Home Blog Page 3289

ಶುಲ್ಕ ಪಾವತಿಗೆ ಪಾಲಕರಿಗೆ ಒತ್ತಡ ಹಾಕಿದರೆ ಹುಷಾರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೆಲವು ಖಾಸಗಿ ಶಾಲೆಗಳು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಶುಲ್ಕ ಪಾವತಿಗಾಗಿ ಪೋಷಕರಿಗೆ ಒತ್ತಡ ಹಾಕುತ್ತಿರುವ ಆರೋಪಗಳು ಕೇಳಿಬಂದವೆ. ಆರೀತಿಗಳು ದೂರು ಬಂದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಲೆಗಳು ಫೈನಾನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಬಡ್ಡಿ ಹಣ ಪಡೆದು ವಿದ್ಯಾರ್ಥಿಗಳ ಶುಲ್ಕ ಪಾವತಿ ಮಾಡುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಶುಲ್ಕ ಕಟ್ಟದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗೆ ಸೇರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಬಿಇಒ ಗೆ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಶಾಲೆಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಆನ್ ಲೈನ್ ಕ್ಲಾಸ್ ನಿಲ್ಲಿಸಿದರೆ ಅಂತವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲು?

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರು ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾ ನಿಯಮ ಮುರಿದು ಹೋಮ- ಹವನ ನಡೆಸಿದ್ದಕ್ಕೆ ಅವರ ವಿರುದ್ಧ ತಹಸೀಲ್ದಾರ್ ಬಸನಗೌಡ ಕೋಟೂರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ತಹಸೀಲ್ದಾರ್ ಅವರ ನಿರ್ಧಾರಕ್ಕೆ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೋವಿಡ್ ಕೇರ್ ಸೆಂಟರ್ ಮುಂದೆಯೇ ತಾವು ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಸನಗೌಡ ಕೋಟೂರ ಹಾಗೂ ಸಿಪಿಐ ದೇವರಾಜ್ ವಿರುದ್ಧ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ. ನನ್ನ ಮೇಲೆ ಕೇಸ್ ಹಾಕಲಿ. ನನ್ನನ್ನು ಅರೆಸ್ಟ್ ಮಾಡಲಿ. ಇಂತಹ ಕೇಸ್ ಗಳನ್ನು ನಾನು ಬಹಳ ನೋಡಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಮುಂದೆ ಏನಾಗುತ್ತದೆ ನೋಡುತ್ತೇನೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.-

ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್ ಆರಂಭವಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯ ಈ ಮೂಲಕ ಒತ್ತಾಯಿಸಲಾಗುತ್ತಿದೆ. ಹೀಗಾಗಿ “ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಎಂಬ ಹೆಸರಿನಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾಗಿದೆ.

‘ಚೇಂಜ್ ಆರ್ಗ್’ ಸಾಮಾಜಿಕ ಮಾಧ್ಯಮದ ಮೂಲಕ ಈ ಅಭಿಯಾನ ಪ್ರಾರಂಭಿಸಲಾಗಿದೆ. ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹಿಸಲಾಗಿದೆ.

ರೋಹಿಣಿ ಸಿಂಧುರಿ ಅವರನ್ನು ಮತ್ತೆ ಮರಳಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ. ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಲಾಗುತ್ತಿದೆ.

ರೋಹಿಣಿ ಸಿಂಧೂರಿ ಅವರನ್ನು ಭೂ ಮಾಫಿಯಾದಲ್ಲಿ ಬಲಿ ಪಶು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿ ಬೆಂಬಲ ಪಡಿಸಲಾಗುತ್ತಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಲಂಕೆಯಲ್ಲಿ ಘರ್ಜಿಸಿ ಬರುವುದೇ ಭಾರತೀಯ ಯುವ ಪಡೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕ್ರಿಕೆಟ್ ಅಂಗಳದಲ್ಲಿ ಬೆವರು ಸುರಿಸುವ ಪ್ರತಿಯೊಬ್ಬ ಆಟಗಾರನಿಗೂ ಒಮ್ಮೆಯಾದರೂ ಭಾರತ ತಂಡದ ಪರ ಆಡಬೇಕೆಂಬ ಕನಸು ಕಂಡಿರುತ್ತಾನೆ. ಹೀಗೆ ಕನಸು ಕಂಡ ಐವರು ಯುವ ಆಟಗಾರರ ಕನಸು ನನಸಾಗಿದೆ. ಸದ್ಯ ಹೊಸ ಕನಸಿನೊಂದಿಗೆ ಮೈದಾನಕ್ಕೆ ಕಾಲಿಡುತ್ತಿದ್ದಾರೆ.
ಮುಂಬರುವ ಜುಲೈ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ಅನುಪಸ್ಥಿತಿಯಲ್ಲಿ ಇವರು ಭಾರತ ತಂಡ ಪ್ರತಿನಿಧಿಸಲಿದ್ದಾರೆ.

ಶಿಖರ್ ಧವನ್‍ ನೇತೃತ್ವದ ತಂಡದಲ್ಲಿ ಈಗ ಈ ಹೊಸ ಆಟಗಾರರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಐಪಿಎಲ್‍ ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸಮನ್ ಗಳಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ವೇಗಿ ಚೇತನ್ ಸಕಾರಿಯಾ, ಆಲ್ರೌಂತಡರ್ ಕೃಷ್ಣಪ್ಪ ಗೌತಮ್ ಚೊಚ್ಚಲ ಬಾರಿಗೆ ಭಾರತ ತಂಡ ಸೇರಿದ್ದಾರೆ.

ಆರ್ ಸಿಬಿ ಬೆಂಗಳೂರು ತಂಡದ ಪರ ಆಡುವ ದೇವದತ್ ಪಡಿಕ್ಕಲ್ ಐಪಿಎಲ್‍ ನಲ್ಲಿ ಒಟ್ಟು 21 ಪಂದ್ಯವಾಡಿ 1 ಶತಕ ಮತ್ತು 5 ಅರ್ಧಶತಕ ಸಹಿತ 668 ರನ್ ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಋತುರಾಜ್ ಗಾಯಕ್ವಾಡ್ 13 ಪಂದ್ಯಗಳನ್ನು ಆಡಿದ್ದು, 5 ಅರ್ಧ ಶತಕ ಸಹಿತ 400 ರನ್ ಸಿಡಿಸಿ ಮಿಂಚಿದ್ದಾರೆ.
ನಿತೀಶ್ ರಾಣಾ ಕೋಲ್ಕತ್ತಾ ತಂಡದ ಪರ ಒಟ್ಟು 67 ಪಂದ್ಯವಾಡಿದ್ದು, 13 ಅರ್ಧ ಶತಕ ಸಹಿತ ಒಟ್ಟು 1,638 ರನ್ ಚಚ್ಚಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗದ ಬೌಲರ್ ಚೇತನ್ ಸಕಾರಿಯಾ ಒಟ್ಟು 7 ಪಂದ್ಯವಾಡಿ 7 ವಿಕೆಟ್ ಕಬಳಿಸಿದ್ದಾರೆ. ಇನ್ನೋರ್ವ ಕನ್ನಡಿಗ ಆಲ್‍ ರೌಂಡರ್ ಕೃಷ್ಣಪ್ಪ ಗೌತಮ್ ದೇಶಿಯ ಟೂರ್ನಿಯಲ್ಲಿ ಕರ್ನಾಟಕದ ಪರ 42 ಪಂದ್ಯಗಳನ್ನು ಆಡಿದ್ದು, 1,045 ರನ್ ಗಳಿಸಿ , 166 ವಿಕೆಟ್ ಪಡೆದಿದ್ದಾರೆ.

ಬಹುತೇಕ ಹೊಸಮುಖಗಳೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿರಲಿದ್ದಾರೆ. ಈ ಹೊಸ ಪ್ರತಿಭೆಯನ್ನೇ ಹೊಂದಿರುವ ಭಾರತೀಯ ತಂಡ, ಶ್ರೀಲಂಕಾ ವಿರುದ್ಧ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ ಐಟಿ ಎದುರು ಹಾಜರಾದ ಆರೋಪಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳಾಗಿರುವ ನರೇಶ್ ಗೌಡ ಹಾಗೂ ಶ್ರವಣ್ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ತಮ್ಮ ವಕೀಲರೊಂದಿಗೆ ಆಗಮಿಸಿರುವ ಆರೋಪಿಗಳು, ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಎಸ್ ಐಟಿ ಎದುರು ಹಾಜರಾಗಿದ್ದಾರೆ. ಈ ಹಿಂದೆಯೇ ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಅಧಿಕಾರಿಗಳು ನೊಟೀಸ್ ನೀಡಿದ್ದರು.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ತನಿಖೆಗೆ ಅವರು ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು, ಸಿಡಿ ಕಿಂಗ್‌ ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ ಅವರನ್ನು ಬಂಧನದ ಅವಶ್ಯವಿದ್ದರೆ ಬಂಧಿಸುವ ಸಾಧ್ಯತೆಯೂ ಇದೆ.

ಸರಿಯಾಗಿ ಸ್ಪಂದಿಸದಿದ್ದರೆ ಬಂಧಿಸಲು ಎಸ್ ಐಟಿ ತನಿಖಾಧಿಕಾರಿಗಳಿಗೆ ಸ್ವತಂತ್ರವಿದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್ ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯಬಹುದು ಎನ್ನಲಾಗುತ್ತಿದೆ.

ನಮ್ಮ ಕಿಚ್ಚ ಎಲ್ಲದಕ್ಕೂ ಸೈ ರೀ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಿಚ್ಚ ಸುದೀಪ್ ಬಹುಮುಖ ಪ್ರತಿಭೆಯೇ ಸರಿ. ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಅಡುಗೆ, ಕ್ರಿಕೆಟ್ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಸಕಲ ಕಲಾ ವಲ್ಲಭ ಎಂದೇ ಇವರನ್ನು ಹಲವರು ಕರೆಯುತ್ತಾರೆ. ಸದ್ಯ ಇನ್ನೊಂದು ರಂಗದಲ್ಲಿ ತಮ್ಮ ಪ್ರತಿಭೆ ತೋರಿಸಲು ಮುಂದಾಗಿದ್ದಾರೆ.

ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕೂಡ ಮಿಂಚಿದ್ದಾರೆ. ಈಗ ಚೆಸ್ ನಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮುಂದಾಗಿದ್ದಾರೆ. ಭಾರತೀಯರಿಗೆ ಚೆಸ್ ಎಂದ ಕೂಡಲೇ ನೆನಪಿಗೆ ಬರುವುದೇ ವಿಶ್ವನಾಥನ್ ಆನಂದ್. 5 ಸಲ ವರ್ಲ್ಡ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್, ಇಡೀ ವಿಶ್ವಕ್ಕೆ ಚಾಣಾಕ್ಷ ಚೆಸ್ ಪಟು.
ಚೆಸ್ ನಲ್ಲಿ ಅವರು ಎದುರು ಗೆಲ್ಲಬೇಕಾದರೆ, ಎದುರಾಳಿ ಸಾಕಷ್ಟು ಬೆವರು ಹರಿಸಬೇಕು. ಈಗ ಅವರ ಜೊತೆ ಕಿಚ್ಚ ಸುದೀಪ್ ಸ್ಪರ್ಧೆ ನಡೆಸಲಿದ್ದಾರೆ! ಅದಕ್ಕಾಗಿ ಅಖಾಡ ಸಜ್ಜಾಗಿದೆ.

ವಿಶ್ವನಾಥನ್ ಆನಂದ್ ಜೊತೆ ಸುದೀಪ್ ಚೆಸ್ ಆಡಲಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಕೊವಿಡ್ನಿಂದಾಗಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ಈ ಆಟ ಆಯೋಜಿಸಲಾಗಿದೆ.

ಜೂ. 13ರಂದು ಸಂಜೆ 5ಕ್ಕೆ ‘ಚೆಕ್ಮೇಟ್ ಕೊವಿಡ್- ಸೆಲೆಬ್ರಿಟಿ ಎಡಿಷನ್’ ಆರಂಭ ಆಗಲಿದೆ. ಇದರಲ್ಲಿ ವಿಶ್ವನಾಥನ್ ಆನಂದ್ ವಿರುದ್ಧ ಕಿಚ್ಚ ಆಡಲಿದ್ದಾರೆ. ಅವರೊಂದಿಗೆ ಹಲವು ಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಕೂಡ ವಿಶ್ವನಾಥನ್ ಆನಂದ್ಗೆ ಪೈಪೋಟಿ ನೀಡಲಿದ್ದಾರೆ.

ಅಕ್ಷಯ ಪಾತ್ರಾ ಫೌಂಡೇಶನ್ ಹಾಗೂ ಚೆಸ್ ಡಾಟ್ ಕಾಮ್ ಜೊತೆಯಾಗಿ ಈ ಆಟವನ್ನು ಆಯೋಜಿಸಿವೆ. Chess.com – India ಯೂಟ್ಯೂಬ್ ಚಾನೆಲ್ ನಲ್ಲಿ ಆಟ ಪ್ರಸಾರವಾಗಲಿದೆ.

ರಂಗಭೂಮಿ ಕಲಾವಿದ ಮೈದೂರು ಅಜ್ಜಪ್ಪ ಬಾಗಳಿ ನಿಧನ

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕಿನ ಬಾಗಳಿ ಗ್ರಾಮದ ನಿವಾಸಿ ಎಂ.ಅಜ್ಜಪ್ಪರವರು (61)ಅನಾರೋಗ್ಯದಿಂದ ಶನಿವಾರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಕಾಳಮ್ಮ ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಗ್ರಾಮದ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಜ್ಜಪ್ಪ ಬಾಗಳಿ ಅವರು ವಿದ್ಯವಂತರಲ್ಲದಿದ್ದರೂ ಸಹ ಬಾಲ್ಯದಿಂದಲೇ ರಂಗ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗುರುಗಳಾದ ಚಿಗಟೇರಿ ಕೊಟ್ರಪ್ಪಯ್ಯ ಗವಾಯಿಗಳ ಆತ್ಮೀಯ ಶಿಷ್ಯರಾಗಿ ತಬಲವಾದಕರು, ಹಾಡುಗಾರಿಕೆ ಉತ್ತಮ ಅಭಿನಯ ಹೊಂದಿದ್ದರು.

ಗೋಣಿಬಸವೇಶ್ವರ ನಾಟಕದಲ್ಲಿ ಶಿವನಯ್ಯನ , ಸಂಗ್ಯಬಾಳ್ಯ, ಗೀಗಿಪದ, ಸೇರಿದಂತೆ ನಾಟಕ, ಯಕ್ಷಗಾನದಲ್ಲಿ ಅಭಿನಯಿಸಿದ್ದು. ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಇವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಸಂತಾಪ

ಶ್ರೀ ವಿಶ್ವಕಲಾ ರೈತ ನಾಟ್ಯಸಂಘ, ಕನಕೇಶ್ವರ ಯುವಕ ಕಲಾ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನಲವಡಿ ಬಳಿ ಟ್ರಾಕ್ಟರ್, ಲಾರಿ ಮಧ್ಯೆ ಭೀಕರ ಅಫಘಾತ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಟ್ರ್ಯಾಕ್ಟರ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಅಣ್ಣಿಗೇರಿ ತಾಲೂಕಿನ ನಲವಡಿ ಟೋಲ್ ನಾಕಾ ಬಳಿ ನಡೆದಿದೆ.

ಘಟನೆಯಲ್ಲಿ ನಲವಡಿ ಗ್ರಾಮದ ಪ್ರಕಾಶ ಅಡವಿ (40) ಕಾರ್ತಿಕ (೧೪) ಮಹಾಂತೇಶ ನಲವಡಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ಬೊಬ್ಬನ ಹೆಸರು ಗೊತ್ತಾಗಿಲ್ಲ.

ಬಿತ್ತನೆ ಮುಗಿಸಿ‌ ಮನೆಯತ್ತ ಹೊರಟಿದ್ದ ರೈತ, ತನ್ನ ಟ್ರಾಕ್ಟರ್ ಹೆದ್ದಾರಿಗೆ ಹತ್ತಿಸಿದ್ದೇ ತಡ ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ರಾಕ್ಟರ್ ಎರಡು ತುಂಡಾಗಿದೆ. ಅದರಲ್ಲಿದ್ದ ರೈತರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ನೆರದವರ ಕರುಳು ಹಿಂಡುವಂತೆ ಮಾಡಿತು. ಅಪಘಾತದ ಸುದ್ದಿ ತಿಳಿದ ಅಣ್ಣಿಗೇರಿ ಠಾಣೆಯ ಪಿಎಸ್ಐ ಲಾಲ್ ಸಾಬ್ ಜೂಲಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಕ್ಕಿ ದಂಧೆ ಮಾಹಿತಿ ನೀಡಿದ್ದಕ್ಕೆ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿದ್ದರಾಮೇಶ್ವರ ನಗರದ ನಿವಾಸಿ ಮಂಜುನಾಥ್ ಈರನಗೌಡ ಬಾಣದ ಎಂಬಾತನಿಗೆ ಶ್ರೀಧರ ವಜ್ರಬಂಡಿ ಜೀವ ಬೆದರಿಕೆ ಹಾಕಿದ್ದಾನೆ.

ಎಪಿಎಂಸಿ ಯಾರ್ಡ್‌ನಿಂದ ವಾಪಸ್ ಮನೆಗೆ ಬರುವಾಗ ಬೈಕ್ ಅಡ್ಡಗಟ್ಟಿದ ಶ್ರೀಧರ ವಜ್ರಬಂಡಿ, ಮಂಜುನಾಥ್ ಬಾಣದ ಮೇಲೆ ಏಕಾಏಕಿ, ‘ನನ್ನ ಅಕ್ಕಿ ವ್ಯವಹಾರದ ಬಗ್ಗೆ ಯಾರಿಗೆ ಮಾಹಿತಿ ಹೇಳಿ ಹಿಡಸ್ತೀಯೆನ, ಕೇಸ್ ಮಾಡಸ್ತೀಯೇನ ಮಗನಾ….’ ಅನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ, ‘ನಾ ಯಾಕ ಯಾಕೋ ಅಣ್ಣ ಹಿಂಗ್ ಮಾತಾಡಕತ್ತಿಯಲ್ಲ, ಯಾವ ನಿಮ್ಮ ವ್ಯವಹಾರದ ಬಗ್ಗೆ ಯಾರ ಮಾತಾಡ್ಯಾರ? ಯಾಕ ನಿಮ್ಮ ವಿಷಯಕ್ಕ ಬರ್ಲಿ ಪಾ? ನಿಮ್ಮ ಅಕ್ಕಿ ವ್ಯವಹಾರಕ ನನಗ ಏನೂ ಸಂಬಂಧ ಇಲ್ಲ. ಯಾರ ನನ್ನ ಬಗ್ಗೆ ನಿನ್ನ ಮುಂದ ಸುಳ್ಳು ಹೇಳ್ಯಾರ. ನಾನ ಯಾಕ ಅಂತ ಕೆಲಸ ಮಾಡ್ಲಿ ಪಾ? ನಾನು ಅಂತಾದು ಏನೂ ಮಾಡಿಲ್ಲ’ ಅಂತ ಮಂಜು ಹೇಳಿದ.

ಶ್ರೀಧರ ವಜ್ರಬಂಡಿ ಮತ್ತೆ ಏರು ಧ್ವನಿಯಲ್ಲಿ, ‘ನನ್ನ ತಂಟೆಗೆ ಬಂದ್ರೆ ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮಕಿ ಹಾಕಿದ. ತಪ್ಪಿಸಿಕೊಳ್ಳಲು ಸಮೀಪವೇ ಇದ್ದ ಎಸ್ಪಿ ಕಚೇರಿ ಒಳಗೆ ಹೋದಾಗ, ‘ಇವತ್ತು ಉಳಕೊಂಡ ಮಗನಾ. ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮ್ಕಿ ಹಾಕಿರುವ ಶ್ರೀಧರ ವಜ್ರಬಂಡಿ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮಂಜು ಬಾಣದ ದೂರು ನೀಡಿದ್ದಾರೆ. ಬೆಟಗೇರಿ ಬಡಾವಣೆ ಠಾಣೆಯಲ್ಲಿ ಐಪಿಸಿ 1860 (u/s-506,341, 504) ಕಲಂನಡಿ ಪ್ರಕರಣ ದಾಖಲಾಗಿದೆ.

error: Content is protected !!