Home Blog Page 3151

3ನೇ ಅಲೆಯ ಆತಂಕ – ಮೈಸೂರಿನಲ್ಲಿ ಈಗಿನಿಂದಲೇ ನಿಯಂತ್ರಣಕ್ಕೆ ಕ್ರಮ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆಯ ಆತಂಕ ಹೆಚ್ಚಾಗಿದ್ದು, ಈ ಅಲೆ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರಲಿದ್ದು, ಈಗಿನಿಂದಲೇ ನಿಯಂತ್ರಿಸಲು ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ಅಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಪೀಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ ನ್ನು ಆರಂಭ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ನಾಲ್ಕೈದು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಸ್ಥಿತಿ ಕೈ ಮೀರಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ 150 ಜನ ಮಕ್ಕಳ ತಜ್ಞರು ಇದ್ದಾರೆ. ಇದರೊಂದಿಗೆ ಮಕ್ಕಳಿಗೆ ಅಗತ್ಯವಿರುವ ಐಸಿಯು ಸೇರಿದಂತೆ ಇನ್ನಿತರ ಆರೋಗ್ಯ ಉಪಕರಣಗಳು ಎಷ್ಟಿವೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ದೊಡ್ಡವರಿಗೆ ನೀಡುವಂತೆ ಮಾತ್ರೆಗಳನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಪೀಡಿಯಾಟ್ರಿಕ್ ಮೆಡಿಕಲ್ ಕಿಟ್ ತಯಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಅವರಿಗೆ ಸೋಂಕು ತಗುಲಿದರೂ ಅಪಾಯದ ಮಟ್ಟ ತಲುಪಿಲ್ಲ. ಹೀಗಾಗಿಯೂ ಮುಂಜಾಗ್ರತೆ ತೆಗೆದುಕೊಳ್ಳದೆ ಇರುವಂತಿಲ್ಲ. ಈ ನಿಟ್ಟಿನಲ್ಲಿಯೇ ಈಗಿನಿಂದಲೇ ಮಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಸಿಎಂ!

ವಿಜಯಸಾಕ್ಷಿ ಸುದ್ದಿ, ರಾಯ್ ಪುರ

ಲಾಕ್ ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿ ಅಮಾನತು ಮಾಡಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ.

ಅಧಿಕಾರಿಗಳು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿತ್ತು.

ಕೊರೊನಾ ತಡೆಗೆ ಲಾಕ್ ಡೌನ್ ವಿಧಿಸಿರುವ ನಡುವೆಯೂ ಯುವಕನೊಬ್ಬ ಸಂಚರಿಸುತ್ತಿದ್ದ, ಇದನ್ನು ಅಧಿಕಾರಿಗಳು ಕಂಡೊಡನೆಯೇ ಆತ ತಾನು ಸಂಚರಿಸುತ್ತಿದ್ದದ್ದಕ್ಕೆ ಕಾರಣ ನೀಡಲು ಯತ್ನಿಸಿದ್ದ. ಆದರೆ, ಜಿಲ್ಲಾಧಿಕಾರಿ ಮಾತ್ರ ದರ್ಪ ಮೆರೆದಿದ್ದರು. ಮೊಬೈಲ್ ಹಾಗೂ ಯುವಕ ನೀಡುತ್ತಿದ್ದ ಕಾಗದವನ್ನು ಎಸೆದು ಕಾರಾಣ ಆಲಿಸದೆ ಅಧಿಕಾರಿಗಳು ಯುವಕನನ್ನು ಥಳಿಸಿದ್ದರು.

ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿಗಳನ್ನು ತೆಗೆದು ಹಾಕುವಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಬ್ಲ್ಯಾಕ್ ಫಂಗಸ್ ಬಗ್ಗೆ ತಜ್ಞರು ಹೇಳಿರುವ ಎಚ್ಚರಿಕೆ ಏನು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಒಂದೇ ಮಾಸ್ಕ್ ನ್ನು 2 ರಿಂದ 3 ವಾರಗಳ ಕಾಲ ನಿರಂತರವಾಗಿ ಬಳಕೆ ಮಾಡುತ್ತಿದ್ದರೂ ‘ಬ್ಲ್ಯಾಕ್ ಫಂಗಸ್’ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಮಾರಕ ಸೋಂಕಿನ ಅಬ್ಬರ ಜೋರಾಗಿದೆ. ಇತ್ತ ಬ್ಲ್ಯಾಕ್ ಫಂಗಸ್ ಸೋಂಕಿನ ಅಬ್ಬರ ಕೂಡ ಜೋರಾಗುತ್ತಿದೆ. ಇದರ ನಡುವೆಯೇ ಈ ಬ್ಲಾಕ್ ಫಂಗಸ್ ನ ಮೂಲಗಳ ಕುರಿತು ತಜ್ಞರು ಒಂದೊಂದೇ ಮಾಹಿತಿ ಹೊರ ಹಾಕುತ್ತಿದ್ದಾರೆ. ಸದ್ಯ ಒಂದೇ ಮಾಸ್ಕ್ ನ್ನು ಸತತವಾಗಿ ಬಳಕೆ ಮಾಡುವುದರಿಂದ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಏಮ್ಸ್ ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ, ಸತತ 2 ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆ ಎಂದು ಹೇಳಿದ್ದಾರೆ.

ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಬ್ಲ್ಯಾಕ್ ಫಂಗಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಹಿಂದೆಲ್ಲ ವರ್ಷಕ್ಕೆ 7 ಅಥವಾ 8 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಪ್ರತಿ ದಿನ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ.

ಮಧುಮೇಹ, ಬಿಪಿ, ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆಯಂತಹ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರಲ್ಲಿ ಕೂಡ ಸೋಕು ಬಹು ಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ

ಅಲ್ಲದೇ, ಗಡ್ಡ ಹೊಂದಿರುವ ಜನರಿಗೆ ಈ ಮಾಸ್ಕ್‌ ಧರಿಸುವುದು ಕಷ್ಟಕರವಾಗಬಹುದು. ಮಾಸ್ಕ್‌ ಮುಖದ ಮೇಲೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಮಾಸ್ಕ್ ಮುಖಕ್ಕೆ ಫಿಟ್ ಆಗಿ ಧರಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಕಷ್ಟ ಕಾಲದಲ್ಲಿ ಹಿರಿಯ ಜೀವಗಳ ಕೈ ಹಿಡಿದ ರಿಯಲ್ ಸ್ಟಾರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಹೀಗಾಗಿ ಹಿರಿಯರಷ್ಟೇ ಇರುವ ಮನೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳಿಗೆ ಉಪೇಂದ್ರ ಅವರೇ ಮನೆಯ ಮಗನಾಗಿದ್ದಾನೆ.

ಪ್ರತಿ ದಿನ ಸಿನಿಮಾ ಚಟುವಟಿಕೆಗಳನ್ನೇ ನಂಬಿಕೊಂಡಿದ್ದ ಬಡ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಕೆಲವು ಹಿರಿಯ ಕಲಾವಿದರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ನೆರವಿಗೆ ಉಪೇಂದ್ರ ಧಾವಿಸಿದ್ದಾರೆ.

ಸಿನಿಮಾವನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಡಿದ್ದ ಹಿರಿಯ ಕಲಾವಿದರಿಗೆ ಇಂದು ಚಿತ್ರ ರಂಗದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಲಾಕ್‍ ಡೌನ್ ಸಂದರ್ಭದಲ್ಲಿ ಅಂಥವರ ಕಷ್ಟ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಅರಿತ ನಟ ಉಪೇಂದ್ರ ಅವರು ಹಿರಿಯ ನಟ – ನಟಿಯರ ಮನೆಯ ಮಗನಾಗಿದ್ದಾರೆ. ಅಂತಹ ಕುಟುಂಬಗಳಿಗೆ ಅವಶ್ಯವಿರುವ ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಮೋಹನ್ ಜುನೇಜಾ, ಶ್ರೀಲಲಿತಾ, ಕಾಮಿನಿಧರನ್, ಬೆಂಗಳೂರು ನಾಗೇಶ್, ಎಟಿ ರಘು, ಉಮೇಶ್ ಮುಂತಾದವರ ಮನೆಗೆ ಉಪೇಂದ್ರ ಅವರು ದಿನಸಿ ಕಿಟ್ಗಾಳನ್ನು ಕಳುಹಿಸಿದ್ದಾರೆ.
ಈ ಹಿರಿಯ ಜೀವಗಳು ಉಪೇಂದ್ರ ಅವರಿಗೆ ಮನಸಾರೆ ಆಶೀರ್ವಾದಿಸಿದ್ದಾರೆ.

ಪೆಟ್ರೋಲ್ ಟ್ಯಾಂಕರ್ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು!

ವಿಜಯಸಾಕ್ಷಿ ಸುದ್ದಿ, ಗದಗ

ಪೆಟ್ರೋಲ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಜಿಲ್ಲಾಡಳಿತ ಭವನದ ಎದುರಿಗೆ ಈ ದುರ್ಘಟನೆ ನಡೆದಿದೆ.

ಮೃತನನ್ನು ಒಕ್ಕಲಗೇರಿ ಓಣಿಯ ಮಹಾದೇವಪ್ಪ ಹುಚ್ಚಪ್ಪ ಕುಂಬಾರ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಕೊಪ್ಪಳ ಮಾರ್ಗವಾಗಿ ಹೊರಟಿತ್ತು.

ಘಟನೆಯ ಮಾಹಿತಿ ತಿಳಿದ ಜಿಲ್ಲಾವರಿಷ್ಠಾಧಿಕಾರಿ ಯತೀಶ್ ಎನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಸೈಕಲ್ ಮೇಲೆ ಕಟ್ಟಿಗೆ ಒಯ್ಯುತ್ತಿದ್ದ ವ್ಯಕ್ತಿಯು ಮನೆ ಕಡೆ ಹೊರಟಿದ್ದಾಗ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೌಖ್ತೆ ಚಂಡಮಾರುತ – ಸಾವಿನ ಸಂಖ್ಯೆ 66ಕ್ಕೆ ಏರಿಕೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಇತ್ತೀಚೆಗಷ್ಟೇ ತೌಖ್ತೆ ಚಂಡಮಾರುತ ಬೀಸಿದ್ದ ಸಂದರ್ಭದಲ್ಲಿ ಮುಳುಗಿದ್ದ ಬಾರ್ಜ್ ಪಿ 305 ಸಮುದ್ರದ ತಳದಲ್ಲಿ ಕಂಡು ಬಂದಿದೆ. ಎರಡು ಹಡಗುಗಳಿಂದ ಕಾಣೆಯಾದ 20 ಸಿಬ್ಬಂದಿಗಳ ಹುಡುಕಾಟ ಮುಂದುವರಿದಿದೆ ಎಂದು ನೌಕಾಪಡೆ ಹೇಳಿದೆ. ಬಾರ್ಜ್‌ನಿಂದ ಒಂಭತ್ತು ಜನ ಹಾಗೂ ಟಗ್ ಬೋಟ್ ದಿಂದ ನಾಪತ್ತೆಯಾಗಿರುವ 11 ಜನರ ಕುರುಹು ಇನ್ನೂ ಕಂಡು ಬಂದಿಲ್ಲ. ಆದರೆ, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (ಎಸ್‌ಎಆರ್) ಹೆಚ್ಚಿಸಲು ನೌಕಾಪಡೆಯು ವಿಶೇಷ ಡೈವಿಂಗ್ ತಂಡಗಳನ್ನು ನಿಯೋಜಿಸಿತ್ತು. ಇಲ್ಲಿಯವರೆಗೆ 66 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಬಾರ್ಜ್ ಪಿ 305 ರಲ್ಲಿದ್ದ 261 ಸಿಬ್ಬಂದಿಯಲ್ಲಿ 186 ಜನರನ್ನು ಈವರೆಗೆ ರಕ್ಷಿಸಲಾಗಿದೆ. 66 ಜನ ಸಾವನ್ನಪ್ಪಿದ್ದಾರೆ ಹಾಗೂ ಒಂಭತ್ತು ಜನ ನಾಪತ್ತೆಯಾಗಿದ್ದಾರೆ ಎಂದು ಸೇನಾಪಡೆ ತಿಳಿಸಿದೆ.

ಈಗಾಗಲೇ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ 41 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.

ಬಾರ್ಜ್ ಪಿ 305, ಸೋಮವಾರ ಸಂಜೆ ಮುಂಬಯಿಯ ಕರಾವಳಿಯಲ್ಲಿ ಚಂಡಮಾರುತದ ಸಮಯದಲ್ಲಿ ಮುಳುಗಿತ್ತು. ಕೆಲವು ದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಹಲವು ದೇಹಗಳಿಗೆ ಹೆಚ್ಚಿನ ಗಾಯಗಳಾಗಿವೆ. ಹೀಗಾಗಿ ಅವರುಗಳನ್ನು ಗುರುತಿಸಲು ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೀಡಾದವರಿಗೆ ಕೊವಿಡ್ ಸೋಂಕು ಇದೆಯೇ ಎಂದು ಕಂಡುಹಿಡಿಯಲು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಪ್ರಕ್ಷುಬ್ಧ ಪ್ರದೇಶದಲ್ಲಿ ಬಾರ್ಜ್ ಏಕೆ ಅಲ್ಲೇ ಉಳಿದಿದೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಟ್ಟಿದ ಮಗುವಿನ ಮುಖ ನೋಡಲೂ ಬಿಡದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ಮಹಾಮಾರಿ ತಂದೆಯನ್ನು ಬಲಿ ಪಡೆದಿದೆ. ಜಿಲ್ಲೆಯ ಅಫಜಲಪುರ ನಿವಾಸಿ ಸುಭಾಷ್ ತಾವರಖೇಡ(32) ಅವರಿಗೆ ವಾರದ ಹಿಂದೆ ಕೊರೋನಾ ಸೋಂಕು ದೃಢವಾಗಿತ್ತು. ಹಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವೆಂಟಿಲೇಟರ್ ನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೇ ಸುಭಾಷ್ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಮುಖ ನೋಡುವ ಮುನ್ನವೇ ತಂದೆ ಮಹಾಮಾರಿಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಾಯಿ ಕಳೆದುಕೊಂಡ ಬಾಲಕಿಯ ಪತ್ರ ಓದಿದವರ ಕರುಳು ಹಿಂಡಿದಂತಾಗುತ್ತಿದೆ!

ವಿಜಯಸಾಕ್ಷಿ ಸುದ್ದಿ, ಕೊಡಗು

ಕೊರೊನಾದಿಂದ ಸಾವನ್ನಪ್ಪಿದ ತನ್ನ ತಾಯಿಯ ತಾಯಿಯ ಮೊಬೈಲ್ ಕೊಡುವಂತೆ ಪುಟ್ಟ ಬಾಲಕಿಯೊಬ್ಬಳು ಮನವಿ ಮಾಡಿರುವ ಮನ ಮಿಡಿಯುವ ಘಟನೆ ನಡೆದಿದೆ.

ಜಿಲ್ಲೆಯ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಹೃತಿಕ್ಷಾ ಎಂಬ ಬಾಲಕಿಯೇ ಈ ರೀತಿ ಮನವಿ ಮಾಡಿದ್ದಾಳೆ. ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿವೆ. ದಯಾಮಾಡಿ ಆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ತಾಯಿಯ ಮೊಬೈಲ್ ಗಾಗಿ ಈ ಬಾಲಕಿ, ಶಾಸಕರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೇ. 16ರಂದು ಸಾವನ್ನಪ್ಪಿದ್ದಳು.

ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕಿ, ನನ್ನ ತಾಯಿಯೊಂದಿಗೆ ಮೊಬೈಲ್ ಕೂಡ ಮರೆಯಾಗಿದೆ. ಮೊಬೈಲ್ ತೆಗೆದುಕೊಂಡವರು ಅಥವಾ ಸಿಕ್ಕವರು ದಯವಿಟ್ಟು ಮರಳಿ ಕೊಡಿ. ತಾಯಿಯನ್ನು ಕಳೆದುಕೊಂಡ ಈ ತಬ್ಬಲಿಗೆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ಈ ಬಾಲಕಿಯ ಪತ್ರ ಓದಿದ ಪ್ರತಿಯೊಬ್ಬ ಓದುಗರ ಕರುಳು ಹಿಂಡಿದಂತಾಗುತ್ತಿದೆ. ಹೀಗಾಗಿ ಹೃತಿಕ್ಷಾಳ ತಾಯಿಯ ಮೊಬೈಲ್ ಇದ್ದವರು ಕೂಡಲೇ ಕೊಡಬೇಕೆಂಬುವುದು ವಿಜಯಸಾಕ್ಷಿ ಪತ್ರಿಕೆ, ವೆಬ್ ಹಾಗೂ ಓದುಗರ ಮನವಿಯಾಗಿದೆ.

ಉಗ್ರರ ಹೆಡೆಮೂರಿ ಕಟ್ಟಿದ ಸೇನೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿ(ಡಿಎನ್ಎಲ್ಎ) ನಡುವೆ ಗುಂಡಿನ ಚಕಮಕಿ ನಡೆದಿದ್ದು, 6 ಜನ ಉಗ್ರರ ಹೆಡೆಮೂರಿ ಕಟ್ಟಲಾಗಿದೆ.

ಡಿಎನ್ ಎಲ್ ಎ ಸಂಘಟನೆಯ 6 ಜನ ಉಗ್ರರನ್ನು ಸೇನೆ ಬಲಿ ಪಡೆದಿದೆ. ಅಸ್ಸಾಂ ರೈಫಲ್ಸ್ ಪರ್ಸನಲ್ ಮತ್ತು ಪೊಲೀಸರು ಪಶ್ಚಿಮ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಹೆಣ ಉರುಳಿಸಿದ್ದಾರೆ.

ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಲಾ ತಿಳಿಸಿದ್ದಾರೆ. ಅಲ್ಲದೇ, ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿಗೆ ಸೇರಿದ ಮೃತ 6 ಜನ ಉಗ್ರರ ಬಳಿಯಿದ್ದ ನಾಲ್ಕು ಎಕೆ – 47 ರೈಫಲ್ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಲ್ಲದೇ, ಮಿಚಿಬೈಲಂಗ್ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಅನುಮಾನ ವ್ಯಕ್ತವಾಗಿದ್ದು, ಸೇನಾ ಕಾರ್ಯಾರಣೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಂದೆಯ ಶವ ಬೇಡ..ಹಣ ಬೇಕು ಎಂದ ಪಾಪಿ ಮಗ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿಯಿಂದ ತಂದೆ ಸತ್ತರೆ, ಹೆಣ ನೋಡಲು ಬಾರದ ಪಾಪಿ ಮಗ, ಶವ ನೀವೆ ಸುಡಿ ಹಣ ತಂದು ಕೊಡಿ ಎಂದು ಹೇಳಿರುವ ಅಮಾನವೀಯ ಘಟನೆ ನಡೆದಿದೆ.

ನಗರದ ಹೆಬ್ಬಾಳದ ಸೂರ್ಯ ಬೇಕರಿ ಹತ್ತಿರ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ತಂದೆ ಮೃತಪಟ್ಟಿರುವ ಕುರಿತು ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದರು. ಆದರೆ, ಇದಕ್ಕೆ ದುಃಖ ವ್ಯಕ್ತಪಡಿಸಬೇಕಾಗಿದ್ದ ಮಗ, ಏನೂ ಆಗದವರಂತೆ ವರ್ತಿಸಿದ್ದಾನೆ. ಅಲ್ಲದೇ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ತಂದೆಯ ಬಳಿ ಇರುವ ರೂ. 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ತೆಗೆದುಕೊಂಡು ಬಂದು ಎಲ್ಲ ಕೊಟ್ಟು ಬಿಡಿ ಎಂದು ಹೇಳಿದ್ದಾನೆ.

ಆ ಪಾಪಿ ಇಷ್ಟು ಹೇಳಿದ್ದೆ ತಡ ಪಾಲಿಕೆಯ ಸದಸ್ಯ ಶ್ರೀಧರ್, ಆತನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

error: Content is protected !!