Home Blog Page 67

ಅಂಗಡಿ ಬಳಿ ಕುಳಿತಿದ್ದ ವೃದ್ಧನ ಮೇಲೆ ಹರಿದ ಬೊಲೆರೋ ಗೂಡ್ಸ್ ವಾಹನ: ಕಾಲಿಗೆ ಗಂಭೀರ ಗಾಯ

0

ದೊಡ್ಡಬಳ್ಳಾಪುರ: ಅಂಗಡಿ ಬಳಿ ಕುಳಿತಿದ್ದ ವೃದ್ದನ ಮೇಲೆ ಬೊಲೆರೋ ಗೂಡ್ಸ್ ವಾಹನ ಹರಿದು ಕಾಲಿಗೆ ಬಾರೀ ಪೆಟ್ಟಾಗಿರುವ ಘಟನೆ ದೊಡ್ಡಬಳ್ಳಾಪುರದ ಸಕ್ಕರೆ ಗೊಲ್ಲಹಳ್ಳಿ ಬಳಿ ನಡೆದಿದೆ.

ನರಸಹನುಮಯ್ಯ(70) ಅಪಘಾತಕ್ಕೀಡಾದ ವೃದ್ಧನಾಗಿದ್ದು, ಟೀ ಕುಡಿಯಲು ಅಂಗಡಿ ಬಳಿ ಕುಳಿತಿದ್ದ ವೇಳೆ, ವೇಗವಾಗಿ ಬಂದ ಬೊಲೆರೋ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ವೃದ್ಧನಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ನರಸಹನುಮಯ್ಯ ಅವರ ಕಾಲಿಗೆ ಭಾರೀ ಪೆಟ್ಟಾಗಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೈಋತ್ಯ ರೈಲ್ವೆಗೆ 7,748 ಕೋಟಿ ರೂ. ಅನುದಾನ; 2009–14ಕ್ಕಿಂತ 9 ಪಟ್ಟು ಹೆಚ್ಚಳ: ಅಶ್ವಿನಿ ವೈಷ್ಣವ್

0

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ 7,748 ಕೋಟಿ ರೂ. ಅನುದಾನ ನೀಡಲಾಗಿದೆ. ಇದು 2009–14ರ ಅವಧಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚಿನ ಅನುದಾನವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2009–14ರ ಅವಧಿಯಲ್ಲಿ ನೈಋತ್ಯ ರೈಲ್ವೆಗೆ ಕೇವಲ 835 ಕೋಟಿ ರೂ. ಅನುದಾನ ನೀಡಲಾಗಿತ್ತು. 2025–26ರ ಸಾಲಿಗೆ 7,564 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಬಾರಿ ಕಳೆದ ಸಾಲಿನ ಹೋಲಿಕೆಯಲ್ಲಿ ಶೇ. 2.37ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು–ಚೆನ್ನೈ ಮತ್ತು ಬೆಂಗಳೂರು–ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ಮಹತ್ವದ ಬದಲಾವಣೆ ತರುವ ಯೋಜನೆಗಳಾಗಿವೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಹೆಚ್ಚುವರಿ ಮಹಾಪ್ರಬಂಧಕ (ಎಜಿಎಂ) ಪಿ. ಅನಂತ್ ಅವರು 2026–27ರ ರೈಲ್ವೆ ಬಜೆಟ್‌ನ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.

ಅಕ್ರಮ ಸಂಬಂಧದ ಆರೋಪವೇ ಕೊಲೆಗೆ ಕಾರಣ: ಉತ್ತರ ಕನ್ನಡದಲ್ಲಿ ಗುರೂಜಿ ಸೇರಿ 7 ಜನರ ಬಂಧನ

0

ಉತ್ತರ ಕನ್ನಡ: ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಅಕ್ರಮ ಸಂಬಂಧದ ಆರೋಪದಿಂದ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಗುರುಜಿ ಜೊತೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ನಡೆಸಿದ ಹಲ್ಲೆಯಲ್ಲಿ ವಸಂತ್ ನಾಯ್ಕ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸ್ ಮಾಹಿತಿಯಂತೆ, ಸುಚಿತ್ರಾ ಎಂಬ ಮಹಿಳೆ ಶಿವಮೊಗ್ಗ ಮೂಲದ ಕಮಲಾಕರ ಭಟ್ ಗುರೂಜಿ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಸುಚಿತ್ರಾ ಪುತ್ರಿಗೆ ತಿಳಿದು, ಆಕೆ ತಂದೆ ಮಹೇಶ್ ನಾಯ್ಕಗೆ ಮಾಹಿತಿ ನೀಡಿದ್ದಾಳೆ. ಬಳಿಕ ಮಹೇಶ್ ನಾಯ್ಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಈ ದೂರುದಿಂದ ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ ಚೌಡಪ್ಪ ನಾಯ್ಕ್ ಹಾಗೂ ಸಹಚರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಮಹೇಶ್ ನಾಯ್ಕ, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡರು. ವಸಂತ್ ನಾಯ್ಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಗುರೂಜಿ ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಮತ್ತು ಸಿದ್ದಾಪುರದಲ್ಲಿ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಸುಚಿತ್ರಾ (ಎ1), ಲೋಕನಾಥ ಚೌಡಪ್ಪ ನಾಯ್ಕ್ (ಎ2), ಇತರ ಸಹಚರರು (ಎ3) ಮತ್ತು ಗುರೂಜಿ ಕಮಲಾಕರ ಭಟ್ (ಎ4) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಅಕ್ರಮ ಸಂಬಂಧ, ಕುಟುಂಬ ಕಲಹ ಮತ್ತು ಪ್ರತೀಕಾರ ಈ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಗದಗ|ಪೋಡಿ ಮಾಡಲು ಲಂಚ: ಲೋಕಾಯುಕ್ತರಿಂದ ಇಬ್ಬರ ಬಂಧನ

0

ಗದಗ: ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಮಾಡಬೇಕಾದ ಜಮೀನು ಸಂಬಂಧಿತ ಕೆಲಸಕ್ಕೆ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಆರೋಪದಲ್ಲಿ ಗದಗ ಜಿಲ್ಲಾ ಲೋಕಾಯುಕ್ತ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಹರ್ಲಾಪುರ ಗ್ರಾಮದ ನಿವಾಸಿ ಗಣೇಶ ಅಂದಪ್ಪ ಮುಂಡರಗಿ ಅವರು, ಒಂದು ತಿಂಗಳ ಹಿಂದೆ ಹರ್ಲಾಪುರದಲ್ಲಿ 6 ಗುಂಟೆ ಜಮೀನನ್ನು ಖರೀದಿಸಿದ್ದು, ಅದು ಮೂಲ ಮಾಲೀಕರೊಂದಿಗೆ ಜಂಟಿ ಉತಾರವಾಗಿದ್ದು, ಪೋಡಿ ಮಾಡಬೇಕಾದ ಅಗತ್ಯವಿತ್ತು. ಈ ಸಂಬಂಧ ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಗದಗ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಎರಡು ಬಾರಿ ಭೇಟಿ ನೀಡಿದ್ದರು.

ಆದರೆ, ಅಲ್ಲಿ ಅರ್ಜಿ ವಿಚಾರಣೆ ಮಾಡುತ್ತಿದ್ದ ಮೋಜಣಿ ಡಾಟಾ ಎಂಟ್ರಿ ಆಪರೇಟರ್ ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು ಮೊದಲಿಗೆ 3,000 ರೂ ಹಾಗೂ ನಂತರ 2,500 ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಚಿತವಾಗಿ ನಡೆಯಬೇಕಾದ ಸರಕಾರಿ ಕೆಲಸಕ್ಕೆ ಲಂಚ ಕೇಳಿ ಪದೇಪದೇ ಅಲೆದಾಡಿಸಿದ್ದ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು.

ಈ ದೂರಿನ ಮೇರೆಗೆ, ದಿನಾಂಕ 03-02-2026 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಫಿರ್ಯಾದಿದಾರರು ಕಚೇರಿಗೆ ತೆರಳಿ ತಮ್ಮ ಕೆಲಸದ ಕುರಿತು ವಿಚಾರಿಸಿದಾಗ, ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು 2,500 ರೂ ಹಣ ಕೇಳಿದ್ದು, ಅವರ ಸೂಚನೆಯಂತೆ ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ನಾಗೇಶ ಗಣಪ ಬಡಿಗೇರ (ಸಾ: ಹರ್ಲಾಪುರ) ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ (ಧಾರವಾಡ) ಹಾಗೂ ಡಿವೈಎಸ್ಪಿ ವಿಜಯ ಬಿರಾದಾರ ಅವರ ಮಾರ್ಗದರ್ಶನದಲ್ಲಿ, ಗದಗ ಲೋಕಾಯುಕ್ತ ಠಾಣೆಯ ಇನ್ಸಪೆಕ್ಟರ್ ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಹಸನ್, ಗಾರ್ಗಿ, ಬಾರಡ್ಡಿ, ಡಿಡಗೂರು, ಸಂಗನಾಳ, ಜವಳಿ, ಅಂಬಿಗೇರ, ಹಿರೇಮಠ, ನೈನಾಪುರ ಇದ್ದರು.

ಇದಲ್ಲದೆ, ಯಾವುದೇ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸಕ್ಕಾಗಿ ಲಂಚ ಅಥವಾ ಇತರೆ ಅಕ್ರಮ ಬೇಡಿಕೆ ಇಟ್ಟಲ್ಲಿ, ಸಾರ್ವಜನಿಕರು ಧೈರ್ಯವಾಗಿ ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡುವಂತೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಯುವತಿ ವಿಚಾರಕ್ಕೆ ಗಲಾಟೆ: ಓರ್ವನಿಗೆ ಚಾಕು ಇರಿತ!

0

ಬೆಂಗಳೂರು: ಯುವತಿ ವಿಚಾರಕ್ಕೆ ಆರಂಭವಾದ ಗಲಾಟೆಯಲ್ಲಿ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ಫೆಬ್ರವರಿ 1ರಂದು ಕೆ.ಆರ್ ಪುರಂ ವ್ಯಾಪ್ತಿಯ ದೇವಸಂದ್ರ ಪ್ರದೇಶದಲ್ಲಿ ನಡೆದಿದೆ. ಆಟೋ ಚಾಲಕ ರೋಷನ್ ಎಂಬಾತನ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ರೋಷನ್ನನ್ನು ಕೆ.ಆರ್ ಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.

ಆರೋಪಿ ಮಾಮು ಹಾಗೂ ಹಲ್ಲೆಗೊಳಗಾದ ರೋಷನ್ ಇಬ್ಬರೂ ನೇಪಾಳ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಇತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 1ರಂದು ರಾತ್ರಿ ದೇವಸಂದ್ರದಲ್ಲಿ ಮಾತನಾಡಲು ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಕೆಲ ಕ್ಷಣಗಳ ಬಳಿಕ ಮಾಮುನ ಸ್ನೇಹಿತರಾದ ವಾಸಿಂ, ಯಾಸೀಫ್ ಮತ್ತು ಖಲೀಂ ಸ್ಥಳಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.

ನೋಡನೋಡುತ್ತಿದ್ದಂತೆ ಮಾಮು ಗ್ಯಾಂಗ್ ಚಾಕುವಿನಿಂದ ರೋಷನ್ ಕುತ್ತಿಗೆಗೆ ಇರಿದಿದ್ದಾನೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್ ಪುರಂ ಠಾಣೆಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್​​​ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸೂಚನೆ

ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧದ ಗಟ್ಟಿಯಾದ ಧ್ವನಿಯಾಗಿ ಮೂಡಿಬಂದಿದೆ. ಜನವರಿ 23ರಂದು ಬಿಡುಗಡೆಯಾದ ಈ ಚಿತ್ರಕ್ಕೆ ವಿಮರ್ಶಕರಿಂದ ಮಾತ್ರವಲ್ಲದೆ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಯಶಸ್ಸಿನ ನಡುವೆ ಇದೀಗ ಚಿತ್ರಕ್ಕೆ ಸರ್ಕಾರದ ಮಟ್ಟದಲ್ಲೂ ಬೆಂಬಲ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿರುವುದು ಚಿತ್ರತಂಡಕ್ಕೆ ದೊಡ್ಡ ಉತ್ತೇಜನ ನೀಡಿದೆ. ಇದರಿಂದ ಟಿಕೆಟ್ ದರ ಕಡಿಮೆಯಾಗಲಿದ್ದು, ಹೆಚ್ಚಿನ ಜನರು ಚಿತ್ರ ವೀಕ್ಷಿಸಲು ಅವಕಾಶ ಸಿಗಲಿದೆ.

70ರ ದಶಕದ ಹಿನ್ನೆಲೆಯ ಕಥೆಯನ್ನೊಳಗೊಂಡ ‘ಲ್ಯಾಂಡ್ಲಾರ್ಡ್’ನಲ್ಲಿ ದುನಿಯಾ ವಿಜಯ್ ರಾಚಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಂಗವ್ವ ಮತ್ತು ಮಗಳು ಭಾಗ್ಯಾಳ ಜೊತೆ ಸರಳ ಜೀವನ ನಡೆಸುವ ರಾಚಯ್ಯ, ಜಮೀನ್ದಾರಿ ವ್ಯವಸ್ಥೆಯ ಶೋಷಣೆಯನ್ನು ಎದುರಿಸಬೇಕಾಗುತ್ತದೆ. ಸಣ್ಣ ಧಣಿ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಕ್ರೂರತೆ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದೆ.

ಅಸಮಾನತೆಯನ್ನು ಪ್ರಶ್ನಿಸಿದ ಯುವಕನ ಹತ್ಯೆ, ಅದರಿಂದ ಸಿಡಿದೇಳುವ ರಾಚಯ್ಯನ ಹೋರಾಟ ಸಿನಿಮಾ ತುಂಬಾ ತೀವ್ರತೆಯನ್ನು ತರುತ್ತದೆ. ರಚಿತಾ ರಾಮ್ ಮತ್ತು ರಿತನ್ಯಾ ರಾಮ್ ಪಾತ್ರಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ. ವಿಶೇಷವಾಗಿ ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ರಾಮ್ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದು ಗಮನ ಸೆಳೆದಿದೆ.

ಬುಕ್ ಮೈ ಶೋನಲ್ಲಿ ಸುಮಾರು 3,000ಕ್ಕೂ ಹೆಚ್ಚು ಜನರು ರೇಟಿಂಗ್ ನೀಡಿದ್ದು, 9.4/10 ಅಂಕಗಳನ್ನು ಸಿನಿಮಾ ಪಡೆದುಕೊಂಡಿದೆ. ಇದು ಚಿತ್ರದ ಜನಪ್ರಿಯತೆಯ ಸ್ಪಷ್ಟ ಸೂಚನೆ. ವಿಮರ್ಶಕರ ಮೆಚ್ಚುಗೆ, ಪ್ರೇಕ್ಷಕರ ಬೆಂಬಲ ಮತ್ತು ಸರ್ಕಾರದ ತೆರಿಗೆ ವಿನಾಯಿತಿ – ಈ ಮೂರು ಅಂಶಗಳು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಭಾರಿ ಬಲ ನೀಡಿವೆ.

Exclusive: ಕಪ್ಪತಗುಡ್ಡದ ಗುಹೆಗಳಲ್ಲಿ ಫಳಫಳ ಹೊಳೆಯುವ ಚಿನ್ನ –ಕ್ಯಾಮೆರಾದಲ್ಲಿ ಸೆರೆಗೊಂಡ ಭಯಾನಕ ಸತ್ಯ!

0

ಗದಗ: ಜಿಲ್ಲೆಯಲ್ಲಿ ಶಾಕಿಂಗ್ ಎಕ್ಸ್‌ಕ್ಲೂಸಿವ್ ವರದಿ ಹೊರಬಿದ್ದಿದೆ. ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಹಾಗೂ ಮಹಾಲಿಂಗಪುರ ಗ್ರಾಮದ ನಡುವಿನ ಕಪ್ಪತಗುಡ್ಡದ ಒಳಗಿನ ಗುಹೆಗಳಲ್ಲಿ ಮತ್ತಷ್ಟು ಚಿನ್ನದ ನಿಕ್ಷೇಪಗಳು ಕ್ಯಾಮೆರಾದಲ್ಲಿ ಸೆರೆಗೊಂಡಿವೆ.

ಭಯಂಕರ ನಿಕ್ಷೇಪ ಹೊಂದಿರುವ ಈ ಗುಹೆಗಳೊಳಗೆ ರಿಯಾಲಿಟಿ ಚೆಕ್ ನಡೆಸಲಾಗಿದ್ದು, ಪ್ರಾಣದ ಹಂಗು ತೊರೆದು ರಿಯಲ್ ಚಿನ್ನದ ಹುಡುಕಾಟ ಮಾಡಲಾಗಿದೆ. ಗುಹೆಯೊಳಗೆ ಪ್ರವೇಶಿಸಿದಂತೆ ನಾಲ್ಕೈದು ದಿಕ್ಕುಗಳಲ್ಲಿ ಕವಲೊಡೆಯುವ ಸುರಂಗಗಳಿದ್ದು, ಅಲ್ಲಲ್ಲಿ ಕಲ್ಲಿನ ಮಧ್ಯೆ ಫಳಫಳ ಹೊಳೆಯುವ ಚಿನ್ನದ ನಿಕ್ಷೇಪಗಳು ಸ್ಪಷ್ಟವಾಗಿ ಕಾಣುತ್ತವೆ.

ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ಭ್ರಿಟಿಷರ ಕಾಲದಲ್ಲೇ ಈ ಪ್ರದೇಶದಲ್ಲಿ ಚಿನ್ನ ತೆಗೆದಿರುವ ದಾಖಲೆಗಳಿವೆ. ಚಿನ್ನ ಇರುವುದನ್ನು ಗುರುತಿಸಿದ ಫಿರಂಗಿಗಳು ಎರಡು–ಮೂರು ಕಿಲೋಮೀಟರ್ ಒಳಗೆ ಗುಹೆಗಳನ್ನು ನಿರ್ಮಿಸಿ ಚಿನ್ನ ದೋಚಿದರಂತೆ.

ಇಂದಿಗೂ ಕಪ್ಪತಗುಡ್ಡದ ಮೇಲೆ ಹಲವು ಕಂಪನಿಗಳ ಕಣ್ಣು ಬಿದ್ದಿದೆ. ಆದರೆ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಈ ಚಿನ್ನದ ಗಣಿಗಳು ರಕ್ಷಣೆಗೊಳಗಾಗಿವೆ. ಸದ್ಯ ಗುಹೆಗಳೊಳಗೆ ಪ್ರವೇಶಿಸಿ ಚಿನ್ನ ವೀಕ್ಷಿಸುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಕ್ಯಾಮೆರಾದಲ್ಲಿ ಸೆರೆಗೊಂಡ ಈ ದೃಶ್ಯಗಳು, ಗದಗ ಜಿಲ್ಲೆಯೊಳಗೆ ಅಡಗಿರುವ ಅಮೂಲ್ಯ ಸಂಪತ್ತಿನ ಮತ್ತೊಂದು ಭಯಾನಕ ಸತ್ಯವನ್ನು ಬಿಚ್ಚಿಟ್ಟಿವೆ.

ಸುಂಕಗಳ ವಿಚಾರದಲ್ಲಿ ತಾಳ್ಮೆ ತೋರಿದ್ದೇ ಫಲ ನೀಡಿದೆ: ಪ್ರಧಾನಿ ಮೋದಿ

0

ನವದೆಹಲಿ: ಸುಂಕಗಳನ್ನು ಕುರಿತು ಟೀಕೆಗಳು ಬಂದಾಗಲೂ ಸರ್ಕಾರ ತಾಳ್ಮೆ ಕಾಪಾಡಿಕೊಂಡಿತ್ತು. ಆ ತಾಳ್ಮೆಯ ಫಲವಾಗಿ ಇಂದು ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡ ಹಿನ್ನೆಲೆಯಲ್ಲಿ, ಇಂದು ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಸುಂಕಗಳ ಕುರಿತಾಗಿ ನಡೆದ ಮಾತುಕತೆಗಳ ಸಂದರ್ಭದಲ್ಲಿ ಸರ್ಕಾರದ ನಿಲುವಿಗೆ ಟೀಕೆಗಳು ಬಂದಿದ್ದರೂ, ಅವುಗಳೇ ಈಗ ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಅವರು ಹೇಳಿದರು.

ವ್ಯಾಪಾರ ಒಪ್ಪಂದವು ದೇಶಕ್ಕೆ ಅನುಕೂಲಕರ ಆರ್ಥಿಕ ವಾತಾವರಣವನ್ನು ನಿರ್ಮಿಸಿದ್ದು, ಇದು ಭಾರತದ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆದಿದೆ ಎಂದು ಪ್ರಧಾನಿ ಶ್ಲಾಘಿಸಿದರು.

“ವಿಶ್ವದ ಆಲೋಚನೆ ಈಗ ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ವಾಲುತ್ತಿದೆ ಎಂದು ನಾನು ಹಲವು ಜಾಗತಿಕ ವೇದಿಕಗಳಲ್ಲಿ ಹೇಳಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳು ಇರುವ ನಡುವೆಯೂ ಭಾರತವು ಅದರಿಂದ ಪ್ರಯೋಜನ ಪಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.

‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ: ಮೂರು ತಿಂಗಳಲ್ಲಿ ‘ಧುರಂಧರ್ 2’ ರಿಲೀಸ್

ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಕಾಂಬಿನೇಷನ್‌ನ ‘ಧುರಂಧರ್’ ಸಿನಿಮಾ 2024ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಬೆನ್ನಲ್ಲೇ ಕೇವಲ ಮೂರೇ ತಿಂಗಳ ಅಂತರದಲ್ಲಿ ‘ಧುರಂಧರ್ 2’ ಬರಲು ಸಜ್ಜಾಗಿದೆ ಎಂಬುದು ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು.

ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದೆ. ಈ ನಡುವೆ ಬಿಡುಗಡೆಯಾದ ಟೀಸರ್ ಚಿತ್ರದ ರಿಲೀಸ್ ದಿನಾಂಕವನ್ನು ಖಚಿತಪಡಿಸಿದೆ. ಆದರೆ ಟೀಸರ್‌ನಲ್ಲಿ ಹೊಸದೇನೂ ಇಲ್ಲದ ಕಾರಣ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೊದಲ ಭಾಗದಲ್ಲಿ ರಣವೀರ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ ಎಂಬ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಅಲಿ ಮಜಾರಿಯಾಗಿ ರೂಪಾಂತರಗೊಳ್ಳುತ್ತಾರೆ ಎಂಬ ಜರ್ನಿಯನ್ನೇ ‘ಧುರಂಧರ್ 2’ ಸಿನಿಮಾದಲ್ಲಿ ವಿವರಿಸಲಾಗುತ್ತದೆ ಎನ್ನಲಾಗಿದೆ.

ಟೀಸರ್‌ನಲ್ಲಿ ಮೊದಲ ಭಾಗದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಬಳಸಿರುವುದು ನಿರೀಕ್ಷೆಗಳಿಗೆ ಧಕ್ಕೆ ತಂದಿದೆ. ವಿಶೇಷವಾಗಿ ಕನ್ನಡ ಟೀಸರ್ ಕೊನೆಯಲ್ಲಿ ಬಳಸಿರುವ ಡೈಲಾಗ್ ಕಥೆಗೆ ಹೊಂದಿಕೆಯಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆದರೆ ಚಿತ್ರತಂಡ ಬಿಡುಗಡೆಗೆ ಕೆಲ ದಿನಗಳ ಮೊದಲು ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅಲ್ಲಿ ಸಾಕಷ್ಟು ಹೊಸ ದೃಶ್ಯಗಳು ಮತ್ತು ಅಚ್ಚರಿಗಳು ಇರಲಿವೆ ಎಂಬ ನಿರೀಕ್ಷೆ ಮೂಡಿದೆ. ಟೀಸರ್ ನಿರಾಸೆ ತಂದರೂ ಟ್ರೇಲರ್ ಮೂಲಕ ಅಭಿಮಾನಿಗಳ ನಂಬಿಕೆ ಮರಳಿ ಪಡೆಯಲು ಸಾಧ್ಯವಾಗುತ್ತದೆಯೇ ಎಂಬುದೇ ಈಗ ಎಲ್ಲರ ಪ್ರಶ್ನೆ.

ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವ ಪ್ರಶ್ನೆ: ಕೇಂದ್ರ ಹಾಗೂ 12 ರಾಜ್ಯಗಳಿಗೆ ಸುಪ್ರೀಂ ನೋಟಿಸ್

0

ನವದೆಹಲಿ: ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾರತದ ರಾಷ್ಟ್ರೀಯ ಚರ್ಚುಗಳ ಮಂಡಳಿ (ಎನ್‌ಸಿಐಸಿ) ಸಲ್ಲಿಸಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ, ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ತಮ್ಮ ಉತ್ತರ ಸಲ್ಲಿಸುವಂತೆ ಆದೇಶಿಸಿದೆ.

ಅಲ್ಲದೆ, ಈ ಹೊಸ ಅರ್ಜಿಗಳನ್ನು ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಿ, ಮೂವರು ನ್ಯಾಯಾಧೀಶರ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಎನ್‌ಸಿಐಸಿ ತನ್ನ ಅರ್ಜಿಯಲ್ಲಿ, ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿದೆ.

ಈ ಕಾನೂನುಗಳು ಸಂವಿಧಾನದ 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುತ್ತಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಹತ್ತಿಕ್ಕುತ್ತವೆ ಎಂದು ಆರೋಪಿಸಲಾಗಿದೆ.ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೇ ರೀತಿಯ ಅರ್ಜಿಗಳು ಈಗಾಗಲೇ ಬಾಕಿ ಇದ್ದು, ಕೇಂದ್ರದ ಉತ್ತರ ಸಿದ್ಧವಾಗಿದೆ.

ಶೀಘ್ರದಲ್ಲೇ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಜೊತೆಗೆ ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗುಜರಾತ್, ಜಾರ್ಖಂಡ್, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ಈ ಮೊದಲು ಕಳೆದ ಸೆಪ್ಟೆಂಬರ್ 16ರಂದು, ಮತಾಂತರ ವಿರೋಧಿ ಕಾನೂನುಗಳ ಜಾರಿಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ವೇಳೆ, ರಾಜ್ಯ ಸರ್ಕಾರಗಳ ನಿಲುವು ತಿಳಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

error: Content is protected !!