HomeSports Newsವಿಶ್ವ ಚೆಸ್ ವೇದಿಕೆಯಲ್ಲಿ ಮತ್ತೊಂದು ಮೈಲುಗಲ್ಲು: ನಾರ್ವೆ ಚೆಸ್ 2026 ಕಿರೀಟ ಮುಡಿಗೇರಿಸಿಕೊಂಡ ಪ್ರಜ್ಞಾನಂದ

ವಿಶ್ವ ಚೆಸ್ ವೇದಿಕೆಯಲ್ಲಿ ಮತ್ತೊಂದು ಮೈಲುಗಲ್ಲು: ನಾರ್ವೆ ಚೆಸ್ 2026 ಕಿರೀಟ ಮುಡಿಗೇರಿಸಿಕೊಂಡ ಪ್ರಜ್ಞಾನಂದ

For Dai;y Updates Join Our whatsapp Group

Spread the love

ಓಸ್ಲೋ: ಭಾರತದ ಯುವ ಚೆಸ್ ತಾರೆ ಹಾಗೂ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ನಾರ್ವೆ ಚೆಸ್-2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಭಾರತೀಯ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಈ ಸಾಧನೆಯೊಂದಿಗೆ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಚೆನ್ನೈ ಮೂಲದ 20 ವರ್ಷದ ಪ್ರಜ್ಞಾನಂದ, ಟೂರ್ನಿಯ ಅಂತಿಮ ಸುತ್ತಿನಲ್ಲಿ ಜರ್ಮನಿಯ ಗ್ರ್ಯಾಂಡ್‌ಮಾಸ್ಟರ್ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಅವರು, ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು.

ಈ ಮೂಲಕ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದರು.

ಟೂರ್ನಿಯ ಆರಂಭಿಕ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ, ದ್ವಿತೀಯಾರ್ಧದಲ್ಲಿ ಅದ್ಭುತ ಪುನರಾಗಮನ ಮಾಡಿ ಎಲ್ಲರ ಗಮನ ಸೆಳೆದರು. ವಿಶೇಷವಾಗಿ, ನಾರ್ವೆ ಚೆಸ್‌ನಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ಹಾಗೂ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಮಣಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಅಂತಿಮ ಸುತ್ತಿನಲ್ಲಿ ಗುಕೇಶ್ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಜ್ಞಾನಂದ ಅವರಿಗೆ ಚಾಂಪಿಯನ್ ಪಟ್ಟಕ್ಕೇರುವ ಅವಕಾಶ ಮತ್ತಷ್ಟು ಬಲವಾಯಿತು. ಅವರು ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಭಾರತದ ಕೀರ್ತಿಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಎತ್ತರಕ್ಕೆ ಹಾರಿಸಿದರು.

ಅಂತಿಮ ಸುತ್ತಿಗೂ ಮುನ್ನ 15.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ವೆಸ್ಲಿ ಸೊ, ಫ್ರಾನ್ಸ್‌ನ ಅಲಿರೇಝಾ ಫಿರೋಜ್ಜಾ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದ್ದರು. ಪರಿಣಾಮ ಪಂದ್ಯ ಟೈ-ಬ್ರೇಕರ್ ಹಂತಕ್ಕೆ ತಲುಪಿದ್ದು, ಇದೇ ಪ್ರಜ್ಞಾನಂದ ಅವರಿಗೆ ಮುನ್ನಡೆಯ ಅವಕಾಶ ಕಲ್ಪಿಸಿತು.

ಟೈ-ಬ್ರೇಕರ್‌ನಲ್ಲಿ ವೆಸ್ಲಿ ಸೊ ಜಯ ಸಾಧಿಸಿದರೂ ಅವರಿಗೆ ಕೇವಲ 1.5 ಅಂಕಗಳು ಮಾತ್ರ ಲಭಿಸಿದ ಕಾರಣ ಒಟ್ಟು 17 ಅಂಕಗಳಿಗೆ ತೃಪ್ತಿಪಡಬೇಕಾಯಿತು. ಮತ್ತೊಂದೆಡೆ ಅಲಿರೇಝಾ ಫಿರೋಜ್ಜಾ 15.5 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!