ನವದೆಹಲಿ: ಹನಿಮೂನ್ ಗೆ ತೆರಳಿದ್ದ ವೇಳೆ ಪ್ಲಾನ್ ಮಾಡಿ ಗಂಡನನ್ನು ಕೊಲ್ಲಿಸಿ ಹಿಟ್ ಅಂಡ್ ರನ್ ಕತೆ ಕಟ್ಟಿದ್ದ ನವವಿವಾಹಿತೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಈ ಘಟನೆ ಆರಂಭದಲ್ಲಿ ರಸ್ತೆ ಅಪಘಾತ ಎಂದು ತೋರಿಸಿದ್ದರೂ, ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.
ಮೃತನನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಪತ್ನಿ ಅಂಜಲಿ ಜೊತೆ ರಾತ್ರಿ ವಾಕಿಂಗ್ಗೆ ಹೋದ ವೇಳೆ ಅಪಘಾತ ಸಂಭವಿಸಿದೆ ಎಂದು ಅಂಜಲಿ ಪೊಲೀಸರಿಗೆ ತಿಳಿಸಿದ್ದಳು. ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಆಶಿಶ್ ಮೃತಪಟ್ಟಿದ್ದು, ಕೆಲವರು ತನ್ನ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಆಕೆ ದೂರು ನೀಡಿದ್ದಳು. ಆರಂಭದಲ್ಲಿ ಪೊಲೀಸರು ಇದನ್ನು ಅಪಘಾತ ಪ್ರಕರಣವೆಂದೇ ಪರಿಗಣಿಸಿದ್ದರು.
ಆದರೆ, ಮೇಘಾಲಯದ ಹನಿಮೂನ್ ಕೊಲೆ ಪ್ರಕರಣದ ಹಿನ್ನೆಲೆ ಹಿನ್ನೆಲೆಯಲ್ಲಿ ಅಂಜಲಿ ಹೇಳಿಕೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಅದೇ ದೃಷ್ಟಿಕೋನದಲ್ಲಿ ತನಿಖೆ ಮುಂದುವರಿಸಿದಾಗ, ಅಂಜಲಿ ತನ್ನ ಪ್ರಿಯಕರ ಸಂಜು ಜೊತೆ ಸೇರಿ ಗಂಡ ಆಶಿಶ್ನ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.
ಜನವರಿ 30ರಂದು ರಾತ್ರಿ 9ರ ಸುಮಾರಿಗೆ ದಂಪತಿ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಪ್ರಕರಣದ ತನಿಖೆಗೆ ಎಫ್ಎಸ್ಎಲ್ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್ನ ಕತ್ತು ಹಿಸುಕಿರುವ ಗುರುತುಗಳು ಪತ್ತೆಯಾಗಿದ್ದು, ಅಪಘಾತದ ಕಥೆಗೆ ಬಿರುಕು ಮೂಡಿಸಿತು. ಅಲ್ಲದೆ, ಚಿನ್ನಾಭರಣ ದೋಚಲಾಗಿದೆ ಎಂದರೂ ಅಂಜಲಿಗೆ ಯಾವುದೇ ಗಾಯಗಳಿರದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.
ತನಿಖೆಯಲ್ಲಿ ಅಂಜಲಿ ತನ್ನ ಮನೆಯ ಸಮೀಪವಿದ್ದ ಸಂಜು ಜೊತೆ ನಿರಂತರ ಸಂಪರ್ಕದಲ್ಲಿದ್ದುದನ್ನು ಫೋನ್ ದಾಖಲೆಗಳು ದೃಢಪಡಿಸಿವೆ. ಮದುವೆಯಿಂದ ಅಸಮಾಧಾನಗೊಂಡಿದ್ದ ಅಂಜಲಿ ತವರು ಮನೆಗೆ ಬಂದಾಗ ಮತ್ತೆ ಸಂಜು ಜೊತೆ ಸಂಬಂಧ ಬೆಳೆಸಿದ್ದಳು. ಈ ವೇಳೆ ಇಬ್ಬರೂ ಆಶಿಶ್ನ ಕೊಲೆಗೆ ಸಂಚು ರೂಪಿಸಿದ್ದರು.
ಪ್ಲಾನ್ನಂತೆ ಜನವರಿ 30ರಂದು ರಾತ್ರಿ ಊಟದ ನಂತರ ಅಂಜಲಿ ಆಶಿಶ್ನನ್ನು ವಾಕಿಂಗ್ ನೆಪದಲ್ಲಿ ನಿರ್ಜನ ರಸ್ತೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಸಂಜು ಹಾಗೂ ಅವನ ಸಹಚರರಾದ ರೋಹಿತ್ ಮತ್ತು ಬಾದಲ್ ಅಡಗಿ ಕುಳಿತಿದ್ದು, ಆಶಿಶ್ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ.
ತನ್ನ ಮೇಲೆ ಅನುಮಾನ ಬಾರದಂತೆ ಅಂಜಲಿ ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗಳಿಗೆ ನೀಡಿ ದರೋಡೆ ನಡೆದಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಾಳೆ. ಬಳಿಕ ಪ್ರಜ್ಞಾಹೀನಳಂತೆ ನಟಿಸಿದ್ದಾಳೆ. ಆದರೆ ದೇಹದ ಮೇಲಿದ್ದ ಗಾಯದ ಗುರುತುಗಳು ಕೊಲೆಯ ಸತ್ಯವನ್ನು ಬಯಲಿಗೆಳೆದವು.
ತನಿಖೆ ವೇಳೆ ಅಂಜಲಿ ಹೇಳಿಕೆಗಳನ್ನು ಪದೇಪದೇ ಬದಲಾಯಿಸಿದ್ದರಿಂದ ಪೊಲೀಸರು ಆಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದರು. ಕೊನೆಗೆ ಅಂಜಲಿ ತಪ್ಪೊಪ್ಪಿಕೊಂಡಿದ್ದು, ಪೊಲೀಸರು ಅಂಜಲಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

