ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ದೊಡ್ಡೂರ ರಸ್ತೆಯ ಹೊರವಲಯದ ಗಡ್ಡದೇವರಮಠ ಆಶ್ರಯ ಕಾಲೋನಿಯ ನಿವಾಸಿಗಳು ಶುಕ್ರವಾರ ನೀರಿಗಾಗಿ ಪುರಸಭೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪುರಸಭೆಯ ಅಧಿಕಾರಿಗಳಿಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿದ ಮಹಿಳೆಯರು, ಗಡ್ಡದೇವರಮಠ ಆಶ್ರಯ ಪ್ಲಾಟಿನಲ್ಲಿ 20 ವರ್ಷದಿಂದ ನೂರಾರು ಕುಟುಂಬಗಳ ಜನರು ವಾಸಿಸುತ್ತಿದ್ದೇವೆ. ವರ್ಷದುದ್ದಕ್ಕೂ ನೀರಿನ ಸಮಸ್ಯೆ ತಪ್ಪುವುದಿಲ್ಲ. 400 ರೂ ದುಡ್ಡು ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುವ ಶಕ್ತಿ ನಮ್ಮಲ್ಲಿಲ್ಲ. ಕಳೆದ 2 ತಿಂಗಳಿನಿಂದ ನದಿ ನೀರೂ ಬಂದ್ ಆಗಿದ್ದರಿಂದ ನೀರಿಗಾಗಿ ಪಟ್ಟಣ ಮತ್ತು ತೋಟಗಳಿಗೆ ಅಲೆಯುವಂತಾಗಿದೆ. ಇರುವ ಒಂದು ಬೋರ್ವೆಲ್ ಇಲ್ಲಿನ 200ಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿದೆ.
ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸಿಸ್ಟನ್ (ಸಣ್ಣ ನೀರು ಸಂಗ್ರಹ ಟ್ಯಾಂಕ್)ಗೆ ಕೊಳವೆ ಬಾವಿ ನೀರಿನ ಸಂಪರ್ಕ ಕಲ್ಪಿಸಿಲ್ಲ ಮತ್ತು ಮನೆಗಳ ನಳಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ನಿವಾಸಿಗಳೆಲ್ಲರೂ ಪದೇ ಪದೇ ಬೋರ್ ಚಾಲೂ ಮಾಡುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತದೆ ಮತ್ತು ಬೋರ್ವೆಲ್ ರಿಪೇರಿಗೆ ಬಂದರೆ ಸಮಸ್ಯೆ ಉಲ್ಬಣವಾಗುತ್ತದೆ. ಆದ್ದರಿಂದ ಕೊಳವೆಬಾವಿ ನೀರನ್ನು ಸಿಸ್ಟನ್ಗೆ ಮತ್ತು ಮನೆಗಳ ನಳಕ್ಕೆ ಸಂಪರ್ಕ ಕಲ್ಪಿಸಬೇಕು. ಹತ್ತಾರು ವರ್ಷಗಳಿಂದ ರಸ್ತೆ, ಚರಂಡಿ ಸೇರಿ ಮೂಲ ಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸದಿದ್ದರೆ ಬರುವ ಚುನಾವಣೆಯಲ್ಲಿ ಮತದಾನದಿಂದ ಹೊರಗುಳಿಯಬೇಕಾಗುತ್ತದೆ ಮತ್ತು ನೀರಿಗಾಗಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರಾದ ಸೈನಾಜಬೀ ತಸೀಲ್ದಾರ, ಬಸಮ್ಮ ಕೊಪ್ಪಳ, ಶಮನಾಜ ಹೆಸರೂರ, ಶಾಂತವ್ವ ಹಿರೇಮಠ, ರೇಣುಕಾ ಮುಳಗುಂದ, ಗೀತಾ ಹಡಪದ, ಪಾತಿಮಾ ಅಣಜಾನವರ, ಖಾಜಾಪೀರ ಕಾರಡಗಿ, ದಾವಲ್ ಗುಳೇದಗುಡ್ಡ, ಸಿರಾಜ ಡಾಲಾಯತ್, ಬಸವರಾಜ ದೊಡ್ಡಮನಿ, ಬಸವರಾಜ ಹಿರೇಮನಿ ಸೇರಿ ಹಲವರಿದ್ದರು.
ಪುರಸಭೆ ಮ್ಯಾನೇಜರ್ ಮಂಜುಳಾ ಹೂಗಾರ, ಶಿವಾನಂದ ಅಜ್ಜಣ್ಣವರ, ಎಸ್.ಪಿ. ಲಿಂಬಯ್ಯನಮಠ ಅವರು ಕೂಡಲೇ ನೀರು ಸರಬರಾಜು ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ, ಇವತ್ತೇ ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ನಿವಾಸಿಗಳಿಗೆ ಸಮಧಾನ ಹೇಳಿ ಕಳುಹಿಸಿದ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಬೋರ್ವೆಲ್ ನೀರನ್ನು ಸಾರ್ವಜನಿಕ ಸಿಸ್ಟನ್ಗೆ ಸಂಪರ್ಕ ಕಲ್ಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ನದಿ ನೀರು ಸರಬರಾಜು ನಿಂತಿರುವುದು, ಕೊಳವೆ ಬಾವಿಗಳ ನೀರಿನ ಮಟ್ಟ ಪಾತಾಳ ಕಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಆದರೆ ಬಹುತೇಕ ವಾರ್ಡ್ಗಳಲ್ಲಿ ಸವಳು ನೀರಿನ ಸಾರ್ವಜನಿಕ ನಳದ ವ್ಯವಸ್ಥೆ ನಿರ್ವಹಿಸಲಾಗುತ್ತಿದೆ. ಒಂದು ವಾರದ ಹಿಂದೆ ಭದ್ರಾ ಜಲಾಶಯದಿಂದ ಬಿಟ್ಟ ನೀರು ಭಾನುವಾರದೊಳಗೆ ನಮ್ಮ ಭಾಗಕ್ಕೆ ಬಂದು ತಲುಪಲಿದೆ. ಒಂದು ವಾರದಲ್ಲಿ ಎಲ್ಲ ವಾರ್ಡುಗಳಿಗೆ ನದಿ ನೀರು ಸರಬರಾಜು ಮಾಡಲಾಗುವುದು. ನೀರಿನ ಮಿತ ಬಳಕೆ ಎಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಗಳ ಆದೇಶದನ್ವಯ ನದಿಪಾತ್ರದಲ್ಲಿನ ರೈತರ ಪಂಪಸೆಟ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.