Home Blog Page 5

ಕರ್ನಾಟಕದಾದ್ಯಂತ ಮೆಗಾ ದಾಳಿ; ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: 13 ವಂಚಕರು ಅರೆಸ್ಟ್

0

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚಕ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ ವಿಭಾಗ ಭೇದಿಸಿದೆ.

ನೂರಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ 40,000ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನು ಪತ್ತೆಹಚ್ಚಿದೆ. ಸಿಐಡಿ ತಂಡವು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ತನಿಖೆ ವೇಳೆ ತಿಳಿದುಬಂದಂತೆ, ಅಮಾಯಕರ ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್‌ಗಳು ಹಾಗೂ ಖಾತೆ ವಿವರಗಳನ್ನು ಹಣದ ಹಿತಾಸಕ್ತಿಗಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು. ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ನಗದು ವಿತ್‌ಡ್ರಾ ಮಾಡಲಾಗುತ್ತಿತ್ತು.

ಖಾತೆ ವಿವರಗಳನ್ನು ಒದಗಿಸಿದವರಲ್ಲಿ ವಂಚನೆಯ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಸಿಐಡಿ ತಿಳಿಸಿದೆ. ಈ ದಾಳಿಯ ವೇಳೆ ಸುಮಾರು 42,000 ಮ್ಯೂಲ್ ಅಕೌಂಟ್‌ಗಳು ಬಳಸಲಾಗುತ್ತಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

ಬೆಳಗಾವಿ| ಸೀಕ್ರೆಟ್ ಕ್ಯಾಮೆರಾದಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋ ಚಿತ್ರೀಕರಣ; ನಕಲಿ ಪತ್ರಕರ್ತರು ಅರೆಸ್ಟ್!

0

ಬೆಳಗಾವಿ:- ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆಹಿಡಿದು 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಬಂಧಿತ ಆರೋಪಿಗಳು, ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಮಹಿಳಾ ಅಧಿಕಾರಿಯು, ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಬಳಿಕ ಮಾಳಮಾರುತಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಸ್ಯಾಮ್‌ಸಂಗ್ ಅಲ್ಟ್ರಾ ಮೊಬೈಲ್, ಒಂದು ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, ಆರು ರಹಸ್ಯ ಕ್ಯಾಮರಾಗಳು, ಎರಡು ಓಟಿಜಿ ಸಾಧನಗಳು, ಹಲವು ಮೆಮೊರಿ ಕಾರ್ಡ್‌ಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನೆಲಮಂಗಲದಲ್ಲಿ ಭೀಕರ ಅಗ್ನಿ ಅವಘಡ| ಡಿವೈಡರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಖಾಸಗಿ ಬಸ್‌ – ತಪ್ಪಿದ ಭಾರೀ ಅನಾಹುತ!

0

ನೆಲಮಂಗಲ:- ನೆಲಮಂಗಲ ತಾಲೂಕಿನ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಭೀಕರ ಅವಘಡ ಸಂಭವಿಸಿದೆ.

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ಬೆಳಗ್ಗಿನ ಜಾವ ಸುಮಾರು 3 ಗಂಟೆ ವೇಳೆಗೆ ಚಾಲಕನನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ನೆಲಮಂಗಲ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಸ್ಸಿನಲ್ಲಿ ಚಾಲಕರು ಸೇರಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಇಟ್ಟಿದ್ದ ಪ್ರಯಾಣಿಕರ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಕಣ್ಣೀರು ಹಾಕಿರುವುದು ಕಂಡುಬಂದಿದೆ.

ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

0

ರಾಮನಗರ: ಅಬಕಾರಿ ಸಚಿವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹ ಮಾಡುತ್ತಿರುವುದಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಸಚಿವರು ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಬಿಡದಿ ತಾಲೂಕಿನ ರಾಮನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಬಕಾರಿ ಇಲಾಖೆಯನ್ನು ನಿರ್ವಹಿಸಿದ ಪ್ರತಿಯೊಬ್ಬ ಸಚಿವರ ಮೇಲೂ ಈ ರೀತಿಯ ಆರೋಪಗಳು ಕೇಳಿಬಂದಿವೆ. ಆದರೆ ಇದುವರೆಗೆ ಯಾವುದೇ ಸಚಿವರು ಈ ಆರೋಪಗಳ ಹಿನ್ನೆಲೆ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ. ಬಿಜೆಪಿಯವರು ಸರ್ಕಾರದ ಒಂದು ವಿಕೆಟ್ ಉರುಳಿಸಲು ಕಸರತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರೋ ಮಾತನಾಡಿರುವ ಆಡಿಯೋ ಒಂದನ್ನು ಹಿಡಿದುಕೊಂಡು ರಾಜೀನಾಮೆ ಕೇಳುವುದು ಸರಿಯಲ್ಲ. ಸೂಕ್ತ ಆಧಾರ, ಮಾಹಿತಿ ಇಲ್ಲದೇ ಆರೋಪ ಮಾಡುವುದಕ್ಕೆ ಅರ್ಥವೇ ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಅಬಕಾರಿ ಸಚಿವರು ಸದನದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ಬಾಲಕೃಷ್ಣ ಹೇಳಿದರು. ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಹೈಕಮಾಂಡ್ ಕೆಲ ನಾಯಕರನ್ನು ಕರೆಸಿರುವ ಮಾತು ಕೇಳಿಬಂದಿದೆ, ಏನಾಗುತ್ತೋ ಮುಂದೇ ನೋಡಬೇಕು ಎಂದು ತಿಳಿಸಿದರು.

ಕನಕೋತ್ಸವದ ಹೆಸರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಡಿಕೆಶಿ ಮೇಲಿನ ವಿಶ್ವಾಸದಿಂದ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಎಲ್ಲ ಶಾಸಕರಿಗೂ ಆಹ್ವಾನ ನೀಡಲಾಗಿತ್ತು. ಕೆಲವರು ಕೆಲಸದ ಒತ್ತಡದಿಂದ ಬರಲಿಲ್ಲ, ಹಲವರು ಬಂದು ಭಾಗವಹಿಸಿದ್ದಾರೆ. ಇದರಲ್ಲಿ ಶಕ್ತಿ ಪ್ರದರ್ಶನ ಎನ್ನುವುದಕ್ಕೆ ಅರ್ಥವೇ ಇಲ್ಲ ಎಂದು ಹೇಳಿದರು.

ಡಿಕೆಶಿ ಇಡೀ ರಾಜ್ಯದ ಡಿಸಿಎಂ. ಅವರ ಆಹ್ವಾನಕ್ಕೆ ಶಾಸಕರು ಬಂದು ಗೌರವ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಕುರಿತು ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಯಲ್ಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಇನ್ನೂ ಡಿಕೆಶಿ ನಮ್ಮ ಜಿಲ್ಲೆಯವರೇ. ಅವರು ಸಿಎಂ ಆಗಬೇಕು ಎಂಬ ಅಭಿಪ್ರಾಯ ಇದೆ. ಆದರೆ ಅದು ಯಾವಾಗ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಬೇಕು. ಡಿಕೆಶಿ ಸಾಕಷ್ಟು ಶ್ರಮಪಟ್ಟಿದ್ದಾರೆ, ದುಡಿದಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗದವರ ಒತ್ತಡ ಹೆಚ್ಚಾಗಿದೆ. ಈ ವಿಚಾರವನ್ನು ಹೈಕಮಾಂಡ್ ಬಗೆಹರಿಸಬೇಕು, ಇಲ್ಲವಾದರೆ ಸಮಸ್ಯೆ ಉಂಟಾಗಬಹುದು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಎಚ್ಚರಿಸಿದರು.

Crime News; 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ ತಂದೆ!

0

ಜಲಂಧರ್: ಪಂಜಾಬ್‌ನ ಜಲಂಧರ್‌ನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಹಸಿವಿನಿಂದ ಅಳುತ್ತಿದ್ದ ತನ್ನ ಐದು ವರ್ಷದ ಮಗಳ ಬಾಯಿಗೆ ಆಲ್ಕೋಹಾಲ್ ಸುರಿದು ಬಳಿಕ ಕತ್ತು ಹಿಸುಕಿ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಛತ್ತೀಸ್‌ಗಢ ಮೂಲದ ಅರವಿಂದ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಲಂಧರ್‌ನಲ್ಲಿ ವಾಸವಾಗಿದ್ದ ಅರವಿಂದ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಮದ್ಯಪಾನಕ್ಕೆ ಅತಿಯಾದ ಆಸಕ್ತಿ ಹೊಂದಿದ್ದ ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ಐದು ವರ್ಷದ ಬಾಲಕಿಯ ತಾಯಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹಸಿವಿನಿಂದ ಅಳುತ್ತಿದ್ದ ಮಗಳನ್ನು ಸುಮ್ಮನಾಗಿಸಲು ಆಕೆಯ ಬಾಯಿಗೆ ಆಲ್ಕೋಹಾಲ್ ಸುರಿದಿದ್ದಾನೆ. ಆದರೂ ಮಗು ಅಳುವುದನ್ನು ನಿಲ್ಲಿಸದಿದ್ದಾಗ ಕೋಪಗೊಂಡ ಆತ ಆಕೆಯನ್ನು ನೆಲಕ್ಕೆ ಎಸೆದಿದ್ದಾನೆ.

ಇದಕ್ಕೂ ಮಗು ಅಳುತ್ತಲೇ ಇದ್ದಾಗ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನೆರೆಮನೆಯ ನಿವಾಸಿ ಹಿಮ್ಮತ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ, ಆರೋಪಿಗೆ ಸ್ಥಿರ ಉದ್ಯೋಗ ಇರಲಿಲ್ಲ ಹಾಗೂ ಕುಡಿತದ ಅಮಲಿನಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಆಗಾಗ ದೈಹಿಕ ದೌರ್ಜನ್ಯ ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ. ಕೌಟುಂಬಿಕ ಕಲಹಗಳು ಮತ್ತು ಆರ್ಥಿಕ ಸಂಕಷ್ಟಗಳಿಂದ ಕುಟುಂಬ ತೀವ್ರ ಒತ್ತಡದಲ್ಲಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯಿಂದ ಬಾಲಕಿಯ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಕ್ರಿಕೆಟ್ ಅಭ್ಯಾಸದ ವೇಳೆ ಮುಖಕ್ಕೆ ಬಡಿದ ಚಂಡು; ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ!

0

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕ್ರಿಕೆಟ್ ಅಭ್ಯಾಸದ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.

ಕ್ರಿಕೆಟ್ ಚೆಂಡು ಬಲವಾಗಿ ಮುಖಕ್ಕೆ ಬಡಿದ ಪರಿಣಾಮ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳಭಾಗದಲ್ಲಿ ತೀವ್ರ ಗಾಯವಾಗಿದೆ. ಗಾಯದ ತೀವ್ರತೆಯಿಂದಾಗಿ ಅವರ ಮುಖವೂ ವಿರೂಪಗೊಂಡಿರುವುದು ಕಂಡುಬಂದಿದೆ. ಈ ವಿಚಾರವನ್ನು ಸ್ವತಃ ಬೆನ್ ಸ್ಟೋಕ್ಸ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಗಾಯದ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, “ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನೂ ಪರಿಶೀಲಿಸಬೇಕು” ಎಂದು ಬರೆದು, ಅಭ್ಯಾಸದ ವೇಳೆ ಚೆಂಡು ಮುಖಕ್ಕೆ ಬಡಿದಿದ್ದನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ.

ಸ್ಟೋಕ್ಸ್ ಅವರ ಕಣ್ಣಿನ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಕೆನ್ನೆ ಭಾಗದಲ್ಲಿ ಕೆಂಪು ಗಲೆ ಮೂಡಿದೆ. ಜೊತೆಗೆ ಮೂಗಿನ ಕೆಳಭಾಗದಲ್ಲಿಯೂ ಗಾಯದ ಗುರುತುಗಳಿವೆ. ಗಾಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗಾಯದ ಸ್ಥಿತಿಯನ್ನು ಗಮನಿಸಿದರೆ, ಸ್ಟೋಕ್ಸ್ ಕೂದಲೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು.

ಒಂದು ವೇಳೆ ಚೆಂಡು ಇನ್ನೂ ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ ಕಣ್ಣಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇತ್ತು. ಅಂಥ ಪರಿಸ್ಥಿತಿಯಲ್ಲಿ ಶಾಶ್ವತ ದೃಷ್ಟಿ ಹಾನಿ ಸಂಭವಿಸಿ ಅವರ ಕ್ರಿಕೆಟ್ ವೃತ್ತಿಜೀವನಕ್ಕೂ ಅಪಾಯ ಎದುರಾಗಬಹುದಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ, ಬೆನ್ ಸ್ಟೋಕ್ಸ್ ಗಂಭೀರ ಅನಾಹುತದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು!

0

ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ದುರ್ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಜರುಗಿದೆ. ಬಿಜಾಪುರದ ಸಂಗಮೇಶ್ (50) ಎಂಬ ದುರ್ದೈವಿ ಕಾರು ಡಿಕ್ಕಿಯಿಂದ ತಲೆಗೆ ಗಂಭೀರ ಗಾಯಗೊಂಡು, ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಂಗಮೇಶ್ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಿಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ಮುಂದುವರಿದಿದೆ.

ಶೇ. 100ರಷ್ಟು ಗುಣಾತ್ಮಕ ಫಲಿತಾಂಶದ ಗುರಿ

ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಶಾಲಾ ಶಿಕ್ಷಣ ಇಲಾಖೆ ಮುಂಚಿತ ಹಾಗೂ ಸಮಗ್ರ ಯೋಜನೆಯೊಂದಿಗೆ ಸಜ್ಜಾಗಿದ್ದು, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮೂಲಕ ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ದೃಷ್ಟಿಯಲ್ಲಿ ವಿದ್ಯಾರ್ಥಿಯೇ ಶಿಕ್ಷಣದ ಕೇಂದ್ರಬಿಂದುವಾಗಿದ್ದು, ಅದಕ್ಕೆ ತಕ್ಕಂತೆ ಈ ವರ್ಷದ ಪರೀಕ್ಷಾ ತಯಾರಿಯನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಗುರುತಿಸಿ ನಿಧಾನ ಕಲಿಕೆ, ಸರಾಸರಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಭಿನ್ನ ತಂತ್ರಗಳನ್ನು ಅಳವಡಿಸಿರುವುದು ಈ ತಯಾರಿಯ ಪ್ರಮುಖ ವೈಶಿಷ್ಟ್ಯವಾಗಿದೆ.

ಪೂರ್ವ ಸಿದ್ಧತಾ ಪರೀಕ್ಷೆಗಳು–1, 2 ಹಾಗೂ 3, ಇಲಾಖೆಯಿಂದ ಗುರುತಿಸಲಾದ ನಾಲ್ಕು ಮಾದರಿಯ ಪ್ರಶ್ನೆ ಪತ್ರಿಕೆಗಳು, 29 ಅಂಶಗಳ ಅನುಷ್ಠಾನ, ನಿರಂತರ ಮೌಲ್ಯಮಾಪನ, ಫೋನ್–ಇನ್ ಕಾರ್ಯಕ್ರಮಗಳು, ವಿಷಯವಾರು ಮಾರ್ಗದರ್ಶನ ಹಾಗೂ ಶಿಕ್ಷಕರ ಶೈಕ್ಷಣಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಪರೀಕ್ಷಾ ತಯಾರಿಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ಶಿಕ್ಷಕರು, ಮುಖ್ಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಬಿಆರ್‌ಪಿ–ಸಿಆರ್‌ಪಿ, ಎಸ್‌ಡಿಎಂಸಿ ಹಾಗೂ ಪಾಲಕರ ಸಮನ್ವಯದೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಅಧ್ಯಯನಾಸಕ್ತಿ ಬೆಳೆಸುವ ಪ್ರಯತ್ನಗಳು ಯಶಸ್ವಿಯಾಗಿ ಸಾಗುತ್ತಿವೆ. `ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತಂತ ಎಲ್ಲಾ ಅಭ್ಯರ್ಥಿಗಳು ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಗುರಿ ಹೊಂದಲಿ’ ಎಂಬ ಧ್ಯೇಯದೊಂದಿಗೆ ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ಬೂಸ್ಟರ್ ಪರೀಕ್ಷೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಈಗಾಗಲೇ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 23ರಿಂದ 28ರವರೆಗೆ ನಡೆಯಲಿದೆ. ಈ ವರ್ಷ ವಿಷಯವಾರು ನೀಲನಕ್ಷೆ (ಬ್ಲೂಪ್ರಿಂಟ್) ನೀಡಿರುವುದು ಮತ್ತೊಂದು ವಿಶೇಷವಾಗಿದೆ.

ಯಾವ ಪಠ್ಯದಿಂದ ಎಷ್ಟು ಅಂಕಗಳಿಗೆ ಪ್ರಶ್ನೆಗಳು ಬರುತ್ತವೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದ್ದು, ಅದರ ಆಧಾರದಲ್ಲಿ ಅಧ್ಯಯನ ಮಾಡಿದರೆ ವಾರ್ಷಿಕ ಪರೀಕ್ಷೆಗೆ ಉತ್ತಮ ಸಿದ್ಧತೆ ಸಾಧ್ಯವಾಗಲಿದೆ. ಹಳೆಯ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನವು ಪರೀಕ್ಷೆಯ ಮೇಲಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಶಾಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಜೊತೆಗೆ ಸ್ವತಃ ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಉಪಯುಕ್ತವಾಗಿದೆ. ಅಣುಕು ಪರೀಕ್ಷೆಗಳ ಮೂಲಕ ಉತ್ತರ ಬರವಣಿಗೆಯ ಕೌಶಲ್ಯ, ಸಮಯ ನಿರ್ವಹಣೆ ಹಾಗೂ ಸ್ವಮೌಲ್ಯಮಾಪನಕ್ಕೆ ಅವಕಾಶ ದೊರೆಯುತ್ತದೆ.

ಇದೀಗ ಪರೀಕ್ಷೆಗೆ ಕಡಿಮೆ ಸಮಯ ಉಳಿದಿರುವುದರಿಂದ ವಿದ್ಯಾರ್ಥಿಗಳು ಇರುವ ಸಮಯವನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕಿದೆ. ವಿಶೇಷವಾಗಿ ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಒಟ್ಟಾರೆ ಫಲಿತಾಂಶವನ್ನು ಉತ್ತಮಗೊಳಿಸಬಹುದು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರುಡಿ ಹಾಗೂ ಡಯಟ್ ಪ್ರಾಂಶುಪಾಲ ಜಿ.ಎಂ. ಮುಂದಿನಮನಿ ಅವರ ಮಾರ್ಗದರ್ಶನದಲ್ಲಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 87ಕ್ಕೂ ಹೆಚ್ಚು ಓದುವ ಮನೆಗಳನ್ನು ನಿರ್ಮಿಸಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಿಧಾನ ಕಲಿಕೆಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯವಾಗಿದೆ.

ಗುಣಾತ್ಮಕ ಫಲಿತಾಂಶದತ್ತ ಜಿಲ್ಲೆಯ ಶಾಲೆಗಳ ಸಶಕ್ತ ಹೆಜ್ಜೆ ಗುಣಾತ್ಮಕ ಶಿಕ್ಷಣ ಹಾಗೂ ಶೇ. 100ರಷ್ಟು ಫಲಿತಾಂಶ ಸಾಧನೆಯ ಗುರಿಯೊಂದಿಗೆ ಜಿಲ್ಲೆಯಲ್ಲಿ ‘ಚಿಕಿತ್ಸಕ ವಿಧಾನದ ಕಲಿಕೆ’ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಒದಗಿಸಲಾದ ವಿಷಯವಾರು ಟ್ರ‍್ಯಾಕಿಂಗ್ ಶೀಟ್‌ಗಳನ್ನು ಬಳಸಿಕೊಂಡು ಪ್ರತಿ ಮಗುವನ್ನು ಮಗುವಾರು ಕಾಳಜಿಯಿಂದ ಟ್ರ‍್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.

ಈ ವ್ಯವಸ್ಥೆಯಡಿ, ಪ್ರತಿ ಮಗುವು ಕಲಿಯದ ಅಂಶಗಳನ್ನು ಗುರುತಿಸಿ, ಅವುಗಳ ಕುರಿತು ಅಗತ್ಯವಿದ್ದಲ್ಲಿ ಓದಿಸುವುದು, ಬೋಧಿಸುವುದು ಹಾಗೂ ಬೋಧನೆಯ ನಂತರ ಚಿಕ್ಕ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡಿ ತಕ್ಷಣವೇ ಹಿಮ್ಮಾಹಿತಿ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕಾ ಕೊರತೆಗಳನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಾಗಿದ್ದು, ಕಲಿಕೆಯಲ್ಲಿ ಸ್ಪಷ್ಟವಾದ ಪ್ರಗತಿ ಕಂಡುಬರುತ್ತಿದೆ.

ಜಿಲ್ಲೆಯಲ್ಲಿ ಪಾಲಕ–ಶಿಕ್ಷಕರ ಸಮನ್ವಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ‘ಬನ್ನಿ ಬನ್ನಿ ಶಾಲೆಗೆ’ ಎಂಬ ಘೋಷವಾಕ್ಯದೊಂದಿಗೆ ಪಾಲಕ–ಶಿಕ್ಷಕರ ಮಹಾಸಭೆಗಳನ್ನು ಆಯೋಜಿಸಲಾಗುತ್ತಿದೆ. ಇದೇ ಘೋಷಣೆಯೊಂದಿಗೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆಯುತ್ತಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ, ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗುಣಾತ್ಮಕ ಫಲಿತಾಂಶ ಸಾಧನೆಯಲ್ಲಿ ನಮ್ಮೆಲ್ಲರ ಪಾತ್ರ ಕುರಿತು ವಿಶೇಷ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಜಿಲ್ಲೆಯ ಶಾಲೆಗಳಲ್ಲಿ ಪರೀಕ್ಷೆಯನ್ನು ಒತ್ತಡದ ವಿಷಯವಲ್ಲದೆ, ಒಂದು ಹಬ್ಬದಂತೆ ಆಚರಿಸುವ ಸಂಸ್ಕೃತಿಯನ್ನು ಬೆಳೆಸಲಾಗುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದರಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ಕಡಿಮೆಯಾಗಿದ್ದು, ಆತ್ಮವಿಶ್ವಾಸ ಹೆಚ್ಚಾಗಿದೆ.

“ಬನ್ನಿ ಬದಲಾಗೋಣ, ಬದಲಿಸೋಣ, ಪ್ರಗತಿ ಸಾಧಿಸೋಣ” ಎಂಬ ಘೋಷವಾಕ್ಯದೊಂದಿಗೆ, ಅತ್ಯುತ್ತಮ ಫಲಿತಾಂಶ ನಮ್ಮದಾಗಲಿ ಎಂಬ ಆಶಾಭಾವನೆಯೊಂದಿಗೆ ಜಿಲ್ಲೆಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಪಾಲಕರು ಮತ್ತು ಆಡಳಿತ ವರ್ಗ ಒಟ್ಟಾಗಿ ಶ್ರಮಿಸುತ್ತಿದೆ. ಈ ಸಮಗ್ರ ಪ್ರಯತ್ನಗಳಿಂದಾಗಿ ಜಿಲ್ಲೆಯಲ್ಲಿ ಈ ವರ್ಷವೂ ಗುಣಾತ್ಮಕ ಹಾಗೂ ಮಾದರಿಯಾದ ಫಲಿತಾಂಶ ಕಾಣಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿ ವ್ಯವಸ್ಥಿತ ಹಾಗೂ ಫಲಿತಾಂಶೋನ್ಮುಖವಾಗಿದ್ದು, ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧನೆಯತ್ತ ಜಿಲ್ಲೆಯು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ.

– ಎಂ.ಎಚ್. ಸವದತ್ತಿ
ತಾಂತ್ರಿಕ ಸಹಾಯಕರು,
ಸಮಗ್ರ ಶಿಕ್ಷಣ ಕರ್ನಾಟಕ–ಗದಗ

ಬಟಾಣಿಗಳು ವರ್ಷ ಕಳೆದ್ರೂ ಕೆಡಬಾರದಾ? ಹಾಗಾದ್ರೆ ನೀವು ಈ ಕೆಲಸ ಮಾಡಿ ಸಾಕು! 100% ರಿಸಲ್ಟ್

0

ಅನೇಕ ಮಂದಿಗೆ ಹಸಿರು ಬಟಾಣಿ ತಿನ್ನಲು ಬಹಳ ಇಷ್ಟ. ವಿಶೇಷವಾಗಿ ಚಳಿಗಾಲದಲ್ಲಿ, ಬಟಾಣಿ ಸೀಸನ್ ಶುರುವಾಗುತ್ತದೆ ಮತ್ತು ಹಸಿರು ಬಟಾಣಿಗಳು ರುಚಿಕರವಾಗಿಯೂ, ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿರುತ್ತವೆ.

ಆದರೆ ಬಟಾಣಿಗಳನ್ನು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ತಾಜಾ ರೂಪದಲ್ಲಿ ದೊರಕುವುದು ಬಹಳ ಕಷ್ಟ, ಏಕೆಂದರೆ ಹಬ್ಬುಗಟ್ಟಿದ ಬಟಾಣಿಗಳ ರುಚಿ ನೈಸರ್ಗಿಕವಾಗಿರದು ಮತ್ತು ಅವುಗಳ ಬೆಲೆ ಹೆಚ್ಚಾಗಿರುತ್ತದೆ. ಬಟಾಣಿ ವರ್ಷವಿಡೀ ಮನೆಗಳಲ್ಲಿ ಫ್ರೆಶ್‌ ಆಗಿ ಉಪಯೋಗಿಸಲು, ಕೆಲ ಸರಳ ಹಂತಗಳನ್ನು ಅನುಸರಿಸಬಹುದಾಗಿದೆ. ಮೊದಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಉಪ್ಪು ಮತ್ತು ಸಕ್ಕರೆ ಹಾಕಬೇಕು. ನೀರು ಚೆನ್ನಾಗಿ ಕುದಿಯಲು ಪ್ರಾರಂಭಿಸಿದಾಗ ಬಟಾಣಿಗಳನ್ನು ಹಾಕಿ ಸುಮಾರು 5 ನಿಮಿಷ ಬೇಯಿಸಿ. ನಂತರ, ಬಟಾಣಿಗಳನ್ನು ತಣ್ಣನೆಯ ಐಸ್ ನೀರಿನಲ್ಲಿ ಹಾಕಿ.

ಇದರಿಂದ ಬಟಾಣಿಗಳ ಹಸಿರು ಬಣ್ಣ ಮತ್ತು ರುಚಿ ನವೀನವಾಗಿರುತ್ತದೆ. ನೀರನ್ನು ಚೆನ್ನಾಗಿ ಹೊರಹಾಕಿ, ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ ಸಂಪೂರ್ಣ ಒಣಗುವಂತೆ ಬಿಡಬೇಕು. ಒಣಗಿದ ಬಟಾಣಿಗಳನ್ನು ಗಾಳಿಯಾಡದ ಡಬ್ಬ ಅಥವಾ ಪ್ಲಾಸ್ಟಿಕ್ ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿ ಸಂಗ್ರಹಿಸಿದರೆ, ರುಚಿ ಮತ್ತು ಪೌಷ್ಟಿಕಾಂಶ ವರ್ಷಪೂರ್ತಿ ಉಳಿಯುತ್ತದೆ. ಈ ಸರಳ ವಿಧಾನವನ್ನು ಅನುಸರಿಸುವ ಮೂಲಕ, ಬಟಾಣಿಗಳನ್ನು ಹಸಿರು, ರುಚಿಕರ ಸ್ವರೂಪದಲ್ಲಿ ಯಾವುದೇ ಸಮಯದಲ್ಲಿ ಬಳಸಬಹುದು ಮತ್ತು ಸೀಸನ್‌ನ ಬಟಾಣಿಗಳ ರುಚಿಯನ್ನು ವರ್ಷಪೂರ್ತಿ ಅನುಭವಿಸಬಹುದು.

ಮಕ್ಕಳ ವಿಷಯವಾರು ದೌರ್ಬಲ್ಯಗಳನ್ನು ವಿಶ್ಲೇಷಿಸಿ: ಡಾ. ಈಶ್ವರ ಉಳ್ಳಾಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ವಿಷಯವಾರು ದೌರ್ಬಲ್ಯಗಳನ್ನು ವಿಶ್ಲೇಷಿಸಿ, ಗುರಿ ನಿರ್ದಿಷ್ಟ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಗುರುವಾರ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ಗದಗ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಶೇಕಡಾವಾರು ಹೆಚ್ಚಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಶಾಲಾ ಮಟ್ಟದಲ್ಲಿ ನಿಯಮಿತ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕರೊಂದಿಗೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸಬೇಕು. ಶಿಕ್ಷಕರು ಸಮಯ ಪಾಲನೆ, ಬದ್ಧತೆ ಮತ್ತು ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಜಿಲ್ಲೆಯ ಪ್ರತಿಯೊಂದು ಶಾಲೆಯೂ ಫಲಿತಾಂಶ ಸುಧಾರಣೆಗೆ ಸಮಗ್ರ ಪ್ರಯತ್ನ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಧಾರವಾಡ) ಅಪರ ಆಯುಕ್ತರ ಕಚೇರಿ ನಿರ್ದೇಶಕರಾದ ಈಶ್ವರ ನಾಯಕ, ಡಯಟ್ ಪ್ರಾಚಾರ್ಯ ಜಿ.ಎಂ. ಮುಂದಿನಮನಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು, ಸಮನ್ವಯಾಧಿಕಾರಿಗಳು, ಡಯಟ್ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.

ಸಂವಾದದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.

ಮುಖ್ಯಾಂಶಗಳು

• ಗದಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕುರಿತು ಮುಖ್ಯ ಶಿಕ್ಷಕರೊಂದಿಗೆ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಸಂವಾದ.

• ಫಲಿತಾಂಶ ಹೆಚ್ಚಿಸುವುದು ಶಿಕ್ಷಕರ ಸಮೂಹ ಜವಾಬ್ದಾರಿ.

• ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ರಿಮಿಡಿಯಲ್ ತರಗತಿಗಳ ಆಯೋಜನೆ.

• ವಿಷಯವಾರು ಗುರಿ ನಿಗದಿ ಮಾಡಿ ನಿಯಮಿತ ಅಭ್ಯಾಸ ಪರೀಕ್ಷೆ ನಡೆಸಲು ಸೂಚನೆ.

• ಉತ್ತರ ಪತ್ರಿಕೆ ವಿಶ್ಲೇಷಣೆ ಮೂಲಕ ವಿದ್ಯಾರ್ಥಿಗಳ ತಪ್ಪು ಸರಿಗಳನ್ನು ಸರಿಪಡಿಸುವ ಕ್ರಮ.

• ಹಾಜರಾತಿ ಹೆಚ್ಚಿಸಲು ಪೋಷಕರೊಂದಿಗೆ ನಿರಂತರ ಸಂಪರ್ಕ.

• ಡಿಜಿಟಲ್ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳ ಪರಿಣಾಮಕಾರಿ ಬಳಕೆ, ಪ್ರತಿಯೊಂದು ಶಾಲೆಯೂ ಫಲಿತಾಂಶ ಆಧಾರಿತ ಕಾರ್ಯಯೋಜನೆ ರೂಪಿಸಲು ನಿರ್ದೇಶನ.

error: Content is protected !!