Home Blog Page 3292

ವಸತಿ ಕಟ್ಟಡ ಕುಸಿತ – 11 ಸಾವು, 8 ಜನರಿಗೆ ಗಾಯ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ನಗರದಲ್ಲಿನ ಎರಡು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿತಗೊಂಡ ಪರಿಣಾಮ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿರುವ ಘಟನೆ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಈಗಾಗಲೇ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡವರನ್ನು ರಕ್ಷಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ 11 ಗಂಟೆ ಸುಮಾರಿಗೆ ಈ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಮುಂಡಿಪುರಂ ನಿವಾಸಿ ಮಂಜು ಪ್ರಸಾದ್(55) ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ 12ಗಂಟೆಯ ಸಮಯದಲ್ಲಿ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ಲದ ಸಂದರ್ಭದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ ನೋಟ್‌ ನಲ್ಲಿ ರಿಯಾಜ್ ಮತ್ತು ಜಾವಿದ್ ಎಂಬುವರಿಂದ ನಾನು ಜಯಲಕ್ಷ್ಮೀಪುರಂ ನಿವೇಶನ ಖರೀದಿಸಿದ್ದೆ. ಅದನ್ನು ನಾನು ಬೇರೆಯವರಿಗೆ ಮಾರಾಟ ಮಾಡಿದ್ದಾಗ, ಅವರಿಬ್ಬರು ನನಗೆ ನೀಡಿರುವ ದಾಖಲೆಗಳು ಸುಳ್ಳು ಎಂಬುವುದು ತಿಳಿದು ಬಂದಿದೆ. ಅಲ್ಲದೇ, ಈ ಸಂಬಂಧ ದೂರು ಕೂಡ ದಾಖಲಾಗಿದೆ. ಹಾಗಾಗಿ, ಈ ಸಾವಿಗೆ ರಿಯಾಜ್ ಮತ್ತು ಜಾವಿದ್ ಅವರೇ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ನಗರದ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ನಿಂದ ಬಳಲುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾಕ್ಕೆ ಯತ್ನ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೋವಿಡ್ ನಿಂದ ಬಳಲುತ್ತಿದ್ದ ಮಹಿಳಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಈ ಘಟನೆ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಕೋವಿಡ್ ಮಹಿಳಾ ರೋಗಿಯ ಮೇಲೆ ಪಿಂಟು ಎಂಬುವನಿಂದ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪಿಂಟು ಖಾಸಗಿ ಆಂಬ್ಯುಲೇನ್ಸ್ ಚಾಲಕನಾಗಿದ್ದಾನೆ. ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ರೋಗಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಮಲಗಿದ್ದ ಸಂದರ್ಭದಲ್ಲಿ ಡೈಪರ್ ಮತ್ತು ಯೂರಿನ್ ಪೈಪ್ ನ್ನು ದುಷ್ಕರ್ಮಿ ತೆಗೆದಿದ್ದಾನೆ ಎನ್ನಲಾಗಿದೆ.
ಈ ಕೃತ್ಯಕ್ಕೆ ಎಚ್ಚರಗೊಳ್ಳುತ್ತಿದ್ದಂತೆ ಮಹಿಳೆ ಚೀರಾಟ ನಡೆಸಿದ್ದಾರೆ. ಅಕ್ಕ-ಪಕ್ಕದ ರೋಗಿಗಳು ಕೂಡ ಎಚ್ಚರಗೊಂಡಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ. ಸದ್ಯ ಆರೋಪಿ ಪಿಂಟುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ತನಿಖೆ ನಡೆಸಿದ್ದಾರೆ.

ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಸೋಂಕು – ಸಾಕಾನೆಗಳಿಗೆ ಕೊರೊನಾ ಟೆಸ್ಟ್!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಸಾಕಾನೆಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆಯನ್ನ ಇಲ್ಲಿಯ ಬಂಡೀಪುರಕ್ಕೆ ಹೊಂದಿಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯು ಇಲ್ಲಿ ಸಾಕಿರುವ ಆನೆಗಳಿಗೆ ಕೊರೊನಾ ಟೆಸ್ಟ್ ನಡೆಸಿದೆ.

ಮಧುಮಲೈ ಸಾಕಾನೆ ಶಿಬಿರದಲ್ಲಿ 28 ಆನೆಗಳಿದ್ದು, ಎಲ್ಲ ಆನೆಗಳನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಆನೆಗಳ ಸೊಂಡಿಲಿನಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಉತ್ತರ ಪ್ರದೇಶದ ಇಜತ್ನಗರದಲ್ಲಿನ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಯಿತು.

ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ತಮಿಳುನಾಡಿನ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಮಧುಮಲೈ ಹುಲಿ ರಕ್ಷಿತಾರಣ್ಯದ 28 ಆನೆಗಳ ಮಾದರಿ ಸಂಗ್ರಹ ಮಾಡಲಾಗಿದೆ.
ತಮಿಳುನಾಡಿನಲ್ಲಿ ಕೊರೊನಾಗೆ ಸಿಂಹ ಬಲಿಯಾಗಿತ್ತು. ಜೂ. 3 ರಿಂದ ತಮಿಳುನಾಡಿನ ವಂದಲೂರು ಝೂನಲ್ಲಿ 9 ಸಿಂಹಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರ ಆನೆಗಳಿಗೂ ಕೊರೊನಾ ಪರೀಕ್ಷೆಗೆ ಸೂಚನೆ ನೀಡಿತ್ತು.

2 ಬೌಲ್ ಗೆ 21 ರನ್ ಸಿಡಿಸಿದ ವೀರೂನ ಆರ್ಭಟ ನೆನಪಿಸಿಕೊಂಡ ಅಭಿಮಾನಿಗಳು!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ವೀರೇಂದ್ರ ಸೆಹ್ವಾಗ್ ಭಾರತ ಕಂಡ ಶ್ರೇಷ್ಠ ಆಟಗಾರ. ವೀರೂ ಮೈದಾನದಲ್ಲಿ ಇದ್ದರೆ ಸಾಕು, ಬೌಲರ್ ಗಳು ಬೆವರುತ್ತಿದ್ದರು. ಭಾರತದ ಸ್ಕೋರ್ ಬೋರ್ಡ್ ನಲ್ಲಿ ರನ್ ಗಳು ವೇಗವಾಗಿ ಹೆಚ್ಚಾಗುತ್ತಿದ್ದವು. ಇಂತಹ ಸೆಹ್ವಾಗ್ ಅದೊಮ್ಮೆ ಕೇವಲ ಎರಡೇ ಎರಡು ಎಸೆತಗಳಲ್ಲಿ 21 ರನ್ ಗಳನ್ನು ಬಾರಿಸಿದ್ದರು. ಕೇವಲ ಎರಡೇ ಬೌಲ್ ನಲ್ಲಿ 21 ರನ್ ಕದಿಯುವುದು ಹೇಗೆ? ಅನಿಸುತ್ತಿದೆಯೇ ಹಾಗಾದರೆ ಈ ಸ್ಟೋರಿ ಓದಿ.

ಪಾಕ್ ನ ಬೌಲರ್ ರಾಣಾ ನವೇದ್ ಉಲ್ ಹಸನ್ ಅವರ ಬೌಲ್ ನಲ್ಲಿಯೇ ವೀರೂ ಈ ಚಮತ್ಕಾರ ಮಾಡಿದ್ದಾರೆ. ಭಾರತದ ಬದ್ಧ ವೈರಿ ಪಾಕ್ ವಿರುದ್ಧ 2004ರಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿಯೇ ವೀರೂ ಇಂತಹ ವೀರಾವೇಶ ತೋರ್ಪಡಿಸಿದ್ದಾರೆ.

ವೇಗಿ ರಾಣಾ ಮಾಡಿದ ತಪ್ಪು ಏನೆಂದರೆ, ಎರಡೇ ಬೌಲ್ ಎಸೆದು, ಇತರೆ ಲೆಕ್ಕಾಚಾರದಲ್ಲಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ದಾಖಲೆಯ 21ರನ್ ಕದಿಯಲು ಅವಕಾಶ ನೀಡಿದ್ದಾರೆ. ಆ ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ವೇಗಿ ರಾಣಾ ಬೌಲಿಂಗ್ ಮಾಡುತ್ತಿದ್ದರು. ಮೊದಲ ಬೌಲ್ ನೋಬಾಲ್ ಆಗಿತ್ತು. ಈ ಬೌಲ್ ನ್ನು ಸೆಹ್ವಾಗ್ ಬೌಂಡರಿಗೆ ಅಟ್ಟಿದ್ದರು. ಎರಡನೇ ಬೌಲ್ ನ್ನೂ ರಾಣಾ ಮತ್ತೆ ನೋ ಬಾಲ್ ಎಸೆದಿದ್ದರು. ಅದನ್ನು ಕೂಡ ಸೆಹ್ವಾಗ್ ಬೌಂಡರಿಗೆ ನೂಕಿದ್ದರು. ಮೂರನೆಯ ಎಸೆತ ಕೂಡ ಹ್ಯಾಟ್ರಿಕ್ ನೋ ಬೌಲ್ ಗೆ ಸಾಕ್ಷಿಯಾಯಿತು. ಆದರೆ, ಮೂರನೇ ಬೌಲ್ ನಲ್ಲಿ ಸೆಹ್ವಾಗ್ ರನ್ ಕದಿಯಲಿಲ್ಲ. ಆ ನಂತರ ಸರಿಯಾದ ಬೌಲ್ ನ್ನು ಎಸೆದರು. ಆಗಲೂ ಸೆಹ್ವಾಗ್ ರನ್ ಕದಿಯುವ ಪ್ರಯತ್ನ ಮಾಡಲಿಲ್ಲ. ಆ ನಂತರ ಬೌಲ್ ನ್ನು ಮತ್ತೆ ರಾಣಾ ನೋ ಬೌಲ್ ಎಸೆದರು. ಆಗ ಬಿಡ್ತಾರಾ ಸೆಹ್ವಾಗ್? ಮತ್ತೆ ಬೌಂಡರಿ ಬಾರಿಸಿದರು.

ಹೀಗೆ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರೆ, ಬೌಲರ್ ಕಂಗಾಲಾಗಿ ನಂತರದ ಬೌಲ್ ನ್ನು ನೋ ಬೌಲ್ ಹಾಕಿದರು. ಮತ್ತೊಂದು ಬೌಂಡರಿ ವೀರು ಬ್ಯಾಟಿಂಗ್ ನಿಂದ ಮೂಡಿ ಬಂತು.
ಆಗ ಬೌಲರ್ ನಿನ್ನ ಸಹವಾಸವೇ ಸಾಕಪ್ಪ ಎನ್ನುವಂತೆ ಕೈ ಮುಗಿದರು. ಹೀಗಾಗಿ ಒಟ್ಟು 2 ಸರಿಯಾದ ಬೌಲ್ ಹಾಗೂ 5 ನೋ ಬೌಲ್ ಲೆಕ್ಕಾಚಾರದಲ್ಲಿ, ನಾಲ್ಕು ಬೌಂಡರಿ ಅಂದ್ರೆ 16ರನ್ ಹಾಗೂ 5 ನೋ ಬೌಲ್ ನಿಂದ ಒಟ್ಟು 21ರನ್ ಗಳನ್ನು ವೀರು ಗಳಿಸಿದ್ದರು. ಈ ವಿಡಿಯೋವನ್ನು ಈಗಲೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತ ಮೆಲುಕು ಹಾಕುತ್ತಿದ್ದಾರೆ.

ನಿನ್ನೆಗಿಂತಲೂ ಇಂದು ಹೆಚ್ಚು ಆತಂಕ ಮೂಡಿಸಿದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಿನ್ನೆಗಿಂತಲೂ ಇಂದು ಕೊರೊನಾ ಆತಂಕ ಮೂಡಿಸಿದೆ. ಇಂದು ರಾಜ್ಯದಲ್ಲ 10,959 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 20,246 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಪಾಸಿಟಿವಿಟಿ ರೇಟ್ ಮತ್ತಷ್ಟು ಕಡಿಮೆಯಾಗಿದ್ದು, ಶೇ.6.68ಕ್ಕೆ ಇಳಿಕೆಯಾಗಿದೆ. ಮಹಾಮಾರಿಗೆ 192 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇನ್ನೂ 2,15,525 ಸಕ್ರಿಯ ಪ್ರಕರಣಗಳಿವೆ. ಇಂದು 20,246 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ಇದುವರೆಗೂ 27,28,248 ಕೊರೊನಾ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಇಂದು ಬಾಗಲಕೋಟೆ 96, ಬಳ್ಳಾರಿ 211, ಬೆಳಗಾವಿ 341, ಬೆಂಗಳೂರು ಗ್ರಾಮಾಂತರ 385, ಬೆಂಗಳೂರು ನಗರ 2,395, ಬೀದರ್ 9, ಚಾಮರಾಜನಗರ 254, ಚಿಕ್ಕಬಳ್ಳಾಪುರ 268, ಚಿಕ್ಕಮಗಳೂರು 339, ಚಿತ್ರದುರ್ಗ 200, ದಕ್ಷಿಣ ಕನ್ನಡ 594, ದಾವಣಗೆರೆ 227, ಧಾರವಾಡ 275,

ಗದಗ 95, ಹಾಸನ 745, ಹಾವೇರಿ 97, ಕಲಬುರಗಿ 48, ಕೊಡಗು 216, ಕೋಲಾರ 239, ಕೊಪ್ಪಳ 157, ಮಂಡ್ಯ 397, ಮೈಸೂರು 1,163, ರಾಯಚೂರು 20, ರಾಮನಗರ 50, ಶಿವಮೊಗ್ಗ 562, ತುಮಕೂರು 662, ಉಡುಪಿ 413, ಉತ್ತರ ಕನ್ನಡ 312, ವಿಜಯಪುರ 158 ಮತ್ತು ಯಾದಗಿರಿಯಲ್ಲಿ 31 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಮತ್ತೆ ನೂರರ ಗಡಿಗೆ ಸೋಂಕು, ಹಾವು-ಏಣಿ ಆಟ ಆಡುತ್ತಿರುವ ಕೊರೊನಾ!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ನೂರರ ಗಡಿಗೆ ಬಂದು ನಿಂತಿದೆ. ನಿನ್ನೆಯಷ್ಟೆ ನರಗುಂದ ತಾಲೂಕಿನಲ್ಲಿ ಸೋಂಕು ಕಾಣಸಿರಲಿಲ್ಲ. ಮತ್ತೆ ಇವತ್ತು ಹತ್ತು ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನರಗುಂದ ಸೋಂಕಿನಿಂದ ಮುಕ್ತವಾಗಿಲ್ಲ ಅನ್ನೋದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.

ಕಳೆದ ಶುಕ್ರವಾರದಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದ್ದು, ಬುಧವಾರ 95 ಜನರಿಗೆ ಸೋಂಕು ತಗುಲಿದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು 95 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದು 95 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25108 ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -31, ಮುಂಡರಗಿ-14, ನರಗುಂದ-10, ರೋಣ-19, ಶಿರಹಟ್ಟಿ-19, ಹೊರಜಿಲ್ಲೆಯ-02 ಸೇರಿದಂತೆ 95 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 279 ಕ್ಕೇರಿದೆ.

ಗದಗ ಶಹರದ ಕಾಶಿವಿಶ್ವನಾಥ ನಗರದ ನಿವಾಸಿ 80 ವರ್ಷದ ಮಹಿಳೆ ಜೂನ್-03 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -07 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ರಾಜೀವಗಾಂಧಿ ನಗರ ನಿವಾಸಿ 72 ವರ್ಷದ ವ್ಯಕ್ತಿ ಜೂನ್- 06 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 07 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 248 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23639 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1190 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 115 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗಡ್ಡ ಬೋಳಿಸಿಕೊಳ್ಳಲು ಮೋದಿಗೆ 100 ರೂ. ಮನಿ ಆರ್ಡರ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಪ್ರಧಾನಿ ನರೇಂದ್ರ ಮೋದಿಯವರಿಗೆ 100 ರೂ.ಗಳ ಮನಿ ಆರ್ಡರ್ ಕಳುಹಿಸಿರುವ ಮಹಾರಾಷ್ಟ್ರದ ಬಾರಾಮತಿಯಲ್ಲಿ ಚಹಾ ಮಾರುವ ವ್ಯಕ್ತಿಯೊಬ್ಬ, ಉದ್ದನೆಯ ಗಡ್ಡವನ್ನು ಬೋಳಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾನೆ!

ಕೋವಿಡ್-ಪ್ರೇರಿತ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಅಸಮಾಧಾನಗೊಂಡ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿ ಮಾಲಕ ಅನಿಲ್ ಮೋರೆ, ‘ಪ್ರಧಾನಿ ಮೋದಿ ಗಡ್ಡವನ್ನು ಬೆಳೆಸಿದ್ದಾರೆ. ಅವರು ದೇಶದ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ದೇಶದ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಯತ್ನಿಸಬೇಕು ಹಾಗೂ ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದ್ದಾನೆ.

ನಾನು ಉಳಿತಾಯ ಮಾಡಿರುವ 100 ರೂ.ಗಳನ್ನು ಅವರಿಗೆ ರೂ.ಕಳುಹಿಸಿದ್ದೇನೆ. ಅವರು ತಮ್ಮ ಗಡ್ಡವನ್ನು ಕ್ಷೌರ ಮಾಡಿಕೊಳ್ಳಲಿ. ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಬೆಳೆಯುತ್ತಿರುವುದರಿಂದ ಅವರ ಗಮನ ಸೆಳೆಯಲು ಈ ಮಾರ್ಗ ತುಳಿದಿದ್ದೇನೆ’ ಎಂದು ಹೇಳಿದ್ದಾನೆ.

ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ಹಾಗೂ ಲಾಕ್ ಡೌನ್ ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ.ಗಳ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮೋರೆ ಒತ್ತಾಯಿಸಿದ್ದಾನೆ.

ಗ್ಯಾಸ್‌ ಡೀಲರ್ ಶಿಪ್ ಕೊಡುವುದಾಗಿ ವ್ಯಾಪಾರಿಗೆ 16 ಲಕ್ಷ ರೂ, ವಂಚನೆ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಮುಂಬೈನ ವ್ಯಕ್ತಿಯೊಬ್ಬ ಗಣ್ಯ ವ್ಯಾಪಾರಿಯೊಬ್ಬರಿಗೆ ಗ್ಯಾಸ್ ಡೀಲರ್ ಶಿಪ್ ಕೊಡುವುದಾಗಿ ಹಣ ಪಡೆದು ಮೋಸ‌ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿಯ ಗಣ್ಯ ವ್ಯಾಪಾರಸ್ಥ ರಾಜಕುಮಾರ ಪರುತಪ್ಪ ಮುಳ್ಳೂರು ಎಂಬುವವರಿಗೆ ಮುಂಬೈನ ಆಶೀಸ್ ಶಿಂಕ್ಲಾ ಎಂಬಾತ 2020 ಆಗಸ್ಟ್ ತಿಂಗಳಿನಲ್ಲಿ ಫೇಸ್‌ಬುಕ್‌ ನಲ್ಲಿ ವಿವಿಧ ಗ್ಯಾಸ್ ಡೀಲರ್ ಶಿಪ್ ಗಾಗಿ ಜಾಹೀರಾತು ನೀಡಿ ಆನ್ಲೈನ್ ಅರ್ಜಿ ಹಾಕಲು ತಿಳಿಸಿದ್ದ.

ಜಾಹೀರಾತು ಗಮನಿಸಿದ ಸ್ಥಳೀಯ ವ್ಯಾಪಾರಸ್ಥ ರಾಜಕುಮಾರ ಎಂಬುವವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿದ್ದರು. ಆದಾದ ನಂತರ ವ್ಯಾಪಾರಿ ರಾಜಕುಮಾರ ಅವರಿಗೆ ಆರೋಪಿ ಆಶೀಸ್, ಫಾರ್ಮ್ ಫೀಸ್, ಪ್ರೊಸೆಸ್ಸಿಂಗ್ ಫೀಸ್, ಜಿಎಸ್ಟಿ, ಎನ್ಒಸಿ ಅಂತ ಹೇಳಿ ಹಂತ -ಹಂತವಾಗಿ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 16ಲಕ್ಷ , 22 ಸಾವಿರ ರೂ,ಗಳನ್ನು ನೆಫ್ತ್ ಹಾಗೂ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡು ಗ್ಯಾಸ್ ಡೀಲರ್ ಶಿಪ್ ಕೊಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾನೆ.

ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ಆರೋಪಿ ಆಶೀಸ್ ಬಂಧನಕ್ಕೆ ಜಾಲ ಬೀಸಿದ್ದಾರೆ.

ರೈತರಿಗೆ ಗೊಬ್ಬರ, ಬೀಜ ಉಚಿತವಾಗಿ ನೀಡಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕಿನಿಂದ ಅನೇಕ ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ರೈತಾಪಿ ವರ್ಗದ ಜನರ ಸಂಕಷ್ಟ ಹೇಳತೀರದು. ಹೀಗಾಗಿ ಸರಕಾರ ಮುಂಗಾರು ಬಿತ್ತನೆಗೆ ರೈತ ಸಮುದಾಯಕ್ಕೆ ಬೀಜ ಹಾಗೂ ಗೊಬ್ಬರ‌ ಉಚಿತವಾಗಿ ನೀಡಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಸಂಯೋಜಕ ರಾಜು ಪೆಂಡಾರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಲಾಕ್ ಡೌನ್ ನಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ದೇ ಪರಿತಪಿಸುವಂತಹ ಸಮಯದಲ್ಲಿ ಸರಕಾರ ಅವರ ಕೈ ಹಿಡಿಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಕೃಷಿ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಪೆಂಡಾರ ಮನವಿ ಮಾಡಿದ್ದಾರೆ.

error: Content is protected !!