Home Blog Page 3

ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ..! ಮಹಿಳಾ ಹೋಂ ಗಾರ್ಡ್ ಬಚಾವ್-ವಿಡಿಯೋ ವೈರಲ್

ಗದಗ: ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಆರ್ಭಟಕ್ಕೆ ಗದಗ ಜಿಲ್ಲೆ ಭಾನುವಾರ ಸಂಜೆ ಅಲ್ಲೋಲ-ಕಲ್ಲೋಲಗೊಂಡಿತು.

ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದರೆ, ತಗಡಿನ ಶೀಟ್‌ಗಳು ಗಾಳಿಗೆ ಹಾರಿ ಜನರಲ್ಲಿ ಆತಂಕ ಸೃಷ್ಟಿಸಿವೆ.

ಗದಗ ಸಮೀಪದ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಘಟನೆ ಒಂದು ಕ್ಷಣ ಜನರ ಹೃದಯ ಬಡಿತ ಹೆಚ್ಚಿಸುವಂತಿತ್ತು. ಡ್ಯೂಟಿ ಮುಗಿಸಿಕೊಂಡು ಬಸ್ ಹತ್ತಲು ಮಳೆ-ಗಾಳಿಯ ನಡುವೆ ಓಡೋಡಿ ಬರುತ್ತಿದ್ದ ಮಹಿಳಾ ಹೋಂ ಗಾರ್ಡ್ ಅವರತ್ತ ಏಕಾಏಕಿ ಬಿರುಗಾಳಿಯ ರಭಸಕ್ಕೆ ತಗಡಿನ ಶೀಟ್ ಹಾರಿ ಬಂದಿದೆ.

ಅದೃಷ್ಟವಶಾತ್ ಶೀಟ್ ಮಹಿಳೆಗೆ ತಗುಲದೇ ಜಸ್ಟ್ ಮಿಸ್ ಆಗಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲ ಕ್ಷಣಗಳ ಕಾಲ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದು, ಮಹಿಳಾ ಹೋಂ ಗಾರ್ಡ್ ಕೂಡ ಒಂದು ಕ್ಷಣ ವಿಚಲಿತರಾದರು.

ಈ ಭಯಾನಕ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರಿ ಗಾಳಿ ಮತ್ತು ಮಳೆಯಿಂದ ಗದಗ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ, ಮರಗಳು ಉರುಳುವುದು, ತಗಡುಗಳು ಹಾರುವುದು ಸೇರಿದಂತೆ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಡರಗಿ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆಯೇ ತಗಡೊಂದು ಹಾರಾಡುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಏನೂ ಎಂಬ ಆತಂಕ ವಾಹನ ಸವಾರರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಭಾನುವಾರ ಸಂಜೆ ನಡೆದ ಅನಾಹುತ ಹಲವು ಅವಾಂತರ ಸೃಷ್ಟಿ ಮಾಡಿದರೂ ಯಾವುದೇ ಜೀವ ಹಾನಿಯಾಗದೇ ಇರೋದು ಸಮಾಧಾನ ತಂದಿದೆ.

ಸಿಎಂ ಹುದ್ದೆಯಲ್ಲಿ 8 ವರ್ಷ: ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಮೈಲಿಗಲ್ಲು!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ರಂದು ಮೂರು ವರ್ಷ ಪೂರ್ಣಗೊಳ್ಳಲಿದ್ದು, ಅದಕ್ಕೂ ನಾಲ್ಕು ದಿನಗಳ ಮುನ್ನವೇ ಸಿದ್ದರಾಮಯ್ಯ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಒಟ್ಟು 8 ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

1977ರಲ್ಲಿ ಮೈಸೂರು ತಾಲೂಕು ಬೋರ್ಡ್ ಚುನಾವಣೆಯ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ರಾಜಕೀಯ ಪಯಣದ 50ನೇ ವರ್ಷಕ್ಕೆ ಕಾಲಿಡುವ ಹಂತದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿರುವುದು ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿದು ಆಡಳಿತ ನಡೆಸಿದ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅಗ್ರಸ್ಥಾನಕ್ಕೇರಿದ್ದಾರೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಜನಪರ ಆಡಳಿತ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ.

ಎಬೋಲಾ ಸೋಂಕು ಭೀತಿ; ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

ಕಿನ್ಶಾಸಾ: ಆಫ್ರಿಕಾದ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಇದುವರೆಗೆ 88 ಮಂದಿ ಮೃತಪಟ್ಟಿದ್ದಾರೆ.

300ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಕಾಂಗೋದ ಪೂರ್ವ ಭಾಗದ ಇಟುರಿ ಪ್ರಾಂತ್ಯ ಎಬೋಲಾ ಸೋಂಕಿನ ಕೇಂದ್ರಬಿಂದುವಾಗಿದೆ. ಅಲ್ಲಿಗೆ ಭೇಟಿ ನೀಡಿದ್ದ ರಾಜಧಾನಿ ಕಿನ್ಶಾಸಾದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು ಇತರ ಪ್ರದೇಶಗಳಿಗೂ ಹರಡುವ ಆತಂಕ ಹೆಚ್ಚಾಗಿದೆ. ಉತ್ತರ ಕಿವು ಪ್ರಾಂತ್ಯದಲ್ಲಿಯೂ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಎಬೋಲಾ ವೈರಸ್ ಬುಂಡಿಬುಗ್ಯ ವೈರಸ್‌ನಿಂದ ಹರಡುತ್ತದೆ. ಮೊದಲು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್ ಬಳಿಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಕೆರೆತ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ರೋಗ ಗಂಭೀರ ಹಂತ ತಲುಪಿದರೆ ದೇಹದ ಒಳಭಾಗದಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ.

1976ರಲ್ಲಿ ಕಾಂಗೋದ ಎಬೋಲಾ ನದಿ ತೀರ ಪ್ರದೇಶದಲ್ಲಿ ಈ ವೈರಸ್ ಮೊದಲ ಬಾರಿ ಪತ್ತೆಯಾಗಿತ್ತು. ಕೋತಿ, ಗೊರಿಲ್ಲಾ, ಚಿಂಪಾಂಜಿ ಹಾಗೂ ಬಾವಲಿಗಳ ಮೂಲಕ ಈ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯ ರಕ್ತ, ಬೆವರು, ವಾಂತಿ, ಮೂತ್ರ ಹಾಗೂ ದೇಹದ ಇತರ ದ್ರವಾಂಶಗಳ ಸಂಪರ್ಕದಿಂದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿನಿಂದ ಮೃತಪಟ್ಟವರ ಮೃತದೇಹವೂ ಅಪಾಯಕಾರಿ ಆಗಿರುವುದರಿಂದ, ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಎಬೋಲಾ ಸೋಂಕು ತಗುಲಿದ 10 ಜನರಲ್ಲಿ 9 ಮಂದಿಯ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಈ ವೈರಸ್ ಅತ್ಯಂತ ಮಾರಕ ಎಂದು ಪರಿಗಣಿಸಲಾಗಿದೆ. ವೈರಸ್ ದೇಹ ಪ್ರವೇಶಿಸಿದ 2ರಿಂದ 21 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಮಧುಮೇಹ, ಮೂತ್ರಪಿಂಡ ಮತ್ತು ಪಿತ್ತಜನಕಾಂಗ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

IPL 2026: ಅಕ್ಷರ್-ಅಶುತೋಷ್ ಅಬ್ಬರ; ರಾಜಸ್ಥಾನ ವಿರುದ್ಧ ಡೆಲ್ಲಿಗೆ ರೋಚಕ ಜಯ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲು ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್‌, ಬಳಿಕ ನಾಯಕ ಅಕ್ಷರ್ ಪಟೇಲ್ ಹಾಗೂ ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 4 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿ ಜಯ ಸಾಧಿಸಿತು.

ಕೊನೆಯ ನಾಲ್ಕು ಓವರ್‌ಗಳಲ್ಲಿ ಡೆಲ್ಲಿಗೆ 43 ರನ್ ಅಗತ್ಯವಿದ್ದಾಗ ಪಂದ್ಯ ತೀವ್ರ ಕುತೂಹಲ ಕೆರಳಿಸಿತು. 18ನೇ ಓವರ್‌ನಲ್ಲಿ 18 ರನ್ ಹಾಗೂ 19ನೇ ಓವರ್‌ನಲ್ಲಿ 12 ರನ್ ಬಂದವು. ಅಂತಿಮ ಓವರ್‌ನ ಮೊದಲ ಎರಡು ಎಸೆತಗಳಲ್ಲೇ ಅಶುತೋಷ್ ಶರ್ಮಾ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಅಶುತೋಷ್ ಶರ್ಮಾ ಕೇವಲ 5 ಎಸೆತಗಳಲ್ಲಿ 18 ರನ್ ಸಿಡಿಸಿ ಅಜೇಯರಾಗಿದ್ದರೆ, ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 34 ರನ್ ಗಳಿಸಿದರು. ಇದಕ್ಕೂ ಮುನ್ನ ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 105 ರನ್ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಅಭಿಷೇಕ್ ಪೊರೆಲ್ 31 ಎಸೆತಗಳಲ್ಲಿ 51 ರನ್ ಹಾಗೂ ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್ ಗಳಿಸಿದರು.

ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 46 ರನ್, ಧ್ರುವ್ ಜುರೇಲ್ 53 ರನ್ ಹಾಗೂ ನಾಯಕ ರಿಯಾನ್ ಪರಾಗ್ 51 ರನ್ ಸಿಡಿಸಿ ಮಿಂಚಿದರು.

ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ರಾಜಸ್ಥಾನದ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿಶೇಷವಾಗಿ 15ನೇ ಓವರ್‌ನಲ್ಲಿ ರಿಯಾನ್ ಪರಾಗ್, ಫೆರೀರಾ ಮತ್ತು ರವಿ ಸಿಂಗ್ ವಿಕೆಟ್ ಪಡೆದು ಪಂದ್ಯದ ಚಿತ್ರಣವೇ ಬದಲಿಸಿದರು. ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ ಎರಡು ವಿಕೆಟ್ ಪಡೆದರು.

ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಟ್ರೀಟ್ಮೆಂಟ್? ಸುಪ್ರೀಂಕೋರ್ಟ್‌ಗೆ ಜೈಲು ಅಧಿಕಾರಿಗಳ ಶಾಕಿಂಗ್ ಮಾಹಿತಿ

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಜೈಲು ದಾಖಲೆಗಳು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದರೂ, ಜೈಲು ಅಧಿಕಾರಿಗಳು ಸಲ್ಲಿಸಿದ ಮಾಹಿತಿಯಲ್ಲಿ ಬೇರೆ ಚಿತ್ರಣ ಹೊರಬಿದ್ದಿದೆ.

ಜೈಲು ದಾಖಲೆಗಳ ಪ್ರಕಾರ, ದರ್ಶನ್ 70ಕ್ಕೂ ಹೆಚ್ಚು ಬಾರಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿಯಾಗಿದ್ದು, ಜೈಲಿನಿಂದ 73 ಬಾರಿ ಫೋನ್ ಕರೆಗಳನ್ನು ಕೂಡ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.

ಇದಷ್ಟೇ ಅಲ್ಲದೆ, ದರ್ಶನ್ ಅವರಿಗೆ ವಿಶೇಷ ಸೌಲಭ್ಯಗಳನ್ನೂ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರದ ಜೊತೆಗೆ ಹೆಚ್ಚುವರಿಯಾಗಿ ಹಾಲು, ಮೊಟ್ಟೆ ಒದಗಿಸಲಾಗುತ್ತಿದೆ. ಹೆಚ್ಚುವರಿ ಬೆಡ್‌ಶೀಟ್, ಬಾಚಣಿಗೆ ಸೇರಿದಂತೆ ನ್ಯಾಯಾಲಯ ಸೂಚಿಸಿದ ಸೌಲಭ್ಯಗಳನ್ನೂ ನೀಡಲಾಗಿದೆ. ಭೇಟಿ ನೀಡುವವರು ತರುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ.

ಭದ್ರತೆ ವಿಚಾರದಲ್ಲೂ ವಿಶೇಷ ಕಾಳಜಿ ವಹಿಸಲಾಗಿದೆ. ಹಗಲು ವೇಳೆ ಸಹಾಯಕ ಜೈಲರ್ ಹಾಗೂ ವಾರ್ಡನ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳನ್ನು ನಿಯೋಜಿಸಲಾಗಿದೆ. ಬ್ಯಾರಕ್ ಸುತ್ತಮುತ್ತ ಸಿಸಿಟಿವಿ ಅಳವಡಿಸಿ, ಇತರ ಕೈದಿಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್, ಜೈಲಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಜಾಮೀನು ಕೋರಿದ್ದರು. ಆದರೆ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ದಾಖಲೆಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ದಿಲೀಪ್ ರಾಜ್ ಹಠಾತ್ ಸಾವು: ‘ಎದೆ ಉರಿಯನ್ನು ಗ್ಯಾಸ್ಟ್ರಿಕ್ ಅಂತ ನಿರ್ಲಕ್ಷ್ಯ ಮಾಡಿದ್ದರು’ ಎಂದ ಡಾ. ಮಂಜುನಾಥ್

ಬೆಂಗಳೂರು: ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿರುವ ಬೆನ್ನಲ್ಲೇ, ಅವರ ಸಾವಿನ ಕುರಿತು ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಮಂಜುನಾಥ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ದಿಲೀಪ್ ರಾಜ್ ಅವರಿಗೆ ಹೃದಯಾಘಾತಕ್ಕೂ ಮುನ್ನ ಎದೆ ಉರಿ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತ್ತಂತೆ. ಆದರೆ ಅದನ್ನು ಗ್ಯಾಸ್ಟ್ರಿಕ್ ಎಂದುಕೊಂಡು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

“ಈಗ ಹಲವಾರು ಹೃದಯಾಘಾತಗಳು ಗ್ಯಾಸ್ಟ್ರಿಕ್ ರೀತಿಯಲ್ಲಿ ಕಾಣಿಸುತ್ತವೆ. ಜನರು ಅದನ್ನು ಸಾಮಾನ್ಯ ಅಜೀರ್ಣ ಸಮಸ್ಯೆ ಎಂದುಕೊಂಡು ಕಡೆಗಣಿಸುತ್ತಾರೆ. ಅದು ದೊಡ್ಡ ತಪ್ಪು” ಎಂದು ಅವರು ಹೇಳಿದ್ದಾರೆ.

ಇನ್ನೂ ಕೆಲವರಿಗೆ ಗಂಟಲು ನೋವು, ದವಡೆ ನೋವು ಅಥವಾ ಬೆನ್ನಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇವುಗಳೂ ಹೃದಯಾಘಾತದ ಸೂಚನೆಗಳಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ರಕ್ತದೊತ್ತಡ, ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದ್ದಾರೆ.

“ವ್ಯಾಯಾಮ ಒಳ್ಳೆಯದು, ಆದರೆ ಅತಿಯಾದ ವ್ಯಾಯಾಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆರೋಗ್ಯಕರ ಆಹಾರ ಸೇವನೆ, ಉತ್ತಮ ನಿದ್ರೆ ಮತ್ತು ಒತ್ತಡರಹಿತ ಜೀವನ ಬಹಳ ಮುಖ್ಯ. ಇತ್ತೀಚೆಗೆ ಬೇಗ ಯಶಸ್ಸು ಪಡೆಯಬೇಕು ಎನ್ನುವ ಮಾನಸಿಕ ಒತ್ತಡ ಜನರಲ್ಲಿ ಹೆಚ್ಚಾಗಿದೆ. ಅದರಿಂದ ದೇಹದ ಮೇಲೆ ಪರಿಣಾಮ ಬೀಳುತ್ತಿದೆ” ಎಂದು ಡಾ. ಮಂಜುನಾಥ್ ಹೇಳಿದ್ದಾರೆ.

ದಿಲೀಪ್ ರಾಜ್ ಅವರ ಸಾವಿನ ಬಳಿಕ ಸಿನಿಮಾ ಮತ್ತು ಟಿವಿ ಕ್ಷೇತ್ರದ ಒತ್ತಡ, ಆರೋಗ್ಯ ನಿರ್ಲಕ್ಷ್ಯ ಹಾಗೂ ಜೀವನಶೈಲಿಯ ಬಗ್ಗೆ ಮತ್ತೆ ಗಂಭೀರ ಚರ್ಚೆಗಳು ಆರಂಭವಾಗಿವೆ.

‘ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ’ ಎಂದಿದ್ದ ಕೆ ರಾಜನ್ ದುರಂತ ಅಂತ್ಯ: ಅಡ್ಯಾರ್ ನದಿಯಲ್ಲಿ ಮೃತದೇಹ ಪತ್ತೆ

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರ ಸಾವಿನ ಸುದ್ದಿ ಚಿತ್ರರಂಗಕ್ಕೆ ಭಾರೀ ಶಾಕ್ ನೀಡಿದೆ. ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

85 ವರ್ಷದ ಕೆ ರಾಜನ್ ಇಂದು ಬೆಳಿಗ್ಗೆ ಅಡ್ಯಾರ್ ನದಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಆತ್ಮಹತ್ಯೆ ಕೋಣದಲ್ಲೂ ತನಿಖೆ ನಡೆಯುತ್ತಿದೆ.

1980ರ ದಶಕದಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೆ ರಾಜನ್, ‘ಬ್ರಹ್ಮಚಾರಿಗಳ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ‘ಗಣೇಶ್ ಸಿನೆ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿ, ಕೆಲವು ಚಿತ್ರಗಳನ್ನು ನಿರ್ದೇಶನವೂ ಮಾಡಿದ್ದರು.

ತಮಿಳು ಚಿತ್ರರಂಗದ ಸಮಸ್ಯೆಗಳ ಬಗ್ಗೆ ನಿರ್ಭೀತಿಯಾಗಿ ಮಾತನಾಡುತ್ತಿದ್ದ ವ್ಯಕ್ತಿಯಾಗಿ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ನಿರ್ಮಾಪಕರ ಆರ್ಥಿಕ ಸಂಕಷ್ಟ, ನಟರ ಹೆಚ್ಚುತ್ತಿರುವ ಸಂಭಾವನೆ ಮತ್ತು ಚಿತ್ರರಂಗದ ಒಳರಾಜಕೀಯದ ವಿರುದ್ಧ ಅವರು ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಕೆ ರಾಜನ್ ಅವರ ಭಾಷಣಗಳು ಮತ್ತು ಸಂದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅವರ ನೇರ ನುಡಿಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿತ್ತು. 2000ರಲ್ಲಿ ಚೆನ್ನೈ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಹಿರಿಯ ನಿರ್ಮಾಪಕರ ದುರಂತ ಸಾವಿಗೆ ತಮಿಳು ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದು, ಚಿತ್ರರಂಗ ಮತ್ತೊಬ್ಬ ನೇರ ವ್ಯಕ್ತಿತ್ವವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ರಿಲೀಸ್ ದಿನ ಶೋ ಕ್ಯಾನ್ಸಲ್… ಈಗ 120 ಕೋಟಿ ಕಲೆಕ್ಷನ್: ‘ಕರುಪ್ಪು’ ಮೂಲಕ ಸೂರ್ಯ ಕಂಬ್ಯಾಕ್

ಚೆನ್ನೈ: ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ ‘ಕರುಪ್ಪು’ ಸಿನಿಮಾ ಭಾರೀ ಯಶಸ್ಸಿನತ್ತ ದೌಡಾಯಿಸುತ್ತಿದೆ. ಬಿಡುಗಡೆಯ ದಿನವೇ ಹಣಕಾಸು ಮತ್ತು ವಿತರಣಾ ಸಮಸ್ಯೆ ಎದುರಿಸಿದ್ದ ಈ ಚಿತ್ರ, ಇದೀಗ ಕೇವಲ ಮೂರು ದಿನಗಳಲ್ಲಿ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.

ಆರ್.ಜೆ. ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಡ್ರಾಮಾ ಚಿತ್ರ ಹಲವು ವರ್ಷಗಳ ಬಳಿಕ ಸೂರ್ಯ ಅವರಿಗೆ ದೊಡ್ಡ ಹಿಟ್ ನೀಡಿದೆ. ಮೂಲತಃ ತ್ರಿಷಾ ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಲಾಗಿತ್ತು. ನಂತರ ಕಥೆಗೆ ಮಾಸ್ ಅಂಶಗಳನ್ನು ಸೇರಿಸಿ ಸೂರ್ಯ ಅವರಿಗೆ ಹೇಳಲಾಗಿದ್ದು, ಅವರು ಸಿನಿಮಾ ಒಪ್ಪಿಕೊಂಡಿದ್ದರು.

ಮೊದಲ ದಿನ 15.50 ಕೋಟಿ, ಎರಡನೇ ದಿನ 24.15 ಕೋಟಿ ಹಾಗೂ ಮೂರನೇ ದಿನ 28.35 ಕೋಟಿ ರೂಪಾಯಿ ಗಳಿಕೆಯೊಂದಿಗೆ ಸಿನಿಮಾ ಭಾರತದಲ್ಲಿ 68 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಗ್ರಾಸ್ ಕಲೆಕ್ಷನ್ 78 ಕೋಟಿ ರೂಪಾಯಿ ಆಗಿದ್ದು, ವಿದೇಶಗಳಲ್ಲಿ 42 ಕೋಟಿ ರೂಪಾಯಿ ಗಳಿಕೆಯಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 120 ಕೋಟಿ ರೂಪಾಯಿ ದಾಟಿದೆ.

ಸಿನಿಮಾ ಶೂಟಿಂಗ್ ಹಂತದಲ್ಲಿಯೇ ಅನುಮತಿ ಸಮಸ್ಯೆಯಿಂದ ತೊಂದರೆ ಎದುರಿಸಿತ್ತು. ಚೆನ್ನೈ ಬಳಿ ಪೊಲೀಸರು ಚಿತ್ರೀಕರಣ ತಡೆದಿದ್ದರು. ಬಿಡುಗಡೆಯ ದಿನವೂ ಹಣಕಾಸಿನ ಸಮಸ್ಯೆಯಿಂದ ಮೊದಲ ಶೋಗಳು ರದ್ದಾದವು. ಆದರೆ ಬಳಿಕ ಎಲ್ಲಾ ಸಮಸ್ಯೆಗಳು ಬಗೆಹರಿದು ಸಿನಿಮಾ ಮೇ 15ರಂದು ಯಶಸ್ವಿಯಾಗಿ ಬಿಡುಗಡೆಯಾಯಿತು.

ವಿವಾದಗಳು, ಅಡೆತಡೆಗಳು ಮತ್ತು ವಿಳಂಬಗಳ ನಡುವೆಯೂ ‘ಕರುಪ್ಪು’ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸೂರ್ಯ-ತ್ರಿಷಾ ಜೋಡಿ ಮತ್ತೆ ಮ್ಯಾಜಿಕ್ ಮಾಡಿದೆ.

ಸಾಂಗ್-ಟ್ರೇಲರ್ ವಿವಾದಗಳ ಮಧ್ಯೆಯೂ ‘ಕೆಡಿ’ ಸಕ್ಸಸ್: ಧ್ರುವ ಸರ್ಜಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್

ಬೆಂಗಳೂರು: ಪ್ರೇಮ್ ನಿರ್ದೇಶನ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಸಿನಿಮಾ ವಿವಾದಗಳ ನಡುವೆಯೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೂರು ವಾರಗಳ ಪ್ರದರ್ಶನದಲ್ಲಿ ಸಿನಿಮಾ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ.

ಬೆಂಗಳೂರು ಅಂಡರ್‌ವರ್ಡ್ ಹಿನ್ನೆಲೆಯ ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಇದುವರೆಗೆ 10,795 ಶೋಗಳು ಸಿಕ್ಕಿದ್ದು, ಆರಂಭಿಕ ದಿನಗಳಲ್ಲೇ ಉತ್ತಮ ಓಪನಿಂಗ್ ಪಡೆದಿತ್ತು. ಮೂರನೇ ಭಾನುವಾರವೂ ಸಿನಿಮಾ 39 ಲಕ್ಷ ರೂಪಾಯಿ ಗಳಿಕೆ ಮಾಡಿದ್ದು, ಕಲೆಕ್ಷನ್ ಸ್ಥಿರವಾಗಿಯೇ ಇದೆ. ಉಪಗ್ರಹ ಹಾಗೂ ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾ ಲಾಭದ ಹಾದಿಯಲ್ಲಿದೆ ಎನ್ನಲಾಗುತ್ತಿದೆ.

ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಹಲವು ವಿವಾದಗಳು ಸದ್ದು ಮಾಡಿದ್ದವು. ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ನೋರಾ ಫತೇಹಿ ಕಾಣಿಸಿಕೊಂಡಿದ್ದ ಈ ಹಾಡು ಅಶ್ಲೀಲವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು. ಬಳಿಕ ಚಿತ್ರತಂಡ ಹಾಡನ್ನು ಯೂಟ್ಯೂಬ್ ಮತ್ತು ಸಿನಿಮಾದಿಂದ ತೆಗೆದುಹಾಕಿತ್ತು.

ಟ್ರೇಲರ್‌ನಲ್ಲಿದ್ದ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ ಟ್ರೇಲರ್ ಡಿಲೀಟ್ ಆಗಿ, ನಂತರ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಲಾಗಿತ್ತು. ಈ ವಿವಾದಗಳ ಪರಿಣಾಮವಾಗಿ ಸಿನಿಮಾ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ತಡವಾಗಿ ಬಂದವು.

ವಿವಾದಗಳ ನಡುವೆಯೂ ಧ್ರುವ ಸರ್ಜಾ ಅಭಿಮಾನಿಗಳು ಸಿನಿಮಾವನ್ನು ಬೆಂಬಲಿಸಿದ್ದು, ‘ಕೆಡಿ’ಗೆ ಉತ್ತಮ ಮೈಲೇಜ್ ಸಿಕ್ಕಿದೆ.

ಗದಗದಲ್ಲಿ ಗುಡುಗು-ಸಿಡಿಲಿನ ಆರ್ಭಟ! ಧರೆಗುರುಳಿದ ಮರಗಳು: ಗಾಳಿಗೆ ಹಾರಿ ಬಂದ ತಗಡು, ಮಹಿಳೆ ಜಸ್ಟ್ ಮಿಸ್!

ಗದಗ: ಭಾನುವಾರ ಸಂಜೆ ಗದಗ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯ ರೌದ್ರಾವತಾರ ಕಂಡುಬಂದಿದೆ.

ಭಾರೀ ಗಾಳಿ–ಮಳೆಯ ಪರಿಣಾಮ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ಹಲವು ವಾಹನಗಳು ಜಖಂಗೊಂಡಿದ್ದು, ಕೆಲವೆಡೆ ಸಂಚಾರವೂ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ವಾಹನ ಸವಾರರು ಪರದಾಡಿದರೆ, ರಸ್ತೆಗಳಲ್ಲಿ ನೀರು ನಿಂತು ಸಂಚಾರ ವ್ಯತ್ಯಯ ಉಂಟಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದರೂ, ಬಿರುಗಾಳಿಯ ಆರ್ಭಟ ಆತಂಕ ಹೆಚ್ಚಿಸಿದೆ.

ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು:

ಗದಗ ಜಿಮ್ಸ್ ಆಸ್ಪತ್ರೆ ಸಮೀಪ ಬಿರುಗಾಳಿಯ ರಭಸಕ್ಕೆ ಕಟ್ಟಡದ ತಗಡೊಂದು ಹಾರಿ ಬಂದು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳಾ ಹೋಮ್ ಗಾರ್ಡ್ ಒಬ್ಬರ ಸಮೀಪ ಬಿದ್ದ ಘಟನೆ ಆತಂಕ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ಎಚ್ಚೆತ್ತುಕೊಂಡ ಹೋಮ್ ಗಾರ್ಡ್ ಬದಿಗೆ ಸರಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಡ್ಯೂಟಿ ಮುಗಿಸಿಕೊಂಡು ಮನೆ ಕಡೆ ಬರಲು ಬಸ್ ಹತ್ತಲು ಹೋಗುವಾಗ ಈ ಘಟನೆ ನಡೆದಿದೆ.

ಮಕಾನ ಗಲ್ಲಿಯಲ್ಲಿ ತಪ್ಪಿದ ಭಾರೀ ದುರಂತ:

ನಗರದ ಮಕಾನ ಗಲ್ಲಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲೇ ನಿಲ್ಲಿಸಿದ್ದ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿದೆ. ಭಾನುವಾರ ಮಾರುಕಟ್ಟೆ ಬಂದ್ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿದ್ಯುತ್ ಕಂಬಗಳು ಬಿದ್ದ ಕಾರಣ ಎರಡು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹೆಸ್ಕಾಂ ಹಾಗೂ ನಗರಸಭೆ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:

ಬಸವೇಶ್ವರ ಸರ್ಕಲ್ ಬಳಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮನೆಯ ಮೇಲೆ ಮರ ಬಿದ್ದು ಹಾನಿ:

ಗಂಗಾಪೂರ ಪೇಟೆಯ ದುರ್ಗಾದೇವಿ ಗುಡಿ ಸಮೀಪ ಶ್ರೀಕಾಂತ್ ಹಬೀಬ ಅವರ ಮನೆಯ ಮೇಲೆ ಭಾರೀ ತೆಂಗಿನ ಮರ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಾಗಾವಿಯಲ್ಲಿ ಕಾರು ಜಖಂ:

ನಾಗಾವಿ ಗ್ರಾಮದಲ್ಲಿ ಮರಗಳು ಧರೆಗುರುಳಿದ ಪರಿಣಾಮ ಬೃಹತ್ ಮರೊಂದು ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.

ಎಪಿಎಂಸಿ ಹಾಗೂ ಕ್ರೀಡಾಂಗಣಕ್ಕೂ ಹಾನಿ:

ಗದಗ ಎಪಿಎಂಸಿ ಆವರಣದಲ್ಲೂ ಮರಗಳು ಉರುಳಿಬಿದ್ದಿದ್ದು, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಬಳಿ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಮುಳಗುಂದ ರಸ್ತೆಯ ಕನಕ ಭವನ ಸಮೀಪದ ಇಂಡೋರ್ ಸ್ಟೇಡಿಯಂ ಭಾಗಕ್ಕೂ ಹಾನಿ ಸಂಭವಿಸಿದೆ.

ಭಾರೀ ಮಳೆಯ ಅಬ್ಬರದಿಂದ ಅವಳಿ ನಗರ ಜನತೆ ತತ್ತರಿಸಿದರೆ, ಮತ್ತೊಂದೆಡೆ ಈ ಮಳೆ ಮುಂಗಾರು ಬಿತ್ತನೆಗೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

error: Content is protected !!