Home Blog Page 3272

ಪ್ರಧಾನಿ ಮೋದಿ ಪ್ರಚಾರ ಸಂದರ್ಭದಲ್ಲಿಯೇ ಆತಂಕಕಾರಿ ಅಡಿಯೋ ಬಹಿರಂಗ: ತನಿಖೆಗೆ ಸಿಎಂ ಆದೇಶ!

ಅನಿಲ್ ಬಾಸೂರ್, ವಿಶೇಷ ಪ್ರತಿನಿಧಿ, ಬೆಂಗಳೂರು

ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿಯಿದ್ದು, ದಿನದಿಂದ ದಿನಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಜೋರಾಗಿದೆ. ಚುನಾವಣೆ ಪ್ರಚಾರಾರ್ಥವಾಗಿ ಪ್ರಧಾನಿ ಮೋದಿ ಬೆಂಗಳೂರು ಸೇರಿದಂತೆ ಇವತ್ತು ರಾಜ್ಯದಲ್ಲಿ ರೋಡ್ ಶೋ, ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರದ್ದು ಎಂದು ಆರೋಪಿಸಲಾಗಿರುವ ಅಡಿಯೋ ಸಂಚಲನವನ್ನುಂಟು ಮಾಡಿದೆ.

ಅಷ್ಟಕ್ಕೂ ಅಡಿಯೋ ಯಾರದ್ದು? ಅಡಿಯೋದಲ್ಲಿ ಏನಿದೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ಮಾಡಿರುವುದು ಯಾಕೆ? ಮುಂದಿದೆ ಸಂಪೂರ್ಣ ಮಾಹಿತಿ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹತ್ಯೆಗೆ ಸಂಚು?:

“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ” ಎಂಬ ಗಂಭೀರ ಆರೋಪವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, “ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ” ಎಂದು ರಣದೀಪ್ ಸಿಂಗ್ ಸುರ್ಜೆವಾಲ ಗಂಭೀರ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತ, ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಈ ಸಂಚು ರೂಪಿಸುತ್ತಿದೆ” ಎಂದು ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

ಅಡಿಯೋದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಣಿಕಂಠ ರಾಠೋಡ್, “ನಾನು ಅವರ ಹೆಂಡ್ರು, ಮಕ್ಕಳನ್ನ ಸಾಫ್ (ಕೊಲ್ಲುತ್ತೇನೆ ಎಂಬರ್ಥದಲ್ಲಿ) ಮಾಡ್ತೇನ್ಲೆ. ಅವರ ಫೋನ್ ನಂಬರ್ ಇಲ್ಲಲೇ ನನ್ನತ್ರ. ಖರ್ಗೆ ನಂಬರ್ ನನ್ನತ್ರ ಇದ್ದಿದ್ರೆ ನಾನು ಬಾಯಿಗೆ ಬಂದಂಗ ಮೊಬೈಲದಾಗ ಬೈತೇನ್ಲೇ” ಎಂದಿರುವುದು ಇದೆ.

ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ..

ಇನ್ನು ಅಡಿಯೊ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇದನ್ನು ಗಂಭೀರವಾಗಿ ತೆಗೆದುಕೊಳ್ಳೂತ್ತೇವೆ. ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಿಸುತ್ತೇವೆ” ಎಂದಿದ್ದಾರೆ.

ಸೌಹಾರ್ಧ ರಾಜಕೀಯದ ನಮ್ಮ ನಾಡು ಎತ್ತ ಸಾಗುತ್ತಿದೆ?

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ರಾಜಕೀಯ ಹತ್ಯೆ ಅಥವಾ ಮರ್ಡರಸ್ ಪೊಲಿಟಿಕ್ಸ್ ತುಂಬಾ ಕಡಿಮೆ. ಚುನಾವಣೆ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾರಾದರೂ, ನಂತರ ಅತ್ಯಂತ ಸುಮಧುರ ರಾಜಕೀಯ ಬಾಂಧವ್ಯ ಹೊಂದಿರುವುದು ಹಲವು ಬಾರಿ ಕಂಡು ಬಂದಿದೆ.

ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಸಿದ್ದರಾಮಯ್ಯನವರ ಪುತ್ರ ಅಕಾಲಿಕ ಮರಣಕ್ಕೀಡಾದಾಗ ಎಲ್ಲ ಪಕ್ಷಗಳ ರಾಜಕೀಯ ನಾಯಕರು ಅವರಿಗೆ ಸಮಾಧಾನ ಹೇಳಿ ನೋವಿನಲ್ಲಿ ಭಾಗಿಯಾಗಿದ್ದರು.

ಇಂತಹ ಹಲವು ಪ್ರಸಂಗಗಳಲ್ಲಿ ನಮ್ಮ ನಾಡಿನ ರಾಜಕಾರಣಿಗಳ ಪ್ರಬುದ್ಧತೆ ಮತ್ತು ಒಳ್ಳೆಯತನ ಕಾಣಲು ಸಿಕ್ಕಿದೆ. ಆದರೆ ಇದೀಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಯುವ ಅಭ್ಯರ್ಥಿಯೊಬ್ಬರದ್ದು ಎನ್ನಲಾಗಿರುವ ದೂರವಾಣಿ ಸಂಭಾಷಣೆ ಈ ಪರಂಪರೆಗೆ ಇತೀಶ್ರೀ ಹಾಡುವ ಆತಂಕ ನಾಡಿನ ಜನರಿಗೆ ಎದುರಾಗಿದೆ. ಈ ಕುರಿತು ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಮಾಡಿರುವುದು ಗಂಭೀರತೆಗೆ ಸಾಕ್ಷಿಯಾಗಿದೆ.

ಅಭ್ಯರ್ಥಿ ಬಗ್ಗೆ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿತ್ತು…..

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ್ ರಾಠೋಡ್ ಅವ್ರನ್ನ ಕಣಕ್ಕಿಳಿಸಲು ಆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.

ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಮಣಿಕಂಠ್ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕೂ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ವಯಸ್ಸು 26 ಆಗಿದ್ದರೂ ಅವರ ಮೇಲೆ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂಬುದು ಈ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಮಣಿಕಂಠ ರಾಠೋಡ್ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಬಂಧನಕ್ಕೊಳಗಾಗಿದ್ದ ಮಣಿಕಂಠ

ಈಗ ಬಿಜೆಪಿ ಅಭ್ಯರ್ಥಿ ಆಗಿರುವ ಮಣಿಕಂಠ ರಾಠೋಡ್ ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬೇಲ್ ಮೇಲೆ ಬಿಡುಗಡೆ ಆಗಿದ್ದರು. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಬೇಕು ಎಂಬ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು.

ಆಗ ಹೇಳಿಕೆ ಕೊಟ್ಟಿದ್ದ ಮಣಿಕಂಠ ರಾಠೋಡ್, “”ನೀವು (ಪ್ರಿಯಾಂಕ್ ಖರ್ಗೆ) ಎಕೆ-47 ಗನ್‌ನಿಂದ ನಮ್ಮನ್ನು ಹೊಡೆದರೆ ನಾವು ಸಾಯಲು ಸಿದ್ಧರಿದ್ದೇವೆ. ಜೊತೆಗೆ ನಿಮ್ಮನ್ನು ಹೊಡೆದುರುಳಿಸಲು ಸಿದ್ಧರಿದ್ದೇವೆ” ಎಂದು ಅವಾಜ್ ಹಾಕಿದ್ದರು. ಈ ಕುರಿತು ಜೀವ ಬೆದರಿಕೆ ಹಾಕಿದ್ದಕ್ಕಾಗಿ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಮಣಿಕಂಠ ರಾಠೋಡ್ ಬಂಧನವಾಗಿತ್ತು. ನಂತರ ಬೇಲ್ ಮೇಲೆ ಅವರು ಹೊರಗೆ ಬಂದಿದ್ದರು.

ಆದರೆ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಿಂಚಿನ ಪ್ರಚಾರ ಮಾಡುತ್ತಿರುವಾಗಲೇ ಇಂಥಹ ಬೆಳವಣಿಗೆ ಆಗಿರುವುದು ವಿಪರ್ಯಾಸ. ಒಟ್ಟಾರೆ ಪ್ರಕರಣದ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆತಾಗಲಿ ಎಂಬುದು ನಾಡಿದ ಪ್ರಜ್ಞಾವಂತ ಮತದಾರರ ಒತ್ತಾಯ.

ಹೈದರ್ ನದಾಫ್ ಹತ್ಯೆ ಖಂಡನೀಯ; ತಕ್ಷಣ ಕೊಲೆಗಡುಕರನ್ನು ಬಂಧನಕ್ಕೆ ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ನದಾಫ್ ಅಗ್ರಹ

ವಿಜಯಸಾಕ್ಷಿ ಸುದ್ದಿ, ನವಲಗುಂದ

ವಿಜಯಪುರ ಜಿಲ್ಲೆಯ ಪಿಂಜಾರ ನದಾಫ್ ಸಮುದಾಯದ ಮುಖಂಡ ಹೈದರ್ ನದಾಫ್ ಹತ್ಯೆ ಖಂಡನೀಯವಾಗಿದ್ದು, ತಕ್ಷಣ ಕೊಲೆಗಡುಕರನ್ನು ಬಂಧಿಸಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷರಾದ ಡಾ. ಅಬ್ದುಲ್ ರಜಾಕ್ ನದಾಫ್ ಆಗ್ರಹಿಸಿದ್ದಾರೆ.

ಈ ಕುರಿತಾಗಿ ನವಲಗುಂದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರಸಭೆ ಪಕ್ಷೇತರ ಸದಸ್ಯೆ ನಿಶತ್ ನದಾಫ್ ಅವರ ಪತಿ ಹೈದರ್ ನದಾಫ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು.

ಕೊಲೆಗಡುಕರ ಪಕ್ಷ, ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಇದು ಅಲೆಮಾರಿ ಸಮುದಾಯವನ್ನು ಕುಗ್ಗಿಸುವ ಹುನ್ನಾರವಾಗಿದ್ದು, ಕೂಡಲೇ ಇವರನ್ನು ಬಂಧಿಸಬೇಕೆಂದು ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ನದಾಫ್ ಒತ್ತಾಯಿಸಿದ್ದಾರೆ.

ನೀರಿನ ಪಂಪ್‌ಹೌಸ್‌ ಕೀ ಮನೆಯಲ್ಲಿಟ್ಟುಕೊಂಡು ಬಿಜೆಪಿ ಪರ ಪ್ರಭಾವ ಬೀರುವ ಉದ್ದೇಶ; ನಗರಸಭೆ ಸದಸ್ಯನ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ವಾರ್ಡ್‌ನ ಜನರೆಲ್ಲರೂ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದರೆ ಮಾತ್ರ ತಮ್ಮ ವಾರ್ಡ್‌ನಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತದೆ ಎಂಡು ಆಮಿಷ ಒಡ್ಡುವ ಉದ್ದೇಶದಿಂದ ನೀರಿನ ಪಂಪ್‌ಹೌಸ್‌ ಕೀಯನ್ನು ಕೊಡದೇ ತೊಂದರೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಬೆಂಬಲಿತ ನಗರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ-ಬೆಟಗೇರಿ ನಗರಸಭೆಯ, ಗದಗ-66 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್‌ ನಂ.13ಕ್ಕೆ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸದಸ್ಯ ಮುತ್ತು ಮುಶಿಗೇರಿ ಮೇ.1ರಂದು ಮುಂಜಾನೆ 9.30ರ ಸುಮಾರಿಗೆ ವಾರ್ಡ್‌ನ ಕೆಲವರು ಕಾಂಗ್ರೆಸ್‌ ಪಕ್ಷ ಸೇರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡದಿದ್ದುದರಿಂದ ಪ್ರಭಾವ ಬೀರುವ ಉದ್ದೇಶ ಹೊಂದಿದ್ದರು.

ಈ ಕಾರಣಕ್ಕಾಗಿ ತಮ್ಮ ವಾರ್ಡ್‌ನ ನೀರಿನ ಪಂಪ್‌ಹೌಸ್‌ ಕೀಯನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪಕ್ಷದ ಪರವಾಗಿ ಪ್ರಭಾವ ಬೀರಲು ಮುಂದಾಗಿದ್ದು, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಆರ್.‌ ನದಾಫ್‌ ಈ ಬಗ್ಗೆ ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದರು.

ಈ ಕುರಿತು ಅಪರಾಧ: 0030/2023, REPRESENTATION OF PEOPLE ACT, 1951 & 1988ರ ಕಲಂ 123(2), ಐಪಿಸಿ ಸೆಕ್ಷನ್‌ 171(ಇ) ಕಲಂ123(2) ಅಡಿಯಲ್ಲಿ ನ್ಯಾಯಾಲಯದ ಅನುಮತಿಯಂತೆ ಬೆಟಗೇರಿ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್:‌ ಚಂದ್ರು ಲಮಾಣಿ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ, ನೀತಿ ಸಂಹಿತೆ ಉಲ್ಲಂಘಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡ ಅಪರಾಧದ ಬಗ್ಗೆ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೇ.1ರಂದು ಸಂಜೆ 6.33ರ ವೇಳೆಗೆ ʻಮೇ.1, ವಿಶ್ವ ಕಾರ್ಮಿಕ ದಿನ. ಶ್ರಮಜೀವಿಗಳಿಗೆ ವಿಶ್ವಕಾರ್ಮಿಕ ದಿನಾಚರಣೆಯ ಶುಭಾಶಯಗಳುʼ ಎಂಬ ಜಾಹಿರಾತು ಹಂಚಿಕೊಂಡು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು.

ಈ ಬಗ್ಗೆ ಶಿರಹಟ್ಟಿಯ ಚುನಾವಣಾಧಿಕಾರಿ ಎಲ್.ಗೋಪಾಲ ನಾಯಕ್‌ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಸಿದ್ದು, ಅಪರಾಧ: 0056/2023, ಐಪಿಸಿ ಕಲಂ: 171(ಎಚ್)‌ ಅಡಿಯಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಡರಾತ್ರಿ ಚಾಕು ಇರಿತ; ಮೆಕ್ಯಾನಿಕಲ್ ಗೆ ಆರು ಬಾರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ……..

ಚಿಂತಾಜನಕ ಸ್ಥಿತಿಯಲ್ಲಿ ಗಾಯಾಳು…ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ….

ವಿಜಯಸಾಕ್ಷಿ ಸುದ್ದಿ, ಗದಗ

ಆರೋಪಿಯೊಬ್ಬ ಎದುರು ಮನೆಯ ವ್ಯಕ್ತಿಯೊಬ್ಬನಿಗೆ ಹೊಟ್ಟೆಯ ಭಾಗಕ್ಕೆ ಆರು ಬಾರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಡಂಬಳ ನಾಕಾ ಬಳಿ ಇರುವ ಎಸ್ ಬಿ ಗಾರ್ಡನ್ ಹತ್ತಿರ ಇರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ಇಮಾಮ್ ಹುಸೇನ್ ಕಾಗದಗಾರ ಎಂಬ ಮೆಕ್ಯಾನಿಕಲ್ ತೀವ್ರ ಗಾಯಗೊಂಡು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

76 ಪ್ಲಾಟ್ ನಿವಾಸಿ ಕೆಂಚಪ್ಪ ಎಂಬ ಆರೋಪಿ ಈ ದುಷ್ಕತ್ಯ ಎಸೆಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ಈ ಕುರಿತು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಭಜರಂಗದಳ ಬ್ಯಾನ್ ಬಗ್ಗೆ ಮಾತಾಡಲ್ಲ; ಜಗದೀಶ್ ಶೆಟ್ಟರ್

ಅಷ್ಟಕ್ಕೂ ಬ್ಯಾನ್ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ…..

ವಿಜಯಸಾಕ್ಷಿ ಸುದ್ದಿ, ನರಗುಂದ

ಭಜರಂಗದಳವನ್ನು ನಿಷೇಧಿಸುವ ಕುರಿತು ರಾಜ್ಯಾದ್ಯಂತ ಚರ್ಚೆಗಳಾಗುತ್ತಿವೆ. ಈ ಬಗ್ಗೆ ನರಗುಂದದಲ್ಲಿ ಪ್ರತಿಕ್ರಿಯಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಪಕ್ಷದ ವೇದಿಕೆಯಲ್ಲಿಯೇ ಇದರ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.

ಭಜರಂಗದಳದ ನಿಷೇಧದ ಕುರಿತು ಚರ್ಚೆಗಳಾಗುತ್ತಿವೆ. ಬ್ಯಾನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಹಿರಿಯರು, ಪ್ರಣಾಳಿಕೆ ರಚನಾ ಸಮಿತಿಯ ಸದಸ್ಯರೂ ಆದ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿ ಹೇಳಿಕೆ ನೀಡಿದ್ದಾರೆ.

ಹೀಗಿರುವಾಗ, ಬ್ಯಾನ್ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಇಷ್ಟಕ್ಕೂ, ಬ್ಯಾನ್ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ನನ್ನ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಆರ್ ಯಾವಗಲ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು; ಗುತ್ತಿಗೆದಾರನ ವಿರುದ್ಧ ಕೇಸ್

ಟ್ರಾಕ್ಟರ್ ಮಾಲೀಕನ ವಿರುದ್ಧವೂ ಪ್ರಕರಣ…..

ವಿಜಯಸಾಕ್ಷಿ ಸುದ್ದಿ, ರೋಣ

ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನಾಫಲಕಗಳನ್ನು ಅಳವಡಿಸದೇ, ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದ್ದು, ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ಹಾಗೂ ಟ್ರಾಕ್ಟರ್‌ ಮಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ತಾಲೂಕಿನ ಹೊಳೆಆಲೂರ-ಹೊಳೆಮಣ್ಣೂರ ರಸ್ತೆಯ ನಡುವೆ ಗಾಡಗೋಳಿ ಸಮೀಪದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗುತ್ತಿತ್ತು. ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಮತ್ತು ಸೂಚನಾ ಫಲಕಗಳನ್ನೂ ಅಳವಡಿಸಿರಲಿಲ್ಲ.

ಬದಲಾಗಿ, ರಸ್ತೆಗೆ ಅಡ್ಡಲಾಗಿ ಟ್ರಾಲಿ ಸಹಿತ ಟ್ರಾಕ್ಟರ್‌ ಒಂದನ್ನು ನಿಲ್ಲಿಸಲಾಗಿತ್ತು. ಏ.30ರಂದು ರಾತ್ರಿ 7 ಗಂಟೆಯ ಸುಮಾರಿಗೆ ದೂರುದಾರರ ಸಹೋದರ, ಮಾಳವಾಡದ ಠಕ್ಕಪ್ಪ ಭರಮಪ್ಪ ಚಲವಾದಿ(28) ಕೆಲಸ ಮುಗಿಸಿ ಬೈಕ್‌ನಲ್ಲಿ ಅದೇ ರಸ್ತೆಯಲ್ಲಿ ಹಿಂದಿರುಗಿ ಬರುತ್ತಿದ್ದರು.

ಈ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರ ಹಾಗೂ ಟ್ರಾಕ್ಟರ್‌ ಮಾಲಕನ ನಿರ್ಲಕ್ಷ್ಯತನವೇ ಕಾರಣವೆಂದು ಮೃತರ ಸಹೋದರ ದೂರು ದಾಖಲಿಸಿದ್ದಾರೆ.

ಅಪರಾಧ 0069/2023, indian motor vehicles act-1988 ರ ಕಲಂ 177, ಐಪಿಸಿ 1860ರ ಕಲಂ 279,283,304(ಎ)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ರೋಣ ಪೊಲೀಸರು ತನಿಖೆ ನಡೆಸಿದ್ದಾರೆ.

ಉದ್ಯೋಗ ಕೊಡಿಸುತ್ತೇವೆಂದು ಹಣ ಪಡೆದು ಸಾಫ್ಟ್‌ವೇರ್ ಇಂಜಿನಿಯರ್ ಗೆ ಮೋಸ…….

ತ್ರಿಶಾ ಸೇರಿ ಹಲವರಿಂದ ಮೋಸ…….

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚೆಗೆ ಉದ್ಯೋಗವರಸಿ ಮೋಸಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ಹಣ ಕಳೆದುಕೊಂಡ ಬಗ್ಗೆ ಪ್ರಕರಣಗಳು ನಡೆಯುತ್ತಲೇ ಇವೆ.
ಇಂಥದ್ದೇ ಪ್ರಕರಣವೊಂದು ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದ್ದು, ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸೋಮೇಶ್ವರ ನಗರದ ದೂರುದಾರ ಅಭಿಷೇಕ್ ಎಂಬುವರಿಗೆ ಏಪ್ರಿಲ್.28ರಂದು 9.30 ಗಂಟೆಗೆ ಅಪರಿಚಿತ ಮೊಬೈಲ್‌ ಸಂಖ್ಯೆಯೊಂದರಿಂದ ತ್ರಿಶಾ ಎಂಬುವರು ಕರೆ ಮಾಡಿ, ಜಾಬ್‌ ಆಫರ್‌ ನೀಡಿದ್ದರು.

ನಂತರ ಎಲಿನಾ, ಆಂಡ್ರಿವ್‌ ಎಂಬುವರು ವಿವಿಧ ಟಾಸ್ಕ್‌ಗಳನ್ನು ನೀಡಿ, ಹಂತ ಹಂತವಾಗಿ 3,81,704 ರೂ.ಗಳನ್ನು ಹಾಕಿಸಿಕೊಂಡಿದ್ದರು. ನಂತರ, ಜೋತಿ ಎನ್ನುವವರು ಅದಕ್ಕೆ 5,03,304 ರೂಗಳನ್ನು ಕೊಡುತ್ತೇವೆಂದು ಖಾತೆಗೆ ಹಾಕಿ ಆಸೆ ಹುಟ್ಟಿಸಿದ್ದರು.

ನಂತರ ಈ ಹಣವನ್ನು ಖಾತೆಯಿಂದ ವಿಥ್‌ಡ್ರಾ ಮಾಡಲು ಹೋದಾಗ, ಖಾತೆಯನ್ನೇ ಫ್ರೀಜ್‌ ಮಾಡಿ, ಇನ್ನೂ 3,75,600 ರೂಗಳನ್ನು ಹಾಕಬೇಕೆಂದು ಮೆಸೇಜ್‌ ಕಳಿಸಿ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಅಪರಾಧ: 0033/2023, Information Technology Act-2008ರ ಕಲಂ 66(ಡಿ), 66(ಸಿ) ಅನ್ವಯ ಪ್ರಕರಣ ದಾಖಲಾಗಿದೆ.

ಜಗದೀಶ್ ಶೆಟ್ಟರ್ ಸೋಲಿಸಲು‌ ಧರ್ಮಯುದ್ಧ; ಬಸನಗೌಡ ಪಾಟೀಲ್ ಯತ್ನಾಳ ಗುಡುಗು….

ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ……….

ವಿಜಯಸಾಕ್ಷಿ ಸುದ್ದಿ, ಗದಗ

ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ. ಮೊದಲು ಯುದ್ಧ ಮಾಡಿ ಗೆದ್ದು ಬಾ ಎಂದು ಕೃಷ್ಣ ಪರಮಾತ್ಮ ಹೇಳಿದ್ದಾನೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ‌ವಿರುದ್ಧ ಧರ್ಮಯುದ್ಧ ಮಾಡುತ್ತಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ‌‌ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಗದಗನಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರವಾಗಿ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು.

ಮಹಾಭಾರತದಲ್ಲಿ ಭಗವಾನ್‌ ಕೃಷ್ಣ ಹೇಳಿದ್ದಾರೆ. ಯುದ್ಧದಲ್ಲಿ ನೀ ಹೋಗಿದ್ರೆ ನಿನ್ನ ಕುಟುಂಬದವರು ಅದಾರ್, ಗೆಳೆಯರು ಅದಾರ ಏನೂ ನೋಡಬ್ಯಾಡ ಎಂದಿದ್ದಾರೆ ಎಂದರು. ಹೀಗಾಗಿ ಶೆಟ್ಟರ್ ವಿರುದ್ಧ ಧರ್ಮ ಯುದ್ಧ ಮಾಡುತ್ತಿದ್ದೇವೆ ಎಂದರು.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿರುದ್ಧ ಈ ಧರ್ಮಯುದ್ಧ ಅಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಅಷ್ಟೇ ಎಂದರು.

ಸಿಎಂ ಆಗುವ ಆಶೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದ ಯತ್ನಾಳ, ನಾನೇನೂ ಆಯೋಗ್ಯನಾ..? ನನಗೆ ಶಕ್ತಿ ಇಲ್ವಾ ಎಂದು ಪ್ರಶ್ನಿಸಿದರು. ನನ್ನ ಆಡಳಿತ ಬಂದರೆ ಉತ್ತರ ಪ್ರದೇಶ ಯೋಗಿ ರೀತಿಯಲ್ಲಿ ಆಡಳಿತ ಬರುತ್ತೆ. ಅವಕಾಶ ಕೊಟ್ರೆ ಸಿಎಂ ಆಗ್ತೀನಿ ಎಂದರು.

ಕೆಲವರು ನನ್ನನ್ನು ಪಂಜರದೊಳಗೆ ಇಟ್ಟಿದ್ರು. ಅವರೆಲ್ಲಾ ತಮ್ಮ ಕುಟುಂಬ ಬೆಳೆಬೇಕು, ನಾ ಆದ ನಂತರ ನನ್ನ ‌ಮಗ ಸಿಎಂ ಆಗಬೇಕು ಅಂತ ಅನಕೊಂಡಿದ್ದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಮುಖಂಡರಾದ ರಾಜು ಕುರಡಗಿ, ಅಮರನಾಥ ಬೆಟಗೇರಿ, ಪರಮೇಶ್ ನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು.

ಕುಟುಂಬವನ್ನೇ ರಕ್ಷಿಸಿಕೊಳ್ಳದವರು ಕ್ಷೇತ್ರವನ್ನು ಹೇಗೆ ರಕ್ಷಿಸಬಲ್ಲರು?

ಶಾಸಕ ಬಂಡಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ……

ವಿಜಯಸಾಕ್ಷಿ ಸುದ್ದಿ, ರೋಣ

ತನ್ನ ಕುಟುಂಬವನ್ನೇ ರಕ್ಷಿಸಿಕೊಳ್ಳದವರು ಇನ್ನು ಇಡೀ ಕ್ಷೇತ್ರವನ್ನು ಹೇಗೆ ರಕ್ಷಿಸುತ್ತಾರೆ ಎಂಬುದನ್ನು ಮತಕ್ಷೇತ್ರದ ಮತದಾರರು ಅರಿಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಅವರು ಸೋಮವಾರ ರೋಣ ಪಟ್ಟಣದ ವಿ.ಎಫ್.ಪಾಟೀಲ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲರವರ ಪರವಾಗಿ ಮತಯಾಚನೆ ಮಾಡುವ ಮೂಲಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಶಾಸಕ ಕಳಕಪ್ಪ ಬಂಡಿಯವರ ವರ್ತನೆಯಿಂದ ಬೇಸತ್ತು ಕುಟುಂಬದ ಸದಸ್ಯರೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅಂದರೆ ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವೇ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳನ್ನು ಮೀರುವುದಿಲ್ಲ. ಈಗಾಗಲೇ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 127 ರಿಂದ 137 ಸ್ಥಾನಗಳನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜಗದೀಶ ಶೆಟ್ಟರ ಹಾಗೂ ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷದ ಬೆಳವಣಿಗೆಯಲ್ಲಿ ಮುಖ್ಯಪಾತ್ರವನ್ನು ವಹಿಸಿದ್ದೇವೆ. ಆದರೆ ಬಿಜೆಪಿಯಲ್ಲಿ ಕೆಲವರಿಂದ ಹಿಡನ್ ಅಜೆಂಡಾ ರೂಪಿತವಾಗಿದ್ದು, ಈ ಹಿಡನ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಬಿಜೆಪಿ ನಮಗೆ ಅನ್ಯಾಯ ಮಾಡಿದೆ.

ಯಡಿಯೂರಪ್ಪನವರು ನಮ್ಮ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರಿಗೂ ಬಿಜೆಪಿ ಎಲ್ಲವನ್ನೂ ನೀಡಿತ್ತು. ಹಾಗಾದರೆ ಕೆಜಿಪಿ ಪಕ್ಷವನ್ನು ಯಾಕೆ ಕಟ್ಟಿದರು ಎಂದು ಪ್ರಶ್ನಿಸಿದರು.

ಮಾಜಿ ಸಂಸದ ಆರ್.ಎಸ್.ಪಾಟೀಲ, ವಿಧಾನ ಪರಿಷತ್ತ ಸದಸ್ಯ ಶರಣಗೌಡ ಪಾಟೀಲ, ಐ.ಎಸ್.ಪಾಟೀಲ, ವಿ.ಆರ್.ಗುಡಿಸಾಗರ, ಹುಚ್ಚಪ್ಪ ನವಲಗುಂದ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಪ್ರಭು ಮೇಟಿ, ಅಂದಪ್ಪ ಬಿಚ್ಚೂರ, ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಮಂಜುಳಾ ರೇವಡಿ, ವಿ.ಬಿ.ಸೋಮನಕಟ್ಟಿಮಠ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷದಲ್ಲಿದ್ದಾಗ ಉಸ್ತುವಾರಿಯಾಗಿ ಗದಗಿಗೆ ಬಂದಿದ್ದೆ. ಸಿದ್ದಣ್ಣ ಬಂಡಿ ಪರವಾಗಿ ಹೆಚ್ಚಿನ ಒತ್ತಡ ಇತ್ತು. ವಿಪರ್ಯಾಸ ಅಂದರೆ ಶಾಸಕರ ಪತ್ನಿ ಸ್ವತಃ ನನ್ನ ಗಂಡನಿಗೆ ಟಿಕೆಟ್ ಬೇಡ ನನಗೆ ಕೊಡಿ ಎಂದು ಕೇಳಿದ್ದರು. ಜಿಲ್ಲೆಗೆ ಆಗಮಿಸುವ ಮೊದಲೇ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್.ಪಾಟೀಲರ ಗೆಲುವು ಖಚಿತವಾಗಿತ್ತು.

ಲಕ್ಷ್ಮಣ ಸವದಿ, ಮಾಜಿ ಉಪ ಮುಖ್ಯಮಂತ್ರಿಗಳು
error: Content is protected !!