ಬೆಂಗಳೂರು;- ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದ್ದು, ಕೆಆರ್ ಪುರದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಜಗಳವನ್ನು ತಡೆಯಲು ಮುಂದಾದ ಆಟೋ ಚಾಲಕನ ಮೇಲೆ ಪುಂಡರ ಗುಂಪು ಮಾರಕಾಸ್ತ್ರದಿಂದ ದಾಳಿ ನಡೆಸಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫೆಬ್ರವರಿ 1ರ ರಾತ್ರಿ ಸುಮಾರು 8.15ರ ವೇಳೆಗೆ ಕೆಆರ್ ಪುರದ ದೇವಸಂದ್ರ ಸಮೀಪದ ಮದೀನಾ ಮಸೀದಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಮಾಜ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಆಟೋ ಚಾಲಕ ರೋಷನ್, ತನ್ನ ಗೆಳೆಯ ಶೋಯಬ್ ಜೊತೆ ಮಾತನಾಡುತ್ತಿದ್ದಾಗ ಕೆಲವರ ನಡುವೆ ಜಗಳ ಉಂಟಾಗಿದೆ. ಈ ಜಗಳವನ್ನು ತಡೆಯಲು ಮುಂದಾದ ರೋಷನ್ ಮೇಲೆ ವಾಸಿಂ, ಯಾಸಿಫ್, ಖಲೀಮ್ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಆಟೋ ಚಾಲಕ ರೋಷನ್ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಷನ್ ಅವರ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಕೆಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

