Home Blog Page 3213

ಪೊಲೀಸರ ಭರ್ಜರಿ ಕಾರ್ಯಾಚರಣೆ; ನಾಲ್ವರು ದರೋಡೆಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಆರು ತಿಂಗಳ ಹಿಂದೆ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನಾಲ್ವರು ಖದೀಮರನ್ನು ಕೊನೆಗೂ ಬಂಧಿಸುವಲ್ಲಿ ನಿಪ್ಪಾಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ ಕಾಂಬಳೆ, ಅವಧೂತ ಕೋಳಿ, ಅಕ್ಷಯ ಕೊಂಡಿಗೇರಿ ಹಾಗೂ ಪಂಕಜ ಕೋಳಿ ಬಂಧಿತರು.

ಬಂಧಿತರಿಂದ 5ಲಕ್ಷ 40ಸಾವಿರ ಮೌಲ್ಯದ ಚಿನ್ನಾಭರಣ, 2.5ಕ.ಜಿ ಬೆಳ್ಳಿಯ ಆಭರಣಗಳು, ಎರಡು ಬೈಕ್ ಹಾಗೂ ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಏಪ್ರಿಲ್‌ 8 ರಂದು ಚಿನ್ನದ ವ್ಯಾಪಾರಿ ದೊಂಡಿರಾಮ್ ಎಂಬುವರನ್ನು ಈ ನಾಲ್ವರು ಖದೀಮರು ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮದಲ್ಲಿ ದರೋಡೆ ಮಾಡಿದ್ದರು.

ಡಿವೈಎಸ್ಪಿ ಬಸವರಾಜ್ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ನಾಲ್ವರು ಖದೀಮರನ್ನು ಬಂಧಿಸಲಾಗಿದೆ. ಈ ಕಾರ್ಯಕ್ಕೆ ಎಸ್ಪಿ ಸಂಜೀವ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶ್ರೀರಾಮುಲು ಮಾತು ಕೊಟ್ರೆ, ಶ್ರೀ ರಾಮ ಮಾತು ಕೊಟ್ಟಂತೆ!

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಘೋಷಣೆ ಹಿನ್ನೆಲೆ

ವಿಜಯಸಾಕ್ಷಿ ಸುದ್ದಿ, ಗದಗ

ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಎಸ್ ಟಿ ಮೋರ್ಚಾದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ ಸ್ ಯಡಿಯೂರಪ್ಪ, ಸಚಿವ ಸಿ ಸಿ ಪಾಟೀಲ್, ಬಿ ಶ್ರೀರಾಮುಲು, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ವಿ ಸಂಕನೂರ ಅವರ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಎಸ್‌ಸಿಗೆ ಶೇ.15 ರಿಂದ 17 ಹಾಗೂ ಎಸ್‌ಟಿಗೆ 3 ರಿಂದ 7 ಮೀಸಲಾತಿ ಹೆಚ್ಚಳಕ್ಕೆ ಕುರಿತಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ಅಂಗೀಕಾರಗೊಳಿಸಿದ ಕ್ರಮವನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಖುಷಿ ಪಟ್ಟರು.

ಇದೇ ವೇಳೆ ಎಸ್ಟಿ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಶಾಂತ್ ನಾಯ್ಕರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಶ್ರೀರಾಮುಲು ಅವರು ಕೊಟ್ಟ ಮಾತಿನಂತೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಅದರಲ್ಲಿ ಎಸ್ಸಿ, ಎಸ್ಟಿ ಸಮಯದಾಯಕ್ಕೆ ಸಚಿವ ಶ್ರೀರಾಮುಲು ಕೊಟ್ಟ ಮಾತಿನಂತೆ ಮೀಸಲಾತಿ ಕೊಡಿಸಿದ್ದಾರೆ. ಶ್ರೀರಾಮುಲು ಮಾತು ಕೊಟ್ರೆ ಅದು ಶ್ರೀರಾಮ ಮಾತು ಕೊಟ್ಟಂತೆ ಎಂದರು.

ಮೀಸಲಾತಿಯಿಂದ SC/ST ಸಮುದಾಯಕ್ಕೆ ಒಳ್ಳೆಯದಾಗಲಿದೆ. ಈ ಎರಡು ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಹಿಂದುಳಿದ ಸಮಾಜದವರಿಗೆ ಶೈಕ್ಷಣಿಕ, ಆರ್ಥಿಕವಾಗಿ ಅನೂಕೂಲವಾಗಲಿದೆ ಎಂದರು.

ಬಳಿಕ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಈಶಪ್ಪ ರಂಗಪ್ಪನವರ ಮಾತನಾಡಿ, ಹಲವಾರು ವರ್ಷಗಳ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಅದರಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕಳೆದ 240 ದಿನಗಳಿಂದ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸರ್ಕಾರ ಕೊನೆಗೂ ಮಣಿದು, ಸರ್ಕಾರ ಈ ಎರಡು ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ಸಂತಸಪಟ್ಟರು.

ವಿಜಯೋತ್ಸವದಲ್ಲಿ ವೆಂಕಟೇಶ ಹಬೀಬ, ಗೊಪಾಲ ಗಡ್ಡದವರ, ಸಿದ್ರಾಮೇಶ ಹಿರೇಮಠ, ಅನಿಲ ಅಬ್ಬಿಗೇರಿ, ನವೀನ ಕುರ್ತಕೋಟಿ, ವಿನಾಯಕ ಮಾನ್ವಿ, ಮಾಧುಸಾ ಮೇರವಾಡೆ, ವಿಜಯಲಕ್ಷ್ಮಿ ಮಾನ್ವಿ, ನಿರ್ಮಲಾ ಕೊಳ್ಳಿ, ಜಯಶ್ರೀ ಅಣ್ಣಿಗೇರಿ, ಕಮಲಾ ಶೆಟ್ಟರ, ಶಿವಲೀಲಾ ಉಮಚಗಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಂಗ್ರೆಸ್ ಮುಖಂಡ ಸಂಗಮೇಶ ಕೊಳ್ಳಿ ಅವರ ಕಛೇರಿ ಆವರಣದಲ್ಲಿ ಮತ್ತೆ ನಾಗರಹಾವು ಪ್ರತ್ಯಕ್ಷ

0

ಮತ್ತೆ ನಾಗರಹಾವನ್ನು ಅಟಕಾಯಿಸಿದ ಶ್ವಾನಪಡೆ!

ವಿಜಯಸಾಕ್ಷಿ ಸುದ್ದಿ, ನರಗುಂದ


ಡಾ. ಸಂಗಮೇಶ ಕೊಳ್ಳಿಯವರ ಕಾಂಗ್ರೆಸ್ ಕಛೇರಿಯ ಆವರಣದಲ್ಲಿ ಮತ್ತೊಮ್ಮೆ ಭಾರೀ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಕಾಂಪೌಂಡಿನಲ್ಲಿದ್ದ ನಾಯಿಗಳ ಗುಂಪು ನಾಗರ ಹಾವಿನ ಬೆನ್ನಟ್ಟಿತ್ತು.

ಎಷ್ಟೇ ಕೂಗಿ ಪಕ್ಕಕ್ಕೆ ಕರೆದರೂ, ಆವೇಶದಿಂದ ಹಾವಿನ ಬೆನ್ನು ಬಿದ್ದಿದ್ದವು. ಪಾಪ, ಆ ನಾಗರಹಾವಂತೂ ಕಂಗಾಲಾಗಿ, ತಪ್ಪಿಸಿಕೊಳ್ಳಲು ದಿಕ್ಕು ತೋಚದೇ, ಇಡೀ ಆವರಣವನ್ನು ಸುತ್ತುಹಾಕುತ್ತಲೇ ಇತ್ತು.

ಕೆಲಕಾಲ ಇವೆಲ್ಲ ವಿದ್ಯಮಾನವನ್ನು ಗಮನಿಸಿದ ಸ್ಥಳೀಯರು, ಹಾವಿಗೆ ನಾಯಿಗಳ ಗುಂಪಿನಿಂದ ಆಗಬಹುದಾದ ಅಪಾಯವನ್ನು ಮನಗಂಡು, ಉರಗ ತಜ್ಞ ಸ್ನೇಕ್ ಬುಡ್ಡಾರನ್ನು ಸ್ಥಳಕ್ಕೆ ಕರೆಯಿಸಿದರು.

ಸ್ನೇಕ್ ಬುಡ್ಡಾ ಹಾವನ್ನು ಸುರಕ್ಷಿತವಾಗಿ ಹಿಡಿದು, ಕಾಡಿನಲ್ಲಿ ಬಿಟ್ಟುಬಂದಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಮಧ್ಯರಾತ್ರಿಯ ಸಮಯದಲ್ಲಿ ಇದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವನ್ನು ನಾಯಿಗಳು ರೋಷದಿಂದ ಸುತ್ತುವರೆದಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು.

ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್ ನಲ್ಲಿ‌ ಬಗೆಹರಿಸುವ ಜಾಹೀರಾತು ನೋಡಿ ಹಣ ಕಳೆದುಕೊಂಡ ಮಹಿಳೆ; ವಂಚಕನ ಬಂಧನ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿದ್ದ ಜಾಹೀರಾತನ್ನು ನೋಡಿದ ಮಹಿಳೆಯೊಬ್ಬಳು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ.

ಕೌಟುಂಬಿಕ ಸಮಸ್ಯೆ ಇದ್ದಂತಹ ಮಹಿಳೆ ಜಾಹೀರಾತಿನಲ್ಲಿದ್ದ ಫೋನ್ ನಂಬರ್ ಗಳಿಗೆ ಕರೆ ಮಾಡಿ ಸಮಸ್ಯೆ ಸರಿ ಮಾಡಿಕೊಡಿ ಎಂದು ಕೇಳಿಕೊಂಡಿದ್ದಳು.

ಆಗ ವಂಚಕ ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ ರೂ. 7,000.00 ಹಣ ಖರ್ಚಾಗುತ್ತೆ ಎಂದು ಹೇಳಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಪುನಃ ಬೇರೆ ಬೇರೆ ಪೂಜೆ ಮಾಡಬೇಕು ಸಮಸ್ಯೆ ಸರಿ ಆಗುತ್ತೆ ಎಂದು ಹಂತ ಹಂತವಾಗಿ ಒಟ್ಟು ರೂ. 1,16,001.00 ಹಣ ವರ್ಗಾವಣೆ ಮಾಡಿಸಿಕೊಂಡಿದ್ದ.

ಇಷ್ಟಾದರೂ ವಂಚಕ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಹಣ ಕಳುಹಿಸಿ ಎಂದು ಹೇಳಿದಾಗ ಮಹಿಳೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಪ್ರಕರಣ ದಾಖಲು ಮಾಡಿಕೊಂಡ ಸಿಇಎನ್ ಠಾಣೆಯ ಪೊಲೀಸರು, ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದೆಂದು ನಂಬಿಸಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು, ಆತನಿಂದ ರೂ. 87,500.00 ನಗದು, ಒಂದು ಮೊಬೈಲ್ ಫೋನ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.

ಸದರಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದಲ್ಲಿ ಪಿಐ ಮುತ್ತರಾಜ್, ಪಿಎಸ್ಐ ನಾಸೀರ್ ಹುಸೇನ್ ಮತ್ತು ರಘುನಾಥ್ ಎಸ್. ವಿ., ಎಎಸ್ಐ ಎಂ. ಸಿ. ಪ್ರಕಾಶ್ ಮತ್ತು ಸಿಬ್ಬಂದಿಗಳಾದ ವಿನಾಯಕ ಹಾಗೂ ಅನ್ವರ್ ಪಾಷಾ ಇದ್ದರು.

ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೇ ಎಚ್ಚರ ವಹಿಸಲು ಪೊಲೀಸರು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ;  ಚಾಲಕ ಸೇರಿ ಮೂವರಿಗೆ ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ತಾಲೂಕಿನ ನೆಲ್ಲೂರ ಪ್ಯಾಟಿ ಗ್ರಾಮದ ಹೊರವಲಯದ  ಬಳಿ ಶನಿವಾರ ಬೆಳಗ್ಗೆ ಲಾರಿಯೊಂದು  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಚಾಲಕ ಸೇರಿ ಮೂವರು ಗಾಯಗೊಂಡ ಘಟನೆ ಜರುಗಿದೆ.

ರೋಣ ಪಟ್ಟಣದಿಂದ ನೆಲ್ಲೂರ ಪ್ಯಾಟಿ ಗ್ರಾಮಕ್ಕೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ನೆಲ್ಲೂರ್ ಪ್ಯಾಟಿ ಗ್ರಾಮದ ಸುರೇಶ್ ಎಂಬ ಬಾಲಕನಿಗೆ ತಲೆಗೆ ಹೊಡೆತ ಬಿದ್ದಿದೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಯಗೊಂಡವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಗಜೇಂದ್ರಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ; ಮಧ್ಯರಾತ್ರಿ 1ಗಂಟೆಯವರೆಗೂ ತಲಾಠಿ ಕೂಡಿ ಹಾಕಿದ ಗ್ರಾಮಸ್ಥರು

0

ವಿಜಯಸಾಕ್ಷಿ ಸುದ್ದಿ, ಗದಗ

ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತಾವಾದ ಮಧ್ಯಂತರ ಪರಿಹಾರ ನೀಡಲು ಮುಂದಾಗಿದೆ. ಆದ್ರೆ ಕೆಲವು ಸಿಬ್ಬಂದಿಗಳು ಮಾಡುವ ಎಡವಟ್ಟಿನಿಂದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ದೇವರ ವರ ಕೊಟ್ರು ಪೂಜಾರಿ ವರ ಕೊಡಲ್ಲ ಅನ್ನೋ ಗಾದೆ ಮಾತಿನಂತೆ ಇಂಥಹದ್ದೊಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೆಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನು ಕೂಡಿ ಹಾಕಿದ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.

ಸುಮಾರು ಏಳು ಗಂಟೆಗಳ ಕಾಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನ ಕೂಡಿ ಹಾಕಿದ್ದರು. ಗ್ರಾಮಲೆಕ್ಕಾಧಿಕಾರಿ ಬೇಕಾದವರಿಗೆ ಮಾತ್ರ ಪರಿಹಾರದ ಹಣ ಜಮೆ ಮಾಡಿಸಿದ್ದಾನೆಂದು ಆರೋಪಿಸಿರುವ ರೈತರು ತಲಾಟಿಯನ್ನ ತರಾಟೆಗೆ ತೆಗೆದುಕೊಂಡು ಕೂಡಿಹಾಕಿದ್ದರು.

ಲೆಕ್ಕಾಧಿಕಾರಿ ವೀರನಗೌಡ ದಾನಪ್ಪಗೌಡರ ಎಂಬ ಗ್ರಾಮ ಲೆಕ್ಕಾಧಿಕಾರಿ, ಹೊಂಬಳ ಗ್ರಾಮದಲ್ಲಿ 3180 ರೈತ ಖಾತೆಗಳಿವೆ. ಆ ಪೈಕಿ 800 ಖಾತೆಗಳಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದೆ. ಇನ್ನುಳಿದ ರೈತರಿಗೆ ಹಣ ಸಂದಾಯವಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ರೈತರು ತಲಾಟಿಯನ್ನು ಕೂಡಿಹಾಕಿದ್ದರು.

ರೈತರು ತಹಸೀಲ್ದಾರ್ ಅಥವಾ ಡಿಸಿ ಅವರು ಬರಬೇಕು ಅಂತಾ ಪಟ್ಟು ಹಿಡಿದಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ ಹರಿಹರ ಹಾಗೂ ತಹಸೀಲ್ದಾರ್ ಕಿಶನ್ ಕಲಾಲ, ಅರ್ಹ ರೈತರಿಗೆ ಪರಿಹಾರದ ಹಣ ತಲುಪಿಸುವ ಭರವಸೆ ನೀಡಿ ಗ್ರಾಮ ಲೆಕ್ಕಾಧಿಕಾರಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ; ಸಿಗದ ಚಿರತೆ, ಭಯದಲ್ಲಿ ಜನತೆ..!

ವಿಜಯಸಾಕ್ಷಿ ಸುದ್ದಿ, ರೋಣ

ಇಲ್ಲಿಗೆ ಸಮೀಪದ ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಜನರನ್ನು ಭಯಭೀತರನ್ನಾಗಿ ಮಾಡಿದ್ದು, ನಿರಂತರ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಇದರಿಂದ ಗ್ರಾಮಸ್ಥರು ಭಯದಲ್ಲಿ ದಿನಗಳನ್ನು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಜನರು ಆರೋಪಿಸಿದ್ದಾರೆ.

ನಾಗೇಂದ್ರಗಡ ಗುಡ್ಡವು ಹಲವಾರು ವಿಶಿಷ್ಟತೆಗಳಿಂದ  ಕೂಡಿದ್ದು, ವಿಶಾಲವಾದ ನೀರಿನ ಕೆರೆಯನ್ನು ಹೊಂದಿದೆ.
ವರ್ಷದ ಸುಮಾರು ೬-೮ ತಿಂಗಳು ಹಚ್ಚ ಹಸಿರಿನಿಂದ ಕೂಡಿಕೊಂಡಿರುವ ಗ್ರಾಮವಾಗಿದ್ದು, ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಅಲ್ಲದೆ ಗ್ರಾಮ ಸಂಪರ್ಕಿಸುವ ಮೊದಲು ಘಾಟ್‌ನಲ್ಲಿ ಸಾಗುವ ಅನುಭವ ಕೂಡ ಆಗುತ್ತದೆ. ಅನೇಕ ಕಡೆಗಳಲ್ಲಿ ಜಲಪಾತದಂತೆ ಬೆಟ್ಟದ ಮೇಲಿಂದ ಬೀಳುವ ನೀರು ಹಸಿರಿನಿಂದ ಕೂಡಿದ ದಟ್ಟ ಅರಣ್ಯ ಇದು ನಾಗೇಂದ್ರಗಡ ಗುಡ್ಡದ ವಿಶೇಷತೆಯಾದರೂ ಸಹ ಇಲ್ಲಿ ನಾಗರಿಕ ಸಮುದಾಯಕ್ಕೆ ಕಂಟಕ ತರುವ ವನ್ಯ ಜೀವಿಗಳಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಇದೇ ಮೊದಲಲ್ಲ

ನಾಗೇಂದ್ರಗಡ ಗುಡ್ಡದಲ್ಲಿ ಚಿರತೆ ಸದ್ದು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಹಲವಾರು ಬಾರಿ ಇಂಥ ಘಟನೆಗಳು ನಡೆದಿವೆ. ಚಿರತೆ ಅಲ್ಲದೆ ಕರಡಿ, ಜಿಂಕೆ, ಕಾಡು ಬೆಕ್ಕು, ಮುಳ್ಳ್ಳು ಹಂದಿ, ಕಾಳಿಂಗ ಸರ್ಪ, ಸೀಳುನಾಯಿ, ತೋಳ, ನರಿಗಳ ಜೊತೆಗೆ ವಿವಿಧ ರೀತಿಯ ಪ್ರಾಣಿಗಳು ಈ ಬೆಟ್ಟದಲ್ಲಿವೆ ಎಂದು ಜನರು ಹೇಳುತ್ತಾರೆ. 

ಚಿರತೆ ಹೊರತು ಪಡಿಸಿ ಇಲ್ಲಿಯವರೆಗೆ ಯಾವ ಪ್ರಾಣಿಗಳು ಸುತ್ತ ಮುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದ್ದಿಲ್ಲ. ಚಿರತೆ ಮಾತ್ರ ಆಗಾಗ ಕಾಣಿಸಿಕೊಂಡು ಕರು ಹಾಗೂ ಹಸುಗಳು ಜೀವ ತೆಗೆಯುತ್ತಿದೆ ಎಂದು ಜನರು ಹೇಳುತ್ತಾರೆ.

ನಿರಂತರ ಕಾರ್ಯಚರಣೆ

ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದ್ದರೂ ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ. ಅರಣ್ಯದಲ್ಲಿ ಸಿಸಿ ಕೆಮರಾ ಅಳವಡಿಸಿ ಮತ್ತೊಂದು ಬೋನನ್ನು ಇಡಲಾಗಿದೆ. ಒಟ್ಟಿನಲ್ಲಿ ಚಿರತೆ ಬೋನಿಗೆ ಬಿದ್ದು ಗ್ರಾಮಸ್ಥರ ಆತಂಕ ದೂರವಾಗಲಿ ಎಂಬುದು ಅರಣ್ಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.

ಚಿರತೆ ಬೋನಿನ ಸಮೀಪ ಬಂದು ಹೋಗಿದೆ. ಹೀಗಾಗಿ ಅರಣ್ಯದಲ್ಲಿ ಮತ್ತೊಂದು ಬೋನನ್ನು ಇಡಲಾಗಿದೆ. ಒಂದು ಶಿಫ್ಟ್ ಗೆ 13 ಜನ ಸಿಬ್ಬಂದಿಗಳಂತೆ ದಿನದ 24 ಗಂಟೆ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ದಾಳಿಗೆ ಆಕಳುಗಳು ಜೀವ ತೆತ್ತಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಮಂಜುನಾಥ್ ಮೇಗಲಮನಿ, ಅರಣ್ಯಾಧಿಕಾರಿ, ಗದಗ

ಕುಂಭದ್ರೋಣ ಮಳೆಗೆ ತೇಲಿಹೋದ ಕುರಿಗಳು, ಮನೆಗಳಿಗೆ ನುಗ್ಗಿದ ನೀರು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಕುಂಭದ್ರೋಣ ಮಳೆಗೆ ಗ್ರಾಮಸ್ಥರು ತೊಂದರೆ ಅನುಭವಿಸಿದರು. ಹಲವಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೊಳಗಾದರು.
೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಪ್ರಸಿದ್ಧ ದಿಂಗಾಲೇಶ್ವರ ಮಠದ ಆವರಣ ಹಾಗೂ
ಮಠದ ಹತ್ತಿರ ಇರುವ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಹೊಂಡವಾಗಿ ಮಾರ್ಪಟ್ಟಿದೆ.

ಗ್ರಾಮದ ಶೇಖಪ್ಪ ಕಡೆಮನಿ, ಮಹೇಶ ಗುಡಗೇರಿ, ಬಸವಣ್ಣೆಪ್ಪ ಗುಡಗೇರಿ, ಅಣ್ಣಪ್ಪ ಗುಡಗೇರಿ, ರಾಮಪ್ಪ ಗುಡಗೇರಿ, ಅರವಿಂದ ಕಡೆಮನಿ, ಶೇಖಪ್ಪ ನಿಟ್ಟೂರ, ಬಸಪ್ಪ ಕಡೆಮನಿ, ಎಲ್ಲವ್ವ ಕಡೆಮನಿ, ಸುಮಾ ಪಟ್ಟೇದ, ಮುದುಕಪ್ಪ ಪಟ್ಟೇದ, ಶ್ಯಾಮಣ್ಣ ಕಡೆಮನಿ, ಚಿತ್ತಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯ, ಬಟ್ಟೆ ಬರೆ ಹಾಗೂ ಪಾತ್ರೆಗಳು ತೇಲಿ ಹೋಗಿವೆ.


ಗ್ರಾಪಂ ಸದಸ್ಯ ಶ್ಯಾಮಪ್ಪ ಕಡೆಮನಿ ಅವರ ದನದ ಕೊಟ್ಟಿಗೆಗೆ ನೀರು ನುಗ್ಗಿ ಎತ್ತುಗಳ ಮೊಣಕಾಲಿನವರೆಗೆ ನೀರು ನಿಂತು ತೊಂದರೆ ಅನುಭವಿಸಿದವು.

ತೇಲಿ ಹೋದ ಕುರಿಗಳು

ಮಳೆಯ ರಭಸಕ್ಕೆ ರಸ್ತೆ, ಚರಂಡಿ ಮೇಲೆ ನೀರು ಹರಿದು ಕುರಿಗಾಹಿಗಳು ತಮ್ಮ ಕುರಿಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಹಾಂತೇಶ ಈರಗಾರ ಎನ್ನುವವರ ಸುಮಾರು ಕೆಲವು ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎನ್ನಲಾಗಿದೆ.

ಗ್ರಾಮದ ಚರಂಡಿಗಳು ಕಿರಿದಾಗಿರುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಊರೆಲ್ಲ ಹರಿದು ತೊಂದರೆಯಾಗುತ್ತಿದೆ. ಚರಂಡಿಗಳನ್ನು ಎತ್ತರಿಸಿ ಅಗಲೀಕರಿಸುವ ಅಗತ್ಯವಿದೆ. ಮಳೆಯಿಂದ ಸಾವಿರಾರು ಎಕರೆ ಪ್ರದೇಶ ಭೂಮಿ ಜವಳು ಬಿದ್ದಿದ್ದು ರೈತರು ಬೀದಿಗೆ ಬರುವಂತಾಗಿದೆ. ಆದ್ದರಿಂದ ನಷ್ಟ ಅನುಭವಿಸಿದವರಿಗೆ ಶೀಘ್ರ ಪರಿಹಾರ ಘೋಷಿಸಿ ಅನೂಕೂಲ ಮಾಡಿಕೊಡಬೇಕು.

-ಫಕ್ಕೀರೇಶ ಮ್ಯಾಟಣ್ಣವರ, ಯಲ್ಲಪ್ಪ ಸೂರಣಗಿ, ಗ್ರಾ.ಪಂ.ಮಾಜಿ ಅಧ್ಯಕ್ಷರು.

ಅಪ್ರಾಪ್ತೆಗೆ 20 ರೂ. ಆಮಿಷ ತೋರಿಸಿ ಅತ್ಯಾಚಾರ ಪ್ರಕರಣ; ಅತ್ಯಾಚಾರಿಗೆ 25 ವರ್ಷ ಜೈಲು, 8 ಲಕ್ಷ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ


ಅಪ್ರಾಪ್ತೆಯೊಬ್ಬಳಿಗೆ 20 ರೂ. ಆಮಿಷ ತೋರಿಸಿ, ಪಾಳು ಕಟ್ಟಡಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟೂ ೮ ಲಕ್ಷ ರೂ.ಗಳ ದಂಡ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ವಿಶೇಷ ಸರಕಾರಿ ಅಭಿಯೋಜಕ ಅಮರೇಶ್ ಉಮಾಪತಿ ಹಿರೇಮಠ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.

ಪ್ರಕರಣದ ವಿವರ

ಆರೋಪಿ ಬೆಟಗೇರಿಯ ಹೊಸಪೇಟ ಚಕ್ ಓಣಿಯ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬ ವ್ಯಕ್ತಿಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೆಳತಿಯರೊಂದಿಗೆ ಗಣೇಶ ಮೂರ್ತಿಗಳನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ 12 ವರ್ಷದ ನೊಂದ ಬಾಲಕಿಗೆ 20 ರೂಪಾಯಿ ನೀಡುವದಾಗಿ ಆಮಿಷ ತೋರಿಸಿ, ಪಾಳು ಬಿದ್ದಿದ್ದ ಕಟ್ಟಡವೊಂದದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ.

ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕಲಂ 371(1), 376(ಎ)(ಬಿ) ಐಪಿಸಿ ಕಲಂ 6 ಪೋಕ್ಸೋ ಕಾಯ್ದೆ-2012ರಡಿಯಲ್ಲಿ ಅಪರಾಧವೆಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಸ್ತುತ ಪ್ರಕರಣದಲ್ಲಿ ಸಿಪಿಐ ವೆಂಕಟೇಶ ಯಡಹಳ್ಳಿ ಪ್ರಕರಣ ದಾಖಲಿಸಿಕೊಂಡು, 25-10-2019ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥನಿಗೆ 25 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 7 ಲಕ್ಷ ರೂ.ಗಳನ್ನು National Legal Services Authority (NALSA) ನೀಡುವಂತೆ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿಯವರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಕೆಎಸ್‌ಆರ್‌ಟಿಸಿ ಡಿಪೋದ `ಮಹಾ’ ಯಡವಟ್ಟು!

0
  • ಮಹಾರಾಷ್ಟ್ರದ ಲಾಂಛನ, ಘೋಷಣೆಯಿರುವ ಟಿಕೆಟ್ ವಿತರಣೆಗೆ ಕನ್ನಡ ಸಂಘಟನೆಗಳ ಆಕ್ರೋಶ/ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ಇಲ್ಲಿ ಕನ್ನಡದ ಹೊರತಾಗಿ ಬೇರಾವ ಭಾಷೆಯೂ ಆಡಳಿತ ಭಾಷೆಯಾಗಬಾರದು. ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ, ಕನ್ನಡದ ಹೊಳಪು ಕಡಿಮೆಯಾಗುತ್ತಿದೆ ಎಂದು ಒಂದೆಡೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇತ್ತೀಚೆಗಷ್ಟೇ ನ್ಯಾಯಾಲಯ ಕೂಡ ಕನ್ನಡ ಭಾಷೆಯ ಪರವಾಗಿ ಮಹತ್ವದ ತೀರ್ಪು ನೀಡಿದ್ದು ಕನ್ನಡಾಭಿಮಾನಿಗಳ ಮೊಗದಲ್ಲಿ ನಗುವರಳಿಸಿತ್ತು.

ಈ ನಡುವೆಯೇ, ಕರ್ನಾಟಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ `ಮಹಾ’ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಕನ್ನಡಪರ ಹೋರಾಟಗಾರರ, ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಛನ, ಘೋಷಣೆಗಳು ಕಂಡು ಬಂದಿರುವುದು ಕನ್ನಡಪರ ಸಂಘಟನೆಗಳ ಕೋಪಕ್ಕೆ ಗ್ರಾಸವಾಗಿ, ಪ್ರತಿಭಟನೆಯವರೆಗೂ ತಲುಪಿರುವ ಘಟನೆ ಬುಧವಾರ ಗದಗನಲ್ಲಿ ನಡೆದಿದೆ.

ನಾಡಹಬ್ಬದ ಸಮಯದಲ್ಲಿಯೇ ಸಾರಿಗೆ ಸಂಸ್ಥೆಯ ಯಡವಟ್ಟಿನಿಂದ ಸರ್ಕಾರ ಮತ್ತೊಂದು ಗೊಂದಲಕ್ಕೆ ಗುರಿಯಾಗಿದೆ.

ಗದಗದಿಂದ ಗ್ರಾಮೀಣ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ನಲ್ಲಿ ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್ ವಿತರಣೆಯಾಗಿದ್ದು, `ಮಹಾರಾಷ್ಟ್ರ ನ್ ಪರಿವಾರನ್, ಜೈ ಮಹಾರಾಷ್ಟ’ ಘೋಷಣೆಗಳೂ ಮುದ್ರಿತವಾಗಿದ್ದವು. ಗದಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಾರಾಷ್ಟ್ರ ಪರವಾದ ಘೋಷಣೆಗಳಿರುವ ಟಿಕೆಟ್ ಹಂಚಿಕೆಯಾಗುತ್ತಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ನಾಡದ್ರೋಹಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಕನ್ನಡ ಭಾಷೆಗೆ ದ್ರೋಹವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸಮಜಾಯಿಷಿ ನಿಡಿದ ಕೆಎಸ್‌ಆರ್‌ಟಿಸಿ ಡಿಸಿ ಜಿ. ಶೇನಯ್ಯಾ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಟಿಕೆಟ್ ಮುದ್ರಿಸುವ ರೋಲ್‌ಗಳು ವಿಶಾಖಪಟ್ಟಣದಿಂದ ಸರಬರಾಜಾಗುತ್ತವೆ.

ಈ ಸಂದರ್ಭದಲ್ಲಿ ರೋಲ್ ವಿತರಿಸುವವರು ಪ್ರಮಾದವೆಸಗಿದ್ದು, ಮಹಾರಾಷ್ಟ್ರಕ್ಕೆ ಸರಬರಾಜಾಗಬೇಕಿದ್ದ ಮಹಾರಾಷ್ಟ್ರ ಲಾಂಛನವಿರುವ ಒಂದು ಬಾಕ್ಸ್ ಮಾತ್ರ ಗದಗಕ್ಕೆ ವಿತರಣೆಯಾಗಿತ್ತು.
ಗದಗ ಡಿಪೋದಲ್ಲಿ ಕ್ಲರ್ಕ್ ಗಳು ಸರಿಯಾಗಿ ಪರಿಶೀಲಿಸಿ ರೋಲ್‌ಗಳನ್ನು ಕೊಡಬೇಕಿತ್ತು. ಆದರೆ, ಅವರು ಈಬಗ್ಗೆ ಪರಾಮರ್ಶಿಸದೇ ಹಾಗೆಯೇ ಕಂಡಕ್ಟರ್‌ಗಳಿಗೆ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಟಿಕೆಟ್ ರೋಲ್‌ಗಳನ್ನು ಸರಬರಾಜು ಮಾಡಿದ ವ್ಯಕ್ತಿ, ಕ್ಲರ್ಕ್ ಗಳು ಹಾಗೂ ಕಂಡಕ್ಟರ್‌ಗಳೂ ತಪ್ಪು ಮಾಡಿದ್ದಾರೆ.

ಒಂದು ಬಾಕ್ಸ್ ನಲ್ಲಿ ೨೦೦ ರೋಲ್‌ಗಳು ಬಂದಿರುತ್ತವೆ. ಅವುಗಳಲ್ಲಿ ೭೦ ರೋಲ್‌ಗಳನ್ನು ಕಂಡಕ್ಟರ್‌ಗಳಿಗೆ ನೀಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕಂಡಕ್ಟರ್ ಕಡೆಯಿಂದ ಟಿಕೆಟ್ ರೋಲ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ತಪ್ಪು ಮಾಡಿದ ಕ್ಲರ್ಕ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಘಟನೆ ಗದಗದಲ್ಲಿ ನಡೆದಿದೆ. ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಮುದ್ರಣವಾಗಿರುವ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು, ನಿರ್ವಾಹಕರು ಕಣ್ಮುಚ್ಚಿಕೊಂಡೇ ಟಿಕೆಟ್ ನೀಡಿದರಾ? ಕನ್ನಡಿಗರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಟಿಕೆಟ್ ರೋಲ್‌ಗಳು ಗದಗ ತಲುಪಿದವಾ? ಯಾವ ಕಾರಣಕ್ಕಾಗಿ ಇಲ್ಲಿಗೆ ತಲುಪಿ ವಿತರಣೆಯಾದವು? ಟಿಕೆಟ್ ರೋಲ್ ಖರೀದಿ ಮಾಡಲು ಸರ್ಕಾರ, ಸಾರಿಗೆ ಸಂಸ್ಥೆಯ ಬಳಿ ಹಣವಿಲ್ಲವೆಂದರೆ ಹೇಳಿ. ಕನ್ನಡಿಗರು ವಿಶಾಲ ಹೃದಯದವರಿದ್ದೇವೆ. ನಾವೇ ವಂತಿಗೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತೇವೆ. ಆ ಹಣದಲ್ಲಿಯೇ `ಜೈ ಕರ್ನಾಟಕ’ ಎಂದು ಮುದ್ರಿಸಿರುವ ಟಿಕೆಟ್ ಹಂಚಿ. ಮುಖ್ಯಮಂತ್ರಿಗಳು, ಸಾರಿಗೆ ಸಚಿವರೆಲ್ಲ ಎಲ್ಲಿದ್ದೀರಿ? ತಕ್ಷಣ ಇಂಥ ಅಪರಾಧವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ. ಇಲ್ಲವಾದರೆ ರಾಜೀನಾಮೆ ನೀಡಿ ಹೊರಬನ್ನಿ

ಚಂದ್ರಕಾಂತ ಚವ್ಹಾಣ. ಜಯ ಕರ್ನಾಟಕ ಸಂಘಟನೆ ಮುಖಂಡ

ಇವತ್ತು ನಾಡಹಬ್ಬ ದಸರಾ. ಈ ಸಂದರ್ಭದಲ್ಲಿ ಗದಗ ಸಾರಿಗೆ ಡಿಪೋದಿಂದ ಸಂಚರಿಸುವ ಬಸ್‌ಗಳಲ್ಲಿ `ಜೈ ಮಹಾರಾಷ್ಟ್ರ ಎಂಬ ಘೋಷಣೆ, ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್‌ಗಳನ್ನು ನೀಡಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಈ ಘಟನೆಯನ್ನು ಎಲ್ಲ ಕನ್ನಡಪರ ಸಂಘಟನೆಗಳು ಖಂಡಿಸುತ್ತವೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಈ ಕನ್ನಡ ದ್ರೋಹವನ್ನು ಗಮನಿಸಿ ಅಂಥಹ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ನಾಳೆ ಬೆಳಿಗ್ಗೆಯೊಳಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಸ್ ನಿಲ್ದಾಣದದ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕನ್ನಡಕ್ಕಾಗಿ ನಾವು ಕನ್ನಡಿಗರು, ಸಂಘಟನೆಗಳು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ.

ಭಾಷಾಸಾಬ್ ಮಲ್ಲಸಮುದ್ರ. ಕನ್ನಡಪರ ಸಂಘಟನೆ ಮುಖಂಡ
error: Content is protected !!