Home Blog Page 5

ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

0

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಸರಣಿ ಮುಂದುವರೆದಿದೆ. ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲೂ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸರಣಿ ಗೆಲುವಿನ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಮೂರನೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದರು. ಇದೀಗ ಸೂರ್ಯ, ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 52 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 32 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. 18 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದ್ದವು. ಅಲ್ಲದೆ 2 ಪಂದ್ಯಗಳು ರದ್ದಾಗಿದ್ದವು.

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 41 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ ಭಾರತ ತಂಡ 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಕೇವಲ 6 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಇನ್ನು 2 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ.

ಭಾರತ ಟಿ20 ತಂಡದ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ 62 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 50 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇನ್ನು ದ್ವಿತೀಯ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದು, ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 72 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದು 41 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮಾನವೀಯತೆಯ ಸೂಪರ್‌ಸ್ಟಾರ್: 15 ವರ್ಷಗಳಿಂದ ₹5ಗೆ ಪರೋಟ ಮಾರುವ ವ್ಯಾಪಾರಿಗೆ ರಜನೀಕಾಂತ್ ವಿಶೇಷ ಗೌರವ

ಚೆನ್ನೈ: ನಟ ರಜನೀಕಾಂತ್ ಅವರು ಮತ್ತೊಮ್ಮೆ ತಮ್ಮ ಮಾನವೀಯತೆಯ ಮೂಲಕ ಜನಮನ ಗೆದ್ದಿದ್ದಾರೆ. ಮಧುರೈ ಮೂಲದ ರಸ್ತೆ ಬದಿ ವ್ಯಾಪಾರಿ ಶೇಖರ್ ಅವರನ್ನು ಕುಟುಂಬ ಸಮೇತ ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ ಘಟನೆ ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಶೇಖರ್ ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಸ್ತೆ ಬದಿ ಹೋಟೆಲ್‌ಗಳಲ್ಲಿ ಪರೋಟ ಬೆಲೆ 30ರಿಂದ 50 ರೂಪಾಯಿ ಇದ್ದರೂ, ಶೇಖರ್ ಮಾತ್ರ ಬೆಲೆ ಏರಿಸದೇ ಸೇವಾ ಮನೋಭಾವದಿಂದ ವ್ಯಾಪಾರ ನಡೆಸುತ್ತಿದ್ದಾರೆ. ಈ ಕಾರ್ಯವೇ ರಜನೀಕಾಂತ್ ಗಮನ ಸೆಳೆದಿದೆ.

ಶೇಖರ್ ಅವರನ್ನು ಮನೆಗೆ ಕರೆಸಿದ ರಜನೀಕಾಂತ್, ಆತಿಥ್ಯ ನೀಡಿ, ಚಿನ್ನದ ಚೈನ್ ನೀಡುವ ಮೂಲಕ ಸನ್ಮಾನ ಮಾಡಿದ್ದಾರೆ. ಜೊತೆಗೆ ಶೇಖರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಗಿದೆ ಎನ್ನಲಾಗಿದೆ.

ಶೇಖರ್ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. ರಜನೀಕಾಂತ್ ಹುಟ್ಟುಹಬ್ಬದ ನೆನಪಿಗಾಗಿ 5 ರೂಪಾಯಿ ಪರೋಟ ಮಾರಾಟ ಆರಂಭಿಸಿದ್ದ ಶೇಖರ್, ತಮ್ಮ ಹೋಟೆಲಿನಲ್ಲಿ ನಟನ ಫೋಟೋಗಳನ್ನು ಅಳವಡಿಸಿಕೊಂಡಿದ್ದು, ಕೈ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.

ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಜನೀಕಾಂತ್ ಅವರ ವ್ಯಕ್ತಿತ್ವಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಪರ್ಧಿಗಳ ಟೀಕೆಗೂ ನಗುವಿನಿಂದ ಉತ್ತರ: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನಿಷ್ಕಲ್ಮಶ ಮಾತುಗಳಿಗೆ ಫ್ಯಾನ್ಸ್ ಫಿದಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿಜೇತ ಗಿಲ್ಲಿ ನಟ ಇದೀಗ ಮಾಧ್ಯಮ ಸಂದರ್ಶನಗಳಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಮತ್ತೆ ಜನಮನ ಸೆಳೆಯುತ್ತಿದ್ದಾರೆ. ಕಾರ್ಯಕ್ರಮದ ವೇಳೆ ನಡೆದ ಜಗಳಗಳು, ಟೀಕೆಗಳ ಬಗ್ಗೆ ಮಾತನಾಡಿರುವ ಅವರು, “ಯಾರ ಮೇಲೂ ದ್ವೇಷ ಇಲ್ಲ” ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮತ್ತು ಸರಳ ಸ್ವಭಾವದ ಮೂಲಕ ಗಿಲ್ಲಿ ನಟ ವೀಕ್ಷಕರ ಹೃದಯ ಗೆದ್ದಿದ್ದರು. ಬಿಗ್ ಬಾಸ್ ಮುಗಿದ ನಂತರವೂ ಅವರ ಜನಪ್ರಿಯತೆ ಇಳಿಮುಖವಾಗದೇ, ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅವರ ರೀಲ್ಸ್ ವೈರಲ್ ಆಗುತ್ತಿವೆ.

ಸೀಸನ್ ಮುಗಿದ ಬಳಿಕ ಹಲವಾರು ಸ್ಪರ್ಧಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಡಾಗ್ ಸತೀಶ್ ಅವರು ಗಿಲ್ಲಿ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದು, ಅಶ್ವಿನಿ ಗೌಡ ಅವರು ಗಿಲ್ಲಿಯ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿಚಾರಗಳಿಗೆ ಪ್ರತಿಕ್ರಿಯಿಸಿರುವ ಗಿಲ್ಲಿ ನಟ,
“ಬಿಗ್ ಬಾಸ್ ಮನೆಯಲ್ಲಿ ಜಗಳ ಸಹಜ. ಟಾಸ್ಕ್, ನಾಮಿನೇಷನ್ ಎಲ್ಲವೂ ಆಟದ ಭಾಗ. ಹೊರಬಂದ ಮೇಲೆ ನಾನು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡಿಲ್ಲ” ಎಂದು ಹೇಳಿದ್ದಾರೆ.

ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟರನ್ನು ಹೊಗಳುತ್ತಿದ್ದು, “ನಿನ್ನ ಮನಸ್ಸು ಬಹಳ ಶುದ್ಧ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿ ನಟರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾನ್ಯ ಹಿನ್ನೆಲೆಯಿಂದ ಬಂದ ಗಿಲ್ಲಿ ನಟ, ಕಷ್ಟಪಟ್ಟು ಈ ಮಟ್ಟಕ್ಕೆ ತಲುಪಿದ್ದಾರೆ. ಈಗ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದು, ಅನೇಕ ವೇದಿಕೆಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟರನ್ನು 2 ಮಿಲಿಯನ್‌ಗಿಂತ ಹೆಚ್ಚು ಜನ ಫಾಲೋ ಮಾಡುತ್ತಿರುವುದು ಅವರ ಜನಪ್ರಿಯತೆಯ ಸಾಕ್ಷಿಯಾಗಿದೆ.

ಭಾರಿ ಸದ್ದು ಮಾಡಿದ ಮದುವೆಗೆ ಬ್ರೇಕ್: ವಿಚ್ಛೇದನ ಘೋಷಿಸಿದ ‘ರಾಧಾ ರಮಣ’ ಖ್ಯಾತಿಯ ಅನುಷಾ ಹೆಗಡೆ 

ಟಿವಿ ಲೋಕದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಇದೀಗ ಕಿರುತೆರೆ ನಟಿ ಅನುಷಾ ಹೆಗಡೆ ದಾಂಪತ್ಯಕ್ಕೂ ಅಂತ್ಯ ಬಂದಿದೆ. ಅನುಷಾ ಹೆಗಡೆ ಅವರು ತಮ್ಮ ಪತಿ ಪ್ರತಾಪ್ ಸಿಂಗ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದಾರೆ.

‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದಿಂದ ಮನೆಮಾತಾಗಿದ್ದ ಅನುಷಾ ಹೆಗಡೆ, ನಂತರ ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗಲೇ ಪ್ರತಾಪ್ ಸಿಂಗ್ ಅವರೊಂದಿಗೆ ಪ್ರೀತಿ ಬೆಳೆದು, ಇಬ್ಬರೂ ವಿವಾಹವಾಗಿದ್ದರು.

2020ರ ಫೆಬ್ರವರಿಯಲ್ಲಿ ಹೈದರಾಬಾದ್‌ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಭಾರಿ ಸುದ್ದಿಯಾಗಿತ್ತು. ಐದು ಗಂಟೆಗಳ ಕಾಲ ನಡೆದ ವಿವಾಹ ಶಾಸ್ತ್ರಗಳು ಆ ಸಮಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಅದೇ ಸಂಬಂಧ ಇದೀಗ ಕೇವಲ ಆರು ವರ್ಷಗಳಲ್ಲಿ ಅಂತ್ಯ ಕಂಡಿದೆ.

2023ರಿಂದಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅನುಷಾ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಇನ್ಸ್ಟಾಗ್ರಾಂನಲ್ಲಿ,
“2023ರಿಂದ ಸಮಸ್ಯೆಗಳು ಆರಂಭವಾಗಿದ್ದು, 2025ರಲ್ಲಿ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ವಿಚಾರವನ್ನು ಮುಂದುವರೆಸಿ ಚರ್ಚಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಅನುಷಾ ಹೆಗಡೆ ಅವರ ವೃತ್ತಿಜೀವನದ ಕುರಿತು ಹೇಳುವುದಾದರೆ, 2016ರಲ್ಲಿ ‘ಎನ್ಎಚ್ 37’ ಸಿನಿಮಾದಲ್ಲಿ ಅಭಿನಯ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ, 2017ರಲ್ಲಿ ‘ರಾಧಾ ರಮಣ’, 2018ರಲ್ಲಿ ‘ನಿನ್ನೇ ಪೆಲ್ಲಾಡುತಾ’, 2019ರಲ್ಲಿ ‘ಸೂರ್ಯಕಾಂತಂ’, 2022ರಲ್ಲಿ ‘ಆನಂದ ರಾಗಂ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಕನ್ನಡದ ‘ಅನು ಪಲ್ಲವಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ನನ್ನನ್ನು ಯಾರೂ ಮುರಿಯಲು ಸಾಧ್ಯವಿಲ್ಲ’ — ರಾಜಕೀಯ ದಾಳಿ, ಸಿಬಿಎಫ್ಸಿ ಸಂಕಷ್ಟ, ಸಿಬಿಐ ವಿಚಾರಣೆಗಳ ನಡುವೆ ವಿಜಯ್ ಸವಾಲಿನ ಮಾತು

ಚೆನ್ನೈ: ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿದ ನಂತರ ಸಂಕಷ್ಟಗಳು ಸರಮಾಲೆಯಂತೆ ಎದುರಾಗುತ್ತಿವೆ. ಕರೂರು ಕಾಲ್ತುಳಿತ ಪ್ರಕರಣದ ಚರ್ಚೆ, ಸಿಬಿಐ ವಿಚಾರಣೆಗಳು ಹಾಗೂ ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್ಸಿ ಪ್ರಮಾಣಪತ್ರ ವಿಳಂಬ – ಈ ಎಲ್ಲಾ ಬೆಳವಣಿಗೆಗಳು ವಿಜಯ್ ಅವರನ್ನು ಸುತ್ತಿಕೊಂಡಿವೆ.

ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗ ವಿಜಯ್ ಅವರ ಪಕ್ಷಕ್ಕೆ ‘ವಿಶಲ್’ ಚಿಹ್ನೆಯನ್ನು ಅಧಿಕೃತವಾಗಿ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ವಿಜಯ್ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

“ಕಳೆದ ಮೂರು ದಶಕಗಳಲ್ಲಿ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ಜನರು ನನಗೆ ನೀಡಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತೇನೆ” ಎಂದು ಹೇಳಿದರು.
“ನಾನು ಯಾರಿಗೂ ಬಗ್ಗುವುದಿಲ್ಲ, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಘೋಷಿಸಿದರು.

ಇತ್ತೀಚಿನ ದಿನಗಳಲ್ಲಿ ವಿಜಯ್ ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ, ಅವರು ರಾಜಕೀಯದಿಂದ ಹಿಂದೆ ಸರಿಯಬಹುದು ಅಥವಾ ಬೇರೆ ಪಕ್ಷದೊಂದಿಗೆ ಸಂಧಾನ ಮಾಡಬಹುದು ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯೆಯಂತೆ ವಿಜಯ್ ತಮ್ಮ ಭಾಷಣದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಇನ್ನೊಂದೆಡೆ, ‘ಜನ ನಾಯಗನ್’ ಸಿನಿಮಾಗೆ ಸಿಬಿಎಫ್ಸಿ ಪ್ರಮಾಣಪತ್ರ ನಿರಾಕರಣೆ ವಿಚಾರ ನ್ಯಾಯಾಲಯದ ಮುಂದೆ ಇದ್ದು, ಜನವರಿ 27ರಂದು ತೀರ್ಪು ಪ್ರಕಟವಾಗಲಿದೆ. ಅಂದು ಈ ಸಿನಿಮಾದ ಮುಂದಿನ ಭವಿಷ್ಯ ಸ್ಪಷ್ಟವಾಗಲಿದೆ.

ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ ಗೌರವ

ನವದೆಹಲಿ: 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಸಾಧಕರಿಗೆ ನೀಡಲಾಗಿದೆ.

ಈ ಬಾರಿ ಕಲಾ ಕ್ಷೇತ್ರದ ಸಾಧಕರಿಗೆ ಹೆಚ್ಚಿನ ಗೌರವ ಲಭಿಸಿದೆ. ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅವರು 2025ರ ನವೆಂಬರ್‌ನಲ್ಲಿ ನಿಧನರಾಗಿದ್ದರು. ತಮಿಳುನಾಡಿನ ವೈಯಲಿನ್ ವಾದಕಿ ಎನ್. ರಾಜನ್ ಅವರಿಗೂ ಪದ್ಮ ವಿಭೂಷಣ ಲಭಿಸಿದೆ. ಪದ್ಮ ವಿಭೂಷಣ ಪಡೆದ ಐವರಲ್ಲಿ ಇಬ್ಬರು ಕಲಾ ಕ್ಷೇತ್ರಕ್ಕೆ ಸೇರಿದವರು.

ಒಟ್ಟು 13 ಪದ್ಮ ಭೂಷಣ ಪ್ರಶಸ್ತಿಗಳಲ್ಲಿ ನಾಲ್ಕು ಕಲಾ ಕ್ಷೇತ್ರಕ್ಕೆ ಲಭಿಸಿವೆ. ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್, ಮಲಯಾಳಂ ನಟ ಮಮ್ಮುಟಿ, ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ (ಮರಣೋತ್ತರ) ಹಾಗೂ ಕರ್ನಾಟಕದ ಶತಾವಧಾನಿ ಗಣೇಶ್ ಅವರಿಗೆ ಪದ್ಮ ಭೂಷಣ ಘೋಷಿಸಲಾಗಿದೆ.

ಇನ್ನು ಪದ್ಮಶ್ರೀ ಪ್ರಶಸ್ತಿಗಳನ್ನು ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್, ನಟ ಮಾಗಂಟಿ ಮುರಳಿ ಮೋಹನ್ ಸೇರಿದಂತೆ ಹಲವು ಕಲಾವಿದರಿಗೆ ನೀಡಲಾಗಿದೆ. ಬಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಶಾ ಅವರಿಗೆ ಮರಣೋತ್ತರ ಪದ್ಮಶ್ರೀ ಗೌರವ ಲಭಿಸಿದೆ.

ಪದ್ಮ ಪ್ರಶಸ್ತಿಗಳು ಕಲೆ, ಸಮಾಜಸೇವೆ, ಶಿಕ್ಷಣ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ಆಡಳಿತ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದವರಿಗೆ ನೀಡುವ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.

ನರೇಂದ್ರ ಮೋದಿಯವರ ಆಡಳಿತ ಸೂತ್ರಗಳಿಂದ ದೇಶದ ಅದ್ಭುತ ಆರ್ಥಿಕ ಪ್ರಗತಿ: ಡಿ.ವಿ.ಸದಾನಂದ ಗೌಡ

0

ಬೆಂಗಳೂರು: ನಮ್ಮ ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಆಡಳಿತ ಸೂತ್ರಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದ ಅವರು ಮಾತನಾಡಿ, ಭಾರತವು ಪ್ರತಿ ಕ್ಷೇತ್ರದಲ್ಲೂ ಸ್ವಾಭಿಮಾನಿ ರಾಷ್ಟ್ರವಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅದು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿದೆ. ಮಾವಿನ ಹಣ್ಣು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಹಾಗೂ ಆಹಾರೋತ್ಪನ್ನಗಳನ್ನು ನಾವು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಚಂದ್ರಯಾನದಲ್ಲೂ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದವರು ಸಂವಿಧಾನಕ್ಕೆ ಅಪಚಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನಬದ್ಧವಾದ ವೇದಿಕೆಯನ್ನು ಮಾನ್ಯ ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಲು ಬೇಕಾದ ಪ್ರಯತ್ನಗಳನ್ನು ಮಾಡಿದ್ದಾರೆ. ಇದನ್ನು ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಇಡೀ ರಾಜ್ಯದ ಜನತೆ ಖಂಡಿಸಬೇಕಾದ ದಿನವಿದು ಎಂದು ನುಡಿದರು. ಮೋದಿಜೀ ಅವರು ಪ್ರತಿ ಪ್ರಾದೇಶಿಕ ಭಾಷೆಗೆ ನೀಡುತ್ತಿದ್ದು, ಆಯಾ ರಾಜ್ಯದ ಸಂಸ್ಕøತಿ, ಸಂಸ್ಕಾರಗಳಿಗೆ ಉತ್ತೇಜನ ಕೊಡುತ್ತಿದ್ದಾರೆ ಎಂದು ವಿವರಿಸಿದರು.

ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ: ಹುತಾತ್ಮ ಯೋಧರಿಗೆ ಗೌರವ ನಮನ

0

ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಎರಡು ನಿಮಿಷ ಮೌನಾಚರಣೆ ನಡೆಸಿ, ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಕರ್ತವ್ಯ ಪಥದತ್ತ ತೆರಳಿದರು.

ಕರ್ತವ್ಯ ಪಥದಲ್ಲಿ ನಡೆದ ಪರೇಡ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಜರಿದ್ದರು. ಮೂರು ಸೇನಾ ಪಡೆಗಳ ಮುಖ್ಯಸ್ಥರೂ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಗಣ್ಯರ ಸ್ವಾಗತದ ಬಳಿಕ ಪ್ರಧಾನಿಗಳು ಅತಿಥಿಗಳೊಂದಿಗೆ ಮುಖ್ಯ ವೇದಿಕೆಗೆ ತೆರಳಿದರು. ರಾಷ್ಟ್ರಗೀತೆ ನುಡಿಸಿದ ನಂತರ ಗಣರಾಜ್ಯೋತ್ಸವ ಪರೇಡ್ ಅಧಿಕೃತವಾಗಿ ಆರಂಭವಾಯಿತು. ಸಂಪ್ರದಾಯದಂತೆ ಪ್ರಧಾನಿ ಹಾಗೂ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. 172 ಫೀಲ್ಡ್ ರೆಜಿಮೆಂಟ್‌ನ 1721 ಸೆರಿಮೋನಿಯಲ್ ಬ್ಯಾಟರಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ‘ವಂದೇ ಮಾತರಂ’ ಥೀಮ್‌ನಡಿ ನಡೆಯುತ್ತಿವೆ. ಪರೇಡ್ನಲ್ಲಿ ಆಪರೇಷನ್ ಸಿಂಧೂರ ಮಿಷನ್ ಪ್ರಮುಖ ಆಕರ್ಷಣೆಯಾಗಿದ್ದು, ದೇಶದ ಅಭೂತಪೂರ್ವ ಅಭಿವೃದ್ಧಿ, ಬಲಿಷ್ಠ ಸೈನಿಕ ಶಕ್ತಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಪ್ರದರ್ಶಿಸಲಾಗುತ್ತಿದೆ.

ಗಣರಾಜ್ಯೋತ್ಸವ ಪರೇಡಿನಲ್ಲಿ ಎಸ್-400 ಪ್ರದರ್ಶನ: ಕರ್ತವ್ಯ ಪಥದಲ್ಲಿ ಭಾರತದ ಗೇಮ್ ಚೇಂಜರ್ ಶಕ್ತಿ ಅನಾವರಣ

0

ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ನಡುವೆ ಇಡೀ ದೇಶದ ಜನರ ಚಿತ್ತ ಇಂದು ದೆಹಲಿಯಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡಿನತ್ತ ನೆಟ್ಟಿದೆ. ವಿಶೇಷವಾಗಿ, ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಕ್ಷಿಪಣಿಗಳನ್ನು ಧ್ವಂಸಗೊಳಿಸಲು ಭಾರತ ಬಳಸಿದ್ದ ಎಸ್-400 ವಾಯುರಕ್ಷಣಾ ವ್ಯವಸ್ಥೆ ಇಂದು ಪರೇಡಿನಲ್ಲಿ ಪ್ರದರ್ಶಿಸಲ್ಪಡುತ್ತಿದೆ.

77ನೇ ಗಣರಾಜ್ಯೋತ್ಸವ ಪರೇಡಿನಲ್ಲಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹತ್ತಾರು ಟ್ಯಾಬ್ಲೋಗಳು ಭಾಗವಹಿಸಿವೆ. ಇದರ ಜೊತೆಗೆ ರಕ್ಷಣಾ ಇಲಾಖೆಯ ಟ್ಯಾಬ್ಲೋ ವಿಭಾಗದಲ್ಲಿ ಎಸ್-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆಯನ್ನು ವಿಶೇಷ ಆಕರ್ಷಣೆಯಾಗಿ ಪ್ರದರ್ಶಿಸಲಾಗುತ್ತಿದೆ.

ವಾಯುಪಡೆಯ ‘ಗೇಮ್ ಚೇಂಜರ್’

ಭಾರತೀಯ ವಾಯುಪಡೆಯ ಗೇಮ್ ಚೇಂಜರ್ ಎಂದೇ ಗುರುತಿಸಿಕೊಂಡಿರುವ ಎಸ್-400 ವಾಯುರಕ್ಷಣಾ ವ್ಯವಸ್ಥೆ, ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ದೀರ್ಘ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಹೊಡೆಯುವ ಈ ಕ್ಷಿಪಣಿ ವ್ಯವಸ್ಥೆ, ಪಾಕಿಸ್ತಾನದ ಮಿಸೈಲ್ ಹಾಗೂ ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಹೊಡೆದುರುಳಿಸಿತ್ತು. ಇದರ ಪರಿಣಾಮವಾಗಿ, ಎಸ್-400 ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲೂ ಬೇಡಿಕೆ ಹೆಚ್ಚಾಗಿದೆ.

ರಷ್ಯಾ ಜೊತೆಗೆ ಮಹತ್ವದ ಒಪ್ಪಂದ

2018ರಲ್ಲಿ ಭಾರತ, ಎಸ್-400 ವಾಯುರಕ್ಷಣಾ ವ್ಯವಸ್ಥೆಗಳ ಖರೀದಿಗಾಗಿ ರಷ್ಯಾ ಜೊತೆ 5.5 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ ಹೆಚ್ಚುತ್ತಿರುವ ಸೈನಿಕ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಪೂರೈಕೆಯಲ್ಲಿ ವಿಳಂಬವಾಗಿದ್ದರೂ, ಒಪ್ಪಂದದ ಅಡಿಯಲ್ಲಿ ಉಳಿದಿರುವ ಕೊನೆಯ ಎರಡು ಘಟಕಗಳು 2026 ಮತ್ತು 2027ರ ಅವಧಿಯಲ್ಲಿ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.

Republic Day 2026: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಕೊಂಡಾಡಿದ ರಾಜ್ಯಪಾಲರು!

0

ಬೆಂಗಳೂರು: ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಪರಿಣಾಮವಾಗಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಬೆಳೆಯುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

77ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖಿಸಿರುವ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ರಾಜ್ಯ ಸರ್ಕಾರ ತನ್ನ ಆಡಳಿತದ ಕೇಂದ್ರಬಿಂದುವಾಗಿಸಿಕೊಂಡಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಂದು ಪ್ರದೇಶ ಹಾಗೂ ಸಮುದಾಯಗಳ ಧ್ವನಿಯನ್ನು ಆಲಿಸಿ, ನ್ಯಾಯಯುತ ಪರಿಹಾರ ನೀಡುವ ಕಾರ್ಯ ಸರ್ಕಾರ ಮಾಡುತ್ತಿದೆ. ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತ ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಜನಸಮುದಾಯಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನದ ಆಶಯದಂತೆ ಅತ್ಯಂತ ಹಿಂದುಳಿದ ವರ್ಗಗಳ ಬಲವರ್ಧನೆಗಾಗಿ ಹಾಗೂ ಜನರಿಗೆ ಆರ್ಥಿಕ ಚೈತನ್ಯ ಒದಗಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ವರ್ಷಕ್ಕೆ ಸುಮಾರು 1.12 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ 1.13 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ನೀಡಲಾಗಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು.

ಈ ಯೋಜನೆಗಳ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದು, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ. ಮಹಿಳೆಯರಲ್ಲಿ ಹೊಸ ಆರ್ಥಿಕ ಹಾಗೂ ಸಾಮಾಜಿಕ ಉತ್ಸಾಹ ಮೂಡಿದೆ. ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ಅವರು ಹೇಳಿದರು. ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದ ರಾಜ್ಯಪಾಲರು, ಸಾವಿರಾರು ವರ್ಷಗಳ ರಾಜಪ್ರಭುತ್ವ ಹಾಗೂ ಶತಮಾನಗಳ ವಸಾಹತುಶಾಹಿ ಆಡಳಿತಕ್ಕೆ ತೆರೆ ಎಳೆದ ದಿನವೇ ಜನವರಿ 26 ಎಂದು ಸ್ಮರಿಸಿದರು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪ್ರತಿಷ್ಠಾಪಿಸುವ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯೋತ್ಸವ ಎಂದು ಹೇಳಿದರು.

ಗಣತಂತ್ರ ವ್ಯವಸ್ಥೆಯ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ನಮ್ಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕೆಂದು ಹೇಳಿದರು. ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ಇವುಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡಾಗಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

error: Content is protected !!