ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕವಿತೆಗಳು ಮನದಾಳದ ಪ್ರೀತಿ, ಸ್ನೇಹ, ನೋವು, ಸಂತೋಷ, ಕೋಪ ಇತರೆಲ್ಲ ಭಾವನೆಗಳು ಹಾಗೂ ಅನುಭವ, ಆಲೋಚನೆಗಳ ಅಭಿವ್ಯಕ್ತಿ ಮಾಧ್ಯಮವಾಗಿವೆ ಎಂದು ಜಿಮ್ಸ್ನ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹೇಳಿದರು.
ಅವರು ಪಟ್ಟಣದ ಮಹಾಕವಿ ಪಂಪ ವೃತ್ತದ ಬಳಿಯ ಎಸ್.ಬಿ. ಮುಳ್ಳಳ್ಳಿ ಅವರ ನಿವಾಸದಲ್ಲಿ ಭಾನುವಾರ `ನಮ್ಮ-ನಿಮ್ಮ ವೇದಿಕೆ’ಯ ಆಶ್ರಯದಲ್ಲಿ ನಡೆದ ಕವಿತೆ-ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯದ ಮೂಲಕ ಮನಸ್ಸಿನ ಭಾವನೆಗಳು, ಕಲ್ಪನೆಗಳ ಅಭಿವ್ಯಕ್ತಿಸುವುದು ಕವಿತೆಯಾಗಿದೆ. ಭಾವನೆಗಳಿಗೆ ಶಬ್ದ-ಅರ್ಥಗಳ ಬಣ್ಣ ಹಚ್ಚಿ ಸುಂದರಗೊಳಿಸುವುದು ಕಾವ್ಯಕ್ಕೆ ಇರುವ ಶಕ್ತಿ. ಅಧ್ಯಯನವು ಕಾವ್ಯ ಕಟ್ಟಲು ಸಹಕಾರಿಯಾಗಿವೆ ಎಂದರಲ್ಲದೆ, ತಾವು ತಂದೆ, ಗುರುಗಳು, ಗೆಳೆಯರು, ಕೋವಿಡ್, ಜಾನಪದ, ಬಾಲ್ಯ ಹೀಗೆ ರಚಿಸಿದ ಹಲವು ಕವಿತೆಗಳನ್ನು ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿಸಿದರು.
ಶಿಗ್ಗಾವಿಯ ವಿರಕ್ತ ಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕವಿತೆಗಳು ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಕಲೆಯಾಗಿದೆ. ಭಾವನೆಗಳಿಗೆ ಶಬ್ದಗಳ ಬಲೆ ಹೆಣೆದು ಸುಂದರವಾಗಿ ಕಾಣುವಂತೆ ಮಾಡಿ ಗೇಯತೆಗೆ ತೊಡಗಿಸುವ ಕಾರ್ಯ ಅದ್ಭುತ ಎಂದು ಹೇಳಿದರು.
ಸಾಹಿತಿ ಡಾ. ಮಂಜುನಾಥ ಬಮ್ಮನಕಟ್ಟಿ ಮಾತನಾಡಿ, ಕವಿತೆಗಳು ಬದುಕು ಮತ್ತು ಸಮಾಜಕ್ಕೆ ಪೂರಕವಾಗಿರಬೇಕು ಈ ನಿಟ್ಟಿನಲ್ಲಿ ಕವಿಗಳ ಜವಾಬ್ದಾರಿ ಮುಖ್ಯವಾಗಿರುತ್ತದೆ ಎಂದರು.
ಸುಮಾ ಚೋಟಗಲ್, ಎಸ್.ಬಿ. ಮುಳ್ಳಳ್ಳಿ ಮಾತನಾಡಿದರು. ಈ ವೇಳೆ ಜಿ.ಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಸಾಹಿತಿ ಸಿ.ಜಿ. ಹಿರೇಮಠ, ಪಿ.ಬಿ. ಖರಾಟೆ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಫಕ್ಕಿರೇಶ ಮ್ಯಾಟಣ್ಣವರ, ಬಸವರಾಜ ದೊಡ್ಡಮನಿ, ಎಸ್.ಎಫ್. ಕೊಡ್ಲಿ, ರಾಜು ಪಾಟೀಲ್, ಸುವರ್ಣ ನಂದಿಕೋಲಮಠ ಮುಂತಾದವರಿದ್ದರು. ರವಿರಾಜ ಶಿಗ್ಲಿ ಪ್ರಾರ್ಥಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.