Home Blog Page 3249

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಸದ್ಯಕ್ಕೆ ಯಾರೂ ಹೋಗಬೇಡಿ……..

0

ಕಪ್ಪತಗುಡ್ಡದ ಪರಿಸರಕ್ಕೆ ಹಾನಿ: ಗುಡ್ಡದ ತುಂಬ ಪ್ಲಾಸ್ಟಿಕ್ ತ್ಯಾಜ್ಯ…..ಪ್ರವಾಸಿಗರಿಗೆ ಕಪ್ಪತಗುಡ್ಡ ಪ್ರವೇಶಕ್ಕೆ ನಿರ್ಬಂಧ…..

ವಿಜಯಸಾಕ್ಷಿ ಸುದ್ದಿ, ಗದಗ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿರುವ ಕಪ್ಪತಗುಡ್ಡದ ಪರಿಸರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಂದ ಸಾಕಷ್ಟು ಹಾನಿಯಾಗುತ್ತಿದ್ದು, ಕಪ್ಪತಗುಡ್ಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕಪ್ಪತಗುಡ್ಡ ಪರಿಸರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಗುಡ್ಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ನಿಸರ್ಗ ಪ್ರಿಯರು ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ; ನೂಕು-ನುಗ್ಗಲು, ಗಲಾಟೆ, ಚುನಾವಣೆ ಮುಂದೂಡಿಕೆ

ಹೀಗೆ ಭೇಟಿ ನೀಡುವ ಪ್ರವಾಸಿಗರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಮದ್ಯಪಾನ ಮಾಡಿ ಅರಣ್ಯ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಬೈಕ್, ಜೀಪ್‌ಗಳಲ್ಲಿ ತಂಡೋಪತAಡವಾಗಿ ಆಗಮಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಕಪ್ಪತಗುಡ್ಡದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.

ಪ್ರವಾಸಿಗರ ವರ್ತನೆ ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಕಪ್ಪತಗುಡ್ಡ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ಕಪ್ಪತಗುಡ್ಡ ವನ್ಯಜೀವಿ ಧಾಮವೂ ಆಗಿರುವುದಿರಂದ, ಅರಣ್ಯ ಪ್ರದೇಶದೊಳಗೆ ಪೂರ್ವಾನುಮತಿ ಪಡೆಯದೆ ಪ್ರವೇಶ ಮಾಡುವುದು ನಿಷಿದ್ಧ.

ಆದರೂ ನಿಸರ್ಗಾಸಕ್ತರು, ಪ್ರವಾಸಿಗರು ಕಪ್ಪತಗುಡ್ಡವನ್ನು ನೋಡಿ ಆನಂದಿಸಲಿ ಎಂದು ಒಂದಷ್ಟು ವಿನಾಯಿತಿ ನೀಡಲಾಗಿತ್ತು. ಇದರಿಂದ ಗುಡ್ಡದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಮತ್ತು ಅತಿಯಾದ ಮಳೆಯಿಂದ ಗುಡ್ಡದ ಮಣ್ಣು ಕುಸಿಯುತ್ತಿರುವುದರಿಂದ ಮುಂದಿನ ಆದೇಶದವರೆಗೆ ಡೋಣಿ ಮಾರ್ಗವಾಗಿ ಕಪ್ಪತ್ತಗುಡ್ಡ ಗಾಳಿಗುಂಡಿಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಕಪ್ಪತಹಿಲ್ಸ್ ವಲಯ ಅರಣ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ; ನೂಕು-ನುಗ್ಗಲು, ಗಲಾಟೆ, ಚುನಾವಣೆ ಮುಂದೂಡಿಕೆ

ಪೊಲೀಸರ ಜೊತೆಗೆ ವಾಗ್ವಾದ…..

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದು ಚುನಾವಣೆ ಮುಂದೂಡಿದ ಘಟನೆ ನಡೆದಿದೆ.

ತಾಲ್ಲೂಕು ಬಿದರಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿ ಆಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಅಭ್ಯರ್ಥಿಯ ಜಾತಿಯ ಪ್ರಮಾಣಪತ್ರದ ಕುರಿತು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಪೊಲೀಸರ ಜೊತೆಗೂ ಕೆಲ ಗ್ರಾಮಸ್ಥರು ವಾಗ್ವಾದ ನಡೆಸಿದರು.

ಚುನಾವಣಾ ಪ್ರಕ್ರಿಯೆ ನಡೆಯುವ ಕಚೇರಿಗೂ ನುಗ್ಗಲು ಮುಂದಾದ ಗ್ರಾಮಸ್ಥರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕೆಲವರು ಪೇದೆಯೊಬ್ಬನ್ನನ್ನು ಎಳೆದಾಡಿದ್ದಾರೆ. ಇದರಿಂದಾಗಿ ಇಡೀ ಗ್ರಾಮ ಪಂಚಾಯತಿ ಆವರಣ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಚುನಾವಣಾ ಮುಂದೂಡಲು ಒತ್ತಾಯಿಸಿ ಪ್ರತಿಭಟಿಸಿದರು.

ಕೊನೆಗೆ ಚುನಾವಣೆ ಮುಂದೂಡಲಾಗಿದೆ ಎಂದು ಚುನಾವಣಾ ಅಧಿಕಾರಿ ವಿಶ್ವನಾಥ ಅವರು ಘೋಷಿಸಿದಾಗ ಪ್ರತಿಭಟನೆ, ಆಕ್ರೋಶ ತಣ್ಣಗಾಯಿತು.

ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ಸ್ಥಳೀಯರ ಮನವೊಲಿಸಿ ಹೊರ ತಂದ ಪೊಲೀಸರು…..

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹದಗೆಟ್ಟ ರಸ್ತೆಯಿಂದ ಆಕ್ರೋಶಗೊಂಡ ಜನರು ನಗರಸಭೆ ಸದಸ್ಯರೊಬ್ಬರನ್ನು ಕೂಡಿ ಹಾಕಿದ ಘಟನೆ ಬೆಟಗೇರಿಯ ಬಣ್ಣದನಗರದಲ್ಲಿ ಜರುಗಿದೆ.

ಬೆಟಗೇರಿಯ ಮೂರನೇ ವಾರ್ಡ್ ನಲ್ಲಿ ಈ ಘಟನೆ ಜರುಗಿದ್ದು, ನಗರಸಭೆಯ ಬಿಜೆಪಿ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿದ್ದಾರೆ.

ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ. ಕೂಡಿ ಹಾಕಿ‌ ಮೂರು ಗಂಟೆಯಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದ್ರೂ ಅವರು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ವಾರ್ಡ್ ನಲ್ಲಿ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಹದಗೆಟ್ಟಿವೆ. ಈ ಕುರಿತು ಸದಸ್ಯನಿಗೆ ಹಲವಾರು ಬಾರಿ‌ ಮನವಿ ಮಾಡಿದ್ರೂ ಅವರು ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೇಳಿ ಬಂದವು.

ಹೀಗಾಗಿ ಇವತ್ತು ವಾರ್ಡ್ ಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ.

ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.

ಅಂದರ್-ಬಾಹರ್ ಜೂಜಾಟ; ಆರು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ತಂಡದ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ದಾಳಿ ಬಂಧಿಸಿದ್ದಾರೆ.

ಬಂಧಿತರನ್ನು ಪಂಚಾಕ್ಷರಿ ನಗರದ ಮೌನೇಶ್ ಗುರುಸಿದ್ದಪ್ಪ ಬಡಿಗೇರ, ಪಿ ಆಂಡ್ ಟಿ ಕ್ವಾರ್ಟರ್ಸ್ ನ ಸುಮಂತಕುಮಾರ್ ಮಂಜುನಾಥ್ ವಾಲ್ಮೀಕಿ, ವಿವೇಕಾನಂದ ನಗರದ ಪರಶುರಾಮ ಹನಮಂತಪ್ಪ ಸಂಗಟಿ, ಹಮಾಲರ ಪ್ಲಾಟ್ ನ ಮರ್ದಾನಸಾಬ ಖಾದರಸಾಬ ಕಾತರಕಿ, ನಿಸರ್ಗ ಬಡಾವಣೆಯ ರಾಜು ಗವಿಸಿದ್ದಪ್ಪ ಹಂಸನೂರ ಹಾಗೂ ರಮೇಶ್ ಹಾಲಸಿದ್ದಪ್ಪ ಅಳಗುಂಡಿ ಎಂದು ಗುರುತಿಸಲಾಗಿದೆ.

ಬಂಧಿತರು ಹಾತಲಗೇರಿ ರಿಂಗ್ ರೋಡ್, ಪಿಪಿಜಿ ಕಾಲೇಜ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಬಡಾವಣೆ ಠಾಣೆಯ ಪಿಎಸ್ಐ ವಗ್ಗರ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಬಂಧಿತರಿಂದ ನಗದು 4800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂಬರ್-0055/2023 ಕರ್ನಾಟಕ ಪೊಲೀಸ್ ಆಕ್ಟ್‌ 1963(U/s-87) ಎನ್.ಸಿ ನಂ.14/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕರ ಸಹಾಯಹಸ್ತ; ನವೀಕರಗೊಂಡ ಸಮೂಹ ಸಂಪನ್ಮೂಲ ಕೇಂದ್ರ ಉದ್ಘಾಟನೆ ಇಂದು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಿಥಿಲಾವಸ್ಥೆ ತಲುಪಿದ್ದ ಸಮೂಹ ಸಂಪನ್ಮೂಲ ಕೇಂದ್ರಗಳನ್ನು ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕ ಸಮೂಹವೇ ಸ್ವಯಂ ಪ್ರೇರಣೆಯಿಂದ ಲಕ್ಷಾಂತರ ರೂ ಖುರ್ಚು ಮಾಡಿ ನವೀಕರಣಗೊಳಿಸುವ ಕಾರ್ಯ ಮಾಡುತ್ತಿದ್ದು ಜು.27 ರಂದು ಗುರುವಾರ ನವೀಕರಣಗೊಂಡ ದೊಡ್ಡೂರಿನಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದ ಉದ್ಘಾಟನೆ ಜರುಗಲಿದೆ.

ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕರ ತರಬೇತಿ, ಕಾರ್ಯಾಗಾರ, ಸಭೆ ಸೇರಿ ಇಲಾಖೆಯ ಇತರೆಲ್ಲ ಕಾರ್ಯಕ್ರಮಗಳ ಅನಕೂಲಕ್ಕಾಗಿ ತಾಲೂಕಿನ ದೊಡ್ಡೂರ, ಲಕ್ಷ್ಮೇಶ್ವರ, ಪು.ಬಡ್ನಿ, ಸೂರಣಗಿ, ಶಿಗ್ಲಿ ಒಟ್ಟು 5 ಕ್ಲಸ್ಟರ್ ವಿಭಾಗದಲ್ಲಿ 1997 ರಲ್ಲಿ ಡಿಪಿಇಪಿ ಯೋಜನೆಯಡಿ ಈ ಕಟ್ಟಡಗಳು ನಿರ್ಮಾಣಗೊಂಡಿದ್ದವು.

ಆದರೆ ಇವುಗಳ ನಿರ್ವಹಣೆ, ದುರಸ್ಥಿಗಾಗಿ ಯಾವುದೇ ಅನುದಾನ ಇಲ್ಲದ್ದರಿಂದ ಕಾಲಕ್ರಮೇಣ ಈ ಕಟ್ಟಡಗಳು ಶಿಥಿಲಗೊಂಡು ನಿರುಪಯುಕ್ತ ಮತ್ತು ದುರುಪಯೋಗವಾಗಿದ್ದವು. ಹಾಳಾಗುತ್ತಿರುವ ಕಟ್ಟಡಗಳನ್ನು ದುರಸ್ಥಿಪಡಿಸುವ ಬಗ್ಗೆ ಆಸಕ್ತಿ ತೋರಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿಗಳು ನೀಡಿದ ಸಲಹೆ-ಸೂಚನೆ ಹಿನ್ನಲೆ ಪ್ರೇರಿತರಾದ ಆಯಾ ಕ್ಲಸ್ಟರ್ ಸಿಆರ್‌ಪಿಗಳು ಸ್ಥಳೀಯ ಗ್ರಾಪಂ, ಸಂಬಂಧಿತ ಮುಖ್ಯ ಶಿಕ್ಷಕರು, ಶಿಕ್ಷಕರ ಸಹಾಯ-ಸಹಕಾರದಿಂದ ಈ ಕಟ್ಟಡಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡೂರಿನಲ್ಲಿನ ಸಿಆರ್‌ಸಿ ಕೇಂದ್ರವನ್ನು ಸಿಆರ್‌ಪಿ ಆರ್.ಎಚ್ ರಾಜೂರ ಅವರ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ 1 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ನವೀಕರಣಗೊಳಿಸಿದ್ದಾರೆ. ಪು.ಬಡ್ನಿಯಲ್ಲಿ ಹಾಳಾಗಿದ್ದ ಕಟ್ಟಡವನ್ನು ಸಿಆರ್‌ಪಿ ಗಿರೀಶ ನೇಕಾರ 1.5 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಿದ್ದಾರೆ. ಶಿಗ್ಲಿಯಲ್ಲಿ ಜ್ಯೋತಿ ಗಾಯಕವಾಡ, ಲಕ್ಷ್ಮೇಶ್ವರದಲ್ಲಿ ಉಮೇಶ ನೇಕಾರ, ಸೂರಣಗಿಯಲ್ಲಿನ ಕಟ್ಟಡವನ್ನು ಲೊಕೇಶ ಮಠದ ನೇತೃತ್ವದಲ್ಲಿ ನವೀಕರಣಕ್ಕೆ ಅಣಿಯಾಗಿರುವುದು ಶ್ಲಾಘನೀಯ.

ಶಾಲೆಯನ್ನೇ ದೇವಾಲಯವೆಂದು, ಮಕ್ಕಳನ್ನೇ ದೇವರೆಂದು ಪೂಜ್ಯನೀಯ ಭಾವನೆಯಿಂದ ಶಿಕ್ಷಣ ಸೇವೆ ಮಾಡುವ ಶಿಕ್ಷಕರು ತಮ್ಮ ಒಂದು ಸಲಹೆಯನ್ನು ಅತ್ಯಂತ ಆಸಕ್ತಿಯಿಂದ ಸ್ವೀಕರಿಸಿ ಕ್ಷೇತ್ರವ್ಯಾಪ್ತಿಯಲ್ಲಿ ಶಿಥಿಲಗೊಳ್ಳುತ್ತಿರುವ ಸಿಆರ್‌ಸಿ ಕಟ್ಟಡಗಳನ್ನು ತಮ್ಮ ಸ್ವಂತದ ಮತ್ತು ಅಲ್ಪ ದಾನಿಗಳ ಸಹಾಯದಿಂದ ಅಭಿವೃದ್ಧಿಗೊಳಿಸುವ ಮೂಲಕ ಇಲಾಖೆಯ ಅಳಿಲು ಸೇವೆ ಮಾಡಿರುವುದು ಖುಷಿ ತಂದಿದೆ. ಪಾಲುದಾರ ಎಲ್ಲ ಸಿಆರ್‌ಪಿ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುವೆ.

-ಜಿ.ಎಂ. ಮುಂದಿನಮನಿ, ಬಿಇಓ

ಕುರಿಗಳಿಗೆ ಕಾರ್ ಡಿಕ್ಕಿ; ಎಂಟು ಕುರಿಗಳು ಸ್ಥಳದಲ್ಲಿಯೇ ಸಾವು, ಲಕ್ಷಾಂತರ ರೂ. ಹಾನಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಗೆ ಕುರಿದೊಡ್ಡಿಗೆ ಹೋಗುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎಂಟು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು, ಹನ್ನೆರಡು ಕುರಿಗಳಿಗೆ ತೀವ್ರವಾಗಿ ಗಾಯವಾಗಿರುವ ಘಟನೆ ಜರುಗಿದೆ.

ತಾಲೂಕಿನ ಡಂಬಳ ಬಳಿ ಈ ಘಟನೆ ನಡೆದಿದ್ದು, ಕಾರ್ ನಂಬರ್-ka-25,ma-3581 ನೇದ್ದರ ಚಾಲಕ ಮುಂಡರಗಿಯ ನಾಗರಾಜ್ ಹಾವಿನಾಳ ಎಂಬಾತನು ಗದಗ ಕಡೆಯಿಂದ ಮುಂಡರಗಿಯತ್ತ ತನ್ನ ಕಾರನ್ನು ವೇಗವಾಗಿ ಚಲಾಯಿಸಿಕೊಂಡು, ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಕುರಿಗಳಿಗೆ ಡಿಕ್ಕಿ ಪಡಿಸಿದ್ದಾರೆ.

ಈ ಘಟನೆಯಿಂದ ಮೂರು ಲಕ್ಷ, ಎಂಟು ಸಾವಿರ ರೂ.ಗಳು ಹಾನಿಯಾಗಿದೆ ಎಂದು ಡಂಬಳದ ಬಸವರಾಜ್ ಕರಿಗಾರ ಎಂಬುವರು ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು 0115/2023, IPC 1860(U/s-279) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ; ಮೂವರು ಬಂಧನ

ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು…..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ವಾಹನ ಸಮೇತ ಸೆರೆ ಹಿಡಿಯಲಾಗಿದೆ.

ಸೋಮವಾರ ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ತಾಲೂಕಿನ ತಂಗೋಡ ದಾಟಿ ಹೊಳೆಇಟಗಿ ಕಡೆಗೆ ಅಶೋಕ್ ಲೇಲ್ಯಾಂಡ್ ಕಂಪನಿಯ ದೋಸ್ತ್ ಪ್ಲಸ್ ಎಲ್.ಎಸ್ ಗೂಡ್ಸ್ ವಾಹನ ನಂಬರ್ ka26/b3123 ನೇದ್ದರ ಚಾಲಕ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ನಾಗರಾಜ್ ತಂದೆ ಹನಮಂತಪ್ಪ ಸಣ್ಣಕಲ್ಲ, ಮುಂಡರಗಿ ಪಟ್ಟಣದ ಮಹಮ್ಮದ್ ಇರ್ಪಾನ್ ತಂದೆ ಭಾಷಾಸಾಬ ಲಕ್ಕುಂಡಿ ಹಾಗೂ ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದ ಲಕ್ಷ್ಮಣ ತಂದೆ ಗರಡಪ್ಪ ಹರಿಜನ ಎಂಬ ಮೂವರು ಎಲ್ಲಂದಿಲೋ ಅಕ್ರಮವಾಗಿ ಅಕ್ಕಿ ಖರೀದಿಸಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದಾರೆ.

ಸುಮಾರು 83,300ರೂ.ಗಳ ಮೌಲ್ಯದ 24ಕ್ವಿಂಟಾಲ್ 50ಕೆಜಿ ತೂಕದ 49 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು.

ಈ ಕುರಿತು ಈ ಮೂವರು ಆರೋಪಿಗಳ ಮೇಲೆ ಕಲಂ:03 ಮತ್ತು 07. ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:18 ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 2016ರ ಪ್ರಕಾರ ಶಿರಹಟ್ಟಿ ಆಹಾರ ನಿರೀಕ್ಷಕರಾದ ಮಂಜುಳಾ ಈರಪ್ಪ ಆಕಳದ ದೂರು ನೀಡಿದ್ದು, c/no-0146/2023 ದಾಖಲಾಗಿದೆ.

ಗದಗ ಜಿಲ್ಲಾ ಪೊಲೀಸರ ವಿಶೇಷ ಕಾರ್ಯಾಚರಣೆ; 91 ದೋಷಪೂರಿತ ಸೈಲೆನ್ಸರ್ ನಾಶ, ಅಪ್ರಾಪ್ತರ ವಿರುದ್ಧ ಪ್ರಕರಣ

0

ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ; ಎಸ್ಪಿ ನೇಮಗೌಡ….

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ವಿವಿಧ ಭಾಗಗಳಲ್ಲಿ ಕರ್ಕಶವಾಗಿ, ಭಯಬೀಳುವಂತೆ ಶಬ್ಧ ಮಾಡುತ್ತ, ಸಾರ್ವಜನಿಕರಿಗೆ ಕಿರಿಕಿರಿ ಹುಟ್ಟಿಸುತ್ತಿದ್ದ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸಮ್ಮುಖದಲ್ಲಿ ಶನಿವಾರ ಪೊಲೀಸರು ನಾಶಪಡಿಸಿದರು.

ಪೊಲೀಸ್ ಇಲಾಖೆಯ ತಪಾಸಣೆಯ ಸಮಯದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆಯಾದ ದೋಷಪೂರಿತ ಸೈಲೆನ್ಸರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಹೀಗೆ ವಶಪಡಿಸಿಕೊಂಡ ಎಲ್ಲ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮೂಲಕ ಸಂಚಾರ ಪೊಲೀಸ್ ಠಾಣೆಯ ಪಕ್ಕದಲ್ಲಿ ನಾಶ ಮಾಡಲಾಯಿತು.
ಈ ಕಾರ್ಯಾಚರಣೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಜಿಲ್ಲೆಯಾದ್ಯಂತ ಸತತ ಮೂರು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ, ದ್ವಿಚಕ್ರವಾಹನಗಳ ಗ್ಯಾರೇಜ್, ಅಟೋಮೊಬೈಲ್ ಅಂಗಡಿಗಳಲ್ಲಿನ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

ಜಿಲ್ಲೆಯಾದ್ಯಂತ ಒಟ್ಟು 27 ಕಡೆಗಳಲ್ಲಿ ತಪಾಸಣೆ ನಡೆಸಿ, 85 ದೋಷಪೂರಿತ ಸೈಲೆನ್ಸರ್‌ಗಳನ್ನು ಪತ್ತೆ ಮಾಡಲಾಗಿತ್ತು. ಕಾರ್ಯಾಚರಣೆಯ ವೇಳೆ 6 ಅಂಗಡಿಗಳಲ್ಲಿ ಇದ್ದ ದೋಷಪೂರಿತ ಸೈಲೆನ್ಸರ್‌ಗಳೂ ಸೇರಿದಂತೆ ಒಟ್ಟು 91 ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಯಿತು. ಇದಲ್ಲದೆ, ಅಪ್ರಾಪ್ತ ಚಾಲಕರ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ ಎಂದರು.

ಈ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ, ಬಹುಮಾನವನ್ನೂ ನೀಡಲಾಗುವುದು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಇನ್ನೂ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ತಿಳಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೆಲ ಪ್ರಯೋಗಗಳನ್ನೂ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಗದಗ

ವಿದ್ಯುತ್ ಅವಘಡ; ಜಾನುವಾರಗಳ ಸಜೀವ ದಹನ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ವಿದ್ಯುತ್ ಅವಘಡದಿಂದ ಎರಡು ಹಸು ಹಾಗೂ ನಾಲ್ಕು ಕರುಗಳು ಸಜೀವ ದಹನವಾದ ಘಟನೆ ಪಟ್ಟಣದ ಅಯ್ಯನಕೆರೆ ಬಳಿ ಶುಕ್ರವಾರ ಜರುಗಿದೆ.

ಗೌಳಿ ನಾಗಪ್ಪ ಅವರಿಗೆ ಸೇರಿದ್ದ ದನದ ಕೊಟ್ಟಿಗೆಯಲ್ಲಿಯ ಜಾನುವಾರುಗಳಿಗೆ ಎಂದಿನಂತೆ ಅವರ ಮಗ ಗೌಳಿ ನಿಂಗಪ್ಪ ಗುರುವಾರ ರಾತ್ರಿ ಮೇವು, ನೀರು ಹಾಕಿ ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ಎರಡು ಹಸುಗಳು ಹಾಗೂ ನಾಲ್ಕು ಕರುಗಳು ಮೃತಪಟ್ಟಿವೆ.

ಐದಾರು ಲಕ್ಷದ ರಾಸುಗಳು ವಿದ್ಯುತ್‌ನಿಂದ ಉಂಟಾದ ಅವಘಡಕ್ಕೆ ಬಲಿಯಾಗಿವೆ. ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ, ಪಶುವೈದ್ಯಾಧಿಕಾರಿ ಡಾ.ಶಿವಕುಮಾರ, ಬೆಸ್ಕಾಂ ಅಭಿಯಂತರರು ಹಾಗೂ ಪಿಎಸ್‌ಐ ಶಾಂತಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ; ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಖೆಡ್ಡಾಗೆ ಬಿದ್ದ ಆರೋಪಿಗಳು…..

ಪ್ರಕರಣ ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಪ್ರಶಂಸೆ…..

ವಿಜಯಸಾಕ್ಷಿ ಸುದ್ದಿ, ಗುರುಮಠಕಲ್

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಪ್ರಿಯಕರನ ಜೊತೆಗೆ ಸೇರಿ ಚಟ್ಟ ಕಟ್ಟಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಹೋಗಿದ್ದ ಪ್ರಕರಣವನ್ನು ಗುರುಮಠಕಲ್ ಪೊಲೀಸರು ಭೇದಿಸಿದ್ದಾರೆ.

ಪ್ರಕರಣದ ವಿವರ: 16-06-2023 ರಂದು
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಂಕಲ್ ಗ್ರಾಮದ ಜಮೀನೊಂದರ ಮರದಲ್ಲಿ ವ್ಯಕ್ತಿಯೊಬ್ಬನ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನನ್ನು ಅದೇ ಗ್ರಾಮದ ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಎಂದು ಗುರುತಿಸಲಾಗಿತ್ತು.

ಮೃತನ ಸಹೋದರಿ ಕಾಶಮ್ಮ ಮೃತ ಕಾಶಪ್ಪನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

08/2023 ಕಲಂ 174(ಸಿ) ಸಿ.ಆರ್. ಪಿ. ಸಿ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡ ಗುರುಮಠಕಲ್ ಪೊಲೀಸರು, ಪ್ರಕರಣ ಭೇದಿಸಲು ತಂಡ ರಚಸಿ ತನಿಖೆ ಕೈಗೊಂಡ ಪೊಲೀಸರು, ಕೊಲೆಗೀಡಾದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿಯನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಅನಿತಾ ಹಾಗೂ ನಾಗೇಶ್ ಜೂನ್ 15 ರಂದು ರಾತ್ರಿ ಕಾಶಪ್ಪ ಮಲಗಿಕೊಂಡಾಗ ಆತನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೈಕಿನಲ್ಲಿ ಸಮೀಪದ ಜಮೀನೊಂದರಲ್ಲಿ ತೆಗೆದುಕೊಂಡು ಹೋಗಿ ಮರಕ್ಕೆ ಶವವನ್ನು ತೂಗು ಹಾಕಿ ಕಾಶಪ್ಪನೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಹೋಗಿದ್ದರು ಎನ್ನಲಾಗಿದೆ.

ಎಸ್ಪಿ ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಗುರುಮಠಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದೌಲತ್ ಎನ್. ಕೆ ಅವರ ನೇತೃತ್ವದಲ್ಲಿ ಪಿಎಸ್ಐ ಭೀಮರಾಯ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ, ವಿಶ್ವನಾಥರೆಡ್ಡಿ, ದೇವೆಂದ್ರ, ನರೇಂದ್ರರೆಡ್ಡಿ, ರಹೀಮ್, ಮಹ್ಮದ ಶರೀಫ, ನರಸಿರೆಡ್ಡಿ ಸಾಹೇಬರೆಡ್ಡಿ, ಅಶೋಕ, ಹಾಗೂ ರಾಮಲಿಂಗಪ್ಪ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡ ಸ್ಥಳೀಯರಿಂದ ಹಾಗೂ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ಕೊಲೆ ಮಾಡಿದ್ದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ತನಿಖಾ ತಂಡಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!