್ಷದ ಸಂಘಟನೆ ಬಲಪಡಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಗುಡುಗು ಸಿಡಿಲಿನ ಆರ್ಭಟಕ್ಕೆ ಶಿಕ್ಷಕ ಬಲಿ! ಮನೆ ಮುಂದೆ ನಿಂತಿದ್ದಾಗಲೇ ಹೃದಯಾಘಾತ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಗುಡುಗು-ಸಿಡಿಲಿನ ಭಾರೀ ಶಬ್ದಕ್ಕೆ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ನಾಗರಾಜಪ್ಪ (56) ಮೃತಪಟ್ಟ ಶಿಕ್ಷಕ. ಅವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ರಾತ್ರಿ ಮನೆಯ ಮುಂದೆ ನಿಂತಿದ್ದ ವೇಳೆ ಏಕಾಏಕಿ ಭಾರೀ ಸಿಡಿಲು ಬಡಿದಿದೆ.

ಸಿಡಿಲಿನ ಆಘಾತಕಾರಿ ಶಬ್ದಕ್ಕೆ ನಾಗರಾಜಪ್ಪ ಬೆಚ್ಚಿಬಿದ್ದಿದ್ದು, ತಕ್ಷಣವೇ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೇಲ್ ಶಾಕ್ ಬಳಿಕ ಜೈಲಿನಲ್ಲಿ ಕುಗ್ಗಿದ ದರ್ಶನ್! ದಚ್ಚು ಫೋಟೋ ಹಾಕಿ ಭಾವುಕರಾದ ವಿಜಯಲಕ್ಷ್ಮಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಜಾಮೀನು ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆ, ದರ್ಶನ್ ಇನ್ನೂ ದೀರ್ಘಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಇರುವ ದರ್ಶನ್, ಇತ್ತೀಚಿನ ದಿನಗಳಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನವಾಗಿದ್ದಾರೆ ಎನ್ನಲಾಗಿದೆ. ಬ್ಯಾರಕ್‌ನ ಮೂಲೆಯಲ್ಲಿ ಒಬ್ಬರೇ ಕುಳಿತು ಸಮಯ ಕಳೆಯುತ್ತಿದ್ದು, ಮಾನಸಿಕವಾಗಿ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆನ್ನುನೋವು ತೀವ್ರವಾಗಿದ್ದು, ಜೈಲಿನ ಊಟವೂ ಒಗ್ಗುತ್ತಿಲ್ಲ. ಸರಿಯಾಗಿ ನಿದ್ದೆ ಬಾರದ ಕಾರಣ ದರ್ಶನ್ ದೈಹಿಕವಾಗಿ ಕುಗ್ಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತ ಪತಿಯ ಸಂಕಷ್ಟ ಕಂಡು ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಫೋಟೋ ಹಂಚಿಕೊಂಡು ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ಅಭಿವ್ಯಕ್ತಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ದರ್ಶನ್ ಕುಟುಂಬಕ್ಕೆ ಭಾರೀ ನಿರಾಸೆ ಉಂಟಾಗಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಅಭಿಮಾನಿಗಳಲ್ಲೂ ಚರ್ಚೆ ಶುರುವಾಗಿದೆ.

ತುಮಕೂರಿನಲ್ಲಿ ನಾಳೆ ರಾಜ್ಯ ಸರ್ಕಾರದ ಸಾಧನಾ ಸಮಾವೇಶ: 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ತುಮಕೂರಿನಲ್ಲಿ ನಾಳೆ ಸಾಧನಾ ಸಮಾವೇಶ ಆಯೋಜಿಸಲಾಗಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇದೇ ಸಮಾವೇಶದಲ್ಲಿ ಸರ್ಕಾರದ ವತಿಯಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದುಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ 19ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದಾಗ ನೀಡಿದ್ದ ಹಲವು ಭರವಸೆಗಳನ್ನು ಈ ಮೂರು ವರ್ಷಗಳಲ್ಲಿ ಹೇಗೆ ಈಡೇರಿಸಲಾಗಿದೆ ಎಂಬುದನ್ನು ಸಮಾವೇಶದಲ್ಲಿ ಜನತೆಗೆ ವಿವರಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಸಮಾವೇಶವನ್ನು ತಮ್ಮ ಶಕ್ತಿ ಪ್ರದರ್ಶನವೆಂದು ಕೆಲವರು ವ್ಯಾಖ್ಯಾನಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೊಬ್ಬರ ವೈಯಕ್ತಿಕ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾಧನೆಗಳನ್ನು ಜನರ ಮುಂದೆ ಮಂಡಿಸುವ ಉದ್ದೇಶ ಮಾತ್ರ ಇದಾಗಿದೆ ಎಂದರು.

ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಪಕ್ಷದ ಕಾರ್ಯಕ್ರಮವಲ್ಲ. ಆದ್ದರಿಂದ ಹೈಕಮಾಂಡ್ ನಾಯಕರನ್ನು ಆಹ್ವಾನಿಸಲಾಗಿಲ್ಲ ಎಂದು ಅವರು ಹೇಳಿದರು.

ಸಮಾವೇಶದ ಬಳಿಕ ಸರ್ಕಾರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಸಮಾವೇಶವನ್ನು ಪಕ್ಷದ ಆಂತರಿಕ ವಿಚಾರಗಳೊಂದಿಗೆ ಬೆರೆಸಬಾರದು ಎಂದು ಹೇಳಿದರು.

ಕೇರಳ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಅವರಿಗೆ ಪದವಿ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ 20 ಮಂದಿ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸಿ ನೂತನ ಯುಡಿಎಫ್ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಇತ್ತೀಚೆಗೆ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಮರಳಿತ್ತು. ಬಳಿಕ ನಡೆದ ಸಭೆಯಲ್ಲಿ ವಿಡಿ ಸತೀಶನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಇದೀಗ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿಗೆ ಅವಕಾಶ ನೀಡಲಾಗಿದೆ. ಮುಸ್ಲಿಂ ಲೀಗ್‌ನ ಐವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೊತೆಗೆ ಕೇರಳ ಕಾಂಗ್ರೆಸ್-ಜೋಸೆಫ್‌ನ ಮಾನ್ಸ್ ಜೋಸೆಫ್, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್-ಜಾಕೋಬ್‌ನ ಅನೂಪ್ ಜಾಕೋಬ್ ಹಾಗೂ ಸಿಪಿ ಜಾನ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್ ಸಚಿವರಾಗಿದ್ದಾರೆ.

ಮೀನು ಸಾಗಾಟದ ವಾಹನ, ಜೀಪ್ ನಡುವೆ ಭೀಕರ ಅಪಘಾತ: ಕೇರಳ ಮೂಲದ ಇಬ್ಬರು ಪ್ರವಾಸಿಗರು ಸಾವು

0

ಉಡುಪಿ: ಕೊಲ್ಲೂರು ದೇವಿಯ ದರ್ಶನ ಪಡೆದು ಕೊಡಚಾದ್ರಿಗೆ ತೆರಳಿದ್ದ ಕೇರಳ ಮೂಲದ ಪ್ರವಾಸಿಗರಿಗೆ ವಾಪಸ್ ಬರುವ ವೇಳೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನ ಮತ್ತು ಪ್ರವಾಸಿಗರ ಜೀಪ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಕೊಡಚಾದ್ರಿಯ ದಳಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ಪ್ರವಾಸಿಗರು ವಾಪಾಸ್ ಬರುತ್ತಿದ್ದ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾಗಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರ, ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕೇರಳ ಮೂಲದ ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮಳೆಯ ಅಬ್ಬರಕ್ಕೆ ಕುರಿಗಾಹಿ ಬಲಿ..! ಗದಗ ಜಿಲ್ಲೆ ತತ್ತರ

ಗದಗ: ಭಾನುವಾರ ಸಂಜೆ ಸುರಿದ ಭಾರಿ ಗಾಳಿ, ಗುಡುಗು-ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಗದಗ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಜಿಲ್ಲೆಯ ಹಲವೆಡೆ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿದ್ದು, ಬೃಹತ್ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಜನರು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಕಂಬ ಬಿದ್ದು ಕುರಿಗಾಹಿ ಬಲಿ

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಶಿಗ್ಲಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ರಾಹುಲ್ ಚವ್ಹಾಣ್ ಅವರಿಗೆ ಸೇರಿದ ಲೇಔಟ್ ಬಳಿ ಭಾನುವಾರ ಸಂಜೆ ಭಾರೀ ಗಾಳಿ-ಮಳೆಯ ನಡುವೆ ಹೆಸ್ಕಾಂ ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ. ಈ ವೇಳೆ ಅಲ್ಲೇ ಕುರಿ ಮೇಯಿಸುತ್ತಿದ್ದ ಮಂಜಪ್ಪ ತಂದೆ ನಿಂಗಪ್ಪ ಸರಸೂರಿ ಎಂಬಾತನ ಎರಡೂ ಕಾಲುಗಳ ಮೇಲೆ ಕಂಬ ಬಿದ್ದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ.

ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗಾಳಿಗೆ ಹಾರಿ ಹೋದ ಶೆಡ್ – ವೃದ್ದ ದಂಪತಿ ಕಂಗಾಲು

ಗದಗ ನಗರದ ಮುಂಡರಗಿ ರಸ್ತೆಯ ಲೇಔಟ್ ಪ್ರದೇಶದಲ್ಲಿ ಶೆಡ್‌ನಲ್ಲಿ ವಾಸವಾಗಿದ್ದ ಕಳಕಪ್ಪ ಹಾಗೂ ಫಕ್ಕೀರಮ್ಮ ಎಂಬ ವೃದ್ದ ದಂಪತಿಯ ಬದುಕು ಒಂದೇ ಮಳೆಗೆ ಅಕ್ಷರಶಃ ಚಿಂದಿಯಾಗಿದ್ದು, ಕಳೆದ ಆರುt ವರ್ಷಗಳಿಂದ ಶೆಡ್‌ನಲ್ಲಿ ವಾಸವಿದ್ದು ಲೇಔಟ್ ಸ್ವಚ್ಛತೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ ಶೆಡ್ ಮೇಲ್ಚಾವಣಿ ಭಾರಿ ಗಾಳಿಗೆ ಕೊಚ್ಚಿ ಹೋಗಿದೆ.

ಶೆಡ್ ಒಳಗಿದ್ದ ದವಸ-ಧಾನ್ಯಗಳು ಮಳೆಗೆ ಸಂಪೂರ್ಣ ಹಾಳಾಗಿದ್ದು, ಜೀವನೋಪಾಯವೇ ಕತ್ತಲೆಯಲ್ಲಿದೆ. “ಸರ್ಕಾರ ನಮಗೆ ಪರಿಹಾರ ಕೊಡಲಿ” ಎಂದು ವೃದ್ದ ದಂಪತಿ ಕಣ್ಣೀರಿಟ್ಟಿದ್ದಾರೆ.

ಮನೆ ಕಿತ್ತು ಹೋಗಿ ಗುಡಿಯಲ್ಲಿ ಬದುಕು

ಗದಗ ತಾಲೂಕಿನ ಶಿರುಂಜ್ ಗ್ರಾಮದಲ್ಲಿ ಗಾಳಿ-ಮಳೆಯ ರೌದ್ರಾವತಾರಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಕಿತ್ತು ಹೋಗಿವೆ. ಮನೆಗಳಿಗೆ ಹಾನಿಯಾಗಿರುವ ಕಾರಣ ಗ್ರಾಮಸ್ಥರು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದು ದಿನ ಕಳೆಯುವಂತಾಗಿದೆ.

ತಾಯಿ-ಮಗನ ಜೀವ ಉಳಿಸಿದ ಕೆಲವೇ ಕ್ಷಣಗಳು

ಗದಗ ತಾಲೂಕಿನ ಹೊಸೂರ ಗ್ರಾಮದಲ್ಲೂ ಗಾಳಿ-ಮಳೆಯ ಅಬ್ಬರ ಭಾರೀ ಅವಾಂತರ ಸೃಷ್ಟಿಸಿದೆ. ಮನೆಗಳು ಹಾಗೂ ಶಾಲೆಗಳ ಶೀಟುಗಳು ಗಾಳಿಗೆ ಹಾರಿ ಹೋಗಿವೆ.

ಭಾರಿ ಶಬ್ದ ಕೇಳುತ್ತಿದ್ದಂತೆ ಮನೆಯೊಳಗಿಂದ ಹೊರಗೆ ಓಡಿ ಬಂದ ತಾಯಿ ಮತ್ತು ಮಗ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ಕ್ಷಣ ತಡವಾಗಿದ್ದರೆ ದೊಡ್ಡ ದುರಂತ ಸಂಭವಿಸಬಹುದಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಗ್ರಾಮ ರಸ್ತೆಗಳ ಮೇಲೆ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮರಗಳ ತೆರವು ಕಾರ್ಯ ವಿಳಂಬವಾಗಿರುವುದಕ್ಕೆ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರಿ ಗಾಳಿ-ಮಳೆಯ ದಾಳಿಗೆ ಜಿಲ್ಲೆಯ ಜನರು ಭಯಭೀತರಾಗಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ, ಸಂಚಾರ ಅಸ್ತವ್ಯಸ್ತ ಹಾಗೂ ಲಕ್ಷಾಂತರ ರೂಪಾಯಿ ಆಸ್ತಿ ಹಾನಿ ಸಂಭವಿಸಿದೆ.

ಶಿವಮೊಗ್ಗದಲ್ಲಿ ಮಳೆ ರುದ್ರನರ್ತನ: ಶಿವಮೊಗ್ಗ-ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗ: ಭಾನುವಾರ ಸಂಜೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ರೈಲ್ವೆ ಟ್ರ್ಯಾಕ್ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಹಲವು ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಎದುರಾಯಿತು.

ಮೈಸೂರು-ಶಿವಮೊಗ್ಗ ಮತ್ತು ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲುಗಳ ಜೊತೆಗೆ ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಸಂಚಾರಕ್ಕೂ ತೊಂದರೆಯಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಬಳಿಕ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್ ಲೈನ್ ಸರಿಪಡಿಸಿದ ನಂತರ ಸಂಚಾರ ಆರಂಭವಾಯಿತು.

ಮತ್ತೊಂದೆಡೆ ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದಲ್ಲಿ ಸಿಡಿಲಿನ ಆಘಾತಕ್ಕೆ 50 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನರಸಿಂಹಮೂರ್ತಿ ಎಂಬುವವರಿಗೆ ಸೇರಿದ ಕುರಿಗಳನ್ನು ಶಿವಮೊಗ್ಗದಲ್ಲಿ ಮೇಯಿಸಲಾಗುತ್ತಿತ್ತು.

ತಡರಾತ್ರಿ ಸುರಿದ ಮಳೆಯ ವೇಳೆ ತೋಟದಲ್ಲಿ ಕುರಿಗಳು ಮಲಗಿದ್ದಾಗ ಸಿಡಿಲು ಬಡಿದಿದ್ದು, 400 ಕುರಿಗಳ ಪೈಕಿ 50 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಈ ಘಟನೆ ಕುರಿಗಾಹಿಗೆ ಭಾರೀ ನಷ್ಟ ಉಂಟುಮಾಡಿದೆ.

ಲೀಸ್ ಮನೆ ಹೆಸರಲ್ಲಿ ₹200 ಕೋಟಿ ವಂಚನೆ! ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿ ಆರೋಪಿ ಎಸ್ಕೇಪ್

ಬೆಂಗಳೂರು: ನಗರದಲ್ಲಿ ಲೀಸ್ ಮನೆ ಹುಡುಕುತ್ತಿದ್ದವರನ್ನೇ ಟಾರ್ಗೆಟ್ ಮಾಡಿ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆಸಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ‘ಜಾನ್ಸ್ ಅಸೆಟ್’ ಎಂಬ ಮಿಡಿಯೇಟರ್ ಕಂಪನಿ, ಮನೆ ಲೀಸ್ ಕೊಡಿಸುವ ಹೆಸರಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ವಂಚನೆ ಎಸಗಿದ್ದು, ಕಂಪನಿ ಮಾಲೀಕ ಸ್ಟೀಫನ್ ಅರ್ಥರ್ ಸದ್ಯ ಪರಾರಿಯಾಗಿದ್ದಾನೆ.

ನಗರದಲ್ಲಿ ಲೀಸ್ ಮನೆಗಳ ಕೊರತೆಯನ್ನು ಬಂಡವಾಳ ಮಾಡಿಕೊಂಡಿದ್ದ ಕಂಪನಿ, “ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಿಮಗಾಗಿ ಮನೆ ಹುಡುಕಿ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ” ಎಂದು ಸಾರ್ವಜನಿಕರನ್ನು ನಂಬಿಸಿತ್ತು. ಹಣವೂ ಉಳಿಯುತ್ತದೆ, ಮಾಸಿಕ ಬಾಡಿಗೆಯ ಭಾರವೂ ಇರುವುದಿಲ್ಲ ಎಂಬ ಭರವಸೆ ನೀಡಿ ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿವರೆಗೆ ಹಣ ಸಂಗ್ರಹಿಸಿತ್ತು.

ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದ ಕಂಪನಿ, ಬಳಿಕ ಬಾಡಿಗೆ ಕಟ್ಟುವುದನ್ನು ನಿಲ್ಲಿಸಿ ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದಾಗ ಮಾತ್ರ ಹಲವರಿಗೆ ವಂಚನೆ ಗೊತ್ತಾಗಿದೆ.

ಗಾಯತ್ರಿ ಎಂಬ ಸಂತ್ರಸ್ತೆಯಿಂದಲೇ 37 ಲಕ್ಷ ರೂಪಾಯಿ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಹಣ ವಾಪಸ್ ಕೇಳಲು ಹೋದಾಗ, ಅದನ್ನು ಇನ್ವೆಸ್ಟ್ ಮಾಡಿದರೆ ತಿಂಗಳಿಗೆ 4% ಬಡ್ಡಿ ನೀಡುವುದಾಗಿ ಕಂಪನಿ ಮತ್ತೊಮ್ಮೆ ಆಮಿಷ ಒಡ್ಡಿತ್ತಂತೆ. ಆರಂಭದಲ್ಲಿ ಎರಡು ತಿಂಗಳು ಬಡ್ಡಿ ನೀಡಿ ಬಳಿಕ ಕಂಪನಿ ಸಂಪೂರ್ಣ ಕೈಕೊಟ್ಟಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಸದ್ಯ ಕಂಪನಿ ಕಚೇರಿ ಬಂದ್ ಆಗಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಪ್ರಕರಣ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!