Home Blog Page 89

ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವ ಪ್ರಶ್ನೆ: ಕೇಂದ್ರ ಹಾಗೂ 12 ರಾಜ್ಯಗಳಿಗೆ ಸುಪ್ರೀಂ ನೋಟಿಸ್

0

ನವದೆಹಲಿ: ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾರತದ ರಾಷ್ಟ್ರೀಯ ಚರ್ಚುಗಳ ಮಂಡಳಿ (ಎನ್‌ಸಿಐಸಿ) ಸಲ್ಲಿಸಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ, ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ತಮ್ಮ ಉತ್ತರ ಸಲ್ಲಿಸುವಂತೆ ಆದೇಶಿಸಿದೆ.

ಅಲ್ಲದೆ, ಈ ಹೊಸ ಅರ್ಜಿಗಳನ್ನು ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಿ, ಮೂವರು ನ್ಯಾಯಾಧೀಶರ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಎನ್‌ಸಿಐಸಿ ತನ್ನ ಅರ್ಜಿಯಲ್ಲಿ, ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿದೆ.

ಈ ಕಾನೂನುಗಳು ಸಂವಿಧಾನದ 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುತ್ತಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಹತ್ತಿಕ್ಕುತ್ತವೆ ಎಂದು ಆರೋಪಿಸಲಾಗಿದೆ.ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೇ ರೀತಿಯ ಅರ್ಜಿಗಳು ಈಗಾಗಲೇ ಬಾಕಿ ಇದ್ದು, ಕೇಂದ್ರದ ಉತ್ತರ ಸಿದ್ಧವಾಗಿದೆ.

ಶೀಘ್ರದಲ್ಲೇ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಜೊತೆಗೆ ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗುಜರಾತ್, ಜಾರ್ಖಂಡ್, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ಈ ಮೊದಲು ಕಳೆದ ಸೆಪ್ಟೆಂಬರ್ 16ರಂದು, ಮತಾಂತರ ವಿರೋಧಿ ಕಾನೂನುಗಳ ಜಾರಿಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ವೇಳೆ, ರಾಜ್ಯ ಸರ್ಕಾರಗಳ ನಿಲುವು ತಿಳಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ಶೇ.100ರಷ್ಟು ಮನರಂಜನಾ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯಂತಹ ಗಂಭೀರ ವಿಷಯವಸ್ತುವನ್ನು ಒಳಗೊಂಡಿರುವ ಹಿನ್ನೆಲೆದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆಗೆ ಈ ಕುರಿತು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ನಟ ದುನಿಯಾ ವಿಜಯ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ‘ಲ್ಯಾಂಡ್ ಲಾರ್ಡ್’ ಚಿತ್ರದ ಕಥಾಹಂದರ, ಉದ್ದೇಶ ಹಾಗೂ ಸಮಾಜಕ್ಕೆ ನೀಡುವ ಸಂದೇಶದ ಬಗ್ಗೆ ವಿವರಿಸಿದರು. ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೇ, ಗ್ರಾಮೀಣ ಪ್ರದೇಶದ ಫ್ಯೂಡಲ್ ವ್ಯವಸ್ಥೆ, ಜಾತಿ ಪದ್ಧತಿಯ ಕರಾಳ ಮುಖ ಹಾಗೂ ಶೋಷಿತರ ಪರವಾದ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಿದರು.

ಚಿತ್ರದ ಆಶಯವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಬೇರೂರಿರುವ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಿನಿಮಾಗಳಿಗೆ ಸರ್ಕಾರದಿಂದ ಬೆಂಬಲ ಅಗತ್ಯವೆಂದು ಅಭಿಪ್ರಾಯಪಟ್ಟರು. ಇಂತಹ ಸಾಮಾಜಿಕ ಬದ್ಧತೆಯ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ ಎಂದೂ ಹೇಳಿದರು.

ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ..! ಸಿಸಿಟಿವಿ ವಿಡಿಯೋ ವೈರಲ್

0

ಬೆಂಗಳೂರು: ನಗರದ ಅಂಜನಾಪುರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆತಂಕ ಮೂಡಿಸಿದೆ. ಅಂಜನಾಪುರ 7ನೇ ಬ್ಲಾಕ್ ರಸ್ತೆಯಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಚಿರತೆ ಓಡಾಡುತ್ತಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರದೇಶದ ನಿವಾಸಿಗಳಲ್ಲಿ ಭೀತಿ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ಹೊರಗಡೆ ಸಂಚರಿಸುವುದಕ್ಕೂ ಜನರು ಹಿಂಜರಿಯುತ್ತಿದ್ದಾರೆ.

ತುರಹಳ್ಳಿ ಅರಣ್ಯ ಪ್ರದೇಶದ ಸಮೀಪದಲ್ಲೇ ಅಂಜನಾಪುರ ಇರುವುದರಿಂದ, ಅರಣ್ಯದಿಂದಲೇ ಚಿರತೆ ನುಗ್ಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಚಿರತೆ ಪತ್ತೆಗಾಗಿ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಟಿ20 ಕ್ರಿಕೆಟ್ʼನಲ್ಲಿ ಐತಿಹಾಸಿಕ ದಾಖಲೆ: 4,500 ರನ್ ದಾಟಿದ ವಿಶ್ವದ ಮೊದಲ ಬ್ಯಾಟರ್ ಬಾಬರ್ ಆಝಂ

0

ಲಾಹೋರ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 4,500 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟರ್ ಎಂಬ ಅಪೂರ್ವ ದಾಖಲೆಯನ್ನು ಬಾಬರ್ ತಮ್ಮದಾಗಿಸಿಕೊಂಡಿದ್ದಾರೆ.

ಲಾಹೋರ್‌ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಬರ್ ಆಝಂ 36 ಎಸೆತಗಳಲ್ಲಿ ಅಜೇಯ 50 ರನ್‌ಗಳನ್ನ ಬಾರಿಸಿದರು. ಈ ಅರ್ಧಶತಕದೊಂದಿಗೆ ಅವರ ಒಟ್ಟು ಟಿ20 ಅಂತಾರಾಷ್ಟ್ರೀಯ ರನ್ ಸಂಖ್ಯೆ 4,505ಕ್ಕೆ ಏರಿಕೆಯಾಯಿತು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 48 ಬ್ಯಾಟರ್‌ಗಳು 2,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ. ಇವರಲ್ಲಿ 12 ಮಂದಿ 3,000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ 4,000 ರನ್‌ಗಳ ಗಡಿದಾಟಿರುವುದು ಕೇವಲ ಮೂವರು ಮಾತ್ರವಾಗಿದ್ದು, ಇದೀಗ 4,500 ರನ್‌ಗಳನ್ನು ದಾಟಿರುವ ಏಕೈಕ ಬ್ಯಾಟರ್ ಆಗಿ ಬಾಬರ್ ಆಝಂ ಹೊರಹೊಮ್ಮಿದ್ದಾರೆ.

ಬಾಬರ್ ಹೊರತುಪಡಿಸಿ ಯಾವುದೇ ಬ್ಯಾಟರ್ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,250 ರನ್‌ಗಳ ಗಡಿ ದಾಟಿಲ್ಲ. ಈ ಪಟ್ಟಿಯಲ್ಲಿ ಭಾರತದ ಮಾಜಿ ಟಿ20 ನಾಯಕ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದು, ಅವರು 4,231 ರನ್‌ಗಳನ್ನು ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 4,188 ರನ್‌ಗಳಿಸಿದ್ದಾರೆ.

ಪಾಕಿಸ್ತಾನ ಪರ ಇದುವರೆಗೆ 132 ಟಿ20 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಬಾಬರ್ ಆಝಂ, 3 ಶತಕ ಹಾಗೂ 39 ಅರ್ಧಶತಕಗಳೊಂದಿಗೆ ಈ ದಾಖಲೆ ಸಾಧಿಸಿದ್ದಾರೆ. ಅವರ ನಿರಂತರ ಸಾಧನೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅವರನ್ನು ಅಗ್ರಸ್ಥಾನಕ್ಕೆ ಕರೆದೊಯ್ದಿದೆ.

ಜಮೀನು ಒತ್ತುವರಿ ವಿಚಾರಕ್ಕೆ ಗಲಾಟೆ: ತಮ್ಮನನ್ನೇ ಕೊಂದ ಅಣ್ಣ

0

ದಾವಣಗೆರೆ: ಜಿಲ್ಲೆಯ ಮಾಯಕೊಂಡದಲ್ಲಿ ಜಮೀನು ಒತ್ತುವರಿ ವಿವಾದ ಒಂದು ಕುಟುಂಬವನ್ನೇ ರಕ್ತಸಿಕ್ತಗೊಳಿಸಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಕೊನೆಗೆ ಸಹೋದರನ ಪ್ರಾಣ ಕಿತ್ತುಕೊಂಡಿದೆ.

ಕೊಲೆಯಾದವರು ಸಿ.ಕೆ. ನೀಲಪ್ಪ (62). ತಮ್ಮನ ಹತ್ಯೆ ನಡೆಸಿದ ಆರೋಪಿ ಅಣ್ಣ ಸಿ.ಕೆ. ಚಂದ್ರಪ್ಪ ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನು ಒತ್ತುವರಿ ವಿಚಾರವಾಗಿ ಕೆಲ ದಿನಗಳಿಂದಲೂ ಇಬ್ಬರ ನಡುವೆ ಅಸಮಾಧಾನ ಇತ್ತು ಎನ್ನಲಾಗಿದೆ.

ಘಟನೆಯ ದಿನ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾತಿನ ಚಕಮಕಿ ಘರ್ಷಣೆಗೆ ತಿರುಗಿದೆ. ಆಕ್ರೋಶದ ಪರಮಾವಧಿಯಲ್ಲಿ ಚಂದ್ರಪ್ಪ ತಮ್ಮ ನೀಲಪ್ಪನ ತಲೆ ಮೇಲೆ ಪ್ರಾಣಘಾತಕವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ನೀಲಪ್ಪ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಯಕೊಂಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ನೀಲಪ್ಪನ ಕುಟುಂಬಸ್ಥರು, ಈ ಹತ್ಯೆಯಲ್ಲಿ ಚಂದ್ರಪ್ಪನ ಕುಟುಂಬದ ಇತರ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲರನ್ನೂ ಆರೋಪಿಗಳನ್ನಾಗಿ ಸೇರಿಸುವಂತೆ ಅವರು ಪೊಲೀಸರ ಬಳಿ ಆಗ್ರಹಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ-ಪಾಕ್‌ ಪಂದ್ಯ ರದ್ದಾದ್ರೆ 2,200 ಕೋಟಿ ರೂ. ನಷ್ಟ: ಟಿ20 ವಿಶ್ವಕಪ್‌ʼನಲ್ಲಿ ICCಗೆ ಭಾರೀ ಹೊಡೆತ

0

ದುಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೆ ಸುಮಾರು 2,200 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಈ ನಷ್ಟವು ಕೇವಲ ಐಸಿಸಿಗೆ ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ ಕ್ರಿಕೆಟ್ ಮಂಡಳಿ, ಟೂರ್ನಿ ಪ್ರಾಯೋಜಕರು, ಪ್ರಸಾರಕರು ಹಾಗೂ ಜಾಹೀರಾತುದಾರರಿಗೂ ಅನ್ವಯವಾಗಲಿದೆ ಎಂದು ವರದಿಯಾಗಿದೆ.

ಕ್ರಿಕೆಟ್‌ನಲ್ಲಿ ಭಾರತ–ಪಾಕಿಸ್ತಾನ ಪಂದ್ಯವು ಪ್ರಸಾರ ಹಕ್ಕು, ಟಿಕೆಟ್ ಮಾರಾಟ, ಜಾಹೀರಾತು, ಪ್ರಾಯೋಜಕತ್ವ ಹಾಗೂ (ಭಾರತದ ಹೊರಗಡೆ) ಕಾನೂನುಬದ್ದ ಬೆಟ್ಟಿಂಗ್ ಸೇರಿದಂತೆ ಹಲವು ಮೂಲಗಳಿಂದ ಅಪಾರ ಆದಾಯ ತರುತ್ತದೆ. ಈ ಪಂದ್ಯ ರದ್ದಾದರೆ ಆ ಎಲ್ಲಾ ಆದಾಯ ಮಾರ್ಗಗಳಿಗೆ ಭಾರೀ ಹೊಡೆತ ಬೀಳಲಿದೆ.

ಎಷ್ಟು ನಷ್ಟವಾಗಲಿದೆ?

– ಭಾರತ–ಪಾಕಿಸ್ತಾನ ಐಸಿಸಿ ಪಂದ್ಯದ ಅಂದಾಜು ಮೌಲ್ಯ: 250 ಮಿಲಿಯನ್ ಯುಎಸ್ ಡಾಲರ್ (2,200 ಕೋಟಿ ರೂ.ಕ್ಕಿಂತ ಹೆಚ್ಚು)

– ಜಾಹೀರಾತು ಆದಾಯ: 200–250 ಕೋಟಿ ರೂ.

– 10 ಸೆಕೆಂಡ್ ಜಾಹೀರಾತು ಸ್ಲಾಟ್ ವೆಚ್ಚ: 20–40 ಲಕ್ಷ ರೂ.

– ಭಾರತದ ಮಾಧ್ಯಮ ಹಕ್ಕುಗಳ ಒಪ್ಪಂದ (ಜಿಯೋಸ್ಟಾರ್–ಐಸಿಸಿ): 3 ಬಿಲಿಯನ್ ಡಾಲರ್

ಪಂದ್ಯ ನಡೆಯದೇ ಹೋದರೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ತಲಾ ಸುಮಾರು 200 ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ಪಂದ್ಯ ರದ್ದಾದರೆ ಐಸಿಸಿಯು ಪ್ರಾಯೋಜಕರು ಮತ್ತು ಪ್ರಸಾರಕರಿಗೆ ನಷ್ಟ ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಐಸಿಸಿಗೆ ಅತ್ಯಧಿಕ ಆದಾಯ ದೊರೆಯುವುದು ಪ್ರಸಾರ ಹಕ್ಕುಗಳಿಂದಾಗಿದ್ದು, ಈ ಆದಾಯವನ್ನು ಪ್ರತಿವರ್ಷ ವಿವಿಧ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ವಿವಿಧ ಕ್ರಿಕೆಟ್ ಮಂಡಳಿಗಳಿಗೆ ಹಂಚಲಾಗುತ್ತದೆ. ಆದರೆ ಪ್ರಮುಖ ಪಂದ್ಯ ರದ್ದಾದರೆ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ, ನಮೀಬಿಯಾ, ಅಫ್ಘಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ನೀಡಬೇಕಿದ್ದ ಆದಾಯ ಕಡಿತಗೊಳ್ಳುವ ಸಾಧ್ಯತೆಯಿದೆ.

2024–2027ರ ಅವಧಿಯ ಐಸಿಸಿ ಪಂದ್ಯಗಳ ಭಾರತದ ಪ್ರಸಾರ ಹಕ್ಕನ್ನು ಡಿಸ್ನಿ ಸ್ಟಾರ್ ಸಂಸ್ಥೆ 2022ರಲ್ಲಿ 3 ಬಿಲಿಯನ್ ಡಾಲರ್‌ಗಳಿಗೆ (ಸುಮಾರು 25 ಸಾವಿರ ಕೋಟಿ ರೂ.) ಖರೀದಿಸಿತ್ತು. ಈ ಒಪ್ಪಂದದಲ್ಲಿ ಅತಿ ಹೆಚ್ಚು ಆದಾಯ ತರುವ ಪಂದ್ಯವೆಂದರೆ ಭಾರತ–ಪಾಕಿಸ್ತಾನ ಮುಖಾಮುಖಿ. ಈ ಪ್ರಮುಖ ಪಂದ್ಯ ನಡೆಯದೇ ಹೋದರೆ ಜಿಯೋ ಹಾಟ್‌ಸ್ಟಾರ್‌ಗೆ ಭಾರೀ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರಸಾರ ಹಕ್ಕುಗಳ ಒಪ್ಪಂದವನ್ನು ಮರುಪರಿಶೀಲಿಸುವಂತೆ ಜಿಯೋ ಹಾಟ್‌ಸ್ಟಾರ್ ಐಸಿಸಿಗೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಒಂದೇ ದಿನ ಎರಡು ದೇವಾಲಯಗಳಲ್ಲಿ ಕಳ್ಳತನ; ದೇವನಹಳ್ಳಿಯ ಪೊಮ್ಮಸಂದ್ರದಲ್ಲಿ ಆತಂಕ!

0

ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಪೊಮ್ಮಸಂದ್ರ ಗ್ರಾಮದಲ್ಲಿ ಒಂದೇ ದಿನ ಎರಡು ದೇವಾಲಯಗಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.

ಚಂದ್ರಮೌಳೇಶ್ವರ ದೇವಾಲಯ ಹಾಗೂ ಓಶಕ್ತಿ ದೇವಾಲಯಗಳನ್ನು ಗುರಿಯಾಗಿಸಿಕೊಂಡ ಕಳ್ಳರು, ಆರೆಕೋಲು ಬಳಸಿ ಬಾಗಿಲುಗಳನ್ನು ಮೀಟಿ ಒಳನುಗ್ಗಿದ್ದಾರೆ. ಕಳ್ಳರು ಎರಡೂ ದೇವಾಲಯಗಳಲ್ಲಿದ್ದ ಹುಂಡಿಗಳನ್ನು ಒಡೆದು ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಶಂಕೆ ವ್ಯಕ್ತವಾಗಿದೆ.

ಜೊತೆಗೆ ಓಶಕ್ತಿ ದೇವಾಲಯದಿಂದ ಎರಡು ಮಾಂಗಲ್ಯ ಸರಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಓಶಕ್ತಿ ದೇವಾಲಯದಲ್ಲಿ ಇದು ಎರಡನೇ ಬಾರಿ ಕಳ್ಳತನವಾಗಿದ್ದು, ಕಳೆದ ಬಾರಿ ಸುಮಾರು ₹2 ಲಕ್ಷ ಮೌಲ್ಯದ ಪಂಚಲೋಹ ವಿಗ್ರಹವನ್ನು ಕಳ್ಳರು ಅಪಹರಿಸಿದ್ದ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗಿ ಉಳಿದಿದೆ. ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.

ಈ ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ಪೊಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದೇವಾಲಯಗಳ ಭದ್ರತೆ ಹೆಚ್ಚಿಸಬೇಕೆಂಬ ಒತ್ತಾಯ ಇದೀಗ ಮತ್ತಷ್ಟು ಜೋರಾಗಿದೆ.

ದೆಹಲಿ ಪೊಲೀಸರ ವೇಷದಲ್ಲಿ ದರೋಡೆ! ಕಲಬುರಗಿಯಲ್ಲಿ ಇರಾನಿ ಗ್ಯಾಂಗ್ ಅರೆಸ್ಟ್ – 15 ಲಕ್ಷ ರೂ.ಮೌಲ್ಯದ ಚಿನ್ನ ಜಪ್ತಿ

0

ಕಲಬುರಗಿ: ದೆಹಲಿ ಪೊಲೀಸರ ಸೋಗಿನಲ್ಲಿ ದರೋಡೆ ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನ ತಪಾಸಣೆ ನೆಪದಲ್ಲಿ ಜನರನ್ನು ತಡೆದು ಚಿನ್ನಾಭರಣ ದೋಚುತ್ತಿದ್ದ ಈ ಗ್ಯಾಂಗ್, ಕಲಬುರಗಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದೆ.

ನಕಲಿ ಪೊಲೀಸ್ ಇನ್ಸ್‌ಪೆಕ್ಟರ್ ಐಡಿ ಕಾರ್ಡ್ ಸೃಷ್ಟಿಸಿಕೊಂಡು, ಇಬ್ಬರು ಸದಸ್ಯರು ಪೊಲೀಸ್ ಅಧಿಕಾರಿಗಳಂತೆ ವರ್ತಿಸುತ್ತಿದ್ದರು. ಉಳಿದವರು ಜನರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದರು. ಈ ಗ್ಯಾಂಗ್ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು, ಪ್ರತಿ ಬಾರಿ ದರೋಡೆಗೆ ಇಳಿಯುವಾಗ ಹೊಸ ಮೊಬೈಲ್, ಹೊಸ ಸಿಮ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದರು.
ಬಂಧಿತ ಆರೋಪಿಗಳನ್ನು ಜಹೀರ್ ಅಬ್ಬಾಸ್, ಅಲಿ ರಜಾಕ್, ಲಾಲ ಸಮೀರ್, ಖಸಿಂ ಜಾಫ್ರಿ, ಅಲಿಮಿರ್ಜಾ, ಜಾಫರ್ ಅಲಿ ಸೈಯದ್ ಹಾಗೂ ಜಾಫರ್ ಸೈಯದ್ ಎಂದು ಗುರುತಿಸಲಾಗಿದೆ.

ಬಂಧಿತರು ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಮೂಲದವರಾಗಿದ್ದಾರೆ.
ಪ್ರಮುಖ ಆರೋಪಿ ಜಹೀರ್ ಅಬ್ಬಾಸ್ ಪರಳಿ ಮೂಲದವನಾಗಿದ್ದು, ಈ ಹಿಂದೆ 15 ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನಿಗೆ ಶಿಕ್ಷೆಯೂ ವಿಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಲಾಲ್ ಸಲೀಮ್ ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ.
ಲಾಲ್ ಸಲೀಮ್‌ನ ಮಗಳಿಗೆ ಕಲಬುರಗಿಯಲ್ಲಿ ಮದುವೆ ಮಾಡಿಕೊಟ್ಟಿದ್ದ ಕಾರಣ ಗ್ಯಾಂಗ್ ಕಲಬುರಗಿಗೆ ಆಗಮಿಸಿತ್ತು. ಈ ವೇಳೆ ಮಹಬೂಬ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ದರೋಡೆ ನಡೆಸಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಏಳು ಜನರ ಗ್ಯಾಂಗ್ ಅನ್ನು ಬಂಧಿಸಿ, 15 ಲಕ್ಷ ರೂಪಾಯಿ ಮೌಲ್ಯದ 90 ಗ್ರಾಂ ಚಿನ್ನಾಭರಣ, ದರೋಡೆಗೆ ಬಳಸಿದ್ದ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಿಲನ’ ನಟಿ ಪಾರ್ವತಿಗೆ ಮತ್ತೆ ಬಾಡಿ ಶೇಮಿಂಗ್ ಕಾಟ

ಚಿತ್ರರಂಗದಲ್ಲಿ ಪ್ರತಿಭೆಯಷ್ಟೇ ಅಲ್ಲ, ಲುಕ್ ಕೂಡ ದೊಡ್ಡ ಮಾನದಂಡ. ದೇಹದಲ್ಲಿ ಸ್ವಲ್ಪ ಬದಲಾವಣೆ ಆದರೂ ನಟ–ನಟಿಯರು ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಸಾಮಾನ್ಯ. ಇದೇ ವಾಸ್ತವಕ್ಕೆ ಇದೀಗ ಕನ್ನಡದ ‘ಮಿಲನ’ ಸಿನಿಮಾ ಮೂಲಕ ಜನಮನ ಗೆದ್ದ ನಟಿ ಪಾರ್ವತಿ (Parvathy) ಮತ್ತೆ ಸಾಕ್ಷಿಯಾಗಿದ್ದಾರೆ.

ಕೇರಳದ ಕೋಳಿಕ್ಕೋಡಿನವರಾದ ಪಾರ್ವತಿ, 37ನೇ ವಯಸ್ಸಿನಲ್ಲೂ ತಮ್ಮದೇ ಶರತ್ತುಗಳೊಂದಿಗೆ ಬದುಕುತ್ತಿರುವ ನಟಿ. ವಿವಾಹದ ಬಗ್ಗೆ ಅವರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 2006ರಲ್ಲಿ, 17ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು, 2007ರ ‘ಮಿಲನ’ ಸಿನಿಮಾದ ಮೂಲಕ ಕರ್ನಾಟಕದಲ್ಲೂ ಭಾರಿ ಅಭಿಮಾನಿಗಳನ್ನು ಸಂಪಾದಿಸಿದರು.

ಪುನೀತ್ ರಾಜ್‌ಕುಮಾರ್ ಜೊತೆಗಿನ ಅವರ ಜೋಡಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ‘ಪೃಥ್ವಿ’ ಸಿನಿಮಾದಲ್ಲಿ ಈ ಹಿಟ್ ಜೋಡಿ ಮತ್ತೆ ಒಂದಾಗಿತ್ತು. ಆದರೆ ‘ಅಂದರ್ ಬಾಹರ್’ ಬಳಿಕ ಪಾರ್ವತಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಈಗ ಮಲಯಾಳಂ ಚಿತ್ರರಂಗದಲ್ಲಿ ಚ್ಯೂಸಿ ಆಗಿ ಸಿನಿಮಾಗಳನ್ನು ಮಾಡುತ್ತಿರುವ ಪಾರ್ವತಿ, ಇತ್ತೀಚೆಗೆ ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದಾರೆ. ವೈರಲ್ ಆದ ವಿಡಿಯೋವೊಂದರಲ್ಲಿ ಅವರು ಮೊದಲಿಗಿಂತ ದಪ್ಪ ಕಾಣಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಕೇರಳಿಗರಿಂದಲೇ ತೀವ್ರ ಟೀಕೆ, ಹೇಟ್ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಈ ಬೆಳವಣಿಗೆ ಪಾರ್ವತಿ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ. ನಟಿಯರ ದೇಹ, ಲುಕ್ ವಿಚಾರ ಇಟ್ಟುಕೊಂಡು ಟೀಕೆ ಮಾಡುವುದು ಯಾವ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಇದು ಪಾರ್ವತಿ ಎದುರಿಸುತ್ತಿರುವ ಮೊದಲ ಅನುಭವವಲ್ಲ. ಈ ಹಿಂದೆ ಕೂಡ ಅವರು ಇಂತಹ ಟೀಕೆಗಳನ್ನು ಎದುರಿಸಿದ್ದಾರೆ. ಆದರೆ ಪ್ರತೀ ಬಾರಿ ಅದನ್ನು ಧೈರ್ಯದಿಂದಲೇ ಎದುರಿಸಿದ್ದಾರೆ.

ಒಟ್ಟಾರೆ, ಈ ಘಟನೆ ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಎಂಬ ಸಮಸ್ಯೆ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತಿದ್ದು, ನಟಿಯರನ್ನು ಅವರ ಪ್ರತಿಭೆ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕೆಂಬ ಚರ್ಚೆಗೆ ಮತ್ತೆ ವೇದಿಕೆ ಒದಗಿಸಿದೆ.

ಹೀರೋಗೆ ಕಾಂಡೋಮ್ ಕೊಡ್ತಾರೆ ಎಂದ ಚಂದ್ರಚೂಡ್: ಗರಂ ಆದ ಕೆ. ಮಂಜು

ಒಂದು ಯೂಟ್ಯೂಬ್ ಹೇಳಿಕೆ ಇದೀಗ ಸಂಪೂರ್ಣ ಕನ್ನಡ ಚಿತ್ರರಂಗವನ್ನೇ ಒಂದೇ ವೇದಿಕೆಗೆ ತಂದಿದೆ. ನಟ–ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ‘ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ’ ಎಂದು ಹೇಳಿರುವುದು ನಿರ್ಮಾಪಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಪೊಲೀಸ್ ದೂರು ದಾಖಲಾಗುವ ಹಂತಕ್ಕೆ ತಲುಪಿದೆ.

ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಿರ್ಮಾಪಕ ಕೆ. ಮಂಜು, ಚಂದ್ರಚೂಡ್ ಹೇಳಿಕೆ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

‘ನಿರ್ಮಾಪಕರ ಸಂಘದ ಅನೇಕರು ನನಗೆ ಕರೆ ಮಾಡಿ ಈ ವಿಡಿಯೋ ಬಗ್ಗೆ ಗಮನ ಸೆಳೆದರು. ಸಂಪೂರ್ಣ ವಿಡಿಯೋ ನೋಡಿದ ಮೇಲೆ ಶಾಕ್ ಆಯಿತು. ಕೆವಿಎನ್ ಸಂಸ್ಥೆ, ಸೆನ್ಸಾರ್ ಮಂಡಳಿ, ನ್ಯಾಯಾಲಯದ ಬಗ್ಗೆ ಕೂಡ ಅಸಂಬದ್ಧವಾಗಿ ಮಾತನಾಡಿದ್ದಾರೆ. ಗೊತ್ತಿಲ್ಲದೇ ಮಾತನಾಡುವುದು ಅಪಾಯಕಾರಿ’ ಎಂದು ಮಂಜು ಹೇಳಿದರು.

‘ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಎನ್ನುವ ಆರೋಪ ಅತ್ಯಂತ ಅಸಭ್ಯ. ಅಂಥ ನಿರ್ಮಾಪಕ ಯಾರು ಅನ್ನೋದನ್ನು ಸ್ಪಷ್ಟವಾಗಿ ಹೇಳಲಿ. ಇಲ್ಲದಿದ್ದರೆ ಇದು ಚಿತ್ರರಂಗದ ಮೇಲೆ ಮಾಡಿದ ದಾಳಿ’ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಮಂಜು ವಿವರಿಸಿದರು. ‘ಕಳೆದ ಮೂರು ತಿಂಗಳಲ್ಲಿ 200 ಕೋಟಿ ರೂಪಾಯಿ ನಷ್ಟವಾಗಿದೆ. ನಿರ್ಮಾಪಕರು ಜೀವ ಉಳಿಸಿಕೊಳ್ಳುವ ಹಂತದಲ್ಲಿದ್ದಾರೆ. ಈ ಸಮಯದಲ್ಲಿ ಈ ರೀತಿ ಹೇಳಿಕೆ ನೀಡುವುದು ನೈತಿಕತೆಯ ಕೊರತೆ’ ಎಂದರು.

‘ಬಂದ ತಕ್ಷಣ ದುಡ್ಡು ಬೇಕು ಎನ್ನುವವರಿಂದ ನಿರ್ಮಾಪಕರು ಎಲ್ಲಿಂದ ಹಣ ತರುತ್ತಾರೆ? ಚಿತ್ರರಂಗಕ್ಕೆ ಒಳ್ಳೆಯ ಕಥೆ, ಒಳ್ಳೆಯ ಸಿನಿಮಾ ಬೇಕು. ನಿಂದನೆ ಅಲ್ಲ’ ಎಂದು ಕಿಡಿಕಾರಿದರು.

ಈ ವಿವಾದದಿಂದ ಚಿತ್ರರಂಗದಲ್ಲಿ ಶಿಸ್ತು ಮತ್ತು ಹೊಣೆಗಾರಿಕೆ ಕುರಿತು ಚರ್ಚೆ ಆರಂಭವಾಗಿದೆ. ‘ಯಾರೇ ಆಗಲಿ, ಇನ್ನು ಮುಂದೆ ಈ ರೀತಿ ಮಾತನಾಡಬಾರದು ಎಂಬ ಸಂದೇಶ ನೀಡುವುದಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ’ ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.

ಸುದೀಪ್ ಬಗ್ಗೆ ಮಾತನಾಡುತ್ತಾ, ‘ಅವರು ಕ್ಲೀನ್ ವ್ಯಕ್ತಿ. ಈ ರೀತಿ ವರ್ತಿಸುವವರನ್ನು ಅವರು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ’ ಎಂದು ಹೇಳಿದರು.

ಒಟ್ಟಾರೆ, ಒಂದು ವಿವಾದಾತ್ಮಕ ಹೇಳಿಕೆ ಈಗ ಚಿತ್ರರಂಗದ ಆತ್ಮಗೌರವ, ಹೊಣೆಗಾರಿಕೆ ಮತ್ತು ಕಾನೂನು ಮಿತಿಗಳ ಕುರಿತು ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

error: Content is protected !!