Home Blog Page 7

Honeymoon Murder: ಗಂಡನನ್ನು ಕೊಂದು ಹಿಟ್ ಅಂಡ್ ರನ್ ಕಥೆ ಕಟ್ಟಿದ ಪತ್ನಿ..! ಮುಂದೇನಾಯ್ತು..?

0

ನವದೆಹಲಿ: ಹನಿಮೂನ್ ಗೆ ತೆರಳಿದ್ದ ವೇಳೆ ಪ್ಲಾನ್ ಮಾಡಿ ಗಂಡನನ್ನು ಕೊಲ್ಲಿಸಿ ಹಿಟ್ ಅಂಡ್ ರನ್ ಕತೆ ಕಟ್ಟಿದ್ದ ನವವಿವಾಹಿತೆಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಈ ಘಟನೆ ಆರಂಭದಲ್ಲಿ ರಸ್ತೆ ಅಪಘಾತ ಎಂದು ತೋರಿಸಿದ್ದರೂ, ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.

ಮೃತನನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಪತ್ನಿ ಅಂಜಲಿ ಜೊತೆ ರಾತ್ರಿ ವಾಕಿಂಗ್‌ಗೆ ಹೋದ ವೇಳೆ ಅಪಘಾತ ಸಂಭವಿಸಿದೆ ಎಂದು ಅಂಜಲಿ ಪೊಲೀಸರಿಗೆ ತಿಳಿಸಿದ್ದಳು. ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಆಶಿಶ್ ಮೃತಪಟ್ಟಿದ್ದು, ಕೆಲವರು ತನ್ನ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಆಕೆ ದೂರು ನೀಡಿದ್ದಳು. ಆರಂಭದಲ್ಲಿ ಪೊಲೀಸರು ಇದನ್ನು ಅಪಘಾತ ಪ್ರಕರಣವೆಂದೇ ಪರಿಗಣಿಸಿದ್ದರು.

ಆದರೆ, ಮೇಘಾಲಯದ ಹನಿಮೂನ್ ಕೊಲೆ ಪ್ರಕರಣದ ಹಿನ್ನೆಲೆ ಹಿನ್ನೆಲೆಯಲ್ಲಿ ಅಂಜಲಿ ಹೇಳಿಕೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಅದೇ ದೃಷ್ಟಿಕೋನದಲ್ಲಿ ತನಿಖೆ ಮುಂದುವರಿಸಿದಾಗ, ಅಂಜಲಿ ತನ್ನ ಪ್ರಿಯಕರ ಸಂಜು ಜೊತೆ ಸೇರಿ ಗಂಡ ಆಶಿಶ್‌ನ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಜನವರಿ 30ರಂದು ರಾತ್ರಿ 9ರ ಸುಮಾರಿಗೆ ದಂಪತಿ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಪ್ರಕರಣದ ತನಿಖೆಗೆ ಎಫ್‌ಎಸ್‌ಎಲ್ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್‌ನ ಕತ್ತು ಹಿಸುಕಿರುವ ಗುರುತುಗಳು ಪತ್ತೆಯಾಗಿದ್ದು, ಅಪಘಾತದ ಕಥೆಗೆ ಬಿರುಕು ಮೂಡಿಸಿತು. ಅಲ್ಲದೆ, ಚಿನ್ನಾಭರಣ ದೋಚಲಾಗಿದೆ ಎಂದರೂ ಅಂಜಲಿಗೆ ಯಾವುದೇ ಗಾಯಗಳಿರದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

ತನಿಖೆಯಲ್ಲಿ ಅಂಜಲಿ ತನ್ನ ಮನೆಯ ಸಮೀಪವಿದ್ದ ಸಂಜು ಜೊತೆ ನಿರಂತರ ಸಂಪರ್ಕದಲ್ಲಿದ್ದುದನ್ನು ಫೋನ್ ದಾಖಲೆಗಳು ದೃಢಪಡಿಸಿವೆ. ಮದುವೆಯಿಂದ ಅಸಮಾಧಾನಗೊಂಡಿದ್ದ ಅಂಜಲಿ ತವರು ಮನೆಗೆ ಬಂದಾಗ ಮತ್ತೆ ಸಂಜು ಜೊತೆ ಸಂಬಂಧ ಬೆಳೆಸಿದ್ದಳು. ಈ ವೇಳೆ ಇಬ್ಬರೂ ಆಶಿಶ್‌ನ ಕೊಲೆಗೆ ಸಂಚು ರೂಪಿಸಿದ್ದರು.

ಪ್ಲಾನ್‌ನಂತೆ ಜನವರಿ 30ರಂದು ರಾತ್ರಿ ಊಟದ ನಂತರ ಅಂಜಲಿ ಆಶಿಶ್‌ನನ್ನು ವಾಕಿಂಗ್ ನೆಪದಲ್ಲಿ ನಿರ್ಜನ ರಸ್ತೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಸಂಜು ಹಾಗೂ ಅವನ ಸಹಚರರಾದ ರೋಹಿತ್ ಮತ್ತು ಬಾದಲ್ ಅಡಗಿ ಕುಳಿತಿದ್ದು, ಆಶಿಶ್ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ.

ತನ್ನ ಮೇಲೆ ಅನುಮಾನ ಬಾರದಂತೆ ಅಂಜಲಿ ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗಳಿಗೆ ನೀಡಿ ದರೋಡೆ ನಡೆದಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಾಳೆ. ಬಳಿಕ ಪ್ರಜ್ಞಾಹೀನಳಂತೆ ನಟಿಸಿದ್ದಾಳೆ. ಆದರೆ ದೇಹದ ಮೇಲಿದ್ದ ಗಾಯದ ಗುರುತುಗಳು ಕೊಲೆಯ ಸತ್ಯವನ್ನು ಬಯಲಿಗೆಳೆದವು.

ತನಿಖೆ ವೇಳೆ ಅಂಜಲಿ ಹೇಳಿಕೆಗಳನ್ನು ಪದೇಪದೇ ಬದಲಾಯಿಸಿದ್ದರಿಂದ ಪೊಲೀಸರು ಆಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದರು. ಕೊನೆಗೆ ಅಂಜಲಿ ತಪ್ಪೊಪ್ಪಿಕೊಂಡಿದ್ದು, ಪೊಲೀಸರು ಅಂಜಲಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಿವಿ ಕೇಳದ, ಮಾತು ಬಾರದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ..!

0

ಮುಂಬೈ: ನಗರದ ಕೆಫೆ ಪರೇಡ್ ಪ್ರದೇಶದಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20 ವರ್ಷದ ಯುವತಿಯ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಡಿಎನ್ಎ ಪರೀಕ್ಷೆಯಲ್ಲಿ ಭ್ರೂಣದೊಂದಿಗೆ ತಂದೆಯ ಸಂಬಂಧ ದೃಢಪಟ್ಟ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಐದು ತಿಂಗಳ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ಈ ಪ್ರಕರಣವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರಂಭದಲ್ಲಿ ಯುವತಿ ತನ್ನ ಮೇಲೆ ಮತ್ತೊಬ್ಬ ವ್ಯಕ್ತಿ ಹಾಗೂ 17 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾರೆ ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಯುವತಿ ಕೈ ಸನ್ನೆಗಳ ಮೂಲಕ ತಾನು ಸುಸ್ತಾಗುತ್ತಿದೆ ಹಾಗೂ ಹೊಟ್ಟೆಯಲ್ಲಿ ಏನೋ ಚಲಿಸುವಂತೆ ಅನುಭವವಾಗುತ್ತಿದೆ ಎಂದು ಅಜ್ಜಿಗೆ ತಿಳಿಸಿದ್ದಳು. ಬಳಿಕ ಆಕೆಯನ್ನು ನಗರದ ಕ್ಯಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಐದು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿತು. ಆಸ್ಪತ್ರೆ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ.

ಪೊಲೀಸರು ಈ ವಿಚಾರವನ್ನು ಯುವತಿಯ ತಂದೆಗೆ ತಿಳಿಸಿದಾಗ, ಪುತ್ರಿ ಗರ್ಭಿಣಿಯಾಗಿರುವುದನ್ನು ಆತ ತಳ್ಳಿಹಾಕಿದ್ದು, ದೂರು ದಾಖಲಿಸಲು ಸಹ ನಿರಾಕರಿಸಿದ್ದಾನೆ. ನಂತರ ಕೌನ್ಸಿಲಿಂಗ್ ನಡೆಸಿದ ಬಳಿಕ ಯುವತಿ ದೂರು ದಾಖಲಿಸಲು ಒಪ್ಪಿಕೊಂಡಳು.ಯುವತಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದರು.

ಬಳಿಕ ಯುವತಿಯ ತಂದೆ ಸೇರಿದಂತೆ ಒಟ್ಟು 17 ಶಂಕಿತರಿಂದ ಡಿಎನ್ಎ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಭ್ರೂಣದ ಆನುವಂಶಿಕ ದತ್ತಾಂಶದೊಂದಿಗೆ ಹೋಲಿಕೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಯುವತಿಯ ತಂದೆಯ ಡಿಎನ್ಎ ಮ್ಯಾಚ್ ಆಗಿರುವುದು ದೃಢಪಟ್ಟಿದೆ. ಡಿಎನ್ಎ ವರದಿ ಆಧಾರವಾಗಿ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಹೈ ಸ್ಪೀಡ್ ರೈಲ್ವೆ ಕಾರಿಡಾರ್; ರೈಲ್ವೆ ಸಚಿವರನ್ನು ಅಭಿನಂದಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು

0

ನವದೆಹಲಿ: ರಾಷ್ಟ್ರದ ಅಗತ್ಯಗಳಿಗೆ ಮೀರಿ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚು ಅನುದಾನ, ಯೋಜನೆಗಳನ್ನು ನೀಡಿರುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿಗಳು; 2026ರ ಬಜೆಟ್‌ನಲ್ಲಿ ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಬೆಳವಣಿಗೆಗಾಗಿ ಬೆಳವಣಿಗೆಯ ಕನೆಕ್ಟರ್‌ಗಳಾಗಿ ಸುಮಾರು 4,000 ಕಿ.ಮೀ. ಉದ್ದದ ಏಳು ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಪೈಕಿ ಚೆನ್ನೈ-ಬೆಂಗಳೂರು-ಹೈದರಾಬಾದ್ (ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು ವಿಭಾಗಗಳೊಂದಿಗೆ) ದಕ್ಷಿಣ ಭಾಗದಲ್ಲಿ ಹೈ-ಸ್ಪೀಡ್ ತ್ರಿಕೋನವನ್ನು ಸೃಷ್ಟಿಸಲಾಗುತ್ತಿದೆ. ಇದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳು ಮತ್ತು ಅವರ ಚಲನಶೀಲತೆಯ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ ಮತ್ತು ಕೇರಳ ಮತ್ತು ಪುದುಚೇರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.

ಮುಂಬೈ-ಪುಣೆ, ಪುಣೆ-ಹೈದರಾಬಾದ್, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿಯಂತಹ ಇತರ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು 16 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುತ್ತವೆ.

ಈ ದೂರದೃಷ್ಟಿಯ ಉಪಕ್ರಮವು ವಿಕಸಿತ ಭಾರತ 2047ರ ಉದಾತ್ತ ಕನಸಿನೊಂದಿಗೆ ಸರಾಗವಾಗಿ ಹೊಂದಿಕೆಯಾಗುತ್ತದೆ. ಜಾಗತಿಕ ದರ್ಜೆಯ ಮೂಲಸೌಕರ್ಯದಿಂದ ನಡೆಸಲ್ಪಡುವ ಅಭಿವೃದ್ಧಿ ಹೊಂದಿದ, ಆಧುನಿಕ ಆರ್ಥಿಕತೆಯತ್ತ ನಮ್ಮ ರಾಷ್ಟ್ರದ ಪ್ರಯಾಣವನ್ನು ವೇಗಗೊಳಿಸುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೀದರ್ ಸೇರಿಸಲು ಮನವಿ:

ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು. ಇದು ಉತ್ತರ ಕರ್ನಾಟಕ ಮತ್ತು ತೆಲಂಗಾಣ ಪ್ರದೇಶಗಳಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಮನವಿ ಮಾಡಿರುವ ಮಾಜಿ ಪ್ರಧಾನಿಗಳು; ಈ ಮೂಲಕ ಬೀದರ್ ಭಾಗದ ಅಗತ್ಯಗಳಿಗೆ ಅನುಕೂಲ ಆಗುತ್ತದೆ ಎಂದಿದ್ದಾರೆ.

ಕರ್ನಾಟಕ ರಾಜ್ಯದೊಳಗೆ ಸುಧಾರಿತ ಆಂತರಿಕ ಸಂಪರ್ಕದ ಅಗತ್ಯವಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವಿನ ಅಂತರವು ಸುಮಾರು 600 ಕಿ.ಮೀ., ಮತ್ತು ಪ್ರಸ್ತುತ ಪ್ರಯಾಣದ ಸಮಯ – ಸಾಮಾನ್ಯವಾಗಿ ರಸ್ತೆ ಅಥವಾ ರೈಲು ಮೂಲಕ 8-10 ಗಂಟೆಗಳು ಆಗುತ್ತದೆ.

ಈ ದೀರ್ಘ ಪ್ರಯಾಣವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಿಗೆ ಪ್ರಗತಿಗೆ ತೀವ್ರವಾಗಿ ಅಡ್ಡಿಯಾಗುತ್ತದೆ. ಬೆಂಗಳೂರು- ಬೆಳಗಾವಿ- ಪುಣೆ-ಮುಂಬೈ ಅನ್ನು ಸಂಪರ್ಕಿಸುವ ವೇಗದ ಹೈ-ಸ್ಪೀಡ್ ರೈಲು ಕಾರಿಡಾರ್ ಅಪಾರ ಪ್ರಯೋಜನಕಾರಿ ಆಗಲಿದೆ ಎಂದು ಅವರು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಎರಡು ದಿನದಲ್ಲಿ 11 ಹಸುಗಳು ಸಾವು

0

ಚಾಮರಾಜನಗರ: ಕೇವಲ ಎರಡು ದಿನಗಳಲ್ಲಿ ಚಾಮರಾಜನಗರದ ಹನೂರು ತಾಲ್ಲೂಕಿನ ಹಸುಗಳು ಅನಿಯಂತ್ರಿತವಾಗಿ ಮೃತರಾಗಿದ್ದು, ಸ್ಥಳೀಯ ರೈತರಲ್ಲಿ ಭಾರೀ ಆತಂಕ ಮೂಡಿಸಿದೆ. ಶೆಟ್ಟಿಹಳ್ಳಿ ಗ್ರಾಮದಲ್ಲಿ 6 ಹಸುಗಳು ಪರಶಿವ ಅವರ ಜಮೀನಿನ ಪಕ್ಕದಲ್ಲಿ ಪತ್ತೆಯಾಗಿದ್ದು, ಮರಣಕ್ಕೆ ವಿಷಪೂರಿತ ಆಹಾರ ಅಥವಾ ನೀರು ಸೇವನೆಯೇ ಕಾರಣವಾಯಿತೆ ಎಂದು ಅಂದುಕೊಳ್ಳಲಾಗುತ್ತಿದೆ. ಇನ್ನೊಂದು ಎರಡು ಹಸುಗಳು ನಾಪತ್ತೆಯಾಗಿರುವುದು ರೈತರಿಗೆ ಮತ್ತಷ್ಟು ಭಯಕಾರಿಯಾಗಿದೆ.

ಗೋಪಿಶೆಟ್ಟಿಯೂರು ಗ್ರಾಮದಲ್ಲೂ 5 ಹಸುಗಳು ನಿಗದಿಯಲ್ಲದೆ ಮೃತಪಟ್ಟಿದ್ದು, ಮಾಲಕರು ಕಣ್ಣೀರಿಟ್ಟಿದ್ದಾರೆ. ಜೀವೋಪಾಯಕ್ಕೆ ಅವಲಂಬಿತವಾಗಿದ್ದ ಹಸುಗಳನ್ನು ಕಳೆದುಕೊಂಡು ಹೃದಯಭಾರದಿಂದ ಮನವಿ ಮಾಡಿದರು, “ಹಸು ಸಾವಿಗೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು.

ಜಿಲ್ಲಾಧಿಕಾರಿ ಭವನದಲ್ಲಿ ನಡೆದ ಸಭೆಗೆ ತಡವಾಗಿ ಬಂದ ಅಧಿಕಾರಿಗಳ ಮೇಲೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಕಬಿನಿ ಹಿನ್ನೀರು, ಬಂಡೀಪುರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಮ್ ಸ್ಟೇ ಮತ್ತು ಹೋಟೆಲ್ ತೆರವು ವಿಚಾರ ಚರ್ಚಿಸಲ್ಪಟ್ಟಿದ್ದರೂ, ಸ್ಥಳದಲ್ಲಿ ಹೈ-ಟೆನ್ಷನ್ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭ, ಮಾಧ್ಯಮದವರು ವೀಡಿಯೋ ರೆಕಾರ್ಡ್ ಮಾಡುವುದನ್ನು ನಿಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಾಂಗ್ರೆಸ್ ಶಾಸಕನಿಗೆ ಬಿಗ್ ರಿಲೀಫ್: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಎತ್ತಿಹಿಡಿದ ಸುಪ್ರೀಂ

0

ನವದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಇಂದು ಮಾನ್ಯಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಶಾಸಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

ನಂಜೇಗೌಡ  ಶಾಸಕ ಸ್ಥಾನವನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರಿದ್ದ ಪೀಠ, ನಂಜೇಗೌಡ ಅವರ ಆಯ್ಕೆಯನ್ನು ಎತ್ತಿ ಹಿಡಿದಿದೆ.

ಇದರೊಂದಿಗೆ ಕರ್ನಾಟಕ ಹೈಕೋರ್ಟ್ 2025ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ವಿಚಾರಣೆಯ ವೇಳೆ ಪೀಠವು ಎಲ್ಲರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆಯನ್ನು ತೆರೆಯಿತು. ಮರು ಮತ ಎಣಿಕೆಯಲ್ಲಿಯೂ ನಂಜೇಗೌಡ ಅವರು ತಮ್ಮ ಎದುರಾಳಿ ಬಿಜೆಪಿಯ ಕೆ.ಎಸ್. ಮಂಜುನಾಥ್ ಗೌಡ ಅವರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬುದು ದೃಢಪಟ್ಟಿತು. ನಂಜೇಗೌಡರು 50,957 ಮತಗಳನ್ನು ಗಳಿಸಿದ್ದರೆ, ಮಂಜುನಾಥ್ ಗೌಡರು 50,707 ಮತಗಳನ್ನು ಪಡೆದಿದ್ದರು.

ಅಂದರೆ, ನಂಜೇಗೌಡರು 250ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಪೀಠ ಗಮನಿಸಿತು. ಹೈಕೋರ್ಟ್ ನೀಡಿದ್ದ ಮರು ಮತ ಎಣಿಕೆ ನಿರ್ದೇಶನದ ನಂತರವೂ ಮಾಲೂರು ಕ್ಷೇತ್ರದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ವಾದ ಮಂಡಿಸಿದ್ದರು.

ಈ ಪ್ರಕರಣದ ಹಿನ್ನೆಲೆ ನೋಡಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕೆ.ವೈ. ನಂಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳ ಏಜೆಂಟ್‌ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಒಂದೇ ಕೊಠಡಿಯಲ್ಲಿ ಮತ ಎಣಿಕೆ ನಡೆಯಬೇಕಿದ್ದರೂ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ನಡೆಸಲಾಗಿದೆ. ಇದರಿಂದ ಜನಪ್ರತಿನಿಧಿಗಳ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಮಂಜುನಾಥ್ ಅವರು ಆರೋಪಿಸಿದ್ದರು. ಚುನಾವಣಾ ಆಯೋಗ ನಂಜೇಗೌಡರನ್ನು ವಿಜೇತ ಎಂದು ಘೋಷಿಸಿದ ಕ್ರಮವನ್ನು ರದ್ದುಪಡಿಸಿ ಮರು ಮತ ಎಣಿಕೆ ನಡೆಸಬೇಕು ಎಂದು ಅವರು ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳಿವೆ ಎಂದು ಹೇಳಿತ್ತು. ಫಾರ್ಮ್–17C ಭಾಗ–2 ದಾಖಲೆಗಳಲ್ಲಿ ಎಣಿಕೆ ಏಜೆಂಟ್‌ಗಳ ಸಹಿಗಳು ಇಲ್ಲದಿರುವುದು, ಕೆಲ ದಾಖಲೆಗಳಲ್ಲಿ ಅನಧಿಕೃತ ವ್ಯಕ್ತಿಗಳ ಸಹಿಗಳು ಕಂಡುಬಂದಿರುವುದು ಹಾಗೂ ಸ್ಟ್ರಾಂಗ್ ರೂಂ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಹೈಕೋರ್ಟ್ ಗಮನಿಸಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆ ನಡೆಸುವಂತೆ ಆದೇಶಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಇದೀಗ ಆ ಫಲಿತಾಂಶದ ಆಧಾರದಲ್ಲಿ ಸುಪ್ರೀಂ ಕೋರ್ಟ್ ನಂಜೇಗೌಡ ಅವರ ಆಯ್ಕೆಯನ್ನು ಮಾನ್ಯಗೊಳಿಸಿದೆ.

ಅಕ್ರಮ ಹಣ ವರ್ಗಾವಣೆ ಕೇಸ್‌: ಶಾಸಕ ಸತೀಶ್‌ ಸೈಲ್‌ʼಗೆ ವೈದ್ಯಕೀಯ ಜಾಮೀನು ಮಂಜೂರು

0

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ.

ಶಾಸಕ ಸತೀಶ್ ಸೈಲ್ ಗೆ ಲಿವರ್ ಕಸಿ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆ ಜಾಮೀನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ. ಲಿವರ್ ಕಸಿಗೆ ಸಂಬಂಧಿಸಿದಂತೆ ಪ್ರತಿ ಎರಡು ವಾರಕ್ಕೊಮ್ಮೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ, ಎಂಟು ವಾರಗಳಿಗೊಮ್ಮೆ ಆರೋಗ್ಯದ ಸ್ಥಿತಿಗತಿಗಳ ಕುರಿತು ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.

ಇದೇ ವೇಳೆ, ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ಜಾಮೀನಿನ ಷರತ್ತಾಗಿ ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಭದ್ರತಾ ಖಾತರಿಯನ್ನು ಒದಗಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮಂಡ್ಯ ಜಿಲ್ಲೆ ರೈಲು ಯೋಜನೆಗಳ ಬಗ್ಗೆ ರೈಲ್ವೆ ಸಚಿವರ ಜತೆ ಚರ್ಚಿಸಿದ ಹೆಚ್.ಡಿ. ಕುಮಾರಸ್ವಾಮಿ

0

ನವದೆಹಲಿ: ಬೆಂಗಳೂರು, ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು.

ಗುರುವಾರ ಮಧ್ಯಾಹ್ನ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರು ಮುಖ್ಯವಾಗಿ ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು.

ಈ ಕೆಳಕಂಡ ವಿಷಯಗಳ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರ ಜತೆ ಚರ್ಚಿಸಿದರು.

ಬೆಂಗಳೂರು-ಮಂಗಳೂರು – ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವ ಬಗ್ಗೆ ಸಚಿವರು ಚರ್ಚಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಮನವಿ ಮಾಡಿದ ಸಚಿವರು; ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣಿ ಹೆಚ್ಚಾಗಿರುವುದರಿಂದ ಈ ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

ಮಂಡ್ಯ-ಮೇಲುಕೋಟೆ ರಸ್ತೆಯ ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಮನವಿ:

ಈ ಮಾರ್ಗದಲ್ಲಿ ರೈಲುಗಳ ನಿರಂತರ ಸಂಚಾರದಿಂದಾಗಿ, ರೈತರು ಮತ್ತು ಸಾರ್ವಜನಿಕರು ದೀರ್ಘಕಾಲದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದಾರೆ. ಅಲ್ಲದೆ ಮತ್ತು ಸುರಕ್ಷತಾ ಕಾಳಜಿಗಳು ಸೇರಿದಂತೆ ತೀವ್ರ ಅನಾನುಕೂಲತೆ ಎದುರಿಸುತ್ತಿದ್ದಾರೆ. ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ಇಲ್ಲದಿರುವುದು ದೈನಂದಿನ ಪ್ರಯಾಣ ಮತ್ತು ಕೃಷಿ ಉತ್ಪನ್ನಗಳ ಸಾಗಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಈ ಜಾಗದಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಸಚಿವರು ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.

ದೊಡ್ಡಬ್ಯಾಡರಹಳ್ಳಿಯಲ್ಲಿ ರೈಲ್ವೆ ಓವರ್‌ ಬ್ರಿಡ್ಜ್ ನಿರ್ಮಾಣ:

ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆ.ಆರ್.ಎಸ್. ಮತ್ತು ಕೆ.ಆರ್. ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯಲ್ಲಿ ತೀವ್ರ ಸಂಚಾರ ದಟ್ಟಣೆಯನ್ನು ಹೊಂದಿರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್ ಪ್ರಮುಖ ಅಡಚಣೆಯಾಗಿದ್ದು, ಪ್ರಯಾಣಿಕರಿಗೆ ಆಗಾಗ್ಗೆ ವಿಳಂಬ ಮತ್ತು ಅನಾನುಕೂಲ ಉಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಚಿವರು ಮನವಿ ಮಾಡಿದರು

ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆಗೆ ಮನವಿ:

ಪಾಂಡವಪುರ ಪಟ್ಟಣವು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಕೃಷಿ ಮತ್ತು ವಾಣಿಜ್ಯ ಸರಕುಗಳ ದಕ್ಷ ಸಾಗಣೆಗೆ ಅನುಕೂಲವಾಗುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.

ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರು ಕೋರಿದರು. ಚನ್ನಪಟ್ಟಣದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಮಾಡುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ (ಸಂಖ್ಯೆ 16215) ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೂಡ ಸಚಿವರು ರೈಲ್ವೆ ಸಚಿವರ ಜತೆ ಚರ್ಚಿಸಿದರು.

ಮಂಡ್ಯ ಜಿಲ್ಲೆಯ ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಕೂಡ ಮನವಿ ಸಲ್ಲಿಕೆ. ಗ್ರಾಮಸ್ಥರು, ಮುಖ್ಯವಾಗಿ ರೈತರು ಮತ್ತು ಶಾಲಾ ಮಕ್ಕಳಿಗೆ ಈ ಅಂಡರ್ ಪಾಸ್ ನಿರ್ಮಾಣದಿಂದ ಹೆಚ್ಚು ಅನುಕೂಲ ಆಗಲಿದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.

ಹೊಸ ರೈಲು ಮಂಜೂರಾತಿಗೆ ಮನವಿ: ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬಯಿ- ಬೆಂಗಳೂರು-ಮುಂಬಯಿ ನಗರಗಳಿಗೆ ಸಂಪರ್ಕಿಸಲು ಹೊಸ ರೈಲು ಮಂಜೂರು ಮಾಡಲು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಬರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 44) ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡುವುದು. ಇದರಿಂದಾಗಿ ಆ ಭಾಗದ ಸಾರ್ವಜನಿಕರ ಸುಲಭ ಪ್ರಯಾಣಕ್ಕೆ ಅನುಕೂಲ ಆಗಲಿದೆ ಎಂದು ಸಚಿವರು ವಿನಂತಿ ಮಾಡಿದರು.

ಹೆಜ್ಜಾಲ -ಚಾಮರಾಜನಗರ ರೈಲು ಮಾರ್ಗ ಮಂಜೂರಾತಿಗೆ ಮನವಿ:

ಹೆಜ್ಜಾಲ- ಚಾಮರಾಜನಗರ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವಂತೆ ಸಚಿವ ಕುಮಾರಸ್ವಾಮಿ ಅವರು ಅಶ್ವಿನಿ ವೈಷ್ಣವ ಅವರಲ್ಲಿ ಮನವಿ ಮಾಡಿದರು. ಈ ಮಾರ್ಗವು ಹೆಜ್ಜಾಲ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗವು ಬಹಳ ಮುಖ್ಯವಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.

ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಹಾಸನ ಜಿಲ್ಲೆಯ ಸಕಲೇಶಪುರ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡುವುದು, ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಮ್ಯಾಜಿಕ್ ಬಾಕ್ಸ್ ಗಳನ್ನು ಅಳವಡಿಸುವುದು ಸೇರಿ ಹಲವಾರು ಪ್ರಸ್ತಾವನೆಗಳನ್ನು ಸಚಿವರು ರೇಲ್ವೆ ಸಚಿವರಿಗೆ ಸಲ್ಲಿಸಿದರು.

ಈ ಎಲ್ಲಾ ಬೇಡಿಕೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತವಾಗಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಬುಧವಾರವೂ ರೈಲ್ವೆ ಸಚಿವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ರೀಲ್ಸ್‌ಗಾಗಿ ಕೋರ್ಟ್ ಅವಮಾನಿಸಬೇಡಿ! – ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

0

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಕೋರ್ಟ್ ಆದೇಶದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸಿದ್ದಕ್ಕಾಗಿ ಪುನೀತ್ ಕೆರೆಹಳ್ಳಿಗೆ ನ್ಯಾಯಾಲಯ ತೀವ್ರ ಎಚ್ಚರಿಕೆ ನೀಡಿದೆ.

ಚನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ರದ್ದತಿಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಪೊಲೀಸರ ನಡೆಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ತಾತ್ಕಾಲಿಕ ತಡೆ ನೀಡಿತು.

ಆದರೆ ಇದೇ ವೇಳೆ, ನಿನ್ನೆ ಕೋರ್ಟ್ ತಡೆ ನೀಡಿದ ನಂತರ ಪುನೀತ್ ಕೆರೆಹಳ್ಳಿ ಫೇಸ್‌ಬುಕ್ ಮತ್ತು ರೀಲ್ಸ್ ಮೂಲಕ ಪೊಲೀಸರ ವಿರುದ್ಧ ಹೇಳಿಕೆ ನೀಡಿರುವುದನ್ನು ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ನ್ಯಾಯಾಲಯದ ಗಮನಕ್ಕೆ ತಂದರು.

ಈ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, “ಸಬ್ ಜುಡೀಸ್ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಸರಿಯಲ್ಲ. ರೀಲ್ಸ್, ಲೈಕ್‌ಗಳಿಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ”
ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನ್ಯಾಯಾಲಯವು ಬಾಕಿ ಪ್ರಕರಣದ ಬಗ್ಗೆ ಯಾವುದೇ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡದಂತೆ ಸೂಚಿಸಿ, ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸುವಂತೆ ಪುನೀತ್ ಕೆರೆಹಳ್ಳಿಗೆ ಆದೇಶ ನೀಡಿದೆ. ಅಕ್ರಮ ವಲಸಿಗರ ಬಗ್ಗೆ ಮಾತನಾಡುವುದೇ ತಪ್ಪಲ್ಲ, ಆದರೆ ಅದರ ಶೈಲಿ ಮತ್ತು ವಿಧಾನ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ.

ಲಕ್ಕುಂಡಿ ನೆಲದೊಳಗೆ ಇತಿಹಾಸದ ನಿಧಿ?: ಪ್ರಾಮಾಣಿಕತೆಗೆ ರಿತ್ತಿ ಕುಟುಂಬಕ್ಕೆ ಶ್ಲಾಘನೆ, ಕೇಂದ್ರದಿಂದ ಸಹಾಯ ಭರವಸೆ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ್ ಮಹತ್ವದ ಹೇಳಿಕೆ ನೀಡಿ, ಐತಿಹಾಸಿಕ ಊರಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಅನೇಕರ ರಾಜಧಾನಿಯಾಗಿದ್ದ ಕಾರಣ, ಭೂಮಿ ಅಗೆಯುವಾಗ ನಗ, ನಾಣ್ಯಗಳು ಹಾಗೂ ಪ್ರಾಚ್ಯಾವಶೇಷಗಳು ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮಣ್ಣಿನ ಪದರಗಳಲ್ಲಿ ಸಿಗುವ ಆಧಾರಗಳ ಮೂಲಕ ಆಯಾ ಕಾಲಘಟ್ಟದ ಇತಿಹಾಸವನ್ನು ಗುರುತಿಸಬಹುದು. ಆದರೆ ಇಂದಿನ ಕಾಲದಲ್ಲಿ ಜನರು ನಿಧಿ ಹುಡುಕಿ ಕಳ್ಳತನ ಮಾಡುವ ಘಟನೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ರಿತ್ತಿ ಕುಟುಂಬ ಪ್ರಾಮಾಣಿಕತೆಯಿಂದ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಶ್ಲಾಘನೀಯ ಎಂದು ಗದ್ದಿಗೌಡರ್ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ರಿತ್ತಿ ಕುಟುಂಬಕ್ಕೆ ಸಹಾಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಲಕ್ಕುಂಡಿಯಂತಹ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಲಭ್ಯವಾಗಲಿದೆ. ಸ್ಮಾರಕಗಳು ಹಾಳಾಗದಂತೆ ಕಾಯ್ದುಕೊಳ್ಳಲು ಹಾಗೂ ರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಲಕ್ಕುಂಡಿ ನನ್ನ ಲೋಕಸಭಾ ಕ್ಷೇತ್ರದ ಅತ್ಯಂತ ಪ್ರಮುಖ ಹಳ್ಳಿ. ಈ ಊರಿನ ಬಗ್ಗೆ ನನಗೆ ವಿಶೇಷ ಗೌರವವಿದೆ. ಲಕ್ಕುಂಡಿಗೆ ವಿಶ್ವ ಪಾರಂಪರಿಕ ಸ್ಥಾನಮಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲೇ ಸ್ಥಳೀಯರು ಕೋಟೆ ವೀರಭದ್ರೇಶ್ವರ ದೇವರ ಜಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮಾರ್ಚ್ 30 ಮತ್ತು 31ರಂದು ನಡೆಯುವ ಜಾತ್ರೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಲ್ಲಂಗಡಿ ಲಾರಿಯಲ್ಲಿ ಸ್ಫೋಟಕಗಳ ಸಾಗಣೆ: ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತಂಕ, ಚಾಲಕ ವಶಕ್ಕೆ

0

ಪಾಲಕ್ಕಾಡ್: ವಲಯಾರ್–ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಲಾರಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಕೇರಳ–ತಮಿಳುನಾಡು ಗಡಿಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಸಮೀಪದ ಸರ್ವೀಸ್ ರಸ್ತೆಯಲ್ಲಿ ಲಾರಿಯನ್ನು ತಪಾಸಣೆ ನಡೆಸಿದಾಗ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ. ಲಾರಿಯ ಮೇಲೆ ರಾಶಿಯಾಗಿ ತುಂಬಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆರವುಗೊಳಿಸಿ ಪರಿಶೀಲಿಸಿದ ವೇಳೆ, 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಡಿಟೋನೇಟರ್‌ಗಳು ಪತ್ತೆಯಾಗಿವೆ.

ಪ್ರಾಥಮಿಕ ವಿಚಾರಣೆಯಲ್ಲಿ ಈ ಸ್ಫೋಟಕಗಳನ್ನು ತ್ರಿಶೂರ್ಗೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಸೆಂಥಿಲ್ ಕುಮಾರ್ ತಿಳಿಸಿದ್ದಾನೆ. ಮಾಹಿತಿ ದೊರಕುತ್ತಿದ್ದಂತೆಯೇ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ.

ಚಾಲಕನ ವಿಚಾರಣೆ ಮುಂದುವರೆದಿದ್ದು, ಸ್ಫೋಟಕಗಳ ಮೂಲ, ಉದ್ದೇಶ ಹಾಗೂ ಇದಕ್ಕೆ ಸಂಬಂಧಿಸಿದ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ನಂತರವೇ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ವರ್ಷ ಪಾಲಕ್ಕಾಡ್ ಮತ್ತು ಕೊಯಮತ್ತೂರು ಪೊಲೀಸರು ತಮಿಳುನಾಡಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 40,000ಕ್ಕೂ ಹೆಚ್ಚು ಜಿಲೆಟಿನ್‌ಗಳು ಹಾಗೂ 5,000ಕ್ಕೂ ಹೆಚ್ಚು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಇತ್ತೀಚಿನ ಘಟನೆ ಗಡಿ ಪ್ರದೇಶಗಳಲ್ಲಿ ಸ್ಫೋಟಕ ಕಳ್ಳಸಾಗಣೆ ಪ್ರಕರಣಗಳು ಮತ್ತೆ ತಲೆಎತ್ತುತ್ತಿರುವ ಆತಂಕವನ್ನು ಹೆಚ್ಚಿಸಿದೆ.

error: Content is protected !!