HomeGadag News“ಏ ಎಕ್ಕಾ... ಅತ್ತಿ ರೊಟ್ಟಿ ತಗೊಂಡು ಬಂದೀನಿ, ತಗೋರಿ!”

“ಏ ಎಕ್ಕಾ… ಅತ್ತಿ ರೊಟ್ಟಿ ತಗೊಂಡು ಬಂದೀನಿ, ತಗೋರಿ!”

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಏ ಎಕ್ಕಾ… ಅತ್ತಿ ರೊಟ್ಟಿ ತಗೊಂಡು ಬಂದೀನಿ, ತಗೋರಿ…” — ಹಬ್ಬದ ದಿನ ಮನೆ ಬಾಗಿಲಿಗೆ ಬಂದು ಆತ್ಮೀಯತೆಯಿಂದ ರೊಟ್ಟಿ ನೀಡುವ ಈ ಮಾತುಗಳು ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಕೇಳಿಬಂದವು. ಕೈಯಲ್ಲಿ ರೊಟ್ಟಿ-ಪಲ್ಯದ ಬುತ್ತಿ ಹಿಡಿದು ಮನೆ ಮನೆಗೆ ತೆರಳಿದ ಮಹಿಳೆಯರು, ಮಕ್ಕಳು ಪರಸ್ಪರ ರೊಟ್ಟಿ ವಿನಿಮಯ ಮಾಡಿಕೊಂಡು ರೊಟ್ಟಿ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಉತ್ತರ ಕರ್ನಾಟಕದ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬವಾದ ರೊಟ್ಟಿ ಪಂಚಮಿ, ಆಧುನಿಕ ಜೀವನಶೈಲಿಯ ನಡುವೆಯೂ ತನ್ನ ಮಣ್ಣಿನ ಸೊಗಡನ್ನು ಕಳೆದುಕೊಂಡಿಲ್ಲ. ಕಳೆದ ಒಂದು ವಾರದಿಂದಲೇ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಮಹಿಳೆಯರು ಶುಕ್ರವಾರ ಮುಂಜಾನೆಯಿಂದಲೇ ವಿವಿಧ ಬಗೆಯ ರೊಟ್ಟಿ, ಚಪಾತಿ, ಪಲ್ಯ ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಿ ಬಂಧು-ಬಳಗ ಹಾಗೂ ನೆರೆಹೊರೆಯವರ ಮನೆಗಳಿಗೆ ಕೊಂಡೊಯ್ದು ಹಂಚಿದರು.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಳ್ಳು ರೊಟ್ಟಿ, ಚಪಾತಿ, ಉಂಡಿ ಸೇರಿದಂತೆ ಹಲವು ಬಗೆಯ ತಿನಿಸುಗಳೊಂದಿಗೆ ಹೆಸರುಕಾಳು, ಮಡಿಕೆಕಾಳು, ಬದನೆಕಾಯಿ, ಹಿಟ್ಟಿನ ಪಲ್ಯ, ಮೆಂತೆಪಲ್ಯ, ಮೂಲಂಗಿ ಸೊಪ್ಪು, ಹಕ್ಕರಕಿ, ಸವತೆಕಾಯಿ, ಗಜ್ಜರಿ ಸೇರಿದಂತೆ ವಿವಿಧ ತರಕಾರಿ ಹಾಗೂ ಸೊಪ್ಪಿನ ಖಾದ್ಯಗಳು ಮನೆಗಳಲ್ಲಿ ಸಿದ್ಧಗೊಂಡಿದ್ದವು. ಮನೆಯ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ರೊಟ್ಟಿ-ಪಲ್ಯಗಳನ್ನು ತಟ್ಟೆಗಳಲ್ಲಿ ಸಿಂಗರಿಸಿ ಹಂಚಲಾಯಿತು.

ತವರು ಮನೆಯಲ್ಲೇ ಹೆಚ್ಚಿದ ಸಂಭ್ರಮ

ರೊಟ್ಟಿ ಪಂಚಮಿ ಎಂದರೆ ಕೇವಲ ರೊಟ್ಟಿ ಹಂಚುವ ಹಬ್ಬವಲ್ಲ. ಮದುವೆಯಾಗಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಸಹೋದರಿಯರು, ಅತ್ತೆ-ಸೊಸೆಯರು ಹಾಗೂ ಬಂಧುಗಳೊಂದಿಗೆ ಸೇರಿ ಅಡುಗೆ ತಯಾರಿಸಿ, ಪರಸ್ಪರ ಮನೆಗಳಿಗೆ ತೆರಳಿ ರೊಟ್ಟಿ ಹಂಚುವುದು ಈ ಹಬ್ಬದ ವಿಶೇಷತೆ.

ಸಮೀಪದ ಜಕ್ಕಲಿ ಗ್ರಾಮದಲ್ಲಿಯೂ ಮಹಿಳೆಯರು ಹಾಗೂ ಮಕ್ಕಳು ಹೊಸ ಉಡುಪು ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಕೈಯಲ್ಲಿ ರೊಟ್ಟಿ-ಪಲ್ಯದ ಬುತ್ತಿ ಹಿಡಿದು ಮುಂಜಾನೆಯಿಂದಲೇ ಮನೆ ಮನೆಗೆ ತೆರಳಿದ ಮಹಿಳೆಯರ ದೃಶ್ಯ ಗ್ರಾಮೀಣ ಬದುಕಿನ ಆತ್ಮೀಯತೆಯನ್ನು ಬಿಂಬಿಸಿತು.

ಒಂದು ತಟ್ಟೆ ರೊಟ್ಟಿ… ಹಲವು ಮನೆಗಳ ಬಾಗಿಲು!

ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ವೇಗದ ಜೀವನದ ನಡುವೆ ನೆರೆಹೊರೆಯವರೊಂದಿಗೆ ನೇರವಾಗಿ ಬೆರೆಯುವ ಸಂದರ್ಭಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ರೊಟ್ಟಿ ಪಂಚಮಿ ಜನರನ್ನು ಮತ್ತೆ ಮನೆಗಳಿಂದ ಹೊರಗೆ ಕರೆತರುತ್ತಿದೆ. ಒಂದು ತಟ್ಟೆ ರೊಟ್ಟಿಯ ನೆಪದಲ್ಲಿ ಹಲವು ಮನೆಗಳ ಬಾಗಿಲು ತಟ್ಟುವ ಮೂಲಕ ಹಳೆಯ ಪರಿಚಯಗಳು ಗಟ್ಟಿಯಾಗುತ್ತಿವೆ; ಹೊಸ ಸಂಬಂಧಗಳೂ ಬೆಸೆಯುತ್ತಿವೆ.

ಮಕ್ಕಳಿಗೆ ಸಂಸ್ಕೃತಿಯ ಪಾಠ

ರೊಟ್ಟಿ ಪಂಚಮಿ ಕೇವಲ ಆಹಾರ ಹಂಚಿಕೆಯ ಆಚರಣೆಯಲ್ಲ; ಇದು ಉತ್ತರ ಕರ್ನಾಟಕದ ಆಹಾರ ಪದ್ಧತಿ, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸೇತುವೆಯಾಗಿದೆ. ಅಜ್ಜ-ಅಜ್ಜಿಯರು ಹಾಗೂ ತಾಯಿ-ತಂದೆಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಮಕ್ಕಳು ಕಣ್ಣಾರೆ ನೋಡಿ ಅದರ ಮಹತ್ವ ಅರಿಯುವ ಅವಕಾಶವೂ ಇದರಿಂದ ದೊರೆಯುತ್ತದೆ.

ಗ್ರಾಮದ ಮೆಣಸಗಿಯವರ ಓಣಿಯಲ್ಲಿ ಕೀರ್ತಿ ಮೆಣಸಗಿ, ವೈಷ್ಣವಿ ಹೂಗಾರ, ಲಕ್ಷ್ಮೀ ಮಡಿವಾಳರ, ಸಿದ್ದಲಿಂಗವ್ವ ಅಂಗಡಿ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಮಕ್ಕಳು ರೊಟ್ಟಿ ಪಂಚಮಿ ಸಂಭ್ರಮದಲ್ಲಿ ಪಾಲ್ಗೊಂಡು, ಪರಸ್ಪರ ರೊಟ್ಟಿ, ಪಲ್ಯ ಹಾಗೂ ವಿವಿಧ ಖಾದ್ಯಗಳನ್ನು ಹಂಚಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

“ರೊಟ್ಟಿ ಕೊಟ್ಟರೆ ಸಂಬಂಧ ಬೆಳೆಯುತ್ತದೆ; ಮನೆಯಿಂದ ಮನೆಗೆ ಹೋದರೆ ಮನಸ್ಸುಗಳು ಹತ್ತಿರವಾಗುತ್ತವೆ” ಎಂಬ ಸರಳ ಗ್ರಾಮೀಣ ಬದುಕಿನ ಸಂದೇಶವನ್ನು ಸಾರಿದ ರೊಟ್ಟಿ ಪಂಚಮಿ, ಆಧುನಿಕತೆಯ ನಡುವೆಯೂ ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಆತ್ಮೀಯತೆ ಹಾಗೂ ಸಂಬಂಧಗಳ ಬೆಸುಗೆಯನ್ನು ಜೀವಂತವಾಗಿರಿಸಿತು.

“ಹಿಂದಿನ ಕಾಲದಲ್ಲಿ ರೊಟ್ಟಿ ಪಂಚಮಿ ಎಂದರೆ ಇಡೀ ಊರಿನ ಮನೆ ಮನೆಗೂ ಹೋಗಿ ರೊಟ್ಟಿ ಹಂಚಿಕೊಂಡು ಬರುವ ಸಂಭ್ರಮ ಇತ್ತು. ಕಾಲ ಬದಲಾಗಿದ್ದರೂ ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಾವು ಹಬ್ಬ ಆಚರಿಸುತ್ತಿದ್ದೇವೆ.”
— ಹಿರಿಯ ಮಹಿಳೆಯರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img