Home Blog Page 45

ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಆಘಾತ! ವೆಂಕಟರಮಣಪ್ಪ ನಿಧನಕ್ಕೆ ಪರಮೇಶ್ವರ್ ಸಂತಾಪ

0

ತುಮಕೂರು: ಪಾವಗಡದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ವೆಂಕಟರಮಣಪ್ಪ ಅವರ ನಿಧನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಂಬನಿ ಮಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರು, ಮೃತರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ವೆಂಕಟರಮಣಪ್ಪ ಅವರ ಅಗಲಿಕೆ ಅತ್ಯಂತ ದುಃಖದ ಸಂಗತಿ. ಶೋಷಿತ ವರ್ಗಗಳ ಪರ ಹೋರಾಟ ನಡೆಸಿ ಜನಪ್ರಿಯತೆ ಗಳಿಸಿದ್ದ ಅಪರೂಪದ ನಾಯಕ ಅವರು” ಎಂದು ಹೇಳಿದರು.

ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ವೆಂಕಟರಮಣಪ್ಪ ಅವರ ಕೊಡುಗೆ ಅಪಾರವಾಗಿದೆ. ಸಚಿವರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಆದ್ಯತೆ ನೀಡಿದ್ದರು. ಜನರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವೇ ಅವರನ್ನು ವಿಭಿನ್ನ ನಾಯಕನನ್ನಾಗಿ ಮಾಡಿತ್ತು ಎಂದು ಪರಮೇಶ್ವರ್ ಸ್ಮರಿಸಿದರು.

“ನನಗೂ ಅವರು ಅತ್ಯಂತ ಆತ್ಮೀಯರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಒಬ್ಬ ಹಿರಿಯ ಅನುಭವಿ ನಾಯಕರನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಸ್ಥರಿಗೆ ನೀಡಲಿ” ಎಂದು ಸಂತಾಪ ಸೂಚಿಸಿದರು.

ಸಿದ್ದರಾಮಯ್ಯರನ್ನು ಅವಮಾನ ಮಾಡಿ ಕೆಳಗಿಳಿಸಿದ್ದಾರೆ: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಬಳ್ಳಾರಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದ ನಾಯಕರೊಂದಿಗೆ ಗೌರವಯುತವಾಗಿ ವರ್ತಿಸಬೇಕಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡಿ, ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

“2023ರಲ್ಲಿ ಮುಖ್ಯಮಂತ್ರಿ ಆದ ದಿನದಿಂದಲೇ ಅವರನ್ನು ಗುರಿಯಾಗಿಸಿಕೊಂಡು ಒಳಗೊಳಗೆ ರಾಜಕೀಯ ನಡೆಯುತ್ತಿತ್ತು. ಕೊನೆಗೆ ಕ್ಲೈಮ್ಯಾಕ್ಸ್ ಹಂತದಲ್ಲಿ ರಾಜೀನಾಮೆ ಕೊಡಿಸಲಾಯಿತು. ಸಿದ್ದರಾಮಯ್ಯ ಅವರ ಮುಖದಲ್ಲಿದ್ದ ನೋವು ನೋಡಿದಾಗ ನನಗೂ ಬೇಸರವಾಯಿತು” ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಶ್ರೀರಾಮುಲು, “ಒಂದು ಕಡೆ ಡಿ.ಕೆ. ಶಿವಕುಮಾರ್ ಕಾಲೆಳೆದರೆ, ಮತ್ತೊಂದು ಕಡೆ ಖರ್ಗೆ ಕಾಲೆಳೆದರು. ಮುಖ್ಯಮಂತ್ರಿ ಕುರ್ಚಿಯನ್ನು ಎಳೆದಾಡಿ ಸಿದ್ದರಾಮಯ್ಯರಿಂದ ಕಸಿದುಕೊಂಡಿದ್ದಾರೆ” ಎಂದು ಆರೋಪಿಸಿದರು.

“ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷವೇ ನೋವುಂಟು ಮಾಡಿದೆ. ರಾಹುಲ್ ಗಾಂಧಿ ಸದಾ ಒಬಿಸಿ ನಾಯಕರ ಬೆಂಬಲದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಪ್ರಮುಖ ರಾಜ್ಯದ ಒಬಿಸಿ ನಾಯಕನನ್ನು ಕೆಳಗಿಳಿಸಿರುವುದಕ್ಕೆ ಏನು ಉತ್ತರ ಕೊಡುತ್ತಾರೆ?” ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದ ಬೆಂಬಲವಿದೆ ಎಂದು ಹೇಳಿದ ಅವರು, “ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡೇ ಹಲವರು ಶಾಸಕರಾಗಿ ಗೆದ್ದಿದ್ದಾರೆ. ಅವರ ಹೆಸರಿನಿಂದಲೇ ಕಾಂಗ್ರೆಸ್ ಈ ಹಂತಕ್ಕೆ ಬಂದಿದೆ. ಆದರೆ ಈಗ ಅದೇ ನಾಯಕರು ಡಿ.ಕೆ. ಶಿವಕುಮಾರ್ ಮನೆ ಮುಂದೆ ನಿಂತಿದ್ದಾರೆ” ಎಂದು ಟೀಕಿಸಿದರು.

“ಸಚಿವರು ಈಗ ತ್ಯಾಗಕ್ಕೆ ಸಿದ್ಧರಾಗಲಿ!”; ಹೊಸ ಸಂಪುಟಕ್ಕೂ ಮುನ್ನ ತನ್ವೀರ್ ಸೇಠ್ ಬಿಗ್ ಸ್ಟೇಟ್‌ಮೆಂಟ್

0

ಮೈಸೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು ಈಗ ಅಧಿಕಾರ ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳುವ ಮೂಲಕ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಹೊಸಬರಿಗೆ ಸಚಿವ ಸ್ಥಾನ ಸಿಗುವ ವಾತಾವರಣ ನಿರ್ಮಾಣವಾಗಬೇಕು. ಪಕ್ಷದಲ್ಲಿ ಹಲವು ನಾಯಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಹೊಸ ತಲೆಮಾರಿಗೆ ಅವಕಾಶ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ತಮ್ಮ ಸಚಿವ ಸ್ಥಾನದ ಸಾಧ್ಯತೆ ಕುರಿತೂ ಮಾತನಾಡಿದ ತನ್ವೀರ್ ಸೇಠ್, ಕಳೆದ ಬಾರಿ ತಮಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಪಕ್ಷದ ವರಿಷ್ಠರು ತಮ್ಮನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇದೇ ವೇಳೆ ತಾವು ಯಾವತ್ತೂ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಾರ ವಿರುದ್ಧವೂ ರಾಜಕೀಯವಾಗಿ ನಿಂತಿಲ್ಲ. ಕೆಲವು ಸಂದರ್ಭಗಳಲ್ಲಿ ಅವಕಾಶ ಕೈ ತಪ್ಪಿತ್ತು ಅಷ್ಟೇ ಎಂದು ಹೇಳಿದರು.

ಡೀಸೆಲ್–ಪೆಟ್ರೋಲ್ ಬೆಲೆ ಏರಿಕೆ: ಜನ ಸಾಮಾನ್ಯರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ AAP ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪದೇ ಪದೇ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುತ್ತಿದ್ದು, ಅದರ ಪರಿಣಾಮವಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.

“ರೈತರು ಕೃಷಿ ಚಟುವಟಿಕೆಗಳಿಗೆ ಬಳಸುವ ಡೀಸೆಲ್ ದುಬಾರಿಯಾಗುವುದರಿಂದ ಕೃಷಿ ವೆಚ್ಚ ಹೆಚ್ಚಲಿದೆ. ಮಧ್ಯಮ ವರ್ಗ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ” ಎಂದು ಅವರು ಹೇಳಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ದೇಶದಲ್ಲಿ ಅದರ ಪ್ರಯೋಜನ ಜನರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, “ಎಕ್ಸೈಸ್ ಸುಂಕದ ಹೆಸರಿನಲ್ಲಿ ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಸಂಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಲೆಕ್ಕವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದರು.

ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಸೀತಾರಾಮ್ ಗುಂಡಪ್ಪ, ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, “ಅಚ್ಛೇ ದಿನ್ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇಂದು ಜನರನ್ನು ಬೆಲೆ ಏರಿಕೆಯ ಬೆಂಕಿಗೆ ತಳ್ಳಿದೆ” ಎಂದು ವಾಗ್ದಾಳಿ ನಡೆಸಿದರು.

ನಿರುದ್ಯೋಗ, ತೆರಿಗೆ ಭಾರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ದುಸ್ತರವಾಗಿದ್ದರೂ, ಸರ್ಕಾರ ಕಾರ್ಪೊರೇಟ್ ಪರ ನೀತಿಗಳಲ್ಲೇ ತೊಡಗಿದೆ ಎಂದು ಆರೋಪಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಕ್ಷಣ ಕಡಿತಗೊಳಿಸಿ, ಇಂಧನ ದರ ಏರಿಕೆಯನ್ನು ಹಿಂಪಡೆಯಬೇಕು. ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಿಕಾಂತ್ ರಾವ್, ಜಗದೀಶ್ ಚಂದ್ರ, ಶಶಿಧರ್ ಆರಾಧ್ಯ, ಅಶೋಕ್ ಮೃತ್ಯುಂಜಯ, ಪುಟ್ಟಣ್ಣ ಗೌಡ, ಮಧುಮಿತಾ, ಪ್ರಭಾವತಿ, ಪುಷ್ಪ ಕೇಶವ್, ಶುಭ ಗುತ್ತೇದಾರ, ಇರ್ಷಾದ್ ಖಾನ್, ಅಣ್ಣ ನಾಯಕ್, ಉಮೇಶ್ ಯಾದವ್, ದಿಲೀಪ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಜಾಮೀನು ಆದೇಶ ಅದೇ ದಿನ ಪ್ರಕಟಿಸಬೇಕು: ದೇಶದ ಎಲ್ಲಾ ಹೈಕೋರ್ಟ್‌ ಗಳಿಗೆ ಸುಪ್ರೀಂ ಮಹತ್ವದ ಸೂಚನೆ

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಹಾಗೂ ಜಾಮೀನು ಆದೇಶಗಳು ವಿಳಂಬವಾಗುತ್ತಿರುವ ವಿಚಾರಕ್ಕೆ ಗಂಭೀರವಾಗಿ ಸ್ಪಂದಿಸಿರುವ ಸುಪ್ರೀಂಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ತೀರ್ಪು ವಿಳಂಬವಾದರೆ ದಾವೆದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದೆ.

ಮೂರು ತಿಂಗಳೊಳಗೆ ತೀರ್ಪು ಪ್ರಕಟ ಕಡ್ಡಾಯ

ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ದಿನಾಂಕದಿಂದ ಗರಿಷ್ಠ ಮೂರು ತಿಂಗಳೊಳಗೆ ಅಂತಿಮ ತೀರ್ಪು ಪ್ರಕಟಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಜಾಮೀನು ಅರ್ಜಿಗಳಿಗೆ ತ್ವರಿತ ನಿರ್ಧಾರ

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಗಳ ವಿಚಾರದಲ್ಲಿ ವಿಳಂಬವಾಗಬಾರದು ಎಂದು ಕೋರ್ಟ್ ತಿಳಿಸಿದೆ. ಜಾಮೀನು ಆದೇಶಗಳನ್ನು ಸಾಧ್ಯವಾದರೆ ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ ಮರುದಿನವೇ ಪ್ರಕಟಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಜೈಲಿನಿಂದ ತಕ್ಷಣ ಬಿಡುಗಡೆಗೆ ಸೂಚನೆ

ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ಕೂಡಲೇ ಅದರ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸಬೇಕು. ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಕೈದಿಗಳನ್ನು ಅದೇ ದಿನ ಅಥವಾ ಗರಿಷ್ಠ ಮರುದಿನ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

24 ಗಂಟೆಯೊಳಗೆ ತೀರ್ಪು ವೆಬ್‌ಸೈಟ್‌ಗೆ ಅಪ್‌ಲೋಡ್

ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಪ್ರಕಟಿಸಿದ 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಜಾರ್ಖಂಡ್ ಹೈಕೋರ್ಟ್ ಪ್ರಕರಣದ ವೇಳೆ ಆದೇಶ

ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲ ವಿಳಂಬವಾಗುತ್ತಿರುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ತೀರ್ಪಿನ ಕಾರ್ಯಕಾರಿ ಭಾಗ ಪ್ರಕಟಿಸುವ ದಿನಾಂಕವನ್ನೇ ಅಧಿಕೃತ ತೀರ್ಪಿನ ದಿನಾಂಕ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ನ್ಯಾಯದಾನ ವೇಗಗೊಳಿಸುವ ಉದ್ದೇಶ

“ಹೈಕೋರ್ಟ್‌ಗಳು ಸಾವಿರಾರು ಜನರಿಗೆ ನ್ಯಾಯದ ನಿರೀಕ್ಷೆಯ ಕೇಂದ್ರಗಳಾಗಿವೆ. ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಂತ ಅಗತ್ಯ. ಈ ನಿಯಮಗಳು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ನ್ಯಾಯದಾನ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯಬೇಕೆಂಬ ಉದ್ದೇಶದಿಂದ ತರಲಾಗಿದೆ” ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಕೆಳ ನ್ಯಾಯಾಲಯಗಳ ಜಾಮೀನು ಆದೇಶಗಳ ಮಾಹಿತಿಯನ್ನು ಕೂಡ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ತಲುಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋರ್ಟ್ ಸೂಚಿಸಿದೆ.

 

ಮನೆಯಲ್ಲಿ ಅಳವಡಿಸಿದ್ದ ಎಸಿ ಸ್ಫೋಟ; ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಸಾವು.!

ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್, ದೆಹಲಿಯ ತಮ್ಮ ನಿವಾಸದಲ್ಲಿ ಸಂಭವಿಸಿದ ಎಸಿ ಸ್ಫೋಟ ದುರಂತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಪುತ್ರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿರುವ ಧನೇಂದ್ರ ಕುಮಾರ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ರಾತ್ರಿ ಸುಮಾರು 11:18ರ ವೇಳೆಗೆ ಮನೆಯಲ್ಲಿದ್ದ ಎಸಿ ಯಂತ್ರದಲ್ಲಿ ಸ್ಫೋಟ ಸಂಭವಿಸಿದ್ದು, ಬಳಿಕ ಬೆಂಕಿ ವೇಗವಾಗಿ ವ್ಯಾಪಿಸಿದೆ.

ಅವಘಡ ಸಂಭವಿಸಿದ ವೇಳೆ ಕುಟುಂಬ ಸದಸ್ಯರು ಹಾಗೂ ಮನೆ ಕೆಲಸದವರು ಸೇರಿ ಒಟ್ಟು ಐವರು ಮನೆಯೊಳಗಿದ್ದರು ಎನ್ನಲಾಗಿದೆ. ಘಟನೆ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಬೆಂಕಿಯಿಂದ ಗಾಯಗೊಂಡಿದ್ದ ಧನೇಂದ್ರ ಕುಮಾರ್ ಹಾಗೂ ಅವರ ಪುತ್ರನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಧನೇಂದ್ರ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಮನೆಯಲ್ಲಿ ಅಳವಡಿಸಿದ್ದ ಎಸಿ ಯಂತ್ರದ ಒಳಭಾಗದಲ್ಲಿ ಸ್ಫೋಟ ಸಂಭವಿಸಿರುವುದೇ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಸ್ಫೋಟದ ಪರಿಣಾಮ ಮನೆ ಒಳಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಟ್ಟೆಗಳು, ಸೂಟ್ಕೇಸ್‌ಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪಿತೂರಿ ಅಥವಾ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಡ್ರೆಸ್ಸಿಂಗ್ ರೂಮ್ʼನಲ್ಲಿ ಸ್ಮಾರ್ಟ್ ಗ್ಲಾಸ್ ನಿಷೇಧ: ಕ್ರಿಕೆಟ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು BCCI ಪ್ಲಾನ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆ ಭ್ರಷ್ಟಾಚಾರ ಮತ್ತು ರಹಸ್ಯ ಮಾಹಿತಿ ಸೋರಿಕೆಯನ್ನು ತಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ಮೈದಾನ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದನ್ನು ಬಿಸಿಸಿಐನ ಆಂಟಿ-ಕರಪ್ಷನ್ ಯುನಿಟ್ ಸಂಪೂರ್ಣವಾಗಿ ನಿಷೇಧಿಸಿದೆ.

ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಕ್ರೀಡಾಂಗಣದ ಸೂಕ್ಷ್ಮ ಪ್ರದೇಶಗಳಾದ ಪಿಎಂಒಎ ವಲಯಕ್ಕೂ ಇಂತಹ ಸ್ಮಾರ್ಟ್ ಗ್ಲಾಸ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಇತ್ತೀಚಿನ ಸ್ಮಾರ್ಟ್ ಸನ್‌ಗ್ಲಾಸ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ-ವಿಡಿಯೋ ಕಾಲಿಂಗ್, ರಹಸ್ಯ ಕ್ಯಾಮೆರಾ ಹಾಗೂ ಟೆಕ್ಸ್ಟ್ ಮೆಸೇಜಿಂಗ್‌ ಸೇರಿದಂತೆ ಹಲವು ತಂತ್ರಜ್ಞಾನ ಸೌಲಭ್ಯಗಳಿವೆ. ಹೀಗಾಗಿ ಬಿಸಿಸಿಐ ಇದನ್ನು ಕೇವಲ ಕನ್ನಡಕವಲ್ಲ, ಪ್ರಮುಖ ‘ಸಂವಹನ ಸಾಧನ’ ಎಂದು ಪರಿಗಣಿಸಿದೆ.

ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ ಅಥವಾ ಡಗೌಟ್‌ನಿಂದ ಪಿಚ್ ಪರಿಸ್ಥಿತಿ, ತಂಡದ ತಂತ್ರಗಳು ಮತ್ತು ಲೈವ್ ಅಪ್‌ಡೇಟ್‌ಗಳು ಹೊರಗಿನ ಬುಕ್ಕಿಗಳಿಗೆ ಸೋರಿಕೆಯಾಗುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಆಟಗಾರರ ಡ್ರೆಸ್ಸಿಂಗ್ ರೂಮ್, ಟೀಮ್ ಡಗೌಟ್, ಅಂಪೈರ್ ಹಾಗೂ ಮ್ಯಾಚ್ ರೆಫರಿಗಳ ಕೊಠಡಿಗಳು ಮತ್ತು ಆಟಗಾರರು ಕುಳಿತುಕೊಳ್ಳುವ ವಿಶೇಷ ಗ್ಯಾಲರಿಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ.

ಹೊಸ ನಿಯಮದ ಪ್ರಕಾರ, ಪಂದ್ಯದ ದಿನ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್ ಪಿಎಂಒಎ ವಲಯ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಮತ್ತು ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು ಸೆಕ್ಯೂರಿಟಿ ಲೈಸನ್ ಅಧಿಕಾರಿಗಳ ಬಳಿ ಜಮಾ ಮಾಡಬೇಕಾಗುತ್ತದೆ.

ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಸ್ಮಾರ್ಟ್ ಸಾಧನಗಳನ್ನು ಬಳಸಿರುವುದು ಪತ್ತೆಯಾದರೆ ಸಂಬಂಧಪಟ್ಟ ಆಟಗಾರರು ಅಥವಾ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಭಾರೀ ಮೊತ್ತದ ದಂಡವೂ ವಿಧಿಸಲಾಗುತ್ತದೆ.

ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಒಬ್ಬರು ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ ಬಿಸಿಸಿಐ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ನಿಷೇಧವು ಬ್ಲೂಟೂತ್, ಕ್ಯಾಮೆರಾ ಅಥವಾ ಇಂಟರ್ನೆಟ್ ಸಂಪರ್ಕ ಹೊಂದಿರುವ ‘ಸ್ಮಾರ್ಟ್’ ಸನ್‌ಗ್ಲಾಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಕ್ರೀಡಾ ಸನ್‌ಗ್ಲಾಸ್‌ಗಳನ್ನು ಆಟಗಾರರು ಫೀಲ್ಡಿಂಗ್ ವೇಳೆ ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ.

ಇದರ ಜೊತೆಗೆ ಮೊಬೈಲ್ ಫೋನ್, ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಬ್ಲೂಟೂತ್ ಇಯರ್‌ಫೋನ್, ಫಿಟ್ನೆಸ್ ಬ್ಯಾಂಡ್, ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್ ಹಾಗೂ ಪೋರ್ಟಬಲ್ ಸ್ಪೀಕರ್‌ಗಳ ಬಳಕೆಯ ಮೇಲೂ ನಿಯಂತ್ರಣ ವಿಧಿಸಲಾಗಿದೆ.

ಆದರೆ ತಂಡದ ಅಧಿಕೃತ ಡೇಟಾ ಅನಾಲಿಸ್ಟ್‌ಗೆ ಪಂದ್ಯ ವಿಶ್ಲೇಷಣೆಗೆ ಒಂದು ಲ್ಯಾಪ್‌ಟಾಪ್ ಬಳಸಲು ಅವಕಾಶ ನೀಡಲಾಗಿದೆ. ಲಾಜಿಸ್ಟಿಕ್ಸ್ ಮತ್ತು ತುರ್ತು ಆಡಳಿತಾತ್ಮಕ ಕೆಲಸಗಳಿಗಾಗಿ ತಂಡದ ಮ್ಯಾನೇಜರ್‌ಗೆ ಫೋನ್ ಬಳಕೆಗೆ ಅನುಮತಿ ಇದ್ದರೂ, ಅದನ್ನು ಡ್ರೆಸ್ಸಿಂಗ್ ರೂಮ್ ಒಳಗಡೆ ಮಾತ್ರ ಬಳಸಬೇಕಿದೆ. ಡಗೌಟ್‌ಗೆ ತರುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಮಂಗಳೂರಿನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: ಮೇ 30ರಂದು ‘ವಿ.ಆರ್.ಎನ್ ಇನ್ನೋಟೆಕ್’ ವತಿಯಿಂದ ನೇರ ಸಂದರ್ಶನ

ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದಕ್ಷಿಣ ಕನ್ನಡ ಜಿಲ್ಲೆ) ಸಹಯೋಗದಲ್ಲಿ ಪ್ರತಿಷ್ಠಿತ ‘ವಿ.ಆರ್.ಎನ್ ಇನ್ನೋಟೆಕ್’ ಸಂಸ್ಥೆ ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಡಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಇದೇ ವೇಳೆ ಅಭ್ಯರ್ಥಿಗಳಿಗೆ ಮಲಯಾಳಂ, ಹಿಂದಿ, ಇಂಗ್ಲಿಷ್ ಅಥವಾ ತಮಿಳು ಭಾಷೆಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚು ಭಾಷೆಗಳ ಜ್ಞಾನವಿರುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇರ ಸಂದರ್ಶನವು ಮೇ 30ರಂದು (ಶನಿವಾರ) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ 04, ನೆಲಮಹಡಿ, ಪ್ರಜಾ ಸೌಧ, ಜಿಲ್ಲಾಡಳಿತ ಭವನ ಕಟ್ಟಡ, ಪಡೀಲ್, ಮಂಗಳೂರು – 575007.

ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳಿರುವ ಅಪ್ಡೇಟೆಡ್ ಬಯೋಡೇಟಾ ಜೊತೆಗೆ ನೇರವಾಗಿ ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು. ಈ ಉದ್ಯೋಗ ಸಂದರ್ಶನ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 0824 2457139 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ BMTC ಹೊಸ ಪ್ಲಾನ್: ಇದೀಗ ಬಸ್ ಟಿಕೆಟ್ʼಗಳ ಮೇಲೂ ಜಾಹೀರಾತು

ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತು ಸಾಲದ ಒತ್ತಡದಿಂದ ಬಳಲುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಇದೀಗ ಹೊಸ ಆದಾಯ ಮೂಲದ ಹುಡುಕಾಟಕ್ಕೆ ಮುಂದಾಗಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಇನ್ನು ಮುಂದೆ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.

ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಗೆ ಹಣದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ಸಾರಿಗೆ ಜಾಲವನ್ನು ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ.

ಸದ್ಯ ಬಿಎಂಟಿಸಿ ಜಾಹೀರಾತುಗಳಿಂದ ವಾರ್ಷಿಕವಾಗಿ ಸುಮಾರು 57.48 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಟಿಕೆಟ್‌ಗಳ ಮೇಲಿನ ಜಾಹೀರಾತು ಯೋಜನೆಯಿಂದ ಆದಾಯ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಯ ಹೆಚ್ಚಿಸಲು ಇದು ಉತ್ತಮ ನಿರ್ಧಾರವಾದರೂ, ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳನ್ನೇ ಪ್ರಕಟಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಗುಟ್ಕಾ, ಪಾನ್ ಮಸಾಲಾ, ಮದ್ಯಪಾನ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಈ ಸಾರ್ವಜನಿಕ ಅಭಿಪ್ರಾಯಕ್ಕೆ ಸ್ಪಂದಿಸಿರುವ ಬಿಎಂಟಿಸಿ, ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳು ಹಾಗೂ ಅಶ್ಲೀಲ ವಸ್ತುಗಳಿಗೆ ಸಂಬಂಧಿಸಿದ ಜಾಹೀರಾತುಗಳಿಗೆ ಸಂಪೂರ್ಣ ನಿಷೇಧ ಹೇರಿದೆ.

ಒಟ್ಟಿನಲ್ಲಿ, ನೌಕರರ ಬೇಡಿಕೆಗಳನ್ನು ಈಡೇರಿಸಲು ಹಣಕಾಸಿನ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿಗೆ ಟಿಕೆಟ್ ಜಾಹೀರಾತಿನ ಹೊಸ ಯೋಜನೆ ಎಷ್ಟು ಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಸಿದ್ದರಾಮಯ್ಯ ಕುರ್ಚಿ ಬಿಡ್ತಾರೆ’ ಎಂದಿತ್ತು ಬೊಂಬೆ! 40 ದಿನಗಳ ಬಳಿಕ ನಿಜವಾದ ಧಾರವಾಡದ ಭವಿಷ್ಯ?

0

ಧಾರವಾಡ: ಯುಗಾದಿ ದಿನ ನುಡಿದ ಭವಿಷ್ಯ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಧಾರವಾಡ ಜಿಲ್ಲೆಯ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಸಾಂಪ್ರದಾಯಿಕ ‘ಬೊಂಬೆ ಭವಿಷ್ಯ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ಸೂಚನೆ ಸಿಕ್ಕಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಇದೀಗ ಅವರ ರಾಜೀನಾಮೆಯೊಂದಿಗೆ ಆ ಭವಿಷ್ಯ ಮತ್ತೆ ಗಮನ ಸೆಳೆದಿದೆ.

ಹನುಮನಕೊಪ್ಪದಲ್ಲಿ ಯುಗಾದಿ ಅಮಾವಾಸ್ಯೆಯಂದು ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿ ಮಣ್ಣಿನ ಗದ್ದುಗೆ ಮೇಲೆ ವಿವಿಧ ಸಂಕೇತಾತ್ಮಕ ಬೊಂಬೆಗಳನ್ನು ಸ್ಥಾಪಿಸುತ್ತಾರೆ. ರಾಜಕೀಯ, ಕೃಷಿ, ಮಳೆ ಹಾಗೂ ಸಾಮಾಜಿಕ ಬೆಳವಣಿಗೆಗಳನ್ನು ಸೂಚಿಸುವ ಈ ಬೊಂಬೆಗಳ ಸ್ಥಿತಿಯನ್ನು ಆಧರಿಸಿ ಮುಂದಿನ ವರ್ಷದ ಭವಿಷ್ಯ ನಿರ್ಧರಿಸಲಾಗುತ್ತದೆ.

ಈ ಬಾರಿ ಕರ್ನಾಟಕದ ದಿಕ್ಕನ್ನು ಪ್ರತಿನಿಧಿಸುವ ಬೊಂಬೆಗೆ ಹಾನಿಯಾಗಿದ್ದ ಕಾರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಸಂಭವಿಸಲಿದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದರು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬೊಂಬೆ ಭವಿಷ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ಈ ಹಿಂದೆ ಇಂದಿರಾ ಗಾಂಧಿ ಹತ್ಯೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಸಂದರ್ಭ ಸೇರಿದಂತೆ ಹಲವು ಬೆಳವಣಿಗೆಗಳಿಗೂ ಬೊಂಬೆ ಭವಿಷ್ಯ ಹೊಂದಿಕೆಯಾಗಿತ್ತು. ಹೀಗಾಗಿ ಈ ಸಂಪ್ರದಾಯದ ಬಗ್ಗೆ ಜನರಲ್ಲಿ ಈಗಲೂ ವಿಶೇಷ ನಂಬಿಕೆ ಮುಂದುವರಿದಿದೆ.

error: Content is protected !!