Home Blog Page 3318

ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಸುಜಾತ ದೊಡ್ಡಮನಿ ಅರ್ಜಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಬೆಂಗಳೂರು

ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕ್ಷೇತ್ರದ ಹಲವು ಮುಖಂಡರ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಿ. ಎಲ್. ನಾಡಗೌಡ್ರು, ಎಸ್. ಡಿ ಮಕಾಂದಾರ, ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷರಾದ ನೀಲಮ್ಮ ಬೋಳನವರ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಎಮ್.ಯು. ಮಕಾಂದಾರ, ಮುಂಡರಗಿ ಪುರಸಭೆಯ ಮಾಜಿ ಸದಸ್ಯರಾದ ದಾನೇಶ್ವರಿ ಭಜಂತ್ರಿ, ಭುವನೇಶ್ವರಿ, ಮಹಾದೇವಕ್ಕ ಹಳ್ಳಿ, ಬಸಮ್ಮ ಕಾಮಣ್ಣವರ್, ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷರಾದ ರುದ್ರಮ್ಮ ಕೆರಕಲಮಟ್ಟಿ, ರಾಜಣ್ಣ ದಾವಣಗೆರೆ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಎಸ್. ಪಾಟೀಲ ಆಯ್ಕೆ

ನ. 14 ರಂದು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ರೋಣ

ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಆಯ್ಕೆಗೊಂಡಿದ್ದು ನ. ೧೪ ರಂದು ಕೆಪಿಸಿಸಿ ಕಚೇರಿಯಲ್ಲಿ ಉಮೇದುವಾರಿಕೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ ಹೇಳಿದರು.

ಅವರು ಶನಿವಾರ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿ.ಎಸ್.ಪಾಟೀಲರು ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕ್ಷೇತ್ರದಲ್ಲಿರುವ ಸರ್ವ ಜನಾಂಗದವರನ್ನು ತಮ್ಮ ಕುಟುಂಬದ ಸದಸ್ಯರಂತೆ ಇಂದಿಗೂ ಕಾಣುತ್ತಾ ಬಂದಿದ್ದಾರೆ. ಇಂಥಹ ನಾಯಕರನ್ನು ನಾವು ಪಡೆದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ೨೦೨೩ಕ್ಕೆ ನಡೆಯುವ ವಿಧಾನ ಸಭೆಯ ಚುನಾವಣೆಗೆ ರೋಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಜಿ.ಎಸ್.ಪಾಟೀಲ ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಎಚ್.ಎಸ್.ಸೋಂಪುರ ಮಾತನಾಡಿ, ಜಿ. ಎಸ್. ಪಾಟೀಲರು ಮಾತೃ ಹೃದಯ ಹೊಂದಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಮಾತೃ ಹೃದಯಿ ಪಾಟೀಲರನ್ನು ಅಭೂತ ಪೂರ್ವವಾಗಿ ಗೆಲ್ಲಿಸಬೇಕು. ರೋಣದಲ್ಲಿ ಜರುಗಿದ ಪೂರ್ವಭಾವಿ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಯಕರ್ತರನ್ನು ಕಂಡರೆ ಸಾಕು ಜಿ.ಎಸ್.ಪಾಟೀಲರ ತಾಯಿ ಹೃದಯ ಇರುವುದನ್ನು ಸಾಕ್ಷೀಕರಿಸುತ್ತದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದರು.

ಮಾಜಿ ಶಾಸಕ ಜಿ.ಎಸ್.ಪಾಟೀಲ, ವಿ. ಆರ್. ಗುಡಿಸಾಗರ, ವಿ. ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಆನಂದ ಚಂಗಳಿ, ಇಸ್ಮಾಯಿಲ್ ಹೊರಪೇಟಿ, ಅಂದಪ್ಪ ಬಿಚ್ಚೂರ, ಪರಶುರಾಮ ಅಳಗವಾಡಿ, ಪ್ರಭು ಮೇಟಿ, ಬಸವರಾಜ ನವಲಗುಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ನಕಲಿ ಚಿನ್ನಾಭರಣ ಒತ್ತೆಯಿಟ್ಟು ಸಾಲ ಪಡೆದು ಮೋಸ; ದತ್ತು ಬಾಕಳೆ ಅಲಿಯಾಸ್ ಯಶ್ ಬಾಕಳೆ ಸೇರಿ ನಾಲ್ವರ ಮೇಲೆ ಚೀಟಿಂಗ್ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ನಕಲಿ ಚಿನ್ನಾಭರಣವನ್ನು ಅಡವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿರುವ ಎರಡು ಪ್ರಕರಣಗಳು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಅಂಥದೇ ಇನ್ನೊಂದು ವಂಚನೆಯ ಪ್ರಕರಣ ಬೆಳಕಿಗೆ ಬಂದಿದ್ದು, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿ.6.5.2022ರ ಮುಂಜಾನೆ 11 ಗಂಟೆಯಿಂದ 9.6.2022ರ ಸಂಜೆ 4 ಗಂಟೆಯ ನಡುವಿನ ಅವಧಿಯಲ್ಲಿ ಈ ವಂಚನೆ ನಡೆದಿದೆಯೆಂದು ಗದಗ ಶಹರದ ಹಳೆಯ ಡಿ.ಸಿ. ಕಛೇರಿಯ ಬಳಿಯಿರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರಾದ ಸಿದ್ದರಾಮೇಶ್ವರ ನಗರದ ಪ್ರವೀಣ ಗಣೇಶ ನಿಡಗುಂದಿ(24), ಉಸಗಿನಕಟ್ಟಿ ಓಣಿಯ ರವಿ ಹತ್ತರಕಲ್(21), ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್ ಬಾಕಳೆ ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ.

ಈ ಮೂರು ಜನ ಸ್ವಲ್ಪವೇ ಬಂಗಾರದ ಲೇಪನವಿರುವ ಆಭರಣಗಳನ್ನು ತೋರಿಸಿ ಸಂಪೂರ್ಣ ಬಂಗಾರದ್ದೆಂದು ಸುಳ್ಳು ಹೇಳಿ ಅಡವಿಟ್ಟು 46,34,969 ರೂ.ಗಳ ಸಾಲ ಪಡೆದು ಬ್ಯಾಂಕಿಗೆ ಮೋಸವೆಸಗಿದ್ದಾರೆ.

ಆರೋಪಿಗಳು ಈ ಆಭರಣಗಳನ್ನು ಅಡವಿಡುವ ಸಮಯದಲ್ಲಿ ಬ್ಯಾಂಕಿನ ಆಭರಣ ಪರೀಕ್ಷಕ ಗದಗ ನಗರದ ಕಾಳಮ್ಮ ದೇವಸ್ಥಾನ ಬಳಿಯ ಮೋಹನ ಎಸ್.ಪ್ಯಾಟಿ ಕೂಡ ಆರೋಪಿತರೊಂದಿಗೆ ಶಾಮೀಲಾಗಿದ್ದು, ಆರೋಪಿಗಳು ಅಡವಿಟ್ಟ ಆಭರಣಗಳು 22 ಕ್ಯಾರೆಟ್ ಬಂಗಾರದ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾರದಿಂದೀಚೆಗೆ ವರದಿಯಾಗುತ್ತಿರುವ ಮೂರನೇ ಪ್ರಕರಣ ಇದಾಗಿದ್ದು, ಕೆಲ ಆರೋಪಿಗಳು ಈ ಮೂರೂ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದನ್ನು ಗಮನಿಸಿದರೆ, ಇನ್ನೂ ಹಲವು ಬ್ಯಾಂಕ್‌ಗಳಲ್ಲಿಯೂ ಇಂಥದೇ ವಂಚನೆ ನಡೆಸಿ ಸಾಲ ಪಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸ್ ತನಿಖೆಯಿಂದ ವಿವರಗಳು ತಿಳಿದುಬರಬೇಕಿದೆ.

ಡಿವೈಡರ್ ಗೆ ಕಾರು ಡಿಕ್ಕಿ; ಇಬ್ಬರು ಮಹಿಳೆಯರ ಸಾವು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ನಾಯಿ ಉಳಿಸಲು ಹೋಗಿ ಕಾರು ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಪರಿಣಾಮವಾಗಿ ಇಬ್ಬರು ಮಹಿಳೆಯರು ಮೃತಪಟ್ಟು, ಓರ್ವ ಗಾಯಗೊಂಡ ದುರ್ಘಟನೆ ಜರುಗಿದೆ.

ಜಿಲ್ಲೆಯ ಚಿಕ್ಕಬೆನ್ನೂರು ಸಮೀಪ ನಡೆದ ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಮಾನ್ಸಿ (38) ಹಾಗೂ ಉಜ್ವಲ್ ಬಾರ್ವಿ (45) ಮೃತಪಟ್ಟಿದ್ದು, ಸಚಿನ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನ ‌ಮುಗಿಸಿಕೊಂಡು ವಾಪಾಸು ಮಹಾರಾಷ್ಟ್ರದತ್ತ ತೆರಳುವಾಗ ಈ ಘಟನೆ ನಡೆದಿದೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಆಟಕ್ಕುಂಟು, ಲೆಕ್ಕಕ್ಕಿಲ್ಲದ ತಾಲೂಕು ಕೇಂದ್ರ!

0

ಪೂರ್ಣಪ್ರಮಾಣದ ಸೌಲಭ್ಯಗಳಿಗಾಗಿ ಆಗ್ರಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ೫ ವರ್ಷ ಕಳೆಯುತ್ತಾ ಬಂದರೂ ತಹಸೀಲ್ದಾರ ಕಚೇರಿ ಹೊರತುಪಡಿಸಿ ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು, ಸಿಬ್ಬಂದಿ ಮತ್ತು ಪ್ರತ್ಯೇಕ ಬಜೆಟ್ ಇಲ್ಲದ್ದರಿಂದ ತಾಲೂಕು ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

೨೦೧೭ ರ ಕೊನೆಗೆ ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆಯಾಗಿ ಇದುವರೆಗೂ ಸೋರುತ್ತಿರುವ ಎಪಿಎಂಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದ ತಹಸೀಲ್ದಾರ ಕಚೇರಿ ಇದೀಗ ಸಣ್ಣದಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಭೂದಾಖಲೆಗಳ ಕೊಠಡಿ ಸ್ಥಳಾಂತಗೊಳ್ಳದ್ದರಿಂದ ಮತ್ತು ಸ್ಥಳಾಂತರಗೊಳ್ಳಲು ಭದ್ರವಾದ ಸ್ಥಳಾವಕಾಶ ಇಲ್ಲದ್ದರಿಂದ ಭೂ ದಾಖಲೆಗಾಗಿ ಶಿರಹಟ್ಟಿಗೆ ಅಲೆಯಬೇಕಾದ ಪರಿಸ್ಥಿತಿ ತಪ್ಪಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರತ್ಯೇಕ ತಾಲೂಕು ಪಂಚಾಯತಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದರೂ ಸಿಬ್ಬಂದಿ, ಕಟ್ಟಡ, ಅನುದಾನ ಇಲ್ಲದ್ದರಿಂದ ಇದೂ ಸಹ ತಹಸೀಲ್ದಾರ ಕಚೇರಿಗೆ ಹೊರತಾಗಿಲ್ಲ ಎನ್ನಬಹುದು.

ಯಾವ ತಾಲೂಕು ಕಚೇರಿಗಳಿಲ್ಲ?

ಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಆರಕ್ಷಕ, ಸಮಾಜ ಕಲ್ಯಾಣ ಇಲಾಖೆ, ಭೂದಾಖಲೆ ಮತ್ತು ಮಾಪನ ಇಲಾಖೆ, ಬಿಸಿಎಂ, ಪಿಡಬ್ಲ್ಯೂಡಿ, ಆರೋಗ್ಯ, ರೇಷ್ಮೆ, ಅರಣ್ಯ(ಸಾಮಾಜಿಕ ಮತ್ತು ಪ್ರಾದೇಶಿಕ), ಕೃಷಿ, ತೋಟಗಾರಿಕೆ, ಅಬಕಾರಿ, ಜಲಾನಯನ ಸೇರಿ ಬಹುತೇಕ ಇಲಾಖೆಗಳಿಲ್ಲದ್ದರಿಂದ ಆಯಾ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು, ನೌಕರರು ಶಿರಹಟ್ಟಿ ತಾಲೂಕಿಗೆ ಅಲೆದಾಡಬೇಕಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಕೆಲ ತಾಲೂಕು ಕಚೇರಿಗಳು ಧೂಳು ತಿನ್ನುತ್ತಿದ್ದು, ಹಾಕಿದ ಬೀಗ ತುಕ್ಕು ಹಿಡಿದಿವೆ ಎನ್ನಲಾಗಿದೆ.

ಆಗ್ರಹ

ಲಕ್ಷ್ಮೇಶ್ವರ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವಂತಾಗಬೇಕು ಮತ್ತು ಮಿನಿ ವಿಧಾನಸೌಧ ನಿರ್ಮಾಣವಾಗಬೇಕು.

ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಬೇಕು. ಗದಗ-ಯಲವಗಿ ರೇಲ್ವೆ ಮಾರ್ಗ ಕಾರ್ಯಾರಂಭಗೊಳ್ಳುವಂತಬೇಕು. ಲಕ್ಷ್ಮೇಶ್ವರಕ್ಕೆ ತುಂಗಭದ್ರಾ ಕುಡಿಯುವ ನೀರಿನ ಪ್ರತ್ಯೇಕ ಯೋಜನೆ ಕಲ್ಪಿಸಬೇಕು. ಹೊಸ ಪದವಿ, ಪಪೂ, ವಸತಿಯುವ ಶಾಲೆಗಳು, ಹಾಸ್ಟೆಲ್‌ಗಳು ಸ್ಥಾಪನೆಯಾಗಬೇಕು. ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಬೇಕು. ತಾಲೂಕಾ ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣವಾಗಬೇಕು.

ಲಕ್ಷ್ಮೇಶ್ವರ ಸೇರಿ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಬೇಕು, ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಅನುದಾನದ ಕೊರತೆಯಿಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಅದಕ್ಕಾಗಿ ವಿಶೇಷ ಅನುದಾನ ಕಲ್ಪಿಸಬೇಕು, ಎಂಬಿತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂಬುದು ಲಕ್ಷ್ಮೇಶ್ವರ ಭಾಗದ ಜನರ ಒತ್ತಾಸೆಯಾಗಿದೆ ಎಂದು ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಆಗ್ರಹಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆ ಮಾಡಿ ಕೈ ತೊಳೆದುಕೊಂಡಿರುವ ಸರ್ಕಾರ ಅವಶ್ಯಕ ಕಚೇರಿ, ಸಿಬ್ಬಂದಿ, ಬಜೆಟ್ ನೀಡುವ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಲಕ್ಷ್ಮೇಶ್ವರ ತಾಲೂಕು ಜಿಲ್ಲೆಯಲ್ಲಿಯೇ ಶಿಕ್ಷಣ, ವಾಣಿಜ್ಯ, ಕೃಷಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ೫೦ ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಸೇರಿ ೩೮ ಗ್ರಾಮಗಳ ಜನರು ಸರ್ಕಾರಿ ಕೆಲಸಕ್ಕಾಗಿ ಶಿರಹಟ್ಟಿಗೆ ಅಲೆಯುವುದು ತಪ್ಪದಂತಾಗಿದೆ. ನೆರೆಯ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಪ ಸದಸ್ಯರು ಜವಾಬ್ದಾರಿಯುತವಾದ ಕಾರ್ಯಕ್ಕೆ ಮುಂದಾಗಬೇಕು.

-ಪದ್ಮರಾಜ ಪಾಟೀಲ್, ಜೆಡಿಎಸ್ ತಾಲೂಕಾ ಅಧ್ಯಕ್ಷ

ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಭೂದಾಖಲೆಗಳ ಸಂಗ್ರಹ-ಸಂರಕ್ಷಣೆಗೆ ಸೂಕ್ತವಾದ ಸ್ಥಳಾವಕಾಶದ ಕೊರತೆಯಿಂದ ಭೂದಾಖಲೆಗಾಗಿ ಶಿರಹಟ್ಟಿಗೆ ಹೋಗಬೇಕಾಗಿದೆ. ಹೊಸ ತಾಲೂಕಿಗೆ ಶಿಕ್ಷಣ, ಭೂಮಾಪನ, ಕೃಷಿ, ಆರೋಗ್ಯ ಸೇರಿ ಎಲ್ಲ ತಾಲೂಕು ಕಚೇರಿಗಳ ಕಾರ್ಯಾರಂಭದ ಬಗ್ಗೆ ವರದಿ ಮತ್ತು ಸಾರ್ವಜನಿಕರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗಿದೆ.

-ಪರಶುರಾಮ ಸತ್ತಿಗೇರಿ, ತಹಸೀಲ್ದಾರ್, ಲಕ್ಷ್ಮೇಶ್ವರ

ಬೆಕ್ಕಿನ ಮರಿಯಾಸೆಗೆ ಮನೆ ಸೇರಿದ ನಾಗರಹಾವು!

0

ವಿಜಯಸಾಕ್ಷಿ ಸುದ್ದಿ, ಗದಗ/ನರಗುಂದ

ಹಾವು-ಮುಂಗುಸಿಯಾಟ ನೋಡಿರುತ್ತೀರಿ. ಇಲಿ-ಬೆಕ್ಕುಗಳಾಟವನ್ನೂ ಸಾಕಷ್ಟು ಕಂಡಿರುತ್ತೀರಿ. ಆದರೆ, ಹಾವು-ಬೆಕ್ಕಿನಾಟ ತುಸು ಅಪರೂಪವೇ. ಅಂಥದೊಂದು ದೃಶ್ಯ ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲಿರುವ ಅಜ್ಜು ಪಾಟೀಲ ಎಂಬುವವರ ತೋಟದ ಮನೆಯಲ್ಲಿ ಕಂಡುಬಂತು.

ತೋಟದ ನಡುವೆಯಿರುವ ಮನೆಯಾಗಿದ್ದರಿಂದ ಹುಳ-ಹುಪ್ಪಟೆಗಳು, ಹೆಸರೂ ಕೇಳಿರದ ಕೀಟಗಳು, ಹಾವುಗಳ ಸಂಚಾರ ಸಾಮಾನ್ಯವೇ. ಮನೆಯಲ್ಲಿ ಸಾಕಷ್ಟು ಬೆಕ್ಕುಗಳು, ಪುಟ್ಟ ಪುಟ್ಟ ಬೆಕ್ಕಿನ ಮರಿಗಳೂ ಇದ್ದವು. ಅದು ಹೇಗೋ ನಾಗರಹಾವೊಂದು ತೋಟದ ಮನೆಯೊಳಗೆ ಸೇರಿಕೊಂಡಿತ್ತು. ನಾಗರ ಹಾವನ್ನು ಕಂಡ ಬೆಕ್ಕುಗಳು ಚೀರತೊಡಗಿದ್ದವು. ಮನೆಯವರು ಗಲಾಟೆ ಕೇಳಿ ಮನೆಯೆಲ್ಲ ತಡಕಾಡಿದಾಗ ಭಾರೀ ಗಾತ್ರದ ನಾಗರಹಾವು ಕಣ್ಣಿಗೆ ಬಿದ್ದಿತ್ತು.

ಗಾಬರಿಗೊಂಡ ಬೆಕ್ಕು ಹಾಗೂ ಬೆಕ್ಕಿನ ಮರಿಗಳ ಗಲಾಟೆಯೂ ಜೋರಾಗಿತ್ತು. ಹಾವು ಅಲ್ಲಿ ಇಲ್ಲಿ ಸುತ್ತಾಡಿ, ಅಡುಗೆ ಮನೆಯನ್ನು ಸೇರಿಕೊಂಡಿತ್ತು. ದಿಕ್ಕು ತೋಚದ ಮನೆಯವರು ಹಾವು ಹಿಡಿಯುವ ಸ್ನೇಕ್ ಬುಡ್ಡಾರಿಗೆ ಫೋನಾಯಿಸಿ ಕರೆಸಿದರು. ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ ನಾಗರ ಹಾವನ್ನು ಹುಡುಕಿ, ಸುರಕ್ಷಿತವಾಗಿ ಹಿಡಿದು, ಕಾಡಿನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.

ಬೆಕ್ಕಿನ ಮರಿಗಳ ಆಸೆಯಿಂದ ಹಾವು ಮನೆಯೊಳಗೆ ಸೇರಿಕೊಂಡಿರಬಹುದು ಎಂದು ಸ್ನೇಕ್ ಬುಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ವಾಹನ ಕಳುವಾದರೆ ಆನ್‌ಲೈನ್‌ನಲ್ಲೇ ಕಂಪ್ಲೇಂಟ್ ಕೊಡಿ!!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ರಾಜ್ಯ ಪೊಲೀಸ್ ಇಲಾಖೆ ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಮೋಟಾರು ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಪ್ರಥಮ ವರ್ತಮಾನ ವರದಿ ಇ-ಎಫ್‌ಐಆರ್ ನೋಂದಣಿ ಮಾಡಲು ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಪಡೆಯಬಹುದಾಗಿದೆ. ಇದರಿಂದ ದೂರುದಾರರು ತಾವು ಕುಳಿತಲ್ಲೇ ಇಂಟರ್‌ನೆಟ್ ಸಹಾಯದಿಂದ ಕಂಪ್ಯೂಟರ್ ಇಲ್ಲವೇ ಮೊಬೈಲ್ ಮೂಲಕ ಕೆಲವೇ ಕ್ಷಣಗಳಲ್ಲಿ ಇ-ಎಫ್‌ಐಆರ್ ದಾಖಲಿಸಬಹುದಾಗಿದೆ.

ಇ-ಎಫ್‌ಐಆರ್ ದಾಖಲಿಸುವುದು ಹೇಗೆ ?

ಲಾಗಿನ್ ಆಗಬೇಕು, ನಂತರ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಪೇಜ್‌ನಲ್ಲಿ ಸಾರ್ವಜನಿಕ ಸೇವಾ ಕೇಂದ್ರ ಪೋರ್ಟಲ್‌ನ ಮೇಲೆ ಕ್ಲಿಕ್ ಮಾಡಿದ ನಂತರ ನಾಗರಿಕ ಕೇಂದ್ರಿತ ಪುಟ ತೆರೆಯುತ್ತದೆ. ಇಲ್ಲಿ ಈಗಾಗಲೇ ನೋಂದಾಯಿತ ಬಳಕೆದಾರರಿದ್ದಲ್ಲಿ ನೇರವಾಗಿ ಲಾಗ್ ಇನ್ ಆಗಬಹುದು. ಇಲ್ಲವಾದರೆ ತಮ್ಮ ನೋಂದಾಯಿತ ಆಧಾರ ಹಾಗೂ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಆಯ್ಕೆ ಮಾಡಿಕೊಳ್ಳಬೇಕು.

ತದನಂತರ ಪೋರ್ಟಲ್‌ನಲ್ಲಿ ಕ್ರಿಯೇಟ್ ಮಾಡಿಕೊಂಡಂತಹ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಸೈನ್-ಇನ್ ಆಗಿ ಕಳ್ಳತನವಾದಂತಹ ವಾಹನದ ಬಗ್ಗೆ ಇ-ಎಫ್‌ಐಆರ್ ನೋಂದಾಯಿಸುವುದಕ್ಕೆ ವೆಹಿಕಲ್ ಥೆಫ್ಟ್ ಆಪ್ಸ್ನ್ ಕ್ಲಿಕ್ ಮಾಡಿ, ಅದರಲ್ಲಿ ಬರುವ ಹೆಸರು ವಿಳಾಸ ಮತ್ತು ಕಳ್ಳತನವಾದ ವಾಹನದ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು.


ಈ ಸಂದರ್ಭದಲ್ಲಿ ಆಧಾರ ದತ್ತಾಂಶದಿಂದ ಬರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲಿಕ್ಕೆ ಅವಕಾಶವಿರುವದಿಲ್ಲ. ಜೊತೆಗೆ ಕಳವಾದ ಸ್ಥಳವನ್ನು ಜಿಪಿಎಸ್ ಮೂಲಕ ಮತ್ತು ಸಮಯ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಯನ್ನು ನಮೂದಿಸಬೇಕು.

ವಾಹನದ ನೋಂದಣಿ ನಂಬರ್ ದಾಖಲು ಮಾಡಿದ ನಂತರ ಇನ್ನಿತರೆ ಮಾಹಿತಿಯು ತಾನಾಗಿಯೇ ಭರ್ತಿ ಮಾಡಿಕೊಳ್ಳುತ್ತದೆ. ದೂರು ಪ್ರತಿ, ವಾಹನದ ನೋಂದಣಿ ಪತ್ರ, ಇನ್ಶುರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನೋಂದಾಯಿತ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಇ-ಸಹಿಯನ್ನು ದೃಢೀಕರಿಸಿದ ನಂತರ ಭರ್ತಿ ಮಾಡಿದ ಎಲ್ಲ ಮಾಹಿತಿಯನ್ನು ಸಬ್‌ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ದೂರನ್ನು ದಾಖಲಿಸಬೇಕು.

ಇ-ಎಫ್‌ಐಆರ್ ಪಡೆಯುವುದು ಹೇಗೆ ?

ದೂರು ದಾಖಲಾದ ನಂತರ ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಠಾಣೆಯ ಠಾಣಾಧಿಕಾರಿ ಹಾಗೂ ಫಿರ್ಯಾದಿದಾರರಿಗೆ ನೋಂದಾಯಿಸಿದ ಎಸ್‌ಎಂಎಸ್ ಸಂದೇಶ ರವಾನಿಸಲಾಗುತ್ತದೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಬ್‌ಮಿಟ್ ಮಾಡಿದ ನಂತರ ಫಿರ್ಯಾದುದಾರರಿಗೆ ೨ ಗಂಟೆಯೊಳಗೆ ಆಧಾರ ಇ-ಸಹಿ ಮಾಡುವಂತೆ ಎಸ್‌ಎಂಎಸ್ ರವಾನೆಯಾಗುತ್ತದೆ. ಫಿರ್ಯಾದುದಾರರು ಸಿಸಿಬಿ ಪೋರ್ಟ್ ನಲ್ಲಿ ಲಾಗ್-ಇನ್ ಆಗಿ ಆಧಾರ ಇ-ಸಹಿ ಮಾಡಿದ ನಂತರ ಮತ್ತೆ ಸಂಬಂಧಿಸಿದ ಠಾಣಾಧಿಕಾರಿಗೆ ಇ-ಸಹಿಯನ್ನು ಮಾಡುವಂತೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ರವಾನೆಯಾಗುತ್ತದೆ.

ಠಾಣಾಧಿಕಾರಿ ಇ-ಸಹಿ ಮಾಡಿದ ನಂತರ ಪ್ರಥಮ ವರ್ತಮಾನ ವರದಿಯಲ್ಲಿ ಫಿರ್ಯಾದುದಾರರು ಮತ್ತು ಠಾಣಾಧಿಕಾರಿ ಇಬ್ಬರು ಮಾನ್ಯ ಮಾಡಿದ ಸಹಿಯೊಂದಿಗೆ ಪ್ರಥಮ ವರ್ತಮಾನ ವರದಿ ಅಥವಾ ಇ-ಎಫ್‌ಐಆರ್ ಜನರೇಟ್ ಆಗಲಿದೆ. ನಂತರ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅರಿವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕಳ್ಳತನವಾದಂತಹ ವಾಹನಗಳ ಬಗ್ಗೆ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗಳಿಗೆ ಅಲೆದಾಡದೇ ಕುಳಿತಲ್ಲಿಯೇ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಇ-ಎಫ್‌ಐಆರ್ ಪಡೆಯುವ ಬಗ್ಗೆ ಅರಿವು ಮೂಡಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗುತ್ತಿವೆ.

ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವುದಕ್ಕೆ ಇಲಾಖೆ ವತಿಯಿಂದ ಈಗಾಗಲೇ ಹಲವಾರು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದೀಗ ಕಳ್ಳತನವಾದಂತಹ ವಾಹನಗಳ ದೂರು ದಾಖಲಿಸಲು ಪೊಲೀಸ್ ಠಾಣೆಗಳ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಇಂಟರ್‌ನೆಟ್ ಸಹಾಯದಿಂದ ಕುಳಿತಲ್ಲಿಯೇ ಇ-ಎಫ್‌ಐಆರ್ ಮೂಲಕ ದೂರು ದಾಖಲಿಸಿ ಪ್ರತಿಯನ್ನು ಪಡೆಯಬಹುದಾಗಿದೆ. ಇದರಿಂದ ತಕ್ಷಣವೇ ಸಿಸ್ಟಮ್‌ನಲ್ಲಿ ಚೆಕ್ ಆಗಲು ಸಹಕಾರಿಯಾಗಲಿದೆ. ಕಳವಾದ ಮೊಬೈಲ್ ಹಾಗೂ ಡುಪ್ಲಿಕೇಟ್ ಸಿಮ್‌ಗಳಿಗೂ ಸಹ ಇಲಾಖೆಯ ವೆಬ್‌ಸೈಟ್ ಮೂಲಕ ಇ-ಲಾಸ್ಟ್ ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಬೇಗ ಆಗುವುದರ ಜೊತೆಗೆ ಸಮಯವೂ ಸಹ ಉಳಿಯಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

-ಶಿವಪ್ರಕಾಶ ದೇವರಾಜು, ಎಸ್ಪಿ. ಗದಗ

ಭೀಕರ ಅಪಘಾತ; ಆಟೋಗೆ ಗೂಡ್ಸ ವಾಹನ ಡಿಕ್ಕಿ; ಆರು ಮಹಿಳೆಯರ ಸಾವು

0

ವಿಜಯಸಾಕ್ಷಿ ಸುದ್ದಿ, ಬೀದರ್

ಆಟೋಗೆ ಐಶರ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಆರು ಜನ ಮಹಿಳೆಯರು ಮೃತಪಟ್ಟು, ಹನ್ನೊಂದು ಜನ ಗಾಯಗೊಂಡ ದುರ್ಘಟನೆ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ.

ಪ್ರಭಾವತಿ ಗಂಡ ದೇವೇಂದ್ರ (36), ಯಾದಮ್ಮ ಗಂಡ ಅಷ್ಮಿತ (40), ಗುಂಡಮ್ಮ ಗಂಡ ನರಸಿಂಗ್ (60), ಜಗಮ್ಮಾ ಗಂಡ ಪ್ರಭು (34) ಹಾಗೂ ರುಕ್ಮಿಣಿ ಬಾಯಿ ಅಮೃತ (60) ಎಂಬುವವರು ದುರ್ಘಟನೆಯಲ್ಲಿ ಮೃತಪಟ್ಟ ದುರ್ಧೈವಿಗಳು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದು, ಮೃತರು ಚಿಟಗುಪ್ಪಾ ತಾಲೂಕಿನ ಉಡುಬನಹಳ್ಳಿ ಗ್ರಾಮದವರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮಳಖೇಡಾ ಗ್ರಾಮದ ಸರಕಾರಿ ಶಾಲೆಯ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕೂಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ವೇಗವಾಗಿ ಬಂದ ತೆಲಂಗಾಣ ರಾಜ್ಯದ ಐಶರ್ ಗೂಡ್ಸ ವಾಹನ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ನಕಲಿ ಆಭರಣ ಅಡವಿಟ್ಟು ಸಾಲ ಪಡೆದ ಮತ್ತೊಂದು ಪ್ರಕರಣ ಬಯಲಿಗೆ; 11 ಜನರ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಇತ್ತೀಚೆಗಷ್ಟೇ ಗದಗ ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ಮೋಸ ಮಾಡಿದ ಆರೋಪಿಗಳು ಸಿಕ್ಕಿಬೀಳುವ ಮುನ್ನವೇ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಇಲ್ಲಿನ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಕೋಟ್ಯಂತರ ರೂ. ಸಾಲ ಪಡೆದು ಮೋಸವೆಸಗಿರುವ ಬಗ್ಗೆ ಬೆಟಗೇರಿ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.

ಭೂಮರಡ್ಡಿ ವೃತ್ತದ ಬಳಿಯಿರುವ ಯೂನಿಯನ್ ಬ್ಯಾಂಕ್‌ನ ಗಿರೀಶ್ ಈರಣ್ಣ ಕೇಶಟ್ಟಿ ಪ್ರಕರಣದ ಕುರಿತು ನೀಡಿದ ದೂರಿನಲ್ಲಿ, ಜುಲೈ 7ರ ಮುಂಜಾನೆ 10.30ರಿಂದ ಜುಲೈ 27ರ ಸಂಜೆ 5 ಗಂಟೆಯ ನಡುವಿನ ಸಮಯದಲ್ಲಿ ಜವಳಗಲ್ಲಿಯ ಮಾಣಿಕ ಲಕ್ಕುಂಡಿ, ತಳಗೇರಿ ಓಣಿಯ ನಾಗರಾಜ ಪೆದ್ದಪ್ಪ ರಾಮಗಿರಿ, ರಾಘವೇಂದ್ರ ನೀರಲಕೇರಿ, ವೆಲ್‌ಫೇರ್ ಟೌನ್‌ಶಿಪ್‌ನ ಸುಚೀತ್‌ಕುಮಾರ್ ಹರಿವಾನ, ತೆಗ್ಗಿನಪೇಟೆಯ ನಿಹಾಲ್ ಕಬಾಡಿ, ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ. ಮಾದರ,

ಜವಳಗಲ್ಲಿಯ ಹಮೀದಾಬೇಗಂ ಬಡೇಖಾನ, ಎಸ್.ಎಂ.ಕೃಷ್ಣ ನಗರದ ಸಂತೋಷ ವೀರಶಟ್ಟಿ, ಗಣೇಶ ಕಾಶಪ್ಪ ಹೊಂಬಳ, ಸಿದ್ದರಾಮೇಶ್ವರ ನಗರದ ಮಂಜುನಾಥ ಯಲ್ಲಪ್ಪ ಮಣ್ಣವಡ್ಡರ ಇವರೆಲ್ಲರೂ ಸೇರಿಕೊಂಡು ಬಂಗಾರದ ಲೇಪನವಿರುವ 4983.2 ಗ್ರಾಂ ತೂಕದ ಆಭರಣಗಳನ್ನು ತೋರಿಸಿ, ಅದನ್ನು ಯೂನಿಯನ್ ಬ್ಯಾಂಕ್‌ನಲ್ಲಿ ಅಡವಿಟ್ಟು 1,57,66,253 ರೂ ಸಾಲ ಪಡೆದು ಮೋಸ ಮಾಡಿದ್ದಾರೆ.

ಈ ಎಲ್ಲ 10 ಜನ ಆರೋಪಿಗಳೊಂದಿಗೆ 11ನೇ ಆರೋಪಿ, ಬ್ಯಾಂಕಿನ ಜ್ಯುವೆಲ್ ಅಪ್ರೇಜರ್-ವಿಮಲೇಶ ಜ್ಯುವೆಲರ್ಸ್ನ ಸುರೇಶ ಗೋಪಾಲ ರೇವಣಕರ ಕೂಡ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದು, ಆಭರಣಗಳು 22ಕ್ಯಾರೆಟ್‌ನವು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಕಲಿ ಆಭರಣ ಅಡವಿಟ್ಟು ಸಾಲ ಪಡೆದು ಮೋಸ; ದತ್ತು ಬಾಕಳೆ ಸೇರಿ 18 ಜನರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿದ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

2022ರ ಏಪ್ರಿಲ್ 25ರಂದು ಬೆಳಿಗ್ಗೆ 11 ಗಂಟೆಯಿಂದ ಜೂನ್ 29ರ ಮದ್ಯಾಹ್ನ 4 ಗಂಟೆಯ ನಡುವಿನ ಅವಧಿಯಲ್ಲಿ ಪ್ರಕರಣದ 1ನೇ ಆರೋಪಿ ದತ್ತಾತ್ರೇಯ ಬಾಕಳೆ ಹಾಗೂ ಇತರ ಆರೋಪಿಗಳಾದ ಶಿವಮೊಗ್ಗ ಮೂಲದ ಅರುಣಕುಮಾರ್, ಆದಿಲ್.ಎ.ನಿಶಾನಿ, ಬೆಟಗೇರಿಯ ರವಿ.ಕೆ.ಹತ್ತರಕಲ್,

ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ.ಮಾದರ, ಗಣೇಶ ಕಾಶಪ್ಪ ಹೊಂಬಳ, ಮಾಣಿಕ ಲಕ್ಕುಂಡಿ, ಬಸವೇಶ್ವರ ನಗರದ ದಾನೇಶ ಉಮಾದಿ, ರಾಕೇಶ ನವಲಗುಂದ, ಮಂಜುನಾಥ ಹೊಸಮನಿ, ಸುಚೀತ್‌ಕುಮಾರ ಮಲ್ಲಪ್ಪ ಹರಿವಾಣ, ದುಂಡಪ್ಪ ಹರ್ಷ ಕೊಟ್ಟೂರಶೆಟ್ಟರ,

ಸಿದ್ದಾರ್ಥ ಭರಡಿ, ನಾಗರಾಜ ಪೆದ್ದಪ್ಪ ರಾಮಗಿರಿ, ಅರುಣಕುಮಾರ್ ಶಶಿಧರ ಹೂಗಾರ, ಸಚಿನ್ ರಮೇಶ ಹರಿವಾಣ, ಸಂತೋಷ ವೀರಶೆಟ್ಟಿ ಇವರೆಲ್ಲ ನಗರದ ಹಳೇ ಡಿ.ಸಿ. ಕಚೇರಿ ಬಳಿಯಿರುವ ಐಡಿಬಿಐ ಬ್ಯಾಂಕ್‌ಗೆ ಬಂದು  ಬಂಗಾರವೆಂದು ನಂಬಿಸಿ 4871.04 ಗ್ರಾಂ ತೂಕದ ಆಭರಣ ಅಡವಿಟ್ಟು 1,43,34000 ರೂ.ಸಾಲ ಪಡೆದಿದ್ದಾರೆ.

ಅಡವಿಡುವ ಸಮಯದಲ್ಲಿ ೧೮ನೇ ಆರೋಪಿಯಾದ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸುರೇಶ ಗೋಪಾಲ ರೇವಣಕರ ಕೂಡ ಅಡವಿಟ್ಟ ಆಭರಣಗಳು 22 ಕ್ಯಾರೆಟ್‌ನ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ಬ್ಯಾಂಕಿನ ಪರಶುರಾಮ ಗುರುನಾಥ ರೊಟ್ಟಿಗವಾಡ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.