ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿ ಜನರು ರಾತ್ರಿಯಿಡೀ ಪರದಾಡುವಂತಾಯಿತು.
ಮುಂಗಾರಿನ ಮೊದಲ ಮಳೆಯಲ್ಲೇ ತ್ಯಾಜ್ಯದಿಂದ ತುಂಬಿಕೊಂಡಿದ್ದ ಚರಂಡಿಗಳ ಕೊಳಚೆ ನೀರು ರಸ್ತೆಗಳಿಗೆ ಹರಿದು ಬಂದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದವು. ಪಟ್ಟಣದ ಶಿಗ್ಲಿ ಕ್ರಾಸ್, ಗ್ರಂಥಾಲಯದ ಬಳಿ ಅಪಾರ ಪ್ರಮಾಣದ ನೀರು ಹರಿದು ಬಂದು ರಸ್ತೆಗಳಲ್ಲಿ ಕೊಳಚೆ ನೀರು ತುಂಬಿಕೊಂಡಿತ್ತು. ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ನೀರಿನಿಂದ ತುಂಬಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಅಂಬೇಡ್ಕರ್ ನಗರ, ಮುಕ್ತಿನಗರ, ಬಸವೇಶ್ವರ ನಗರ ಸೇರಿದಂತೆ ತಗ್ಗು ಪ್ರದೇಶಗಳ ಅನೇಕ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಆತಂಕದಲ್ಲಿ ರಾತ್ರಿಯಿಡೀ ಕಾಲ ಕಳೆಯುವಂತಾಯಿತು.
ಭಾರಿ ಗಾಳಿ-ಮಳೆಯ ಅಬ್ಬರಕ್ಕೆ ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಹಾಗೂ ಕೆಲವೆಡೆ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಸ್ಕಾಂ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯನಿರ್ವಹಿಸಿದರು. ಅವರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸವಣೂರ ರಸ್ತೆಯ ಹೂವಮ್ಮ ಮಲ್ಲಪ್ಪ ಗದ್ದಿ ಅವರ ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ವೃದ್ಧೆ, ಮಹಿಳೆ ಮತ್ತು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಟ್ಟಿಗೆರೆಯ ಅಂಚಿನ ಪ್ರದೇಶದ ನಿವಾಸಿಗಳು ವರ್ಷಗಳಿಂದ ಅನುಭವಿಸುತ್ತಿರುವ ಹಿನ್ನೀರಿನ ಸಮಸ್ಯೆ ಪರಿಹರಿಸಲು ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗಾಗಿ ₹೫೬ ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದ ಕಾಮಗಾರಿಗಳು ಮೊದಲ ಮಳೆಯ ಹೊಡೆತಕ್ಕೇ ಕಿತ್ತು ಹೋಗಿವೆ. ನೀರು ಕೆರೆಗೆ ಹರಿದು ಹೋಗಲು ಗುತ್ತಿಗೆದಾರರು ರಾತ್ರಿಯಿಡೀ ಹರಸಾಹಸ ಪಟ್ಟರೂ ಈ ಭಾಗದ ಜನರು ಸಮಸ್ಯೆಯಿಂದ ಹೊರಬರಲಿಲ್ಲ. ಹಾಕಲಾಗಿದ್ದ ಬಂಡು ಒಡೆದು ಹೋಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇನ್ನೂ ಕೆರೆಗೆ ಚರಂಡಿ ಹಾಗೂ ಕೊಳಚೆ ನೀರು ಹರಿದು ಬರುತ್ತಿರುವುದು ಮುಂದುವರಿದಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಪುರಸಭೆಯ ಲಕ್ಷಾಂತರ ರೂಪಾಯಿ ಹಣ ಪೋಲಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
“ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಪುರಸಭೆಯ ಲಕ್ಷಾಂತರ ರೂಪಾಯಿ ಹಣ ಪೋಲಾಗಿದ್ದು, ಜನರ ಸಮಸ್ಯೆಯೂ ಪರಿಹಾರವಾಗಿಲ್ಲ, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.”
ಶರಣು ಗೋಡಿ, ಜಿಲ್ಲಾಧ್ಯಕ್ಷ
ಕರವೇ ಸ್ವಾಭಿಮಾನಿ ಸೇನೆ

