Home Blog Page 3210

ದೇಶದಲ್ಲಿ ಲವ್ ಜಿಹಾದ್ ಕಾಯ್ದೆ‌ ಜಾರಿಯಾಗಲೇಬೇಕು; ಸಚಿವ ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಹಾವೇರಿ

ಲವ್ ಜಿಹಾದ್ ಕಾಯ್ದೆ ದೇಶದಲ್ಲಿ ಬರಲೇಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು,
ವಿಧಾನ ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಪರಿಷತ್ತಿನಲ್ಲಿ ಮೊನ್ನೆ ನಡೆದ ಘಟನೆ ಅಮಾನವೀಯ. ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಗೂಂಡಾಗಿರಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಒಬ್ಬ ಉಪಸಭಾಪತಿಯನ್ನೇ ಎಳೆದು ಹಾಕ್ತಾರಂದ್ರೆ ಅವರು ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಅದರ ಮೇಲೆ‌ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭಾಶಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಪಿ, ಅದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ. ಜನ್ಮದಿನದ ದಿನ ಶುಭಾಶಯ ಕೋರುವುದು ಮಾನವೀಯತೆ.
ರಾಜಕೀಯ ವೈರಿಗಳಾಗಿ ಇರುತ್ತೇವೆ. ಆದರೆ ಮದುವೆ, ಜನ್ಮದಿನದ ಸಮಯದಲ್ಲಿ ಶುಭಾಶಯ ಕೋರುವುದರಲ್ಲಿ ತಪ್ಪೇನಿದೆ ಎಂದ ಅವರು, ನಾನೂ ಸಹ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ಶುಭಾಶಯ ಕೋರಿದರು.

ಜೆಡಿಎಸ್ ಪಕ್ಷ ಮಿಠಾಯಿ ಕೊಟ್ಟವರ ಬಳಿ ಹೋಗುತ್ತೆ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರು ಅದೇ ಪಕ್ಷದವರಾಗಿದ್ದವರು. ಹಾಗಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಗ್ರಾ.ಪಂ.ಚುನಾವಣೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಮತ್ತು ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಬೆಂಗಳೂರು ಮಾದರಿಯಲ್ಲೇ ಮೈಸೂರಿನಲ್ಲೂ ಗುಂಪು ಮನೆ ನಿರ್ಮಾಣ; ಸೋಮಶೇಖರ್ ಭರವಸೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮೈಸೂರಿನಲ್ಲೂ ಬೆಂಗಳೂರು ಮಾದರಿಯಲ್ಲಿ ಸಿಂಗಲ್ ಬೆಡ್, ಡಬಲ್ ಬೆಡ್, ತ್ರಿಬಲ್ ಬೆಡ್ ಗಳ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಮೈಸೂರಿನ ಮೊದಲ ಟೌನ್ ಶಿಪ್ ಗೆ ಈಗಾಗಲೇ ಭೂಮಿ ಗೊತ್ತುಪಡಿಸಿದ್ದೇವೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸದ ಸಚಿವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ 22 ಎಕರೆಯಲ್ಲಿ 2500 ಸೈಟ್ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಜೊತೆ ಮಾತನಾಡಿದ್ದೇನೆ. ಬಿಡಿಎ ಮಾದರಿಯಲ್ಲಿ ಮುಡಾದಿಂದಲೂ ಜನರಿಗೆ ಅನುಕೂಲವಾಗುವಂತೆ ಗುಂಪುಮನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಮೈಸೂರು ಮುಡಾವನ್ನು ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ‌ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಅಧಿಕಾರಿ ದಲ್ಲಾಳಿಯನ್ನು ಸಂಪರ್ಕಿಸುವಂತೆ ಹೇಳಿದರೆ ತಕ್ಷಣ ಅಧ್ಯಕ್ಷರಿಗೆ, ಆಯುಕ್ತರಿಗೆ ದೂರು ನೀಡಿ. ಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕೊರೋನಾ ನಿಯಮ ಎಲ್ಲರಿಗೂ ಒಂದೇ, ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ಹಾಕಿ; ಸೋಮಶೇಖರ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಪರಿಷತ್ ಒಳಗೆ ಮಾಸ್ಕ್ ಹಾಕದವರಿಗೆ,
ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ, ದಂಡ ಹಾಕಬೇಕು. ಸಭಾಪತಿಗಳೇ ಈ ನಿರ್ಣಯ ಕೈಗೊಳ್ಳಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಗ್ರಹಿಸಿದರು.

ವಿಧಾನ ಪರಿಷತ್ ನಲ್ಲಿ ಗದ್ದಲ ಮಾಡುವ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,
ನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ ಎಂದರು.

ಜನ ಸಾಮಾನ್ಯರು ಈ ವಿಚಾರದಲ್ಲಿ ಎತ್ತಿರುವ ಧ್ವನಿ ನ್ಯಾಯಸಮ್ಮತ. ನಾನು ಆ ಪಕ್ಷ ಈ ಪಕ್ಷ ಎಂದು ಮಾತಾನಾಡುತ್ತಿಲ್ಲ. ಎಲ್ಲರಿಗು ಒಂದೇ ನಿಯಮ ಅನ್ವಯ ಆಗಲಿ ಎಂದಷ್ಟೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಮೇಲ್ಮನೆ ರದ್ದತಿ ಮಾಡಿ ಎಂಬ ಚರ್ಚೆಯ ಬಗ್ಗೆ ಉತ್ತರಿಸಿ, ಅಂತಹ ಯಾವುದೇ ಚರ್ಚೆಗಳು ಇಲ್ಲ.
ಆಗಿರುವ ತಪ್ಪಿನ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳುತ್ತಾರೆ‌.ಈ ಬಗ್ಗೆ ಹೆಚ್ಚಿನ ಚರ್ಚೆಯೂ ಬೇಡ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಮಾತಿಗೆ ತೆರೆ ಎಳೆದರು.

ಗದಗಗಿಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಪರಿಸರ ಲೇಔಟ್ ನಲ್ಲಿ ನೂತನ ಬಿಜೆಪಿ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದು, ನಗರವು ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೇಕ್ಸ್, ಬ್ಯಾನರ್ ಅಳವಡಿಸಿ ತೆಂಗಿನಗರಿ ಕಟ್ಟಿ ಸಿಂಗಾರಗೊಳಿಸಿದ್ದಾರೆ. ಅಲ್ಲಲ್ಲಿ ಬಿಜೆಪಿ ಭಾವುಟ ರಾರಾಜಿಸುತ್ತಿವೆ. ನಗರದ ಜಿಲ್ಲಾಧಿಕಾರಿ ಭವನದ ಹತ್ತಿರವಿರುವ ಪರಿಸರ ಲೇಔಟ್ ನಲ್ಲಿ ವೇದಿಕೆ ಸಿದ್ಧಗೊಳಿಸಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ ಹೊಸ್ತಿಲ್ಲಲ್ಲಿ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಭೇಟಿ ನೀಡುತ್ತಿದ್ದು, ಚುನಾವಣಾ ಕಣದಲ್ಲಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬಲ ತಂದುಕೊಟ್ಟರೆ, ನಾಯಕರಿಗೆ ಹುರುಪು ನೀಡಲಿದೆ ಎನ್ನಲಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಗ್ರಾ.ಪಂ.ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಶಿಲಾನ್ಯಾಸ ನೆಪದಲ್ಲಿ ನಳೀನ್ ಕುಮಾರ್ ಅವರನ್ನು ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಗೋ ಪೂಜೆ ಮಾಡುವ ಮೂಲಕ ನೂತನ ಬಿಜೆಪಿ ಜಿಲ್ಲಾ ಕಚೇರಿಯ ಭೂಮಿಪೂಜೆ ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರಿದ್ದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹಲವು ಸಚಿವರು, ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ.

ಮತ ಮಾರಿಕೊಳ್ಳಬೇಡಿ; ಸೂಕ್ತ ನಾಯಕನನ್ನು ಆಯ್ದುಕೊಳ್ಳಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಸುಮಾರು ದಿನಗಳಿಂದ ಕಾಯುತ್ತಾ ಕುಳಿತಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಪಡಿಸುತ್ತ್ತಿದ್ದಂತೆ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಆಯೋಗವು ಎರಡು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಅದರಂತೆ ಡಿ.೨೨ ಹಾಗೂ ೨೭ ರಂದು ಮತದಾನ ನಡೆಯಲಿದ್ದು, ಡಿ.೩೦ ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಗ್ರಾ.ಪಂ.ಚುನಾವಣೆಗಳನ್ನು ಹಲವರು ಹಲವಾರು ರೀತಿ ಬಣ್ಣಿಸಿದ್ದಾರೆ. ಕೆಲವರು ಒಂದೇ ಕುಟುಂಬದಂತಿರುವ ಹಳ್ಳಿಯ ಜನರನ್ನು ಬೇರೆ ಬೇರೆಯಾಗಿಸಲು ಬರುವುದು. ಪ್ರತಿ ಗ್ರಾಮವು ತನ್ನ ಜನಪ್ರತಿನಿಧಿಗಳನ್ನು ತಾವೇ ಆಯ್ದುಕೊಂಡು ಗ್ರಾಮದ ಅಭಿವೃದ್ದಿಗೊಳಿಸಲಿಕ್ಕಾಗಿ ಜಾರಿಗೊಳಿಸಿರುವ ಯೋಜನೆಯೇ ಗ್ರಾಮ ಸ್ವರಾಜ್‌ಗೆ ಸಂಬಂದಿಸಿದ್ದಾಗಿದೆ ಎಂದು ಬಣ್ಣಿಸುತ್ತಾರೆ.ಅದೇನೇ ಇರಲಿ ಸಹಜವಾಗಿ ಅಭಿಪ್ರಾಯಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ, ಒಂದಂತೂ ಸತ್ಯ ಪ್ರತಿ ಗ್ರಾಮದಿಂದ ಒಬ್ಬ ನಾಯಕ ಹುಟ್ಟುತ್ತಾನೆ. ಆಯ್ಕೆಯಾದ ನಾಯಕ ಗ್ರಾಮಸ್ಥರ ನಂಬಿಕೆಗೆ ಅರ್ಹರೇ? ಗ್ರಾಮದ ಅಭಿವೃದ್ದಿ ಬಯಸುವರೆ? ಜನರ ಸಂಕಷ್ಟಗಳಿಗೆ ಸ್ಪಂದಿಸುವರೆ? ಕ್ಷೇತ್ರ ಜನರಿಗೆ ಸಕಾಲದಲ್ಲಿ ದೊರೆಯುವವರೆ? ಎಂಬ ಅಂಶಗಳ ಕುರಿತು ಯೋಚಿಸಿ ನಾಯಕನನ್ನು ನಿರ್ಧರಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಈಗಾಗಲೇ ಬದುಕು ಸಾಕಷ್ಟು ಅನುಭವ ನೀಡಿದೆ. ಪ್ರಕೃತಿ ವಿಕೋಪಗಳಿಂದಾದ ಹಾನಿಯಲ್ಲಿ ನಾಯಕರು ನಿಮಗಾಸರೆ ಆಗಿದ್ದಾರೆಯೇ? ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ, ದಿನ ಕಳೆದಂತೆ ದುಸ್ತರವಾಗುತ್ತಿರುವ ಜನರ ಬದುಕು ಪ್ರತಿಯೊಂದನ್ನೂ ಗಮನದಲ್ಲಿರಿಸಿಕೊಂಡು ಸೂಕ್ತವಾದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಹಣ, ಹೆಂಡ, ಸೀರೆ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತ ಮಾರಿಕೊಳ್ಳಬೇಡಿ, ಆಸೆ, ಆಮಿಷಗಳಿಗೆ ಬಲಿಯಾದರೆ ಸಮಸ್ಯೆಗಳು ಉದ್ಭವಿಸಿದಾಗ ನಾಯಕರನ್ನು ಪ್ರಶ್ನಿಸುವ ಹಕ್ಕ ಕಳೆದುಕೊಂಡಂತಾಗುತ್ತದೆ. ಗ್ರಾಮಸ್ಥರ ಅಭಿಪ್ರಾಯ, ಸಲಹೆ ಸ್ವೀಕರಿಸುವ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಿರಿಯರು ಯುವಕರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಪಣತೊಡಬೇಕು. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ, ಹಳ್ಳಿಯ ಜನರ ಬದುಕು ಹಸನಾಗಲಿ, ಪ್ರತಿಯೊಂದು ಹಳ್ಳಿ ಆದರ್ಶವಾಗಲಿ.

ಮುಂಬರುವ ಐದು ವರ್ಷದ ನಿಮ್ಮ ಯೋಜನೆಗಳೇನು.? ಹಿಂದಿನ ಬಾರಿಯ ನಿಮ್ಮ ಸಾಧನೆಗಳೇನು?

ಪ್ರವೀಣ ಸಂಗಳದ ಶೆಟ್ಟರ್

ಪರಿಹಾರ ಕೊಡದಿದ್ರೆ ಚುನಾವಣೆ ಬಹಿಷ್ಕರಿಸ್ತೀವಿ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣೆಯ ಹೊಸ್ತಿಲ್ಲಲ್ಲಿ ಜಿಲ್ಲೆಯಲ್ಲಿ ಚುನಾವಣೆಯ ಬಹಿಷ್ಕಾರದ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಮೊನ್ನೆಯಷ್ಟೇ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ಚುನಾವಣೆ ಬಹಿಷ್ಕರಿಸಿರುವ ಬೆನ್ನಲ್ಲೇ ಕೊಣ್ಣೂರು ಗ್ರಾಮದಲ್ಲೂ ಚುನಾವಣಾ ಬಹಿಷ್ಕಾರದ ಧ್ವನಿ ಮೊಳಗುತ್ತಿದೆ.

ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಪ್ರವಾಹಪೀಡಿತ ಸಂತ್ರಸ್ತರು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಆಗಷ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದಿದ್ದರ ಪರಿಣಾಮವಾಗಿ ಕೊಣ್ಣೂರ ಗ್ರಾಮದೊಳಗೆ ನೀರು ನುಗ್ಗಿ ಸುಮಾರು 200 ಜನರು ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಆ ಪೈಕಿ ಸುಮಾರು 170 ಜನರನ್ನು ನೆರೆ ಸಂತ್ರಸ್ತರೆಂದು ಗುರುತಿಸಿ ಅಧಿಕಾರಿಗಳು ಎ,ಬಿ,ಸಿ ಹಾಗೂ ಡಿ ಗ್ರೇಡ್ ನಲ್ಲಿ ಸರ್ವೆ ಮಾಡಿ ಪರಿಹಾರ ಘೋಷಿಸಿದ್ದರು. ಅಲ್ಲದೇ, ಸಂತ್ರಸ್ತರಿಗೆ ಮನೆ ಬಾಡಿಗೆಗೆ ಅಂತಾ ಐದು ತಿಂಗಳ ಅವಧಿಯವರೆಗೆ ಸುಮಾರು 50 ಸಾವಿರ ರೂ. ಕೊಡುವ ಭರವಸೆ ನೀಡಿದ್ದರು. ಆದರೆ, ಇದರೊಳಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ.

ಸಂಪೂರ್ಣ ಮನೆ ಬೀಳದ ಕೆಲವರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ನೀಡಿದ್ದಾರೆ. ಪ್ರಭಾವಿಗಳಿಗಷ್ಟೇ ಮನೆ ಬಾಡಿಗೆ ಹಣ ಹಾಕಿದ್ದಾರೆ. ಇನ್ನುಳಿದವರಿಗೆ ಬಾಡಿಗೆ ಹಣ ಮತ್ತು ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು
ತಾರತಮ್ಯ ಮಾಡದೇ ಸಂತ್ರಸ್ತರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ಮತ್ತು ಮನೆ ಬಾಡಿಗೆಗೆ ಹಣ ನೀಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕೊಣ್ಣೂರ ಗ್ರಾಮದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಯಲ್ಲಪ್ಪ ಕುಂಬಾರ, ಸಿದ್ದಪ್ಪ ಕುಂಬಾರ, ಹನಮಂತ ಕುಂಬಾರ, ಗುರುಲಿಂಗಪ್ಪ ಕುಂಬಾರ, ಮಂಜುನಾಥ್ ಕುಂಬಾರ, ಮಲ್ಲಪ್ಪ ಕುಂಬಾರ, ವಿಜಯ್ ಕುಂಬಾರ, ದೊಡ್ಡಕ್ಕ ರಾಜನಾಳ, ಭೀಮಪ್ಪ ರಾಜನಾಳ, ಸುವರ್ಣ ದಿವಟರ, ಕೃಷ್ಣೇಗೌಡ ಮುಳಗುಂದ, ರಿಯಾಜ್ ಮನಿಯಾರ ಸೇರಿದಂತೆ ಹಲವಾರು ಸಂತ್ರಸ್ತರು ಇದ್ದರು.

ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ; ಕಳ್ಳರ ಕಾಟಕ್ಕೆ ರೈತರ ಕಣ್ಣೀರು

0

ವಿಜಯಸಾಕ್ಷಿ ಸುದ್ದಿ, ಕೋಲಾರ

ಜಿಲ್ಲೆಯಲ್ಲಿ ಆಲೂಗಡ್ಡೆ ಕಳ್ಳರು ಹೆಚ್ಚುತ್ತಿದ್ದಾರೆ. ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಆಲೂಗಡ್ಡೆ ಮೂಟೆಗಳನ್ನು ಕದ್ದೊಯ್ಯುತ್ತಿದ್ದು,
ಆಲೂಗಡ್ಡೆ ಬೆಳೆರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಉಕ್ಕುಂದ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ ತೋಟದಲ್ಲಿದ್ದ 20 ಮೂಟೆ ಹಾಗೂ ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ 15 ಮೂಟೆ ಆಲೂಗಡ್ಡೆ ಕಳ್ಳತನ ಮಾಡಿದ್ದಾರೆ.

ಕಳೆದ ವಾರದ ಹಿಂದಷ್ಟೇ ಬಂಗಾರಪೇಟೆ ತಾಲ್ಲೂಕಿನ ಗಾಜಗ ಗ್ರಾಮದ ಮಂಜುನಾಥ್ ರೆಡ್ಡಿ ಎಂಬ ರೈತನಿಗೆ ಸೇರಿದ ಆಲೂಗಡ್ಡೆ ಬೆಳೆ ಕದ್ದೊಯ್ದಿದ್ದರು.

ಫಸಲು ಬಂದು ಇನ್ನೇನೂ ಬೆಳೆ ಕೀಳುವ ಸಮಯದಲ್ಲಿಯೇ ಖದೀಮರು ಇಂತಹ ದುರ್ಷ್ಕತ್ಯಗೈಯುತ್ತಿದ್ದು,
ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಆಘಾತವುಂಟಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಕಣ್ಣೀರಿಡುತ್ತಿದ್ದಾರೆ.

ಬೆಳೆಗಳಿಗೆ ರಕ್ಷಣೆ ನೀಡುವಂತೆ ರೈತರು ಪೋಲಿಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಹಿಂದ ವರ್ಗಗಳನ್ನೇ ಮರೆತ ಸಿದ್ದರಾಮಯ್ಯಗೆ ತಕ್ಕ ಉತ್ತರ; ನಳೀನ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿದ್ದರಾಮಯ್ಯ ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತಿದ್ದು, ಅಧಿಕಾರಕ್ಕಾಗಷ್ಟೇ ಅಹಿಂದ ಬೇಕಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು,
ಅಹಿಂದ ಚಳುವಳಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು. ಎಲ್ಲ ವರ್ಗದವರು ಬೆಂಬಲಿಸಿದರು.
ಸಿಎಂ ಬಳಿಕ ಸಿದ್ದರಾಮಯ್ಯ ಅಹಿಂದ ವರ್ಗವನ್ನೇ ಮರೆತರು ಎಂದು ವ್ಯಂಗ್ಯವಾಡಿದರು.

ಅಧಿಕಾರದಲ್ಲಿರುವಾಗ ನಮ್ಮ ಪರ ನಿಂತ ಸಮುದಾಯಗಳ ಪರ ಕೆಲಸ ಮಾಡಬೇಕು.
ಆದರೆ, ಸಿದ್ದರಾಮಯ್ಯ ಅಹಿಂದ ಸಮುದಾಯಗಳನ್ನ ಮರೆತ ಕಾರಣಕ್ಕೆ ತಕ್ಕ ಉತ್ತರವೂ ಸಿಕ್ಕಿತು ಎಂದರು.

ಬಿಜೆಪಿ ಪ್ರತಿ ವರ್ಗಗಳಿಗೂ ಮೋರ್ಚಾಗಳನ್ನ ನೇಮಕಗೊಳಿಸಿ ತಳಮಟ್ಟದಲ್ಲಿ ಪಕ್ಷ ಸಂಘಟಿಸುತ್ತಿದೆ.
ಕಾರ್ಯಕರ್ತರ ಮೂಲಕ ಬಿಜೆಪಿ ಆಯಾ ಸಮುದಾಯಗಳ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಕೇವಲ ಮೇಲ್ವರ್ಗದ ಪಕ್ಷ ಎಂಬಂತಿತ್ತು. ಆದರೆ, ಇವತ್ತು ಎಲ್ಲ ವರ್ಗದವರು ಪಕ್ಷದ ಮುಂಚೂಣಿಯ ಕುರ್ಚಿಯಲ್ಲಿದ್ದಾರೆ. ಬಿಜೆಪಿ ಎಲ್ಲ ವರ್ಗದ ಸ್ಪರ್ಶ ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೆಮ್ಮೆ ಪಟ್ಟರು.

ಒಂದು ಕಾಲದಲ್ಲಿ ಒಂದು ಲೈಟು ಕಂಬ ನಿಲ್ಲಿಸಿದರು. ಕಾಂಗ್ರೆಸ್ ಗೆಲ್ಲುತ್ತಿತ್ತು, ಆದರೆ, ಇಂದು ಸಮುದಾಯ, ಸಮಾಜ ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರು ಬಿಜೆಪಿ ಪಕ್ಷದಲ್ಲಿದ್ದಾರೆ. ಇದು ಬಿಜೆಪಿಯ ಶಕ್ತಿ. ಹಾಗಾಗಿ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಗಲಾಟೆ ಕಾಂಗ್ರೆಸ್ ಪಕ್ಷದ ಪ್ರೀ ಪ್ಲ್ಯಾನ್; ಸಚಿವ ಸೋಮಶೇಖರ್ ಆರೋಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕಾಗಿ ಮಂಗಳವಾರ ಮೇಲ್ಮನೆಯಲ್ಲಿ ಕೋಲಾಹಲ ಉಂಟಾಗಿತ್ತು. ಗೊಂದಲ -ಗದ್ದಲಕ್ಕೆ ಕಾರಣವಾಗಿತ್ತು. ಅಲ್ಲದೇ, ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ಜಂಗಿ ಕುಸ್ತಿ ನಡೆಯುವ ಹಂತಕ್ಕೆ ತಲುಪಿತ್ತು.

ಪರಿಷತ್ ಗಲಾಟೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಮುಂಚೆಯೇ ಸಭೆಯಲ್ಲಿ ನಿರ್ಧಾರವಾಗಿತ್ತು.
ಇದು ಕಾಂಗ್ರೆಸ್ ಪಕ್ಷದ ಪ್ರೀ ಪ್ಲ್ಯಾನ್ ಆಗಿತ್ತು ಎಂದು
ಸಹಕಾರ ಸಚಿವ ಎಸ್.ಟಿ‌.ಸೋಮಶೇಖರ್ ಆರೋಪಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಲ್ ಪಿ ಸಭೆಯಲ್ಲಿ‌ ಗಲಾಟೆ, ರೌಡಿಸಂ, ದಾಂಧಲೆ ಮಾಡಿ ಅಂತಾ ಹೇಳಿದ್ದಾರೆ. ಅವರು ಹೇಳಿಕೊಟ್ಟ ಹಾಗೇ ಮೇಲ್ಮನೆಯಲ್ಲಿ‌ ನಡೆದಿದೆ ಎಂದು ದೂರಿದರು.

ಗೂಂಡಾಗಿರಿ ಮಾಡಿ ಗೌರವಾನ್ವಿತ ಉಪ ಸಭಾಪತಿ ಅವರನ್ನು ಬಲಾತ್ಕಾರವಾಗಿ ಎಳೆದಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನ ತೋರಿಸುತ್ತದೆ.
ಮೇಲ್ಮನೇ ಸದಸ್ಯರನ್ನ ಬುದ್ದಿವಂತ ಸದಸ್ಯರು ಅಂತ ಕರೆಯುತ್ತಾರೆ. ಆದರೆ, ಅವರು ನಡೆದುಕೊಂಡ ರೀತಿ ಸರಿಯಲ್ಲ. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಅವರೆಲ್ಲರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ, ಮತ್ತೆ ಅದೇ ಸಂಸ್ಕೃತಿ ಮುಂದುವರೆಸುತ್ತಾರೆ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಊರೆಲ್ಲಾ ನ್ಯಾಯ ಮಾತನಾಡುತ್ತಾರೆ. ಇವರೇ ಗಲಾಟೆ ಮಾಡಿದವರನ್ನ ಪಕ್ಷದಿಂದ ಅಮಾನತು ಮಾಡಲಿ. ಸಭಾಪತಿ ಪೀಠಕ್ಕೆ ಅದರದ್ದೇ ಆದ ಗೌರವವಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಿರುದ್ಯೋಗ, ಹಸಿವು, ಬಡತನ ಮುಕ್ತ ದೇಶವಾಗಿಸಲು ಪ್ರಾಮಾಣಿಕ ಶ್ರಮ ಮುಖ್ಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಬದುಕಿನ ಪಯಣದಲ್ಲಿ ಮುಂದ್ಮೂಂದೆ ಹೋದಂತೆ ಕೆಲವೊಂದಿಷ್ಟು ಅವಮಾನ, ಹಿಂಜರಿಕೆ, ತಾಪತ್ರಯ.., ಯಾಕೀ ಹೋರಾಟ? ಪ್ರತಿಯೊಬ್ಬ ಮನುಷ್ಯನು ಅನುಭವಿಸಲೇಬೇಕಾದ ಪಾಡು.. ಕೇವಲ ತುತ್ತು ಅನ್ನಕ್ಕಾಗಿಯೇ ಈ ಪರಿಪಾಟಲು? ಇಲ್ಲಾ ತುತ್ತು ಅನ್ನಕ್ಕಾಗಲಿ ನಿರ್ಧಿಷ್ಟ ಗುರಿ ಸಾಧನೆಗಾಗಲಿ ವ್ಯಕ್ತಿಯೊಬ್ಬ ಕಷ್ಟ ನೋವುಗಳನ್ನು ಅನುಭವಿಸಲು ಸಿದ್ಧನಿರಬೇಕು. ಅಂತೆಯೇ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಮರಣದವರೆಗೂ ಹೋರಾಟ ನಡಿಸುತ್ತಾನೆ, ಮತ್ತೆ ನಡಿಸಲೇಬೇಕು.

ಇತ್ತೀಚಿಗಷ್ಟೇ ಆಚರಿಸಿದ ಮಾನವಹಕ್ಕು ದಿನಾಚರಣೆಯೂ ಇದನ್ನೇ ಪ್ರತಿಬಿಂಬಿಸುತ್ತದೆ. ವ್ಯಕ್ತಿಯು ಸಂವಿಧಾನದನ್ವಯ ನಿರ್ಧಿಷ್ಟ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದು, ಅವುಗಳನ್ನು ಪಡೆಯಲು ನಿಭಾಯಿಸಲು ಹೋರಾಟದ ಬದುಕು ನಡೆಸುತ್ತಾನೆ.

ಆದರೆ, ಇಂದಿನ ಜನ ಕೇವಲ ಹಕ್ಕಿನ ಬಗ್ಗೆ ಮಾತನಾಡುವವರೇ ಹೊರತು ಕರ್ತವ್ಯದ ಬಗ್ಗೆ ಒಂದಿಷ್ಟು ಯೋಚಿಸಲಾರರು. ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳಲು ಹಕ್ಕಿನ ಕುರಿತಷ್ಟೇ ಗಮನಹರಿಸುವವರೂ ನಮ್ಮ ನಡುವೆಯೇ ಇದ್ದಾರೆ. ಇವುಗಳನ್ನು ಬದಿಗಿಟ್ಟು ಪುನಃ ನೋಡಿದಾಗ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭೂಮಿಯಲ್ಲಿ ಎಂದಿಗೂ ಬದಲಾಗದಿರದ ಬಡತನ, ಹಸಿವು, ನಿರುದ್ಯೋಗ ಅನಾದಿಕಾಲದಿಂದಲೂ ಕೇಳುತ್ತಲಿರುವ ಅದೇ ಮುಂದುವರೆಯುತ್ತಿರುವ ಭಾರತ; ಇಂದಿಗೂ ಯಾವ ಹಕ್ಕು, ಅನುಕೂಲಗಳು ಯಾರಿಗೆ ಉಪಯೋಗವಾಗಬೇಕೋ ಅವರಿಗಾಗದಿರುವುದು ಅಸಮಾಧನೀಯ.

ಇಡೀ ನಾಡು ಸ್ವಚ್ಛಗೊಳಿಸಬೇಕಾಗಿರುವವರು ಕೇವಲ ತಮ್ಮ ಮನೆ ಮಾತ್ರ ಸ್ವಚ್ಛಗೊಳಿಸಿಕೊಳ್ಳುತ್ತಿರುವುದು ವಿಪರ್ಯಾಸ. ಪ್ರತಿಯೊಬ್ಬ ಜನಪ್ರತಿನಿಧಿ ಯಾವಾಗ ತನ್ನ ಸ್ವಾರ್ಥದ ಪರಿದೆಯಿಂದ ಹೊರಬಂದು ಜನರ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವನೋ ಆಗ ದೇಶ ಮುಂದುವರೆದ ಭಾರತವಾಗಲು ಸಾಧ್ಯ.
ಬೇರೆಯವರಿಗೆ ಸಾಮಾನ್ಯವೆನ್ನಿಸುವ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತಾನು ಶ್ರೇಷ್ಟನೇ. ಯೋಗ್ಯತೆಗೆ ತಕ್ಕಂತೆ ಉದ್ಯೋಗ ಮತ್ತು ಉದ್ಯೋಗಕ್ಕೆ ತಕ್ಕಂತೆ ವೇತನ ನೀಡಿದ್ದಲ್ಲಿ ನಿರುದ್ಯೋಗ, ಹಸಿವು ಮತ್ತು ಬಡತನವೆಂಬ ಕತ್ತಲು ಮಾಯವಾಗಿ ಬೆಳಕು ಮೂಡುವುದರಲ್ಲಿ ಸಂಶಯವಿಲ್ಲ.

ತೇಜಶ್ವಿನಿ ಅ.ಹೊಂಬಳ, ಹುಬ್ಬಳ್ಳಿ
error: Content is protected !!