Home Blog Page 6

ಕ್ರಿಕೆಟ್ ಅಭ್ಯಾಸದ ವೇಳೆ ಮುಖಕ್ಕೆ ಬಡಿದ ಚಂಡು; ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ!

0

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕ್ರಿಕೆಟ್ ಅಭ್ಯಾಸದ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.

ಕ್ರಿಕೆಟ್ ಚೆಂಡು ಬಲವಾಗಿ ಮುಖಕ್ಕೆ ಬಡಿದ ಪರಿಣಾಮ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳಭಾಗದಲ್ಲಿ ತೀವ್ರ ಗಾಯವಾಗಿದೆ. ಗಾಯದ ತೀವ್ರತೆಯಿಂದಾಗಿ ಅವರ ಮುಖವೂ ವಿರೂಪಗೊಂಡಿರುವುದು ಕಂಡುಬಂದಿದೆ. ಈ ವಿಚಾರವನ್ನು ಸ್ವತಃ ಬೆನ್ ಸ್ಟೋಕ್ಸ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಗಾಯದ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, “ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನೂ ಪರಿಶೀಲಿಸಬೇಕು” ಎಂದು ಬರೆದು, ಅಭ್ಯಾಸದ ವೇಳೆ ಚೆಂಡು ಮುಖಕ್ಕೆ ಬಡಿದಿದ್ದನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ.

ಸ್ಟೋಕ್ಸ್ ಅವರ ಕಣ್ಣಿನ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಕೆನ್ನೆ ಭಾಗದಲ್ಲಿ ಕೆಂಪು ಗಲೆ ಮೂಡಿದೆ. ಜೊತೆಗೆ ಮೂಗಿನ ಕೆಳಭಾಗದಲ್ಲಿಯೂ ಗಾಯದ ಗುರುತುಗಳಿವೆ. ಗಾಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗಾಯದ ಸ್ಥಿತಿಯನ್ನು ಗಮನಿಸಿದರೆ, ಸ್ಟೋಕ್ಸ್ ಕೂದಲೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು.

ಒಂದು ವೇಳೆ ಚೆಂಡು ಇನ್ನೂ ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ ಕಣ್ಣಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇತ್ತು. ಅಂಥ ಪರಿಸ್ಥಿತಿಯಲ್ಲಿ ಶಾಶ್ವತ ದೃಷ್ಟಿ ಹಾನಿ ಸಂಭವಿಸಿ ಅವರ ಕ್ರಿಕೆಟ್ ವೃತ್ತಿಜೀವನಕ್ಕೂ ಅಪಾಯ ಎದುರಾಗಬಹುದಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ, ಬೆನ್ ಸ್ಟೋಕ್ಸ್ ಗಂಭೀರ ಅನಾಹುತದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು!

0

ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ದುರ್ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಜರುಗಿದೆ. ಬಿಜಾಪುರದ ಸಂಗಮೇಶ್ (50) ಎಂಬ ದುರ್ದೈವಿ ಕಾರು ಡಿಕ್ಕಿಯಿಂದ ತಲೆಗೆ ಗಂಭೀರ ಗಾಯಗೊಂಡು, ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಂಗಮೇಶ್ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಿಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ಮುಂದುವರಿದಿದೆ.

ಶೇ. 100ರಷ್ಟು ಗುಣಾತ್ಮಕ ಫಲಿತಾಂಶದ ಗುರಿ

ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಶಾಲಾ ಶಿಕ್ಷಣ ಇಲಾಖೆ ಮುಂಚಿತ ಹಾಗೂ ಸಮಗ್ರ ಯೋಜನೆಯೊಂದಿಗೆ ಸಜ್ಜಾಗಿದ್ದು, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮೂಲಕ ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ದೃಷ್ಟಿಯಲ್ಲಿ ವಿದ್ಯಾರ್ಥಿಯೇ ಶಿಕ್ಷಣದ ಕೇಂದ್ರಬಿಂದುವಾಗಿದ್ದು, ಅದಕ್ಕೆ ತಕ್ಕಂತೆ ಈ ವರ್ಷದ ಪರೀಕ್ಷಾ ತಯಾರಿಯನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಗುರುತಿಸಿ ನಿಧಾನ ಕಲಿಕೆ, ಸರಾಸರಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಭಿನ್ನ ತಂತ್ರಗಳನ್ನು ಅಳವಡಿಸಿರುವುದು ಈ ತಯಾರಿಯ ಪ್ರಮುಖ ವೈಶಿಷ್ಟ್ಯವಾಗಿದೆ.

ಪೂರ್ವ ಸಿದ್ಧತಾ ಪರೀಕ್ಷೆಗಳು–1, 2 ಹಾಗೂ 3, ಇಲಾಖೆಯಿಂದ ಗುರುತಿಸಲಾದ ನಾಲ್ಕು ಮಾದರಿಯ ಪ್ರಶ್ನೆ ಪತ್ರಿಕೆಗಳು, 29 ಅಂಶಗಳ ಅನುಷ್ಠಾನ, ನಿರಂತರ ಮೌಲ್ಯಮಾಪನ, ಫೋನ್–ಇನ್ ಕಾರ್ಯಕ್ರಮಗಳು, ವಿಷಯವಾರು ಮಾರ್ಗದರ್ಶನ ಹಾಗೂ ಶಿಕ್ಷಕರ ಶೈಕ್ಷಣಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಪರೀಕ್ಷಾ ತಯಾರಿಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ಶಿಕ್ಷಕರು, ಮುಖ್ಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಬಿಆರ್‌ಪಿ–ಸಿಆರ್‌ಪಿ, ಎಸ್‌ಡಿಎಂಸಿ ಹಾಗೂ ಪಾಲಕರ ಸಮನ್ವಯದೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಅಧ್ಯಯನಾಸಕ್ತಿ ಬೆಳೆಸುವ ಪ್ರಯತ್ನಗಳು ಯಶಸ್ವಿಯಾಗಿ ಸಾಗುತ್ತಿವೆ. `ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತಂತ ಎಲ್ಲಾ ಅಭ್ಯರ್ಥಿಗಳು ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಗುರಿ ಹೊಂದಲಿ’ ಎಂಬ ಧ್ಯೇಯದೊಂದಿಗೆ ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ಬೂಸ್ಟರ್ ಪರೀಕ್ಷೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಈಗಾಗಲೇ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 23ರಿಂದ 28ರವರೆಗೆ ನಡೆಯಲಿದೆ. ಈ ವರ್ಷ ವಿಷಯವಾರು ನೀಲನಕ್ಷೆ (ಬ್ಲೂಪ್ರಿಂಟ್) ನೀಡಿರುವುದು ಮತ್ತೊಂದು ವಿಶೇಷವಾಗಿದೆ.

ಯಾವ ಪಠ್ಯದಿಂದ ಎಷ್ಟು ಅಂಕಗಳಿಗೆ ಪ್ರಶ್ನೆಗಳು ಬರುತ್ತವೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದ್ದು, ಅದರ ಆಧಾರದಲ್ಲಿ ಅಧ್ಯಯನ ಮಾಡಿದರೆ ವಾರ್ಷಿಕ ಪರೀಕ್ಷೆಗೆ ಉತ್ತಮ ಸಿದ್ಧತೆ ಸಾಧ್ಯವಾಗಲಿದೆ. ಹಳೆಯ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನವು ಪರೀಕ್ಷೆಯ ಮೇಲಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಶಾಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಜೊತೆಗೆ ಸ್ವತಃ ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಉಪಯುಕ್ತವಾಗಿದೆ. ಅಣುಕು ಪರೀಕ್ಷೆಗಳ ಮೂಲಕ ಉತ್ತರ ಬರವಣಿಗೆಯ ಕೌಶಲ್ಯ, ಸಮಯ ನಿರ್ವಹಣೆ ಹಾಗೂ ಸ್ವಮೌಲ್ಯಮಾಪನಕ್ಕೆ ಅವಕಾಶ ದೊರೆಯುತ್ತದೆ.

ಇದೀಗ ಪರೀಕ್ಷೆಗೆ ಕಡಿಮೆ ಸಮಯ ಉಳಿದಿರುವುದರಿಂದ ವಿದ್ಯಾರ್ಥಿಗಳು ಇರುವ ಸಮಯವನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕಿದೆ. ವಿಶೇಷವಾಗಿ ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಒಟ್ಟಾರೆ ಫಲಿತಾಂಶವನ್ನು ಉತ್ತಮಗೊಳಿಸಬಹುದು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರುಡಿ ಹಾಗೂ ಡಯಟ್ ಪ್ರಾಂಶುಪಾಲ ಜಿ.ಎಂ. ಮುಂದಿನಮನಿ ಅವರ ಮಾರ್ಗದರ್ಶನದಲ್ಲಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 87ಕ್ಕೂ ಹೆಚ್ಚು ಓದುವ ಮನೆಗಳನ್ನು ನಿರ್ಮಿಸಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಿಧಾನ ಕಲಿಕೆಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯವಾಗಿದೆ.

ಗುಣಾತ್ಮಕ ಫಲಿತಾಂಶದತ್ತ ಜಿಲ್ಲೆಯ ಶಾಲೆಗಳ ಸಶಕ್ತ ಹೆಜ್ಜೆ ಗುಣಾತ್ಮಕ ಶಿಕ್ಷಣ ಹಾಗೂ ಶೇ. 100ರಷ್ಟು ಫಲಿತಾಂಶ ಸಾಧನೆಯ ಗುರಿಯೊಂದಿಗೆ ಜಿಲ್ಲೆಯಲ್ಲಿ ‘ಚಿಕಿತ್ಸಕ ವಿಧಾನದ ಕಲಿಕೆ’ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಒದಗಿಸಲಾದ ವಿಷಯವಾರು ಟ್ರ‍್ಯಾಕಿಂಗ್ ಶೀಟ್‌ಗಳನ್ನು ಬಳಸಿಕೊಂಡು ಪ್ರತಿ ಮಗುವನ್ನು ಮಗುವಾರು ಕಾಳಜಿಯಿಂದ ಟ್ರ‍್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.

ಈ ವ್ಯವಸ್ಥೆಯಡಿ, ಪ್ರತಿ ಮಗುವು ಕಲಿಯದ ಅಂಶಗಳನ್ನು ಗುರುತಿಸಿ, ಅವುಗಳ ಕುರಿತು ಅಗತ್ಯವಿದ್ದಲ್ಲಿ ಓದಿಸುವುದು, ಬೋಧಿಸುವುದು ಹಾಗೂ ಬೋಧನೆಯ ನಂತರ ಚಿಕ್ಕ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡಿ ತಕ್ಷಣವೇ ಹಿಮ್ಮಾಹಿತಿ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕಾ ಕೊರತೆಗಳನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಾಗಿದ್ದು, ಕಲಿಕೆಯಲ್ಲಿ ಸ್ಪಷ್ಟವಾದ ಪ್ರಗತಿ ಕಂಡುಬರುತ್ತಿದೆ.

ಜಿಲ್ಲೆಯಲ್ಲಿ ಪಾಲಕ–ಶಿಕ್ಷಕರ ಸಮನ್ವಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ‘ಬನ್ನಿ ಬನ್ನಿ ಶಾಲೆಗೆ’ ಎಂಬ ಘೋಷವಾಕ್ಯದೊಂದಿಗೆ ಪಾಲಕ–ಶಿಕ್ಷಕರ ಮಹಾಸಭೆಗಳನ್ನು ಆಯೋಜಿಸಲಾಗುತ್ತಿದೆ. ಇದೇ ಘೋಷಣೆಯೊಂದಿಗೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆಯುತ್ತಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ, ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗುಣಾತ್ಮಕ ಫಲಿತಾಂಶ ಸಾಧನೆಯಲ್ಲಿ ನಮ್ಮೆಲ್ಲರ ಪಾತ್ರ ಕುರಿತು ವಿಶೇಷ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಜಿಲ್ಲೆಯ ಶಾಲೆಗಳಲ್ಲಿ ಪರೀಕ್ಷೆಯನ್ನು ಒತ್ತಡದ ವಿಷಯವಲ್ಲದೆ, ಒಂದು ಹಬ್ಬದಂತೆ ಆಚರಿಸುವ ಸಂಸ್ಕೃತಿಯನ್ನು ಬೆಳೆಸಲಾಗುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದರಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ಕಡಿಮೆಯಾಗಿದ್ದು, ಆತ್ಮವಿಶ್ವಾಸ ಹೆಚ್ಚಾಗಿದೆ.

“ಬನ್ನಿ ಬದಲಾಗೋಣ, ಬದಲಿಸೋಣ, ಪ್ರಗತಿ ಸಾಧಿಸೋಣ” ಎಂಬ ಘೋಷವಾಕ್ಯದೊಂದಿಗೆ, ಅತ್ಯುತ್ತಮ ಫಲಿತಾಂಶ ನಮ್ಮದಾಗಲಿ ಎಂಬ ಆಶಾಭಾವನೆಯೊಂದಿಗೆ ಜಿಲ್ಲೆಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಪಾಲಕರು ಮತ್ತು ಆಡಳಿತ ವರ್ಗ ಒಟ್ಟಾಗಿ ಶ್ರಮಿಸುತ್ತಿದೆ. ಈ ಸಮಗ್ರ ಪ್ರಯತ್ನಗಳಿಂದಾಗಿ ಜಿಲ್ಲೆಯಲ್ಲಿ ಈ ವರ್ಷವೂ ಗುಣಾತ್ಮಕ ಹಾಗೂ ಮಾದರಿಯಾದ ಫಲಿತಾಂಶ ಕಾಣಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿ ವ್ಯವಸ್ಥಿತ ಹಾಗೂ ಫಲಿತಾಂಶೋನ್ಮುಖವಾಗಿದ್ದು, ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧನೆಯತ್ತ ಜಿಲ್ಲೆಯು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ.

– ಎಂ.ಎಚ್. ಸವದತ್ತಿ
ತಾಂತ್ರಿಕ ಸಹಾಯಕರು,
ಸಮಗ್ರ ಶಿಕ್ಷಣ ಕರ್ನಾಟಕ–ಗದಗ

ಬಟಾಣಿಗಳು ವರ್ಷ ಕಳೆದ್ರೂ ಕೆಡಬಾರದಾ? ಹಾಗಾದ್ರೆ ನೀವು ಈ ಕೆಲಸ ಮಾಡಿ ಸಾಕು! 100% ರಿಸಲ್ಟ್

0

ಅನೇಕ ಮಂದಿಗೆ ಹಸಿರು ಬಟಾಣಿ ತಿನ್ನಲು ಬಹಳ ಇಷ್ಟ. ವಿಶೇಷವಾಗಿ ಚಳಿಗಾಲದಲ್ಲಿ, ಬಟಾಣಿ ಸೀಸನ್ ಶುರುವಾಗುತ್ತದೆ ಮತ್ತು ಹಸಿರು ಬಟಾಣಿಗಳು ರುಚಿಕರವಾಗಿಯೂ, ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿರುತ್ತವೆ.

ಆದರೆ ಬಟಾಣಿಗಳನ್ನು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ತಾಜಾ ರೂಪದಲ್ಲಿ ದೊರಕುವುದು ಬಹಳ ಕಷ್ಟ, ಏಕೆಂದರೆ ಹಬ್ಬುಗಟ್ಟಿದ ಬಟಾಣಿಗಳ ರುಚಿ ನೈಸರ್ಗಿಕವಾಗಿರದು ಮತ್ತು ಅವುಗಳ ಬೆಲೆ ಹೆಚ್ಚಾಗಿರುತ್ತದೆ. ಬಟಾಣಿ ವರ್ಷವಿಡೀ ಮನೆಗಳಲ್ಲಿ ಫ್ರೆಶ್‌ ಆಗಿ ಉಪಯೋಗಿಸಲು, ಕೆಲ ಸರಳ ಹಂತಗಳನ್ನು ಅನುಸರಿಸಬಹುದಾಗಿದೆ. ಮೊದಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಉಪ್ಪು ಮತ್ತು ಸಕ್ಕರೆ ಹಾಕಬೇಕು. ನೀರು ಚೆನ್ನಾಗಿ ಕುದಿಯಲು ಪ್ರಾರಂಭಿಸಿದಾಗ ಬಟಾಣಿಗಳನ್ನು ಹಾಕಿ ಸುಮಾರು 5 ನಿಮಿಷ ಬೇಯಿಸಿ. ನಂತರ, ಬಟಾಣಿಗಳನ್ನು ತಣ್ಣನೆಯ ಐಸ್ ನೀರಿನಲ್ಲಿ ಹಾಕಿ.

ಇದರಿಂದ ಬಟಾಣಿಗಳ ಹಸಿರು ಬಣ್ಣ ಮತ್ತು ರುಚಿ ನವೀನವಾಗಿರುತ್ತದೆ. ನೀರನ್ನು ಚೆನ್ನಾಗಿ ಹೊರಹಾಕಿ, ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ ಸಂಪೂರ್ಣ ಒಣಗುವಂತೆ ಬಿಡಬೇಕು. ಒಣಗಿದ ಬಟಾಣಿಗಳನ್ನು ಗಾಳಿಯಾಡದ ಡಬ್ಬ ಅಥವಾ ಪ್ಲಾಸ್ಟಿಕ್ ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿ ಸಂಗ್ರಹಿಸಿದರೆ, ರುಚಿ ಮತ್ತು ಪೌಷ್ಟಿಕಾಂಶ ವರ್ಷಪೂರ್ತಿ ಉಳಿಯುತ್ತದೆ. ಈ ಸರಳ ವಿಧಾನವನ್ನು ಅನುಸರಿಸುವ ಮೂಲಕ, ಬಟಾಣಿಗಳನ್ನು ಹಸಿರು, ರುಚಿಕರ ಸ್ವರೂಪದಲ್ಲಿ ಯಾವುದೇ ಸಮಯದಲ್ಲಿ ಬಳಸಬಹುದು ಮತ್ತು ಸೀಸನ್‌ನ ಬಟಾಣಿಗಳ ರುಚಿಯನ್ನು ವರ್ಷಪೂರ್ತಿ ಅನುಭವಿಸಬಹುದು.

ಮಕ್ಕಳ ವಿಷಯವಾರು ದೌರ್ಬಲ್ಯಗಳನ್ನು ವಿಶ್ಲೇಷಿಸಿ: ಡಾ. ಈಶ್ವರ ಉಳ್ಳಾಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ವಿಷಯವಾರು ದೌರ್ಬಲ್ಯಗಳನ್ನು ವಿಶ್ಲೇಷಿಸಿ, ಗುರಿ ನಿರ್ದಿಷ್ಟ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಗುರುವಾರ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ಗದಗ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಶೇಕಡಾವಾರು ಹೆಚ್ಚಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಶಾಲಾ ಮಟ್ಟದಲ್ಲಿ ನಿಯಮಿತ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕರೊಂದಿಗೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸಬೇಕು. ಶಿಕ್ಷಕರು ಸಮಯ ಪಾಲನೆ, ಬದ್ಧತೆ ಮತ್ತು ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಜಿಲ್ಲೆಯ ಪ್ರತಿಯೊಂದು ಶಾಲೆಯೂ ಫಲಿತಾಂಶ ಸುಧಾರಣೆಗೆ ಸಮಗ್ರ ಪ್ರಯತ್ನ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಧಾರವಾಡ) ಅಪರ ಆಯುಕ್ತರ ಕಚೇರಿ ನಿರ್ದೇಶಕರಾದ ಈಶ್ವರ ನಾಯಕ, ಡಯಟ್ ಪ್ರಾಚಾರ್ಯ ಜಿ.ಎಂ. ಮುಂದಿನಮನಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು, ಸಮನ್ವಯಾಧಿಕಾರಿಗಳು, ಡಯಟ್ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.

ಸಂವಾದದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.

ಮುಖ್ಯಾಂಶಗಳು

• ಗದಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕುರಿತು ಮುಖ್ಯ ಶಿಕ್ಷಕರೊಂದಿಗೆ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಸಂವಾದ.

• ಫಲಿತಾಂಶ ಹೆಚ್ಚಿಸುವುದು ಶಿಕ್ಷಕರ ಸಮೂಹ ಜವಾಬ್ದಾರಿ.

• ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ರಿಮಿಡಿಯಲ್ ತರಗತಿಗಳ ಆಯೋಜನೆ.

• ವಿಷಯವಾರು ಗುರಿ ನಿಗದಿ ಮಾಡಿ ನಿಯಮಿತ ಅಭ್ಯಾಸ ಪರೀಕ್ಷೆ ನಡೆಸಲು ಸೂಚನೆ.

• ಉತ್ತರ ಪತ್ರಿಕೆ ವಿಶ್ಲೇಷಣೆ ಮೂಲಕ ವಿದ್ಯಾರ್ಥಿಗಳ ತಪ್ಪು ಸರಿಗಳನ್ನು ಸರಿಪಡಿಸುವ ಕ್ರಮ.

• ಹಾಜರಾತಿ ಹೆಚ್ಚಿಸಲು ಪೋಷಕರೊಂದಿಗೆ ನಿರಂತರ ಸಂಪರ್ಕ.

• ಡಿಜಿಟಲ್ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳ ಪರಿಣಾಮಕಾರಿ ಬಳಕೆ, ಪ್ರತಿಯೊಂದು ಶಾಲೆಯೂ ಫಲಿತಾಂಶ ಆಧಾರಿತ ಕಾರ್ಯಯೋಜನೆ ರೂಪಿಸಲು ನಿರ್ದೇಶನ.

ಮೇಘಾಲಯ| ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಸ್ಫೋಟ; 16 ಕಾರ್ಮಿಕರು ದುರ್ಮರಣ!

0

ಶಿಲ್ಲಾಂಗ್:- ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಅಸ್ಸಾಂನ 16 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಜರುಗಿದೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಣಿಯಿಂದ 16 ಶವಗಳನ್ನು ಹೊರತೆಗೆದಿದ್ದು, ಗಾಯಾಳುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಶಿಲ್ಲಾಂಗ್‌ಗೆ ಕರೆದೊಯ್ಯಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಸಹಾಯ ಪಡೆದುಕೊಂಡರು.

ಇನ್ನೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾರ ನಗರದಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ!

0

ಕೋಲಾರ:- ನಗರದಲ್ಲಿ ವಾಹನ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಎಂ.ಆರ್. ರವಿ ಹೊಸ ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಾರಿ ವಾಹನಗಳಿಗೆ ನಗರ ಪ್ರವೇಶ ನಿಷೇಧಿಸಲಾಗಿದೆ. ಆದರೆ ಅಗತ್ಯ ಸೇವೆಗಾಗಿ ಹಣ್ಣು, ಹೂವು, ತಕರಾರಿ, ಗ್ಯಾಸ್ ಸಿಲಿಂಡರ್, ನೀರಿನ ಟ್ಯಾಂಕರ್ ಹೀಗೆ ಕೆಲವು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಕಾರ್ಮಿಕರನ್ನು ಸಾಗಿಸುವ ವಾಹನಗಳು ರಸ್ತೆಯ ಬದಿಯಲ್ಲಿ ನಿಲ್ಲದಂತೆ ಸೂಚನೆ ನೀಡಲಾಗಿದೆ.

ಈ ನಿರ್ಬಂಧದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಸಂಚಾರ ಸುಗಮವಾಗುವುದು, ವಾಹನ ದಟ್ಟಣೆ ಕಡಿಮೆಯಾಗುವುದು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಹಾಯವಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಟಿಕೆಟ್ ದರ ದುಬಾರಿ; ಕೇಂದ್ರ ಸಚಿವರನ್ನು ಭೇಟಿಯಾದ ತೇಜಸ್ವಿ ಸೂರ್ಯ; ಮನವಿ ಏನು?

0

ಬೆಂಗಳೂರು:- ಭಾರತದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ ಇದೀಗ ಮತ್ತೆ ದರ ಏರಿಕೆಗೆ ಮುಂದಾಗಿದೆ.

ಶೇ.5ರಷ್ಟು ಮೆಟ್ರೋ ಟಿಕೆಟ್ ಪ್ರಯಾಣ ದರ ದುಬಾರಿಯಾಗಿದ್ದು, ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಈಗಾಗಲೇ ಮೆಟ್ರೋ ಪ್ರಯಾಣಿಕರು ಬಿಎಂಆರ್​ಸಿಎಲ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಎಂ.ಎಲ್​​ ಖಟ್ಟರ್​​ ಅವರನ್ನು ಭೇಟಿ ಮಾಡಿ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಮನವಿ ಮಾಡಿದ್ದಾರೆ.

ಲೆಕ್ಕಾಚಾರಗಳಲ್ಲಿ ವೈಪರೀತ್ಯಗಳು ಕಂಡುಬಂದಿದ್ದು, ಇದರಿಂದ ಗರಿಷ್ಠ ಟಿಕೆಟ್ ದರ 95 ರೂಪಾಯಿಗೆ ಏರಿಸಲಾಗುತ್ತಿದೆ. ಸರ್ಕಾರ ಈ ದೋಷಪೂರ್ಣ ದರ ಪರಿಷ್ಕರಣೆಯನ್ನು ಮುಂದುವರಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಸಚಿವ ಎಂ.ಎಲ್​​ ಖಟ್ಟರ್ ಅವರು ತೇಜಸ್ವಿ ಸೂರ್ಯ ಅವರ ಮನವಿಗೆ ಸ್ಪಂದಿಸಿ, ತಾತ್ಕಾಲಿಕವಾಗಿ ದರ ಏರಿಕೆಯನ್ನು ಸ್ಥಗಿತಗೊಳಿಸಲು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹೊಸ ಸಮಿತಿಯ ಮೂಲಕ ದರ ಪರಿಷ್ಕರಣೆ ಮಾಡಲು ಭರವಸೆ ನೀಡಿದ್ದಾರೆ.

ಈ ಮೂಲಕ ಪ್ರಯಾಣಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹಾಕದಂತೆ ಕ್ರಮ ಕೈಗೊಳ್ಳಲಾಗುವ ನಿರೀಕ್ಷೆ ಇದೆ.

ಭ್ರಷ್ಟರ ಬೆವರಿಳಿಸಿದ ಲೋಕಾ ಅಧಿಕಾರಿಗಳು; ಮೈಸೂರಿನ 7 ಸ್ಥಳಗಳಲ್ಲಿ ದಾಳಿ

0

ಮೈಸೂರು: ನಗರದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.

ಇಬ್ಬರು ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 7 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮನೆಗಳು ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆಯ ಜೆ.ಇ. ಕೆ.ಆರ್. ಚಂದ್ರಶೇಖರ್ ಅವರಿಗೆ ಸೇರಿದ ಮೈಸೂರಿನ ವಿಜಯನಗರ ಮತ್ತು ಕೆಜಿ ಕೊಪ್ಪಲು ನಿವಾಸಗಳು ಸೇರಿದಂತೆ ಟಿ.ನರಸೀಪುರ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ.

ಈ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 60 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಇದೇ ವೇಳೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆಯ ಡೆಪ್ಯುಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಅವರಿಗೆ ಸೇರಿದ ಎರಡು ನಿವಾಸಗಳು ಹಾಗೂ ಕಚೇರಿಗಳಲ್ಲೂ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.

ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿರುವ ಸಾಧ್ಯತೆ ಇದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಹಾಸನ ಮೆಗಾ ಡೇರಿ ವಿಸ್ತರಣೆಗೆ ಕೇಂದ್ರದ ನೆರವು: ಹೈನುಗಾರಿಕೆ ಸಚಿವರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ

0

ನವದೆಹಲಿ: ಹಾಸನ ಮೆಗಾ ಡೇರಿ ವಿಸ್ತರಣಾ ಯೋಜನೆಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (NDDB) ಮೂಲಕ ₹150 ಕೋಟಿ ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸರಕಾರ ಸಮ್ಮತಿಸಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮಂತ್ರಿ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಹೆಚ್.ಡಿ. ರೇವಣ್ಣ ಅವರೊಂದಿಗೆ ಕೇಂದ್ರದ ಮೀನುಗಾರಿಕೆ, ಹೈನುಗಾರಿಕೆ ಮತ್ತು ಪಶುಸಂಗೋಪನಾ ಖಾತೆ ಸಚಿವರಾದ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರನ್ನು ಭೇಟಿಯಾಗಿ ವಿನಂತಿ ಮಾಡಿದರು.

ಸಚಿವ ಕುಮಾರಸ್ವಾಮಿ ಅವರ ತಕ್ಷಣವೇ ಸ್ಪಂದಿಸಿದ ಸಚಿವರು; ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಮೂಲಕ ₹150 ಕೋಟಿ ಸಾಲ ಮಂಜೂರು ಮಾಡಲು ಒಪ್ಪಿಗೆ ನೀಡಿದರು. ತಮ್ಮ ಮನವಿಗೆ ಸ್ಪಂದಿಸಿದ ಹೈನುಗಾರಿಕೆ ಸಚಿವರಿಗೆ ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

ಹಾಸನ ಹಾಲು ಒಕ್ಕೂಟವು ಲಾಭದ ದಾರಿಯಲ್ಲಿ ನಡೆಯುತ್ತಿರುವ ಅತ್ಯುತ್ತಮ ಸಹಕಾರ ಒಕ್ಕೂಟವಾಗಿದೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಅತಿದೊಡ್ಡ ಆಸರೆಯಾಗಿದೆ. 1977ರಲ್ಲಿ ಆರಂಭವಾದ ಈ ಒಕ್ಕೂಟವು ಪ್ರತೀ ದಿನ 14.5ರಿಂದ 15 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹ ಮಾಡುತ್ತದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕರಿಗೆ ಜೀವನೋಪಾಯ ಒದಗಿಸಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಸಚಿವ ಲಲನ್ ಸಿಂಗ್ ಅವರಿಗೆ ವಿವರಿಸಿದರು.

ನಿತ್ಯವೂ ಸಂಗ್ರಹ ಆಗುತ್ತಿರುವ ಹಾಲನ್ನು ಸಂಸ್ಕರಿಸಿ ಪ್ಯಾಕೆಟ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದೆ ಹಾಗೂ ಅನೇಕ ಉಪ ಉತ್ಪನ್ನಗಳ ತಯಾರಿಸಿ ಲಾಭದ ಹಾದಿಯಲ್ಲಿ ಮುಂದೆ ಸಾಗುತ್ತಿದೆ. ಈಗ ಹಾಲು ಸಂಗ್ರಹಣೆಯ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿ ಜೀವನೋಪಾಯ ವೃದ್ಧಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಹಾಸನ ಮೆಗಾಡೇರಿಯನ್ನು ಮತ್ತಷ್ಟು ವಿಸ್ತರಿಸಿ ಸಶಕ್ತಿಗೊಳಿಸಬೇಕಿದೆ. ಹೀಗಾಗಿ ಕೇಂದ್ರ ಸರಕಾರದ ನೆರವು ಅಗತ್ಯವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಮನವಿ:

ತಮ್ಮ ತವರು ಜಿಲ್ಲೆಯ ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು. ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಬಂದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಿ ಚರ್ಚಿಸಿದರು ಕೇಂದ್ರ ಸಚಿವರು.

ತಾವು ಹುಟ್ಟಿ ಬೆಳೆದ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿ ಹಾಗೂ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಪ್ರಧಾನಿಗಳು ವಿನಂತಿ ಮಾಡಿದರು.

ಇದಕ್ಕೆ ಸ್ಪಂದಿಸಿದ ರೈಲ್ವೆ ಸಚಿವರು; ಪ್ರಸಕ್ತ ಸಂಸತ್ ಅಧಿವೇಶನ ಮುಗಿಯುವುದಕ್ಕೆ ಮೊದಲೇ ಈ ಬಗ್ಗೆ ವಿಸ್ತೃತ ವರದಿ ಪಡೆದುಕೊಳ್ಳಲಾಗುವುದು. ಮೊಸಳೆ ಹೊಸಹಳ್ಳಿ ರೈಲು ನಿಲ್ದಾಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು.

ಧಾರ್ಮಿಕ ಕೇಂದ್ರ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣವನ್ನು ಪಾರಂಪರಿಕ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು ಎಂದು ರೈಲ್ವೆ ಸಚಿವರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಹೆಚ್.ಡಿ. ರೇವಣ್ಣ ಅವರು ಉಪಸ್ತಿತರಿದ್ದರು.

error: Content is protected !!