ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ಪಟ್ಟಣದ ರುಕ್ಮಿಣಿ ಪಾಂಡುರಂಗ, ವೆಂಕಟೇಶ್ವರ ಹಾಗೂ ಶ್ರೀಕೃಷ್ಣ ದೇವಾಲಯಕ್ಕೆ ಆಗಮಿಸಿದ ಸದ್ಭಕ್ತರು ಬುಧವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೀರ್ಥ, ಪ್ರಸಾದ ಸ್ವೀಕರಿಸಿದರು.
ಇಲ್ಲಿನ ವಾಣಿಪೇಟೆ, ಪತ್ತಾರಗಲ್ಲಿಯ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ವಿಶೇಷವಾಗಿ ದೇಗುಲದ ದ್ವಾರಕ್ಕೆ ತಳಿರು-ತೋರಣ, ಹೂಗಳಿಂದ ಸಿಂಗಾರ ಮಾಡಿ ದೇವಸ್ಥಾನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ವಿಠ್ಠಲ ಹಾಗೂ ವೆಂಕಟೇಶ್ವರ ಮಂದಿರಗಳಲ್ಲಿ ಸ್ವಾಮಿಗೆ ಪುರುಷಸೂಕ್ತದಿಂದ ಅಭಿಷೇಕ ಪೂಜೆ ಸಲ್ಲಿಸಿ, ವಿವಿಧ ಬಗೆಯ ಹೂಗಳಿಂದ ಮತ್ತು ತುಳಸಿ ಅರ್ಚನೆಯೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ವೇಳೆ ಅರ್ಚಕ ಬಧರಿಆಚಾರ್ಯ ಜೋಶಿ ಮಾತನಾಡಿ, ಆಷಾಡ ಏಕಾದಶಿ ಅತ್ಯಂತ ಪವಿತ್ರದಿನವಾಗಿದೆ.
ಪಾಂಡುರಂಗನ ದರ್ಶನ, ಉಪವಾಸ ಮಾಡುವುದು ಇನ್ನೂ ಶ್ರೇಷ್ಠ. ಇದರ ಮಹತ್ವದಿಂದಲೇ ಭಕ್ತರು ಆಗಮಿಸಿ ದರ್ಶನ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದರು.