HomeGadag News೨೧ನೇ ಶತಮಾನದಲ್ಲೂ ಅಸಮಾನತೆ, ಮೌಢ್ಯ ಆಚರಣೆಗಳಿರುವುದು ವಿಷಾದನೀಯ: ಡಾ. ತೋಂಟದ ಶ್ರೀ

೨೧ನೇ ಶತಮಾನದಲ್ಲೂ ಅಸಮಾನತೆ, ಮೌಢ್ಯ ಆಚರಣೆಗಳಿರುವುದು ವಿಷಾದನೀಯ: ಡಾ. ತೋಂಟದ ಶ್ರೀ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ್ದರೂ, ಆಧುನಿಕ ಯುಗದಲ್ಲಿಯೂ ಅಸಮಾನತೆ ಮತ್ತು ಮೌಢ್ಯ ಆಚರಣೆಗಳು ಸಮಾಜದಲ್ಲಿ ಬೇರೂರಿವೆ. ೨೧ನೇ ಶತಮಾನದಲ್ಲಿಯೂ ಸಮಾನತೆ ಸಾಧಿಸುವಲ್ಲಿ ನಾವು ವಿಫಲರಾಗಿರುವುದು ವಿಷಾದನೀಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೮೧೧ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾವೀರ, ಬುದ್ಧ, ಬಸವೇಶ್ವರ, ನಾರಾಯಣ ಗುರು, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ದಾರ್ಶನಿಕರು ಮನುಷ್ಯರ ಮಧ್ಯೆ ಸಮಾನತೆ ತರಲು ಸಮಾಜೋಧಾರ್ಮಿಕ ಆಂದೋಲನ ನಡೆಸಿದ್ದಾರೆ. ಆದರೂ ಜಾತಿ, ಲಿಂಗ ಹಾಗೂ ವರ್ಣದ ತಾರತಮ್ಯ ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ಖೇದಕರ ಎಂದರು.

ಪರುಶುರಾಮ ಎಸ್. ಇಳಿಗೇರ ಅವರು ಬರೆದ ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕೃತಿಯ ಪರಿಚಯವನ್ನು ಪರುಶುರಾಮ ಇಳಗೇರ ಮಾಡಿದರು.

‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯ ಕುರಿತು ಪ್ರವಚನ ನೀಡಿದ ಶರಣೆ ಗಿರಿಜಕ್ಕ ಧರ್ಮರೆಡ್ಡಿ, ಬಸವಣ್ಣನವರು ಭಕ್ತಿ ಹಾಗೂ ವಿನಯದ ಭಂಡಾರಿಯಾಗಿದ್ದರು. ಸಮಾಜಕ್ಕೆ ನಡೆ-ನುಡಿಯ ಮಾರ್ಗ ತೋರಿದ ಪರಮಾರಾಧ್ಯರಾಗಿದ್ದಾರೆ ಎಂದರು.

ಗದಗ ನಗರಸಭೆ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದಿಂದ ನಾರಾಯಣ ಗುರುಗಳ ಕುರಿತು ಪುರಾಣ ಕಾವ್ಯ ರಚನೆ ಮಾಡಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಹಿರೇಮಠ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಜೀವನ ನಟರಾಜ ಯಲ್ಬುರ್ಗಿ, ವಚನ ಚಿಂತನವನ್ನು ಮೇಘಾ ಮುದ್ದಿ ನೆರವೇರಿಸಿದರು. ಕರವೀರಯ್ಯ ಶೇಖರಯ್ಯ ಕೋರಿಮಠ ಪರಿವಾರದವರು ಹಾಗೂ ವಿನಾಯಕ ಮಾನ್ವಿ ದಾಸೋಹ ಸೇವೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

“ಮನುಷ್ಯರ ಮಧ್ಯೆ ಸಮಾನತೆಯನ್ನು ತರಲು ಬಸವಣ್ಣನವರು ಇಷ್ಟಲಿಂಗವನ್ನು ನೀಡಿದರು. ಇಷ್ಟಲಿಂಗಧಾರಿಗಳಲ್ಲಿ ಮೇಲು-ಕೀಳು ಇಲ್ಲ ಎಂದು ಸಾರಿದರು. ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿ ಮಹಾ ಮಾನವತಾವಾದಿಯಾದರು. ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಎಲ್ಲರೂ ಓದಿ, ಅವರ ವಿಚಾರಗಳನ್ನು ಜೀವನದಲ್ಲಿ ಅನುಸರಿಸಬೇಕು.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img