ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ದಿ. ಯೂನಿಕ್ ಶಾಲೆಯ ವಿದ್ಯಾರ್ಥಿನಿ ಚಂದನಾ ಕಳಸಾಪುರ ಅವರು ಭರತನಾಟ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.
ಲಕ್ಕುಂಡಿಯಲ್ಲಿ ವಿಬಿಜಿ ರಾಮಜೀ ಜನಜಾಗೃತಿ ಪಾದಯಾತ್ರೆ
ಲಕ್ಕುಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮಜೀ ಕಾಯ್ದೆಯ ನಿಯಮದಂತೆ ರಾಜ್ಯ ಸರ್ಕಾರವು ಶೇ. 40ರಷ್ಟು ಪಾಲನ್ನು ಭರಿಸಬೇಕಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಯೋಜನೆ ಕುರಿತು ತಪ್ಪು ಭಾವನೆಗಳನ್ನು ಮೂಡಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಸಿ.ಸಿ. ಪಾಟೀಲ್ ಆರೋಪಿಸಿದರು.
ಇಲ್ಲಿನ ವಿರುಪಾಕ್ಷೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಲಕ್ಕುಂಡಿ ಬಿ.ಜೆ.ಪಿ. ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವಿಬಿಜಿ ರಾಮಜೀ ಯೋಜನೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾಯ್ದೆಯನ್ನು ವಿರೋಧಿಸುವ ಉದ್ದೇಶದಿಂದಲೇ 11 ದಿನಗಳ ಅಧಿವೇಶನ ನಡೆಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದು ಗೊತ್ತಿದ್ದರೂ ಅನಗತ್ಯವಾಗಿ ವಿರೋಧಿಸುವುದು ಹತಾಶೆ ಮನೋಭಾವನೆಯಾಗಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರವು ಇದೇ ಯೋಜನೆಗೆ ಸುಮಾರು 20 ಬಾರಿ ಹೆಸರು ಬದಲಾಯಿಸಿದ್ದು ಜನರಿಗೆ ಇನ್ನೂ ನೆನಪಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಯೋಜನೆಗೆ ಅನುದಾನವನ್ನು ₹30 ಸಾವಿರ ಕೋಟಿಯಿಂದ ₹90 ಸಾವಿರ ಕೋಟಿಗೆ ಹೆಚ್ಚಿಸಿದೆ. ಭ್ರಷ್ಟಾಚಾರ ತಡೆಗಟ್ಟಲು ಕಾರ್ಮಿಕರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೆ, ಕೇಂದ್ರದ ಜನಪರ ಯೋಜನೆಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಸರ್ಕಾರವು ₹8 ಲಕ್ಷ ಕೋಟಿ ಸಾಲದಲ್ಲಿದೆ ಎಂದರು.
ಬಿ.ಜೆ.ಪಿ. ಧುರೀಣ ವಸಂತ ಮೇಟಿ, ಮಾಜಿ ಯೋಧ ದತ್ತಣ್ಣ ಜೋಶಿ, ಅಧ್ಯಕ್ಷತೆ ವಹಿಸಿದ್ದ ಲಕ್ಕುಂಡಿ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಹಾಗೂ ಪ್ರಧಾನ ಕಾರ್ಯದರ್ಶಿ ಶರಣಪ್ಪ ಕುದರಿ ಮಾತನಾಡಿದರು.
ಅತ್ತಿಮಬ್ಬೆ ಮಹಾದ್ವಾರದಿಂದ ವಿರುಪಾಕ್ಷೇಶ್ವರ ದೇವಸ್ಥಾನವರೆಗೆ ಪಾದಯಾತ್ರೆ ನಡೆಸಲಾಯಿತು.
ಜಿ.ಪಂ. ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಬಿ.ಜೆ.ಪಿ. ಯುವ ಧುರೀಣ ಉಮೇಶಗೌಡ ಪಾಟೀಲ, ಪ್ರದೀಪ ನವಲಗುಂದ, ಅಶೋಕ ಬೂದಿಹಾಳ, ತಾ.ಪಂ. ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಫಕ್ಕೀರಮ್ಮ ಬೇಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಸದಸ್ಯ ಪ್ರಲ್ಹಾದ ಹೊಸಳ್ಳಿ ನಿರೂಪಿಸಿದರು. ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಮರಿಯಪ್ಪ ವಡ್ಡರ ವಂದಿಸಿದರು.
ಭಾರತ ಸೇನೆಯಲ್ಲಿ 2026 ಅಗ್ನಿವೀರ್ ನೇಮಕಾತಿ; ಆಸಕ್ತರು ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ!
ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರು ಫೆಬ್ರವರಿ 13ರಿಂದ ಏಪ್ರಿಲ್ 1ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗಾಗಿ ಅಧಿಕೃತ ವೆಬ್ಸೈಟ್: joinindianarmy.nic.in
ಅರ್ಹತೆ:
ಅಗ್ನಿವೀರ್ ಜಿಡಿ (General Duty): 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33%, ಒಟ್ಟು 45%
ಅಗ್ನಿವೀರ್ ತಾಂತ್ರಿಕ: 12ನೇ ತರಗತಿ (ಭೌತಶಾಸ್ತ್ರ, ಗಣಿತ, ಇಂಗ್ಲಿಷ್) ಕನಿಷ್ಠ 50%
ಕ್ಲರ್ಕ್/ಸ್ಟೋರ್ ಕೀಪರ್: 12ನೇ ತರಗತಿ, ಇಂಗ್ಲಿಷ್ ಮತ್ತು ಗಣಿತ/ಅಕೌಂಟ್ಸ್ 50%, ಒಟ್ಟು 60%
ಟ್ರೆಡ್ಸ್ಮನ್: 8ನೇ ಅಥವಾ 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ 33%
ಮಹಿಳಾ ಮಿಲಿಟರಿ ಪೊಲೀಸ್ (GD): 10ನೇ ತರಗತಿ, 45%
ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ: 12ನೇ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್) ಕನಿಷ್ಠ 50%
ಸಿಪಾಯಿ ಫಾರ್ಮಾ: ಡಿ ಫಾರ್ಮಾ (55%) ಅಥವಾ ಬಿ ಫಾರ್ಮಾ (50%), ಫಾರ್ಮಸಿ ಕೌನ್ಸಿಲ್ ನೋಂದಣಿ
ಜೆಸಿಒ ಧಾರ್ಮಿಕ ಶಿಕ್ಷಕ: ಸಂಬಂಧಿತ ಧರ್ಮದಲ್ಲಿ ಪದವಿ/ಡಿಪ್ಲೊಮಾ.
ವಯೋಮಿತಿ:
ಅಗ್ನಿವೀರ್ ಜಿಡಿ, ತಾಂತ್ರಿಕ,
ಟ್ರೆಡ್ಸ್ಮನ್: 17.5 – 22 ವರ್ಷ
ಸೋಲ್ಜರ್ ಟೆಕ್ನಿಕಲ್: ಗರಿಷ್ಠ 23 ವರ್ಷ
ಸಿಪಾಯಿ ಫಾರ್ಮಾ: 19 – 25 ವರ್ಷ
ಜೆಸಿಒ ಧಾರ್ಮಿಕ ಶಿಕ್ಷಕ: 25 – 34 ವರ್ಷ
(ವಯಸ್ಸು ಜುಲೈ 1, 2027ಕ್ಕೆ ಲೆಕ್ಕಿಸಲಾಗುವುದು)
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) – ಜೂನ್ 1 ರಿಂದ 15
ದೈಹಿಕ ಸದೃಢತಾ ಪರೀಕ್ಷೆ
ದೈಹಿಕ ಅಳತೆ ಪರೀಕ್ಷೆ (ಕನಿಷ್ಠ ಎತ್ತರ: ಸಾಮಾನ್ಯ – 170 ಸೆಂ.ಮೀ, ಕ್ಲರ್ಕ್ – 162 ಸೆಂ.ಮೀ; ಎದೆ: 77 ಸೆಂ.ಮೀ + 5 ಸೆಂ.ಮೀ ವಿಸ್ತರಣೆ)
ವೈದ್ಯಕೀಯ ಪರೀಕ್ಷೆ:-
ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ:
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಿ.
ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣ: ತೆರೆವಿಗೆ ಯತ್ನಿಸಿದ ತಹಸೀಲ್ದಾರ್ ಮುಂದೆಯೇ ಹೈಡ್ರಾಮಾ; ಆತ್ಮಹತ್ಯೆ ಯತ್ನ?
ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕಿನ ಗಿಡಗಾನಹಳ್ಳಿ ನಿವಾಸಿ ರಾಧಾಕೃಷ್ಣ ಸ್ವಂತ ಜಮೀನಿನ ಪಕ್ಕದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಯತ್ನಿಸುತ್ತಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಾಧಾಕೃಷ್ಣ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಗ್ರಾಮಪಂಚಾಯ್ತಿಯಲ್ಲಿ ನೌಕರಿ ಮಾಡುತ್ತಾರೆ. ಸ್ಥಳೀಯ ತಹಶೀಲ್ದಾರ್ ಪೂರ್ಣಿಮಾ ಮನೆ ನಿರ್ಮಾಣ ಹಂತವನ್ನು ತಡೆಯಲು ಮುಂದಾದಾಗ, ರಾಧಾಕೃಷ್ಣ ತಹಶೀಲ್ದಾರ್ ವಿರುದ್ಧ ಡೆತ್ನೋಟ್ ಬರೆದಿದ್ದು, ಔಷಧಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸ್ಥಳೀಯ ಗೌಡಗೆರೆ ಗ್ರಾಮಪಂಚಾಯ್ತಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಕಂದಾಯ ಜಮೀನಿಗೆ ಕಟ್ಟಡ ಪರವಾನಿಗೆ ನೀಡಿದ ವಿಷಯ ಚರ್ಚೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸಿದ್ದಾರೆ.
ಗ್ರಾಮಸ್ಥರು, “ತಮ್ಮ ಸ್ವಂತ ಜಮೀನು ಹೊರತುಪಡಿಸಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಯತ್ನಿಸಿದ್ದೇ ತಪ್ಪು, ಆದರೆ ಆತ್ಮಹತ್ಯೆ ಪ್ರಯತ್ನ ಮಾಡುವುದು ಸರಿಯಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನ್ನದಾತರ ಗಮನಕ್ಕೆ; ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ!
ಬೆಂಗಳೂರು: ಕರ್ನಾಟಕದ ರೈತರಿಗೆ ಪಿಎಂ-ಕಿಸಾನ್ ಯೋಜನೆಯ ಬಾಕಿ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಂಡಿದೆ.
ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ 2025ರ ಡಿಸೆಂಬರ್ 17 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ತಾಂತ್ರಿಕ ಕಾರಣಗಳಿಂದ ಸುಮಾರು 30,000 ರೈತರು ಯೋಜನೆಯ ಲಾಭದಿಂದ ವಂಚಿತರಾಗಿರುವುದನ್ನು ಗಮನಕ್ಕೆ ತಂದಿದ್ದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಹ ಅವರು ಈ ವಿಷಯವನ್ನು ಉಲ್ಲೇಖಿಸಿ ಮನವಿ ಮಾಡಿದ್ದರು.
ಕೇಂದ್ರ ಸಚಿವ ಚೌಹಾಣ್, ರಾಜ್ಯ ಸರ್ಕಾರ ನೀಡಿದ ದೃಢೀಕರಣದ ಆಧಾರದ ಮೇಲೆ ಈಗಾಗಲೇ 22,000ಕ್ಕೂ ಹೆಚ್ಚು ಫಲಾನುಭವಿಗಳನ್ನು 22ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಿದ್ದಾಗಿ ತಿಳಿಸಿದ್ದಾರೆ ಮತ್ತು ಶೀಘ್ರದಲ್ಲೇ ಅವರಿಗೆ ಹಣ ಬಿಡುಗಡೆ ಆಗಲಿದೆ ಎಂದು ಖಚಿತಪಡಿಸಿದ್ದಾರೆ. ಉಳಿದ ಪ್ರಕರಣಗಳನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ತಕ್ಷಣ ಉಳಿದ ರೈತರನ್ನೂ ಯೋಜನೆಯಲ್ಲಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಎನ್. ಚಲುವರಾಯಸ್ವಾಮಿ, ರೈತರಿಗೆ ನ್ಯಾಯ ಒದಗಿಸಿದ ಕೇಂದ್ರ ಕೃಷಿ ಸಚಿವರಿಗೆ ರಾಜ್ಯ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕೇಂದ್ರದ ಈ ಕ್ರಮದಿಂದ ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗಲಿದೆ, ಮತ್ತು ಉಳಿದ ದಾಖಲೆಗಳ ಪರಿಶೀಲನೆ ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ರಾಜ್ಯದ ಜನತೆಗೆ ಸಮಸ್ಯೆಗಳನ್ನು ನಿರ್ಮಿಸಿದ ಸರ್ಕಾರ: ಎನ್. ರವಿಕುಮಾರ್
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮಾಚರಣೆ ಮಾಡಲು ಯಾವುದೇ ನೈತಿಕತೆ ಇಲ್ಲ. ಇದು ರಾಜ್ಯದ ಜನತೆಗೆ ಸಾವಿರ ಸಮಸ್ಯೆಗಳನ್ನು ನಿರ್ಮಿಸಿದ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.
ಅವರು ಶನಿವಾರ ಶಿರಹಟ್ಟಿಯ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸ್ವತಃ ಮುಖ್ಯಮಂತ್ರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ಭಾಗಿಯಾಗಿ ಸುಮಾರು 14 ಸೈಟುಗಳನ್ನು ವಾಪಸ್ ನೀಡಿರುವುದು ನೈತಿಕ ಪತನಕ್ಕೆ ಉದಾಹರಣೆ. ವಾಲ್ಮೀಕಿ ನಿಗಮದ ಹಗರಣದ ಕುರಿತು ಸದನದಲ್ಲೇ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಅಬಕಾರಿ ಇಲಾಖೆಯಲ್ಲಿ ಸುಮಾರು 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದರೂ ಸಚಿವರು ರಾಜೀನಾಮೆ ನೀಡಿಲ್ಲ. ವೈನ್ಶಾಪ್ ಅಸೋಸಿಯೇಷನ್ಗಳು ದೂರು ಹಾಗೂ ಸಾಕ್ಷಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಗಳು ಲಂಚದ ಹಣ ಸಮೇತ ಬಂಧಿತರಾದರೂ ಸಚಿವರು ಅದೇ ಖಾತೆಯಲ್ಲಿ ಮುಂದುವರಿದಿರುವುದು ದುರಂತವಾಗಿದೆ. ಮೈಸೂರಿನಲ್ಲಿ ವೈನ್ ಶಾಪ್ ನಡೆಸಲು ಪ್ರತಿ ತಿಂಗಳು ಮಂಥ್ಲಿ ಫಿಕ್ಸ್ ಮಾಡಿರುವುದು ಭ್ರಷ್ಟಾಚಾರದ ಪರಾಕಾಷ್ಠೆಯನ್ನು ತೋರಿಸುತ್ತಿದೆ. ಸುಮಾರು 37,000 ಕೋಟಿ ಗುತ್ತಿಗೆದಾರರ ಬಾಕಿ ಹಣ ಪಾವತಿಸಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಬಿ. ಬೀರಪ್ಪ ಅವರೇ ಸರ್ಕಾರದಲ್ಲಿ ಶೇ. 63ಕ್ಕೂ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಹೇಳಿಕೆ ನೀಡಿರುವುದೇ ಮತ್ತೊಂದು ಸಾಕ್ಷಿಯಾಗಿದೆ.
ಗೃಹಲಕ್ಷ್ಮೀ ಯೋಜನೆಯಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. 2025 ಫೆಬ್ರವರಿ-ಮಾರ್ಚ್ ತಿಂಗಳ ಕಂತುಗಳನ್ನು ಮಹಿಳೆಯರಿಗೆ ನೀಡದೇ ಸುಮಾರು 5000 ಕೋಟಿ ಅವ್ಯವಹಾರ ನಡೆದಿದೆ. ಚುನಾವಣೆ ಬಂದಾಗ ಮಾತ್ರ ಹಣ ಜಮೆ ಮಾಡುತ್ತಾರೆ, ಹೀಗಾಗಿ ಇದು ಗೃಹಲಕ್ಷ್ಮೀ ಅಲ್ಲ, ಎಲೆಕ್ಷನ್ ಲಕ್ಷ್ಮೀಯಾಗಿದೆ ಎಂದರು.
ತುಂಗಭದ್ರ ಡ್ಯಾಂ ದುರಸ್ತಿ ಕಾಮಗಾರಿಗೆ ಹಣ ನೀಡಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಜೈಲುಗಳು ಅರಮನೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು, ವಿಜಯಪುರ, ಬೀದರ್, ಮಂಗಳೂರು ನಗರಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಿವೆ. ಪೊಲೀಸರೇ ಅನೇಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಬೇರೆ ರಾಜ್ಯದ ಪೊಲೀಸರು ಬಂದು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸಿಲಿಕಾನ್ ಸಿಟಿ ಬೆಂಗಳೂರು ಗುಂಡಿಗಳ ನಗರವಾಗಿದೆ. 350ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದವರೆಗೆ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ. ಇವುಗಳ ಜೊತೆಗೆ 54 ಮಂದಿಗೆ ಕ್ಯಾಬಿನೆಟ್ ದರ್ಜೆ ನೀಡಿ ನೂರಾರು ಕೋಟಿ ಅನಗತ್ಯ ವೆಚ್ಚ ಮಾಡಿದ್ದಾರೆ. ಹೀಗಾಗಿ ಮೋಜು-ಮಸ್ತಿ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮಾಚರಣೆ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ, ಶಾಸಕ ಡಾ. ಚಂದ್ರು ಲಮಾಣಿ, ಸಂತೋಷ ಹಡಪದ, ಸಂತೋಷ ಬಿರಾದಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ್ ಲಕ್ಕುಂಡಿ, ಜಿಲ್ಲಾ ಪ್ರ.ಕಾ. ಫಕ್ಕೀರೇಶ ರಟ್ಟಿಹಳ್ಳಿ, ತಾಲೂಕಾ ಮಹಿಳಾಧ್ಯಕ್ಷೆ ನಂದಾ ಪಲ್ಲೆದ, ಶಂಕರ ಮರಾಠೆ, ಸಂದೀಪ ಕಪ್ಪತ್ತನವರ, ರಾಮಣ್ಣ ಕಂಬಳಿ, ವಿನಾಯಕ ಭಿಡವೆ, ಸಂತೋಷ ತೋಡೆಕಾರ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಸರ್ಕಾರವಾಗಿದೆ. ರೈತರ ಜಮೀನು, ಮಠ-ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿಗಳಾಗಿ ಪರಿವರ್ತಿಸಲು ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಇದು ರೈತರ ವಿರೋಧಿ ಸರ್ಕಾರವಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರದ್ದು, ಬೆಂಬಲ ಬೆಲೆ ನೀಡದಿರುವುದು, ರೈತ ವಿದ್ಯಾನಿಧಿ ಸ್ಥಗಿತ, ರೈತ ವಿರೋಧಿ ನೀತಿಗಳು ಎಂದು ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಉದ್ಯೋಗದಲ್ಲಿ ಕನ್ನಡಕ್ಕೆ ಪ್ರಥಮಾದ್ಯತೆ ನೀಡಿ: ಜ. ಫಕೀರ ದಿಂಗಾಲೇಶ್ವರ ಜಗದ್ಗುರುಗಳು
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಆದಿಕವಿ ಪಂಪ ವೇದಿಕೆ: ಕನ್ನಡ ಸಾರಸ್ವತ ಲೋಕಕ್ಕೆ ಗದಗ ಜಿಲ್ಲೆಯ ಕೊಡುಗೆ ಅಗ್ರಗಣ್ಯ. ಕರ್ನಾಟಕ ಏಕೀಕರಣ, ನಾಮಕರಣದಲ್ಲಿ ಅಂದಾನೆಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾಯರ ಪಾತ್ರ ಮುಖ್ಯವಾಗಿದೆ ಎಂದು ಶಿರಹಟ್ಟಿ-ಬಾಲೆಹೊಸೂರು ಸಂಸ್ಥಾನ ಪೀಠದ ಜ. ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ, ನಾಡು, ಜಲ ಇತರೆಲ್ಲ ವಿಷಯದಲ್ಲಿ ನೆರೆ ರಾಜ್ಯಗಳಿಂದ ಸಮಸ್ಯೆಯಾಗುತ್ತಲೇ ಇದೆ. ಆದರೆ ರಾಜ್ಯದೊಳಗಡೆಯೇ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿರುವುದು ವಿಷಾದದ ಸಂಗತಿ. ಆಳುವ ಸರ್ಕಾರಗಳ ನೀತಿಯಿಂದ ಕನ್ನಡ ಕಲಿತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಮತ್ತು ಇಂಗ್ಲೀಷ್ ಕಲಿತವರು ಉದ್ಯೋಗಿಗಳಾಗುತ್ತಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಮೊದಲು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೇಡ, ಬದಲಾಗಿ ಅಭಿಮಾನ-ಸ್ವಾಭಿಮಾನ ಬೇಕು.
ಸಂಸತ್ತಿನಲ್ಲಿ ಮೊದಲು ಕನ್ನಡ ಭಾಷೆಯಲ್ಲಿ ಮಾತನಾಡಿದ ಕೀರ್ತಿ ಜೆ.ಎಚ್. ಪಟೇಲರು ಮತ್ತು ಇಂದಿರಾ ಗಾಂಧಿ ಎದುರಿಗೆ ಕುಳಿತು ಸಾವಲು ಹಾಕಿ ಗೆದ್ದ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾಗಿದ್ದ ದಿ.ಗೂಳಪ್ಪ ಉಪನಾಳ ನಮ್ಮ ಹೆಮ್ಮೆಯಾಗಿದ್ದಾರೆ. ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಅನ್ಯ ಭಾಷೆಯ ಜ್ಞಾನದ ಜೊತೆಗೆ ಮಾತೃಭಾಷೆ ಕನ್ನಡದ ಅಭಿಮಾನ ಬೆಳೆಸಬೇಕು. ರಾಜ್ಯಕ್ಕೆ ಕನ್ನಡ, ದೇಶಕ್ಕೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಇಂಗ್ಲೀಷ್ ಅವಶ್ಯ. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಲಿ ಆದರೆ ಬೇರೆ ಭಾಷೆಗಳ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳಬೇಡಿ. ಕನ್ನಡ ಶಾಲೆಗಳನ್ನು ಮುಚ್ಚುವದು ಬೇಡ. ಅವುಗಳನ್ನು ಬೆಳೆಸುವ ಕಾರ್ಯವಾಗಲಿ. ಕನ್ನಡ ಭಾಷೆ, ಜಲ, ಜಲದ ವಿಷಯ ಬಂದಾಗ ಕೇವಲ ಹೆಸರಿಗಾಗಿ ಬಡಿದಾಡದೆ ಕನ್ನಡದ ಉಸಿರಿಗಾಗಿ ಬಡಿದಾಡಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಎಲ್ಲಿ ಕನ್ನಡ ಉಳಿಯಬೇಕಾಗಿದೆಯೋ ಅಲ್ಲಿ ಕನ್ನಡ ಉಳಿಯುತ್ತಿಲ್ಲ. ಅಡುಗೆ ಮನೆಯಿಂದ ಆಡಳಿತದವರೆಗೂ ಕನ್ನಡ ಉಳಿಸಿದವರು ಹೆಣ್ಣುಮಕ್ಕಳು. ಕನ್ನಡ ಭಾಷೆ, ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ. ಗದಗ ಜಿಲ್ಲೆಯು ಕನ್ನಡ ನಾಡಿಗೆ ನೀಡಿದ ಕೊಡುಗೆಯಲ್ಲಿ ಕುಮಾರವ್ಯಾಸ, ಪಂಪ, ಪಂ. ಭೀಮಸೇನ ಜೋಶಿ, ಪಂ. ಪುಟ್ಟರಾಜ ಕವಿಗವಾಯಿಗಳು ಹೀಗೆ ಜಿಲ್ಲೆಯ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಆಶಯ ನುಡಿ ನುಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ನೀಲಗಿರಿ ತಳವಾರ, ಟಿ. ಈಶ್ವರ, ಪಕ್ಷಿ ಪ್ರೇಮಿ ಪ್ರಕಾಶ ಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗೀತಾ ಭೀರಣ್ಣವರ, ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ರಾಜು ಕುರಡಗಿ, ಪ್ರೊ. ಎಸ್.ಬಿ. ಕರಿಭರಮಗೌಡರ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ಕೆ.ಎಸ್. ಕೊಡ್ಲಿವಾಡ, ಎಸ್.ಎಫ್. ಶಿಗ್ಲಿ, ಗೀತಾ ಬೀರಣ್ಣವರ, ಅಶೋಕ ಸೊರಟೂರ, ಎಸ್.ಪಿ. ಬಳಿಗಾರ, ಶರಣು ಗೋಡಿ, ಮಂಜುನಾಥ ಮಾಗಡಿ, ಪುಲಿಕೇಶಿ ಉಪನಾಳ, ಡಿ.ಬಿ. ಬಳಿಗಾರ, ಫಕ್ಕೀರೇಶ ರಟ್ಟೀಹಳ್ಳಿ, ಫಕ್ಕೀರಗೌಡ್ರ ಪಾಟೀಲ, ಬಿಇಓ ಎಚ್. ನಾಣಕಿ ನಾಯ್ಕ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ಎಸ್.ಎಫ್. ಶಿಗ್ಲಿ, ಲೋಹಿತ ನೆಲವಿಗಿ ಮುಂತಾದವರಿದ್ದರು.
ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ರತ್ನಾ ಕುಂಬಾರ, ಸೋಮಶೇಖರ ಪಾಟೀಲ, ಆರ್.ಎಸ್. ಗಾಣಗೇರ ನಿರೂಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕನ್ನಡ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಇರುವ ಕೀಳುರಿಮೆ ಕಡಿಮೆಯಾಗಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಬೇಕು. ಕನ್ನಡದ ಮಹತ್ವವನ್ನು ಪ್ರತಿಯೊಬ್ಬರಿಗೆ ತಿಳಿಯುವಂತೆ ಮಾಡುವದು ಮುಖ್ಯವಾಗಿದ್ದು, ಪ್ರತಿ ವರ್ಷ ಸಮ್ಮೇಳನ ನಡೆಯುವಂತಾಗಬೇಕು. ಇದಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ಪ್ರತಿವರ್ಷ ನಡೆದು ಮಹತ್ವ ತಿಳಿಸುವ ಕಾರ್ಯವಾಗಲಿ. ಲಕ್ಷ್ಮೇಶ್ವರದಲ್ಲಿ ಕಸಾಪ ಭವನ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ಮೌಲ್ಯಾಧಾರಿತ ರಾಜಕೀಯಕ್ಕೆ ಬದ್ಧತೆ
ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಚೇರಿಯನ್ನು ಆರ್.ಟಿ. ನಗರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಅರುಮೋಘಮ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಮೌಲ್ಯಾಧಾರಿತ ರಾಜಕೀಯದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಬದ್ಧವಾಗಿದೆ ಎಂದು ಹೇಳಿದರು.
ಸಂವಿಧಾನಿಕ ಸಂಸ್ಥೆಗಳು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸದ ಹಿನ್ನೆಲೆ ಜನರ ಜವಾಬ್ದಾರಿ ಹೆಚ್ಚಾಗಿದೆ. ಜನಸಾಮಾನ್ಯರು ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ದುರ್ಬಲ ವರ್ಗಗಳು ಮತ್ತು ಮಹಿಳೆಯರ ಭದ್ರತೆ ಕುಂಠಿತಗೊಂಡಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರ ಗಂಭೀರ ವಿಷಯವಾಗಿದೆ. ಈ ಕುರಿತು ಜನಜಾಗೃತಿ ಮೂಡಿಸಿ, ಮೌಲ್ಯಾಧಾರಿತ ನಾಯಕತ್ವವನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾದ ವಕೀಲ ತಾಹಿರ್ ಹುಸೇನ್ ಮಾತನಾಡಿ, ರಾಜ್ಯದಲ್ಲಿ ದಲಿತ, ಶೋಷಿತ, ದಮನಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪರ ಪಕ್ಷವು ನಿರಂತರ ಹೋರಾಟ ನಡೆಸಲಿದೆ. ರಾಜ್ಯದಲ್ಲಿ ಕೋಮು ವೈಮನಸ್ಸು ಸೃಷ್ಟಿಸುವ ಪ್ರಯತ್ನಗಳನ್ನು ಸರ್ಕಾರ ತಕ್ಷಣ ತಡೆಹಿಡಿಯಬೇಕು. ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು ಹಾಗೂ ಶೋಷಿತ ಸಮುದಾಯಪರ ಬಜೆಟ್ ಮಂಡನೆ ಮಾಡುವಂತೆ ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ ಪಕ್ಷದ ರಾಜ್ಯಾಧ್ಯಕ್ಷ ಆರ್. ಮೋಹನ್, ಪಕ್ಷದ ಮುಖಂಡರಾದ ಹಬೀಬುಲ್ಲ ಖಾನ್, ರಿಯಾಜ್ ಅಹಮದ್, ತಾಜುದ್ದೀನ್ ಇಲಕಲ್, ಉದ್ಯಮಿ ಜವಾದ್ ಮೊಹಮ್ಮದ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.
ಸಾವಿರ ದಿನಗಳ ಸಮಾವೇಶ ಅಸಹ್ಯಕರ ಪದ್ಧತಿ: ಶಾಸಕ ಸಿ.ಸಿ. ಪಾಟೀಲ ವಾಗ್ದಾಳಿ
ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳ ಆಡಳಿತ ಪೂರೈಸಿದ ಸಂಭ್ರಮದಲ್ಲಿ ನಡೆಸಿದ ಸಮಾವೇಶವು ಸಾಧನೆಗಳ ಸಮಾವೇಶವಲ್ಲ, ಬದಲಾಗಿ ಹಗರಣಗಳ ಸಮಾವೇಶ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 178 ಕೋಟಿ ರೂಪಾಯಿಗಳನ್ನು 700ಕ್ಕೂ ಹೆಚ್ಚು ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಧಾನಸೌಧದಲ್ಲಿ ಇದು 178 ಕೋಟಿ ಅಲ್ಲ, 90 ಕೋಟಿ ರೂಪಾಯಿ ಎಂದು ಒಪ್ಪಿಕೊಂಡಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣದ ವರ್ಗಾವಣೆ ಬಗ್ಗೆ ಅರಿವಿಲ್ಲ ಎಂದರೆ, ಜನರೇ ಇದನ್ನು ಯಾವ ರೀತಿಯ ಸಾಧನೆ ಎಂದು ತೀರ್ಮಾನಿಸಬೇಕು ಎಂದರು.
ರಾಜ್ಯ ಸರ್ಕಾರ ವಕ್ಫ್ ಮಂಡಳಿಗೆ 4 ಕೋಟಿ ರೂ, 9 ನಿಗಮಗಳಲ್ಲಿ 42 ಕೋಟಿ ರೂ. ದುರ್ಬಳಕೆಯಾಗಿದೆ. 700 ಕೋಟಿ ರೂ.ಗಳ ಅಬಕಾರಿ ಹಗರಣದಿಂದಾಗಿ ಇಬ್ಬರು ಸಚಿವರ ತಲೆದಂಡವಾಗಲಿದೆ. ಬೋವಿ ನಿಗಮದಲ್ಲಿ 60 ಕೋಟಿ ರೂ. ಹಗರಣ ನಡೆದಿದೆ. ಇಷ್ಟೆಲ್ಲಾ ಅವಾಂತರಗಳ ನಡುವೆ ಸರ್ಕಾರ ಯಾವುದಕ್ಕಾಗಿ ಸಂಭ್ರಮಿಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಆರ್ಸಿಬಿ ಸಂಭ್ರಮಾಚರಣೆಯ ವೇಳೆ 11 ಜನರ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಪೊಲೀಸರು ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರೂ ಸರ್ಕಾರ ಹಠಕ್ಕೆ ಬಿದ್ದವರಂತೆ ಕಾರ್ಯಕ್ರಮಕ್ಕೆ ಅವಕಾಶ ನೀಡಿತು ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ಹಿಂದೆ ಎಸ್ಸಿಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇಂದು ಅದೇ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡಿರುವುದು ಹಾಗೂ ನರೇಗಾ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ದೂರಿದರು.
ಹಾವೇರಿಯಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ. ಸಿಎಂ ಭಾಷಣ ಶುರುವಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ವೇದಿಕೆಯಿಂದ ಹೊರನಡೆದರು ಎನ್ನುವುದನ್ನು ಮಾಧ್ಯಮವೊಂದರ ವರದಿಯಿಂದ ಗೊತ್ತಾಗಿದೆ. ಇದು ಅವರ ನಡುವಿನ ಅಸಮಾಧಾನಕ್ಕೆ ಸಾಕ್ಷಿ. ಈ ಸರ್ಕಾರಕ್ಕೆ ಸಾವಿರ ದಿನಗಳ ಕ್ವಾಂಟಿಟಿಗಿಂತ ಆಡಳಿತದ ಕ್ವಾಲಿಟಿ ಮುಖ್ಯ ಎಂಬುದೇ ಮರೆತುಹೋಗಿದೆ. ಸಾವಿರ ದಿನಗಳ ಈ ಸಮಾವೇಶ ಅಸಹ್ಯಕರ ಪದ್ಧತಿ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎನ್. ಹಿರೇಮಠ, ಜಗನ್ನಾಥಸಾ ಭಾಂಡಗೆ ಇತರರು ಉಪಸ್ಥಿತರಿದ್ದರು.
ಬಾಕ್ಸ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಸೀರ್ ಹುಸೇನ್ ಮತ್ತು ಆತನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಯಾವುದೇ ಕಠಿಣ ಕ್ರಮ ಜರುಗಿಸಲಿಲ್ಲ. ಗೃಹ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚುವಂತಾಗಿದೆ. ನಮ್ಮ ಪೊಲೀಸರಿಗೆ ಸಾಮರ್ಥ್ಯ ಇಲ್ಲ ಎಂದಲ್ಲ, ಸರ್ಕಾರ ಅವರ ಕೈಗಳನ್ನು ಕಟ್ಟಿ ಹಾಕಿದೆ. ಆ ಮೂಲಕ ದೇಶದಲ್ಲಿ ರಾಜ್ಯದ ಪೊಲೀಸರ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಜಯಸಾಕ್ಷಿ ಸುದ್ದಿ, ಹಾವೇರಿ: ಕಂದಾಯ ಇಲಾಖೆಯಿಂದ 2ನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ. ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ಕರದ ಸಹಸ್ರ ದಿನಾಚರಣೆ ಮತ್ತು ಒಂದು ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರು ಸಚಿವರಾದ ಮೇಲೆ ಸರ್ಕಾರದಲ್ಲಿ ಕ್ರಾಂತಿಕಾರಿ ಪ್ರಗತಿ ಆಗಿದೆ. ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. ಒಟ್ಟು ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ. ಈ ಎಲ್ಲಾ ಸಾಧನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿ ತೋರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರೂ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಕೂಡ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಗಿದೆ. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಅಧಿಕಾರ ಇದ್ದಾಗ ಕೊಟ್ಟ ಭರವಸೆ ಈಡೇರಿಸದ ಬಿಜೆಪಿ ಈಗ ನಮ್ಮ ಖಜಾನೆ ಖಾಲಿ ಆಗಿದೆ ಎನ್ನುವ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೂ ಗ್ಯಾರಂಟಿಗಳ ಮೂಲಕ 1,18,000 ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಖಾತೆಗೆ ಹಾಕಿದ್ದೇವೆ ಎಂದರು.
ಈ ಸಾವಿರ ದಿನಗಳಲ್ಲಿ ನಮ್ಮ ಸಾಧನಾ ಸಮಾವೇಶ ನಮ್ಮ ಬದ್ಧತೆಯಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಪುನರುಚ್ಛರಿಸಿದರು.
ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಹಾಗೂ 20ಕ್ಕೂ ಹೆಚ್ಚು ಮಂದಿ ಶಾಸಕರು, ಮುಖಂಡರು, ನಾಯಕರು ಉಪಸ್ಥಿತರಿದ್ದರು.
ಎಲ್ಲ ಜಾತಿ, ಧರ್ಮ, ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ. ಬಿಜೆಪಿಯವರು 4 ವರ್ಷ ಏನೂ ಮಾಡಿಲ್ಲ. ಬಿಜೆಪಿಯವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

