Home Blog Page 6

ಇಂದು ಬೆಂಗಳೂರಿಗೆ ಸಿಎಂ ಯೋಗಿ ಆದಿತ್ಯನಾಥ್: ಹೂಡಿಕೆದಾರರ ರೋಡ್ ಶೋನಲ್ಲಿ ಭಾಗಿ

ಬೆಂಗಳೂರು: ಉತ್ತರ ಪ್ರದೇಶವನ್ನು ದೇಶದ ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹೂಡಿಕೆದಾರರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ‘ಉತ್ತರ ಪ್ರದೇಶ ಗ್ಲೋಬಲ್ ಗ್ರೋತ್ ಡೈಲಾಗ್ 2026’ ಅಡಿಯಲ್ಲಿ ಇಂದು ಬೆಂಗಳೂರಿನಲ್ಲಿ ಹೂಡಿಕೆದಾರರ ರೋಡ್‌ಶೋ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆ ವಹಿಸಲಿದ್ದು, ದೇಶದ ಹಲವು ಪ್ರಮುಖ ಕೈಗಾರಿಕೋದ್ಯಮಿಗಳು ಹಾಗೂ ಉದ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿ, ಉದ್ಯಮ ಸ್ನೇಹಿ ವಾತಾವರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.

ರೋಡ್‌ಶೋದಲ್ಲಿ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಐಟಿ ಆಧಾರಿತ ಸೇವೆಗಳು (ITeS), ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಹಾಗೂ ವಿದೇಶಿ ನೇರ ಹೂಡಿಕೆ (FDI) ಕುರಿತಂತೆ ಮೂರು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ.

ಈ ಅಧಿವೇಶನಗಳಲ್ಲಿ ವಿವಿಧ ವಲಯಗಳ ಉದ್ಯಮಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಉತ್ತರ ಪ್ರದೇಶದಲ್ಲಿನ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳನ್ನು ಪರಿಚಯಿಸುವ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತದೆ.

ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉದ್ಯಮ ವಲಯದೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ.

ವೃದ್ಧ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊಲೆ ಅಲ್ಲ, ಪತ್ನಿಯ ಸಾವಿಗೆ ನೊಂದು ಪತಿ ಆತ್ಮಹತ್ಯೆ

0

ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ವೃದ್ಧ ದಂಪತಿ ಮೃತದೇಹಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಆರಂಭದಲ್ಲಿ ಕೊಲೆ-ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ಹೊಸ ಸತ್ಯವನ್ನು ಬಹಿರಂಗಪಡಿಸಿದೆ.

ವೈದ್ಯಕೀಯ ವರದಿ ಪ್ರಕಾರ, 77 ವರ್ಷದ ಸುಮಿತ್ರಾ ಪ್ರಸಾದ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪತ್ನಿಯ ಸಾವಿನ ಆಘಾತವನ್ನು ತಾಳಲಾರದೆ 83 ವರ್ಷದ ಪತಿ ಶಿವಾನಂದಂ ಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೃಢಪಟ್ಟಿದೆ.

ಸಂಪಿಗೆಹಳ್ಳಿಯ ನಿವಾಸದಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾದ ಬಳಿಕ, ಅವರ ಪುತ್ರ ಕಿರಣ್ ಕುಮಾರ್ ಕಶ್ಯಪ್ ಅವರು ತಂದೆಯೇ ತಾಯಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಶವಪರೀಕ್ಷೆ ನಡೆಸಿದ ವೈದ್ಯರು, ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಅವರಿಗೆ ತೀವ್ರ ಹೃದಯಾಘಾತವಾಗಿದ್ದೇ ಸಾವಿಗೆ ಕಾರಣ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ವರದಿಯ ಪ್ರಕಾರ, ಮೊದಲು ಸುಮಿತ್ರಾ ಪ್ರಸಾದ್ ಮೃತಪಟ್ಟಿದ್ದು, ಹಲವು ಗಂಟೆಗಳ ಬಳಿಕ ಶಿವಾನಂದಂ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಸುಮಿತ್ರಾ ಪ್ರಸಾದ್ ಅವರು ದೃಷ್ಟಿ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದರು. ಶಿವಾನಂದಂ ಪ್ರಸಾದ್ ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿದ್ದವು. ಪತ್ನಿಯ ಹಠಾತ್ ಸಾವಿನಿಂದ ಮನನೊಂದ ಅವರು, ಏಕಾಂಗಿತನ ಹಾಗೂ ಆಘಾತದಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೂಲತಃ ಬಿಹಾರದವರಾದ ಈ ದಂಪತಿ ಬೆಂಗಳೂರಿನ ಚೊಕ್ಕನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು. ಪ್ರಕರಣದ ಕುರಿತು ಪೊಲೀಸರು ವೈದ್ಯಕೀಯ ವರದಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಇಡಿ ಶಾಕ್: ವೈ. ಮಂಜುನಾಥ್ ಮನೆ ಸೇರಿ 6 ಕಡೆ ಏಕಕಾಲದ ದಾಳಿ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಯಾಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದಾರೆ.

ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದ ಒಟ್ಟು ಆರು ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗಳು, ಮಹತ್ವದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಗೋವಾ ಹಾಗೂ ಬೆಂಗಳೂರಿನ ಇಡಿ ಅಧಿಕಾರಿಗಳ ಜಂಟಿ ತಂಡ ಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದ್ದು, ಬೆಳಗಾವಿಯ ದೂರದರ್ಶನ ಕೇಂದ್ರದ ಸಮೀಪ ಇರುವ ಮಂಜುನಾಥ್ ಅವರ ನಿವಾಸಕ್ಕೂ ಭೇಟಿ ನೀಡಿ ಶೋಧ ಕಾರ್ಯ ಕೈಗೊಂಡಿದೆ.

ತನಿಖಾ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ 10ಕ್ಕೂ ಹೆಚ್ಚು ಅರೆಸೇನಾ ಪಡೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ಆರು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಆಸ್ತಿ-ಪಾಸ್ತಿ ವಿವರಗಳು, ಬ್ಯಾಂಕ್ ಖಾತೆಗಳು ಹಾಗೂ ಇತರೆ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಮೀನು, ಬಾರ್ ಮತ್ತು ರೆಸ್ಟೋರೆಂಟ್‌ ಸೇರಿದಂತೆ ಹಲವು ಆಸ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿಯಂತ್ರಣ ತಪ್ಪಿದ ಕಾರು ಮೂರು ಬಾರಿ ಪಲ್ಟಿ; ವೈದ್ಯ ಪ್ರಾಣಾಪಾಯದಿಂದ ಪಾರು

ಹಾಸನ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಗೆ ಪಲ್ಟಿಯಾದ ಪರಿಣಾಮ ವೈದ್ಯರೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ ನಡೆದಿದೆ.

ಹಾಸನ ನಗರದ ಖಾಸಗಿ ಆಸ್ಪತ್ರೆಯೊಂದರ ಮಾಲೀಕರ ಪುತ್ರ ಹಾಗೂ ವೈದ್ಯರಾಗಿರುವ ಡಾ. ಶಾರುಖ್ ಅಬ್ದುಲ್ಲಾ ಕಾರು ಚಲಾಯಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ನಿಯಂತ್ರಣ ತಪ್ಪಿದ ಕಾರು ಮೂರು ಬಾರಿ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.

ಘಟನೆಯಲ್ಲಿ ಡಾ. ಶಾರುಖ್ ಅಬ್ದುಲ್ಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಿಯರ್ ಮಾರಾಟದಲ್ಲಿ ಭಾರೀ ಜಿಗಿತ: ಒಂದೇ ತಿಂಗಳಲ್ಲಿ ಅಬಕಾರಿ ಆದಾಯ 3,745 ಕೋಟಿ ರೂ.!

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಬಕಾರಿ ಸುಧಾರಣೆಗಳು ಮತ್ತು ಹೊಸ ದರ ಪರಿಷ್ಕರಣೆ ನೀತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಭಾರೀ ಏರಿಕೆ ದಾಖಲಾಗಿದ್ದು, ಸರ್ಕಾರದ ಖಜಾನೆಗೆ ಹೆಚ್ಚಿನ ಆದಾಯ ಹರಿದು ಬಂದಿದೆ.

ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಬಿಯರ್ ಬ್ರ್ಯಾಂಡ್‌ಗಳ ಬೆಲೆಯನ್ನು ಇಳಿಕೆ ಮಾಡಿದ ನಂತರ, ರಾಜ್ಯದಲ್ಲಿ ಬಿಯರ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಮೇ 11ರಿಂದ ಜೂನ್ 11ರವರೆಗಿನ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಅಬಕಾರಿ ಕಂದಾಯ ಸಂಗ್ರಹಣೆಯಲ್ಲಿ ಶೇ.14.84ರಷ್ಟು ಏರಿಕೆ ದಾಖಲಾಗಿದೆ.

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 54.6 ಲಕ್ಷ ಕೇಸ್‌ಗಳಷ್ಟು ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯ 35.3 ಲಕ್ಷ ಕೇಸ್‌ಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡುಬಂದಿದೆ.

ಇನ್ನೊಂದೆಡೆ, ಭಾರತೀಯ ತಯಾರಿಕೆಯ ವಿದೇಶಿ ಮದ್ಯ (IML) ಮಾರಾಟದಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡುಬಂದಿದೆ. ಕಳೆದ ವರ್ಷ 54.74 ಲಕ್ಷ ಕೇಸ್ ಇದ್ದ ಮಾರಾಟ ಈ ಬಾರಿ 54.55 ಲಕ್ಷ ಕೇಸ್‌ಗಳಿಗೆ ಇಳಿದಿದೆ.

ಬಿಯರ್ ಮಾರಾಟದ ಏರಿಕೆಯ ಪರಿಣಾಮವಾಗಿ ರಾಜ್ಯದ ಒಟ್ಟು ಅಬಕಾರಿ ಆದಾಯವು ಕಳೆದ ವರ್ಷದ 3,261.24 ಕೋಟಿ ರೂಪಾಯಿಗಳಿಂದ ಈ ಬಾರಿ 3,745.14 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಕಳೆದ 2025-26ನೇ ಆರ್ಥಿಕ ವರ್ಷದಲ್ಲಿ ಬಿಯರ್ ಮಾರಾಟ ಶೇ.11.3ರಷ್ಟು ಕುಸಿತ ಕಂಡು 399.29 ಲಕ್ಷ ಕೇಸ್‌ಗಳಿಗೆ ಇಳಿಕೆಯಾಗಿತ್ತು. ಆದರೆ ಈ ಬಾರಿ ಸರ್ಕಾರ ಜಾರಿಗೆ ತಂದಿರುವ ಹೊಸ ಆಲ್ಕೋಹಾಲ್ ಆಧಾರಿತ ತೆರಿಗೆ ನೀತಿ ಹಾಗೂ ಬೇಸಿಗೆಯ ತೀವ್ರ ಬಿಸಿಲಿನ ವಾತಾವರಣದಿಂದಾಗಿ ಬಿಯರ್ ಮಾರಾಟ ಮತ್ತೆ ಚೇತರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಮಳೆಯ ಆಗಮನದೊಂದಿಗೆ ಹವಾಮಾನ ತಂಪಾಗಲಿರುವುದರಿಂದ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಆದಾಗ್ಯೂ, ಸರ್ಕಾರದ ಹೊಸ ದರ ನೀತಿಯು ಮದ್ಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಾಗಿ ಅಬಕಾರಿ ವಲಯದಲ್ಲಿ ಚರ್ಚೆಯಾಗುತ್ತಿದೆ.

30 ಲಕ್ಷ ರೂ. ವಿಮೆ ಹಣದ ಆಸೆಗೆ ಸ್ವಂತ ತಮ್ಮನ ಹತ್ಯೆ; ಅಪಘಾತದ ನಾಟಕ ಬಯಲು!

0

ತುಮಕೂರು: ಎಲ್‌ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂಪಾಯಿ ವಿಮೆ ಹಣದ ಆಸೆಗೆ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿ, ಅದನ್ನು ಬೈಕ್ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ನಡೆಸಿದ ಪಟ್ಟನಾಯಕನಹಳ್ಳಿ ಪೊಲೀಸರು ಅಸಲಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ಮೃತನನ್ನು 35 ವರ್ಷದ ರಮೇಶ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಆಂಧ್ರಪ್ರದೇಶದ ನಿವಾಸಿಯಾಗಿದ್ದ. ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಹಾಗೂ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದನು. ಹೆಂಡತಿಯಿಂದ ದೂರವಾಗಿದ್ದ ರಮೇಶ್ ಮಾಟಮಂತ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಹನುಮಂತರಾಜು ತನ್ನ ತಮ್ಮ ರಮೇಶ್ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೊತ್ತದ ಎಲ್‌ಐಸಿ ಪಾಲಿಸಿ ಮಾಡಿಸಿದ್ದು, ಅದರ ನಾಮಿನಿಯಾಗಿ ತನ್ನ ಹೆಸರನ್ನೇ ನೋಂದಾಯಿಸಿಕೊಂಡಿದ್ದ. ಪ್ರತಿ ವರ್ಷ ಸುಮಾರು 85 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುತ್ತಿದ್ದ. ಅಪಘಾತದಲ್ಲಿ ಮೃತಪಟ್ಟರೆ ವಿಮಾ ಮೊತ್ತದ ದ್ವಿಗುಣ ಅಂದರೆ 30 ಲಕ್ಷ ರೂಪಾಯಿ ಸಿಗುವ ನಿಯಮವಿದ್ದ ಕಾರಣ, ಹಣದ ದುರಾಸೆಯಿಂದ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಜೂನ್ 19ರಂದು ನಿಧಿ ಪೂಜೆ ನೆಪದಲ್ಲಿ ರಮೇಶ್‌ನನ್ನು ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಗಳು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಮೇಲೆ ಕಾರು ಹರಿಸಿದ್ದರೂ ಜೀವ ಉಳಿದಿದ್ದರಿಂದ ಬ್ಯಾಟರಿ ಜಂಪಿಂಗ್ ವೈರ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಪ್ರಕರಣವನ್ನು ಅಪಘಾತದ ರೂಪಕ್ಕೆ ತರುವ ಉದ್ದೇಶದಿಂದ ಶವ ಮತ್ತು ಬೈಕ್ ಅನ್ನು ರಸ್ತೆಯಲ್ಲಿ ಬಿಟ್ಟು, ಬೈಕ್ ಮುಂಭಾಗವನ್ನು ಜಖಂಗೊಳಿಸಿ ಅಪಘಾತದ ನಾಟಕವಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮೃತನ ಹಿರಿಯ ಸಹೋದರ ರಂಗನಾಥ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ಹನುಮಂತರಾಜು ಸೇರಿದಂತೆ ಇತರ ಆರೋಪಿಗಳಾದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ. ಜಿಲಾನ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ವಾಹನ ಸವಾರರಿಗೆ ಆರ್‌ಟಿಓ ಶಾಕ್: ‘ವಾಹನ್-4’ ಸರ್ವರ್ ಡೌನ್, ರಾಜ್ಯದ 70 ಕಚೇರಿಗಳಲ್ಲಿ ಸೇವೆ ಸ್ಥಗಿತ

ಬೆಂಗಳೂರು: ಕೇಂದ್ರ ಸರ್ಕಾರದ ‘ವಾಹನ್-4’ ಸಾಫ್ಟ್‌ವೇರ್‌ನಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ರಾಜ್ಯದ ವಾಹನ ಸವಾರರು ಹಾಗೂ ಹೊಸ ವಾಹನ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಒಂದು ವಾರದಿಂದ ಸಾಫ್ಟ್‌ವೇರ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ, ರಾಜ್ಯದ 70 ಆರ್‌ಟಿಓ ಕಚೇರಿಗಳಲ್ಲಿ ದೈನಂದಿನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆರ್‌ಟಿಓ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಸಿಸ್ಟಮ್ ಹ್ಯಾಂಗ್ ಆಗುತ್ತಿದ್ದು, ಹಲವು ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ.

ತಾಂತ್ರಿಕ ಸಮಸ್ಯೆಯಿಂದಾಗಿ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ವಿಳಂಬವಾಗುತ್ತಿದೆ. ಅಲ್ಲದೆ ವಾಹನ ಮಾಲೀಕತ್ವ ವರ್ಗಾವಣೆ, ಬ್ಯಾಂಕ್ ಸಾಲದ ಎಂಟ್ರಿ ಹಾಗೂ ರದ್ದತಿ, ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ), ವಿಳಾಸ ಬದಲಾವಣೆ, ನಕಲಿ ಆರ್‌ಸಿ ಪಡೆಯುವುದು ಸೇರಿದಂತೆ ಹಲವು ಸೇವೆಗಳು ಲಭ್ಯವಾಗುತ್ತಿಲ್ಲ.

ಹೊರರಾಜ್ಯಗಳಿಗೆ ಸಂಚರಿಸಬೇಕಾದ ಲಾರಿಗಳು ಹಾಗೂ ವಾಣಿಜ್ಯ ವಾಹನಗಳಿಗೆ ಅಗತ್ಯವಿರುವ ಪರ್ಮಿಟ್ ಪಡೆಯಲು ಸಾಧ್ಯವಾಗದ ಕಾರಣ ಸಾರಿಗೆ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಲಾರಿ ಹಾಗೂ ಟ್ಯಾಕ್ಸಿ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ನೂರಾರು ವಾಹನ ಮಾಲೀಕರು ಆರ್‌ಟಿಓ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಇದುವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪರಿಣಾಮ ಪ್ರತಿದಿನ ನೂರಾರು ನಾಗರಿಕರು ಆರ್‌ಟಿಓ ಕಚೇರಿಗಳಿಗೆ ಭೇಟಿ ನೀಡಿ ಯಾವುದೇ ಸೇವೆ ಪಡೆಯದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ್-4 ಸರ್ವರ್ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ರಾಜ್ಯ ಸಾರಿಗೆ ಇಲಾಖೆ ಹಾಗೂ ಕೇಂದ್ರದ ಎನ್‌ಐಸಿ ತಾಂತ್ರಿಕ ತಂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಳಿ ಕಟ್ಟುವಾಗ ಯಾಕೆ ಮೂರು ಗಂಟು ಹಾಕುತ್ತಾರೆ? ಇದರ ಹಿಂದಿದೆ ಆಳವಾದ ಆಧ್ಯಾತ್ಮಿಕ ಅರ್ಥ!

0

ಹಿಂದೂ ಧರ್ಮದಲ್ಲಿ ವಿವಾಹವನ್ನು ಅತ್ಯಂತ ಪವಿತ್ರ ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ.

ಮದುವೆ ಎಂದರೆ ಕೇವಲ ಇಬ್ಬರ ಹೃದಯಗಳ ಸಂಗಮವಲ್ಲ, ಎರಡು ಕುಟುಂಬಗಳು ಹಾಗೂ ಎರಡು ವಂಶಗಳ ಒಗ್ಗಟ್ಟಿನ ಸಂಕೇತವಾಗಿದೆ. ವಿವಾಹದ ವೇಳೆ ನಡೆಯುವ ಹಲವು ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣೆ ಅಥವಾ ತಾಳಿ ಕಟ್ಟುವ ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ.

ತಾಳಿ ಕಟ್ಟುವ ಸಂದರ್ಭದಲ್ಲಿ ಮೂರು ಗಂಟುಗಳನ್ನು ಹಾಕುವ ಪದ್ಧತಿ ಇದೆ. ಈ ಮೂರು ಗಂಟುಗಳ ಹಿಂದೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹತ್ವದ ಅರ್ಥ ಅಡಗಿದೆ ಎಂದು ನಂಬಲಾಗಿದೆ.

‘ಮೂರು’ ಸಂಖ್ಯೆಯ ಮಹತ್ವ:

ಹಿಂದೂ ಸಂಪ್ರದಾಯದಲ್ಲಿ ‘ಮೂರು’ ಸಂಖ್ಯೆಗೆ ವಿಶೇಷ ಸ್ಥಾನವಿದೆ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ 3 ಎಂಬುದು ಗುರು ಗ್ರಹದ ಸಂಖ್ಯೆಯಾಗಿದೆ. ಗುರು ಗ್ರಹವನ್ನು ಜ್ಞಾನ, ಧರ್ಮ, ಶುಭಫಲ ಹಾಗೂ ವೈವಾಹಿಕ ಜೀವನದ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೂರು ಗಂಟುಗಳನ್ನು ಹಾಕುವುದರಿಂದ ದಾಂಪತ್ಯ ಜೀವನದಲ್ಲಿ ಗುರು ಗ್ರಹದ ಕೃಪೆ ಸದಾ ಇರಲಿ ಎಂಬ ಆಶಯ ವ್ಯಕ್ತವಾಗುತ್ತದೆ.

ತ್ರಿಮೂರ್ತಿಗಳ ಸಂಕೇತ:

ಮೂರು ಗಂಟುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆಯಿದೆ. ಜೊತೆಗೆ ಸತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳ ಸಮತೋಲನಕ್ಕೂ ಇದು ಸಂಕೇತವಾಗಿದೆ. ಭೂತ, ವರ್ತಮಾನ ಮತ್ತು ಭವಿಷ್ಯ ಎಂಬ ತ್ರಿಕಾಲಗಳಲ್ಲೂ ದಂಪತಿಗಳು ಒಂದಾಗಿ ಬದುಕಲಿ ಎಂಬ ಸಂದೇಶವೂ ಇದರಲ್ಲಿದೆ.

ಮೂರು ಶರೀರಗಳ ಬಂಧನ:

ಆಧ್ಯಾತ್ಮಿಕ ತತ್ವದ ಪ್ರಕಾರ ಮನುಷ್ಯನಿಗೆ ಮೂರು ವಿಧದ ಶರೀರಗಳಿವೆ ಎಂದು ಹೇಳಲಾಗುತ್ತದೆ. ತಾಳಿ ಕಟ್ಟುವ ಮೂರು ಗಂಟುಗಳು ಈ ಮೂರು ಶರೀರಗಳ ಏಕೀಕರಣವನ್ನು ಸೂಚಿಸುತ್ತವೆ.

  • ಮೊದಲ ಗಂಟು: ಸ್ಥೂಲ ಶರೀರ ಅಥವಾ ಭೌತಿಕ ದೇಹದ ಸಂಕೇತ.
  • ಎರಡನೇ ಗಂಟು: ಮನಸ್ಸು, ಭಾವನೆಗಳು ಹಾಗೂ ಸೂಕ್ಷ್ಮ ಶರೀರದ ಸಂಕೇತ.
  • ಮೂರನೇ ಗಂಟು: ಆತ್ಮ ಹಾಗೂ ಕಾರಣ ಶರೀರದ ಸಂಕೇತ.

ಈ ಮೂಲಕ ದಂಪತಿಗಳ ದೇಹ, ಮನಸ್ಸು ಮತ್ತು ಆತ್ಮಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.

ಜವಾಬ್ದಾರಿಯ ಪ್ರತಿಜ್ಞೆ:

ಮೂರು ಗಂಟುಗಳನ್ನು ಹಾಕುವ ಮೂಲಕ ವರನು ವಧುವಿನ ಜೀವನವನ್ನು ಗೌರವಿಸುವುದು, ರಕ್ಷಿಸುವುದು ಮತ್ತು ಆಕೆಯ ಸುಖ-ದುಃಖಗಳಲ್ಲಿ ಜೊತೆಗಿರುವ ಜವಾಬ್ದಾರಿಯನ್ನು ಸ್ವೀಕರಿಸುತ್ತಾನೆ ಎಂಬ ಅರ್ಥವನ್ನು ಸಂಪ್ರದಾಯ ಪ್ರತಿಪಾದಿಸುತ್ತದೆ. ಪಂಚಭೂತಗಳ ಸಾಕ್ಷಿಯಾಗಿ ಈ ಬಂಧವನ್ನು ಶಾಶ್ವತಗೊಳಿಸುವ ಸಂಕೇತವಾಗಿ ಮೂರು ಗಂಟುಗಳನ್ನು ಪರಿಗಣಿಸಲಾಗುತ್ತದೆ.

ಹೀಗಾಗಿ ತಾಳಿ ಕಟ್ಟುವ ಮೂರು ಗಂಟುಗಳು ಕೇವಲ ಒಂದು ಸಂಪ್ರದಾಯವಲ್ಲ; ಅದು ದಾಂಪತ್ಯ ಜೀವನದ ಪಾವಿತ್ರ್ಯ, ನಂಬಿಕೆ, ಜವಾಬ್ದಾರಿ ಹಾಗೂ ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಿದೆ.

ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್

0

ವಿಜಯಸಾಕ್ಷಿ ಸುದ್ದಿ, ಗದಗ: ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಬಾಕಿ ಉಳಿದಿರುವ ಪ್ರಕರಣಗಳಿಗೆ ತ್ವರಿತ ಹಾಗೂ ಸೌಹಾರ್ದಯುತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಜ್ಯಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಕರೆ ನೀಡಿದರು.

ನಗರದ ಜಿಲ್ಲಾ ಸತ್ರ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯದ ಹೊರಗಿನ (ಪ್ರೀ-ಲಿಟಿಗೇಷನ್) ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಅಪರೂಪದ ಅವಕಾಶವಾಗಿದೆ ಎಂದು ತಿಳಿಸಿದರು.

ಗದಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ 21,101 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ರಾಜಿಗೆ ಅರ್ಹವಾಗಿರುವ 2,835 ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ. ರಾಜೀ ಸಂಧಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಜಿಲ್ಲೆಯಾದ್ಯಂತ ಒಟ್ಟು 15 ಬೆಂಚ್‌ಗಳನ್ನು ರಚಿಸಲಾಗಿದೆ.

ಜಮೀನು ಮತ್ತು ಆಸ್ತಿ ವಿವಾದಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ದಾವೆಗಳು, ಕೌಟುಂಬಿಕ ಕಲಹಗಳು, ಕಾರ್ಮಿಕ ಪ್ರಕರಣಗಳು ಹಾಗೂ ರಾಜಿಗೆ ಅರ್ಹವಾಗಿರುವ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವು ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಅಲ್ಲದೇ, ಪ್ರಕರಣ ರಾಜಿಯಾದ ಬಳಿಕ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸಂಬಂಧಗಳೂ ಉಳಿಯಲಿವೆ ಎಂದು ಹೇಳಿದರು.

ಕಳೆದ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3,383 ಚಾಲ್ತಿ ಪ್ರಕರಣಗಳು ಹಾಗೂ 62,299 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 65,682 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದವು. ಅಲ್ಲದೆ, ಮೂರು ಕೌಟುಂಬಿಕ ಪ್ರಕರಣಗಳಲ್ಲಿ ಬೇರೆಯಾಗಿದ್ದ ಕುಟುಂಬಗಳನ್ನು ಪುನಃ ಒಂದುಗೂಡಿಸುವಲ್ಲಿ ಯಶಸ್ಸು ಸಾಧಿಸಲಾಗಿತ್ತು.

ಈ ಬಾರಿ ಜಮೀನು ಹಾಗೂ ಆಸ್ತಿ ಹಂಚಿಕೆ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಾಜಿಗೆ ಅರ್ಹವಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಸುಮಾರು 100 ಗ್ರಾಮಗಳನ್ನು “ವ್ಯಾಜ್ಯಮುಕ್ತ ಗ್ರಾಮ”ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ಚಲನ್‌ಗಳ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಲಾಗಿದ್ದು, ಈ ಸೌಲಭ್ಯ ಜೂನ್ 21ರಿಂದ ಜುಲೈ 10ರವರೆಗೆ ಲಭ್ಯವಿರಲಿದೆ ಎಂದು ತಿಳಿಸಲಾಯಿತು.

ಅಲ್ಲದೇ, ಜುಲೈ 18ರಂದು ಚೆಕ್ ಬೌನ್ಸ್ (ಎನ್‌ಐ ಆಕ್ಟ್) ಪ್ರಕರಣಗಳಿಗಾಗಿಯೇ ವಿಶೇಷ ಲೋಕ ಅದಾಲತ್ ನಡೆಯಲಿದ್ದು, ಆಗಸ್ಟ್ 21, 22 ಹಾಗೂ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ‘ಸಮಾಧಾನ ಸಮಾರೋಪ’ ಹೆಸರಿನ ವಿಶೇಷ ಅದಾಲತ್ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಿಂದ ಗುರುತಿಸಲಾದ 21 ಪ್ರಕರಣಗಳ ಪಕ್ಷಗಾರರು ದೆಹಲಿಗೆ ತೆರಳದೇ, ಇಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಉಪಸ್ಥಿತರಿದ್ದರು.

“ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಿ, ಹಣ ಮತ್ತು ಸಮಯವನ್ನು ಉಳಿಸಿಕೊಳ್ಳಲು ಲೋಕ ಅದಾಲತ್ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. ಇಲ್ಲಿ ಗೆದ್ದವರು ಅಥವಾ ಸೋತವರು ಇರುವುದಿಲ್ಲ, ಇಬ್ಬರೂ ಗೆದ್ದಂತೆಯೇ. ಸಾರ್ವಜನಿಕರು ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡೆದು ತಮ್ಮ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.”

ಶ್ರೀಮತಿ ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ

ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿಯ ಖಡಕ್ ಚಾಟಿ..!

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮತ್ತು ಅನಧಿಕೃತ ವೈದ್ಯಕೀಯ ವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಖಡಕ್ ಕ್ರಮಕ್ಕೆ ಮುಂದಾಗಿದೆ. ಜನರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಸುವ ನಕಲಿ ವೈದ್ಯರು, ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ‘ಜಿಲ್ಲಾ ಮಟ್ಟದ ವಿಶೇಷ ಪಡೆ’ಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನಧಿಕೃತ ವೈದ್ಯಕೀಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ವಿಶೇಷ ತಪಾಸಣೆ ವೇಳೆ ಪತ್ತೆಯಾದ ಮೂವರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ, ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆಪಿಎಂಇ (KPME) ಕಾಯ್ದೆಯಡಿ ನೋಂದಣಿ ಮಾಡಿಸದೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು, ಸ್ಕ್ಯಾನಿಂಗ್ ಕೇಂದ್ರಗಳು, ರಕ್ತ ಬ್ಯಾಂಕ್‌ಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳು 15 ದಿನಗಳೊಳಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾಯ್ದೆಯಡಿ ಕಠಿಣ ಕ್ರಮ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಲ್ಲದೆ, ನೋಂದಾಯಿತ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಗಳ ನೋಂದಣಿ ಅವಧಿ ಮುಕ್ತಾಯಗೊಳ್ಳುವ ಮೂರು ತಿಂಗಳ ಮುಂಚೆಯೇ ಅಗತ್ಯ ದಾಖಲೆಗಳೊಂದಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳ 200 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಆರೋಗ್ಯ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಜಿಲ್ಲಾಡಳಿತ ಸಮರ ಸಾರಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷ ಪಡೆಯ ರಚನೆಯೊಂದಿಗೆ ನಕಲಿ ವೈದ್ಯರ ಜಾಲಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಮೂಡಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಕೆಪಿಎಂಇ ನೋಡಲ್ ಅಧಿಕಾರಿ ಡಾ. ಹೆಚ್.ಎಲ್. ಗಿರಡ್ಡಿ, ಐಎಂಎ ಅಧ್ಯಕ್ಷ ಡಾ. ಶ್ರೀಧರ್ ಕುರಡಗಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದ ತಿಗಳೆರ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಪ್ರೀತ್ ಖೋನಾ, ಡಾ. ಬಿ.ಎಸ್. ಭಜಂತ್ರಿ, ಡಾ. ಸುಭಾಷಚಂದ್ರ ದಾಯಗೊಂಡ, ಡಾ. ಸಂತೋಷಗೌಡ ಪಾಟೀಲ, ಡಾ. ಆರ್.ಸಿ. ಕೊರವನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಜನರ ಜೀವದೊಂದಿಗೆ ಚೆಲ್ಲಾಟ ನಡೆಸುವ ನಕಲಿ ವೈದ್ಯರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅನಧಿಕೃತ ವೈದ್ಯಕೀಯ ವೃತ್ತಿ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

error: Content is protected !!