Home Blog Page 3321

ಸ್ಮಶಾನದಲ್ಲಿ ಮುನ್ನೂರು ಮನೆಗಳ ನಿರ್ಮಾಣ, ಯಾರಿಗೂ ಗೊತ್ತಿಲ್ಲ!!

0

ಮೊಹರ್ ಬಿಟ್ಟು ಬಂದ ಸಿಬ್ಬಂದಿ; ತಹಸೀಲ್ದಾರ್ ಸಿಡಿಮಿಡಿ

ವಿಜಯಸಾಕ್ಷಿ ಸುದ್ದಿ, ರೋಣ


ತಾಲೂಕಿನ ಸೋಮನಕಟ್ಟಿ ಗ್ರಾಮದ ಸ್ಮಶಾನದಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ಹೀಗಾಗಿ ತಹಸೀಲ್ದಾರ್ ವಾಣಿ ಉಂಕಿ ಎದುರು ನಂಗೊತ್ತಿಲ್ಲ, ನಿಂಗೊತ್ತಿಲ್ಲ ಎಂಬ ಉತ್ತರವೇ ಬಂದವು.

ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಸೋಮನಕಟ್ಟಿ ಗ್ರಾಮದಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ವಿಷಯ ಬಯಲಿಗೆ ಬಂತು.

ತಾಲೂಕಿನ ಸೋಮನಕಟ್ಟಿ ಗ್ರಾಮದ ೩\೧ ಸರ್ವೆ ನಂ ಆಸ್ತಿಯ ೭ ಎಕರೆ ೩೦ ಗುಂಟೆ ಸ್ಮಶಾನ ಭೂಮಿಯಾಗಿದೆ. ಆದರೆ ಇಲ್ಲಿನ ಗ್ರಾಮಸ್ಥರು ಕಳೆದ ೩೦ ವರ್ಷಗಳಿಂದ ವಾಸ ಮಾಡುವ ಮೂಲಕ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಈಗ ಮನೆಯ ಆಸ್ತಿ ಬಗ್ಗೆ ಹಕ್ಕು ಪತ್ರ ಬೇಕಾಗಿದೆ.

ಆದರೆ ಗ್ರಾಪಂನವರು ಮಾತ್ರ ನೀಡುತ್ತಿಲ್ಲ. ಹೀಗಾಗಿ ವಾಸ ಮಾಡುವ ನಾಗರಿಕರು ಗ್ರಾಮ ವಾಸ್ತವ್ಯದಲ್ಲಿ ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಂತೆ ಸ್ಥಳದಲ್ಲಿ ಪಿಡಿಒಗೆ ತಹಸೀಲ್ದಾರ್ ಹಕ್ಕು ಪತ್ರಗಳನ್ನು ನೀಡುವಂತೆ ತಿಳಿಸಿದರು. ಆಗ ಪಿಡಿಒರವರು ಇದು ಸ್ಮಶಾನ ಭೂಮಿಯಾಗಿದ್ದು, ಹಕ್ಕು ಪತ್ರಗಳನ್ನು ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಮಶಾನವಾದರೆ ಅಲ್ಲಿ ಸರಕಾರಿ ಮನೆಗಳನ್ನು ಕಟ್ಟಲು ಯಾಕೆ ಅವಕಾಶ ಯಾಕೆ ನೀಡಿದಿರಿ. ವಿದ್ಯುತ್ ಪೂರೈಕೆ, ಕುಡಿಯುವ ನೀರು ಸೇರಿದಂತೆ ಸಿಸಿ ರಸ್ತೆಗಳನ್ನು ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒರವರು ಹಿಂದಿನವರು ಏನು ಮಾಡಿದ್ದಾರೆ ಎನ್ನುವುದು ನನಗೆ ಬೇಕಿಲ್ಲ. ಕಾನೂನಿನ ಪ್ರಕಾರ ಹಕ್ಕು ಪತ್ರಗಳನ್ನು ನೀಡಲು ಬರುವುದಿಲ್ಲ. ಆದರೂ ಸಹ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಠರಾವು ಮಾಡುವ ಮೂಲಕ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಈ ಸಭೆಯಲ್ಲಿ ಮತ್ತೊಂದು ಅರ್ಜಿಯನ್ನು ನೀಡಿ ಎಂದರು.

ಇದಕ್ಕೆ ಸಮ್ಮತಿಸಿದ ನಿವಾಸಿಗಳು ದ್ವಿಪ್ರತಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಒಂದಕ್ಕೆ ಮೊಹರ್ ಹಾಕಿ ವಾಪಸ್ಸು ಕೊಡಿ ಎಂದರು. ಆಗ ತಹಸೀಲ್ದಾರ್‌ರು ಮೊಹರ್[ಶೀಲ್] ತರುವಂತೆ ಸಿಬ್ಬಂದಿಗೆ ಸೂಚಿಸಿದರು. ಇದಕ್ಕೆ ಸಿಬ್ಬಂದಿಗಳು ತಂದಿಲ್ಲ ಎನ್ನುತ್ತಿದ್ದಂತೆ ಸಿಡಿಮಿಡಿಗೊಂಡ ಅವರು, ಕಚೇರಿಯಿಂದ ಮೊಹರ್ ತರಿಸಿಕೊಂಡು ನಂತರ ಇವರಿಗೆ ಪ್ರತಿಯನ್ನು ನೀಡಿ ಎಂದು ವಿವಾದಕ್ಕೆ ತೆರೆ ಎಳೆದರು.

ಇನ್ನು ಗ್ರಾಮದಲ್ಲಿ ತಹಸೀಲ್ದಾರ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಚರಂಡಿಯ ಅವ್ಯವ್ಯವಸ್ಥೆ ಬಗ್ಗೆ ದೂರಿದರು. ಇಂತಹ ಮಳೆಯಲ್ಲಿ ನಮ್ಮ ಸ್ಥಿತಿ ಹೇಳಬಾರದಾಗಿದೆ. ಹೀಗಾಗಿ ನಮಗೆ ಶಾಶ್ವತ ಯೋಜನೆಗಳನ್ನು ರೂಪಿಸಿ ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದರು.

ಆಗ ಮಧ್ಯ ಪ್ರವೇಶಿಸಿದ ಗ್ರಾಪಂನವರು ಇದು ಶಾಸಕರ ಅನುದಾನದಿಂದ ಆಗುವ ಕೆಲಸ. ಗ್ರಾಪಂನಿಂದ ಹಂತ ಹಂತವಾಗಿ ಕೆಲಸ ಮಾಡುತ್ತೇವೆ ಎಂದರು. ತಹಸೀಲ್ದಾರ್ ವಾಣಿ ಸಹ ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ೯ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದವು.

ಗ್ರಾಪಂ ಅಧ್ಯಕ್ಷೆ ನಂದಾ ಪರಡ್ಡಿ, ವಿಜಯಲಕ್ಷ್ಮಿ ಹುಬ್ಬಳ್ಳಿ, ಬಸವರಾಜ ಅವದಾರಿ, ಬಿಸಿಎಂ ವಿಸ್ತರಣಾಧಿಕಾರಿ ಎಸ್.ಎಲ್.ಉಪ್ಪಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಖರೀದಿ ಕೇಂದ್ರದ ಅವಾಂತರ; ತಹಸೀಲ್ದಾರ್ ಕಚೇರಿಗೆ ರೈತರ ಮುತ್ತಿಗೆ

0

ಹೆಸರು ಬೆಳೆ ಖರೀದಿಸಲು ಅಧಿಕಾರಿಗಳ ನಿರಾಕರಣೆ

ವಿಜಯಸಾಕ್ಷಿ ಸುದ್ದಿ, ರೋಣ


ಸರಕಾರ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ ಹೆಸರು ಬೆಳೆ ಖರೀದಿಸುವಂತೆ ಖರೀದಿ ಕೇಂದ್ರಗಳನ್ನು ತೆರೆದರೂ ಸಹ ಕೇಂದ್ರದವರು ರೈತರಿಂದ ಹೆಸರನ್ನು ಖರೀದಿಸದೆ ಹಾಗೆ ಬಿಟ್ಟದ್ದರಿಂದ ರೊಚ್ಚಿಗೆದ್ದ ರೈತರು ಟ್ರ್ಯಾಕರ್ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.

ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಹೆಸರು ನೀಡಲು ಗುರುವಾರವೇ ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಪಟ್ಟಣದ ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು.

ಆದರೆ ಖರೀದಿ ಕೇಂದ್ರದವರು ಗುರುವಾರ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿ ರೈತರನ್ನು ರಾತ್ರಿ ಪೂರಾ ಖರೀದಿ ಕೇಂದ್ರದಲ್ಲಿ ಇರಿಸಿಕೊಂಡು ಬೆಳಿಗ್ಗೆ ಹೆಸರು ಬೆಳೆ ಖರೀದಿ ಬಂದಾಗಿದ್ದು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇ ರೈತರ ಆಕ್ರೋಶಕ್ಕೆ ಕಾರಣವಾಯಿತು.

ಇದರಿಂದ ಸಿಟ್ಟಿಗೆದ್ದ ರೈತರು ಟ್ರ್ಯಾಕರ್ ಸಮೇತ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ರೈತ ಸಿದ್ದಯ್ಯ ಹಿರೇಮಠ ಮಾತನಾಡಿ, ಖರೀದಿ ಕೇಂದ್ರಕ್ಕೆ ಹೆಸರನ್ನು ತೆಗೆದುಕೊಂಡು ಗುರುವಾರವೇ ಬಂದಿದ್ದೇವೆ. ಆಗ ತೆಗೆದುಕೊಳ್ಳುತ್ತೇವೆ ಎಂದು ಹೇಳಿದವರು ಶುಕ್ರವಾರ ಬೆಳಿಗ್ಗೆ ಖರೀದಿ ಕೇಂದ್ರ ಬಂದಾಗಿದ್ದು ಮಾಲನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆರೋಪಿಸಿದರು.

ಅಲ್ಲದೆ ಈಗಾಗಲೇ ಖರೀದಿ ಕೇಂದ್ರದಲ್ಲಿ ತಮಗೆ ಬೇಕಾದವರ ಹೆಸರನ್ನು ಖರೀದಿ ಮಾಡಿದ್ದನ್ನು ನಾವೇ ನೋಡಿದ್ದು, ಅದನ್ನು ಪ್ರಶ್ನಿಸಿದರೆ ನಮಗೆ ಬೇರೆ ಉತ್ತರ ನೀಡುತ್ತಾರೆ. ಹೀಗಾದರೆ ನಮ್ಮಂತಹ ಸಣ್ಣ ರೈತರು ಬದುಕು ನಡೆಸುವುದು ಹೇಗೆ ಎಂದ ಅವರು, ಈ ವಿಷಯವನ್ನು ತಹಸೀಲ್ದಾರ್‌ರ ಗಮನಕ್ಕೆ ತರಲಾಗಿದೆ.

ಅವರು ಸಹ ನಮಗೆ ಸ್ಪಂದಿಸಿದ್ದು ಖರೀದಿ ಕೇಂದ್ರದ ಅಧಿಕಾರಿಗಳನ್ನು ಕರೆಸಿ ವಿಚಾರಿಸಲಾಗುವುದು ಎಂದಿದ್ದಾರೆ. ಅಲ್ಲಿಯವರೆಗೆ ನಾವು ತಹಸೀಲ್ದಾರ್ ಕಚೇರಿ ಬಿಟ್ಟು ಕದಲುವುದಿಲ್ಲ ಎಂದರು.

ಹನುಮಗೌಡ ಗಿಡ್ಡಬೀಮನಗೌಡ್ರ, ವೀರಬಸನಗೌಡ ಬಾಲನಗೌಡ್ರ, ಪ್ರವೀಣ ಅಂಗಡಿ, ಹನಮಂತ ಮಾಡಲಗೇರಿ, ಮಲ್ಲಪ್ಪ ಅಕ್ಕಿ, ಅಮರೇಶ ಮ್ಯಾಗೇರಿ, ಎನ್.ಎನ್.ಹಾಳಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿದ್ದರು.

ಸತತ ಮಳೆಗೆ ಮನೆ ಗೋಡೆ ಕುಸಿತ; ಮಹಿಳೆ ಸಾವು, ಇಬ್ಬರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಸತತವಾಗಿ ಸುರಿಯುತ್ತಿರುವ ಮಳಗೆ ಮನೆ ಗೋಡೆ ಕುಸಿದ ಪರಿಣಾಮ ಮಹಿಳೆ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಬೆಟಗೇರಿಯಲ್ಲಿ ಮುಂಜಾನೆ ಜರುಗಿದೆ.

ಬೆಟಗೇರಿಯ ಕನ್ಯಾಳ ಅಗಸಿಯ ಕುಲಕರ್ಣಿಗಲ್ಲಿ ಈ ದುರ್ಘಟನೆ ಜರುಗಿದ್ದು, ಮಹಿಳೆ ರೋಣ ತಾಲೂಕಿನ ಅಸೂಟಿ ಗ್ರಾಮದ ಸುಶೀಲವ್ವ ಅಡಿವೆಯ್ಯ ಕಲ್ಮಠ (60) ಮೃತಪಟ್ಟ ದುರ್ಧೈವಿಯಾಗಿದ್ದು, ಅಡಿವಯ್ಯ ಹಾಗೂ ಬಸಮ್ಮ ಎಂಬುವರು ಗಾಯಗೊಂಡಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಬಾಡಿಗೆ ಬಂದಿದ್ದರು ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಖಾಸಗಿ ಹೊಟೇಲ್ ಮೇಲೆ ಲೋಕಾಯುಕ್ತರ ದಾಳಿ; ಲಂಚ ಪಡೆಯುತ್ತಿದ್ದ ಅಸಿಸ್ಟೆಂಟ್ ಇಂಜಿನಿಯರ್ ಬಲೆಗೆ

ವಿಜಯಸಾಕ್ಷಿ ಸುದ್ದಿ, ಗದಗ

ಕೆರೆ ಅಭಿವೃದ್ಧಿ ಕಾಮಗಾರಿಗೆ 60% ಮೆಟೀರಿಯಲ್ಸ್ ಸಪ್ಲಾಯ್ ಮಾಡಿದ ಬಗ್ಗೆ ಎಮ್ ಬಿ ಬುಕ್ ಬರೆಯಲು ಲಂಚ ಕೇಳಿದ ಆರೋಪದಲ್ಲಿ ಸಹಾಯಕ ಇಂಜಿನಿಯರ್ ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜರುಗಿದೆ.

ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಗಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿತ್ತು ಎನ್ನಲಾಗಿದೆ. ಅದಕ್ಕೆ 60% ನಷ್ಟು ಮೆಟೀರಿಯಲ್ಸ್ ಮಂಜುನಾಥ್ ಬುರಡಿ ಎಂಬುವರು ಸಪ್ಲಾಯ್ ಮಾಡಿದ್ದರು ಎನ್ನಲಾಗಿದೆ.

ಗ್ರಾಮದ ಯಲ್ಲಪ್ಪ ಹಿರೇಮನಿ ಎಂಬುವವರು ಕೆಲಸ ಮಾಡಿದ್ದು, ಎಮ್ ಬಿ ಬರೆಯಲು ತಾಲೂಕು ಪಂಚಾಯತಿಯ ತಾಂತ್ರಿಕ ಸಹಾಯಕ ಇಂಜಿನಿಯರ್ ಬಸವರಾಜ್ ಪಟ್ಟಣ್ಣವರ್ ಎಂಬುವವರು 20 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ಅದರಲ್ಲಿ ಈಗಾಗಲೇ 10 ಸಾವಿರ ಹಣ ಕೊಡಲಾಗಿತ್ತು. ಬುಧವಾರ ಮತ್ತೆ ಹಣ ಕೊಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

2021-22ರ ಸಾಲಿನ ಎನ್ ಆರ್ ಇಜಿ ಯೋಜನೆಯಡಿಯಲ್ಲಿ ಕೊತಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಗಳಿ ಗ್ರಾಮದ ಕೆರೆ ಅಭಿವೃದ್ಧಿ ಅಡಿ ಹತ್ತು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಗ್ರಾಮದ ಯಲ್ಲಪ್ಪ ಹಿರೇಮನಿ ಎಂಬುವವರು ಕೆರೆ ಅಭಿವೃದ್ಧಿ ಅಡಿಯಲ್ಲಿ, ಪಿಚ್ಚಿಂಗ್, ಕಾಂಪೌಂಡ್ ನಿರ್ಮಾಣ ಹಾಗೂ ತಂತಿಬೇಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಇ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡಲು ಕೇಳಿದಾಗ 20‌ ಸಾವಿರ ಹಣ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಅದರಲ್ಲಿ ಇವತ್ತು ಬುಧವಾರ ರೋಣ ಪಟ್ಟಣದ ಸೂಡಿ ಕ್ರಾಸ್ ನ ಖಾಸಗಿ ಹೊಟೇಲ್ ನಲ್ಲಿ 10ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್ ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸಿಬ್ಬಂದಿಗಳಾದ ವಿರೂಪಾಕ್ಷ ಅರಿಷಿಣದ, ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಗದಗನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಪಲ್ಟಿ; 15 ಕ್ಕೂ ಹೆಚ್ಚು ಜನರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ/ ಹರಪನಹಳ್ಳಿ

ಅತಿಯಾದ ವೇಗದಿಂದ ಹೊರಟಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮವಾಗಿ ಬಸ್ ನಲ್ಲಿ ಇದ್ದ ಸುಮಾರು 15 ಕ್ಕೂ‌ ಹೆಚ್ಚು ಜನರು ಗಾಯಗೊಂಡ ಘಟನೆ ಹರಪನಹಳ್ಳಿ ಪಟ್ಟಣದ ಸಮೀಪ ಮಂಗಳವಾರ ಮಧ್ಯರಾತ್ರಿ ಜರುಗಿದೆ.

ಗಾಯಗೊಂಡವರನ್ನು ದಾವಣಗೆರೆ ಹಾಗೂ ಹರಪನಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರಿ 12;30 ರ ಸುಮಾರಿಗೆ ಹರಪನಹಳ್ಳಿ ದಾಟಿ ಐದು ಕಿಲೋಮೀಟರ್ ದೂರದಲ್ಲಿ ಬಸ್ ಉರುಳಿ ಬಿದ್ದಿದೆ. ಹಲವರ ತಲೆಗೆ, ಕೈ, ಕಾಲು, ಎದೆಗೆ ಪೆಟ್ಟು ಬಿದ್ದಿವೆ. ಇವರೆಲ್ಲರೂ ಗ್ಲಾಸ್ ಹೊಡೆದು ಹೊರಬಂದಿದ್ದಾರೆ.

ಕೊರ್ಲಹಳ್ಳಿ ಬಳಿ ಊಟಕ್ಕೆ ನಿಲ್ಲಿಸಿದ್ದ ಚಾಲಕರು, ಊಟದ ಬಳಿಕ ಬಸ್ ಹೊರಟಿದೆ. ಆ ನಂತರ ಬಸ್ ನ ವೇಗ ಜಾಸ್ತಿಯಾಗಿದೆ. ಪ್ರಯಾಣಿಕರು ಎಷ್ಟು ಕೂಗಾಡಿದರೂ ಚಾಲಕ ಉಡಾಪೆಯಿಂದ ದಬಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಪೊಲೀಸರು, ಬಸ್ ನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ಹೊರತಂದರು.

ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು.

ಕುಕ್ಕೆ ಹೆಸರಿನಲ್ಲಿ ಖಾಸಗಿ ಬಸ್ ಗದಗನಿಂದ ಬೆಂಗಳೂರಿಗೆ ಹೊರಟಿತ್ತು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅದೇ‌ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಡಾ. ಬಸವರಾಜ್ ತಳವಾರ, ಚಾಲಕನಿಗೆ ಎರಡು ಭಾರಿ ಎಚ್ಚರಿಕೆ ನೀಡಿದರೂ ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಗಾಡಿ ಓಡಸೋದು ಗೊತ್ತು ಬಿಡಿ ಅಂತ ಪ್ರತಿಕ್ರಿಯೆ ನೀಡಿದ ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದ ಅವರು, ಗದಗ, ಡಂಬಳ‌ ಹಾಗೂ ಮುಂಡರಗಿಯಿಂದ ಹತ್ತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರೆಲ್ಲರನ್ನು ದಾವಣಗೆರೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದರು.

ಒಂದು ದಿನದ ಕ್ರೀಡಾಧಿಕಾರಿಯಾದ ಶಿಲ್ಪಾ ಬೂದಿಹಾಳ!

* `ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ ಅಂಗವಾಗಿ ಕ್ರೀಡಾ ಇಲಾಖೆಯ ವಿಶೇಷ ಕಾರ್ಯಕ್ರಮ

ವಿಜಯಸಾಕ್ಷಿ ಸುದ್ದಿ, ಗದಗ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಅದೆಂಥದೋ ಸಂಭ್ರಮದ ವಾತಾವರಣವಿತ್ತು. ಅಧಿಕಾರಿಯ ಖುರ್ಚಿಯಲ್ಲಿ ಕುಳಿತಿದ್ದ ಯುವ ಅಧಿಕಾರಿಯ ಗಾಂಭೀರ್ಯ, ಸಭೆಯನ್ನು ನಿರ್ವಹಿಸುತ್ತ, ಕಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ದೃಶ್ಯ ನೋಡಿದವರು `ಅಬ್ಬಾ! ಇಷ್ಟು ಸಣ್ಣ ವಯಸ್ಸಿನಲ್ಲೇ ಇಂಥದೊಂದು ಹುದ್ದೆ ಅಲಂಕರಿಸಿದ ಈ ಹೆಣ್ಣುಮಗಳು, ಅವರ ಪಾಲಕರು, ಜಿಲ್ಲೆಯ ಜನರೂ ಖರೇ ಅದೃಷ್ಟ ಮಾಡ್ಯರ‍್ರೀ…’ ಅನ್ನುವಂತಿತ್ತು. ಗೊಂದಲಗಳಿಲ್ಲದ, ಸೌಮ್ಯವಾದ ಆ ಅಧಿಕಾರಿಯ ಕಣ್ಣುಗಳಲ್ಲಿ ಸಾವಿರ ದೀಪಗಳ ಬೆಳಕಿತ್ತು!

ನಿಜವೇ! ಹೆಣ್ಣು ಯಾವುದರಲ್ಲಿ ಕಡಿಮೆ ಹೇಳಿ?! ಕೇವಲ ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಹಂತವನ್ನು ದಾಟಿ, ಇಡೀ ದೇಶವನ್ನೇ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೆಣ್ಣಿಗೂ ಇದೆ. ಜೆಟ್ ವಿಮಾನಗಳನ್ನೋಡಿಸುವುದಲ್ಲದೇ, ನಭಕ್ಕೆ ಚಿಮ್ಮುವ ರಾಕೆಟ್ ಏರಿ ಮಂಗಳಯಾನವನ್ನೂ ಯಶಸ್ವಿಯಾಗಿ ನಿಭಾಯಿಸುವ ಗಟ್ಟಿತನವೂ ಇದೆ. ಹೀಗಿರುವಾಗ, ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೇತೃತ್ವ ವಹಿಸುವುದು ಅಸಾಧ್ಯವಾ? ಇಲ್ಲವೇ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಶಿಲ್ಪಾ ಬೂದಿಹಾಳ.

ಅಂದಹಾಗೆ, ನಾವೀಗ ಹೇಳುತ್ತಿರುವುದು, `ಒಂದು ದಿನದ ಕ್ರೀಡಾಧಿಕಾರಿ’ಯ ಬಗ್ಗೆ!

ಹೌದು. ಅ.11ರಂದು `ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ, ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ಒದಗಿಸುವ ಹಾಗೂ ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಾಗೂ ಗದಗದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯಾಧಿಕಾರಿ ಶಾಲಿನಿ ರಜನೀಶ್‌ರ ಮಾರ್ಗದರ್ಶನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗದಗ ಯುವಜನ ಸಬಲೀಕರಣ/ಕ್ರೀಡಾ ಇಲಾಖೆಯ ವತಿಯಿಂದ `ಒಂದು ದಿನದ ಯುವ ಕ್ರೀಡಾಧಿಕಾರಿ’ ಕಲ್ಪನೆಯಲ್ಲಿ ೧೮-೨೩ ವಯೋಮಾನದ ಆಸಕ್ತರನ್ನು ಆಯ್ಕೆ ಮಾಡಿ, ಇಲಾಖೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಯೋಜನೆಗಳೇನು, ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು, ಯುವಕರನ್ನು ಒಗ್ಗೂಡಿಸುವ ಅಂಶಗಳನ್ನು ಮನದಟ್ಟು ಮಾಡಿಸುವ ಯೋಜನೆಯನ್ನು ರೂಪಿಸಲಾಗಿತ್ತು.

ಅದರಂತೆ, ಪ್ರಕಟಣೆ ನೀಡಿದಾಗ, ನಾಲ್ಕೈದು ಆಸಕ್ತರು ಅರ್ಜಿ ಸಲ್ಲಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ ಹಾಗೂ ಎನ್‌ಎಸ್‌ಎಸ್ ವತಿಯಿಂದ ಸಭೆ ನಡೆಸಿ ಸೂಕ್ತ ಅಭ್ಯರ್ಥಿಯ ಆಯ್ಕೆಯನ್ನೂ ಮಾಡಲಾಗಿತ್ತು. ಇದರಂತೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿದ್ಯಾಲಯದ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳ ಆಯ್ಕೆಯಾಗಿ `ಒಂದು ದಿನದ ಯುವ ಕ್ರೀಡಾಧಿಕಾರಿ’ ಸ್ಥಾನವನ್ನು ಅಲಂಕರಿಸಿದರು.

ಯೋಜನೆಯಂತೆ, ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅತ್ಯಂತ ಸಂತಸದಿಂದ ಮಾಹಿತಿ ವಿನಿಮಯ ನಡೆಸಿದ ಶಿಲ್ಪಾ ಅನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ, ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಅಪಾರ ಮಾಹಿತಿಗಳನ್ನೂ ತಿಳಿದುಕೊಂಡರು. ಒಟ್ಟಿನಲ್ಲಿ, ಈ ಕಾರ್ಯಕ್ರಮ ಸರ್ಕಾರದ, ಇಲಾಖೆಯ ಹಾಗೂ ಆಸಕ್ತ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳರ ಆಶಯಗಳು ನೆರವೇರಿ ಹೊಸತನಕ್ಕೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ತರಬೇತಿದಾರರಾದ ಅನಂತ ದೇಸಾಯಿ, ಶರಣಗೌಡ ಬೇಲೇರಿ, ಮಂಜುನಾಥ್ ಬಗಾಡೆ, ಮಂಜು ಮುಟಗಾರ, ವಿದ್ಯಾ ಕುಲಕರ್ಣಿ, ಸಿಬ್ಬಂದಿಗಳಾದ ಸವಿತಾ ಜಾಧವ್ ಹಾಗೂ ಕಲಾವತಿ ಸೇರಿದಂತೆ ಅನೇಕರಿದ್ದರು.

ಬಂದ ಅರ್ಜಿಗಳನ್ನು ಪರಿಶೀಲಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಶಿಲ್ಪಾ ಬೂದಿಹಾಳರನ್ನು ಒಂದು ದಿನದ ಕ್ರೀಡಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಜಿಲ್ಲೆಯಾದ್ಯಂತ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳ ಕುರಿತು ತಿಳಿಸಿದ್ದೇವೆ. ಈ ಕಾರ್ಯಕ್ರಮ ಯುವ ಜನತೆಗೆ ಸಂದೇಶವಾಗಬೇಕು. ಯುವ ಜನತೆಯ ಅಭಿವೃದ್ಧಿಗಾಗಿ ಇಲಾಖೆ ಕೈಗೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು. ಇಂಥದೊಂದು ಅವಕಾಶಕ್ಕಾಗಿ ಎಲ್ಲ ಅಧಿಕಾರಿಗಳಿಗೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಧನ್ಯವಾದ.

ವಿಠಲ ಜಾಬಗೌಡರ್, ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ, ಕ್ರೀಡಾ ಇಲಾಖೆ, ಗದಗ

ನಾನೂ ಕೂಡ ಸರ್ಕಾರಿ ಅಧಿಕಾರಿಯಾಗಬೇಕೆಂಬುದು ನನ್ನ ಹಾಗೂ ಪಾಲಕರ ಕನಸಾಗಿತ್ತು. ಅಂಥದೊಂದು ಕನಸು ಒಂದು ದಿನದ ಮಟ್ಟಿಗೆ ಈ ಮೂಲಕ ಈಡೇರಿದೆ. ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದ ಉನ್ನತಿಗೆ ಮುಂದಾಗಬೇಕಾಗಿರುವುದು ಇಂದಿನ ಅಗತ್ಯವೂ ಆಗಿದೆ. ನಮ್ಮ ಜಿಲ್ಲಾಧಿಕಾರಿ, ನಗರಸಭೆಯ ಅಧ್ಯಕ್ಷರೂ ಸೇರಿ, ವಿವಿಧ ಇಲಾಖೆಗಳಲ್ಲಿ ಮಹಿಳೆಯರು ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥದೊಂದು ಅವಕಾಶ ನೀಡಿದ್ದಕ್ಕೆ ಇಲಾಖೆಗೆ ಹಾಗೂ ಎಲ್ಲ ಅಧಿಕಾರಿಗಳಿಗೂ ಧನ್ಯವಾದ. ಇನ್ನೂ ಹೆಚ್ಚು ವಿದ್ಯಾಭ್ಯಾಸ ಮಾಡಿ ಸಾಮಾಜಿಕ ಕಾರ್ಯಕರ್ತೆಯಾಗಿ ಜನಸೇವೆ ಮಾಡುವ ನನ್ನ ಆಸೆಗೆ ಈ ಹಿನ್ನೆಲೆಯಲ್ಲಿ ಇನ್ನಷ್ಟು ಧೈರ್ಯ ಬಂದಿದೆ.

ಶಿಲ್ಪಾ ಬೂದಿಹಾಳ, ಎಂಎಸ್‌ಡಬ್ಲ್ಯೂ
ವಿದ್ಯಾರ್ಥಿನಿ

ಗ್ರೇನ್ ಮಾರುಕಟ್ಟೆಗೆ ಉಷಾ ದಾಸರ ದಿಢೀರ್ ಭೇಟಿ; ಸುರಕ್ಷತಾ ಪರಿಕರಗಳನ್ನು ಧರಿಸದ ಪೌರ ಕಾರ್ಮಿಕರ ತರಾಟೆ

0

ವಿಜಯಸಾಕ್ಷಿ ಸುದ್ದಿ, ಗದಗ

ಮಂಗಳವಾರ ಬೆಳ್ಳಂಬೆಳಗ್ಗೆ ನಗರದ ಗ್ರೇನ್ ಮಾರುಕಟ್ಟೆ, ಹಾತಲಗೇರಿ ನಾಕಾ, ಬೆಟಗೇರಿ ಭಾಗವೂ ಸೇರಿದಂತೆ ವಿವಿಧ ಪ್ರದೇಶಗಳಿಗೆ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ಮಹೇಶ ದಾಸರ ದಿಢೀರ್ ಭೇಟಿ ನೀಡಿ, ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.

ಈ ವೇಳೆ ಅವಳಿ ನಗರದ ಸ್ವಚ್ಛತೆಯ ಕುರಿತು ಅಸಡ್ಡೆ ತೋರಿದ ದಫೇದಾರ್ ಹಾಗೂ ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಯ ವಿಷಯದಲ್ಲಿ ಉದಾಸೀನತೆ ತೋರಿದರೆ ಮುಲಾಜಿಲ್ಲದೇ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇನ್ನೆರಡು ದಿನಗಳಲ್ಲಿ ಗ್ರೇನ್ ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು. ಸುರಕ್ಷತಾ ಪರಿಕರಗಳನ್ನು ಧರಿಸದೇ ಕಾರ್ಯನಿರತರಾಗಿದ್ದ ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ಪೌರ ಕಾರ್ಮಿಕರಿಗೆ ದಿನನಿತ್ಯ ಪೂರೈಸಲಾಗುವ ಉಪಹಾರದ ಗುಣಮಟ್ಟದ ಕುರಿತು ಪೌರ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಬೆಟಗೇರಿಯ ತರಕಾರಿ ಮಾರುಕಟ್ಟೆ ಬಳಿಯಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಉಷಾ ದಾಸರ, ಅಲ್ಲಿಯೇ ಬೆಳಗಿನ ಉಪಹಾರ ಸೇವಿಸಿದರು. ಇಂದಿರಾ ಕ್ಯಾಂಟೀನಿನಲ್ಲಿ ಪ್ರತಿನಿತ್ಯ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಆಹಾರವನ್ನು ಸೇವಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದರು.

ಪೌರಕಾರ್ಮಿಕರಿಗೆ ಗುಣಮಟ್ಟದ ಆಹಾರವನ್ನು ನೀಡುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅನಿಲ್ ಅಬ್ಬಿಗೇರಿ, ಬಿಜೆಪಿ ಮುಖಂಡ ಭೀಮಸಿಂಗ್ ರಾಥೋಡ ಇದ್ದರು.

ಶೀಲ ಶಂಕಿಸಿ ಪತ್ನಿ ಕೊಲೆಗೈದು ಪತಿ ಪರಾರಿ; ಎಸ್ಪಿ ಶಿವಪ್ರಕಾಶ ದೇವರಾಜು ಮಾಹಿತಿ

  • ಕೊಲೆಗಾರ ಪತ್ತೆಗೆ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 8ರಂದು ರಾತ್ರಿ ಈ ಕೊಲೆ ನಡೆದಿದ್ದು, ಕೊಲೆಗೆ ಕೌಟುಂಬಿಕ ಕಲಹವೆ ಕಾರಣ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಕದಾಂಪೂರ ಗ್ರಾಮದ ಶಾಂತವ್ವ ಗುಡ್ಡಣ್ಣವರ (25) ಮಲಗಿದ್ದಾಗ ಪತಿ ರಾಜಪ್ಪ ಗುಡ್ಡಣ್ಣವರ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಶಾಂತವ್ವ, ತನ್ನ ಗಂಡನೇ ಹರಿತವಾದ ವಸ್ತುವಿನಿಂದ ಚುಚ್ಚಿದ್ದಾನೆ ಎಂದು ಕಿರುಚಾಡಿ, ಸಹಾಯಕ್ಕೆ ಅಂಗಲಾಚಿದ್ದಾರೆ. ತಕ್ಷಣ ಶಾಂತವ್ವಳ ತಾಯಿ ಮತ್ತು ಸಂಬಂಧಿಕರು ಆಕೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಶಾಂತವ್ವಳ ಪತಿಯೇ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ರಾಜಪ್ಪ ಅಲಿಯಾಸ್ ಫಕ್ಕೀರಪ್ಪ ತಂದೆ ಬಸವಣ್ಣೆಪ್ಪ ಗುಡ್ಡಣ್ಣವರ ಪತ್ತೆಗಾಗಿ ನರಗುಂದ ಉಪವಿಭಾಗದ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಇನ್ಸಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.

ಕೊಲೆಯಾದ ಶಾಂತವ್ವ ಮತ್ತು ರಾಜಪ್ಪ ದಂಪತಿಗೆ ಮದುವೆಯಾಗಿ 7-8 ವರ್ಷಗಳಾಗಿವೆ. ಈ ದಂಪತಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಗುವಿದೆ. ಆದರೆ ಕೆಲ ದಿನಗಳಿಂದ ಪತ್ನಿಯ ನಡವಳಿಕೆ ಬಗ್ಗೆ ಅನುಮಾನಗೊಂಡಿದ್ದ ರಾಜಪ್ಪ, ಪದೇ ಪದೇ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ.

ಅಕ್ಟೋಬರ್ 8ರಂದು ಸಹ ಇಬ್ಬರ ಮಧ್ಯೆ ಜಗಳವಾಗಿದೆ. ಸತಿಪತಿಗಳ ಜಗಳ ವಿಕೋಪಕ್ಕೆ ಹೋದ ಪರಿಣಾಮ, ಆಕ್ರೋಶಗೊಂಡ ರಾಜಪ್ಪ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.

ಭಾರಿ ಮಳೆ ಹಿನ್ನೆಲೆ; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಸತತವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ ಗದಗ ನಗರದಲ್ಲಿ ಭಾರಿ ಮನೆ ಕಳ್ಳತನ; 6.91 ಲಕ್ಷ ರೂ. ನಗದು, 9.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದ್ದು, ತಿಮ್ಮಣ್ಣ ಅಲಿಯಾಸ್ ಅಪ್ಪಣ್ಣ ತಂದೆ ಧರ್ಮಣ್ಣ ಕಳ್ಳಿಮನಿ (50) ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಸತತವಾಗಿ ಸುರಿದಿದ್ದ ಮಳೆಗೆ ಮನೆ ಗೋಡೆ ಸಂಪೂರ್ಣವಾಗಿ ನೆನದಿತ್ತು ಎನ್ನಲಾಗಿದೆ. ಹೀಗಾಗಿ ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಏಕಾಏಕಿ ಗೋಡೆ ಕುಸಿದು ಮೈಮೇಲೆ ಬಿದ್ದು ಪರಿಣಾಮ ತಿಪ್ಪಣ್ಣ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿದು ತಹಸೀಲ್ದಾರ್ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ಎಮ್ ಎ ನದಾಫ್, ಗ್ರಾಮ ಲೆಕ್ಕಾಧಿಕಾರಿ ಎಸ್. ಎಸ್. ಪಟ್ಟೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಗದಗ ನಗರದಲ್ಲಿ ಭಾರಿ ಮನೆ ಕಳ್ಳತನ; 6.91 ಲಕ್ಷ ರೂ. ನಗದು, 9.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಅಪ್‌ಸ್ಟೇರ ಹತ್ತಿ, ಬಾಗಿಲಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ಒಳಸೇರಿ, ಕಬ್ಬಿಣದ ಡ್ರಾವರನ್ನು ಮೀಟಿ ತೆಗೆದು, ಒಳಗಿದ್ದ ಲಕ್ಷಾಂತರ ರೂ. ಹಣವನ್ನು ಹಾಗೂ ಟ್ರೆಝರಿಯಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಬಂಗಾರ ಹಾಗೂ ಬೆಳ್ಳಿಯ ಆಭರಣ, ವಸ್ತುಗಳ ಕಳ್ಳತನವಾಗಿರುವುದಾಗಿ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಆದರ್ಶ ನಗರದ ದೇವರಾಜ ಹಾಸ್ಟೆಲ್ ಸಮೀಪವಿರುವ ಸಮೃದ್ಧಿ ನಿಲಯದ ನಿವಾಸಿ ಈರಪ್ಪ ಸೋಮಪ್ಪ ಪೂಜಾರ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದು, ಯಾರೋ ಕಳ್ಳರು ಅ.1ರ ಮುಂಜಾನೆ 9 ಗಂಟೆಯಿಂದ ಅ.2ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.

ಮನೆಯ ಅಪ್‌ಸ್ಟೇರನ್ನು ಹತ್ತಿ, ಡುಪ್ಲೇಕ್ಸ್ ಮನೆಯ ಸಿಲ್ವರ್ ಡೋರಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಕಟ್ಟಿಗೆಯ ಬಾಗಿಲಿನ ಒಳಚಿಲಕವನ್ನೂ ಮೀಟಿ, ಒಳಗೆ ಹೋಗಿ, ಬೆಡ್‌ರೂಮಿನ ಕಬ್ಬಿಣದ ಡ್ರಾವನ್ನು ಮೀಟಿ ಮುರಿದು, ಅದರಲ್ಲಿದ್ದ 6,91 ಲಕ್ಷ ರೂ. ನಗದನ್ನು ಕಳ್ಳತನ ಮಾಡಿದ್ದಾರೆ.

ಅಲ್ಲದೇ ಕೆಳಮನೆಯ ಬೆಡ್‌ರೂಮಿನಲ್ಲಿದ್ದ ಕಬ್ಬಿಣದ ಟ್ರೆಝರಿಯ ಬೀಗವನ್ನು ಮೀಟಿ ಮುರಿದು, ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ, ಒಳಗಿದ್ದ 1.75 ಲಕ್ಷ ರೂ. ಕಿಮ್ಮತ್ತಿನ ಒಟ್ಟೂ 67 ಗ್ರಾಂ. ತೂಕದ ಬಂಗಾರದ ಆಭರಣಗಳು, 7.50 ಲಕ್ಷ ರೂ. ಬೆಲೆಬಾಳುವ ಬೆಳ್ಳಿ ಸಾಮಾಗ್ರಿಗಳು, ಸಿಸಿಟಿವಿ ಕ್ಯಾಮೆರಾದ ೨೦ ಸಾವಿರ ರೂ. ಬೆಲೆಬಾಳುವ ಡಿವಿಆರ್ ಸಹಿತವಾಗಿ ಒಟ್ಟೂ 9.45 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.