Home Blog Page 5

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಅಟ್ಟಹಾಸ; ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಗ್ರೇಟ್‌ ಎಸ್ಕೇಪ್

ಚಾಮರಾಜನಗರ: ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯಲ್ಲಿ ಚಿರತೆ ದಾಳಿಗಳು ಮರುಕಳಿಸುತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆಯ ಕಾರ್ಯವೈಖರಿಯ ವಿರುದ್ಧ ಆದಿವಾಸಿ ಸೋಲಿಗ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆನೆಹೊಲ ಹಾಡಿಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆಯ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸ್ಥಳೀಯರ ಪ್ರಕಾರ, ಬೇರೆ ಪ್ರದೇಶಗಳಲ್ಲಿ ಸೆರೆಹಿಡಿಯಲಾಗುವ ಚಿರತೆಗಳನ್ನು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಹಾಗೂ ಪೊನ್ನಾಚಿ ಕಾಡು ಪ್ರದೇಶಗಳಲ್ಲಿ ಮತ್ತೆ ಬಿಡಲಾಗುತ್ತಿದೆ. ಇದರಿಂದ ಹಾಡಿಗಳ ಸುತ್ತಮುತ್ತ ಚಿರತೆಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರು ಹಾಗೂ ಜಾನುವಾರುಗಳ ಜೀವಕ್ಕೆ ನಿರಂತರ ಅಪಾಯ ಎದುರಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿಂದೆ ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಕನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ ಬಳಿಕ ಮತ್ತೆ ಇದೇ ಕಾಡು ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ನಂತರವೂ ಹಸು, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಮೇಲೆ ಪದೇಪದೆ ದಾಳಿಗಳು ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇತ್ತೀಚೆಗೆ ಪೊನ್ನಾಚಿ ಸಮೀಪದ ಕಕ್ಕೆಹೊಲ ಗ್ರಾಮದಲ್ಲಿ ಅಳವಡಿಸಿದ್ದ ಪಂಜರಕ್ಕೆ ಬಿದ್ದ ಚಿರತೆಯ ಕತ್ತಿನಲ್ಲೂ ಕಾಲರ್ ಐಡಿ ಪತ್ತೆಯಾಗಿರುವುದು ಜನರ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ. ಈಗಾಗಲೇ ಚಿರತೆ ದಾಳಿಗಳಿಂದ ಭಯಭೀತರಾಗಿರುವ ಸೋಲಿಗರು, ಕಾಡುಪ್ರಾಣಿಗಳ ನಿರ್ವಹಣೆಯಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಘಟನೆಗಳ ಸರಣಿಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಕಾಡಂಚಿನ ಹಾಡಿಗಳ ಸುರಕ್ಷತೆಗೆ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತ: ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ದುರ್ಮರಣ

ರಾಯಚೂರು: ಮೊಹರಂ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

ಮೃತರನ್ನು ರೇಣುಕಾರಾಜ (38) ಎಂದು ಗುರುತಿಸಲಾಗಿದೆ. ಅವರು ದೇವದುರ್ಗ ಡಿಎಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಿಪಿಐ ಅವರ ವಾಹನ ಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಮೊಹರಂ ಹಬ್ಬದ ಭದ್ರತಾ ಬಂದೋಬಸ್ತ್ ಹಿನ್ನೆಲೆಯಲ್ಲಿ ಮದರಕಲ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಜೀಪ್ ಚಾಲನೆ ಮಾಡುತ್ತಿದ್ದ ರೇಣುಕಾರಾಜ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಖಾಸಗಿ ಕಾರಿನ ಮೂಲಕ ದೇವದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ರೇಣುಕಾರಾಜ ಅವರು ಲಿಂಗಸುಗೂರು ತಾಲೂಕಿನ ಅಮದಿಹಾಳ ಗ್ರಾಮದವರಾಗಿದ್ದು, 2008ನೇ ಬ್ಯಾಚ್‌ನ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಹಲವು ವರ್ಷಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಪೊಲೀಸ್ ಇಲಾಖೆಯಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.

ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಬಹಿರಂಗ: ರಾಮ ಮಂದಿರವನ್ನು ಸ್ಫೋಟಿಸಲು ಸಂಚು

0

ದಾವಣಗೆರೆ: ಸಾಮಾನ್ಯ ಕಾರ್ಮಿಕನ ಸೋಗಿನಲ್ಲಿ ಹರಿಹರದಲ್ಲಿ ಅಡಗಿದ್ದ ಉತ್ತರ ಪ್ರದೇಶ ಮೂಲದ ಯುವಕನ ಬಂಧನವು ಭದ್ರತಾ ಸಂಸ್ಥೆಗಳನ್ನು ಎಚ್ಚರಗೊಳಿಸಿದೆ. ಸುಹೇಲ್ ಎಂಬ 20 ವರ್ಷದ ಶಂಕಿತನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ.

ಹರಿಹರ ಸಮೀಪದ ಕೈಗಾರಿಕಾ ವಲಯದ ಫ್ಯಾಕ್ಟರಿಯೊಂದರಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ತನ್ನ ನಿಜವಾದ ಚಟುವಟಿಕೆಗಳನ್ನು ಮುಚ್ಚಿಟ್ಟಿದ್ದಾನೆ ಎಂಬ ಅನುಮಾನಗಳ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡಿದ್ದ ವಿಚಾರ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿ ಪರಿಶೀಲಿಸಿದಾಗ ಪಾಕಿಸ್ತಾನ ಮೂಲದ ಸಂಪರ್ಕ ಸಂಖ್ಯೆಗಳು, ಅನುಮಾನಾಸ್ಪದ ಆನ್‌ಲೈನ್ ಜಾಲಗಳ ಸಂಪರ್ಕ ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ‘MEMON & JUTTU-333’ ಹಾಗೂ ‘RANABHAI-333’ ಹೆಸರಿನ ಗುಂಪುಗಳೊಂದಿಗೆ ಈತನ ಸಂಪರ್ಕವಿದ್ದ ಬಗ್ಗೆ ತನಿಖೆಯಲ್ಲಿ ಉಲ್ಲೇಖವಾಗಿದೆ.

ಇದಲ್ಲದೆ, ಆಯುಧಗಳನ್ನು ಹಿಡಿದು ತೆಗೆಸಿಕೊಂಡಿದ್ದ ಹಲವು ಚಿತ್ರಗಳು, ಸಂದೇಶಗಳು ಮತ್ತು ಸಂವಹನ ದಾಖಲೆಗಳು ತನಿಖಾ ಸಂಸ್ಥೆಗಳ ಕೈ ಸೇರಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಜಾಲದ ಭಾಗವಾಗಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಉಗ್ರ ಸಂಘಟನೆಗಳು, ವಿದೇಶಿ ಸಂಪರ್ಕಗಳು ಮತ್ತು ಸ್ಥಳೀಯ ನೆರವು ಜಾಲದ ಕುರಿತು ತನಿಖೆ ಮುಂದುವರಿದಿದೆ.

‘ಎಲ್ಲದಕ್ಕೂ ಮೌಲ್ಯ ತರುವ ವ್ಯಕ್ತಿ’: ವಿಜಯ್‌ ಜೊತೆಗಿನ ಫೋಟೋ ಶೇರ್‌ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ತ್ರಿಶಾ

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಸ್ನೇಹದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ನಟಿ ತ್ರಿಶಾ ಸ್ವತಃ ಉತ್ತರ ನೀಡಿದ್ದಾರೆ. ವಿಜಯ್ ಹುಟ್ಟುಹಬ್ಬದ ಬಳಿಕ ತಡವಾಗಿ ಹಂಚಿಕೊಂಡಿರುವ ವಿಶೇಷ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಕಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜೂನ್ 22ರಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಂಡ ವಿಜಯ್ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದರು. ಆದರೆ ಪ್ರತಿ ವರ್ಷದಂತೆ ತ್ರಿಶಾ ಯಾವುದೇ ಪೋಸ್ಟ್ ಮಾಡದಿದ್ದ ಕಾರಣ, ಇಬ್ಬರ ನಡುವೆ ಅಂತರ ಮೂಡಿದೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅಷ್ಟೇ ಅಲ್ಲದೆ, ತ್ರಿಶಾ ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿಯೂ ವೈರಲ್ ಆಗಿತ್ತು.

ಈ ಎಲ್ಲ ಚರ್ಚೆಗಳ ನಡುವೆ ತ್ರಿಶಾ ಹಂಚಿಕೊಂಡಿರುವ ಹೊಸ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ವಿಜಯ್ ಜೊತೆ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಅವರು, “ಎಲ್ಲದಕ್ಕೂ ಒಂದು ಮೌಲ್ಯ ತಂದುಕೊಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪ್ರೀತಿಪೂರ್ವಕವಾಗಿ ಶುಭ ಕೋರಿದ್ದಾರೆ.

ಈ ಪೋಸ್ಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ಇಬ್ಬರ ನಡುವಿನ ಸ್ನೇಹದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ. ವಿಜಯ್ ಮತ್ತು ತ್ರಿಶಾ ಜೋಡಿ ‘ಗಿಲ್ಲಿ’, ‘ತಿರುಪಾಚಿ’, ‘ಆತಿ’, ‘ಕುರುವಿ’ ಹಾಗೂ ‘ಲಿಯೋ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಇವರ ವೈಯಕ್ತಿಕ ಸಂಬಂಧದ ಬಗ್ಗೆ ಹಲವು ವದಂತಿಗಳು ಹರಿದಾಡಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡದಿದ್ದ ಇಬ್ಬರೂ ಇದೀಗ ಈ ಒಂದು ಪೋಸ್ಟ್ ಮೂಲಕ ತಮ್ಮ ಸ್ನೇಹ ಇನ್ನೂ ಗಟ್ಟಿಯಾಗಿಯೇ ಇದೆ ಎಂಬ ಸಂದೇಶ ನೀಡಿದ್ದಾರೆ.

“‘ಐಟಂ ಸಾಂಗ್’ ಪದವೇ ಮಹಿಳೆಯರನ್ನು ವಸ್ತುವಾಗಿ ನೋಡುತ್ತದೆ: ನಟಿ ತಮನ್ನಾ ಆಕ್ರೋಶ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಬಗ್ಗೆ ಇರುವ ದೃಷ್ಟಿಕೋನದ ವಿರುದ್ಧ ನಟಿ ತಮನ್ನಾ ಭಾಟಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಮಹಿಳಾ ನಟಿಯರನ್ನು ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತಗೊಳಿಸುವ ಮನಸ್ಥಿತಿ ಇನ್ನೂ ಜೀವಂತವಾಗಿದೆ ಎಂದು ಹೇಳಿದ್ದಾರೆ.

ಚಿತ್ರರಂಗದ ಅನುಭವಗಳನ್ನು ಹಂಚಿಕೊಂಡ ತಮನ್ನಾ, ಬಾಲಿವುಡ್‌ನಲ್ಲಿ ಮಹಿಳೆಯರಿಗೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಅವಕಾಶಗಳು ಹೆಚ್ಚಿವೆ. ಅಲ್ಲಿನ ವೃತ್ತಿಪರ ವಾತಾವರಣ ಮಹಿಳಾ ಕಲಾವಿದರ ಸಾಮರ್ಥ್ಯಕ್ಕೆ ಹೆಚ್ಚಿನ ಮಾನ್ಯತೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಆದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನದಲ್ಲಿ ಇನ್ನೂ ಬದಲಾವಣೆ ಅಗತ್ಯವಿದೆ ಎಂದು ಅವರು ಹೇಳಿದರು. ಪಿತೃಪ್ರಧಾನ ಮನೋಭಾವ ಹಲವು ಸಂದರ್ಭಗಳಲ್ಲಿ ಮಹಿಳಾ ಕಲಾವಿದರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಲಾವಿದೆಯರನ್ನು ಗೌರವಿಸುವ ಬದಲು ಅವರನ್ನು ಕೇವಲ ಆಕರ್ಷಣೆಯ ಕೇಂದ್ರವಾಗಿ ನೋಡುವ ಪ್ರವೃತ್ತಿ ಕಾಣಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಐಟಂ ಸಾಂಗ್’ ಎಂಬ ಪದದ ಬಗ್ಗೆ ಮಾತನಾಡಿದ ಅವರು, ಈ ಪದ ಮಹಿಳಾ ಕಲಾವಿದೆಯರನ್ನು ಒಂದು ವಸ್ತುವಿನಂತೆ ಚಿತ್ರಿಸುತ್ತದೆ. ಆದರೆ ಆ ಪ್ರದರ್ಶನದ ಹಿಂದೆ ಇರುವ ಪ್ರತಿಭೆ, ಪರಿಶ್ರಮ ಮತ್ತು ವೃತ್ತಿಪರತೆಯನ್ನು ಮರೆಮಾಚುತ್ತದೆ. ಇಂತಹ ಹಾಡುಗಳಲ್ಲಿ ನಟಿಸುವುದು ತಮ್ಮ ವೈಯಕ್ತಿಕ ಆಯ್ಕೆ ಆಗಿದ್ದು, ಅದನ್ನು ಮಹಿಳೆಯರ ಮೌಲ್ಯಕ್ಕೆ ವಿರುದ್ಧವಾಗಿ ವ್ಯಾಖ್ಯಾನಿಸಬಾರದು ಎಂದು ಹೇಳಿದರು.

ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ, ಸಮಾನತೆ ಮತ್ತು ಗೌರವ ಕುರಿತ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ತಮನ್ನಾ ಅವರ ಈ ಹೇಳಿಕೆಗಳು ದಕ್ಷಿಣ ಚಿತ್ರರಂಗದ ಕಾರ್ಯಸಂಸ್ಕೃತಿ ಮತ್ತು ಮಹಿಳೆಯರ ಸ್ಥಾನಮಾನ ಕುರಿತ ಹೊಸ ಚರ್ಚೆಗೆ ನಾಂದಿ ಹಾಡಿವೆ.

ಗೌರಿ ಸ್ಪ್ರಾಟ್ ಜತೆ ಮೂರನೇ ಮದುವೆ? ಖಾಸಗಿ ಜೀವನದ ಚರ್ಚೆಗಳಿಗೆ ಆಮಿರ್ ಖಾನ್ ಖಡಕ್ ಪ್ರತಿಕ್ರಿಯೆ

ಜುಲೈ 5ರಂದು ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ನಟ ಆಮಿರ್ ಖಾನ್ ತಮ್ಮ ಮದುವೆ ಹಾಗೂ ಖಾಸಗಿ ಬದುಕಿನ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳಿಗೆ ನೇರ ಉತ್ತರ ನೀಡಿದ್ದಾರೆ.

ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಕಂಡುಬರುವ ಅತಿಯಾದ ಕುತೂಹಲವನ್ನು ಪ್ರಶ್ನಿಸಿದ್ದಾರೆ. “ಜನರು ಕಲಾವಿದರ ಖಾಸಗಿ ಬದುಕಿಗಿಂತ ಅವರ ಕೆಲಸ ಮತ್ತು ಸೃಜನಶೀಲತೆಯ ಬಗ್ಗೆ ಆಸಕ್ತಿ ತೋರಬೇಕು” ಎಂದು ಹೇಳಿದ್ದಾರೆ.

ಮದುವೆ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ ಆಮಿರ್, ಯಾವುದೇ ಭರ್ಜರಿ ಸಮಾರಂಭ ಅಥವಾ ವೈಭವದ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೋಂದಾಯಿತ ವಿವಾಹ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಆಮಿರ್ ಖಾನ್ ಅವರ ವೈವಾಹಿಕ ಜೀವನ ಈಗಾಗಲೇ ಎರಡು ಅಧ್ಯಾಯಗಳನ್ನು ಕಂಡಿದೆ. ಮೊದಲ ಪತ್ನಿ ರೀನಾ ದತ್ತಾ ಅವರೊಂದಿಗೆ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದ ಅವರು, ಒಬ್ಬ ಮಗನ ತಂದೆಯಾಗಿದ್ದಾರೆ. ಬಳಿಕ ವಿಚ್ಛೇದನ ಪಡೆದಿದ್ದರೂ ಇಬ್ಬರು ಮಾಜಿ ಪತ್ನಿಯರೊಂದಿಗೆ ಸ್ನೇಹಪೂರ್ವಕ ಸಂಬಂಧ ಉಳಿಸಿಕೊಂಡಿದ್ದಾರೆ.

ಈಗ ಗೌರಿ ಸ್ಪ್ರಾಟ್ ಅವರೊಂದಿಗೆ ಹೊಸ ಜೀವನ ಆರಂಭಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಆಮಿರ್ ಅವರ ಪ್ರತಿಕ್ರಿಯೆ ವದಂತಿಗಳಿಗೆ ಹೊಸ ತಿರುವು ನೀಡಿದೆ.

ಬೆಂಗಳೂರಿನಲ್ಲಿ ತ್ರಿವಳಿ ಹತ್ಯೆ ಕೇಸ್: ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾ ಪುದುಚೇರಿಯಲ್ಲಿ ಅರೆಸ್ಟ್!

0

ಬೆಂಗಳೂರು: ಕೆಆರ್ ಪುರಂನಲ್ಲಿ ನಡೆದಿದ್ದ ತ್ರಿವಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶ್ವೇತಾಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಆಕೆಯ ಪ್ರಿಯಕರ ಕೆನತ್‌ಗಾಗಿ ವಿಶೇಷ ತಂಡಗಳು ಶೋಧ ಮುಂದುವರಿಸಿವೆ.

ಪೋಷಕರು ಹಾಗೂ ತಂಗಿಯನ್ನು ಹತ್ಯೆ ಮಾಡಿದ ಬಳಿಕ ಶ್ವೇತಾ ಮತ್ತು ಕೆನತ್ ಪರಾರಿಯಾಗಿದ್ದರು. ಇವರ ಪತ್ತೆಗಾಗಿ ವೈಟ್‌ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವು.

ಆರೋಪಿಗಳ ನಿವಾಸದಲ್ಲಿ ಪರಿಶೀಲನೆ ನಡೆಸಿದ ವೇಳೆ ಶ್ವೇತಾ ಬರೆದಿದ್ದ ವೈಯಕ್ತಿಕ ಡೈರಿ ಪೊಲೀಸರಿಗೆ ಪತ್ತೆಯಾಗಿದೆ. ಡೈರಿಯಲ್ಲಿ “I am sad”, “I am lonely”, “Feeling loved”, “I am depressed”, “I am superior” ಸೇರಿದಂತೆ ಆಕೆಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಹಲವು ಬರಹಗಳು ಕಂಡುಬಂದಿವೆ. ಡೈರಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಮತ್ತು ಇತರೆ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಶ್ವೇತಾ ಮತ್ತು ಕೆನತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿ ಬಳಿಕ ಪ್ರೀತಿಸುತ್ತಿದ್ದರು. ಶಿಕ್ಷಣ ಮುಗಿದ ನಂತರ ಉದ್ಯೋಗಕ್ಕೆ ಸೇರಿದ್ದ ಇಬ್ಬರೂ ಬಳಿಕ ಕೆಲಸ ತೊರೆದು ಸ್ವಂತ ಉದ್ಯಮ ಆರಂಭಿಸುವ ಉದ್ದೇಶದಿಂದ ಶ್ವೇತಾಳ ಪೋಷಕರ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಿಂದ ಸುಮಾರು ₹30 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.

ಸಾಲದ ಕಂತು ಹಾಗೂ ಬಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ನೋಟಿಸ್ ಬಂದಾಗಲೇ ಈ ವಿಚಾರ ಶ್ವೇತಾಳ ಪೋಷಕರಿಗೆ ತಿಳಿದಿದ್ದು, ಅವರು ಪ್ರಶ್ನೆ ಮಾಡಿದಾಗ ಕುಟುಂಬದಲ್ಲಿ ತೀವ್ರ ಕಲಹ ಉಂಟಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೋಷಕರ ವಿರೋಧ ಹಾಗೂ ಇತರೆ ವೈಯಕ್ತಿಕ ಕಾರಣಗಳಿಂದ ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದಿದ್ದು, ಅದರ ವೇಳೆ ಶ್ವೇತಾ ಮತ್ತು ಕೆನತ್ ಸೇರಿ ತಂದೆ, ತಾಯಿ ಹಾಗೂ ತಂಗಿಗೆ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ಬಂಧಿತೆಯಾಗಿರುವ ಶ್ವೇತಾಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪರಾರಿಯಾಗಿರುವ ಕೆನತ್‌ನ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಸುಬ್ಬರೆಡ್ಡಿ ಸ್ಮರಣಾರ್ಥ ಕ್ರೀಡಾಕೂಟಕ್ಕೆ ಚಾಲನೆ: ಮರಬ್ಬಿಹಾಳದಲ್ಲಿ ಮಾಜಿ ಶಾಸಕ ಎಸ್. ಭೀಮನಾಯ್ಕರಿಂದ ಉದ್ಘಾಟನೆ

0

ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಬ್ಬಿಹಾಳ ಗ್ರಾಮದಲ್ಲಿ ಲಕ್ಷ್ಮಿ ಪೌಲ್ಟ್ರಿ ಫಾರಂ ಮಾಲೀಕರಾಗಿದ್ದ ದಿವಂಗತ ಸುಬ್ಬರೆಡ್ಡಿ ಅವರ ಸ್ಮರಣಾರ್ಥ ಅಪ್ಪು ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಎಸ್. ಭೀಮನಾಯ್ಕ ನಾಣ್ಯ ತೂರುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದಿವಂಗತ ಸುಬ್ಬರೆಡ್ಡಿ ಅವರು ಸಮಾಜದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದರು. ಅವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಯುವಕರು ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಸುಬ್ಬರೆಡ್ಡಿ ಅವರ ಆದರ್ಶಗಳು, ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವ ಯುವಜನತೆಗೆ ಸದಾ ಪ್ರೇರಣೆಯಾಗಲಿ. ಕ್ರೀಡೆಗಳು ಯುವಕರಲ್ಲಿ ಶಿಸ್ತು, ನಾಯಕತ್ವ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಭೀಮನಾಯ್ಕ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಬಾಲಕೃಷ್ಣ ಬಾಬು, ಉಮಾಪತಿ ಸ್ವಾಮಿ, ಸಿಕಂದರ್, ಬಾಲಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕ್ರೀಡೆಗಳು ಯುವಕರನ್ನು ಆರೋಗ್ಯವಂತರನ್ನಾಗಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ. ದಿ. ಸುಬ್ಬರೆಡ್ಡಿ ಅವರ ನೆನಪಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿ ಯುವಕರಿಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಶಾಸಕರಾದ ಎಸ್. ಭೀಮನಾಯ್ಕ ಹೇಳಿದ್ದಾರೆ.

ಇಂದು ಬೆಂಗಳೂರಿಗೆ ಸಿಎಂ ಯೋಗಿ ಆದಿತ್ಯನಾಥ್: ಹೂಡಿಕೆದಾರರ ರೋಡ್ ಶೋನಲ್ಲಿ ಭಾಗಿ

ಬೆಂಗಳೂರು: ಉತ್ತರ ಪ್ರದೇಶವನ್ನು ದೇಶದ ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹೂಡಿಕೆದಾರರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ‘ಉತ್ತರ ಪ್ರದೇಶ ಗ್ಲೋಬಲ್ ಗ್ರೋತ್ ಡೈಲಾಗ್ 2026’ ಅಡಿಯಲ್ಲಿ ಇಂದು ಬೆಂಗಳೂರಿನಲ್ಲಿ ಹೂಡಿಕೆದಾರರ ರೋಡ್‌ಶೋ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆ ವಹಿಸಲಿದ್ದು, ದೇಶದ ಹಲವು ಪ್ರಮುಖ ಕೈಗಾರಿಕೋದ್ಯಮಿಗಳು ಹಾಗೂ ಉದ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿ, ಉದ್ಯಮ ಸ್ನೇಹಿ ವಾತಾವರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.

ರೋಡ್‌ಶೋದಲ್ಲಿ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಐಟಿ ಆಧಾರಿತ ಸೇವೆಗಳು (ITeS), ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಹಾಗೂ ವಿದೇಶಿ ನೇರ ಹೂಡಿಕೆ (FDI) ಕುರಿತಂತೆ ಮೂರು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ.

ಈ ಅಧಿವೇಶನಗಳಲ್ಲಿ ವಿವಿಧ ವಲಯಗಳ ಉದ್ಯಮಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಉತ್ತರ ಪ್ರದೇಶದಲ್ಲಿನ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳನ್ನು ಪರಿಚಯಿಸುವ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತದೆ.

ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉದ್ಯಮ ವಲಯದೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ.

ವೃದ್ಧ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊಲೆ ಅಲ್ಲ, ಪತ್ನಿಯ ಸಾವಿಗೆ ನೊಂದು ಪತಿ ಆತ್ಮಹತ್ಯೆ

0

ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ವೃದ್ಧ ದಂಪತಿ ಮೃತದೇಹಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಆರಂಭದಲ್ಲಿ ಕೊಲೆ-ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ಹೊಸ ಸತ್ಯವನ್ನು ಬಹಿರಂಗಪಡಿಸಿದೆ.

ವೈದ್ಯಕೀಯ ವರದಿ ಪ್ರಕಾರ, 77 ವರ್ಷದ ಸುಮಿತ್ರಾ ಪ್ರಸಾದ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪತ್ನಿಯ ಸಾವಿನ ಆಘಾತವನ್ನು ತಾಳಲಾರದೆ 83 ವರ್ಷದ ಪತಿ ಶಿವಾನಂದಂ ಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೃಢಪಟ್ಟಿದೆ.

ಸಂಪಿಗೆಹಳ್ಳಿಯ ನಿವಾಸದಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾದ ಬಳಿಕ, ಅವರ ಪುತ್ರ ಕಿರಣ್ ಕುಮಾರ್ ಕಶ್ಯಪ್ ಅವರು ತಂದೆಯೇ ತಾಯಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಶವಪರೀಕ್ಷೆ ನಡೆಸಿದ ವೈದ್ಯರು, ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಅವರಿಗೆ ತೀವ್ರ ಹೃದಯಾಘಾತವಾಗಿದ್ದೇ ಸಾವಿಗೆ ಕಾರಣ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ವರದಿಯ ಪ್ರಕಾರ, ಮೊದಲು ಸುಮಿತ್ರಾ ಪ್ರಸಾದ್ ಮೃತಪಟ್ಟಿದ್ದು, ಹಲವು ಗಂಟೆಗಳ ಬಳಿಕ ಶಿವಾನಂದಂ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಸುಮಿತ್ರಾ ಪ್ರಸಾದ್ ಅವರು ದೃಷ್ಟಿ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದರು. ಶಿವಾನಂದಂ ಪ್ರಸಾದ್ ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿದ್ದವು. ಪತ್ನಿಯ ಹಠಾತ್ ಸಾವಿನಿಂದ ಮನನೊಂದ ಅವರು, ಏಕಾಂಗಿತನ ಹಾಗೂ ಆಘಾತದಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೂಲತಃ ಬಿಹಾರದವರಾದ ಈ ದಂಪತಿ ಬೆಂಗಳೂರಿನ ಚೊಕ್ಕನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು. ಪ್ರಕರಣದ ಕುರಿತು ಪೊಲೀಸರು ವೈದ್ಯಕೀಯ ವರದಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ಮುಂದುವರಿಸಿದ್ದಾರೆ.

error: Content is protected !!