Home Blog Page 3195

ಮುಂಬೈನ ಆಝಾದ್ ಮೈದಾನದ ಬೃಹತ್ ರ‌್ಯಾಲಿಗೆ ಸಾವಿರಾರು ನಾಸಿಕ್ ರೈತರು

ವಿಜಯಸಾಕ್ಷಿ ಸುದ್ದಿ, ಮುಂಬೈ

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ದ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಶನಿವಾರ ಮಹಾರಾಷ್ಟ್ರದ 21 ಜಿಲ್ಲೆಗಳ ಸಾವಿರಾರು ರೈತರು ನಾಸಿಕ್ ನಲ್ಲಿ ಒಂದಡೆ ಸೇರಿದ್ದು, 180 ಕಿ.ಮೀ.ದೂರದ ರಾಜ್ಯ ರಾಜಧಾನಿ ಮುಂಬೈನತ್ತ ಬೃಹತ್ ಮೆರವಣಿಗೆಯನ್ನು ಆರಂಭಿಸಿದ್ದಾರೆ.

ಧ್ವಜಗಳನ್ನು ಹಾರಿಸುತ್ತಾ, ಬ್ಯಾನರ್ ಗಳನ್ನು ಹಿಡಿದು ಸಾಗರದಂತೆ ಹರಿದುಬರುತ್ತಿರುವ ರೈತರು ನಾಸಿಕ್-ಮುಂಬೈ ಸಂಪರ್ಕಿಸುವ ಕಸಾರಾ ಘಾಟ್ ವಲಯದ ರಸ್ತೆ ಮಾರ್ಗದಲ್ಲೇ ಸಾಗಿಬರುತ್ತಿದ್ದಾರೆ.

ಹಲವಾರು ಸಣ್ಣಪುಟ್ಟ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಭಾ ಅಡಿಯಲ್ಲಿ ಒಂದಾಗಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪಲಿವೆ. ಸೋಮವಾರ ಮುಂಬೈನ ಪ್ರಸಿದ್ಧ ಆಝಾದ್ ಮೈದಾನದಲ್ಲಿ ನಡೆಯುವ ಬೃಹತ್ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ವರದಿ:ಡಾ.ಅಬ್ದುಲ್ ರಜಾಕ್

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರ ಸಾವು

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ: KSRTC ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ನಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿ ಬಸ್ ಅಡಿಯಲ್ಲಿ ಸಿಲುಕಿದೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟರು.

ಕೊನೆಗೆ ಕ್ರೇನ್ ಮೂಲಕ ಕಾರು ಹೊರ ತೆಗೆಯಲಾಯಿತು. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಪ್ಪತ ಉತ್ಸವ: ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅತ್ಯದ್ಭುತ ಛಾಯಾಚಿತ್ರಗಳ ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ ಗದಗ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರವಿವಾರ ಕಪ್ಪತ ಉತ್ಸವ-೨೦೨೧ ಜರುಗಿತು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಷ್ಕೃತರು ಹಾಗೂ ವಿಜಯ ಕರ್ನಾಟಕ ಪತ್ರಿಕಾ ಛಾಯಾಗ್ರಾಹಕ ರಾಮು ವಗ್ಗಿಯವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಛಾಯಾಚಿತ್ರಗಳನ್ನು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ವೀಕ್ಷಿಸಿದರು.

ರಾಮು ವಗ್ಗಿ ಅವರು ಕ್ಲಿಕ್ಕಿಸಿರುವ ಕಪ್ಪತಗುಡ್ಡದ ಸೊಬಗಿನ, ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳ, ಸೂರ್ಯಾಸ್ತ, ಕೋತಿಗಳ ಚಿತ್ರ, ಮಾಗಡಿ ಕೆರೆಯ ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿದ್ಯಾರ್ಥಿಗಳು, ಪರಿಸರವಾದಿಗಳು, ನಗರದ ಜನತೆ ವಿವಿಧ ಬಗೆಯ ಪ್ರಾಕೃತಿಕ ಪರಂಪರೆ ಬಿಂಬಿಸುವ ವನ್ಯಜೀವಿಗಳ ಫೋಟೋ ನೋಡಿ ಖುಷಿ ಪಟ್ಟರು.


ಛಾಯಚಿತ್ರ ಕುರಿತು ಛಾಯಾಚಿತ್ರಗಾರ ರಾಮು ವಗ್ಗಿಯವರು ವಿವರಣೆ ನೀಡಿದರು. ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿರಹಟ್ಟಿ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಯಾವ ಪಂಚಾಯತಿಗೆ ಯಾವ ಕೆಟಗರಿ? ಇಲ್ಲಿದೆ ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ 14 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ರವಿವಾರ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ಗದಗ ಜಿಲ್ಲೆಯ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಗೆ ಡೆಡ್ ಲೈನ್ ಫಿಕ್ಸ್: ಯಾವಾಗ, ಎಲ್ಲಿ?

ಬೆಳ್ಳಟ್ಟಿ ಹಾಗೂ ಮಾಗಡಿ ಗ್ರಾಮ ಪಂಚಾಯತಿ- ಅಧ್ಯಕ್ಷ- ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಬನ್ನಿಕೊಪ್ಪ ಗ್ರಾ.ಪಂ- ಅಧ್ಯಕ್ಷ – ಹಿಂದುಳಿದ ‘ಬ’ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಛಬ್ಬಿ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಕೋಗನೂರು ಗ್ರಾ.ಪಂ. ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ

ಮಾಚೇನಹಳ್ಳಿ ಗ್ರಾ.ಪಂ- ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ರಣತೂರು ಗ್ರಾ.ಪಂ- ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ

ತಾರಿಕೊಪ್ಪ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ

ಹೆಬ್ಬಾಳ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಹೊಳೆಇಟಗಿ ಗ್ರಾ.ಪಂ- ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ವಡವಿ ಗ್ರಾ.ಪಂ ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ

ಕಡಕೋಳ ಹಾಗೂ ಮಜ್ಜೂರು ಗ್ರಾ.ಪಂ- ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಕೊಂಚಿಗೇರಿ ಗ್ರಾ.ಪಂ- ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಬ’ ವರ್ಗ

ಕಪ್ಪತಗುಡ್ಡಕ್ಕೆ ಹಾನಿ‌ ಆಗುವಂತಿದ್ದರೆ ಗಣಿಗಾರಿಕೆಗೆ ಅನುಮತಿ ಕೊಡಲ್ಲ: ಸಚಿವ ಸಿ ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಶಿವಮೊಗ್ಗದಲ್ಲಿ ನಡೆದ ಘಟನೆ ದುರಾದೃಷ್ಟಕರ. ಘಟನೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉತ್ತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತದೆ. ಜಿಲೆಟಿನ್ ಬಳಸಲು ಪರವಾನಗಿ ಕೊಡುವ ಅಧಿಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಕಪ್ಪತ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲೆಯ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಗುಡ್ಡಕ್ಕೆ ಹಾನಿ ಮಾಡುವ ಯಾವುದೇ ಗಣಿಗಾರಿಕೆ ಮಾಡಲು ಅನುಮತಿ ಕೊಡುವುದಿಲ್ಲ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದ್ದೇವೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿ ಬಂದ್ ಮಾಡಿಸಿದ್ದೇವೆ. ಅಲ್ಲದೇ, ಕ್ರಷರ್ ಘಟಕಗಳನ್ನು ಬಂದ್ ಮಾಡಲಾಗಿದೆ. ಒಂದು ವೇಳೆ ನಡೆಯುತ್ತಿದ್ದರೆ, ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ನಾನು‌ ಪಕ್ಷದ ಶಿಸ್ತಿನ‌ ಸಿಪಾಯಿ, ಖಾತೆ ಬದಲಾವಣೆ ವಿಷಯದಲ್ಲಿ ಯಾವುದೇ ಅಸಮಾಧಾನವಿಲ್ಲ.
ಸಿಎಂ ನೀಡಿರುವ ಹೊಸ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನನ್ನನ್ನು ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ. ಮೊದಲು ಶಾಸಕನಾಗಬೇಕು ಅಂತಾ ಬಡದಾಡುತ್ತೇವೆ. ಶಾಸಕನಾದ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕು ಅಂತಾ ಚಿಂತೆ ಮಾಡುತ್ತೇವೆ.
ಅಧಿಕಾರಕ್ಕೆ ಬಂದ ಮೇಲೆ ಮಂತ್ರಿಯಾಗಬೇಕೆಂದು ಬಯಸುತ್ತೇವೆ. ಸಚಿವನಾದ ಮೇಲೆ ಖಾತೆಗಾಗಿ ಪ್ರಯತ್ನಿಸುತ್ತೇವೆ. ಇದು ಮನುಷ್ಯನ ಮಾನಸಿಕ ದೌರ್ಬಲ್ಯ. ಇಂತಹ ದೌರ್ಬಲ್ಯದಿಂದ ನಾನು ದೂರ ಇದ್ದೇನೆ ಎಂದು ಹೇಳಿದರು.

ರೆಸಾರ್ಟ್ ರಾಜಕಾರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ರೆಸಾರ್ಟ್ ರಾಜಕಾರಣ ಅಂತಾ ನಾನು ಒಪ್ಪುವುದಿಲ್ಲ. ಸಚಿವ ರಮೇಶ ಜಾರಕಿಹೊಳಿಗೆ ಕರೆ ಮಾಡಿದಾಗ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ಸಲುವಾಗಿ ನಾನು ರೆಸಾರ್ಟ್ ನಲ್ಲಿದ್ದೇನೆ ಅಂತಾ ಹೇಳಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡಾರಾದ ಪ್ರಶಾಂತ ನಾಯ್ಕರ್, ಶಿವರಾಜ್ ಹಿರೇಮನಿಪಾಟೀಲ ಸೇರಿದಂತೆ ಹಲವರು ಇದ್ದರು.

ಖಾತೆ ಬದಲಾವಣೆ ನೋವುಂಟು ಮಾಡಿದೆ: ಸಂಕನೂರ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಂದ ಖಾತೆ ಬದಲಾವಣೆ ಮಾಡಿದ್ದು ಬಹಳ ನೋವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಪ್ಪತ ಉತ್ಸವ-2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಷಯ ಹೇಳಿದರು.

ಸಚಿವ ಸಿ.ಸಿ.ಪಾಟೀಲ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಖಾತೆ ಬದಲಾವಣೆ ಮಾಡಿ ಸಿಸಿ ಪಾಟೀಲ್ ಅವರಿಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆ ನೀಡಿದ್ದಾರೆ. ಆದರೆ, ಖಾತೆ ಬದಲಾವಣೆ ಯಾಕೆ ಮಾಡಿದರು ಎಂಬುವುದು ಮುಖ್ಯಮಂತ್ರಿಗಳಿಗೆ ಗೊತ್ತು. ಇದರಿಂದ ತುಂಬಾ ನೋವಾಗಿದೆ ಎಂದು ವಿಧಾ‌ನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿಷಾದ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿ ಸಿ.ಸಿ.ಪಾಟೀಲ ಅವರು, ನನ್ನ ಬಗ್ಗೆ ಎಸ್.ವಿ.ಸಂಕನೂರ ಅವರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅವರಿಗೆ ನಾನು ಅಭಾರಿಯಾಗಿದ್ದೇನೆ. ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಖಾತೆ ಬದಲಾವಣೆ ಬಗ್ಗೆ ನಾನು ಕೂದಲೆಳೆಯಷ್ಟು ಅಸಮಧಾನವಾಗಿಲ್ಲ, ಬೇಸರವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದರು. ಆಗ ಭಾಗ್ಯಲಕ್ಷ್ಮೀ ಮತ್ತು ಬಾಲ ಸಂಜೀವಿನಿ ಯೋಜನೆಗಳನ್ನು ಜಾರಿಗೊಳಿಸಿರುವ ಕೀರ್ತಿ ಇದೆ. ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

ಈ ಬಾರಿ ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟಿದ್ದರು. ಅವ್ಯವಸ್ಥೆಯ ಆಗರವಾಗಿತ್ತು. ಅಕ್ರಮ ಗಣಿಗಾರಿಕೆ ಚಟುವಟಿಕೆ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಸಿದ್ದೇನೆ. ಖಾತೆ ಬದಲಾವಣೆ ಸಿಎಂ ಪರಾಮಾಧಿಕಾರ. ಪ್ರತಿ ಜಿಲ್ಲೆಗೂ ಅವಶ್ಯವಾಗುವ ಸಣ್ಣ ಕೈಗಾರಿಕೆ ಕೊಟ್ಟಿದ್ದಾರೆ. ಅದರ ಜೊತೆಗೆ ಸಿಎಂ ಬಳಿಯೇ ಇರಬೇಕಾದ ಖಾತೆಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಟ್ಟಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಾರಿಯಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಗಣಿ ಮತ್ತು ಅರಣ್ಯ ಇಲಾಖೆಗಳೆರಡು ಎಣ್ಣೆ ಸೀಗೆಕಾಯಿ ಸಂಬಂಧವಿದ್ದಂತೆ. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಗಣಿಗಾರಿಕೆ ಬೇಕು. ನಾಳಿನ ಪರಿಸರ ಬೇಕಾದರೆ ಅರಣ್ಯ ಉಳಿಯಲೇಬೇಕು. ಅವೆರಡೂ ಇಲಾಖೆಗಳನ್ನೂ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗೆ ಇದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಬಿಜೆಪಿ ಮಂತ್ರಿಗಳ ಮುಖಂಡತ್ವದಲ್ಲಿ ಮೂಜಗಂ ಮಠದ 500 ಕೋಟಿ ರೂ. ಆಸ್ತಿ‌ ನಾಶ, ಹಿಂದೂಗಳು ಎಷ್ಟೋ ಮಂದಿರ ದ್ವಂಸಗೊಳಿಸಿರುವ ಉದಾಹರಣೆಗಳಿವೆ: ದಿಂಗಾಲೇಶ್ವರಶ್ರೀ

ವಿಜಯಸಾಕ್ಷಿ ಸುದ್ದಿ, ಗದಗ

ಹಿಂದೂ ದೇವಾಸ್ಥಾನ ನಾಶ ಮಾಡಿದ ಮುಸ್ಲಿಂ ದೊರೆಗಳ ಬಗ್ಗೆ ನಾವು ಭಾಷಣ ಮಾಡುತ್ತೇವೆ. ಆದರೆ, ಹಿಂದೂಗಳೇ ಎಷ್ಟೋ ದೇವಾಲಯಗಳನ್ನು ನಾಶ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣರದುರಿಗೆ ಇವೆ.
ಕೇವಲ ಪರ ಧರ್ಮಿಯರು ಮಂದಿರ ನಾಶಗೊಳಿಸಿದರಷ್ಟೇ ತಪ್ಪಲ್ಲ, ಸ್ವಧರ್ಮಿಯರು ನಾಶಗೊಳಿಸಿದರೂ ಅಷ್ಟೇ ತಪ್ಪು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟರು.

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಪ್ರಯುಕ್ತವಾಗಿ ಲಕ್ಷ್ಮೇಶ್ವರದಲ್ಲಿ ಶನಿವಾರ ಸಂಜೆ ನಡೆದ ನಿಧಿ ಸಮರ್ಪಣಾ ಅಭಿಯಾನದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಶಕ್ತಿ, ಸಂಸ್ಕೃತಿ ನಾಶವಾದ ಹಾಗೆ, ನಮ್ಮ ದೇವಾಲಯಗಳು ಮಠಗಳು ನಾಶವಾಗಬಾರದು ಎಂಬುವುದಕ್ಕೆ ನೀವು ಒಂದು ಸಾರಿ ಬ್ರಿಟಿಷ್ ಮತ್ತು ಮುಸ್ಲಿಂ ದೊರೆಗಳ ಕುತಂತ್ರ ಓದಿಕೊಂಡಾಗ, ಯಾಕೆ ದೇವಾಲಯಗಳನ್ನು ರಕ್ಷಣೆ ಮಾಡಬೇಕು ಎಂಬುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಸದ್ಯಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿ 500 ಕೋಟಿ ರೂ. ಹೋಗಿದೆ. ಅದು ಬಿಜೆಪಿ ಮಂತ್ರಿಗಳ ಮುಖಂಡತ್ವದಲ್ಲಿ ಹೋಗಿದ್ದು, ಅದಕ್ಕೆ ಓರ್ವ ಕಾಂಗ್ರೆಸ್ ಹಾಗೂ ಇನ್ನೋರ್ವ ಜೆಡಿಎಸ್ ಮುಖಂಡ ಸಾಥ್ ನೀಡಿದ್ದಾರೆ. ನಾವು ದೊಡ್ಡ ಪ್ರಮಾಣದಲ್ಲಿ ದೇವಾಲಯ, ಮಠಗಳನ್ನು ಉಳಿಸಬೇಕೆಂದು ಹೋರಾಟ ಮಾಡುತ್ತಿದ್ದೇವಲ್ಲಾ. ಮಕ್ಕಳಿಗೆ ಅನ್ನ ಹಾಕಿ, ವಿದ್ಯೆ ಕೊಟ್ಟ ಮಠದ 500 ಕೋಟಿ ರೂ. ನಾಶವಾಗಿದೆ. ನನ್ನ ಸಲುವಾಗಿ ನೂರು ತರಹದ ತಪ್ಪು ಕಲ್ಪನೆ ಬಿತ್ತರಿಸುತ್ತಿದ್ದಾರೆ. ಯಾರು ಈ ದೇಶದ ಇತಿಹಾಸದಲ್ಲಿ ಸಾರ್ವಜನಿಕ ಮಠ, ಮಂದಿರ, ಆಶ್ರಮಗಳನ್ನು ಉಳಿಸಬೇಕೆಂದು ಹೋಗುತ್ತಾರೆಯೋ ಅವರ ವಿರುದ್ಧ ಅಪಪ್ರಚಾರ ನಡೆಯುತ್ತದೆ ಎಂದರು.

ಈಗಾಗಲೇ ಸಾವಿರಾರು ದೇವಸ್ಥಾನಗಳು ನಾಶವಾಗಿವೆ. ಇನ್ನುಳಿದವುಗಳನ್ನು ಉಳಿಸಬೇಕೆಂದರೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಸ್ಥೆ ಪರಾಧೀನವಾಗದಂತೆ ಸರ್ಕಾರ ಕಾನೂನು ರೂಪಿಸಬೇಕು.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಸರ್ಕಾರವಾಗಿರಲಿ ನಮ್ಮ ದೇವಸ್ಥಾನದ ಆಸ್ತಿ ಮುಟ್ಟುವವರ ವಿರುದ್ಧ ಹೋರಾಟ ಆಗಲೇಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಒತ್ತಾಯಿಸಿದರು.

ಬಸ್ ನಿಲ್ದಾಣ ಉದ್ಘಾಟನೆ, ತೋಂಟದ ಶ್ರೀ, ಕಲ್ಲಯ್ಯಜ್ಜನವರಿಗಿಲ್ಲ ಆಹ್ವಾನ: ಭಕ್ತರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಹೃದಯ ಭಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನವೀಕೃತ ಬಸ್ ನಿಲ್ದಾಣವನ್ನು ಭಾನುವಾರ ಸಂಜೆ 4 ಗಂಟೆಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ.

ಜಿಲ್ಲೆಯ ಜನರ ಬೇಡಿಕೆಯಂತೆ ನವೀಕರಣಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಕಡೆಗೂ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸಯ ನಾಮಕರಣ ಮಾಡಿದೆ.

ಆದರೆ, ಇಂದು ನಡೆಯುತ್ತಿರುವ ಬಸ್ ನಿಲ್ದಾಣದ ಲೋಕಾರ್ಪಣೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿ ಅವರನ್ನು ಆಹ್ವಾನ ಮಾಡದೇ ಜಿಲ್ಲಾಡಳಿತ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಪಮಾನವೆಸಗಿದೆ ಎಂದು ಉಭಯ ಮಠಗಳ
ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ. ಪುಟ್ಟಯ್ಯಜ್ಜನವರ ಬಸ್ ನಿಲ್ದಾಣದ ಲೋಕಾರ್ಪಣೆಗೆ ಅದೇ ಮಠದ ಪೀಠಾಧಿಪತಿಗಳನ್ನು ಆಹ್ವಾನಿಸದಿರುವುದು ಎಷ್ಟು ಸರಿ ಎಂದು ಜಿಲ್ಲೆಯ ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಾಮಾಚಾರ:ನಿಧಿಯಾಸೆಗೆ ನೆಲ ಅಗೆದ ಖದೀಮರು

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಇಲ್ಲಿನ ಗದಗ-ಲಕ್ಷ್ಮೇಶ್ವರ ರಸ್ತೆಯ ಹುಣಸಿಮರದ ಕೆರೆ ಹತ್ತಿರವಿರುವ ಬಸವಣ್ಣನ ಗುಡಿ ಮುಂದೆ ನಿಧಿ ಆಸೆಗಾಗಿ ವಾಮಾಚಾರ ನಡೆಸಿ ನೆಲ ಅಗೆದಿರುವ ಘಟನೆ ಬೆಳಕಿಗೆ ಬಂದಿದೆ.

ಕೆರೆ ದಂಡೆಯಲ್ಲಿರುವ ಗುಡಿಯಲ್ಲಿ ಲಿಂಬೆ ಹಣ್ಣು, ಕುಂಕುಮ ಲೇಪಿತ ಅಕ್ಷತೆ, ತಾಮ್ರದ ತಗಡಿನ ತುಂಡು ಇಟ್ಟು ವಾಮಾಚಾರ ಮಾಡಿದ್ದಾರೆ. ಬಳಿಕ ಗುಡಿ ಮುಂದಿನ ಭರಮ ದೇವರ ಕಟ್ಟಿ ಕಲ್ಲು ಕಿತ್ತು ಜೆಸಿಬಿ ಬಳಸಿ ಸುಮಾರು ಹತ್ತು ಅಡಿ ಆಳದವರೆಗೆ ತಗ್ಗು ತೆಗೆದಿದ್ದಾರೆ. ಹೊಲಕ್ಕೆ ಬಂದ ಅಶೋಕ ಹುಣಸಿಮರದ ಇದನ್ನು ನೋಡಿ ಆಶ್ಚರ್ಯ ಚಕಿತರಾಗಿ ಗ್ರಾಮಸ್ಥರನ್ನು ಕರೆದು ಪರಿಶೀಲಿಸಿದಾಗ ಇದು ನಿಧಿ ಕಳ್ಳರ ಕೃತ್ಯ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ, ರಸ್ತೆ ಪಕ್ಕ ಕೆರೆ ಇರುವುದರಿಂದ ವಾಹನ ಸವಾರು ಗುಡಿ ಹತ್ತಿರ ಕುಳಿತು ನೀರು ಕುಡಿದು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ರೈತರು ಸಹ ಕುಡಿಯಲು ಇದೇ ನೀರು ಬಳಸುತ್ತಾರೆ. ಈ ಜಾಗದಲ್ಲಿ ನಿಧಿಗಾಗಿ ದುರುಳರು ನೆಲ ಅಗೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಸ್ಥಳಕ್ಕೆ ಮುಳಗುಂದ ಪೋಲಿಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಅಂದರ್-ಬಾಹರ್ : 12 ಜನರ ಬಂಧನ, 6 ಜನ ಪರಾರಿ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವಡವಿ ಹೊಸೂರು ಹಾಗೂ ಹರಿಪುರ ಗ್ರಾಮದಲ್ಲಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ 12 ಜನರನ್ನು ಬಂಧಿಸಲಾಗಿದ್ದು, 6 ಜನ ಪರಾರಿಯಾಗಿದ್ದಾರೆ. ಬಂಧಿತರಿಂದ ಸುಮಾರು 9300 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಹರಿಪುರ ಗ್ರಾಮದ ಗುರುಪಾದಯ್ಯ ಸಿದ್ದರಾಮಯ್ಯ ಹಡಗಲಿಮಠ, ಶಂಕ್ರಪ್ಪ ಅಮರಪ್ಪ ಶಿವಶಿಂಪರ್, ಮಾಬುಸಾಬ ರಾಜೇಸಾಬ್ ಒಂಟಿ, ಶರಣಯ್ಯ ಸಿದ್ದರಾಮಯ್ಯ ಹಡಗಲಿಮಠ, ವೀರಭದ್ರಪ್ಪ ವೀರಪ್ಪ ಮುರಶಿಲ್ಲಿ, ಶಂಕ್ರಪ್ಪ ಗಂಗಪ್ಪ ಸೋಂಟಪುರ, ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ ಮಾಯಪ್ಪ ವಾಲಿಕಾರ, ಮಂಜಪ್ಪ ಶೆಟ್ಟೆಪ್ಪ ಕುರಿ ಹಾಗೂ ನಿತೀಶ್ ವೀರನಗೌಡ ಮಣಕವಾಡ ಎಂಬುವವರನ್ನು ಬಂಧಿಸಲಾಗಿದೆ.

ಅದರಂತೆ ವಡವಿ ಹೊಸೂರು ಗ್ರಾಮದಲ್ಲಿ ಜಿಲ್ಲಾ ಅಪರಾಧ ವಿಭಾಗದ ಟಿ.ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಆರು ಜನ ಪರಾರಿಯಾಗಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಸೈಯದ್ ಬಾಬುಸಾಬ ದರೇಖಾನ್, ಬಾಲೇಹೊಸೂರು ಗ್ರಾಮದ ಶೇಖಪ್ಪ ಬಸಪ್ಪ ಒಂಟಿಪಡೆಪ್ಪನವರ, ಕೊಗಾನೂರಿನ ಶರಣಬಸಪ್ಪ ಬಸವರಾಜ್ ಚೆನ್ನೂರು ಬಂಧಿತರಾಗಿದ್ದಾರೆ.

ವಡವಿ ಹೊಸೂರು ಗ್ರಾಮದ ಮೌನೇಶ್ ಬಡಿಗೇರ, ಹೇಮಂತ್, ಹಾಲಪ್ಪ ಭಾವಿಮನಿ, ಯಲ್ಲಪ್ಪ ನೀಲಪ್ಪ ಬೈರಮ್ಮನವರ, ಲಕ್ಷ್ಮೇಶ್ವರದ ನೌಶಾದ್ ಆಡೂರ ಹಾಗೂ ಮುರಡಿಯ ಕೃಷ್ಣಾ ಮುರಡಿ ಪರಾರಿಯಾಗಿರುವ ಆರೋಪಿಗಳಾಗಿದ್ದಾರೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!