Home Blog Page 3234

ಕೊಪ್ಪಳ ಜಿಲ್ಲೆಗೆ ಮತ್ತೊಂದು ಐಎಎಸ್ ಗರಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಪಡೆದ ಅಪೂರ್ವ ಬಾಸೂರ

ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಭತ್ತದ ನಾಡಿನ ‘ಅಪೂರ್ವ’ಗೆ 191ನೇ ರ‍್ಯಾಂಕ್; ಎರಡನೇ ಪ್ರಯತ್ನದಲ್ಲಿ ಐಎಎಸ್ ಉತ್ತೀರ್ಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಸಾಧಿಸಬೇಕು ಎಂಬುವ ಅಚಲ ಮನಸ್ಸು ಒಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ ಭತ್ತದ ನಾಡಿನ ಈ ಪ್ರತಿಭೆ.

ಯುಪಿಎಸ್‌ಸಿ ಸೋಮವಾರ ಪ್ರಕಟಿಸಿದ ಐಎಎಸ್ ಪರೀಕ್ಷೆ ಫಲಿತಾಂಶದಲ್ಲಿ ಗಂಗಾವತಿ ನಗರದ ಅಪೂರ್ವ ಬಾಸೂರ ದೇಶಕ್ಕೆ 191ನೇ ರ‍್ಯಾಂಕ್ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ. ಐಎಎಸ್ ಪಾಸಾಗಿರುವ ಅಪೂರ್ವ ಬಾಸೂರು 1 ರಿಂದ 10ನೇ ತರಗತಿಯವರೆಗೆ ಗಂಗಾವತಿಯ ಸೆಂಟ್ ಪಾಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

2012ರಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ, ಬೆಂಗಳೂರಿನ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್(ಡೆಂಟಿಸ್ಟ್) ಅಭ್ಯಾಸದ ನಂತರ ಅಪೂರ್ವ 2018ರಲ್ಲಿ ದೆಹಲಿಗೆ ಐಎಎಸ್ ಕೋಚಿಂಗ್ ಪಡೆಯಲು ತೆರಳಿದರು.

2018ರಿಂದ 2020ರವೆಗೆ ತರಬೇತಿ ಪಡೆದು ಮರಳಿ ರಾಜ್ಯಕ್ಕೆ ವಾಪಸ್ ಬಂದು 2020ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಎದುರಿಸಿದರು. ಆದರೆ, ಸೂಕ್ತ ತಯಾರಿಯೊಂದಿಗೆ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದಾಗಲೂ ಪ್ರಿಲಿಮನರಿ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ದೃತಿಗೆಡದೆ ಚಿತ್ತ ಮನಸ್ಸಿನಿಂದ ಮತ್ತೆ ದಿನಕ್ಕೆ 8-10 ಗಂಟೆ ಅಧ್ಯಯನ ಮುಂದುವರೆಸಿ, 2021ರಲ್ಲಿ ಎರಡನೇ ಬಾರಿಗೆ ಮತ್ತೆ ಪರೀಕ್ಷೆ ಎದುರಿಸಿದಾಗ ಪ್ರಿಲಿಮನರಿ, ಮೇನ್ಸ್ ಹಾಗೂ ಸಂದರ್ಶನದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಐಎಎಸ್ ಆಗಬೇಕೆಂಬ ದೃಢ ಮನಸಿತ್ತು
ಸಾರ್ವಜನಿಕ ಆಡಳಿತ ವಿಷಯ ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡು ಪರೀಕ್ಷೆ ಬರೆದಿದ್ದ ಅಪೂರ್ವ ಅವರಿಗೆ ಚಿಕ್ಕಂದಿನಿಂದಲೇ ಐಎಎಸ್ ಆಗಬೇಕೆಂಬ ದೃಢ ನಿರ್ಧಾರವಿತ್ತು. ಈ ನಿಟ್ಟಿನಲ್ಲಿ ಸದಾ ಪ್ರಯತ್ನ ನಡೆಸಿದ ಪರಿಣಾಮ ಅಚ್ಚರಿ ಎಂಬಂತೆ ಎರಡನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು, ಮುಂದೆ ಪಾಲ್ಸ್ ಮೇಕಿಂಗ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆನ್ನುವ ಆಸೆ ಹೊಂದಿದ್ದಾರೆ.

ತರಬೇತಿ ಹಾಗೂ ವಿದ್ಯಾಭ್ಯಾಸದ ಸಮಯದಲ್ಲಿ ಕುಟುಂಬದವರ ಸಹಕಾರ ಅತ್ಯಮೂಲ್ಯವಾಗಿದ್ದರಿಂದ ಐಎಎಸ್ ಪಾಸ್ ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾದಾಗ ಕುಗ್ಗದೇ ಮರು ಪ್ರಯತ್ನ ಮಾಡಿದ್ದರಿಂದ ಎರಡನೇ ಪ್ರಯತ್ನದಲ್ಲಿ ಯಶಸ್ಸು ದೊರೆಯಿತು.

-ಅಪೂರ್ವ ಬಾಸೂರ, ಯುಪಿಎಸ್‌ಸಿ 191ನೇ ರ‍್ಯಾಂಕ್ ಪಡೆದ ಯುವತಿ.

ನನ್ನ ಮಗಳ ಸಾಧನೆ ಅತ್ಯಂತ ಖುಷಿ ತಂದಿದೆ.
ನಿರಂತರ ಅಧ್ಯಯನಶೀಲಳಾಗಿ ಎರಡನೇ ಪ್ರಯತ್ನದಲ್ಲಿಯೇ ಐಎಎಸ್ ಪಾಸ್ ಮಾಡಿರುವುದು ಸಂತಸ ತಂದಿದೆ. – ಡಾ. ಶ್ರೀಕಾಂತ್ ಬಾಸೂರ, ಅಪೂರ್ವ ತಂದೆ

ಮುಸ್ಲಿಂರನ್ನು ದೇಶ ಬಿಟ್ಟು ಕಳಿಸಲು ಅಸಾಧ್ಯ: ಸಂಸದ ಸಂಗಣ್ಣ ಕರಡಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

‘ಮುಸ್ಲಿಂರನ್ನು ದೇಶ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಶನಿವಾರ ಕೊಪ್ಪಳದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಅವರು ಈ ಮೇಲಿನಂತೆ ಹೇಳಿದರು.

‘ಸ್ವಾತಂತ್ರ್ಯ ನಂತರ ದೇಶ ವಿಭಜನೆಯಾಗಿ ಹಿಂದೂ, ಮುಸ್ಲಿಂ ರಾಷ್ಟ್ರಗಳು ಹುಟ್ಟಿಕೊಂಡವು. ನಮ್ಮ ದೇಶದಲ್ಲಿ ಅನೇಕ ಮುಸ್ಲಿಂ ಕುಟುಂಬ ಉಳಿದುಕೊಂಡವು. ಇಂದಿಗೂ ಅವರು ನಾವು ಒಂದೇ ಕುಟುಂಬದ ಅಣ್ಣತಮ್ಮಂದಿರಂತೆ ಸೌಹಾರ್ದತೆ, ಸಹೋದರತೆ, ಭ್ರಾತೃತ್ವದಿಂದ ಬದುಕುತ್ತಿದ್ದೇವೆ. ಹೀಗಾಗಿ ಅವರನ್ನು ದೇಶ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಆಜಾನ್.. ಹೀಗೆ ದಿನದಿಂದ ದಿನಕ್ಕೆ ಹಿಂದೂ ಮುಸ್ಲಿಂರ ಮಧ್ಯೆ ವಿವಾದ ಹುಟ್ಟಿಕೊಳ್ಳುತ್ತಿರುವ ಹೊತ್ತಲ್ಲಿ ಬಿಜೆಪಿ ಸಂಸದರು ದೇಶದಲ್ಲಿರುವ ಮುಸ್ಲಿಂರನ್ನು ಭಾರತ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ಗಮನಾರ್ಹವಾಗಿದೆ.

ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆಂದು ಹೇಳಲಾಗುತ್ತಿರುವ ಸಂಸದ ಸಂಗಣ್ಣ ಕರಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಸುವ ಕಾರಣಕ್ಕೆ ಅಲ್ಪಸಂಖ್ಯಾತರನ್ನು ಒಲೈಸಿಕೊಳ್ಳಲು ಇಷ್ಟೊಂದು ಪ್ರೀತಿ ತೋರುತ್ತಿದ್ದಾರೆಯೇ? ಎಂಬ ಚರ್ಚೆಗಳು ಜಿಲ್ಲೆಯಾದ್ಯಂತ ಶುರುವಾಗಿದೆ.

ಎಸಿಬಿ ಡಿವೈಎಸ್ಪಿ ಹೆಸರಿನಲ್ಲಿ ರೋಣ ತಹಸೀಲ್ದಾರ್‌ ಜಕ್ಕಣಗೌಡ್ರಗೆ ಬ್ಲಾಕ್ ಮೇಲ್; ನಾಲ್ವರು ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಹಾಸನ/ಗದಗ:

ಗದಗ ಜಿಲ್ಲೆಯ ರೋಣ ತಾಲ್ಲೂಕು ತಹಸೀಲ್ದಾರ ಜೆ.ಬಿ.ಜಕ್ಕನಗೌಡರ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಹೆಸರಿನಲ್ಲಿ ವಿವಿಧ ಇಲಾಖೆಯ ನೌಕರರಿಗೆ ದೂರವಾಣಿ ಕರೆ ಮಾಡಿ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಹಾಗೂ ಇವರಿಗೆ ಸಹಕರಿಸುತ್ತಿದ್ದ ಇನ್ನಿಬ್ಬರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ನಿಂಗಪ್ಪ ಕುಂಬಾರ (೫೬), ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ ತಂದೆ ನಾಗರಾಜ್ (೪೬) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಸಿಮ್‌ಕಾರ್ಡ್, ಮೊಬೈಲ್‌ಗಳನ್ನು ಪಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ನಮ್ಮ ಖಾತೆಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದರು. ಈ ಬಗ್ಗೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿತರ ಹೆಡೆಮುರಿ ಕಟ್ಟಲು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಸಿ ವಿವಿಧ ಇಲಾಖೆಯ ನೌಕರರಿಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಎಸಿಬಿ ದಾಳಿ ಮಾಡುವುದಾಗಿ ಹೆದರಿಸುತ್ತಿದ್ದರು. ಅಲ್ಲದೆ, ವಿವಿಧ ವ್ಯಕ್ತಿಗಳ ಖಾತೆಗಳಿಗೆ ಹಣ ಸಂದಾಯ
ಮಾಡಿಸಿಕೊಳ್ಳುತ್ತಿದ್ದರು ಎಂಬುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಅನೇಕರಿಗೆ ಇದೇ ರೀತಿ ವಂಚಿಸಿ ಹಣ ಪಡೆದಿರುವ ಬಗ್ಗೆಯೂ ಆರೋಪಿಗಳು ತಿಳಿಸಿದ್ದಾರೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಮೊದಲನೇ ಆರೋಪಿ ಮುರಿಗೆಪ್ಪಾ ಕುಂಬಾರ ಸುಮಾರು ೪೦ಕ್ಕಿಂತ ಹೆಚ್ಚು ಮತ್ತು ಎರಡನೇ ಆರೋಪಿ ರಜನಿಕಾಂತ್ ಸುಮಾರು ೦೬ಕ್ಕಿಂತ ಅಧಿಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿ, ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಸಹ ಹೊರಡಿಸಲಾಗಿತ್ತು. ಅಲ್ಲದೆ, ಇವರಿಬ್ಬರು ಈ ಹಿಂದೆ ಬಂಧಿತರಾಗಿ, ನ್ಯಾಯಾಲಯದಿಂದ ಜಾಮೀನು ಸಹ ಪಡೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ ಎಸ್‌ಪಿ ಲೋಕೇಶ್ ಜಗಲಾಸರ್, ಹಾಸನ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಹಾಗೂ ಮೈಸೂರು ಎಸಿಬಿ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕ ಸಜೀತ ವಿ.ಜೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

ಇನ್ನಿಬ್ಬರು ಆರೋಪಿಗಳ ಬಂಧನ

ಹಾಸನದಲ್ಲಿ ಬಂಧಿಸಲಾಗಿರುವ ಮುಖ್ಯ ಆರೋಪಿಗಳಾದ ಮುರಿಗೆಪ್ಪಾ ಹಾಗೂ ರಜನಿಕಾಂತ್‌ಗೆ ಸಿಮ್ ಮತ್ತು ಮೊಬೈಲ್ ಖರೀದಿಗೆ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಕೊಟ್ಟು ಸಹಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗದಗ ಎಸಿಬಿ ಅಧಿಕಾರಿಗಳು ಹಾಗೂ ರೋಣ ಪೊಲೀಸರು ಬಂಧಿಸಿದ್ದಾರೆ. ಸದಲಗಾ ಬಳಿಯ ಮಹಾರಾಷ್ಟ್ರದ ದತ್ತುವಾಡ ಗ್ರಾಮದ ನಿವಾಸಿಗಳಾದ ರಮೇಶ್ ಚೌಗಲೆ, ಮಹಾವೀರ ಚೌಗಲೆ ಎಂಬುವವರನ್ನು ಬಂಧಿಸಿದ್ದಾರೆ. ಇವರಿಬ್ಬರು ಮುರಿಗೆಪ್ಪಾ ಮತ್ತು ರಜನೀಕಾಂತ್‌ಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುವುದಕ್ಕೆ ಸಹಕರಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಎಂ ತವರು ಕ್ಷೇತ್ರದಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಮನೆಯೊಂದರ ಮೇಲೆ ಬುಧವಾರ ರಾತ್ರಿ ಶೂಟೌಟ್ ಪ್ರಕರಣ ನಡೆದಿದೆ.

ಹುಲಗೂರು ಗ್ರಾಮದ ಆಜಾದ ಓಣಿಯ ಕೂಲಿ ಕಾರ್ಮಿಕ ಮಾಬುಸಾಬ್ ಹುಸೇನಸಾಬ್ ಗುಡಗೇರಿ ಎಂಬುವರು ಪುತ್ರಿಯನ್ನು ಗುರಿಯಾಗಿಸಿಕೊಂಡು ಇಬ್ಬರು ಆಗುಂತಕರು ಈ ಗುಂಡಿನ‌ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಉಳಿದ ಮನೆ ಮಂದಿಯೆಲ್ಲಾ ಮಲಗಿದ್ದರಿಂದ ದೊಡ್ಡ ದುರಂತ ತಪ್ಪಿದೆ.

ಗುಂಡು ಹಾರಿಸಿದ ರಭಸಕ್ಕೆ ಕಿಟಕಿಯಲ್ಲಿದ್ದ ತಗಡಿನ ಮುಖಾಂತರ ಒಳಗಡೆ ಹೊಕ್ಕಿದ್ದು, ಹಾಲ್ ನಲ್ಲಿ 6 ರಂಧ್ರಗಳು ಬಿದ್ದಿವೆ. ಗುಂಡು ಹಾರಿಸಿದ ವೇಳೆಯಲ್ಲಿ ಕರೆಂಟು ಇಲ್ಲದಿರುವುದರಿಂದ ಗುಂಡು ಯಾರಿಗೂ ತಾಗಿಲ್ಲ.

ಸುದ್ದಿ ತಿಳಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಭಯ ಪಡದಂತೆ ಆತ್ಮಸ್ಥೈರ್ಯ ತುಂಬಿದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರಿಗೆ ಒತ್ತಾಯಿಸಿದರು.

ಇತ್ತೀಚಿಗೆಷ್ಟೇ ಪಟ್ಟಣದ ಸಿನೀಮಾ ಟಾಕೀಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ ಬಂಧಿಸಿದ ಬೆನ್ನಲ್ಲೆ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ ಲಿಂಗನಗೌಡ್ರ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ಮೋಹನ ಮಾಳಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರೋಣದ ಬಿಜೆಪಿ ಮುಖಂಡ ಮುತ್ತಣ್ಣ ಲಿಂಗನಗೌಡ್ರ ಆಯ್ಕೆಯಾಗಿದ್ದಾರೆ.

ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದು, ಗದಗ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ ಲಿಂಗನಗೌಡ ಹಾಗೂ ಬೆಳಗಾವಿ ನಗರ ಜಿಲ್ಲಾಧ್ಯಕ್ಷರ ಅನಿಲ ಬೆನಕೆ ಅವರನ್ನು ನೇಮಕ ಮಾಡಿದ್ದಾರೆ.

ಅದೇ ರೀತಿ ಧಾರವಾಡ ಗ್ರಾಮೀಣ ಸಹ ಪ್ರಭಾರಿಗಳಾಗಿ ಮೋಹನ ಮಾಳಶೆಟ್ಟಿ, ಬಳ್ಳಾರಿ ಸಹ ಪ್ರಭಾರಿಯಾಗಿ ವಿರುಪಾಕ್ಷ ಸಿಂಗನಾಳ ನೇಮಕಗೊಂಡಿದ್ದಾರೆ.

ಪಾಲಾ-ಬಾದಾಮಿ ರಸ್ತೆ ಕಾಯಕಲ್ಪಕ್ಕೆ ಕೂಡಿ ಬಂದ ಕಾಲ; ರಸ್ತೆಗಳ ಡಾಂಬರೀಕರಣಕ್ಕೆ ಹಣದ ಹೊಳೆ

ರಸ್ತೆ ಮರು ಡಾಂಬರೀಕರಣ, ಸುಧಾರಣಾ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ | ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅಭಿನಂದನೆ

ರಸ್ತೆ ಅಭಿವೃದ್ಧಿಗೆ ೧೨ ಕೋಟಿ ಮಂಜೂರು

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಗದಗ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣದ ಹೊಳೆ ಹರಿಸುತ್ತಿದೆ. ಗದಗ ವಿಧಾನಸಭಾ ಮತಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಕೇಳಿದಷ್ಟು ಅನುದಾನ ಕೊಡುತ್ತಿದ್ದು, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಕನಸಿಗೆ ನೀರೆರೆಯುತ್ತಿದ್ದಾರೆ.

ಹೌದು, ಗದಗ ಮತಕ್ಷೇತ್ರದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ೧೨.೬೦ ಕೋಟಿ ರೂ. ಮಂಜೂರು ಮಾಡಿದ್ದು, ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲರಿಗೆ ಅನಿಲ್ ಮೆಣಸಿನಕಾಯಿ ಅಭಿನಂದನೆ ತಿಳಿಸಿದ್ದಾರೆ.

ಗದಗ ತಾಲ್ಲೂಕಿನ ಕಾರವಾರ ಇಳಕಲ್ ರಾಜ್ಯ ಹೆದ್ದಾರಿ-06 ರಸ್ತೆಯ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಹಾಗೂ ಎನ್‌ಎಚ್-63ದಿಂದ ಗದಗ ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ ನೀಡಿದೆ.

ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯ ಗದಗ ಬೆಟಗೇರಿ ಅವಳಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ಸರ್ಕಲ್‌ವರೆಗೆ ಹಾಗೂ ತುಳಜಾಭವಾನಿ ಸರ್ಕಲ್‌ನಿಂದ ನರಸಾಪೂರದವರೆಗೆ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಪಿಡಬ್ಲ್ಯೂಡಿ ಇಲಾಖೆ ಸಮ್ಮತಿಸಿದೆ.

ಅದರಂತೆ, ಗದಗ-ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆಗೆ 9 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಗದಗ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 1,306.5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಗದಗ ಮತಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿತ್ತು. ಇದಕ್ಕಾಗಿ ಮುಖಂಡ ಅನೀಲ್ ಮೆಣಸಿನಕಾಯಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನಾ ಸಮಾರಂಭವನ್ನೂ ಏರ್ಪಡಿಸಿತ್ತು. ಇದಾದ ಬೆನ್ನಲ್ಲೇ ಗದಗನ ರಸ್ತೆಗಳ ಅಭ್ಯುದಯಕ್ಕಾಗಿ 12.60 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದಿಸಿರುವುದು ಕ್ಷೇತ್ರದ ಜನರಿಗೆ, ಬಿಜೆಪಿ ಕಾರ್ಯಕರ್ತರಿಗೆ ಸಂತಸವನ್ನುಂಟು ಮಾಡಿದೆ.

ಶಾಶ್ವತ ಪರಿಹಾರ ಸಿಗಬಹುದೇ?

ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದ ಮಧ್ಯೆ ಭಾಗದಲ್ಲಿರುವ ಪಾಲಾ ಬಾದಾಮಿ ರಸ್ತೆ ದುರಸ್ತಿ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಈ ರಸ್ತೆಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಆಗಮಿಸುವ ವೇಳೆ ಹಲವು ಬಾರಿ ಅಭಿವೃದ್ಧಿಗೊಳಿಸಿದ್ದರೂ ವಾಹನ ದಟ್ಟಣೆ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿ ಹಳೇ ಡಿಸಿ ಆಫೀಸ್ ಸರ್ಕಲ್‌ನಿಂದ ಗದಗ ತಹಸೀಲ್ದಾರ್ ಕಚೇರಿವರೆಗೆ ಗುಂಡಿಗಳಿಂದ, ಧೂಳಿನಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಇದೀಗ ಇದೇ ರಸ್ತೆಯ ಮರು ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದ್ದು, ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೆಂಬ ಆಶಾಭಾವನೆ ಅವಳಿ ನಗರದ ಜನರದ್ದಾಗಿದೆ.

ಗದಗ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿಯವರು ಸಾಕಷ್ಟು ಅನುದಾನ ನೀಡಿದ್ದು, ಅವರಿಗೆ ಅಭಿನಂದನೆಗಳು. ಇವರೆಲ್ಲರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಚಿತ್ರಣ ಬದಲಾಗಲಿದೆ.

ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

ಗದಗ-ಬೆಟಗೇರಿ ಅವಳಿ ನಗರದ ಅಭ್ಯುದಯಕ್ಕಾಗಿ ಜಿಲ್ಲೆಯ ಸಚಿವರು, ಪಕ್ಷದ ಶಾಸಕರು ಮುತುವರ್ಜಿ ವಹಿಸಿ ಅನುದಾನ ನೀಡುತ್ತಿರುವುದು ಬಹಳಷ್ಟು ಸಂತಸ ತಂದಿದೆ. ಅಲ್ಲದೆ, ಅವಳಿ ನಗರದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಅನಿಲ್ ಮೆಣಸಿನಕಾಯಿ ಅವರ ಕಾರ್ಯ ಶ್ಲಾಘನೀಯ.

ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ

ರಣತೂರ ಗ್ರಾ.ಪಂಚಾಯತಿ ಉಪ ಚುನಾವಣಾ ಫಲಿತಾಂಶ; ಶರೀಫ್ ಛಬ್ಬಿ ಭರ್ಜರಿ ಗೆಲುವು

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ರಣತೂರ ಗ್ರಾಮ ಪಂಚಾಯತಿಯ 2ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫಸಾಬ್ ರಾಜೇಸಾಬ್ ಛಬ್ಬಿ 126 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶರೀಫಸಾಬ್ ಛಬ್ಬಿ 391ಮತಗಳ‌ನ್ನು ಪಡೆದರೆ,
ಪ್ರತಿಸ್ಪರ್ಧಿ ಅಜ್ಜಪ್ಪ ಕೃಷ್ಣಪ್ಪ ಛಬ್ಬಿ 265 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಾಣಾಧಿಕಾರಿಯಾಗಿದ್ದ ತಹಶೀಲ್ದಾರ ಕಲ್ಲಗೌಡ ಪಾಟೀಲ್ ಗೆಲುವು ಸಾಧಿಸಿದ ಶರೀಫಸಾಬ್ ಛಬ್ಬಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

ಹಿಂದುಳಿದ ಎ‌ ವರ್ಗಕ್ಕೆ ಮೀಸಲಿದ್ದ ಸದಸ್ಯ ಸ್ಥಾನಕ್ಕೆ ಕಳೆದ ಶುಕ್ರವಾರ ಮೇ 20 ರಂದು ಮತದಾನ ನಡೆದಿತ್ತು.

ಬೆಣ್ಣೆಹಳ್ಳದ ನಡುನೀರಿನಲ್ಲಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸತತ ಮೂರು ದಿನದಿಂದ ಮುಂಗಾರು ಪೂರ್ವದಲ್ಲಿಯೇ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಕಡದಳ್ಳಿ ಗ್ರಾಮದ ಬಳಿ  ಪ್ರವಾಹದಲ್ಲಿ ಸಿಲುಕಿದ್ದ ಆಂದ್ರ ಮೂಲಕ ಕಾರ್ಮಿಕನೊಬ್ಬನನ್ನು ರಕ್ಷಣೆ ಮಾಡುವಲ್ಲಿ ತಾಲ್ಲೂಕಾ ಆಡಳಿತ ಶನಿವಾರ ಯಶಸ್ವಿಯಾಗಿದೆ.

ಆಂದ್ರ ಮೂಲದ ಕಾರ್ಮಿಕನಾದ ಮದನ್ ರೆಡ್ಡಿ (29) ಈತ ಕೆಲಸ ಹುಡುಕಿಕೊಂಡು ಹೊಲಕ್ಕೆ ಹೋಗಿದ್ದ. ಈತನಿಗೆ ಈ ಭಾಗದಲ್ಲಿ ಬೆಣ್ಣೆ ಹಳ್ಳದ ಪ್ರವಾಹ ಹೇಗಿರುತ್ತದೆ ಎಂಬುದು ಗೊತ್ತಾಗದೇ ಹೊಲದ ಶೆಡ್ಡೊಂದರಲ್ಲಿ ರಕ್ಷಣೆ ಪಡೆದು ನಿಂತಿದ್ದಾನೆ.  ಆದರೆ ಒಮ್ಮಿಂದೊಮ್ಮೆಲೆ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಹೊಲ ನಡುಗಡ್ಡೆಯಾಗಿದೆ. ಈತ ಭಯದಿಂದ ಜೋರಾಗಿ ಕೂಗಿಕೊಂಡಿದ್ದನ್ನು ಗ್ರಾಮಸ್ಥರು ಕೆಳಿಸಿಕೊಂಡು ತಾಲ್ಲೂಕಾ ಆಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಅನಿಲ ಬಡಿಗೇರ, ಸಿ.ಪಿ.ಐ ಚಂದ್ರಶೇಖರ ಮಠಪತಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ ಮೇಲೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ರಕ್ಷಣೆ ಮಾಡಿ ಸಂಜೆ ಯಶಸ್ವಿಯಾಗಿ ಕರೆ ತಂದಿದ್ದರಿಂದ ರಕ್ಷಣೆಯಲ್ಲಿ ತೊಡಗಿದ್ದ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.

ಈ ಸಂದರ್ಭದಲ್ಲಿ ಅಲ್ಲಿಯೇ ಉಪಸ್ಥಿತರಿದ್ದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಮಿಕನ ಜೊತೆ ಮಾತನಾಡಿ, ತಕ್ಷಣವೇ ಈತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವಂತೆ ಸೂಚಿಸಿದ್ದರಿಂದ ಸ್ಥಳದಲ್ಲಿಯೇ ಇದ್ದ ಅಂಬ್ಯುಲೆನ್ಸನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದಾರೆ.


ತುಂಬಾ ಹಸಿದುಕೊಂಡಿದ್ದ ಆತನಿಗೆ ವೈದ್ಯಾಧಿಕಾರಿಗಳು ಮೊದಲು ಊಟ ಕೊಟ್ಟು ಉಪಚರಿಸುತ್ತಿದ್ದಾರೆ. ಈತನಿಗೆ ಕನ್ನಡ ಭಾಷೆ ಬರದೆ ಇರುವುದು ಸ್ವಲ್ಪ ತೊಂದರೆಯಾಗುತ್ತಿದೆ.

ನೀರಿನ ಟ್ಯಾಂಕ್‍ನಲ್ಲಿ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಇಬ್ರಾಹಿಂಪೂರ ರಸ್ತೆಯಲ್ಲಿರುವ ಪುರಸಭೆಯ ಕಸ ಸಂಗ್ರಹ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕನೊಬ್ಬ ಕಾಲು ಜಾರಿ ನೀರಿನ ಟ್ಯಾಂಕ್‍ನಲ್ಲಿ ಬಿದ್ದ ಪರಿಣಾಮ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಗುತ್ತಿಗೆದಾರರ ಕೈಕೆಳಗೆ ಕೆಲಸ ಮಾಡುತ್ತಿದ್ದ ಈತ ಪಟ್ಟಣದ ಜಟಗಾ ಗಲ್ಲಿಯ ನಿವಾಸಿ ಗೂಡುಸಾಬ ಮಾಬುಸಾಬ ಶಿರೂರ (38) ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮುಖ್ಯಾಧಿಕಾರಿ ಈರಪ್ಪ ಹಸಬಿ ಆಗಮಿಸಿ ಪ್ರಾಥಮಿಕ ವಿಚಾರಣೆ ಮಾಡಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೃತ ವ್ಯಕ್ತಿಯ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಹೃದಯವಿದ್ರಾವಕವಾಗಿತ್ತು.

ನಿರಂತರ ಮಳೆಗೆ ಬೈಕ್ ಸಮೇತ ಕೊಚ್ಚಿ ಹೋದ ಯುವಕ; ಗದಗ ಜಿಲ್ಲೆಯಲ್ಲಿ ಮೊದಲ ಬಲಿ!

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ ಮಳೆ ಜನರ ಜೀವಕ್ಕೆ ಕುತ್ತು ತರುತ್ತಿದೆ.

ಹೌದು, ಉಪ್ಪಿನ ಬೆಟಗೇರಿಗೆ ಹೋಗಿ ಕನ್ಯೆ ನೋಡಿ ಮರಳಿ ಊರಿಗೆ ಬರುತ್ತಿದ್ದ ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಟಿಪ್ಪುಸುಲ್ತಾನ್ (೨೬) ಎಂಬ ಯುವಕ ಹಳ್ಳ ದಾಟುವ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮೃತ ಟಿಪ್ಪುಸುಲ್ತಾನ್ ಗುರುವಾರ ವಧು(ಕನ್ಯೆ) ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ. ಕನ್ಯೆ ನೋಡಿ ವಾಪಸ್ ಬರುವಷ್ಟೊತ್ತಿಗೆ ಹೊತ್ತು ಮುಳುಗಿದೆ. ಹೀಗಾಗಿ ಉಪ್ಪಿನ ಬೆಟಗೇರಿಯಿಂದ ಮುಂಡರಗಿಗೆ ವಾಪಸ್ ಬಂದು ತಂದೆಗೆ ಯಕ್ಲಾಸಪುರದಲ್ಲಿ ಮಳೆ ಬರುತ್ತಿರುವ ಬಗ್ಗೆ ಕೇಳಿದ್ದನಂತೆ. ಆಗ ಟಿಪ್ಪು ತಂದೆ ‘ಇಲ್ಲಿ ತುಂಬಾ ಮಳೆ ಬರುತ್ತಿದೆ. ಹೀಗಾಗಿ ಇವತ್ತು ಬರಬೇಡ. ಇವತ್ತೊಂದಿನ ಮುಂಡರಗಿಯಲ್ಲಿದ್ದು ಶುಕ್ರವಾರ ಬೆಳಿಗ್ಗೆದ್ದು ಬಾ ಎಂದು ಹೇಳಿದ್ದರಂತೆ.

ತಂದೆ ಮಾತಿಗೆ ಒಲ್ಲೆನಲ್ಲದೇ ಮುಂಡರಗಿಯಲ್ಲಿ ಇರದೇ ‘ಹೂಂ ಎಂದಿದ್ದ ಟಿಪ್ಪು ಯಕ್ಲಾಸಪುರಕ್ಕೆ ಹೊರಟಿದ್ದಾನೆ. ನಿರಂತರ ಸುರಿಯುತ್ತಿರುವ ಮಳೆಗೆ ಯಕ್ಲಾಸಪುರದ ಕೋತಿ ಹಳ್ಳ ಮೈದುಂಬಿ ಹರಿಯುತ್ತಿದ್ದರೂ ಟಿಪ್ಪು ಬೈಕ್‌ನಲ್ಲಿ ಹಳ್ಳ ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ, ನೀರಿನ ಸೆಳುವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಅಸುನೀಗಿದ್ದಾನೆ.

ಮೃತ ಟಿಪ್ಪುಸುಲ್ತಾನ ಮೃತದೇಹ ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟೆಗೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಎಸ್‌ಐ ಮಾರುತಿ ಜೋಗಂದಂಡಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!