ವಿಜಯಸಾಕ್ಷಿ ಸುದ್ದಿ, ಮುಳಗುಂದ : ಕಲಾವಿದರನ್ನು ಸಾಕಲು ಮಾಲಿಕರು ನಾನಾ ವೇಷ ಹಾಕಬೆಕಾಗುತ್ತದೆ. ಸರ್ಕಸ್ ಕಂಪನಿಗಿಂತ ನಾಟಕ ಕಂಪನಿ ನಡೆಸುವದು ತುಂಬಾ ಕಷ್ಟ. ನಮ್ಮ ಕಲಾವಿದರ ಪಾವಿತ್ರ್ಯತೆಯನ್ನು ನಾವೇ ಹಾಳು ಮಾಡಿಕೊಂಡಿದ್ದೇವೆ ಎಂದು ವಿಜಯಪುರದ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಅಭಿಪ್ರಾಯಪಟ್ಟರು.
ಅವರು ಪಟ್ಟಣದಲ್ಲಿ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ 87ನೇ ವಾರ್ಷಿಕೋತ್ಸವ ಹಾಗೂ ರಂಗಸಿರಿ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದರು. ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಹಿರಿಯ ಗಾಯಕ ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ಕಲಾವಿದರಲ್ಲಿ ಒಗ್ಗಟ್ಟು ಬರಬೇಕು. ಇದರ ಕೊರತೆಯಿಂದ ಅನೇಕ ಕಂಪನಿಗಳು ತಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ಮೂಲೆಗುಂಪಾಗಿವೆ. ಕಲಾವಿದರನ್ನು ಕಲಾವಿದರೇ ಗೌರವಿಸಬೇಕು. ಕಲಾರಂಗ ಶ್ರೀಮಂತವಾಗಬೇಕು ಎಂದರು.
ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಮಾತನಾಡಿ, ಇದೊಂದು ಸಂಗೀತ ಸಂಗಮ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಅನೇಕ ನಾಟಕಗಳು ಜನಮನ ಸೂರೆಗೊಂಡಿವೆ. ನಮ್ಮ ಪುಣ್ಯಾಶ್ರಮಕ್ಕೆ ಯಾವದೇ ಜಾತಿಯಿಲ್ಲ. ಆಶ್ರಮಕ್ಕೆ ಬಂದವರಿಗೆಲ್ಲ ಒಂದೇ ತೆರನಾದ ಊಟವಿರುತ್ತದೆ. ಹೀಗಾಗಿ ನಮ್ಮ ಸಂಘದಲ್ಲಿ ಕಲಾವಿದರಾಗಲು ಯಾವ ಜಾತಿ-ಮತದ ಬೇಧವಿಲ್ಲ ಎಂದರು.
ಹಿರಿಯ ಕಲಾವಿದರಾದ ಆಂದ್ರ ಪ್ರದೇಶದ ಮರಿಸ್ವಾಮಿ ಮದರಿ, ಅಡ್ನೂರಿನ ಕಲ್ಲಿನಾಥ ಶಾಸ್ತಿ, ಪು.ಬಡ್ನಿಯ ರಾಚಯ್ಯಸ್ವಾಮಿ ಹಿರೇಮಠ, ಕಟಗಿಹಳ್ಳಿಯ ಹುಚ್ಚಯ್ಯಸ್ವಾಮಿ ಕಲ್ಮಠ, ಕೌಜಗೇರಿಯ ಈರಪ್ಪ ಹೂಗಾರ ಇವರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲಾಲಸಾಬ ಕಣವಿ, ಬಸವರಡ್ಡಿ ಬೆಳ್ಳಿಕೊಪ್ಪ, ಡಾ. ಎಸ್.ಸಿ. ಚವಡಿ, ಎಂ.ಎಫ್. ರೊಟ್ಟಿಗವಾಡ, ಪಾಲಾಕ್ಷಗೌಡ ಪಾಟೀಲ, ಶ್ರೀಧರ ಹೆಗಡೆ, ವಿರುಪಾಕ್ಷಯ್ಯ ಶಾಸ್ತಿ, ಬಸವಣ್ಣೆಯ್ಯ ಶಾಸ್ತಿ, ಶಿವಯ್ಯ ಯಳವತ್ತಿ, ಎಫ್.ವಿ. ಮರಿಗೌಡ್ರ, ಪ್ರೇಮಾ ಗುಳೇದಗುಡ್ಡ ಇತರ ಕಂಪನಿಗಳ ಮಾಲಿಕರು ಭಾಗವಹಿಸಿದ್ದರು.