Home Blog Page 8

ಕೋರ್ಟ್ ಆದೇಶದ ಜಾರಿಗೆ ಬಸ್ ಸೀಜ್: ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಬಸ್‌ಗಳಿಗೆ ತಡೆ, ಪ್ರಯಾಣಿಕರ ಆಕ್ರೋಶ

0

ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕೋರ್ಟ್ ಆದೇಶದಂತೆ ಸೀಜ್‌ ಮಾಡಲಾಗಿದೆ. ಈ ಬಸ್‌ಗಳು ಬೆಂಗಳೂರಿನಿಂದ ಶೃಂಗೇರಿಗೆ ಹೊರಟ್ಟಿದ್ದವು.

ಅಪಘಾತ ಪ್ರಕರಣದಲ್ಲಿ ಪರಿಹಾರ ಹಣವನ್ನು ಕ್ಲೈಮ್ ಮಾಡದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದ್ದು, ವಕೀಲರ ತಂಡ ಬಸ್‌ಗಳನ್ನು ತಡೆದು ಕೋರ್ಟ್ ಆವರಣಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ.

ಮಾರ್ಗ ಮಧ್ಯೆ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ದೂರ ಪ್ರಯಾಣದಲ್ಲಿದ್ದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ತೊಂದರೆ ಉಂಟಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಘಟನೆ ನಂತರ ಬಸ್‌ಗಳನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣದಲ್ಲಿ ನಿಲ್ಲಿಸಲಾಗಿದೆ. ಅಪಘಾತ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಕಾನೂನು ಗೊಂದಲದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗದಗನಲ್ಲಿ ಕಾಂಗ್ರೆಸ್ ಮುಖಂಡನ ಮನೆ ಬೀಗ ಮುರಿದು ಚಿನ್ನ-ಬೆಳ್ಳಿ-ನಗದು ದೋಚಿದ ಕಳ್ಳರು!

0

ಗದಗ: ನಗರದ ಹುಡ್ಕೋ ಕಾಲೋನಿಯಲ್ಲಿ ಮನೆ ಕಳ್ಳತನದ ಘಟನೆ ಸಂಭವಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಾಂಗ್ರೆಸ್ ಪಕ್ಷದ ಮುಖಂಡ ಸೋಮಪ್ಪ ಲಮಾಣಿ ಎಂಬುವರ ಮನೆಗೆ ರಾಡ್‌ನಿಂದ ಸೆಂಟರ್ ಲಾಕ್ ಮುರಿದು ನುಗ್ಗಿದ ಕಳ್ಳರು, ಸುಮಾರು 30 ಗ್ರಾಂ ಬಂಗಾರದ ಆಭರಣ, ಎರಡು ಕೆಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಕುಟುಂಬಸ್ಥರು ಮಗಳ ಭೇಟಿಗಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇಂದು ಬೆಂಗಳೂರಿನಿಂದ ಮನೆಗೆ ಮರಳಿದ ಕುಟುಂಬದವರು ಮನೆ ಬಾಗಿಲು ಒಡೆದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಒಳಗೆ ಹೋಗಿ ನೋಡಿದಾಗ ಬೀರು ಮತ್ತು ಗೋದ್ರೆಜ್ ಲಾಕರ್ ಮುರಿದು ಚಿನ್ನ, ಬೆಳ್ಳಿ, ನಗದು ದೋಚಿರುವುದು ಬೆಳಕಿಗೆ ಬಂದಿದೆ.

ಮನೆಯ ಯಜಮಾನಿ ಕಣ್ಣೀರು ಹಾಕುತ್ತಾ, “ಎಲ್ಲವೂ ದೋಚಿದ್ದಾರೆ. ಇನ್ನೂ ಒಳಗಡೆ ಸಂಪೂರ್ಣವಾಗಿ ನೋಡಿಲ್ಲ. ಇನ್ನೇನು ದೋಚಿದ್ದಾರೆ ಗೊತ್ತಿಲ್ಲ,” ಎಂದು ದುಃಖ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತಾಜ್ ಖಾದ್ರಿ, ಸಿಪಿಐ ಲಾಲಸಾಬ್ ಜೂಲಕಟ್ಟಿ ಹಾಗೂ ಪಿಎಸ್ಐ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾಗ್ ಸ್ಕ್ವಾಡ್ ಹಾಗೂ ಸೋಕೋ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್ ಶ್ವಾನ್ ‘ಚೇತಕ್’ ಕಳ್ಳರ ಹೆಜ್ಜೆ ಗುರುತು ಹಿಡಿದು ಸೂಚನೆ ನೀಡಿದ್ದು, ಅದರ ಆಧಾರದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹5,000 ಹಾಕಿದ ಡಿಎಂಕೆ ಸರ್ಕಾರ!

0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ M. K. Stalin ನೇತೃತ್ವದ Dravida Munnetra Kazhagam (ಡಿಎಂಕೆ) ಸರ್ಕಾರವು ‘ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ’ಯಡಿ ಮಹಿಳಾ ಫಲಾನುಭವಿಗಳಿಗೆ ಒಟ್ಟು ₹5,000 ಜಮಾ ಮಾಡಿರುವುದಾಗಿ ಘೋಷಿಸಿದೆ.

ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಿಗೆ ಮುಂಗಡವಾಗಿ ₹3,000 ಹಣ ನೀಡಲಾಗಿದ್ದು, ಬೇಸಿಗೆ ವಿಶೇಷ ಪ್ಯಾಕೇಜ್ ರೂಪದಲ್ಲಿ ಹೆಚ್ಚುವರಿ ₹2,000 ಜಮಾ ಮಾಡಲಾಗಿದೆ. ರಾಜ್ಯದಾದ್ಯಂತ ಸುಮಾರು 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಮೊತ್ತವನ್ನು ಜಮಾ ಮಾಡಲಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಸ್ಟಾಲಿನ್, ಚುನಾವಣೆಯನ್ನು ಉಲ್ಲೇಖಿಸಿ ಮಹಿಳಾ ಹಕ್ಕುಗಳ ಅನುದಾನವನ್ನು ಮೂರು ತಿಂಗಳ ಕಾಲ ತಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಸರ್ಕಾರ ಸಮಯಕ್ಕಿಂತ ಮುಂಚಿತವಾಗಿ ಹಣ ಜಮಾ ಮಾಡಿದ್ದು, ಯಾವುದೇ ಅಡಚಣೆ ಎದುರಾಗದಂತೆ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ‘ದ್ರಾವಿಡ ಮಾದರಿ 2.0’ ಅಡಿಯಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಸ್ತುತ ಇರುವ ₹1,000 ಮಾಸಿಕ ಸಹಾಯಧನವನ್ನು ₹2,000ಕ್ಕೆ ಹೆಚ್ಚಿಸಲಾಗುವುದು ಎಂದು ಸ್ಟಾಲಿನ್ ಭರವಸೆ ನೀಡಿದ್ದಾರೆ. ಇನ್ನೊಂದೆಡೆ, ಪ್ರತಿಪಕ್ಷವಾದ All India Anna Dravida Munnetra Kazhagam (ಎಐಎಡಿಎಂಕೆ) ಕೂಡ ಐದು ಚುನಾವಣಾ ಭರವಸೆಗಳನ್ನು ಪ್ರಕಟಿಸಿದೆ.

ಸಾಮಾಜಿಕ ಭದ್ರತಾ ಪಿಂಚಣಿಯನ್ನು ₹1,200ರಿಂದ ₹2,000ಕ್ಕೆ ಹೆಚ್ಚಿಸುವುದು, ಶಿಕ್ಷಣ ಸಾಲ ಮನ್ನಾ, ವರ್ಷಕ್ಕೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ, ಜಲ್ಲಿಕಟ್ಟು ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಬೆಂಬಲ ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವುದು ಪ್ರಮುಖ ಭರವಸೆಗಳಾಗಿವೆ. ಚುನಾವಣಾ ಹಿನ್ನಲೆಯಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷ ಪಕ್ಷಗಳು ವಿವಿಧ ಯೋಜನೆಗಳ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿವೆ.

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ನಾಲ್ವರ ವಿರುದ್ಧ ಎಫ್ ಐಆರ್

0

ತುಮಕೂರು: ಜಿಲ್ಲೆಯ ಗ್ರಾಮಾಂತರ ಪ್ರದೇಶದ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ದುರ್ಘಟನೆ ಶಿಕ್ಷಣ ವ್ಯವಸ್ಥೆಯ ಸುರಕ್ಷತೆ ಪ್ರಶ್ನಾರ್ಥಕವಾಗಿಸಿದೆ. ಫೆಬ್ರವರಿ 9ರಂದು ಮಧ್ಯಾಹ್ನದ ಬಿಸಿಯೂಟ ವೇಳೆ ಒಂದನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾಳೆ.

ಸಾಲಿನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟಿದ್ದಾಗ ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಂಭೀರ ಗಾಯವಾಗಿದ್ದರೂ ಕೂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಕೇವಲ ನೀರು ಸುರಿದು ಬ್ಯಾಂಡೇಜ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಾಲಕಿಯ ಪೋಷಕರು ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರನ್ನು ಪ್ರಶ್ನಿಸಿದಾಗ ನಿರ್ಲಕ್ಷ್ಯ ತೋರಲಾಗಿದ್ದು, 2000 ರೂಪಾಯಿ ಫೋನ್ ಪೇ ಮೂಲಕ ಕಳುಹಿಸಲಾಗಿದೆ ಎನ್ನುವ ವಿಷಯವೂ ಹೊರಬಂದಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಕಟ್ ಆದ ಬೆರಳುಗಳನ್ನು ತಂದುಕೊಟ್ಟರೆ ಮರುಜೋಡಣೆ ಸಾಧ್ಯವೆಂದು ಹೇಳಿದ್ದರೂ, ಅವು ಶಾಲೆಯಲ್ಲಿ ಲಭ್ಯವಿಲ್ಲವೆಂದು ತಿಳಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಈ ಹಿನ್ನೆಲೆಯಲ್ಲಿ ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ. ನ್ಯಾಯ ದೊರಕಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

 

ಬಿಡುಗಡೆಯಿಗೂ ಮುನ್ನವೇ ‘ಟಾಕ್ಸಿಕ್’ ಭರ್ಜರಿ ವ್ಯಾಪಾರ: ಆಂಧ್ರ–ತೆಲಂಗಾಣ ಹಕ್ಕುಗಳು 120 ಕೋಟಿಗೆ ಡೀಲ್!

ಇನ್ನೂ ಒಂದು ತಿಂಗಳಲ್ಲೇ ತೆರೆಗೆ ಬರಲಿರುವ ಯಶ್‌ ನಟನೆಯ ಟಾಕ್ಸಿಕ್ ಚಿತ್ರ ಈಗಾಗಲೇ ವ್ಯಾಪಾರ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳನ್ನು ದಿಲ್‌ ರಾಜು 120 ಕೋಟಿ ರೂಪಾಯಿಗೆ ಪಡೆದಿದ್ದಾರೆ ಎನ್ನುವ ಮಾಹಿತಿ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಒಪ್ಪಂದ ನಿಜವೇ ಅಥವಾ ಪ್ರಚಾರದ ಭಾಗವೇ ಎಂಬ ಪ್ರಶ್ನೆಗೆ ದಿಲ್ ರಾಜು ನೇರ ಉತ್ತರ ನೀಡಿದ್ದಾರೆ. “ಹಣ ವರ್ಗಾವಣೆ ಮಾಡಿದ ನಂತರ ಬ್ಯಾಂಕ್ ವಿವರ ತೋರಿಸುತ್ತೇನೆ, ಆಗ ಎಲ್ಲರೂ ನಂಬುತ್ತಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ಯಶ್‌ ನಾಯಕನಾಗಿ ಮತ್ತು ಕಿಯಾರಾ ಅಡ್ವಾಣಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಗೀತೂ  ಮೋಹನ್‌ ದಾಸ್‌ ನಿರ್ದೇಶಿಸಿದ್ದು, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ಹೊಣೆ ಹೊತ್ತಿದೆ.

ಪ್ಯಾನ್ ಭಾರತ ಮಟ್ಟದಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಬಿಡುಗಡೆಯ ನಂತರ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟದ ದಾಖಲೆ ನಿರ್ಮಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

T20 World Cup: ನಮೀಬಿಯಾ ವಿರುದ್ಧ 93 ರನ್ ಗಳ ಭರ್ಜರಿ ಜಯ – ಭಾರತಕ್ಕೆ ಸತತ ಎರಡನೇ ಗೆಲುವು!

0

ನವದೆಹಲಿ: 2026ರ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ 93 ರನ್‌ಗಳ ಭಾರಿ ಜಯ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಫೆಬ್ರವರಿ 12ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್‌ಗಳಲ್ಲಿ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ನಮೀಬಿಯಾ 116 ರನ್‌ಗಳಿಗೆ ಆಲೌಟ್ ಆಯಿತು.

ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಜೋಡಿ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ನೀಡಿತು. ಮೊದಲ 6 ಓವರ್‌ಗಳಲ್ಲಿ 86 ರನ್‌ಗಳನ್ನು ಸೇರಿಸಿದರು. ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 24 ಎಸೆತಗಳಲ್ಲಿ 61 ರನ್‌ಗಳಿಸಿ ಔಟಾದರು.

ಮಧ್ಯಮ ಕ್ರಮದಲ್ಲಿ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್‌ಗಳ ದಿಟ್ಟ ಇನ್ನಿಂಗ್ಸ್ ಆಡಿದರು. ಆದರೆ ಕೊನೆಯ ಎರಡು ಓವರ್‌ಗಳಲ್ಲಿ ಭಾರತ 10 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸ್ವಲ್ಪ ಕುಸಿತ ಕಂಡಿತು. ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ 4 ವಿಕೆಟ್ ಪಡೆದು ಮೆರೆದರು.

209 ರನ್‌ಗಳ ಗುರಿ ಬೆನ್ನಟ್ಟಿದ ನಮೀಬಿಯಾ ಪವರ್‌ಪ್ಲೇನಲ್ಲಿ 57 ರನ್‌ಗಳೊಂದಿಗೆ ಉತ್ತಮ ಆರಂಭ ಕಂಡಿತು. ಜಾನ್ ಫ್ರೈಲಿಂಕ್ ಹಾಗೂ ಲಾರೆನ್ ಸ್ಟೀನ್‌ಕ್ಯಾಂಪ್ ಉತ್ತಮ ಜೊತೆಯಾಟ ಕಟ್ಟಿದರು. ಆದರೆ ಪವರ್‌ಪ್ಲೇ ನಂತರ ಪಂದ್ಯ ತಿರುವು ಪಡೆದುಕೊಂಡಿತು.

ವರುಣ್ ಚಕ್ರವರ್ತಿ ಸತತ ಎರಡು ಓವರ್‌ಗಳಲ್ಲಿ 3 ವಿಕೆಟ್ ಪಡೆದು ನಮೀಬಿಯಾದ ಬೆನ್ನುಮುರಿದರು. ನಂತರ ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ಒತ್ತಡ ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 18ನೇ ಓವರ್‌ನಲ್ಲಿ 2 ವಿಕೆಟ್ ಪಡೆದು ನಮೀಬಿಯಾದ ಸೋಲನ್ನು ಖಚಿತಪಡಿಸಿದರು.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೂರ್ನಿಯಲ್ಲಿ ತನ್ನ ಪಾಯಿಂಟ್‌ಗಳನ್ನು ಮತ್ತಷ್ಟು ಬಲಪಡಿಸಿದೆ

ಮೈಸೂರು| ಜನರಿಗೆ ಉಪಟಳ ನೀಡುತ್ತಿದ್ದ ಗಂಡಾನೆ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

0

ಮೈಸೂರು:- ಜಿಲ್ಲೆಯ ಸರಗೂರು ತಾಲೂಕಿನ ಮೊಳೆಯೂರು ವಲಯದ ಗ್ರಾಮಸ್ಥರಿಗೆ ಆತಂಕ ಸೃಷ್ಟಿಸಿದ್ದ ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಮಟದಕಟ್ಟೆ ಬಳಿಯ ಮೂರುಗುಂಡಿ ಹಳ್ಳದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾಕಾನೆಗಳ ಸಹಾಯ ಪಡೆಯಲಾಗಿತ್ತು. ಇತ್ತೀಚೆಗೆ ಮೊಳೆಯೂರು ಗ್ರಾಮದಲ್ಲಿ ಒಬ್ಬ ಆದಿವಾಸಿ ವ್ಯಕ್ತಿ ಈ ಕಾಡಾನೆ ದಾಳಿಗೆ ಬಲಿಯಾಗಿದ್ದ ಹಿನ್ನೆಲೆ, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸಿ, ಸಾಕಾನೆಗಳಾದ ಏಕಲವ್ಯ, ಸುಗ್ರೀವ, ಪ್ರಶಾಂತ ಮತ್ತು ಅಯ್ಯಪ್ಪ ಅವರ ನೆರವಿನಿಂದ ಕಾಡಾನೆಯನ್ನು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಯಿತು. ಸೆರೆ ಹಿಡಿದ ಆನೆಯನ್ನು ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ.
ಗ್ರಾಮಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು| ನಿಯಮ ಉಲ್ಲಂಘಿಸಿದ 89 ಪಿಜಿಗಳಿಗೆ ದಂಡ, 19 ಕಿಚನ್‌ಗಳಿಗೆ ಬೀಗ

0

ಬೆಂಗಳೂರು:- ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳು ನಿಯಮ ಪಾಲಿಸದ ಪೇಯಿಂಗ್‌ ಗೆಸ್ಟ್‌ ವಸತಿಗೃಹಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು 89 ಪಿಜಿಗಳಿಗೆ 61 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, 19 ಪಿಜಿಗಳ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ನೀಡುವ ಆಹಾರ ಸುರಕ್ಷತಾ ಪ್ರಮಾಣಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಲಾಯಿತು.

ಅನೇಕ ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿದೆ.

ಪ್ರದೇಶವಾರು ವಿವರ:

ಪದ್ಮನಾಭನಗರ – 3 ಪಿಜಿ ತಪಾಸಣೆ – ₹5,000 ದಂಡ.

ಜಯನಗರ – 13 ಪಿಜಿ ತಪಾಸಣೆ – ₹11,000 ದಂಡ – 3 ಪಿಜಿ ಕಿಚನ್‌ಗೆ ಬೀಗ.

ಬೆಂಗಳೂರು ದಕ್ಷಿಣ – 18 ಪಿಜಿ ತಪಾಸಣೆ – ₹9,000 ದಂಡ – 4 ಪಿಜಿ ಕಿಚನ್‌ಗೆ ಬೀಗ.

ಬಿಟಿಎಂ ಲೇಔಟ್ – 24 ಪಿಜಿ ಪರಿಶೀಲನೆ – 3 ಪಿಜಿ ಕಿಚನ್‌ಗೆ ಬೀಗ.

ಬೊಮ್ಮನಹಳ್ಳಿ – 32 ಪಿಜಿ ಪರಿಶೀಲನೆ – ₹39,000 ದಂಡ –
9 ಪಿಜಿ ಕಿಚನ್‌ಗೆ ಬೀಗ.

ಒಟ್ಟು 89 ಪಿಜಿಗಳಿಗೆ ದಂಡ ವಿಧಿಸಲಾಗಿದ್ದು, 19 ಪಿಜಿ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವೈರಲ್ ಕುಂಭಮೇಳ ಸುಂದರಿ ಮೊನಾಲಿಸಾ: ಮೊದಲ ಸಿನಿಮಾದ ಸಂಭಾವನೆ ಹುಡುಗಿಯರ ಶಿಕ್ಷಣಕ್ಕೆ ಸಮರ್ಪಣೆ!

ಮಹಾ ಕುಂಭಮೇಳದಲ್ಲಿ ಹೂಮಾಲೆ ಮಾರಾಟ ಮಾಡುತ್ತಿದ್ದ ಯುವತಿ, ಇಂದು ಸಿನಿರಂಗದಲ್ಲಿ ಅವಕಾಶಗಳ ಮಳೆಗೊಳಗಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಮೊನಾಲಿಸಾ ಈಗ ಚಲನಚಿತ್ರ ಮತ್ತು ಜಾಹೀರಾತು ಕ್ಷೇತ್ರದಲ್ಲಿ ನಿರಂತರವಾಗಿ ಶೂಟಿಂಗ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೈಯಲ್ಲಿ ಮೂರು ಸಿನಿಮಾಗಳಿರುವ ಮೊನಾಲಿಸಾ, ‘ದಿ ಡೈರಿ ಆಫ್ ಮಣಿಪುರ’ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರ ಮೊದಲ ಬಿಡುಗಡೆಯಾಗಲಿದ್ದು, ಚಿತ್ರೀಕರಣ ಈಗ ನಡೆಯುತ್ತಿದೆ. ಅಭಿಮಾನಿಗಳಲ್ಲಿ ಅವರ ಡೆಬ್ಯೂ ಸಿನಿಮಾಗೆ ಹೆಚ್ಚಿನ ನಿರೀಕ್ಷೆ ಇದೆ.

ಇತ್ತೀಚೆಗೆ ಪ್ರಯಾಗರಾಜ್‌ಗೆ ಭೇಟಿ ನೀಡಿದ ಅವರು ಗಂಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಂಭಮೇಳದ ದಿನಗಳನ್ನು ನೆನೆದು ಅವರು ಭಾವುಕರಾದ ಕ್ಷಣಗಳು ವೈರಲ್ ಆಗಿವೆ. ಆದರೆ ಅದಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾದದ್ದು ಅವರ ಸಮಾಜಮುಖಿ ನಿರ್ಧಾರ.

ಮೊದಲ ಸಿನಿಮಾದ ಸಂಭಾವನೆಯನ್ನು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಹುಡುಗಿಯರಿಗಾಗಿ ಶಾಲೆ ಆರಂಭಿಸಲು ಬಳಸುವ ನಿರ್ಧಾರವನ್ನು ಮೊನಾಲಿಸಾ ಘೋಷಿಸಿದ್ದಾರೆ. “ಹೆಣ್ಣುಮಕ್ಕಳ ಶಿಕ್ಷಣವೇ ಸಮಾಜದ ನಿಜವಾದ ಬದಲಾವಣೆ. ಅವಕಾಶಗಳಿಲ್ಲದೆ ಹಲವರು ಹಿಂದುಳಿದಿದ್ದಾರೆ. ನನ್ನ ಆದಾಯವನ್ನು ವೈಯಕ್ತಿಕ ಸುಖಕ್ಕೆ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಬಳಸುತ್ತೇನೆ” ಎಂಬ ಅವರ ಮಾತುಗಳು ಜನಮನ ಗೆದ್ದಿವೆ.

ವೈರಲ್ ಫೇಮ್‌ನಿಂದ ಸಮಾಜಮುಖಿ ಚಿಂತನೆವರೆಗೆ – ಮೊನಾಲಿಸಾ ಇದೀಗ ಕೇವಲ ಸುಂದರಿ ಅಲ್ಲ, ಬದಲಾವಣೆಯ ಸಂಕೇತವಾಗಿ ಹೊರಹೊಮ್ಮುತ್ತಿದ್ದಾರೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಉದಯಪುರದಲ್ಲಿ ಸ್ಟಾರ್ ಮದುವೆ? ₹60 ಕೋಟಿ OTT ಡೀಲ್ ತಿರಸ್ಕಾರದಿಂದ ವಿಜಯ್–ರಶ್ಮಿಕಾ ಮತ್ತೆ ಟ್ರೆಂಡಿಂಗ್!

ಸಿನಿರಂಗದ ಹಾಟ್ ಟಾಪಿಕ್ ಇದೀಗ ಒಂದೇ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವೈಭವಶಾಲಿ ವಿವಾಹ ನಡೆಯಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ಧತೆಗಳು ಆರಂಭಗೊಂಡಿವೆ ಎನ್ನುವ ಕೆಲವು ದೃಶ್ಯಗಳು ವೈರಲ್ ಆಗಿವೆ.

ಈ ಚರ್ಚೆಯ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅಂತಾರಾಷ್ಟ್ರೀಯ OTT ದೈತ್ಯ Netflix, ಮದುವೆಯ ಎಕ್ಸ್‌ಕ್ಲೂಸಿವ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ₹60 ಕೋಟಿ ಆಫರ್ ನೀಡಿದೆಯೆಂದು ವರದಿಯಾಗಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಕ್ಷಣಗಳನ್ನು ಜಾಗತಿಕ ಡಿಜಿಟಲ್ ಕಂಟೆಂಟ್ ಆಗಿ ಪರಿವರ್ತಿಸುವ OTT ತಂತ್ರದ ಭಾಗವಾಗಿಯೇ ಈ ಪ್ರಸ್ತಾಪ ಬಂದಿತ್ತು ಎನ್ನಲಾಗಿದೆ.

ಆದರೆ, ದಂಪತಿ ಈ ಆಫರ್‌ಗೆ ಸ್ಪಷ್ಟ ನಿರಾಕರಣೆ ನೀಡಿದ್ದಾರೆ. “ವಿವಾಹ ನಮ್ಮ ಖಾಸಗಿ ಕ್ಷಣ. ಅದನ್ನು ಕಮರ್ಷಿಯಲ್ ಕಂಟೆಂಟ್ ಆಗಿ ರೂಪಿಸುವ ಉದ್ದೇಶ ಇಲ್ಲ” ಎಂಬ ನಿಲುವು ಅವರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಒಮ್ಮೆ ಸ್ಟ್ರೀಮಿಂಗ್ ಹಕ್ಕು ನೀಡಿದರೆ ಅನೇಕ ಕಾನೂನು ಷರತ್ತುಗಳು, ಚಿತ್ರೀಕರಣದ ನಿಯಂತ್ರಣ ಹಾಗೂ ಅತಿಥಿಗಳ ಮೇಲೆ ನಿಯಮಗಳು ಅನಿವಾರ್ಯವಾಗುತ್ತವೆ. ಈ ಹಿನ್ನೆಲೆ ₹60 ಕೋಟಿ ಮೊತ್ತವೂ ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

ಹಿಂದೆ ನಯನತಾರಾ-ವಿಘ್ನೇಶ್ ಶಿವಂ ವಿವಾಹದ ಸ್ಟ್ರೀಮಿಂಗ್ ಹಕ್ಕುಗಳನ್ನು Netflix ಪಡೆದುಕೊಂಡು ಸಾಕ್ಷ್ಯಚಿತ್ರವಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾನೂನು ವಿವಾದಗಳು ಮತ್ತು ವಿಳಂಬ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಅನುಭವವೂ ವಿಜಯ್–ರಶ್ಮಿಕಾ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗುತ್ತಿದೆ.

ಉದಯಪುರ ಅರಮನೆ ಮದುವೆ ವದಂತಿ ಅಧಿಕೃತವಾಗುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಒಂದು ವಿಷಯ ಸ್ಪಷ್ಟ – ಈ ಸ್ಟಾರ್ ಜೋಡಿ ತಮ್ಮ ಖಾಸಗಿತನದ ವಿಚಾರದಲ್ಲಿ ಯಾವುದೇ ರಾಜಿ ಮಾಡಲು ಸಿದ್ಧರಿಲ್ಲ.

error: Content is protected !!